Thu. May 7th, 2026

Kannada

ಪ್ರಚಲಿತ ವಿದ್ಯಮಾನಗಳು: 3ನೇ ಅಕ್ಟೋಬರ್ 2025

  • ಮೂರು ಪಾಲಿಕೆಯಲ್ಲಿ ಆರ್.ಆರ್. ನಗರ

ಸಂದರ್ಭ: ಎರಡು ನಗರ ಪಾಲಿಕೆಗಳಲ್ಲಿ ದಾಸರಹಳ್ಳಿ, ಮಹದೇವಪುರ, ಯಶವಂತಪುರ, ಪದ್ಮನಾಭನಗರ ವಿಧಾನಸಭೆ ಕ್ಷೇತ್ರದ ವಾರ್ಡ್‌ಗಳು.

  • ಒಂದು ವಿಧಾನಸಭೆ ಕ್ಷೇತ್ರದ ಪ್ರದೇಶಗಳು ಒಂದೇ ನಗರ ಪಾಲಿಕೆಯಲ್ಲಿ ಇರಬೇಕೆಂಬ ನಿಯಮಗಳಿದ್ದರೂ, ಐದು ವಿಧಾನಸಭೆ ಕ್ಷೇತ್ರಗಳ ವ್ಯಾಪ್ತಿಯ ಪ್ರದೇಶಗಳು ಎರಡಕ್ಕಿಂತ ಹೆಚ್ಚು ನಗರ ಪಾಲಿಕೆಗಳಲ್ಲಿ ಹಂಚಿಕೆಯಾಗಿವೆ.
  • ಗ್ರೇಟರ್ ಬೆಂಗಳೂರು ಆಡಳಿತ ಕಾಯ್ದೆ-2024 (ಜಿಬಿಜಿಎ) ಅಧ್ಯಾಯ 4ರ ನಗರ ಪಾಲಿಕೆ ರಚನೆಯ ಉಪ ಪ್ರಕರಣ 3ರ ಪ್ರಕಾರ, ‘ಒಂದು ವಿಧಾನಸಭೆ ಕ್ಷೇತ್ರವನ್ನು ಎರಡು ಅಥವಾ ಹೆಚ್ಚಿನ ನಗರ ಪಾಲಿಕೆಗಳಿಗೆ ವಿಭಜಿಸತಕ್ಕದ್ದಲ್ಲ’. ಆದರೆ, ನಗರ ಪಾಲಿಕೆಗಳ ವಾರ್ಡ್ ಪುನರ್ ವಿಂಗಡಣೆಯ ಕರಡು ಅಧಿಸೂಚನೆಯಲ್ಲಿ ರಾಜರಾಜೇಶ್ವರಿ ನಗರ ವಿಧಾನಸಭೆ ಕ್ಷೇತ್ರದ ವ್ಯಾಪ್ತಿಯ ಒಟ್ಟು 19 ವಾರ್ಡ್‌ಗಳು ಮೂರು ನಗರ ಪಾಲಿಕೆಗಳಿಗೆ ಹಂಚಿಕೆಯಾಗಿವೆ.
  • ಪಶ್ಚಿಮ ನಗರ ಪಾಲಿಕೆಯಲ್ಲಿ 13 ವಾರ್ಡ್‌ಗಳಿದ್ದರೆ, ಉತ್ತರ ನಗರ ಪಾಲಿಕೆಯಲ್ಲಿ ಐದು ವಾರ್ಡ್ ಹಾಗೂ ದಕ್ಷಿಣ ನಗರ ಪಾಲಿಕೆಯಲ್ಲಿ ಒಂದು ವಾರ್ಡ್ ಇದೆ.
  • ಯಶವಂತಪುರ ವಿಧಾನಸಭೆ ಕ್ಷೇತ್ರದ 12 ವಾರ್ಡ್‌ಗಳಲ್ಲಿ ಒಂದು ವಾರ್ಡ್ ದಕ್ಷಿಣ ನಗರ ಪಾಲಿಕೆಯಲ್ಲಿದ್ದರೆ, ಉಳಿದ 11 ವಾರ್ಡ್‌ಗಳು ಪಶ್ಚಿಮ ನಗರ ಪಾಲಿಕೆಯಲ್ಲಿವೆ. ದಾಸರಹಳ್ಳಿ ವಿಧಾನಸಭೆ ಕ್ಷೇತ್ರದ 18 ವಾರ್ಡ್‌ಗಳಲ್ಲಿ 8 ವಾರ್ಡ್‌ಗಳು ಉತ್ತರ ನಗರ ಪಾಲಿಕೆಯಲ್ಲಿದ್ದರೆ, ಪಶ್ಚಿಮ ನಗರ ಪಾಲಿಕೆಯಲ್ಲಿ 10 ವಾರ್ಡ್‌ಗಳಿವೆ. ಪದ್ಮನಾಭಗರ ವಿಧಾನಸಭೆ ಕ್ಷೇತ್ರದ 14 ವಾರ್ಡ್‌ಗಳಲ್ಲಿ ದಕ್ಷಿಣ ನಗರ ಪಾಲಿಕೆಯಲ್ಲಿ 6 ವಾರ್ಡ್ ಹಾಗೂ ಪಶ್ಚಿಮ ನಗರ ಪಾಲಿಕೆಯಲ್ಲಿ 8 ವಾರ್ಡ್‌ಗಳು ಹಂಚಿಕೆಯಾಗಿವೆ. ಮಹದೇವಪುರ ವಿಧಾನಸಭೆ ಕ್ಷೇತ್ರದ 24 ವಾರ್ಡ್‌ಗಳಲ್ಲಿ ಒಂದು ವಾರ್ಡ್ ಮಾತ್ರ ದಕ್ಷಿಣ ನಗರ ಪಾಲಿಕೆಯಲ್ಲಿದ್ದು, ಉಳಿದ 23 ವಾರ್ಡ್‌ಗಳು ಪೂರ್ವ ನಗರ ಪಾಲಿಕೆ ವ್ಯಾಪ್ತಿಯಲ್ಲಿವೆ.
  • 25 ಸಾವಿರ ಜನಸಂಖ್ಯೆ: ಐದೂ ನಗರ ಪಾಲಿಕೆಗಳ ವಾರ್ಡ್ ಜನಸಂಖ್ಯೆಯನ್ನು ಸರಾಸರಿ 25 ಸಾವಿರ ಇರುವಂತೆ ಪುನರ್ ವಿಂಗಡಣೆ ಮಾಡಲಾಗಿದೆ. ಒಟ್ಟು 368 ವಾರ್ಡ್‌ಗಳಲ್ಲಿ ಪ್ರತಿಯೊಂದು ವಾರ್ಡ್‌ನ ಜನಸಂಖ್ಯೆ 20 ಸಾವಿರದಿಂದ 27 ಸಾವಿರ ಇದೆ.

ಕೆ.ಆರ್. ಪುರದಲ್ಲಿ ಅತಿಹೆಚ್ಚು ವಾರ್ಡ್

  • ಜಿಬಿಎ ವ್ಯಾಪ್ತಿಯ 28 ವಿಧಾನಸಭೆ ಕ್ಷೇತ್ರಗಳಲ್ಲಿ ಕೆ.ಆರ್. ಪುರದಲ್ಲಿ ಅತಿಹೆಚ್ಚು ವಾರ್ಡ್‌ಗಳಿದ್ದು, ಆನೇಕಲ್ ವಿಧಾನಸಭೆ ಸಭೆ ಕ್ಷೇತ್ರ ವ್ಯಾಪ್ತಿಯಲ್ಲಿ ಈ ಹಿಂದೆ ಇದ್ದಂತೆ ಒಂದು ವಾರ್ಡ್ ಮಾತ್ರ ಇದೆ.
  • ಕೆ.ಆರ್. ಪುರದಲ್ಲಿ 27 ವಾರ್ಡ್‌ಗಳಿದ್ದು, ಮಹದೇವಪುರದಲ್ಲಿ 24 ವಾರ್ಡ್‌ಗಳಿವೆ. ಬೊಮ್ಮನಹಳ್ಳಿ ವಿಧಾನಸಭೆ ಕ್ಷೇತ್ರದಲ್ಲಿ 20 ವಾರ್ಡ್‌ಗಳಿದ್ದರೆ, ಬೆಂಗಳೂರು ದಕ್ಷಿಣ, ರಾಜರಾಜೇಶ್ವರಿ ನಗರದಲ್ಲಿ ತಲಾ 19 ವಾರ್ಡ್‌ಗಳಿವೆ. ದಾಸರಹಳ್ಳಿ (18 ವಾರ್ಡ್), ಸರ್ವಜ್ಞನಗರ (16 ವಾರ್ಡ್), ಪದ್ಮನಾಭನಗರ (14 ವಾರ್ಡ್), ಬ್ಯಾಟರಾಯನಪುರ (14 ವಾರ್ಡ್) ಮತ್ತು ವಿಜಯನಗರ, ಬಿಟಿಎಂ ಲೇಔಟ್, ಸಿ.ವಿ. ರಾಮನ್ ನಗರ, ಗೋವಿಂದರಾಜ ನಗರ ವಿಧಾನಸಭೆ ಕ್ಷೇತ್ರಗಳಲ್ಲಿ ತಲಾ 13 ವಾರ್ಡ್‌ಗಳಿವೆ.

ಯಾವ ಪಾಲಿಕೆಯಲ್ಲಿದೆ ಯಾವ ವಿಧಾನಸಭೆ ಕ್ಷೇತ್ರ?

  • ಬೆಂಗಳೂರು ಕೇಂದ್ರ ನಗರ ಪಾಲಿಕೆ ಒಟ್ಟು 63 ವಾರ್ಡ್‌: ಚಾಮರಾಜಪೇಟೆ (10 ವಾರ್ಡ್), ಚಿಕ್ಕಪೇಟೆ (12 ವಾರ್ಡ್), ಸಿ.ವಿ. ರಾಮನ್ ನಗರ (13 ವಾರ್ಡ್), ಗಾಂಧಿನಗರ (10 ವಾರ್ಡ್), ಶಾಂತಿನಗರ (10 ವಾರ್ಡ್), ಶಿವಾಜಿನಗರ (8 ವಾರ್ಡ್).
  • ಬೆಂಗಳೂರು ಉತ್ತರ ನಗರ ಪಾಲಿಕೆ ಒಟ್ಟು 72 ವಾರ್ಡ್‌: ದಾಸರಹಳ್ಳಿ (8 ವಾರ್ಡ್), ಪುಲಕೇಶಿನಗರ (11 ವಾರ್ಡ್) ಬ್ಯಾಟರಾಯನಪುರ (14 ವಾರ್ಡ್), ಯಲಹಂಕ (7 ವಾರ್ಡ್), ರಾಜರಾಜೇಶ್ವರಿನಗರ (5 ವಾರ್ಡ್), ಸರ್ವಜ್ಞನಗರ (16 ವಾರ್ಡ್), ಹೆಬ್ಬಾಳ (11 ವಾರ್ಡ್).
  • ಬೆಂಗಳೂರು ದಕ್ಷಿಣ ನಗರ ಪಾಲಿಕೆ ಒಟ್ಟು 72 ವಾರ್ಡ್‌: ಆನೇಕಲ್ (1 ವಾರ್ಡ್), ಜಯನಗರ (10 ವಾರ್ಡ್), ಪದ್ಮನಾಭನಗರ (6 ವಾರ್ಡ್), ಬಿಟಿಎಂ ಲೇಔಟ್ (13 ವಾರ್ಡ್), ಬೆಂಗಳೂರು ದಕ್ಷಿಣ (19 ವಾರ್ಡ್), ಬೊಮ್ಮನಹಳ್ಳಿ (20 ವಾರ್ಡ್), ಮಹದೇವಪುರ (1 ವಾರ್ಡ್), ಯಶವಂತಪುರ (1 ವಾರ್ಡ್), ರಾಜರಾಜೇಶ್ವರಿ ನಗರ (1 ವಾರ್ಡ್).
  • ಬೆಂಗಳೂರು ಪೂರ್ವ ನಗರ ಪಾಲಿಕೆ ಒಟ್ಟು 50 ವಾರ್ಡ್‌: ಕೆ.ಆರ್. ಪುರ (27 ವಾರ್ಡ್), ಮಹದೇವಪುರ (23 ವಾರ್ಡ್)
  • ಬೆಂಗಳೂರು ಪಶ್ಚಿಮ ನಗರ ಪಾಲಿಕೆ ಒಟ್ಟು 111 ವಾರ್ಡ್‌: ಗೋವಿಂದರಾಜ ನಗರ (13 ವಾರ್ಡ್), ದಾಸರಹಳ್ಳಿ (10 ವಾರ್ಡ್), ಪದ್ಮನಾಭನಗರ (8 ವಾರ್ಡ್), ಬಸವನಗುಡಿ (10 ವಾರ್ಡ್), ಮಲ್ಲೇಶ್ವರ (10 ವಾರ್ಡ್), ಮಹಾಲಕ್ಷ್ಮಿ ಲೇಔಟ್ (12 ವಾರ್ಡ್), ಯಶವಂತಪುರ (11 ವಾರ್ಡ್), ರಾಜರಾಜೇಶ್ವರಿ ನಗರ (13 ವಾರ್ಡ್), ರಾಜಾಜಿನಗರ (11 ವಾರ್ಡ್), ವಿಜಯನಗರ (13 ವಾರ್ಡ್).
  • ಗುಹಾಗೆ ಗಾಂಧಿ ಸೇವಾ ಪ್ರಶಸ್ತಿ

ಸಂದರ್ಭ: ಇತಿಹಾಸಕಾರ ರಾಮಚಂದ್ರ ಗುಹಾ ಅವರನ್ನು 2025ನೇ ಸಾಲಿನ ‘ಮಹಾತ್ಮ ಗಾಂಧಿ ಸೇವಾ ಪ್ರಶಸ್ತಿ– ಕರ್ನಾಟಕ’ಕ್ಕೆ ರಾಜ್ಯ ಸರ್ಕಾರ ಆಯ್ಕೆ ಮಾಡಿದೆ.

  • ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವತಿಯಿಂದ ಪ್ರತಿ ವರ್ಷ ನೀಡಲಾಗುವ ಈ ಪ್ರಶಸ್ತಿಯನ್ನು, ಗಾಂಧೀಜಿಯವರ ಜೀವನ ಮೌಲ್ಯಗಳನ್ನು ಸಮಾಜದಲ್ಲಿ ಹರಡಲು ಮಹತ್ತರ ಕೊಡುಗೆ ನೀಡಿದ ವ್ಯಕ್ತಿ ಹಾಗೂ ಸಂಸ್ಥೆಗಳಿಗೆ ಪ್ರದಾನ ಮಾಡಲಾಗುತ್ತದೆ. ಪ್ರಶಸ್ತಿಯು ₹5 ಲಕ್ಷ ನಗದು ಮತ್ತು ಫಲಕವನ್ನು ಒಳಗೊಂಡಿದೆ.
  • ಗಾಂಧೀಜಿಯವರ ತತ್ವ, ಮೌಲ್ಯ ಹಾಗೂ ಸಮಾಜಮುಖಿ ಚಿಂತನೆಗಳನ್ನು ಜನಮನಗಳಲ್ಲಿ ಬಿತ್ತುವಲ್ಲಿ ಗುಹಾ ಆವರು ಮಹತ್ವದ ಪಾತ್ರವಹಿಸಿದ್ದಾರೆ. ಆದ್ದರಿಂದ ಈ ವರ್ಷದ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ವಾರ್ತಾ ಇಲಾಖೆ ಪ್ರಕಟಣೆ ತಿಳಿಸಿದೆ.
  • ಗುಹಾ ಅವರು ಗಾಂಧಿ ಚಿಂತನೆಗಳು, ಭಾರತದ ಸಮಕಾಲೀನ ಇತಿಹಾಸ, ರಾಜಕೀಯ ಚಳವಳಿಗಳು, ಪರಿಸರ ಹೋರಾಟಗಳು ಮತ್ತು ಕ್ರಿಕೆಟ್‌ ಕುರಿತ ತಮ್ಮ ಅಧ್ಯಯನ ಮತ್ತು ಗ್ರಂಥ ರಚನೆಗಳ ಮೂಲಕ ಅಂತರರಾಷ್ಟ್ರೀಯ ಮಟ್ಟದಲ್ಲಿ ವಿಶಿಷ್ಟ ಸ್ಥಾನ ಪಡೆದಿದ್ದಾರೆ.
  • ಜನ ವಿಶ್ವಾಸ ಮಸೂದೆ: ಆಯ್ಕೆ ಸಮಿತಿಗೆ ತೇಜಸ್ವಿ ಮುಖ್ಯಸ್ಥ

ಸಂದರ್ಭ: ‘ಜನ ವಿಶ್ವಾಸ ಮಸೂದೆ 2025’ ಅನ್ನು ಪರಿ ಶೀಲಿಸಲು ಹೊಸದಾಗಿ ರಚಿಸಿರುವ ಆಯ್ಕೆ ಸಮಿತಿಯ ಮುಖ್ಯಸ್ಥ ರನ್ನಾಗಿ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ ಅವರನ್ನು ಆಯ್ಕೆ ಮಾಡಲಾಗಿದೆ.

  • 24 ಸಂಸದೀಯ ಸ್ಥಾಯಿ ಸಮಿತಿಗಳನ್ನು ಪುನರ್‌ರಚಿಸಲಾಗಿದ್ದು, ಜನ ವಿಶ್ವಾಸ ಮಸೂದೆ ಹಾಗೂ ಆದಾಯ ತೆರಿಗೆ ಮಸೂದೆಗಳಿಗೆ ಹೊಸದಾಗಿ ಆಯ್ಕೆ ಸಮಿತಿಗಳನ್ನು ರಚಿಸಲಾಗಿದೆ.
  • 30 ದಿನಗಳವರೆಗೆ ನಿರಂತರವಾಗಿ ಜೈಲಿನಲ್ಲಿರುವ ಪ್ರಧಾನಿ ಸೇರಿದಂತೆ ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳನ್ನು ಅಧಿಕಾರದಿಂದ ಕೆಳಗಿಳಿಸುವ ಕೇಂದ್ರ ಸರ್ಕಾರದ ಮಸೂದೆಯ ಕುರಿತು ಜಂಟಿ ಸಂಸದೀಯ ಸಮಿತಿ ರಚಿಸುವ ಬಗ್ಗೆ ಗೊಂದಲ ಮುಂದುವರಿದಿದೆ.
  • ಯುಪಿಐ ವಹಿವಾಟು: ಶುಲ್ಕ ಪ್ರಸ್ತಾವ ಇಲ್ಲ

ಸಂದರ್ಭ: ಯುಪಿಐ ಆಧಾರಿತ ಪಾವತಿಗಳಿಗೆ ಯಾವುದೇ ಬಗೆಯ ಶುಲ್ಕ ವಿಧಿಸುವ ಪ್ರಸ್ತಾವ ಇಲ್ಲ ಎಂದು ಭಾರತೀಯ ರಿಸರ್ವ್‌ ಬ್ಯಾಂಕ್‌ನ (ಆರ್‌ಬಿಐ) ಗವರ್ನರ್ ಸಂಜಯ್ ಮಲ್ಹೋತ್ರಾ ಹೇಳಿದ್ದಾರೆ.

  • ಕ್ರೆಡಿಟ್‌ ಕಾರ್ಡ್‌ ಬಳಸಿ ಮೊಬೈಲ್‌ ಫೋನ್‌ ಖರೀದಿ ಮಾಡಿದವರು ಇಎಂಐ ಪಾವತಿಯಲ್ಲಿ ವಿಫಲರಾದರೆ, ಅವರ ಮೊಬೈಲ್‌ ಫೋನ್‌ಅನ್ನು ದೂರದಿಂದಲೇ ಲಾಕ್ ಮಾಡುವ ವ್ಯವಸ್ಥೆಯನ್ನು ಚಾಲ್ತಿಗೆ ತರಬೇಕು ಎಂಬ ಪ್ರಸ್ತಾವನೆಯು ಸಾಲ ನೀಡುವ ಕಂಪನಿಗಳಿಂದ ಬಂದಿದೆ. ಇದನ್ನು ಆರ್‌ಬಿಐ ಪರಿಶೀಲಿಸುತ್ತಿದೆ ಎಂದು ಗವರ್ನರ್ ಹೇಳಿದ್ದಾರೆ.
  • ಯುಪಿಐ ಬಳಸಿ ಮಾಡುವ ಪಾವತಿಗಳ ಮೇಲೆ ಶುಲ್ಕ ವಿಧಿಸುವ ಪ್ರಸ್ತಾವ ಇದೆಯೇ ಎಂಬ ಪ್ರಶ್ನೆಯನ್ನು ಗವರ್ನರ್ ಎದುರು, ಹಣಕಾಸು ನೀತಿ ಸಮಿತಿಯ (ಎಂಪಿಸಿ) ಸಭೆಯ ನಂತರ ಇರಿಸಲಾಗಿತ್ತು.
  • ಮೊಬೈಲ್‌ ಫೋನ್‌ಗಳನ್ನು ದೂರದಿಂದಲೇ ಲಾಕ್ ಮಾಡುವ ಸೌಲಭ್ಯಕ್ಕೆ ಅನುಮತಿ ನೀಡುವುದರ ಒಳಿತು, ಕೆಡುಕುಗಳ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ ಎಂದು ಆರ್‌ಬಿಐ ಡೆಪ್ಯುಟಿ ಗವರ್ನರ್ ಎಂ. ರಾಜೇಶ್ವರ ರಾವ್ ತಿಳಿಸಿದ್ದಾರೆ.
  • ‘ಇಲ್ಲಿ ಗ್ರಾಹಕರ ಹಕ್ಕುಗಳು, ಅವರ ಅಗತ್ಯಗಳು, ದತ್ತಾಂಶದ ಸುರಕ್ಷತೆ, ಸಾಲದಾತ ಕಂಪನಿಗಳ ಅಗತ್ಯಗಳು ಇವುಗಳೆಲ್ಲ ವನ್ನು ಪರಿಶೀಲಿಸಿದಾಗ ಒಳಿತು, ಕೆಡುಕುಗಳು ಇರುವುದು ಗೊತ್ತಾಗುತ್ತದೆ. ಹೀಗಾಗಿ ನಾವು ಪ್ರಸ್ತಾವನೆಯನ್ನು ಪರಿಶೀಲಿಸುತ್ತಿದ್ದೇವೆ. ಮುಂದೆ ನಾವು ಇದರ ಬಗ್ಗೆ ನಿಲುವು ತೆಗೆದುಕೊಳ್ಳುತ್ತೇವೆ’ ಎಂದು ರಾವ್ ಹೇಳಿದ್ದಾರೆ.
  • ರೆಪೊ ದರವನ್ನು ಮುಂದಿನ ದಿನಗಳಲ್ಲಿ ತಗ್ಗಿಸುವ ಸಾಧ್ಯತೆ ಕುರಿತಾದ ಪ್ರಶ್ನೆಗೆ ಗವರ್ನರ್ ಮಲ್ಹೋತ್ರಾ ಅವರು, ಹಣ ದುಬ್ಬರ ಪ್ರಮಾಣವು ಗಣನೀಯವಾಗಿ ಕಡಿಮೆ ಆಗಿರುವ ಕಾರಣ ಮುಂದೆ ಹಣ ಕಾಸಿನ ನಿಲುವನ್ನು ಇನ್ನಷ್ಟು ಸಡಿಲಗೊಳಿಸಲು ಅವಕಾಶ ಇದೆ ಎಂದು ಉತ್ತರಿಸಿದ್ದಾರೆ.

ಬೆಳವಣಿಗೆ ಅಂದಾಜು ಪರಿಷ್ಕರಣೆ:

  • ಪ್ರಸಕ್ತ ಹಣಕಾಸು ವರ್ಷದಲ್ಲಿ ದೇಶದ ಜಿಡಿಪಿ ಬೆಳವಣಿಗೆ ಪ್ರಮಾಣವು ಶೇ 6.8ಕ್ಕೆ ಹೆಚ್ಚಬಹುದು ಎಂದು ಆರ್‌ಬಿಐ ಅಂದಾಜು ಮಾಡಿದೆ. ಅಲ್ಲದೆ, ಇಡೀ ವರ್ಷದಲ್ಲಿ ಚಿಲ್ಲರೆ ಹಣದುಬ್ಬರ ಪ್ರಮಾಣವು ಶೇ 2.6ಕ್ಕೆ ತಗ್ಗಬಹುದು ಎಂದು ಕೂಡ ಅದು ನಿರೀಕ್ಷಿಸಿದೆ.
  • ತೆರಿಗೆ ಪಾಲು: ರಾಜ್ಯಕ್ಕೆ ₹3,705 ಕೋಟಿ

ಸಂದರ್ಭ: ಕೇಂದ್ರ ಸರ್ಕಾರವು ಕರ್ನಾಟಕ ರಾಜ್ಯಕ್ಕೆ ತೆರಿಗೆ ಪಾಲಿನ ಕಂತಿನ ರೂಪದಲ್ಲಿ ಹೆಚ್ಚುವರಿಯಾಗಿ ₹3,705 ಕೋಟಿ ಬಿಡುಗಡೆ ಮಾಡಿದೆ. ಕರ್ನಾಟಕಕ್ಕೆ ಹೋಲಿಸಿದರೆ ಬಿಜೆಪಿ ಆಡಳಿತವಿರುವ ಉತ್ತರದ ರಾಜ್ಯಗಳಿಗೆ ಬಿಡುಗಡೆಯಾಗಿರುವ ಮೊತ್ತ ಹೆಚ್ಚು ಇದೆ.

  • ಕೇಂದ್ರವು 28 ರಾಜ್ಯಗಳಿಗೆ ಒಟ್ಟು ₹1,01,603 ಕೋಟಿ ಬಿಡುಗಡೆ ಗೊಳಿಸಿದೆ. ಅಕ್ಟೋಬರ್ 10ರಂದು ಬಿಡುಗಡೆಯಾಗಲಿರುವ ಸಾಮಾನ್ಯ ಮಾಸಿಕ ಹಂಚಿಕೆಯ ಜೊತೆಗೆ ಹೆಚ್ಚುವರಿಯಾಗಿ ಈ ಮೊತ್ತವನ್ನು ಬಿಡುಗಡೆ ಮಾಡಲಾಗಿದೆ ಎಂದು ಹಣಕಾಸು ಸಚಿವಾಲಯ ತಿಳಿಸಿದೆ.
  • 15ನೇ ಹಣಕಾಸು ಆಯೋಗದ ಶಿಫಾರಸಿನ ಪ್ರಕಾರ, ಆರ್ಥಿಕ ವರ್ಷದಲ್ಲಿ ಕೇಂದ್ರ ಸರ್ಕಾರ ಸಂಗ್ರಹಿಸುವ ತೆರಿಗೆಯಲ್ಲಿ ಶೇ 41 ಮೊತ್ತವನ್ನು ರಾಜ್ಯ ಸರ್ಕಾರಗಳಿಗೆ 14 ಕಂತುಗಳಲ್ಲಿ ಹಂಚಿಕೆ ಮಾಡಲಾಗುತ್ತದೆ.
  • ‘ಮುಂಬರುವ ಹಬ್ಬದ ಋತುವಿನ ದೃಷ್ಟಿಯಿಂದ ಮತ್ತು ರಾಜ್ಯ ಸರ್ಕಾರಗಳಿಗೆ ಅಭಿವೃದ್ಧಿ ಹಾಗೂ ಬಂಡವಾಳ ವೆಚ್ಚಕ್ಕೆ ಹೆಚ್ಚಿನ ಹಣ ತೊಡಗಿಸಲು ಅನುಕೂಲ ಮಾಡಲು ಈ ಕಂತು ಬಿಡುಗಡೆ ಗೊಳಿಸಲಾಗಿದೆ’ ಎಂದು ಹಣಕಾಸು ಸಚಿವಾಲಯದ ಪ್ರಕಟಣೆ ತಿಳಿಸಿದೆ.
  • ಜನನಮರಣ ದತ್ತಾಂಶ ಜೋಡಿಸಿ

ಸಂದರ್ಭ: ಜನನ ಮತ್ತು ಮರಣ ನೋಂದಣಿಯ ದತ್ತಾಂಶವನ್ನು ಮತದಾರರ ಪಟ್ಟಿಯೊಂದಿಗೆ ಜೋಡಣೆ ಮಾಡಿದರೆ, ಮೃತಪಟ್ಟ ವ್ಯಕ್ತಿಗಳ ಹೆಸರು ಪಟ್ಟಿಯಲ್ಲಿ ಉಳಿದುಕೊಳ್ಳುವುದನ್ನು ತಪ್ಪಿಸಬಹುದು ಎಂದು ಚುನಾವಣಾ ಆಯೋಗ ಹೇಳಿದೆ. 

  • ಬಿಹಾರದಲ್ಲಿ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್‌) ವೇಳೆ ಹಲವು ವರ್ಷಗಳಿಂದ ಮತದಾರರ ಪಟ್ಟಿಯಲ್ಲಿ ಉಳಿದುಕೊಂಡಿದ್ದ ಮೃತಪಟ್ಟಿರುವ ವ್ಯಕ್ತಿಗಳ ಹೆಸರನ್ನು ತೆಗೆದುಹಾಕ ಲಾಯಿತು. ಎಸ್‌ಐಆರ್‌ ಜತೆಗೆ ಜನನ–ಮರಣ ನೋಂದಣಿ ದತ್ತಾಂಶವನ್ನು ಚುನಾವಣಾ ವ್ಯವಸ್ಥೆಗೆ ಜೋಡಿಸಿದರೆ ಈ ಲೋಪವನ್ನು ತಪ್ಪಿಸಬಹುದು. ಈ ನಿಟ್ಟಿನಲ್ಲಿ ಬಿಹಾರದ ಎಸ್‌ಐಆರ್‌ ಉಳಿದ ರಾಜ್ಯಗಳಿಗೂ ಮಾದರಿ ಆಗಲಿದೆ ಎಂದು ಆಯೋಗ ತಿಳಿಸಿದೆ.
  • ಸೋಯಾ, ಶೇಂಗಾ ಖರೀದಿ ಕೇಂದ್ರ ಆರಂಭಿಸಲು ಸೂಚನೆ

ಸಂದರ್ಭ: ಬೆಂಬಲ ಬೆಲೆಯಲ್ಲಿ ಸೋಯಾಬಿನ್‌ ಮತ್ತು ಶೇಂಗಾ ಖರೀದಿ ಮಾಡಲು ಖರೀದಿ ಕೇಂದ್ರ ಆರಂಭಕ್ಕೆ ತ್ವರಿತವಾಗಿ ಕ್ರಮ ಕೈಗೊಳ್ಳಬೇಕು. ನೋಂದಣಿ ಮತ್ತು ಖರೀದಿ ಪ್ರಕ್ರಿಯೆ ಯನ್ನು ಏಕಕಾಲಕ್ಕೆ ಆರಂಭಿಸಬೇಕು ಎಂದು ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ ಅವರು ಜಿಲ್ಲಾ ಸಮಿತಿಗಳಿಗೆ ಸೂಚಿಸಿದ್ದಾರೆ.

  • ಸೋಯಾಬಿನ್‌ ಕ್ವಿಂಟಾಲ್‌ಗೆ ₹5,328 ಹಾಗೂ ಶೇಂಗಾಗೆ ₹7,623 ಬೆಂಬಲ ಬೆಲೆ ನಿಗದಿಪಡಿಸಲಾಗಿದೆ. ಬೀದರ್‌, ಬೆಳಗಾವಿ, ಧಾರವಾಡ, ಹಾವೇರಿ, ಯಾದಗಿರಿ, ಕಲಬುರಗಿ ಮತ್ತು ಬಾಗಲಕೋಟೆ ಜಿಲ್ಲೆಗಳಲ್ಲಿ ಸೋಯಾಬಿನ್‌, ಕೊಪ್ಪಳ, ಧಾರವಾಡ, ಹಾವೇರಿ, ವಿಜಯನಗರ, ಬಳ್ಳಾರಿ, ಚಿತ್ರದುರ್ಗ, ಗದಗ, ಬಾಗಲಕೋಟೆ, ದಾವಣಗೆರೆ, ರಾಯಚೂರು, ತುಮಕೂರು ಮತ್ತು ವಿಜಯನಗರ ಜಿಲ್ಲೆಗಳಲ್ಲಿ ಶೇಂಗಾ ಖರೀದಿ ಮಾಡಲಾಗುವುದು ಎಂದು ಅವರು ತಿಳಿಸಿದ್ದಾರೆ.
  • ನಾಫೆಡ್‌, ಎನ್‌ಸಿಸಿಎಫ್‌ ಹಾಗೂ ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳವನ್ನು ಖರೀದಿ ಏಜೆನ್ಸಿಗಳನ್ನಾಗಿ ನೇಮಕ ಮಾಡಲಾಗಿದೆ. ನೋಂದಣಿಗೆ 80 ದಿನ ಹಾಗೂ ಖರೀದಿಗೆ 90 ದಿನ ನಿಗದಿಪಡಿಸಲಾಗಿದೆ ಎಂದು ಶಿವಾನಂದ ಪಾಟೀಲ ಹೇಳಿದ್ದಾರೆ.
  • ಅಲ್ಲದೇ ಅಗತ್ಯಕ್ಕೆ ಅನುಗುಣವಾಗಿ ಖರೀದಿ ಕೇಂದ್ರಗಳನ್ನು ಆರಂಭಿಸಬೇಕು. ಖರೀದಿ ಕೇಂದ್ರಗಳಲ್ಲಿ ಲೋಪಗಳಾಗದಂತೆ ಎಚ್ಚರಿಕೆ ವಹಿಸಬೇಕು. ಮಾರ್ಗಸೂಚಿ ಅನ್ವಯ ಖರೀದಿ ಮಾಡಲಾಗುತ್ತಿದೆಯೇ ಎಂಬ ಬಗ್ಗೆ ನಿರಂತರವಾಗಿ ನಿಗಾವಹಿಸಬೇಕು ಎಂದು ಅವರು ಸಂಬಂಧಪಟ್ಟ ಎಲ್ಲ ಜಿಲ್ಲೆಗಳ ಜಿಲ್ಲಾಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.
  • ರೈಲು ಉಪಕರಣ: ಭಾರತ ಪ್ರಮುಖ ರಫ್ತುದಾರ

ಸಂದರ್ಭ:ರೈಲು ಬೋಗಿ, ಕೋಚ್‌ಗಳು, ಲೋಕೊಮೋಟಿವ್ಸ್‌ ಹಾಗೂ ಪ್ರೊಪಲ್ಷನ್‌ ಸಿಸ್ಟಮ್ ಸೇರಿದಂತೆ ಹಲವು ಉಪಕರಣಗಳ ಜಾಗತಿಕ ರಫ್ತುದಾರನಾಗಿ ಭಾರತವು ವೇಗವಾಗಿ ಹೊರಹೊಮ್ಮುತ್ತಿದೆ ಎಂದು ರೈಲ್ವೆ ಇಲಾಖೆ ತಿಳಿಸಿದೆ.

  • ‘ಭಾರತದ ರೈಲ್ವೆ ಉಪಕರಣಗಳು ಹೆಚ್ಚಾಗಿ ಜಾಗತಿಕ ಮಾರುಕಟ್ಟೆಯನ್ನು ತಲುಪುತ್ತಿವೆ. 16 ರಾಷ್ಟ್ರಗಳು ಭಾರತದ ರೈಲು ಉಪಕರಣಗಳನ್ನು ಬಳಸುತ್ತಿವೆ. ಉತ್ಪನ್ನಗಳ ವಿನ್ಯಾಸ, ಅಭಿವೃದ್ಧಿ ಹಾಗೂ ಪೂರೈಕೆಯೆಡೆಗೆ ಭಾರತದ ಬದ್ಧತೆಯನ್ನು ತೋರಿಸುತ್ತದೆ’ ಎಂದು ಅದು ಹೇಳಿದೆ.
  • ‘ಆಸ್ಟ್ರೇಲಿಯಾ, ಕೆನಡಾ, ರಷ್ಯಾ, ಸೌದಿ ಅರೇಬಿಯಾ, ಫ್ರಾನ್ಸ್‌, ಮೆಕ್ಸಿಕೊ, ರೊಮೇನಿಯಾ, ಸ್ಪೇನ್‌, ಜರ್ಮನಿ, ಇಟಲಿ, ಶ್ರೀಲಂಕಾ, ಮ್ಯಾನ್ಮಾರ್‌, ಬಾಂಗ್ಲಾದೇಶ ಸೇರಿದಂತೆ ಅನೇಕ ರಾಷ್ಟ್ರಗಳು ಭಾರತದ ರೈಲು ಉಪಕರಣಗಳನ್ನು ಆಮದು ಮಾಡಿಕೊಳ್ಳುತ್ತಿವೆ. ‘ಮೇಕ್‌ ಇನ್‌ ಇಂಡಿಯಾ’ ಹಾಗೂ ‘ಮೇಕ್‌ ಫಾರ್‌ ದಿ ವಲ್ರ್ಡ್‌’ ಉಪಕ್ರಮಗಳ ಅಡಿಯಲ್ಲಿ ರಫ್ತು ಮಾಡಲಾಗುತ್ತಿದೆ’ ಎಂದು ಇಲಾಖೆ ತಿಳಿಸಿದೆ.
  • ಬಿಹಾರದ ಲೋಕೊಮೋಟಿವ್‌ ಉತ್ಪಾದನಾ ಘಟಕದಿಂದ ಜಿನೆವಾಗೆ ಮೊದಲ ಬಾರಿ ಜೂನ್‌ನಲ್ಲಿ ಲೋಕೊಮೋಟಿವ್‌ ರಫ್ತು ಮಾಡಲಾಯಿತು. ಇದಕ್ಕೆ ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಿದ್ದರು.
  • ದಾಖಲೆಯ 7 ಪದಕ ಗೆದ್ದ ಶ್ರೀಹರಿ

ಸಂದರ್ಭ: ಭಾರತದ ಈಜು ಪಟುಗಳು ಬುಧವಾರ ಮುಕ್ತಾಯ ಗೊಂಡ 11ನೇ ಏಷ್ಯನ್ ಈಜು ಚಾಂಪಿ ಯನ್‌ಷಿಪ್‌ನಲ್ಲಿ ಒಟ್ಟು 13 ಪದಕಗಳನ್ನು ಗೆಲ್ಲುವುದರೊಂದಿಗೆ ಯಶಸ್ವಿಯಾಗಿ ಅಭಿಯಾನ ಮುಗಿಸಿದರು. ಕರ್ನಾಟಕದ ಈಜುತಾರೆ ಶ್ರೀಹರಿ ನಟರಾಜ್‌ ಅವರು ದಾಖಲೆಯ ಏಳು ಪದಕ ಜಯಿಸಿದರು.

  • 24 ವರ್ಷ ವಯಸ್ಸಿನ ಶ್ರೀಹರಿ ಅವರು 100 ಮೀ. ಬ್ಯಾಕ್‌ಸ್ಟ್ರೋಕ್‌ ಸ್ಪರ್ಧೆಯಲ್ಲಿ ಕಂಚಿನ ಪದಕ ಗೆದ್ದುಕೊಂಡರು. ಅದರೊಂದಿಗೆ ಕೂಟದ ಇತಿಹಾಸ ದಲ್ಲಿ ಹೆಚ್ಚು (7) ಪದಕ ಗೆದ್ದ ಭಾರತದ ಈಜುಪಟು ಎಂಬ ಗೌರವಕ್ಕೂ ಭಾಜನರಾದರು. ಅವರು 55.23 ಸೆಕೆಂಡುಗಳಲ್ಲಿ ಗುರಿ ತಲುಪಿದರು.
  • ಚೀನಾದ ಗುಕೈಲೈ ವಾಂಗ್‌ (54.27 ಸೆ.) ಮತ್ತು ತೈವಾನ್‌ನ ಲು ಲುನ್‌ ಶುವಾಂಗ್‌ (54.45 ಸೆ.) ಕ್ರಮವಾಗಿ ಚಿನ್ನ ಮತ್ತು ಬೆಳ್ಳಿ ಪದಕ ಗೆದ್ದರು. ಸ್ಪರ್ಧೆಯಲ್ಲಿದ್ದ ಭಾರತದ ಮತ್ತೊಬ್ಬ ಈಜುಪಟು ರಿಷಭ್‌ ದಾಸ್‌ ನಾಲ್ಕನೇ ಸ್ಥಾನ ಪಡೆಯಲಷ್ಟೇ ಶಕ್ತರಾದರು.
  • ಪುರುಷರ 4×100 ಮೀ. ಫ್ರೀಸ್ಟೈಲ್‌ ರಿಲೆ ಸ್ಪರ್ಧೆಯಲ್ಲಿ ಶ್ರೀಹರಿ, ಆಕಾಶ್‌ ಮಣಿ, ಥಾಮಸ್‌ ದೊರೈ ಹಾಗೂ ರೋಹಿತ್‌ ಬೆನೆಡಿಕ್ಟನ್‌ ಅವರನ್ನೊಳಗೊಂಡ ಭಾರತ ತಂಡವು (3ನಿ.21.49ಸೆ.) ಕಂಚು ಜಯಿಸಿತು. ಚೀನಾ (3ನಿ.20.24ಸೆ.) ಚಿನ್ನ ಗೆದ್ದರೆ, ಬೆಳ್ಳಿ ಪದಕವು ತೈವಾನ್‌ (3ನಿ.20.59ಸೆ.) ಪಾಲಾಯಿತು.
  • ಮಹಿಳೆಯರ 400 ಮೀ. ಫ್ರೀಸ್ಟೈಲ್‌ ಸ್ಪರ್ಧೆಯಲ್ಲಿ ಭವ್ಯಾ ಸಚದೇವ ಅವರು (4ನಿ. 26.89ಸೆ.) ಕಂಚಿನ ಪದಕ ಜಯಿಸಿದರು. ಇದು ಮಹಿಳೆಯರ ವಿಭಾಗದಲ್ಲಿ ಭಾರತಕ್ಕೆ ಸಿಕ್ಕ ಮೊದಲ ಪದಕ. ಜಪಾನ್‌ನ ಹರುನೊ ತನಿಮೊಟೊ (4ನಿ.16.39ಸೆ.) ಚಿನ್ನ ಗೆದ್ದರೆ, ವಿಯೆಟ್ನಾಂನ ಖಾ ನಿ ಗುಯೆನ್‌ (4ನಿ. 25.50ಸೆ.) ಬೆಳ್ಳಿ ಪದಕ ತಮ್ಮದಾಗಿಸಿಕೊಂಡರು.
  • ಪುರುಷರ 200 ಮೀ. ಬಟರ್‌ಫ್ಲೈ ಸ್ಪರ್ಧೆಯಲ್ಲಿ ಸಜನ್‌ ಪ್ರಕಾಶ್‌ (1ನಿ.57.90ಸೆ.) ಅವರು ಕಂಚಿನ ಪದಕಕ್ಕೆ ಮುತ್ತಿಕ್ಕಿದರು. ಕೂಟದಲ್ಲಿ 4 ಬೆಳ್ಳಿ ಹಾಗೂ 9 ಕಂಚು ಗೆದ್ದ ಭಾರತ, ಪದಕ ಪಟ್ಟಿಯಲ್ಲಿ 9ನೇ ಸ್ಥಾನ ಪಡೆಯಿತು. 38 ಚಿನ್ನ ಸೇರಿ ಒಟ್ಟು 49 ಪದಕಗಳನ್ನು ಗೆದ್ದ ಚೀನಾ ಅಗ್ರಸ್ಥಾನ ತನ್ನದಾಗಿಸಿಕೊಂಡಿತು.
  • ಮುಕೇಶ್ಗೆ ಸ್ವರ್ಣ

ಸಂದರ್ಭ: ಉದಯೋನ್ಮುಖ ಶೂಟರ್‌ ಮುಕೇಶ್‌ ನೇಲವಲ್ಲಿ ಅವರು ಇಲ್ಲಿ ಮುಕ್ತಾಯಗೊಂಡ ಐಎಸ್‌ಎಸ್‌ಎಫ್ ಜೂನಿಯರ್ ವಿಶ್ವಕಪ್‌ ಶೂಟಿಂಗ್ ಚಾಂಪಿಯನ್‌ ಷಿಪ್‌ನಲ್ಲಿ ಪುರುಷರ 25 ಮೀ. ಪಿಸ್ತೂಲ್‌ ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆದ್ದುಕೊಂಡರು. ಇದೇ ಸ್ಪರ್ಧೆಯ ಮಹಿಳೆಯರ ವಿಭಾಗದಲ್ಲಿ ತೇಜಸ್ವನಿ ಸಿಂಗ್‌ ಅವರು ಬೆಳ್ಳಿ ಜಯಿಸಿದರು.

  • ಜೂನಿಯರ್‌ ಪುರುಷರ 25 ಮೀ. ಪಿಸ್ತೂಲ್‌ ಸ್ಪರ್ಧೆಯಲ್ಲಿ ಮುಕೇಶ್‌ ಅವರು 585 ಸ್ಕೋರ್‌ನೊಡನೆ ಅಗ್ರಸ್ಥಾನ ಪಡೆದರು. ವೈಯಕ್ತಿಕ ತಟಸ್ಥ ಅಥ್ಲೀಟ್‌ (ಎಐಎನ್‌) ಅಲೆಕ್ಸಾಂಡರ್‌ ಕೊವಲೆವ್‌ (577) ರಜತ ಗೆದ್ದರೆ, ಭಾರತದ ಮತ್ತೊಬ್ಬ ಸ್ಪರ್ಧಿ ಸಾಹಿಲ್‌ ಚೌಧರಿ (573) ಕಂಚಿನ ಪದಕ ತಮ್ಮದಾಗಿಸಿಕೊಂಡರು.
  • ಒಲಿಂಪಿಕ್ಸ್‌ ಸ್ಪರ್ಧೆಗಳಲ್ಲಿ 19 ಪದಕ ಗಳನ್ನು (6 ಚಿನ್ನ, 8 ಬೆಳ್ಳಿ ಹಾಗೂ 5 ಕಂಚು) ಗೆದ್ದ ಭಾರತ ತಂಡ ಪದಕ ಪಟ್ಟಿ ಯಲ್ಲಿ ಅಗ್ರಸ್ಥಾನ ಪಡೆಯಿತು. ಎಐಎನ್‌ ಸ್ಪರ್ಧಿಗಳು 10 ಪದಕಗಳೊಂದಿಗೆ (4 ಚಿನ್ನ, 2 ಬೆಳ್ಳಿ ಹಾಗೂ 4 ಕಂಚು) ಎರಡನೇ ಸ್ಥಾನ ಪಡೆದರು.

ಪ್ರಚಲಿತ ವಿದ್ಯಮಾನಗಳು: 1ನೇ ಅಕ್ಟೋಬರ್ 2025

Bhima Water Dispute: ‘ನೀರುಹಂಚಿಕೆ: ರಾಜ್ಯದ ಹಿತಾಸಕ್ತಿ ರಕ್ಷಣೆ’

ಮಹಾರಾಷ್ಟ್ರವು ಭೀಮಾ ನದಿಯಲ್ಲಿ ರಾಜ್ಯದ ಪಾಲನ್ನು ತಪ್ಪಿಸಲು ಹೆಚ್ಚುವರಿ ಜಲಾಶಯಗಳನ್ನು ನಿರ್ಮಿಸಿಕೊಂಡಿರುವ ವಿಚಾರದ ಕುರಿತು ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ‘ಎರಡೂ ರಾಜ್ಯಗಳ ಮಧ್ಯದ ಜಲವಿವಾದವು ಕೇಂದ್ರ ಜಲ ಆಯೋಗದ ಮುಂದೆ ಇದೆ. ರಾಜ್ಯದ ಹಿತಾಸಕ್ತಿಯನ್ನು ಕಾಯಲು ಬದ್ಧರಾಗಿದ್ದೇವೆ’ ಎಂದು ಹೇಳಿದರು.

5 ಪಾಲಿಕೆಗಳಲ್ಲಿ 368 ವಾರ್ಡ್

ಗ್ರೇಟರ್‌ ಬೆಂಗಳೂರು ಪ್ರಾಧಿಕಾರ (ಜಿಬಿಎ) ವ್ಯಾಪ್ತಿಯ ಐದು ನಗರ ಪಾಲಿಕೆಗಳ ವಾರ್ಡ್‌ಗಳನ್ನು ಮರು ವಿಂಗಡಣೆ ಮಾಡಿ, ಗಡಿ ನಿಗದಿಪಡಿಸಿ ನಗರಾಭಿವೃದ್ಧಿ ಇಲಾಖೆ ಮಂಗಳವಾರ ಕರಡು ಅಧಿಸೂಚನೆ ಹೊರಡಿಸಿದೆ. ಐದು ಪಾಲಿಕೆಗಳ ವ್ಯಾಪ್ತಿಯಲ್ಲಿ ಒಟ್ಟು 368 ವಾರ್ಡ್‌ಗಳಿವೆ.

ಗ್ರೇಟರ್‌ ಬೆಂಗಳೂರು ಆಡಳಿತ ಕಾಯ್ದೆ–2024 (ಜಿಬಿಜಿಎ) ಅಡಿಯಲ್ಲಿ ಸೆ.2ರಂದು ಜಿಬಿಎ ರಚಿಸಲಾಗಿತ್ತು. ಜಿಬಿಎ ವ್ಯಾಪ್ತಿಯಲ್ಲಿ ಹಿಂದಿನ ಬಿಬಿಎಂಪಿ ವ್ಯಾಪ್ತಿಯಲ್ಲಿದ್ದ 198 ವಾರ್ಡ್‌ಗಳನ್ನು ಹಂಚಿಕೆ ಮಾಡಿ 5 ನಗರ ಪಾಲಿಕೆಗಳನ್ನು ರಚಿಸಿ, ಗಡಿ ನಿಗದಿ ಮಾಡಿ ಅಂದೇ ಅಧಿಸೂಚನೆ ಹೊರಡಿಸಲಾಗಿತ್ತು.

ಐದು ನಗರ ಪಾಲಿಕೆಗಳ ವಾರ್ಡ್‌ ಗಳನ್ನು ಮರು ವಿಂಗಡಿಸಲು, ಜಿಬಿಎ ಮುಖ್ಯ ಆಯುಕ್ತ ಮಹೇಶ್ವರ್‌ ರಾವ್ ನೇತೃತ್ವದಲ್ಲಿ ‘ವಾರ್ಡ್‌ಗಳ ಪುನರ್‌ ವಿಂಗಡಣಾ ಆಯೋಗ’ವನ್ನು ರಚಿಸಿ, ಸೆಪ್ಟೆಂಬರ್‌ 23ರಂದು ಸರ್ಕಾರಕ್ಕೆ ವರದಿ ಸಲ್ಲಿಸಲು ಸೂಚಿಸಲಾಗಿತ್ತು. ಆಯೋಗ ಒಂದು ವಾರ ತಡವಾಗಿ, ಸೆ. 30ರಂದು ವರದಿ ಸಲ್ಲಿಸಿದೆ.

ಗ್ರೇಟರ್‌ ಬೆಂಗಳೂರು ಆಡಳಿತ ಕಾಯ್ದೆ–2024ರ ಪ್ರಕರಣ 29ರ ಉಪ ಪ್ರಕರಣ (1) ಮತ್ತು (3)ರ ಅನ್ವಯ ವಾರ್ಡ್‌ಗಳ ಪುನರ್‌ ವಿಂಗಡಣೆ ಮಾಡಿ, ಸಲ್ಲಿಸಲಾಗಿದ್ದ ವಾರ್ಡ್‌ ಮರು ವಿಂಗಡಣೆಯ ವರದಿಯನ್ನು ಸರ್ಕಾರ ಒಪ್ಪಿದೆ. ಜಿಬಿಜಿಎ ಕಾಯ್ದೆಯ 29ರಲ್ಲಿ ಪ್ರದತ್ತವಾದ ಅಧಿಕಾರದನ್ವಯ 2011ರ ಜನಗಣತಿಯ ಆಧಾರದಲ್ಲಿ, ಗ್ರೇಟರ್‌ ಬೆಂಗಳೂರು ಪ್ರದೇಶದ ಐದು ನಗರ ಪಾಲಿಕೆಗಳಲ್ಲಿ ವಾರ್ಡ್‌ವಾರು ಕ್ಷೇತ್ರ ಪುನರ್‌ ವಿಂಗಡಣೆ ಮಾಡಿ ಕರಡು ಅಧಿಸೂಚನೆ ಹೊರಡಿಸಿದೆ.

ಯಾವುದೇ ಆಕ್ಷೇಪ/ ಸಲಹೆಗಳಿದ್ದರೆ ಸಾರ್ವಜನಿಕರು ತಮ್ಮ ಪೂರ್ಣ ವಿಳಾಸ, ಸಹಿಯೊಂದಿಗೆ ಸೂಕ್ತ ಕಾರಣ–ವಿವರಣೆಗಳೊಂದಿಗೆ ಲಿಖಿತ ರೂಪದಲ್ಲಿ ‘ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ, ನಗರಾಭಿವೃದ್ಧಿ ಇಲಾಖೆ, ಕೊಠಡಿ ಸಂಖ್ಯೆ 436, 4ನೇ ಮಹಡಿ, ವಿಕಾಸಸೌಧ, ಬಿ.ಆರ್‌. ಅಂಬೇಡ್ಕರ್‌ ವೀದಿ, ಬೆಂಗಳೂರು– 560001’ ಇವರಿಗೆ ಅಕ್ಟೋಬರ್‌ 15ರ ಸಂಜೆ 5ರೊಳಗೆ ಸಲ್ಲಿಸಬೇಕು ಎಂದು ನಗರಾಭಿವೃದ್ಧಿ ಇಲಾಖೆ ತಿಳಿಸಿದೆ.

ನಿಗದಿತ ಅವಧಿಯಲ್ಲಿ ಸ್ವೀಕೃತವಾದ ಆಕ್ಷೇಪಣೆ/ ಸಲಹೆಗಳನ್ನು ಪರಿಶೀಲಿಸಿ, ನಗರ ಪಾಲಿಕೆಗಳ ವಾರ್ಡ್‌ವಾರು ಕ್ಷೇತ್ರ ಪುನರ್‌ ವಿಂಗಡಣೆಯನ್ನು ಅಂತಿಮಗೊಳಿಸಲು ಕ್ರಮ ಕೈಗೊಳ್ಳಲಾಗು ತ್ತದೆ ಎಂದು ತಿಳಿಸಲಾಗಿದೆ.

ಕಲಾಸಿಪಾಳ್ಯಕ್ಕೆ ಡಿವಿಜಿ, ಜಯನಗರಕ್ಕೆ ಅಬ್ದುಲ್ ಕಲಾಂ

ವಾರ್ಡ್‌ ಹೆಸರಿನಲ್ಲಿ ಸುಭಾಷ್‌ ಚಂದ್ರ ಬೋಸ್‌, ಮಂಗಲ್‌ ಪಾಂಡೆ, ಕುವೆಂಪು, ಪುನೀತ್‌, ಅಬ್ದುಲ್ ಕಲಾಂ ಆಜಾದ್‌, ಕೃಷ್ಣದೇವರಾಯ, ವಿವೇಕಾನಂದ, ಅನಿಬೆಸೆಂಟ್‌

ಇತಿಹಾಸ ಪ್ರಸಿದ್ಧ ಮಹಾರಾಜರು, ಸ್ವಾತಂತ್ರ್ಯ ಹೋರಾಟಗಾರರು, ಸಾಹಿತಿಗಳು, ವಿಜ್ಞಾನಿಗಳು, ಸಾಮಾಜಿಕ ಹೋರಾಟಗಾರರು, ಚಿತ್ರನಟರ ಹೆಸರನ್ನು ಐದು ನಗರ ಪಾಲಿಕೆಗಳ ವಿವಿಧ ವಾರ್ಡ್‌ಗಳಿಗೆ ಇಡಲಾಗಿದೆ.

ಬೆಂಗಳೂರು ಕೇಂದ್ರ ನಗರ ಪಾಲಿಕೆ ವ್ಯಾಪ್ತಿಯಲ್ಲಿರುವ ಕಲಾಸಿಪಾಳ್ಯದ ಪ್ರದೇಶಗಳನ್ನು ಒಳಗೊಂಡಿರುವ ವಾರ್ಡ್‌ಗೆ ಸಾಹಿತಿ ಡಿ.ವಿ. ಗುಂಡಪ್ಪ ಅವರ ಹೆಸರಿಡಲಾಗಿದೆ. ದಕ್ಷಿಣ ನಗರ ಪಾಲಿಕೆಯ ಜಯನಗರ ಟಿ ಬ್ಲಾಕ್‌ ಪ್ರದೇಶಗಳ ವಾರ್ಡ್‌ಗೆ ಮಾಜಿ ರಾಷ್ಟ್ರಪತಿ ಎ.ಪಿ.ಜೆ. ಅಬ್ದುಲ್‌ ಕಲಾಂ, ಶಿಕ್ಷಣ ಸಚಿವರಾಗಿದ್ದ ಅಬ್ದುಲ್ ಕಲಾಂ ಆಜಾದ್‌ ಅವರ ಹೆಸರನ್ನು ಕುಮಾರಸ್ವಾಮಿ ಲೇಔಟ್‌ 2ನೇ ಹಂತದ ಪ್ರದೇಶಗಳನ್ನು ಒಳಗೊಂಡಿರುವ ವಾರ್ಡ್‌ಗೆ ಇಡಲಾಗಿದೆ.

ವಿಶೇಷ ವ್ಯಕ್ತಿಗಳು ಹಾಗೂ ಸಾಧಕರ ಹೆಸರು ಪಶ್ಚಿಮ ನಗರ ಪಾಲಿಕೆಯ ವಾರ್ಡ್‌ಗಳಲ್ಲಿ ಹೆಚ್ಚಾಗಿದೆ. ದಕ್ಷಿಣ ನಗರ ಪಾಲಿಕೆ ಈ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದರೆ, ಕೇಂದ್ರ, ಉತ್ತರ, ಪೂರ್ವ ನಗರ ಪಾಲಿಕೆಗಳು ನಂತರದ ಸ್ಥಾನದಲ್ಲಿವೆ.

ಪಶ್ಚಿಮ ನಗರ ಪಾಲಿಕೆಯಲ್ಲಿ ಕಾಮಾಕ್ಷಿ ಪಾಳ್ಯ ಪ್ರದೇಶ, ಕೆಂಪಾಪುರ ಅಗ್ರಹಾರ, ಮಾಗಡಿ ರಸ್ತೆ ಕೆಎಚ್‌ಬಿ ಕಾಲೊನಿ ಪ್ರದೇಶಗಳನ್ನು ಒಳಗೊಂಡಿರುವ ವಾರ್ಡ್‌ಗಳಿಗೆ ಕ್ರಮವಾಗಿ ಸ್ವಾತಂತ್ರ್ಯ ಹೋರಾಟಗಾರರಾದ ‘ಮಂಗಲ್‌ ಪಾಂಡೆ’, ‘ಸಂಗೊಳ್ಳಿ ರಾಯಣ್ಣ’, ’ಝಾನ್ಸಿ ರಾಣಿ ’ ಎಂದು ಹೆಸರಿಡಲಾಗಿದೆ.

ಶಂಕರನಗರ ವ್ಯಾಪ್ತಿಯ ವಾರ್ಡ್‌ಗೆ ಮೈಸೂರಿನ ಮಹಾರಾಜರಾದ ‘ನಾಲ್ವಡಿ ಕೃಷ್ಣರಾಜ ಒಡೆಯರ್‌’, ಬಾಪೂಜಿನಗರ ಪ್ರದೇಶದ ವಾರ್ಡ್‌ಗೆ ವಿಜಯನಗರದ ಅರಸ ‘ಕೃಷ್ಣದೇವರಾಯ’, ಕಂಠೀರವ ಸ್ಟುಡಿಯೊ ವ್ಯಾಪ್ತಿಯ ವಾರ್ಡ್‌ಗೆ ನಟ ‘ಡಾ. ಪುನೀತ್‌ ರಾಜ್‌ಕುಮಾರ್‌:, ದಾಸರಹಳ್ಳಿ–ರಾಜಗೋಪಾಲ ನಗರ ವ್ಯಾಪ್ತಿಯ ವಾರ್ಡ್‌ಗೆ ರಾಜಕಾರಣಿ ಶಾಂತವೇರಿ ಗೋಪಾಲಗೌಡ, ಪೀಣ್ಯ ಅಂದ್ರಹಳ್ಳಿ ವ್ಯಾಪ್ತಿಯ ವಾರ್ಡ್‌ಗೆ ‘ನಾಡಪ್ರಭು ಕೆಂಪೇಗೌಡ ನಗರ’, ನಂದಿನಿ ಲೇಔಟ್‌ ಪ್ರದೇಶದ ವ್ಯಾಪ್ತಿಯ ವಾರ್ಡ್‌ಗೆ ‘ಕಿತ್ತೂರು ರಾಣಿ ಚನ್ನಮ್ಮ’ ಎಂದು ಹೆಸರಿಸಲಾಗಿದೆ.

ಲಗ್ಗೆರೆ ಪ್ರದೇಶದ ವಾರ್ಡ್‌ಗೆ ‘ಫ್ರೀಡಂ ಫೈಟರ್‌ ವಾರ್ಡ್‌’ ಎಂದು ಹೆಸರಿಡಲಾಗಿದ್ದರೆ, ರಾಜಾಜಿನಗರ 4ನೇ ಎಂ. ಬ್ಲಾಕ್‌ ಪ್ರದೇಶದ ವಾರ್ಡ್‌ಗೆ ಜ್ಞಾನಪೀಠ ಪುರಸ್ಕೃತ ದ.ರಾ. ಬೇಂದ್ರೆ, ರಾಜಾಜಿನಗರ 6ನೇ ಬ್ಲಾಕ್‌ಗೆ ‘ಡಾ. ರಾಜ್‌ಕುಮಾರ್‌’ ಹಾಗೂ ಹೊಸಕೆರೆಹಳ್ಳಿ ಬಡಾವಣೆ, ಬನಶಂಕರಿ 3ನೇ ಹಂತದ ಪ್ರದೇಶಗಳ ವಾರ್ಡ್‌ಗೆ ‘ಸ್ವಾಮಿ ವಿವೇಕಾನಂದ’ ಎಂದು ಹೆಸರಿಡಲಾಗಿದೆ.

ವಾರ್ಡ್‌ಗಳಿಗೆ ಪ್ರಮುಖರ ಹೆಸರು

ದಕ್ಷಿಣ ನಗರ ಪಾಲಿಕೆಯಲ್ಲಿ ವಾರ್ಡ್‌ಗಳಲ್ಲಿ ಚಿಕ್ಕಲಸಂದ್ರ ಪ್ರದೇಶಕ್ಕೆ ‘ಸಾರ್ವಭೌಮನಗರ’, ಕೋರಮಂಗಲ 6ನೇ ಬ್ಲಾಕ್‌ ಸಾಮಾಜಿಕ ಹೋರಾಟಗಾರರಾದ ‘ಅನಿಬೆಸೆಂಟ್‌’, ಬಿಟಿಎಂ ಲೇಔಟ್‌ 1ನೇ ಹಂತಕ್ಕೆ ‘ವಿಶ್ವಮಾನವ ಕುವೆಂಪು’ ಬೊಮ್ಮನಹಳ್ಳಿಯ ಕೆ.ಆರ್‌. ಲೇಔಟ್‌ಗೆ ‘ಕೆಂಗಲ್‌ ಹನುಮಂತಯ್ಯ’ ಎಂದು ಹೆಸರಿಡಲಾಗಿದೆ.

ಕೇಂದ್ರ ನಗರ ಪಾಲಿಕೆಯ ವ್ಯಾಪ್ತಿಯ ವಾರ್ಡ್‌ಗಳಿಗೆ ಇಟ್ಟಗೆ ಆಂಜನಪ್ಪ ಲೇನ್‌, ಚೌಡಪ್ಪ ರಸ್ತೆಗೆ ‘ಐಡಿಪಿ ಸಾಲಪ್ಪ’, ಮಂಜುನಾಥ ನಗರ ಬಿ. ಬ್ಲಾಕ್, ಗಾಂಧಿನಗರ ಪ್ರದೇಶಕ್ಕೆ ‘ಸುಭಾಶ್ಚಂದ್ರ ಬೋಸ್‌’ ಎಂದು ನಾಮಕರಣ ಮಾಡಲಾಗಿದೆ.

ಉತ್ತರ ನಗರ ಪಾಲಿಕೆಯಲ್ಲಿ ಹಿದಾಯತ್ ನಗರಕ್ಕೆ ‘ಸಮಾಧಾನ ನಗರ’, ಎಚ್‌ಬಿಆರ್‌ ಲೇಔಟ್‌ 5ನೇ ಬ್ಲಾಕ್‌ಗೆ ಶಿಕ್ಷಣ ತಜ್ಞೆ ‘ಅರುಣಾ ಆಸಿಫ್‌ ಅಲಿ’, ದೇವರಜೀವನಹಳ್ಳಿಗೆ ‘ದೊಡ್ಡಣ್ಣನಗರ’ ಎಂದು ಹೆಸರಿಸಲಾಗಿದೆ.

ಪೂರ್ವ ನಗರ ಪಾಲಿಕೆಯಲ್ಲಿ ಕೊಟ್ಟೂರು–ದರ್ಗಾ ಮೊಹಲ್ಲಾಗೆ ಕವಿ ‘ಕೆ.ಎಸ್‌. ನಿಸಾರ್‌ ಅಹಮದ್’, ಕಗ್ಗದಾಸಪುರ ಮುಖ್ಯರಸ್ತೆಯಲ್ಲಿರುವ ವಿಜ್ಞಾನ ನಗರಕ್ಕೆ ‘ತಲಕಾವೇರಿ’ ಎಂದು ನಾಮಕರಣ ಮಾಡಲಾಗಿದೆ.

ಶಿಲಾಯುಗ ಕಾಲದ ಅವಶೇಷ ಪತ್ತೆ

ಕೂಡ್ಲಿಗಿ (ವಿಜಯನಗರ ಜಿಲ್ಲೆ): ತಾಲ್ಲೂಕಿನ ಮೀನಕೆರೆ ಗ್ರಾಮದಲ್ಲಿ ಶಿಲಾಯುಗ ಕಾಲದ ಆದಿಮಾನವರು ಬಳಸಿದ ಶಿಲಾ ಉಪಕರಣಗಳು ಹಾಗೂ ನವ ಶಿಲಾಯುಗ ಕಾಲದ ಉಜ್ಜಿ ನಯಗೊಳಿಸಿದ ಕೈಗೊಡಲಿ, ಮಡಿಕೆ ಚೂರುಗಳು, ಬೃಹತ್ ಕುಟ್ಟು ಚಿತ್ರಗಳು ಪತ್ತೆಯಾಗಿವೆ. 

ಈ ಸ್ಥಳ ಹಗರಿ ನದಿ ದಂಡೆಯ ಮೇಲಿದ್ದು, ಚಿತ್ರದುರ್ಗ ಜಿಲ್ಲೆ ಮೊಳಕಾಲ್ಮೂರು ತಾಲ್ಲೂಕಿನ ಅಂಚಿನಲ್ಲಿದೆ. ವಿಜಯನಗರ ತಿರುಗಾಟ ಸಂಶೋಧನಾ ತಂಡ ಈ ಶೋಧ ನಡೆಸಿದೆ.

ಗೂಳಿ, ಹಸು ಕುಟ್ಟುಚಿತ್ರ: ಮೀನಕೆರೆ ಗ್ರಾಮದ ನೈರುತ್ಯ ಭಾಗಕ್ಕಿರುವ ಕೆಂಗಮಲೆಯಪ್ಪನವರ ಹೊಲದಲ್ಲಿ ನವಶಿಲಾಯುಗ ಕಾಲಕ್ಕೆ ಸೇರಿದ (ಕ್ರಿ. ಪೂ. 3,000ಕ್ಕೆ ಹಿಂದೆ) ಹುಟ್ಟು ಕಲ್ಲುಬಂಡೆ ಯನ್ನು ಚಪ್ಪಟೆಯಾಕಾರ ಮಾಡಿ ಆ ಕಲ್ಲುಬಂಡೆಗೆ ಕುಟ್ಟಿ ಬೃಹತ್ ಗೂಳಿ ಮತ್ತು ಅದರ ಬಳಿಯಲ್ಲಿಯ ಗುಂಡು ಕಲ್ಲಿಗೆ ಕುಟ್ಟಿ ಹಸುವಿನ ಚಿತ್ರವನ್ನು ಬಿಡಿಸಿದ್ದನ್ನು ಮೀನಕೆರೆ ಗ್ರಾಮದ ಸಂಶೋಧಕ ಕಲಂದರ್ ಗಮನಿಸಿದ್ದರು. ಅವರ ಸಹಕಾರದಿಂದ ವಿಜಯನಗರ ತಂಡ ಸ್ಥಳಕ್ಕೆ ಭೇಟಿ ನೀಡಿದಾಗ ಇತಿಹಾಸದ ಪುಟಗಳು ಮತ್ತಷ್ಟು ತೆರೆದುಕೊಂಡವು ಎಂದು ತಂಡದ ಸದಸ್ಯರೂ ಆಗಿರುವ ಹಂಪಿ ಕನ್ನಡ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಪ್ರೊ.ಗೋವಿಂದ, ದೃಶ್ಯಕಲಾ ವಿಭಾಗದ ಪ್ರೊ.ಕೃಷ್ಣೇಗೌಡ ಹೇಳಿದರು.

ಮಾನವಾಕೃತಿ ಕಲ್ಲು: ಮೀನಕೆರೆ ಗ್ರಾಮದ ವಾಯುವ್ಯ ದಿಕ್ಕಿಗೆ ಇರುವ ಕುಮತಿ ಗ್ರಾಮದಲ್ಲಿ ಬೃಹತ್ ಗಾತ್ರದ ಮಾನವಾಕೃತಿ ಕಲ್ಲುಗಳಿವೆ. ಅವು ಈಗಾಗಲೇ ಬೆಳಕಿಗೆ ಬಂದಿವೆ.

‘ಇವುಗಳಿಂದ ಶಿಲಾಯುಗ ಕಾಲದ ಆದಿಮಾನವನ ಸಂಸ್ಕೃತಿ ತಿಳಿಯುವ ಯತ್ನಿಸಬಹುದು. ಇಲ್ಲಿ ಏಳು ಕಲ್ಲುಗಳಿದ್ದವು, ಎರಡು ಉಳಿದಿವೆ. ಸಂರಕ್ಷಣೆ ಅಗತ್ಯ ಇದೆ’ ಎಂದು ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ಪ್ರೊ.ಎಚ್. ತಿಪ್ಪೇಸ್ವಾಮಿ ಹೇಳಿದರು.

3 ಅಡಿ ಎತ್ತರದ ಗೂಳಿ ಚಿತ್ರ

ಕುಟ್ಟಿ ರಚಿಸಲಾದ ಗೂಳಿ ಚಿತ್ರವು 3 ಅಡಿ ಎತ್ತರ 3 ಅಡಿ ‌ಅಗಲವಿದೆ. ಕೊಂಬುಗಳು ಬಾಗಿದಂತಿವೆ. ಮುಂದಿನ ಎರಡು ಕಾಲು ನೆಟ್ಟಗೆ ನಿಂತಂತಿವೆ. ಹಿಂದಿನ ಕಾಲುಗಳು ಮಡಚಿದಂತೆ ಕಾಣಿಸುತ್ತವೆ. ಗೂಳಿಯು ಎದುರಿನ ಪ್ರಾಣಿಯ ಜೊತೆಗೆ ಕಾದಾಟ ಮಾಡುತ್ತಿರುವಂತೆ ಇಲ್ಲವೇ ಹೌಹಾರಿದಂತೆ ಕಾಣಿಸುತ್ತದೆ. ಗುಂಡುಕಲ್ಲನ್ನು ಚಪ್ಪಟೆಯಾಕಾರದಲ್ಲಿ ಮಾಡಿಕೊಂಡು ಗೂಳಿ ಚಿತ್ರವನ್ನು ಕುಟ್ಟಿರಬೇಕು ಎಂದು ಅಂದಾಜಿಸಲಾಗಿದೆ.

ಘಟಕಕ್ಕೆ ಸಾಲ: ನಿಯಮ ಸಡಿಲ

ಚಿನ್ನವನ್ನು ಕಚ್ಚಾ ವಸ್ತುವನ್ನಾಗಿ ಬಳಕೆ ಮಾಡುವ ತಯಾರಿಕಾ ಘಟಕಗಳಿಗೆ ಅಗತ್ಯವನ್ನು ಆಧರಿಸಿದ ಕಾರ್ಯಾಚರಣೆ ಬಂಡವಾಳ ಸಾಲ ನೀಡಲು ಭಾರತೀಯ ರಿಸರ್ವ್‌ ಬ್ಯಾಂಕ್‌ (ಆರ್‌ಬಿಐ) ವಾಣಿಜ್ಯ ಬ್ಯಾಂಕ್‌ಗಳಿಗೆ ಅವಕಾಶ ನೀಡಿದೆ. ಈ ಸೌಲಭ್ಯವು ಇದುವರೆಗೆ ಜುವೆಲ್ಲರಿಗಳಿಗೆ ಮಾತ್ರ ಲಭ್ಯವಿತ್ತು.

ಚಿನ್ನ ಅಥವಾ ಬೆಳ್ಳಿಯನ್ನು ಯಾವುದೇ ಸ್ವರೂಪದಲ್ಲಿ ಖರೀದಿಸುವ ಉದ್ದೇಶಕ್ಕೆ ಸಾಲ ಕೊಡಲು ಬ್ಯಾಂಕ್‌ಗಳಿಗೆ ಸಾಮಾನ್ಯ ಸಂದರ್ಭಗಳಲ್ಲಿ ಅಧಿಕಾರ ಇರುವುದಿಲ್ಲ. ಕಚ್ಚಾ ಚಿನ್ನ, ಬೆಳ್ಳಿಯನ್ನು ಅಡಮಾನವಾಗಿ ಇರಿಸಿಕೊಂಡು ಸಾಲ ಕೊಡಲು ಬ್ಯಾಂಕ್‌ಗಳಿಗೆ ಅವಕಾಶ ಇಲ್ಲ.

ಆದರೆ ಕಾರ್ಯಾಚರಣೆ ಬಂಡವಾಳ ಸಾಲವನ್ನು ಜುವೆಲ್ಲರಿಗಳಿಗೆ ನೀಡಲು ಬ್ಯಾಂಕ್‌ಗಳಿಗೆ ಅನುವು ಮಾಡಿಕೊಡಲಾಗಿದೆ.

ಸೋಮವಾರ ಕೆಲವು ನಿರ್ದೇಶನ ಗಳನ್ನು ಹೊರಡಿಸಿರುವ ಆರ್‌ಬಿಐ, ಜುವೆಲ್ಲರಿಗಳಿಗೆ ಕಾರ್ಯಾಚರಣೆ ಬಂಡವಾಳದ ರೂಪದಲ್ಲಿ ಸಾಲ ನೀಡಲು ಬ್ಯಾಂಕ್‌ಗಳಿಗೆ ಇರುವ ಅವಕಾಶವನ್ನು ಇತರ ತಯಾರಿಕಾ ಘಟಕಗಳಿಗೂ ಅನ್ವಯಿಸಿ ವಿಸ್ತರಣೆ ಮಾಡಿದೆ.

ತಯಾರಿಕಾ ಚಟುವಟಿಕೆ ಅಥವಾ ಕೈಗಾರಿಕಾ ಸಂಸ್ಕರಣಾ ಚಟುವಟಿಕೆಗಳಲ್ಲಿ ಚಿನ್ನವನ್ನು ಕಚ್ಚಾ ವಸ್ತುವನ್ನಾಗಿ ಬಳಕೆ ಮಾಡುವ ಇತರರಿಗೂ ಕಾರ್ಯಾಚರಣೆ ಬಂಡವಾಳ ಸಾಲವನ್ನು ನೀಡಲು ಬ್ಯಾಂಕ್‌ಗಳಿಗೆ ಅನುಮತಿ ನೀಡಿದೆ.

ಚಿನ್ನ ಅಥವಾ ಬೆಳ್ಳಿಯನ್ನು ಕಚ್ಚಾ ವಸ್ತುವನ್ನಾಗಿ ಬಳಕೆ ಮಾಡುವ ಅಥವಾ ತಯಾರಿಕಾ ಚಟುವಟಿಕೆಯಲ್ಲಿ ಇವುಗಳನ್ನು ಒಂದು ಅಗತ್ಯ ವಸ್ತುವನ್ನಾಗಿ ಬಳಕೆ ಮಾಡುವವರಿಗೆ ವಾಣಿಜ್ಯ ಬ್ಯಾಂಕ್‌ಗಳು ಹಾಗೂ 3ನೇ ಹಂತದ ಅಥವಾ 4ನೇ ಹಂತದ ನಗರ ಸಹಕಾರ ಬ್ಯಾಂಕ್‌ಗಳು ಕಾರ್ಯಾಚರಣೆ ಬಂಡವಾಳಕ್ಕೆ ಸಾಲ ನೀಡಬಹುದು ಎಂದು ಆರ್‌ಬಿಐ ಸ್ಪಷ್ಟಪಡಿಸಿದೆ.

ಚಿನ್ನ, ಬೆಳ್ಳಿ ಬೆಲೆ ಇನ್ನಷ್ಟು ಹೆಚ್ಚಳ

ನವದೆಹಲಿ (ಪಿಟಿಐ): ಚಿನ್ನದ ಬೆಲೆಯು ಇಲ್ಲಿನ ಚಿನಿವಾರ ಪೇಟೆಯಲ್ಲಿ ಮಂಗಳವಾರದ ವಹಿವಾಟಿನಲ್ಲಿ 10 ಗ್ರಾಂಗೆ ₹500ರಷ್ಟು ಏರಿಕೆ ಕಂಡು, ಸಾರ್ವಕಾಲಿಕ ಗರಿಷ್ಠ ಮಟ್ಟವಾದ ₹1.20 ಲಕ್ಷಕ್ಕೆ ತಲುಪಿದೆ.

ಅಮೆರಿಕದ ಡಾಲರ್‌ ದುರ್ಬಲ ಆಗಿದ್ದುದು ಹಾಗೂ ಅಮೆರಿಕದ ಕೇಂದ್ರೀಯ ಬ್ಯಾಂಕ್‌ ಬಡ್ಡಿ ದರವನ್ನು ಇನ್ನಷ್ಟು ತಗ್ಗಿಸಬಹುದು ಎಂಬ ನಿರೀಕ್ಷೆಯು ಈ ಏರಿಕೆಗೆ ಕಾರಣ ಎಂದು ತಜ್ಞರು ಹೇಳಿದ್ದಾರೆ.

ಶೇಕಡ 99.5ರಷ್ಟು ಪರಿಶುದ್ಧತೆಯ ಚಿನ್ನದ ಬೆಲೆಯು 10 ಗ್ರಾಂಗೆ ₹500ರಷ್ಟು ಹೆಚ್ಚಾಗಿ, ₹1,19,400ಕ್ಕೆ ತಲುಪಿದೆ. 

ಮಂಗಳವಾರದ ವಹಿವಾಟಿನಲ್ಲಿ ಬೆಳ್ಳಿಯ ಬೆಲೆಯು ಕೆ.ಜಿ.ಗೆ ₹500ರಷ್ಟು ಹೆಚ್ಚಳವಾಗಿ ₹1,50,500ಕ್ಕೆ ತಲುಪಿದೆ. ಸೋಮವಾರದ ವಹಿವಾಟಿನಲ್ಲಿ ಬೆಳ್ಳಿಯ ಬೆಲೆಯು ₹7,000ದಷ್ಟು ಏರಿಕೆ ಆಗಿತ್ತು.

ವಿದೇಶಿ ಸಾಲದ ಮೊತ್ತ ಏರಿಕೆ

ಜೂನ್‌ ಅಂತ್ಯದ ವೇಳೆಗೆ ಭಾರತವು ವಿದೇಶಗಳಿಂದ ಪಡೆದ ಸಾಲಗಳ ಮೊತ್ತವು 747.2 ಬಿಲಿಯನ್‌ ಅಮೆರಿಕನ್‌ ಡಾಲರ್‌ಗೆ (ಅಂದಾಜು ₹66.36 ಲಕ್ಷ ಕೋಟಿ) ಏರಿಕೆ ಆಗಿದೆ ಎಂದು ಭಾರತೀಯ ರಿಸರ್ವ್‌ ಬ್ಯಾಂಕ್‌ (ಆರ್‌ಬಿಐ) ಬಿಡುಗಡೆ ಮಾಡಿರುವ ಅಂಕಿ–ಅಂಶಗಳು ಹೇಳಿವೆ.

2025ರ ಮಾರ್ಚ್‌ ಅಂತ್ಯಕ್ಕೆ ಭಾರತವು ವಿವಿಧ ದೇಶಗಳಿಂದ ಪಡೆದಿದ್ದ ಸಾಲದ ಮೊತ್ತಕ್ಕೆ ಹೋಲಿಸಿದರೆ ಇದು 11.2 ಬಿಲಿಯನ್ ಡಾಲರ್‌ನಷ್ಟು (ಅಂದಾಜು ₹99 ಸಾವಿರ ಕೋಟಿ) ಹೆಚ್ಚು.

ಆದರೆ ದೇಶದ ಸಾಲವನ್ನು ದೇಶದ ಒಟ್ಟು ಜಿಡಿಪಿಯ ಗಾತ್ರದ ಜೊತೆ ಹೋಲಿಸಿದರೆ ಸಾಲದ ಪ್ರಮಾಣವು ಕಡಿಮೆ ಆಗಿರುವುದು ಕಾಣುತ್ತದೆ. ಜೂನ್‌ ಅಂತ್ಯಕ್ಕೆ ವಿದೇಶಿ ಸಾಲ ಮತ್ತು ಜಿಡಿಪಿ ಅನುಪಾತವು ಶೇ 18.9ಕ್ಕೆ ಇಳಿಕೆ ಆಗಿದೆ. ಇದು ಮಾರ್ಚ್‌ನಲ್ಲಿ ಶೇ 19.1ರಷ್ಟು ಇತ್ತು.

ದಿಮ್ಮಿಗಳ ಮೇಲೆ ಶೇ 10ರಷ್ಟು ಸುಂಕ

ಅಮೆರಿಕ ಆಮದು ಮಾಡಿಕೊಳ್ಳುವ ಮರ ಮತ್ತು ಮರದ ದಿಮ್ಮಿಗಳ ಮೇಲೆ ಶೇ 10ರಷ್ಟು, ಅಡುಗೆ ಮನೆ ಹಾಗೂ ಸ್ನಾನಗೃಹದ ಉಪಕರಣಗಳು, ಸೋಫಾಸೆಟ್‌ ಸೇರಿದಂತೆ ಪೀಠೋಪಕರಣಗಳ ಮೇಲೆ ಶೇ 25ರಷ್ಟು ಸುಂಕ ವಿಧಿಸುವ ಆದೇಶಕ್ಕೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸೋಮವಾರ ಸಹಿಹಾಕಿದ್ದಾರೆ.

ಈ ನೂತನ ಸುಂಕಗಳು ಅಕ್ಟೋಬರ್ 14ರಿಂದ ಜಾರಿಗೆ ಬರಲಿವೆ. ಪೇಟೆಂಟ್ ಪಡೆದ ಔಷಧ ಮತ್ತು ಭಾರಿ ಟ್ರಕ್‌ಗಳ ಆಮದು ಮೇಲೆ ಹೊಸ ಸುಂಕಗಳನ್ನು ವಿಧಿಸಿ ಕಳೆದ ವಾರ ಆದೇಶಿಸಲಾಗಿತ್ತು. ಈ ಸುಂಕಗಳು ಅಕ್ಟೋಬರ್‌ 1ರಿಂದಲೇ ಜಾರಿಗೆ ಬರಲಿವೆ.

ಅಮೆರಿಕವು ವಿವಿಧ ದೇಶಗಳಿಂದ ಆಮದು ಮಾಡಿಕೊಳ್ಳುವ ಸರಕುಗಳಿಗೆ ಸಂಬಂಧಿಸಿ ಜನವರಿ 1ರ ಒಳಗಾಗಿ ಒಪ್ಪಂದ ಮಾಡಿಕೊಳ್ಳಬೇಕು. ತಪ್ಪಿದಲ್ಲಿ, ಸೋಫಾ ಸೇರಿ ವಿವಿಧ ಪೀಠೋಪಕರಣಗಳ ಮೇಲಿನ ಸುಂಕವು ಶೇ 30ಕ್ಕೆ ಹೆಚ್ಚಿಸಲಾಗು ವುದು ಹಾಗೂ ಅಡುಗೆ ಮನೆ ಉಪಕರಣಗಳ ಮೇಲಿನ ಸುಂಕವನ್ನು ಶೇ50ಕ್ಕೆ ಹೆಚ್ಚಿಸಲಾಗುವುದು ಎಂದು ಆದೇಶದಲ್ಲಿ ವಿವರಿಸಲಾಗಿದೆ. 

ಮರದ ಉತ್ಪನ್ನಗಳ ಆಮದು ಅಮೆರಿಕದ ಆರ್ಥಿಕತೆಯನ್ನು ದುರ್ಬಲಗೊಳಿಸುತ್ತಿದೆ. ಅಲ್ಲದೇ, ಈ ಉತ್ಪನ್ನಗಳ ಆಮದು ರಾಷ್ಟ್ರೀಯ ಭದ್ರತೆಗೆ ಅಪಾಯ ಒಡ್ಡಲಿದೆ ಎಂದು ಹೇಳುವ ಮೂಲಕ ಸುಂಕ ಹೆಚ್ಚಳವನ್ನು ಟ್ರಂಪ್‌ ಸಮರ್ಥಿಸಿಕೊಂಡಿದ್ದಾರೆ.

ಏರ್‌ ರೈಫಲ್ ಮಿಶ್ರ ತಂಡಕ್ಕೆ ಚಿನ್ನ

 ತೀವ್ರ ಹೋರಾಟ ನಡೆಸಿದ ಇಶಾ ಅನಿಲ್‌ ಟಕ್ಸಾಲೆ ಮತ್ತು ಹಿಮಾಂಶು ಜೋಡಿ, ಸ್ವದೇಶದ ಶಾಂಭವಿ ಕ್ಷೀರಸಾಗರ– ನರೇನ್‌ ಪ್ರಣವ್ ಅವರನ್ನು ಸೋಲಿಸಿ ಐಎಸ್‌ಎಸ್‌ಎಫ್‌ ಜೂನಿಯರ್ ವಿಶ್ವಕಪ್‌ನ 10 ಮೀ. ಏರ್‌ ರೈಫಲ್ ಮಿಶ್ರ ತಂಡ ವಿಭಾಗದಲ್ಲಿ ಮಂಗಳವಾರ ಸ್ವರ್ಣ ಜಯಿಸಿತು.

ಪುರುಷರ ಟ್ರ್ಯಾಪ್‌ (50 ಗುರಿ) ಸ್ಪರ್ಧೆ ಯಲ್ಲಿ ವಿನಯ್ ಪ್ರತಾಪ್‌ ಚಂದ್ರಾವತ್ ಅವರು ಕಂಚಿನ ಪದಕ ಗೆದ್ದರು. ಬುಧವಾರ ಈ ಕೂಟದ ಕೊನೆಯ ದಿನ ವಾಗಿದ್ದು, ಭಾರತ ಪದಕ ಪಟ್ಟಿಯಲ್ಲಿ 23 ಪದಕಗಳೊಂದಿಗೆ ಅಗ್ರಸ್ಥಾನ ಕಾಪಾ ಡಿಕೊಂಡಿದೆ. ಇದರಲ್ಲಿ 7 ಚಿನ್ನ, 9 ಬೆಳ್ಳಿ ಮತ್ತು 7 ಕಂಚಿನ ಪದಕಗಳು ಸೇರಿವೆ.

ಫೈನಲ್‌ನ ಒಂದು ಹಂತದಲ್ಲಿ ಇಶಾ– ಹಿಮಾಂಶು ಜೋಡಿ 9–15ರಲ್ಲಿ ಹಿನ್ನಡೆಯಲ್ಲಿತ್ತು. ಆದರೆ ಅಮೋಘವಾಗಿ ಚೇತರಿಸಿ 17–15ರಲ್ಲಿ ಜಯಗಳಿಸಿತು. ಈ ಸ್ಪರ್ಧೆಯ ಕಂಚಿನ ಪದಕ ಐಎನ್‌ಎ (ವೈಯಕ್ತಿಕ ತಟಸ್ಥ ಅಥ್ಲೀಟ್ಸ್‌) ಪ್ರತಿನಿಧಿಸಿದ ವರ್ವರಾ ಕರ್ದಕೋವಾ– ಕಮಿಲ್‌ ನುರಿಯಖ್ಮೆಟೋವ್ ಜೋಡಿ ಪಾಲಾಯಿತು.

ಪುರುಷರ ಟ್ರ್ಯಾಪ್‌ ಸ್ಪರ್ಧೆಯಲ್ಲಿ ಕ್ರೊವೇಷ್ಯಾದ 20 ವರ್ಷ ವಯಸ್ಸಿನ ಟೋನಿ ಗುಡೆಲ್‌ ಅವರು 44 ಟಾರ್ಗೆಟ್‌ ಸಾಧಿಸಿ ಚಿನ್ನ ಗೆದ್ದರು. ಇದು ಈ ದೇಶಕ್ಕೆ ಮೊದಲ ಚಿನ್ನ. ಕ್ವಾಲಿಫಿಕೇಷನ್‌ನಲ್ಲಿ ಅಗ್ರಸ್ಥಾನ ಗಳಿಸಿದ್ದ ಸ್ಪೇನ್‌ನ ಐಸಾಕ್‌ ಹರ್ನಾಂಡೆಝ್ (41) ಬೆಳ್ಳಿ ಗೆದ್ದರು. ಚಂದ್ರಾವತ್ (34) ಮೂರನೇ ಸ್ಥಾನ ಗಳಿಸಿದರೆ, ಅರ್ಜುನ್ (29) ನಾಲ್ಕನೇ ಸ್ಥಾನ ಪಡೆದರು.

ಮಹಿಳೆಯರ 25 ಮೀ. ಪಿಸ್ತೂಲ್ ಪ್ರಿಸಿಷನ್‌ ಹಂತದ ನಂತರ ಭಾರತದ ತೇಜಸ್ವಿನಿ 288 ಅಂಕಗಳೊಂದಿಗೆ ಅಗ್ರಸ್ಥಾನದಲ್ಲಿದ್ದಾರೆ. ಬುಧವಾರ ರ‍್ಯಾಪಿಡ್‌ ಫೈರ್ ಹಂತ ನಡೆಯಲಿದ್ದು, ಒಟ್ಟಾರೆ ಮೊದಲ ಆರು ಸ್ಥಾನ ಗಳಿಸಿದವರು ಫೈನಲ್‌ ತಲುಪುವರು.

ಪುರುಷರ 25 ಮೀ. ಪಿಸ್ತೂಲ್‌ ಸ್ಪರ್ಧೆಯ ಪ್ರಿಸಿಷನ್‌ ಹಂತದ ನಂತರ ಭಾರತದ ರಾಘವ್ ಶರ್ಮಾ (290) ಅಗ್ರಸ್ಥಾನದಲ್ಲಿದ್ದಾರೆ. ಮುಕೇಶ್‌ ನೆಲವಳ್ಳಿ (289) ನಿಕಟ ಪೈಪೋಟಿ ನೀಡಿ ಎರಡನೇ ಸ್ಥಾನದಲ್ಲಿದ್ದಾರೆ.

ಐದನೇ ಪದಕ ಗೆದ್ದ ಶ್ರೀಹರಿ ನಟರಾಜ್

ಉತ್ತಮ ಪ್ರದರ್ಶನ ನೀಡುತ್ತಿರುವ ಭಾರತದ ಈಜುತಾರೆ ಶ್ರೀಹರಿ ನಟರಾಜ್‌ ಅವರು 11ನೇ ಏಷ್ಯನ್ ಚಾಂಪಿಯನ್‌ ಷಿಪ್‌ನಲ್ಲಿ ಮಂಗಳವಾರ 100 ಮೀ. ಫ್ರೀಸ್ಟೈಲ್‌ ಸ್ಪರ್ಧೆಯಲ್ಲಿ ಕಂಚಿನ ಪದಕ ಗೆದ್ದುಕೊಂಡರು. ಇದು ಅವರಿಗೆ ಈ ಕೂಟದಲ್ಲಿ ಐದನೇ ಪದಕ. 

ಪುರುಷರ 50 ಮೀ. ಬಟರ್‌ಫ್ಲೈ ನಲ್ಲಿ ರೋಹಿತ್ ಬಿ.ಬೆನೆಡಿಕ್ಟನ್ ಅವರು ಬೆಳ್ಳಿ ಗೆದ್ದುಕೊಂಡರು. ಇದರೊಂದಿಗೆ ಭಾರತ ಈ ಕೂಟದಲ್ಲಿ 9 ಪದಕಗಳನ್ನು ಗೆದ್ದಂತಾಗಿದೆ.

ಐದನೇ ಲೇನ್‌ನಲ್ಲಿದ್ದ ಶ್ರೀಹರಿ, ಜಾಣ್ಮೆಯಿಂದ ವೇಗ ಹೆಚ್ಚಿಸಿದರು. 50 ಮೀ. ಕಳೆಯುವಷ್ಟರಲ್ಲಿ ಅವರು ಮೂರನೇ ಸ್ಥಾನದಲ್ಲಿದ್ದರು. ಕೊನೆಯ 50 ಮೀ. ನಲ್ಲೂ ಅವರು ಅದೇ ಲಯವನ್ನು ಉಳಿಸಿಕೊಳ್ಳುವಲ್ಲಿ ಯಶಸ್ವಿಯಾದರು. ಚೀನಾದ ವಾಂಗ್‌ ಹಾವೊಯು (49.19 ಸೆ.) ಮತ್ತು ಕತಾರ್‌ನ ಅಲಿ ತಮೆರ್‌ ಹಸನ್‌ (49.46 ಸೆ.) ಕ್ರಮವಾಗಿ ಚಿನ್ನ ಮತ್ತು ಬೆಳ್ಳಿ ಗೆದ್ದರು.

ಶ್ರೀಹರಿ 49.96 ಸೆ.ಗಳಲ್ಲಿ ಸ್ಪರ್ಧೆ ಪೂರೈಸಿದರು. ಅವರು ಸ್ವದೇಶದ ಆಕಾಶ್‌ ಮಣಿ (50.45 ಸೆ.) ಪೈಪೋಟಿ ಮೀರಿ ನಿಂತರು. ಆಕಾಶ್‌ ನಾಲ್ಕನೇ ಸ್ಥಾನ ಪಡೆದರು.

‘ಈ ಋತುವಿನಲ್ಲಿ ನನ್ನಿಂದ ಉತ್ತಮ ಪ್ರದರ್ಶನ ಮೂಡಿಬಂದಿದೆ. ತರಬೇತಿಯೂ ಚೆನ್ನಾಗಿ ನಡೆದಿದೆ. ಹೀಟ್ಸ್‌ನಲ್ಲಿ ನಾನೇ ವೇಗವಾಗಿ ಈಜಿದ್ದೆ. ಆದರೆ ಪದಕ ಗೆದ್ದ ಇತರ ಇಬ್ಬರೂ ಅಮೋಘವಾಗಿ ಈಜಿದರು. ಪೋಡಿಯಂ ಏರಲು ಸಾಧ್ಯವಾಗಿದ್ದರಿಂದ ಸಂತಸವಾಗಿದೆ’ ಎಂದು 24 ವರ್ಷ ವಯಸ್ಸಿನ ಶ್ರೀಹರಿ ಫೈನಲ್ ನಂತರ ಪ್ರತಿಕ್ರಿಯಿಸಿದರು.

50 ಮೀ. ಬಟರ್‌ಫ್ಲೈನಲ್ಲಿ ರೋಹಿತ್ ಉತ್ತಮ ಆರಂಭ ಪಡೆದು, 23.89 ಸೆ.ಗಳಲ್ಲಿ ಗುರಿ ತಲುಪಿ ಎರಡನೇ ಸ್ಥಾನ ಪಡೆದರು. ಅವರಿಂದ ತೀವ್ರ ಪೈಪೋಟಿ ಎದುರಿಸಿದರೂ ಕಜಾಕಸ್ತಾನದ ಅದಿಲ್ಬೆಕ್‌ ಮುಸ್ಸಿನ್ 23.74 ಸೆ.ಗಳಲ್ಲಿ ಗುರಿತಲುಪಿ ಚಿನ್ನ ಗೆಲ್ಲುವಲ್ಲಿ ಯಶಸ್ವಿ ಆದರು.

ಕರ್ನಾಟಕದವರಾದ ಧಿನಿಧಿ ದೇಸಿಂಗು ಮತ್ತು ಎಸ್‌.ರುತುಜಾ ಅವರು ಮಹಿಳೆಯರ 100 ಮೀ. ಫ್ರೀಸ್ಟೈಲ್‌ನಲ್ಲಿ ಫೈನಲ್‌ಗೆ ತಲುಪಿದ್ದರು. ಆದರೆ ಪದಕ ಗೆಲ್ಲಲಾಗಲಿಲ್ಲ. ಅವರು ಕ್ರಮವಾಗಿ ಆರು ಮತ್ತು ಎಂಟನೇ ಸ್ಥಾನ ಗಳಿಸಿದರು.

ವಿಶ್ವ ಪ್ಯಾರಾ ಅಥ್ಲೆಟಿಕ್ಸ್‌ ಸುಮಿತ್‌ಗೆ ಹ್ಯಾಟ್ರಿಕ್ ಚಿನ್ನ

ಭಾರತದ ಪ್ಯಾರಾ ಜಾವೆಲಿನ್ ಪಟು ಸುಮಿತ್ ಅಂಟಿಲ್ ಅವರು ವಿಶ್ವ ಪ್ಯಾರಾ ಅಥ್ಲೆಟಿಕ್ಸ್‌ನಲ್ಲಿ ಸತತ ಮೂರನೇ ಬಾರಿ ಪುರುಷರ ಎಫ್‌64 ವಿಭಾಗದಲ್ಲಿ ಚಿನ್ನ ಗೆದ್ದು ಹ್ಯಾಟ್ರಿಕ್ ಪೂರೈಸಿದರು.

ಮಂಗಳವಾರ ನಡೆದ ಜಾವೆಲಿನ್‌ ಸ್ಪರ್ಧೆಯಲ್ಲಿ ಸುಮಿತ್ ಅವರು ತಮ್ಮ ಐದನೇ ಯತ್ನದಲ್ಲಿ 71.37 ಮೀ. ದೂರ ಎಸೆದಿದ್ದು ಅವರ ಉತ್ತಮ ಥ್ರೊ ಎನಿಸಿತು. 27 ವರ್ಷ ವಯಸ್ಸಿನ ಸುಮಿತ್ ಈ ಹಿಂದೆ 2023 ಮತ್ತು 2024ರ ಆವೃತ್ತಿಗಳಲ್ಲೂ ಚಾಂಪಿಯನ್ ಆಗಿದ್ದರು.

ಇಂದಿನ ಸಾಧನೆ ಅವರ ವೈಯಕ್ತಿಕ ಶ್ರೇಷ್ಠವೂ ಆಗಿದೆ. ಕಳೆದ ವರ್ಷದ ಚಾಂಪಿಯನ್‌ಷಿಪ್‌ನಲ್ಲಿ ಅವರು 70.83 ಮೀ. ದೂರ ಎಸೆದಿದ್ದು ಇದುವರೆಗಿನ ಅತ್ಯುತ್ತಮ ಎನಿಸಿತ್ತು.

ಪ್ಯಾರಾಲಿಂಪಿಕ್ಸ್‌ನಲ್ಲೂ ಅವರು ಎರಡು ಬಾರಿಯ (2021ರ ಟೋಕಿಯೊ ಮತ್ತು 2024ರ ಪ್ಯಾರಿಸ್‌) ಚಿನ್ನದ ಪದಕ ವಿಜೇತರಾಗಿದ್ದಾರೆ. ಹಾಲಿ ಪ್ಯಾರಾ ಏಷ್ಯನ್ ಗೇಮ್ಸ್‌ ಚಾಂಪಿಯನ್ ಕೂಡ ಆಗಿದ್ದಾರೆ.

ಬಿಹಾರದಲ್ಲಿ 7.42 ಕೋಟಿ ಮತದಾರರು

ಚುನಾವಣಾ ಆಯೋಗವು ಮಂಗಳವಾರ ಬಿಹಾರದ ಮತದಾರರ ಅಂತಿಮ ಪಟ್ಟಿಯನ್ನು ಪ್ರಕಟಿಸಿದ್ದು, ಅದರಲ್ಲಿ 7.42 ಕೋಟಿ ಮತದಾರರ ವಿವರಗಳಿವೆ. 

ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್‌) ಬಳಿಕ ರಾಜ್ಯದಲ್ಲಿ ಒಟ್ಟು 47 ಲಕ್ಷ ಮತದಾರರು ಕಡಿಮೆಯಾಗಿದ್ದಾರೆ. ಆದರೆ, ಎಸ್‌ಐಆರ್‌ನ ಕರಡು ಪಟ್ಟಿಗಿಂತ (7.24 ಕೋಟಿ) ಅಂತಿಮ ಪಟ್ಟಿಯಲ್ಲಿ ಹೆಚ್ಚಿನ ಸಂಖ್ಯೆಯ ಮತದಾರರ ಹೆಸರುಗಳು ಸೇರ್ಪಡೆಯಾಗಿವೆ.

ಆಗಸ್ಟ್‌ನಲ್ಲಿ ಪ್ರಕಟಿಸಿದ್ದ ಕರಡು ಪಟ್ಟಿಯಲ್ಲಿ ಗೈರುಹಾಜರಿ, ಸ್ಥಳಾಂತರ ಅಥವಾ ಮೃತಪಟ್ಟಿದ್ದಾರೆ ಎಂಬ ಕಾರಣಗಳನ್ನು ನೀಡಿ 65 ಲಕ್ಷ ಮತದಾರರ ಹೆಸರುಗಳನ್ನು ಹೊರಗಿಡಲಾಗಿತ್ತು. ಕರಡುಪಟ್ಟಿಯಲ್ಲಿ ಬಿಟ್ಟುಹೋಗಿದ್ದ 21.53 ಲಕ್ಷ ಅರ್ಹ ಮತದಾರರ ಹೆಸರುಗಳನ್ನು ಅಂತಿಮ ಪಟ್ಟಿಯಲ್ಲಿ ಸೇರಿಸಲಾಗಿದೆ ಎಂದು ಬಿಹಾರದ ಮುಖ್ಯ ಚುನಾವಣಾ ಅಧಿಕಾರಿ ಮಾಹಿತಿ ನೀಡಿದ್ದಾರೆ.  

ಚುನಾವಣಾ ಆಯೋಗವು ಮಂಗಳವಾರ ಬಿಹಾರದ ಮತದಾರರ ಅಂತಿಮ ಪಟ್ಟಿಯನ್ನು ಪ್ರಕಟಿಸಿದ್ದು, ಅದರಲ್ಲಿ 7.42 ಕೋಟಿ ಮತದಾರರ ವಿವರಗಳಿವೆ. 

ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್‌) ಬಳಿಕ ರಾಜ್ಯದಲ್ಲಿ ಒಟ್ಟು 47 ಲಕ್ಷ ಮತದಾರರು ಕಡಿಮೆಯಾಗಿದ್ದಾರೆ. ಆದರೆ, ಎಸ್‌ಐಆರ್‌ನ ಕರಡು ಪಟ್ಟಿಗಿಂತ (7.24 ಕೋಟಿ) ಅಂತಿಮ ಪಟ್ಟಿಯಲ್ಲಿ ಹೆಚ್ಚಿನ ಸಂಖ್ಯೆಯ ಮತದಾರರ ಹೆಸರುಗಳು ಸೇರ್ಪಡೆಯಾಗಿವೆ.

ಆಗಸ್ಟ್‌ನಲ್ಲಿ ಪ್ರಕಟಿಸಿದ್ದ ಕರಡು ಪಟ್ಟಿಯಲ್ಲಿ ಗೈರುಹಾಜರಿ, ಸ್ಥಳಾಂತರ ಅಥವಾ ಮೃತಪಟ್ಟಿದ್ದಾರೆ ಎಂಬ ಕಾರಣಗಳನ್ನು ನೀಡಿ 65 ಲಕ್ಷ ಮತದಾರರ ಹೆಸರುಗಳನ್ನು ಹೊರಗಿಡಲಾಗಿತ್ತು. ಕರಡುಪಟ್ಟಿಯಲ್ಲಿ ಬಿಟ್ಟುಹೋಗಿದ್ದ 21.53 ಲಕ್ಷ ಅರ್ಹ ಮತದಾರರ ಹೆಸರುಗಳನ್ನು ಅಂತಿಮ ಪಟ್ಟಿಯಲ್ಲಿ ಸೇರಿಸಲಾಗಿದೆ ಎಂದು ಬಿಹಾರದ ಮುಖ್ಯ ಚುನಾವಣಾ ಅಧಿಕಾರಿ ಮಾಹಿತಿ ನೀಡಿದ್ದಾರೆ.  

ಗಾಜಾ: ಸಂಘರ್ಷ ಅಂತ್ಯಕ್ಕೆ 20 ಅಂಶ

ಗಾಜಾದಲ್ಲಿ ಯುದ್ಧ ಕೊನೆಗೊಳಿಸುವ ಸಂಬಂಧ ರೂಪಿಸಿರುವ ಶಾಂತಿ ಒಪ್ಪಂದಕ್ಕೆ ಒಪ್ಪಿಗೆಯಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್ ಹಾಗೂ ಇಸ್ರೇಲ್‌ ಪ್ರಧಾನಿ ಬೆಂಜಮಿನ್ ನೆತನ್ಯಾಹು ತಿಳಿಸಿದ್ದಾರೆ. ಆದರೆ, ಈ ಪ್ರಸ್ತಾವವನ್ನು ಹಮಾಸ್‌ ಒಪ್ಪಿಕೊಂಡಿ ದೆಯೇ ಎಂಬುದು ದೃಢಪಟ್ಟಿಲ್ಲ.

ಪ್ಯಾಲೆಸ್ಟೀನ್‌ನ ಗಾಜಾ ಪಟ್ಟಿಯಲ್ಲಿ ಇಸ್ರೇಲ್‌– ಹಮಾಸ್‌ ನಡುವಿನ ಸಂಘರ್ಷ ಕೊನೆಗೊಳಿಸುವುದಕ್ಕಾಗಿ 20 ಅಂಶಗಳ ಯೋಜನೆಯನ್ನು ಟ್ರಂಪ್‌ ಮಂಡಿಸಿದ್ದಾರೆ. ಇದರ ಅನ್ವಯ, ಯುದ್ಧದಿಂದ ಜರ್ಜರಿತರಾಗಿರುವ ಪ್ಯಾಲೆಸ್ಟೀನ್‌ನ ಪ್ರದೇಶಕ್ಕೆ ತಾತ್ಕಾಲಿಕ ಆಡಳಿತ ಮಂಡಳಿ ಸ್ಥಾಪಿಸಿ, ಇದರ ನೇತೃತ್ವವನ್ನು ಡೊನಾಲ್ಡ್‌ ಟ್ರಂಪ್‌ ಅವರೇ ವಹಿಸಿ ಕೊಳ್ಳಲಿದ್ದಾರೆ. ಈ ಮಂಡಳಿಯಲ್ಲಿ ಬ್ರಿಟನ್‌ನ ಮಾಜಿ ಪ್ರಧಾನಿ ಟೋನಿ ಬ್ಲೇರ್‌ ಕೂಡ ಇರಲಿದ್ದಾರೆ.

‘ಎರಡು ಕಡೆಯವರೂ ಒಪ್ಪಿಗೆ ಸೂಚಿಸಿದರೆ, ಯುದ್ಧಪೀಡಿತ ಗಾಜಾ ದಿಂದ ಯಾವ ನಾಗರಿಕರೂ ಬಿಟ್ಟು ತೆರಳಬೇಕಿಲ್ಲ. ಹಮಾಸ್‌ ವಶದಲ್ಲಿರುವ ಬಾಕಿ ಉಳಿದ ಒತ್ತೆಯಾಳುಗಳನ್ನು 72 ಗಂಟೆಗಳ ಒಳಗಾಗಿ ಬಿಡುಗಡೆಗೊಳಿಸಬೇಕು ಎಂಬ ಪ್ರಸ್ತಾವವೂ ಒಳಗೊಂಡಿದೆ ಎಂದು ಟ್ರಂಪ್‌ ಹೇಳಿದ್ದಾರೆ.

ಕತಾರ್‌ ಕ್ಷಮೆಯಾಚಿಸಿದ ನೆತನ್ಯಾಹು

ಹಮಾಸ್‌ ನಾಯಕರನ್ನು ಗುರಿಯಾಗಿಸಿ ದೋಹಾದ ಮೇಲೆ ನಡೆಸಿದ ದಾಳಿಗೆ ಇಸ್ರೇಲ್‌ ಪ್ರಧಾನಿ ಬೆಂಜಮಿನ್‌ ನೆತನ್ಯಾಹು ಅವರು ಸೋಮವಾರ ಕತಾರ್‌ನ ಕ್ಷಮೆಯಾಚಿಸಿದ್ದಾರೆ ಎಂದು ಅಮೆರಿಕ ತಿಳಿಸಿದೆ. 

‘ನೆತನ್ಯಾಹು ಅವರು ಶ್ವೇತಭವನದಿಂದ ದೂರವಾಣಿ ಕರೆ ಮಾಡಿ ಕತಾರ್‌ ಪ್ರಧಾನಿ ಶೇಕ್‌ ಮೊಹಮ್ಮದ್‌ ಬಿನ್‌ ಅಬ್ದುಲ್‌ ರಹಮಾನ್‌ ಅಲ್‌ ಥಾನಿ ಅವರ ಕ್ಷಮೆಯಾಚಿಸಿದರು. ದಾಳಿಯಲ್ಲಿ ಕತಾರ್‌ನ ಭದ್ರತಾ ಸಿಬ್ಬಂದಿ ಮೃತಪಟ್ಟಿದ್ದಕ್ಕೆ ತೀವ್ರ ವಿಷಾದ ವ್ಯಕ್ತಪಡಿಸಿದರು. ಭವಿಷ್ಯದಲ್ಲಿ ಇಂತಹ ದಾಳಿ ನಡೆಸುವುದಿಲ್ಲ ಎಂದು ಮಾತುಕೊಟ್ಟರು’ ಎಂದು ಶ್ವೇತಭವನದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಈಗ ಮುಂದಿಟ್ಟಿರುವ ಶಾಂತಿ ಒಪ್ಪಂದಕ್ಕೆ 3–4 ದಿನಗಳಲ್ಲಿ ಹಮಾಸ್‌ ಒಪ್ಪಿಗೆ ಸೂಚಿಸದಿದ್ದರೆ, ಹಮಾಸ್‌ ಬಂಡುಕೋರ ಸಂಘಟನೆಯನ್ನು ಮಣಿಸಲು ಇಸ್ರೇಲ್‌ಗೆ ಅಮೆರಿಕವು ಸಂಪೂರ್ಣ ಬೆಂಬಲ ನೀಡಲಿದೆ’ ಎಂದು ಡೊನಾಲ್ಡ್‌ ಟ್ರಂಪ್‌ ಎಚ್ಚರಿಕೆ ನೀಡಿದ್ದಾರೆ.

ವಿಸ್ತೃತ ಯೋಜನೆಯನ್ನು ಸುದ್ದಿಗೋಷ್ಠಿಯಲ್ಲಿ ಬಿಡುಗಡೆಗೊಳಿಸಿ ಮಾತನಾಡಿದ ಟ್ರಂಪ್, ‘ಶಾಂತಿ ಸ್ಥಾಪನೆ ಕುರಿತ ಯೋಜನೆ ಇನ್ನೂ ಅಂತಿಮಗೊಂಡಿಲ್ಲ. ಇದಕ್ಕೆ ಹಮಾಸ್‌ ಒಪ್ಪಿಗೆ ಸಿಗಬೇಕು’ ಎಂದು ತಿಳಿಸಿದರು.

‘ಪ್ಯಾಲೆಸ್ಟೀನಿಯನ್ನರು ತಮ್ಮ ಹಣೆಬರಹ ನಿರ್ಧರಿಸಿಕೊಳ್ಳಲು ಇದನ್ನು ಒಪ್ಪಬೇಕು’ ಎಂದರು.

‘ಒಂದೊಮ್ಮೆ ಹಮಾಸ್‌ ಪ್ರಸ್ತಾವ ತಿರಸ್ಕರಿಸಿದರೆ ಅಥವಾ ಒಪ್ಪಿಗೆ ಸೂಚಿಸಿದರೆ, ಇಸ್ರೇಲ್‌ ತನ್ನ ಕೆಲಸವನ್ನು ಪೂರ್ಣಗೊಳಿಸಲಿದೆ. ಅದು ಸುಲಭದ ಮಾರ್ಗವೇ ಇರಬಹುದು ಅಥವಾ ಕಷ್ಟದ ಮಾರ್ಗವೇ ಇರಬಹುದು. ಅದನ್ನು ನಾವು ಮುಗಿಸುತ್ತೇವೆ’ ಎಂದು ಇಸ್ರೇಲ್‌ ಪ್ರಧಾನಿ ನೆತನ್ಯಾಹು ಸ್ಪಷ್ಟಪಡಿಸಿದರು.

ಮುಂದೇನು?: ಕತಾರ್‌ನ ಪ್ರಧಾನಿ ಹಾಗೂ ಈಜಿಪ್ಟ್‌ನ ಗುಪ್ತಚರ ವಿಭಾಗದ ಮುಖ್ಯಸ್ಥರು, ಟ್ರಂಪ್‌ ಇಟ್ಟಿರುವ ಪ್ರಸ್ತಾವ ವನ್ನು ಹಮಾಸ್‌ ಸಂಧಾನಕಾರರಿಗೆ ತಿಳಿಸಲಿದ್ದಾರೆ. ಗಾಜಾದ ಆಡಳಿತ ವ್ಯವಸ್ಥೆಯಿಂದ ಹಿಂದೆ ಸರಿಯುವ ಪ್ರಸ್ತಾವಕ್ಕೆ ಹಮಾಸ್‌ ಈ ಹಿಂದೆಯೇ ಒಪ್ಪಿಗೆ ಸೂಚಿಸಿತ್ತು. ಆದರೆ, ನಿಶ್ಶಸ್ತ್ರೀಕರಣಗೊಳಿಸಬೇಕು ಎಂಬ ನೆತನ್ಯಾಹು ಬೇಡಿಕೆಗೆ ಒಪ್ಪಿಗೆ ಸೂಚಿಸಿಲ್ಲ.  

‘ಚರ್ಚಿಸಿ ನಿರ್ಧಾರ’: ‘ಡೊನಾಲ್ಡ್ ಟ್ರಂಪ್ ಅವರ ಗಾಜಾ ಶಾಂತಿ ಯೋಜನೆಗೆ ಪ್ರತಿ ಕ್ರಿಯಿಸುವ ಮೊದಲು, ಚರ್ಚಿಸಲಾಗು ವುದು’ ಎಂದು ಹಮಾಸ್ ಹೇಳಿದೆ.

ವರವಾದೀತೆ ನ್ಯಾನೋ ಗೊಬ್ಬರ?

ಈಗ ನಾನಾರೂಪದಲ್ಲಿ ನ್ಯಾನೋ ತಂತ್ರಜ್ಞಾನ ಬೆಳೆಯುತ್ತಲೇ ಇದೆ. ನ್ಯಾನೋ ತಂತ್ರಜ್ಞಾನವೆಂದರೆ 1ರಿಂದ 100 ನ್ಯಾನೋ ಮೀಟರ್‌ಗಳ ವ್ಯಾಪ್ತಿಯಲ್ಲಿಯ ವಸ್ತುಗಳನ್ನು ಕುರಿತಾದ ವಿಜ್ಞಾನ. ಒಂದು ನ್ಯಾನೋ ಮೀಟರ್ (0.000000001 ಮೀಟರ್), ಎಂದರೆ ಅದರ ದಪ್ಪವು ನಮ್ಮ ಕೂದಲೆಳೆಗಿಂತ ಸರಿಸುಮಾರು ಒಂದು ಲಕ್ಷ ಪಟ್ಟು ಕಡಿಮೆ! ಒಂದು ಕಾಲದಲ್ಲಿ ಕೇವಲ ಇದೊಂದು ‘ಸಾಧ್ಯತೆ’ ಎನಿಸಿಕೊಂಡಿದ್ದ ಅತ್ಯಂತ ಸಂಕೀರ್ಣ ಹಾಗೂ ಸೂಕ್ಷ್ಮ ತಂತ್ರಜ್ಞಾನ. ನ್ಯಾನೋ ತಂತ್ರಜ್ಞಾನ ಮೊದಮೊದಲು ಸೂಕ್ಷ್ಮದರ್ಶಕ ತಂತ್ರಜ್ಞಾನ ಹಾಗೂ ವಸ್ತುವಿಜ್ಞಾನದ ಕ್ಷೇತ್ರವನ್ನು ಪ್ರವೇಶಿಸಿತು. ಇಂದು ಔಷಧತಯಾರಿಕೆ, ಆರೋಗ್ಯ, ಪರಿಸರ ಮಾಲಿನ್ಯ ನಿರ್ವಹಣೆ, ಸೌರಫಲಕಗಳ ತಯಾರಿಕೆ, ಚಿಪ್‌ಗಳ ವಿನ್ಯಾಸ, ನ್ಯಾನೋ ರೋಬೋಟ್‌ – ಹೀಗೆ ಹಲವಾರು ವಿವಿಧ ಕ್ಷೇತ್ರಗಳಲ್ಲಿ ಕಾರ್ಯರೂಪಕ್ಕೆ ಬಂದಿದೆ. ನ್ಯಾನೋ ಟೆಕ್ನಾಲಜಿ ಇಂದು ಕೃಷಿಯಲ್ಲಿಯೂ ಬಳಕೆಯಾಗುತ್ತಿದೆ. ಕಳೆದ ಕಾಲು ಶತಮಾನಗಳಿಂದ ನ್ಯಾನೋ ತಂತ್ರಜ್ಞಾನವನ್ನು ಕೃಷಿಯ ಕ್ಷೇತ್ರ ದಲ್ಲಿಯೂ ಪ್ರಯೋಗ ಮಾಡಲಾಗುತ್ತಿದೆ. ಆ ಅವಿರತ ಪರಿಶ್ರಮದ ಫಲವೇ ನ್ಯಾನೋ ಗೊಬ್ಬರ. 

ಗೊಬ್ಬರಗಳಲ್ಲಿನ ಪೋಷಕಾಂಶಗಳನ್ನು ಹೆಚ್ಚು ಪರಿ ಣಾಮಕಾರಿಯಾಗಿಸಲು ಗೊಬ್ಬರವನ್ನು ನ್ಯಾನೋ ಗಾತ್ರಕ್ಕೆ ತರಲಾಗುವುದು. ಅದೇ ‘ನ್ಯಾನೋ ಗೊಬ್ಬರ’. ಸಾಮಾನ್ಯ ಗೊಬ್ಬರದ ಹಾಗೆ ಮಣ್ಣಿನಲ್ಲಿ ಬೆರೆಸುವುದರ ಬದಲಾಗಿ ಇದನ್ನು ನೇರವಾಗಿ ಕಾಂಡಕ್ಕೆ ಹಾಗೂ ಎಲೆಗಳಿಗೆ ಸಿಂಪಡಿಸಲಾಗು ತ್ತದೆ. ಇದು ಸಾಂಪ್ರದಾಯಿಕ ಗೊಬ್ಬರಕ್ಕಿಂತ ಸೋವಿ, ಬಳಕೆಯ ಅವಶ್ಯಕತೆಯ ಪ್ರಮಾಣವೂ ಕಡಿಮೆ, ನಿರ್ವಹಣೆಯೂ ಸುಲಭ, ಅತ್ಯಂತ ಪರಿಣಾಮಕಾರಿ; ಅಷ್ಟೇ ಇಳುವರಿ, ಹಾಗೂ ಸುಲಭವಾಗಿ ಇದನ್ನು ಸಂಗ್ರಹಿಸಿಡಬಹುದು. ಕೃಷಿಯಲ್ಲಿ ಸುಸ್ಥಿರತೆಗಾಗಿ ಇದೊಂದು ಅತ್ಯಂತ ಮಹತ್ವದ ಪರಿಹಾರವಾಗಿದೆ. ನ್ಯಾನೋ ಗೊಬ್ಬರದಲ್ಲಿ ನಾಲ್ಕು ಬಗೆಗಳುಂಟು: ನ್ಯಾನೋ ಯೂರಿಯಾ ಅಥವಾ ನ್ಯಾನೋ ಸಾರಜನಕ, ನ್ಯಾನೋ ಫಾಸ್ಪರಸ್, ನ್ಯಾನೋ ಪೊಟ್ಯಾಸಿಯಮ್, ಹಾಗೂ ನ್ಯಾನೋ ಸೂಕ್ಷ್ಮ ಪೋಷಕಾಂಶಗಳು. ಈಗ ನ್ಯಾನೋ ಗೊಬ್ಬರದ ಕೆಲವು ಲಕ್ಷಣಗಳನ್ನು ನೋಡೋಣ.

ನ್ಯಾನೋ ಗಾತ್ರ: ಈ ಗೊಬ್ಬರದ ಪ್ರಧಾನ ಲಕ್ಷಣವೇ ಅದರ ಸೂಕ್ಷ್ಮ ಗಾತ್ರ. ಸಾಂಪ್ರದಾಯಿಕ ರಾಸಾಯನಿಕ ಗೊಬ್ಬರವು ಗಾತ್ರದಲ್ಲಿ ದೊಡ್ಡದಾಗಿರುವುದರಿಂದ ಅದರ ಬಳಕೆಯ ಪ್ರಮಾಣ ಹೆಚ್ಚಾಗಿರುತ್ತದೆ. ಬಳಸಿದ ಎಲ್ಲಾ ಗೊಬ್ಬರವೂ ಬೆಳೆಗಳಿಗೆ ಉಪಯೋಗವಾಗುವುದಿಲ್ಲ; ಪೋಷಕಾಂಶದ ಸೋರಿಕೆಯಾಗುತ್ತದೆ, ಗೊಬ್ಬರವು ನೀರಿನಲ್ಲಿ ಸೇರಿ ಹರಿದು ಹೋಗುತ್ತದೆ, ಇಲ್ಲವೇ ಮಣ್ಣಿನಲ್ಲೇ ಉಳಿದುಬಿಡುತ್ತದೆ. ಅಚ್ಚರಿಯ ವಿಷಯವೆಂದರೆ, ಗೊಬ್ಬರದಲ್ಲಿನ‌ ಶೇ 50-70ರಷ್ಟು ಪೋಷಕಾಂಶವು ಬೆಳೆಗಳಿಗೆ ಸಿಗುವುದೇ ಇಲ್ಲ. ಇದಕ್ಕೆ ರಾಮಬಾಣವೇ ನ್ಯಾನೋ ಗೊಬ್ಬರ. ಇದರ ಗಾತ್ರ ಅತಿ ಚಿಕ್ಕದು; ಅದನ್ನು ಪೋಷಕಾಂಶಗಳ ಸಮೇತ ಕ್ಯಾಪ್ಸೂಲ್‌ನಲ್ಲಿ ತುಂಬಿ ಸಲಾಗುತ್ತದೆ. ದ್ರವದ ರೂಪದಲ್ಲಿ ನೇರವಾಗಿ ಕಾಂಡಗಳು, ಎಲೆಗಳು, ಕೆಲವೊಮ್ಮೆ ಬೇರುಗಳೂ ಹೀರಿಕೊಳ್ಳುವಂತೆ ಸಿಂಪಡಿ ಸಲಾಗುತ್ತದೆ.

ಪೋಷಕಾಂಶಗಳ ಬಿಡುಗಡೆ ನಿಧಾನ: ನ್ಯಾನೋ ಗೊಬ್ಬರವನ್ನು ಹಾಕಿದ ಮೇಲೆ ಅದರಲ್ಲಿನ ಪೋಷಕಾಂಶಗಳು ನಿಧಾನವಾಗಿ ಬಿಡುಗಡೆಯಾಗುತ್ತವೆ. ಇದರಿಂದಾಗಿ ಸಸ್ಯಗಳು ಪೋಷಕಾಂಶಗಳನ್ನು ಹೀರಿಕೊಳ್ಳುವ ಪ್ರಮಾಣ ಹೆಚ್ಚುತ್ತದೆ. ಈ ವಿಶೇಷವಾದ ಲಕ್ಷಣದಿಂದಾಗಿ ಪೋಷಕಾಂಶವು ಪೋಲಾಗುವುದು ಕಡಿಮೆ ಆಗುವುದಲ್ಲದೆ, ಮತ್ತೆ ಮತ್ತೆ ಗೊಬ್ಬರದ ಸಿಂಪಡಣೆಯ ಅಗತ್ಯವೂ ಇಲ್ಲ. 

ಪರಿಣಾಮಕಾರಿ: 500 ಮಿಲಿಲೀಟರ್ ನ್ಯಾನೋ ಯೂರಿಯಾವು 45 ಕೆಜಿಗಳಷ್ಟು ಸಾಂಪ್ರದಾಯಿಕ ರಾಸಾಯನಿಕ ಯೂರಿಯಾ ಗೊಬ್ಬರಕ್ಕೆ ಸಮ! ನ್ಯಾನೋ ಗೊಬ್ಬರವು ಒಳ್ಳೆಯ ಇಳುವರಿಯನ್ನು ನೀಡುವುದಲ್ಲದೆ ಕಿಸೆಗೂ ಹಗುರ.

ಪರಿಸರಸ್ನೇಹಿ: ನ್ಯಾನೋ ಗೊಬ್ಬರವು ಪರಿಸರಸ್ನೇಹಿ. ಮೊದಲನೆಯದಾಗಿ ಅನಗತ್ಯ ರಾಸಾಯನಿಕ ಸೋರಿಕೆಯು ತಪ್ಪಿ ಜಲಮಾಲಿನ್ಯವು ಕಡಿಮೆಯಾಗುತ್ತದೆ. ಎರಡನೆಯದಾಗಿ ಗೊಬ್ಬರದ ತಯಾರಿಕೆಯಲ್ಲಿ ಗಣನೀಯವಾದ ಇಳಿಕೆಯಾಗಿ ಅದರಿಂದ ಆಗುತ್ತಿರುವ ಹಸಿರುಮನೆ ಅನಿಲಗಳ ಹೊರ ಸೂಸುವಿಕೆಯಲ್ಲಿ ಕೂಡ ಇಳಿಕೆಯನ್ನು ಕಾಣಬಹುದು. v

ಭಾರತದ ಪಾತ್ರ 

1960ರ ನಂತರದಲ್ಲಿ ಭಾರತದಲ್ಲಿ ನಡೆದ ಹಸಿರು ಕ್ರಾಂತಿಯು ರಾಸಾಯನಿಕ ಗೊಬ್ಬರಗಳ ಬಳಕೆಯನ್ನು ಹೆಚ್ಚಿಸಿ, ಮಣ್ಣನ್ನು ದುರ್ಬಲಗೊಳಿಸಿದೆ. ಆದರೆ ಈಗ ಭಾರತದ ಕೆಲವು ಸಹಕಾರಿ, ಸರ್ಕಾರಿ ಹಾಗೂ ಖಾಸಗಿ ಸಂಸ್ಥೆಗಳು (ಇಂಡಿಯನ್ ಫಾರ್ಮರ್ಸ್ ಫರ್ಟಿಲೈಸರ್ಸ್ ಕೋ-ಓಪರೇಟಿವ್ ಲಿಮಿಟೆಡ್ (IFFCO), ನ್ಯಾಷನಲ್‌ ಫರ್ಟಿಲೈಸರ್ಸ್ ಲಿಮಿಟೆಡ್ (NFL), ಟಾಟಾ ಕೆಮಿಕಲ್ಸ್, ರಾಷ್ಟ್ರೀಯ ಕೆಮಿಕಲ್ಸ್ ಫರ್ಟಿಲೈಸರ್ಸ್ (RCF), ಮುಂತಾದವು) ಅಭಿವೃದ್ಧಿಪಡಿಸಿರುವ ನ್ಯಾನೋ ಗೊಬ್ಬರಗಳು ಕೃಷಿಯಲ್ಲಿ ಹೊಸ ಯುಗವನ್ನು ಶುರುಮಾಡಿವೆ. ಭಾರತವು ಜಗತ್ತಿಗೆ ಸುಸ್ಥಿರ ಸಮಾಜದ ಮಾದರಿಯೊಂದನ್ನು ನ್ಯಾನೋ ಗೊಬ್ಬರದ ತಂತ್ರಜ್ಞಾನ ಮೂಲಕ ಒದಗಿಸುವಂತಿದೆ. ಚೀನಾ ಹಾಗೂ ಭಾರತವನ್ನು ಹೊರತುಪಡಿಸಿ ಇದರ‌ ಮೇಲೆ ಹೆಚ್ಚು ಸಂಶೋಧನೆಯು ಮತ್ತೆಲ್ಲಿಯೂ ಆಗಿಲ್ಲ. ಈಗಾಗಲೇ ಭಾರತದಲ್ಲಿ ಲಕ್ಷಾಂತರ ರೈತರು ನ್ಯಾನೋ ಗೊಬ್ಬರವನ್ನು ಬಳಸುತ್ತಿದ್ದಾರೆ. ಸಾರ್ವಜನಿಕವಾಗಿ ಲಭ್ಯವಿರುವ ಮಾಹಿತಿಯ ಪ್ರಕಾರ IFFCOವು ಜಗತ್ತಿನಲ್ಲಿ ಅತಿ ಹೆಚ್ಚು ನ್ಯಾನೋ ಗೊಬ್ಬರವನ್ನು ತಯಾರಿಸುವ ಸಂಸ್ಥೆಯಾಗಿದ್ದು, ವರ್ಷಕ್ಕೆ 3.6 ಕೋಟಿ ನ್ಯಾನೋ ಗೊಬ್ಬರದ ಬಾಟಲಿಗಳನ್ನು ಉತ್ಪಾದಿಸಿದೆ. ‘ದಿ ಎನರ್ಜಿ ಆ್ಯಂಡ್ ರಿಸರ್ಚ್ ಇನ್ಸ್ಟಿಟ್ಯೂಟ್’(ಟೆರಿ)ಯ ವರದಿಯ ಪ್ರಕಾರ ಭಾರತದಲ್ಲಿ ರಾಸಾಯನಿಕ ಗೊಬ್ಬರದ ಬಳಕೆಯು ಮುಂದಿನ ದಿನಗಳಲ್ಲಿ ಸುಮಾರು ಶೇ 50ರಷ್ಟು ಕಡಿಮೆ ಆಗಲಿದೆಯಂತೆ. ಇದು ನಮ್ಮ ನೆಲ, ಜಲ ಹಾಗೂ ಜನರ ಸ್ವಾಸ್ಥ್ಯಕ್ಕೆ ಒಳ್ಳೆಯದಾಗಲಿದೆ. ಕಾಲಕ್ರಮೇಣ ಬಳಕೆ ಹಾಗೂ ಇದರ ಕುರಿತಾದ ಸಂಶೋಧನೆಗಳು ಹೆಚ್ಚಿದಂತೆ ನ್ಯಾನೋ ಗೊಬ್ಬರದ ಬಳಕೆಯ ಬಗೆಗೆ ಇರುವ ಸಂಶಯಗಳೂ ಕಡಿಮೆಯಾಗಲಿವೆ.

Mysore Silk (Saree) Production?

ಗಾಂಧೀಜಿ ಆತ್ಮಕಥನಕ್ಕೆ 100 ವರ್ಷ

‘ಸತ್ಯದೊಂದಿಗೆ ನನ್ನ ಪ್ರಯೋಗಗಳು’ ಎಂಬ ಹೆಸರಿನ ಗಾಂಧೀಜಿಯವರ ಆತ್ಮಕಥನವು ಪ್ರಕಟಗೊಂಡು 2025ಕ್ಕೆ ನೂರು ವರ್ಷಗಳಾಗಿವೆ. ಈ ಆತ್ಮಕಥನವನ್ನು ಮಹಾದೇವ ದೇಸಾಯಿಯವರು ಗುಜರಾತಿನಿಂದ ಆಂಗ್ಲ ಭಾಷೆಗೆ ಅನುವಾದಿಸಿದರು. ಈ ಆಂಗ್ಲ ಅನುವಾದವನ್ನು ಕನ್ನಡಕ್ಕೆ ತಂದ ಪ್ರಸಿದ್ಧ ಸಾಹಿತಿ, ಗಾಂಧೀವಾದಿ ಗೊರೂರು ರಾಮಸ್ವಾಮಿ ಅಯ್ಯಂಗಾರ್ ಅವರ ಜನ್ಮ ಶತಮಾನದ ವರ್ಷದಲ್ಲೇ ಗಾಂಧಿ ಆತ್ಮಕಥನಕ್ಕೂ ‘ಜನ್ಮ’ ಶತಮಾನದ ವರ್ಷವಾಗಿರುವುದು ಒಂದು ವಿಶೇಷ. ಗೊರೂರರ ಅನುವಾದವು ಗಾಂಧೀಜಿಯವರ ‘ಅಂತರಂಗದ ಮಾತುಗಳಿಗೆ’ ಕನ್ನಡಿಯಾದದ್ದು ಕನ್ನಡ ಓದುಗರಿಗೆ ಹೆಮ್ಮೆಯ ಕೊಡುಗೆಯಾಗಿದೆ.

ಗಾಂಧೀಜಿಯವರ ಆತ್ಮಕಥನವನ್ನು ‘ಅಂತರಂಗದ ಮಾತುಗಳು’ ಎಂದು ನಾನು ಕರೆಯಲು ಕಾರಣವಿದೆ. ಗಾಂಧೀಜಿಯವರು ತಮ್ಮ ಆತ್ಮಕಥನ ಕುರಿತಂತೆ ಹೇಳಿರುವ ಮಾತುಗಳನ್ನು ಗಮನಿಸಿ: ‘ನಾನು ಆಳವಾದ ಅಂತರಂಗ ವೀಕ್ಷಣೆಗೆ ಒಳಗಾಗಿದ್ದೇನೆ. ನನ್ನನ್ನು ನಾನೇ ಆಮೂಲಾಗ್ರವಾಗಿ ಶೋಧಿಸಿಕೊಂಡಿದ್ದೇನೆ ಮತ್ತು ಮಾನಸಿಕ ಸಂದರ್ಭಗಳನ್ನು ಪರೀಕ್ಷಿಸಿ, ವಿಶ್ಲೇಷಿಸಿಕೊಂಡಿದ್ದೇನೆ. ಆದರೂ, ನನ್ನ ನಿರ್ಧಾರಗಳನ್ನು ಅವೇ ಅಂತಿಮ ಅಥವಾ ದೋಷಾತೀತವೆಂದು ಹೇಳುವುದರಿಂದ ಬಹಳ ದೂರವೇ ಉಳಿದಿದ್ದೇನೆ’. ಗಾಂಧೀಜಿಯವರ ಈ ಮಾತುಗಳು ಅವರ ಸತ್ಯನಿಷ್ಠೆ, ಪ್ರಾಮಾಣಿಕತೆಗೆ ಸಾಕ್ಷಿಯಾಗಿರುವುದಲ್ಲದೆ, ಆತ್ಮಕಥನವನ್ನು ಆತ್ಮಾವಲೋಕನ ಕಥನವೆಂದು ಭಾವಿಸಿರುವುದನ್ನು ಸ್ಪಷ್ಟಪಡಿಸುತ್ತವೆ. ನಿಜ; ಯಾರದೇ ಆತ್ಮಕಥನವು ಆತ್ಮಾವಲೋಕನದ ಆಯಾಮವನ್ನು ಪಡೆಯದೆ ಇದ್ದರೆ ಆತ್ಮರತಿಯಾಗುವ ಅಪಾಯ ಇದ್ದೇ ಇರುತ್ತದೆ. ಆತ್ಮರತಿಗೆ ಅಹಂಕಾರದ ಸ್ಪರ್ಶವೂ ಅಗೋಚರವಾಗಿ ಕೆಲಸ ಮಾಡುತ್ತದೆ. ಆತ್ಮಕಥನಗಳು ಆಂತರಂಗಿಕ ಶೋಧವೂ, ಪರೀಕ್ಷೆಗೊಡ್ಡಿಕೊಂಡ ಪರಿಶೀಲನೆಯೂ ಆದಾಗ ಸತ್ಯಕಥನಗಳಾಗುತ್ತವೆ. ಹಾಗೆಂದು ಆತ್ಮಕಥನಕಾರರು ತಮ್ಮ ಬದುಕಿನ ಸಮಸ್ತಸತ್ಯಗಳನ್ನು ದಾಖಲಿಸಿರುತ್ತಾರೆಂದು ಭಾವಿಸಲಾಗದು. ಅನುಭವಗಳ ಆಯ್ಕೆಯೂ ಆತ್ಮಕಥನಗಳ ಅಂಗವಾಗಿರುತ್ತದೆ. ಈ ಇತಿಮಿತಿಗಳ ನಡುವೆ ವಾಸ್ತವಿಕತೆ ಮತ್ತು ಪ್ರಾಮಾಣಿಕತೆಯುಳ್ಳ ಆತ್ಮಕಥನಗಳು ಮೌಲ್ಯಯುತವಾಗುತ್ತವೆ. ಗಾಂಧೀಜಿ ಆತ್ಮಕಥನಕ್ಕೆ ಇಂತಹ ಮೌಲ್ಯ ತಾನಾಗಿಯೇ ಲಭ್ಯವಾಗಿದೆ. ಯಾಕೆಂದರೆ, ಅವರು ತಮ್ಮ ಅನುಭವಗಳನ್ನು ತಮಗೆ ತಾವೇ ಹೇಳಿಕೊಂಡಂತೆ ಬರೆಯುತ್ತಾರೆ. ಓದುಗರಿಗೆ ಬೋಧೆ ಮಾಡುತ್ತೇನೆ ಎಂಬ ಹಮ್ಮುಬಿಮ್ಮುಗಳಿಲ್ಲದೆ ನಿವೇದಿಸುತ್ತಾರೆ. ಇನ್ನೊಂದು ಗಮನಾರ್ಹ ಅಂಶವೆಂದರೆ– ಗಾಂಧಿ ಆತ್ಮಕಥನದ ಅವಧಿ 56 ವರ್ಷಗಳು ಮಾತ್ರ. ಗಾಂಧೀಜಿ ಹುಟ್ಟಿದ್ದು 1869ರ ಅಕ್ಟೋಬರ್ 2ರಂದು. ಆತ್ಮಕಥನ ಹೊರಬಂದದ್ದು 1925ರ ನವೆಂಬರ್ ತಿಂಗಳಲ್ಲಿ. ಆನಂತರ 23 ವರ್ಷಗಳ ಕಾಲ ಗಾಂಧೀಜಿ ಬದುಕಿದ್ದರು. ಈ 23 ವರ್ಷ ಗಾಂಧೀಜಿ ಬದುಕಿನ ಅತ್ಯಮೂಲ್ಯ ಆಕರಗಳೆಂದರೆ ತಪ್ಪಾಗಲಾರದು. ಯಾಕೆಂದರೆ, ಗಾಂಧೀಜಿಯವರು ಜಾತಿ, ವರ್ಣವೇ ಮುಂತಾದ ಸಾಮಾಜಿಕ ಸಂರಚನೆಗಳನ್ನು ಕುರಿತು ಮೊದಲು ಪ್ರತಿಪಾದಿಸಿದ್ದ ಸಾಂಪ್ರದಾಯಿಕ ಜಡ ಚಿಂತನೆಗಳಿಗೆ, ಚಲನಶೀಲ ಪ್ರಗತಿಪರ ಆಯಾಮ ದೊರಕಿದ್ದು, ಇದೇ ಅವಧಿಯಲ್ಲಿ.

ಗಾಂಧೀಜಿಯವರು 1919ರಲ್ಲಿ ಅಂತರ್ಜಾತಿ ವಿವಾಹ ಮತ್ತು ಅಂತರ್ಜಾತಿ ಭೋಜನ ವ್ಯವಸ್ಥೆಯನ್ನು ಒಪ್ಪಿರಲಿಲ್ಲ. ಈ ಭಾವನೆಯು 1936ರಲ್ಲಿ ಖಚಿತತೆ ಮತ್ತು ಸ್ಪಷ್ಟತೆಯೊಂದಿಗೆ ಪ್ರಕಟಗೊಂಡಿತು. ಒಬ್ಬ ಪತ್ರಿಕಾ ವರದಿಗಾರನಿಗೆ ಕೊಟ್ಟ ಸಂದರ್ಶನದಲ್ಲಿ ಗಾಂಧೀಜಿ ಹೀಗೆ ಹೇಳಿದ್ದಾರೆ: ‘ತನ್ನ ಎಲ್ಲಾ ಭಯಾನಕತೆಗಳಿಂದ ನಮಗೆ ಇವತ್ತು ಕಾಣಿಸುತ್ತಿರುವ ಜಾತಿಯನ್ನು ಶಾಸ್ತ್ರಗಳು ಪುರಸ್ಕರಿಸುವುದಾದರೆ, ನಾನು ನನ್ನನ್ನು ಹಿಂದೂವೆಂದು ಕರೆದುಕೊಂಡು ಅದರಲ್ಲಿ ಉಳಿದುಕೊಳ್ಳಲಾರೆ. ಕಾರಣ, ಅಂತರ್ಜಾತಿ ಭೋಜನ ಅಥವಾ ಅಂತರ್ಜಾತಿ ವಿವಾಹಗಳ ಬಗ್ಗೆ ನನಗೆ ಯಾವುದೇ ವಿರೋಧವಿಲ್ಲ. ಅಂಬೇಡ್ಕರ್ ಅವರು ಮೊದಲಿಂದಲೂ ಅಂತರ್ಜಾತಿ ವಿವಾಹದ ಪ್ರತಿಪಾದಕರಾಗಿದ್ದರು ಎಂಬ ಅಂಶವನ್ನು ಇಲ್ಲಿ ಗಮನಿಸಬೇಕು. ಗಾಂಧೀಜಿಯವರು ಅಂಬೇಡ್ಕರ್ ಅವರ ಬಗ್ಗೆ ಅಪಾರ ಆದರವುಳ್ಳವರಾಗಿದ್ದರು ಎನ್ನುವುದಕ್ಕೆ ಒಂದು ನಿದರ್ಶನವನ್ನು ನೀಡಬಹುದು. ಜಗತ್ತಿನಲ್ಲೇ ಮೊದಲ ಅಧಿಕೃತ ನಾಸ್ತಿಕ ಕೇಂದ್ರವನ್ನು ಆಂಧ್ರದಲ್ಲಿ ಸ್ಥಾಪಿಸಿದ್ದ ಗೋರಾ ಅವರ ಅಳಿಯ ಗಾಂಧೀಜಿಯವರ ಶಿಷ್ಯತ್ವವನ್ನು ಬಯಸಿದಾಗ, ‘ನೀನು ಅಂಬೇಡ್ಕರ್ ಅವರಂತೆ ಆಗಬೇಕು. ಅಸ್ಪೃಶ್ಯತೆ ಮತ್ತು ಜಾತಿ ನಿರ್ಮೂಲನಕ್ಕಾಗಿ ಕೆಲಸ ಮಾಡಬೇಕು. ಯಾವ ಬೆಲೆಯನ್ನು ತೆತ್ತಾದರೂ ಸರಿಯೇ, ಅಸ್ಪೃಶ್ಯತೆಯು ಹೋಗಲೇಬೇಕು’ (1946) ಎಂದು ಗಾಂಧೀಜಿ ಬರೆದು ತಿಳಿಸಿದರು. 1946ರಲ್ಲಿ ಗಾಂಧೀಜಿ ‘ವರ್ಗರಹಿತ, ಜಾತಿರಹಿತ ಇಂಡಿಯಾ ನಿರ್ಮಾಣದ ಅಗತ್ಯ’ವನ್ನು ಅಮೆರಿಕದ ಸಂದರ್ಶಕರೊಂದಿಗೆ ಹಂಚಿಕೊಂಡಿದ್ದರು. ಜಾತಿಯು ಬೇರುಸಹಿತ ಹೋಗಬೇಕು ಎಂದು ಆಶಿಸಿದ್ದರು. ‘ನನ್ನ ಮನಸ್ಸು ಸತತವಾಗಿ ಬೆಳೆಯುತ್ತಿದೆ’ ಎಂದೂ ಹೇಳಿದ್ದರು. ಆದರೆ ಇವರ ಬೆಳವಣಿಗೆ ಮತ್ತು ಬದಲಾವಣೆಯನ್ನು ಗಮನಿಸದ, ಗುರುತಿಸದ, ಟೀಕಾಕಾರರಿಗೆ ಆಹಾರವೂ ಆದರು.

1925ರವರೆಗಿನ ಗಾಂಧೀಜಿಯವರ ಆತ್ಮಕಥನ ಕೂಡ ಅವರ ಬೆಳವಣಿಗೆ ಮತ್ತು ಬದಲಾವಣೆಯ ಚರಿತೆಯಾಗಿದೆ. ತಾಯಿ, ತಂದೆಯವರ ಬಗ್ಗೆ ಅಪಾರ ಭಕ್ತಿ ಹೊಂದಿದ್ದ ಗಾಂಧೀಜಿ ತಮ್ಮ ದೌರ್ಬಲ್ಯಗಳನ್ನು ತೆರೆದಿಡುತ್ತಲೇ ಆನಂತರ ಆದ ಬದಲಾವಣೆಗಳನ್ನು ಉಲ್ಲೇಖಿಸುತ್ತಾರೆ. ತಮ್ಮ ಪ್ರತಿಯೊಂದು ಪ್ರಮುಖ ಪ್ರಸಂಗವನ್ನು ‘ಪ್ರಯೋಗ’ ಎಂದೇ ಕರೆಯುತ್ತಾರೆ. ಈ ಪ್ರಯೋಗಗಳ ಆಂತರ್ಯದಲ್ಲಿ ಆಧ್ಯಾತ್ಮಿಕ, ಧಾರ್ಮಿಕ ಭಾವನೆಯಿದೆಯೆಂದು ಸ್ಪಷ್ಟಪಡಿಸುತ್ತಾರೆ: ‘ನಾನು ಕಟ್ಟಿಕೊಡುತ್ತಿರುವ ಕಥನಗಳು, ಆಧ್ಯಾತ್ಮಿಕವಾದವು ಅಥವಾ ಖಚಿತವಾಗಿ ನೈತಿಕವಾದವು. ಧರ್ಮದ ಮೂಲಸಾರವೇ ನೈತಿಕತೆ’ ಎಂದು ಹೇಳಿದ್ದಾರೆ.

ಗಾಂಧೀಜಿಯವರಿಗೆ ಧರ್ಮವೆನ್ನುವುದು ನೈತಿಕವೇ ಹೊರತು ಸಾಂಸ್ಥಿಕ ಸ್ವರೂಪದ ನಿಯಂತ್ರಕವಲ್ಲ. ಆದ್ದರಿಂದಲೇ ಅವರು ಹಿಂದೂ ಧರ್ಮವನ್ನು ನಂಬಿ ನಡೆಯುತ್ತಲೇ ಅದರ ಒಳವಿಮರ್ಶಕರಾಗಿದ್ದರು. ದ್ವೇಷವಿಲ್ಲದ ಧಾರ್ಮಿಕ ಸಾಮರಸ್ಯದ ನೈತಿಕ ಪ್ರತಿಪಾದಕರಾಗಿದ್ದರು. ನೈತಿಕತೆಯ ಮೂಲತತ್ತ್ವಗಳಿಗೆ ವಿರುದ್ಧವಾದ ಎಲ್ಲವನ್ನೂ ನಿರಾಕರಿಸುತ್ತೇನೆ ಎಂದು ಬರೆದರು. ವೇದ, ಉಪನಿಷತ್ತು ಮುಂತಾದವುಗಳಲ್ಲಿ ನಂಬಿಕೆಯಿದ್ದರೂ ‘ಮಂತ್ರ ಪಠಣದಿಂದ ಧರ್ಮ ನಿರ್ಧಾರ ಆಗುವುದಿಲ್ಲ’ ಎಂದರು. ಯಾಕೆಂದರೆ, ನೈತಿಕತೆ ಮತ್ತು ಪ್ರಾಮಾಣಿಕತೆಗಳೇ ಅವರ ಬದುಕಿನ ಸತ್ಯಶೋಧದ ಸಾಧನವಾಗಿದ್ದವು.

ಗಾಂಧೀಜಿಯವರು ಸ್ನೇಹಿತರ ಜೊತೆಗೆ ಸಿಗರೇಟು ಸೇದಿದ್ದು, ಸಿಗರೇಟು ಖರೀದಿಸಲು ಹಣ ಕದ್ದಿದ್ದು, ಮೇಕೆಮಾಂಸ ತಿಂದಿದ್ದು, ಮುಂತಾದ ಪ್ರಸಂಗಗಳನ್ನು ಆತ್ಮಾವಲೋಕನದ ಮಾದರಿಯಲ್ಲಿ ಕಟ್ಟಿಕೊಡುತ್ತಾರೆ. ತಾಯಿ, ತಂದೆ ಹಾಗೂ ಹಿರಿಯರ ಬಗ್ಗೆ ಇದ್ದ ಗೌರವ ಮತ್ತು ಅವರ ಕಟ್ಟುಪಾಡುಗಳು ತಮ್ಮ ‘ಹವ್ಯಾಸಗಳಿಗೆ’ ಅಡ್ಡಿಯಾಗಿ ‘ಸ್ವಾತಂತ್ರ್ಯ’ವನ್ನು ಕಸಿಯುತ್ತಿವೆಯೆಂಬ ಅನುಭವದಿಂದ ಬಾಲಕ ಗಾಂಧೀಜಿ, ತಳಮಳಕ್ಕೆ ಒಳಗಾಗುತ್ತಾರೆ. ತೃಪ್ತಿಯೇ ಇಲ್ಲದ ಮಾನಸಿಕ ತಳಮಳಗಳನ್ನು ತಾಳಿಕೊಳ್ಳಲಾರದೆ ಸ್ನೇಹಿತರೊಂದಿಗೆ ಸೇರಿ ಆತ್ಮಹತ್ಯೆ ಮಾಡಿಕೊಳ್ಳುವ ನಿರ್ಧಾರಕ್ಕೂ ಬರುತ್ತಾರೆ. ದತ್ತೂರಿ ಗಿಡದ ಬೀಜಗಳನ್ನು ತಿಂದರೆ ಸಾವು ಸಂಭವಿಸುತ್ತದೆಯೆಂದು ತಿಳಿದಿದ್ದ ಇವರು ಆ ಗಿಡಕ್ಕಾಗಿ ಹುಡುಕಿ, ಪತ್ತೆ ಮಾಡಿ, ಒಂದೆರಡು ಬೀಜ ತಿಂದು, ತಕ್ಷಣವೇ ಆತ್ಮಹತ್ಯೆಯ ನಿರ್ಧಾರದಿಂದ ಹಿಂದೆ ಸರಿಯುತ್ತಾರೆ. ‘ಆತ್ಮಹತ್ಯೆ ಮಾಡಿಕೊಳ್ಳಬೇಕೆಂಬ ಆಲೋಚನೆಯಷ್ಟು ಅದನ್ನು ಸಾಧಿಸುವುದು ಸುಲಭವಲ್ಲ ಎಂದು ನಾನು ಮನಗಂಡೆ’ ಎಂದು ಬರೆಯುತ್ತಾರೆ.

ಮೇಕೆಮಾಂಸ ತಿಂದ ಪ್ರಸಂಗ ಮತ್ತು ಆನಂತರದ ಬೆಳವಣಿಗೆಗಳ ನಿರೂಪಣೆ ಆಸಕ್ತಿದಾಯಕವಾಗಿದೆ. ಮಾಂಸ ಸೇವನೆಯು, ಶಕ್ತಿವಂತ ಹಾಗೂ ಧೈರ್ಯವಂತನನ್ನಾಗಿ ಮಾಡುತ್ತದೆ. ಇಂಗ್ಲಿಷರನ್ನು ಮಣಿಸಲು ಇದು ಸಹಾಯಕವಾಗುತ್ತದೆ ಎಂದು ಬಾಲಕ ಗಾಂಧಿ ಭಾವಿಸುತ್ತಾರೆ. ಬ್ರಿಟಿಷರನ್ನು ಮಣಿಸಲು ಮಾಂಸ ತಿನ್ನಬೇಕೆಂಬ ಬಯಕೆ ವಿಚಿತ್ರ ಎನ್ನಿಸಿದರೂ, ಬ್ರಿಟಿಷರ ವಿರುದ್ಧ ಬಾಲ್ಯದಲ್ಲೇ ಮೂಡಿದ್ದ ಅವರ ಪ್ರತಿರೋಧವನ್ನು ಇಲ್ಲಿ ಗಮನಿಸಬಹುದು. ಆನಂತರ ಧೂಮಪಾನ, ಮಾಂಸ ಸೇವನೆಗಳನ್ನು ತೊರೆದು ತಂದೆಗೆ ತಪ್ಪೊಪ್ಪಿಗೆ ಪತ್ರ ಬರೆದು ನೇರವಾಗಿ ಕೊಟ್ಟ ಸನ್ನಿವೇಶವನ್ನು ಗಾಂಧೀಜಿ ಭಾವುಕವಾಗಿ ವಿವರಿಸಿದ್ದಾರೆ. ಹಾಗೆಂದು ಗಾಂಧೀಜಿ ಮಾಂಸಾಹಾರದ ವಿರೋಧಿಯಾಗಿರಲಿಲ್ಲ. ತಾಯಿ–ತಂದೆಗೆ ನೋವಾಗುತ್ತದೆಯೆಂದು ತಾನು ಅವರು ಬದುಕಿರುವವರೆಗೆ ಮಾಂಸಾಹಾರ ಸೇವನೆ ಮಾಡುವುದಿಲ್ಲವೆಂದೂ, ಅವರು ಗತಿಸಿದ ನಂತರ ತನಗೆ ‘ಸ್ವಾತಂತ್ರ್ಯ’ ಬಂದಾಗ, ಬಹಿರಂಗವಾಗಿಯೇ ತಿನ್ನುವುದಾಗಿಯೂ ಬರೆದುಕೊಂಡಿದ್ದಾರೆ.

ಗಾಂಧಿ ಆತ್ಮಕಥನದ ಒಂದು ಮುಖ್ಯ ಘಟನೆ ಯೆಂದರೆ – ಅವರನ್ನು ಜಾತಿಭ್ರಷ್ಟರನ್ನಾಗಿ ಮಾಡಿದ್ದು. ವಿದ್ಯಾಭ್ಯಾಸಕ್ಕಾಗಿ ಲಂಡನ್‌ಗೆ ಹೊರಟಾಗ ಜಾತಿ ಮುಖಂಡರು ‘ಸಮುದ್ರಯಾನವು ತಮ್ಮ ಜಾತಿಯಲ್ಲಿ ನಿಷಿದ್ಧ’ವೆಂದು ವಿರೋಧಿಸುತ್ತಾರೆ. ಸಮುದ್ರಯಾನ ಮಾಡಿದರೆ ಬಂಧುಬಳಗದವರು ಗಾಂಧಿ ಜೊತೆಗೆ ಒಡನಾಡುವ ಹಾಗಿಲ್ಲ, ನೀರನ್ನು ಕೂಡ ಕೊಡುವಂತಿಲ್ಲ. ಆದರೆ ಗಾಂಧೀಜಿ ಬಗ್ಗಲಿಲ್ಲ. ‘ಜಾತಿ ಭ್ರಷ್ಟನನ್ನಾಗಿಸಿ; ನಾನು ಹೆದರುವುದಿಲ್ಲ’ ಎಂದರು. ಜಾತಿಯಿಂದ ಹೊರಹಾಕಲ್ಪಟ್ಟರು; ಜಾತಿಯಿಲ್ಲದವರಾದರು. ಇಂತಹ ಅನೇಕ ಪ್ರಸಂಗಗಳು ಗಾಂಧಿ ಆತ್ಮಕಥನದಲ್ಲಿ ಹಾಸುಹೊಕ್ಕಾಗಿವೆ. ವೈರುಧ್ಯಗಳೂ ಇವೆ. ಬ್ರಹ್ಮಚರ್ಯದ ಪ್ರಯೋಗ, ಅಸ್ಪೃಶ್ಯ ಮೂಲದ ಕ್ರಿಶ್ಚಿಯನ್ ಉದ್ಯೋಗಿಯ ಕಕ್ಕಸ್ಸಿನ ಕೊಡವನ್ನು ಶುದ್ಧ ಮಾಡದೆ ಇದ್ದ ಕಸ್ತೂರ್ ಬಾ ಅವರ ಬಗ್ಗೆ ನಡೆದುಕೊಂಡ ಗಂಡಾಳಿಕೆಯ ದರ್ಪ, ಆನಂತರದ ಪಶ್ಚಾತ್ತಾಪ– ಇಂತಹ ಅನೇಕ ಆತ್ಮಾವಲೋಕನ ಮತ್ತು ಮಂಥನಗಳಿಂದ ಗಾಂಧಿ ಆತ್ಮಕಥನವು ವೈರುಧ್ಯ ಗಳನ್ನು ಮೀರಿದ ಮಾಹಿತಿ ಕೇಂದ್ರವೂ ಆಗಿದೆ.

ಗಾಂಧೀಜಿಯವರು ರೈಲಿನ ಮೂರನೇ ದರ್ಜೆ ಬೋಗಿಯಲ್ಲಿ ಪ್ರಯಾಣಿಸಿ ಭಾರತವನ್ನು ‘ಕಂಡುಕೊಂಡದ್ದು’ ಅವರ ಬದುಕಿನ ಒಂದು ಮುಖ್ಯಘಟ್ಟ; ತನ್ನ ‘ವರ್ಗ’ವು ಅನುಭವಿಸುತ್ತಿರುವ ವಿಶೇಷ ಸವಲತ್ತುಗಳ ಬಗ್ಗೆ ಆಗ ಮೂಡಿದ್ದು ಪಾಪಪ್ರಜ್ಞೆ. ಸೂಟುಧಾರಿಯಾಗಿದ್ದ ಗಾಂಧೀಜಿ ಅರೆಬೆತ್ತಲೆ ಉಡುಪಿಗೆ ಅಪವರ್ಗೀಕರಣಗೊಂಡದ್ದು ಮತ್ತು ಅರೆಬೆತ್ತಲೆ ಉಡುಪಿನ ವಲಯದಿಂದ ಬಂದ ಅಂಬೇಡ್ಕರ್ ಸೂಟುಧಾರಿಯಾದದ್ದು ಕೇವಲ ಉಡುಪಿನ ಬದಲಾವಣೆಯಲ್ಲ. ಗಾಂಧೀಜಿಯವರ ಪಾಪಪ್ರಜ್ಞೆಯ ಕೆಳಮುಖ ಚಲನೆ ಮತ್ತು ಅಂಬೇಡ್ಕರ್ ಅವರ ಜಾಗೃತ ಪ್ರಜ್ಞೆಯ ಮೇಲ್ಮುಖ ಚಲನೆಗೆ ಉಡುಪಿನ ಬದಲಾವಣೆ ಸಕಾರಾತ್ಮಕ ಚಾರಿತ್ರಿಕ ಸಂಕೇತ. ಎರಡೂ ಹೋರಾಟದ ಮಾದರಿಗಳು.

ಕೊನೆಗೊಂದು ಮಾತು: ಗಾಂಧೀಜಿ ಮತ್ತು ಅಂಬೇಡ್ಕರ್ ಅವರ ಬಾಳ ಕಥನವಿಲ್ಲದೆ ಭಾರತ ಕಥನ ಪೂರ್ಣವಾಗುವುದಿಲ್ಲ.

Tax on Movies by Trump?

ಪ್ರಚಲಿತ ವಿದ್ಯಮಾನಗಳು: 30ನೇ ಸೆಪ್ಟೆಂಬರ್ 2025

  • ಪಾರದರ್ಶಕತೆಗಾಗಿ ಏಕೀಕೃತ ಭೂಸ್ವಾಧೀನ ವ್ಯವಸ್ಥೆ ಜಾರಿ

ಸಂದರ್ಭ: ಭೂಸ್ವಾಧೀನ ಪ್ರಕ್ರಿಯೆ ಯಲ್ಲಿ ಪಾರದರ್ಶಕತೆ, ದಕ್ಷತೆ ಮತ್ತು ನ್ಯಾಯ ಒದಗಿಸುವುದ ಕ್ಕಾಗಿ ‘ಏಕೀಕೃತ ಭೂಸ್ವಾಧೀನ ವ್ಯವಸ್ಥೆ’ಗೆ (ಯುಎಲ್‌ಎಂಎಸ್‌) ಕಂದಾಯ ಸಚಿವ ಕೃಷ್ಣಬೈರೇಗೌಡ ಅವರು ಸೋಮವಾರ ಚಾಲನೆ ನೀಡಿದರು.

  • ಕಂದಾಯ ಇಲಾಖೆಯ ಭೂಮಿ ತಂತ್ರಾಂಶ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಇಲಾಖೆಯ ಇ–ಸ್ವತ್ತು, ನಗರಾಭಿವೃದ್ಧಿ ಇಲಾಖೆಯ ಇ–ಆಸ್ತಿ ತಂತ್ರಾಂಶ, ಯುಎಲ್‌ಎಂಎಸ್‌ ಇ–ಖಾತಾ, ನೋಂದಣಿ ಮತ್ತು ಮುದ್ರಾಂಕ ಇಲಾಖೆಯ ಕಾವೇರಿ 2.0 ತಂತ್ರಾಂಶ ಮತ್ತು ಕೆಜಿಐಎಸ್‌ನಂತಹ ಎಲ್ಲಾ ತಂತ್ರಾಂಶ ಗಳನ್ನು ಒಳಗೊಂಡ ವ್ಯವಸ್ಥೆಯಾಗಿದೆ.
  • ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಸಚಿವ ಕೃಷ್ಣಬೈರೇಗೌಡ, ‘ಈ ವ್ಯವಸ್ಥೆಯು ನೈಜ ದತ್ತಾಂಶವನ್ನು ಒದಗಿಸುತ್ತದೆ. ಅಲ್ಲದೇ, ಆರ್ಥಿಕ ಇಲಾಖೆಯ ಖಜಾನೆ–2 ತಂತ್ರಾಂಶ ದೊಂದಿಗೆ ಜೋಡಣೆ ಮಾಡಲಾಗಿದೆ. ಸಮಗ್ರ ಭೂಸ್ವಾಧೀನ ವ್ಯವಸ್ಥೆಯು ರಾಜ್ಯದಾದ್ಯಂತ ಭೂಸ್ವಾಧೀನ ಪ್ರಕ್ರಿಯೆ ಯನ್ನು ಸಮನ್ವಯಗೊಳಿಸುತ್ತದೆ. ಅಲ್ಲದೇ, ಈಗ ಕೈಗೊಳ್ಳಲಾಗುತ್ತಿರುವ ಭೂಸ್ವಾಧೀನ ಪ್ರಕ್ರಿಯೆ ಮತ್ತು ಹಿಂದೆ ನಡೆಸಿದ ಭೂಸ್ವಾಧೀನ ಪ್ರಕರಣ ಗಳಲ್ಲಿನ ಮೊಕದ್ದಮೆಗಳನ್ನು ಗುರುತಿಸುವ ಸಮಗ್ರ ಡಿಜಿಟಲ್‌ ವೇದಿಕೆಯೂ ಇದಾಗಿದೆ’ ಎಂದರು.
  • ಕಂದಾಯ, ಜಲಸಂಪನ್ಮೂಲ, ನಗರಾಭಿವೃದ್ಧಿ, ಲೋಕೋಪಯೋಗಿ, ಮೂಲಸೌಕರ್ಯ ಅಭಿವೃದ್ಧಿ ಇಲಾಖೆಗಳು, ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ, ಬೆಂಗಳೂರು ಮಹಾನಗರ ಪ್ರದೇಶಾಭಿವೃದ್ಧಿ ಪ್ರಾಧಿಕಾರ, ಕರ್ನಾಟಕ ಗೃಹ ಮಂಡಳಿ, ಕೆಶಿಪ್‌, ಕೆ–ರೈಡ್‌, ಮೆಟ್ರೊ, ಕೆಐಎಡಿಬಿ ಮತ್ತಿತರ ಸಂಸ್ಥೆಗಳು ಭೂಸ್ವಾಧೀನ ಪ್ರಕ್ರಿಯೆಯಲ್ಲಿ ತೊಡಗಿರುತ್ತವೆ. ಇವುಗಳ ಭೂಸ್ವಾಧೀನದ ಸಂಪೂರ್ಣ ಮಾಹಿತಿಯು ಈ ವ್ಯವಸ್ಥೆಯಲ್ಲಿ ಸಿಗುತ್ತದೆ.  ಭೂಸ್ವಾಧೀನದ ಎಲ್ಲಾ ಪ್ರಸ್ತಾವಗಳು, ಅದರ ಸ್ಥಿತಿಗತಿಯ ಬಗ್ಗೆ ನೈಜ ಸಮಯದ ಮಾಹಿತಿಯನ್ನು ಪಾಲುದಾರರು ಮತ್ತು ತೀರ್ಮಾನ ತೆಗೆದುಕೊಳ್ಳುವ ಸಂಸ್ಥೆಗಳಿಗೆ ಕ್ರೋಡೀಕೃತ ಡ್ಯಾಶ್ ಬೋರ್ಡ್‌ ಮೂಲಕ ಒದಗಿಸಲಾಗುತ್ತದೆ ಎಂದು ಅವರು ವಿವರಿಸಿದರು.
  • ಭೂಸ್ವಾಧೀನ ಪ್ರಕರಣ ಗಳಿಗೆ ಸಂಬಂಧಿಸಿದಂತೆ ಐ–ತೀರ್ಪು ರಚನೆ, ಪರಿಹಾರ ವಿತರಣೆ ಮತ್ತು ಪುನರ್ವಸತಿ ವರೆಗಿನ ಸಂಪೂರ್ಣ ಪ್ರಕ್ರಿಯೆ ನಿರ್ವಹಿಸಲು ಈ ವ್ಯವಸ್ಥೆ ಏಕ ಮಾತ್ರ ಡಿಜಿಟಲ್ ವೇದಿಕೆಯಾಗಿ ಕಾರ್ಯ ನಿರ್ವಹಿಸುತ್ತದೆ ಎಂದು ಕೃಷ್ಣಬೈರೇಗೌಡ ಹೇಳಿದರು.
  • ರಾಜ್ಯದ ಎಲ್ಲ ಜಿಲ್ಲೆಗಳು ಮತ್ತು ಅಗತ್ಯವಿರುವ ಭೂಸ್ವಾಧೀನ ಸಂಸ್ಥೆಗಳು ಹಂತ ಹಂತವಾಗಿ ಈ ತಂತ್ರಾಂಶವನ್ನು ಅಳವಡಿಸಿಕೊಳ್ಳುತ್ತವೆ. ಈ ತಂತ್ರಾಂಶವು ರಾಜ್ಯದಲ್ಲಿ ಭೂಸ್ವಾಧೀನ ಪ್ರಕ್ರಿಯೆಯ ಪ್ರಮಾಣೀಕೃತ ಮತ್ತು ಕಾನೂನುಬದ್ಧ ಅನುಸರಣಾ ವಿಧಾನವನ್ನು ಖಚಿತ ಪಡಿಸುತ್ತದೆ ಎಂದರು.
  • ಭಾರತದ ಮೊದಲ ಐಬಿಆರ್ಲಸಿಕೆ ಅಭಿವೃದ್ಧಿ

ಸಂದರ್ಭ: ಹೈದರಾಬಾದ್‌ನ ಲಸಿಕೆ ತಯಾರಿಕಾ ಕಂಪನಿ ‘ಇಂಡಿಯನ್‌ ಇಮ್ಯುನೊಲಾಜಿಕಲ್ಸ್‌ ಲಿಮಿಟೆಡ್‌’ (ಐಐಎಲ್‌) ಸೋಂಕಿತ ಜಾನುವಾರುಗಳ ಮೂಗು ಮತ್ತು ಗಂಟಲಿನ ಉರಿಯೂತ (ಐಬಿಆರ್‌) ಕಾಯಿಲೆಗೆ ಭಾರತದ ಮೊದಲ ಲಸಿಕೆ ‘ಜೀನ್‌ ಡಿಲೀಟೆಡ್‌ ದಿವಾ’  ಅಭಿವೃದ್ಧಿಪಡಿಸಿ ರ ಬಿಡುಗಡೆ ಮಾಡಿದೆ.

  • ಈ ಲಸಿಕೆಯು ಸೋಂಕಿತ ಜಾನುವಾರುಗಳಿಂದ ಇತರ ಜಾನುವಾರುಗಳನ್ನು ರಕ್ಷಿಸುತ್ತದೆ. ಭಾರತದಲ್ಲಿ ಐಬಿಆರ್‌ ಸಾಂಕ್ರಾಮಿಕ ರೋಗವಾಗಿದ್ದು, ಗಾಳಿಯ ಮೂಲಕ ಹರಡುತ್ತದೆ ಮತ್ತು ಜಾನುವಾರುಗಳ ಸಂತಾನೋತ್ಪತ್ತಿ ಮೇಲೆ ‍ಪರಿಣಾಮ ಬೀರುತ್ತದೆ. ಜಾನುವಾರುಗಳಲ್ಲಿ ಬಂಜೆತನ, ಕಡಿಮೆ ಹಾಲು ಉತ್ಪಾದನೆ, ಗರ್ಭಪಾತಕ್ಕೂ ಕಾರಣವಾಗುತ್ತದೆ.
  • ಭಾರತದಲ್ಲಿ ಈವರೆಗೆ ಈ ಸೋಂಕಿಗೆ ಯಾವುದೇ ಲಸಿಕೆಯಾಗಲೀ, ಚಿಕಿತ್ಸೆಯಾಗಲೀ ಲಭ್ಯವಿರಲಿಲ್ಲ. ಸದ್ಯ ಈ ಲಸಿಕೆಯ ಅಭಿವೃದ್ಧಿಯಿಂದಾಗಿ ಲಕ್ಷಾಂತರ ರೈತರಿಗೆ ಅನುಕೂಲವಾಗಲಿದೆ.
  • ಶೂಟಿಂಗ್‌: ಓಜಸ್ವಿ, ಹಿಮಾಂಶುಗೆ ಚಿನ್ನ

ಸಂದರ್ಭ: ಉದಯೋನ್ಮುಖ ಶೂಟರ್‌ ಓಜಸ್ವಿ ಠಾಕೂರ್ ಅವರು ಐಎಸ್‌ಎಸ್‌ಎಫ್ ಜೂನಿಯರ್ ವಿಶ್ವಕಪ್‌ನ ಮಹಿಳೆಯರ 10 ಮೀಟರ್ ಏರ್ ರೈಫಲ್ ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆದ್ದರು. ಈ ಸ್ಪರ್ಧೆಯಲ್ಲಿ ಮೂರೂ ಪದಕಗಳನ್ನು ಗೆದ್ದು ಭಾರತ ಕ್ಲೀನ್‌ಸ್ವೀಪ್‌ ಮಾಡಿಕೊಂಡಿತು.

  • ಕರ್ಣಿಸಿಂಗ್ ಶೂಟಿಂಗ್‌ ರೇಂಜ್‌ನಲ್ಲಿ ನಡೆಯುತ್ತಿರುವ ಕೂಟದಲ್ಲಿ 16 ವರ್ಷದ ಓಜಸ್ವಿ 252.7 ಅಂಕಗಳೊಂದಿಗೆ ಚಾಂಪಿಯನ್ ಆಗಿ ಹೊರಹೊಮ್ಮಿದರು. 250.2 ಅಂಕ ಗಳಿಸಿದ ಹೃದಯಶ್ರೀ ಕೊಂಡೂರ್ ಬೆಳ್ಳಿ ಗೆದ್ದರೆ, ಶಾಂಭವಿ ಕ್ಷೀರಸಾಗರ್ (229.4) ಕಂಚಿನ ಪದಕ ತಮ್ಮದಾಗಿಸಿಕೊಂಡರು.
  • ಹಿಮಾಂಶುಗೆ ಚಿನ್ನ: ಪುರುಷರ 10 ಮೀ. ಏರ್‌ ರೈಫಲ್‌ ಸ್ಪರ್ಧೆಯಲ್ಲಿ ಭಾರತದ ಹಿಮಾಂಶು ಚಿನ್ನಕ್ಕೆ ಗುರಿಯಿಟ್ಟರು. 633.7 ಸ್ಕೋರ್‌ನೊಂದಿಗೆ ಅರ್ಹತಾ ಸುತ್ತಿನಲ್ಲೂ ಅಗ್ರಸ್ಥಾನ ಪಡೆದಿದ್ದ ಹಿಮಾಂಶು, ಫೈನಲ್‌ನಲ್ಲಿ (250.9) ಪಾಬಲ್ಯ ಮುಂದುವರಿಸಿದರು. ಸ್ವತಂತ್ರ ತಟಸ್ಥ ಸ್ಪರ್ಧಿ (ಎಎನ್‌ಎ) ಡಿಮಿಟ್ರಿ ಪಿಮೆನೋವ್ (249.9) ಬೆಳ್ಳಿ ಪದಕ ಗೆದ್ದರೆ, ಅಭಿನವ್ ಶಾ (228.4) ಕಂಚು ಜಯಿಸಿದರು. ನರೇನ್ ಪ್ರಣವ್ (187.0) ಐದನೇ ಸ್ಥಾನ ಪಡೆದರು.
  • ಪುರುಷರ 25 ಮೀ. ರ‍್ಯಾಪಿಡ್ ಫೈರ್ ಪಿಸ್ತೂಲ್‌ನಲ್ಲಿ ಸ್ವತಂತ್ರ ತಟಸ್ಥ ಸ್ಪರ್ಧಿ ಅಲೆಕ್ಸಾಂಡರ್ ಕೊವಾಲೆವ್ ಅವರು ಭಾರತದ ಮುಕೇಶ್ ನೆಲವಲ್ಲಿ ಅವರನ್ನು ರೋಚಕ ಶೂಟ್ಆಫ್‌ನಲ್ಲಿ ಮಣಿಸಿ ಚಿನ್ನ ಗೆದ್ದರು.
  • ಈಜು: ಶ್ರೀಹರಿಗೆ ಮತ್ತೊಂದು ಪದಕ

ಸಂದರ್ಭ: ಕರ್ನಾಟಕದ ಈಜು ತಾರೆ ಶ್ರೀಹರಿ ನಟರಾಜ್‌ ಅವರು 11ನೇ ಏಷ್ಯನ್ ಈಜು ಚಾಂಪಿಯನ್‌ಷಿಪ್‌ನಲ್ಲಿ ಮತ್ತೊಂದು ಪದಕ ಜಯಿಸಿದರು. ಅವರು, ಕರ್ನಾಟಕದವರೇ ಆದ ಅನೀಶ್‌ ಗೌಡ, ಸಜನ್‌ ಪ್ರಕಾಶ್‌ ಹಾಗೂ ಶೋನ್‌ ಗಂಗೂಲಿ ಜೊತೆಗೂಡಿ 4×200 ಮೀ. ಫ್ರೀಸ್ಟೈಲ್‌ನಲ್ಲಿ ಸೋಮವಾರ ಬೆಳ್ಳಿ ಪದಕ ಜಯಿಸಿದರು.

  • ಅಂತಿಮ ಕ್ಷಣದಲ್ಲಿ ಶ್ರೀಹರಿ ಅವರು ತೋರಿದ ಮಿಂಚಿನ ಪ್ರದರ್ಶನದಿಂದಾಗಿ ಭಾರತ ತಂಡವು 7ನಿ., 23.38 ಸೆಕೆಂಡುಗಳಲ್ಲಿ ಗುರಿ ತಲುಪಿತು. ಮಲೇಷ್ಯಾ (7:23.43) ಕಂಚಿಗೆ ತೃಪ್ತಿಪಟ್ಟಿತು.
  • ಡೈವಿಂಗ್‌ನಲ್ಲಿ ಚಾರಿತ್ರಿಕ ಕಂಚು: ಮಣಿಪುರದ ಸಾಯಿರಾಮ್ ಮತ್ತು ವಿಲ್ಸನ್‌ ಸಿಂಗ್‌ ನಿಂಗ್‌ತೌಜಮ್ ಅವರು ಪುರುಷರ 10 ಮೀಟರ್ ‘ಸಿಂಕ್ರೊನೈಸ್ ಡೈವಿಂಗ್‌’ನಲ್ಲಿ ಚಾರಿತ್ರಿಕ ಕಂಚಿನ ಪದಕ ಗೆದ್ದರು.
  • ಡೈವಿಂಗ್‌ನಲ್ಲಿ ಭಾರತದ ಸ್ಪರ್ಧಿಗಳು ಇದೇ ಮೊದಲ ಬಾರಿಗೆ ಪದಕದ ಸಾಧನೆ ಮಾಡಿದ್ದಾರೆ. ಈ ಮೂಲಕ ಮುಂದಿನ ವರ್ಷ ಜಪಾನ್‌ನಲ್ಲಿ ನಡೆಯಲಿರುವ ಏಷ್ಯನ್‌ ಕ್ರೀಡಾಕೂಟಕ್ಕೂ ಅರ್ಹತೆ ಪಡೆಯುವ ಹೊಸ್ತಿಲಲ್ಲಿದ್ದಾರೆ.
  • ಸಾಯಿರಾಮ್ ಮತ್ತು ವಿಲ್ಸನ್‌ ಅವರು 300.66 ಅಂಕಗಳೊಂದಿಗೆ ಮೂರನೇ ಸ್ಥಾನ ಪಡೆದರು. ಚೀನಾದ ಜಾಂಗ್ಯು ಕುಯಿ ಮತ್ತು ಜಾನ್‌ಹಾಂಗ್ ಕ್ಸು (381.75) ಮತ್ತು ಮಲೇಷ್ಯಾದ ಬರ್ಟ್ರಾಂಡ್ ರೋಡಿಕ್ಟ್ ಲಿಸೆಸ್ ಮತ್ತು ಎನ್ರಿಕ್ ಎಂ. ಹೆರಾಲ್ಡ್ (329.73) ಕ್ರಮವಾಗಿ ಚಿನ್ನ ಮತ್ತು ಬೆಳ್ಳಿ ಪದಕ ಗೆದ್ದರು.
  • 1,500 ಮೀಟರ್ ಫ್ರೀಸ್ಟೈಲ್‌ನಲ್ಲಿ ಕುಶಾಗ್ರ ರಾವತ್ ಹಾಗೂ 200 ಮೀ. ಬ್ಯಾಕ್‌ಸ್ಟ್ರೋಕ್‌ ಸ್ಪರ್ಧೆಯಲ್ಲಿ ರಿಷಭ್‌ ದಾಸ್‌ ಅವರು ಕಂಚು ಜಯಿಸಿದರು.
  • ಕೈಗಾರಿಕಾ ಉತ್ಪಾದನೆ ಏರಿಕೆ

ಸಂದರ್ಭ: ದೇಶದ ಕೈಗಾರಿಕಾ ಉತ್ಪಾದನೆಯು ಆಗಸ್ಟ್‌ನಲ್ಲಿ ಶೇ 4ರಷ್ಟು ಬೆಳವಣಿಗೆ ದಾಖಲಿಸಿದೆ ಎಂದು ರಾಷ್ಟ್ರೀಯ ಸಾಂಖ್ಯಿಕ ಕಚೇರಿ (ಎನ್‌ಎಸ್‌ಒ) ತಿಳಿಸಿದೆ.

  • ಗಣಿಗಾರಿಕೆ ವಲಯದ ಚಟುವಟಿಕೆ ಉತ್ತಮವಾಗಿದೆ. ಹೀಗಾಗಿ, ಕೈಗಾರಿಕಾ ಉತ್ಪಾದನೆಯು ಪ್ರಗತಿ ಕಂಡಿದೆ ಎಂದು ಅದು ತಿಳಿಸಿದೆ. ಕೈಗಾರಿಕಾ ಉತ್ಪಾದನೆಯು ಜುಲೈನಲ್ಲಿ ಶೇ 4.3ರಷ್ಟು ಬೆಳವಣಿಗೆ ಕಂಡಿತ್ತು. 2024ರ ಆಗಸ್ಟ್‌ನಲ್ಲಿ ಉತ್ಪಾದನೆಯ ಬೆಳವಣಿಗೆಯು ಹೇಳಿಕೊಳ್ಳುವಷ್ಟು ಮಟ್ಟದಲ್ಲಿ ಇರಲಿಲ್ಲ ಎಂದು ಹೇಳಿದೆ.
  • ಕಳೆದ ವರ್ಷದ ಆಗಸ್ಟ್‌ ತಿಂಗಳಿನಲ್ಲಿ ಗಣಿಗಾರಿಕೆ ವಲಯದ ಉತ್ಪಾದನೆ ಶೇ 4.3ರಷ್ಟು ಆಗಿತ್ತು. ಅದು ಈ ಬಾರಿ ಶೇ 6ರಷ್ಟಾಗಿದೆ. ತಯಾರಿಕಾ ವಲಯದ ಬೆಳವಣಿಗೆ ಶೇ 3.8 ಮತ್ತು ವಿದ್ಯುತ್‌ ವಲಯದ ಪ್ರಗತಿ ಶೇ 4.1ರಷ್ಟಾಗಿದೆ.
  • ಕಳೆದ ಆರ್ಥಿಕ ವರ್ಷದ ಏಪ್ರಿಲ್‌ನಿಂದ ಆಗಸ್ಟ್‌ವರೆಗಿನ ಅವಧಿಯಲ್ಲಿ ಐಐಪಿ ಬೆಳವಣಿಗೆ ಶೇ 4.3ರಷ್ಟಾಗಿತ್ತು. ಈ ಬಾರಿ ಅದು ಶೇ 2.8ಕ್ಕೆ ಇಳಿದಿದೆ.
  • ‘ಜುಲೈ ತಿಂಗಳಿಗೆ ಹೋಲಿಸಿದರೆ ಆಗಸ್ಟ್‌ನಲ್ಲಿ ಕೈಗಾರಿಕಾ ಉತ್ಪಾದನೆ ಇಳಿಕೆ ಕಂಡಿದೆ. ಜುಲೈನಲ್ಲಿ ತಯಾರಿಕಾ ವಲಯದ ಪ್ರಗತಿ ಶೇ 6ರಷ್ಟಿತ್ತು. ಇದು ಆಗಸ್ಟ್‌ನಲ್ಲಿ ಶೇ 3.8ಕ್ಕೆ ಇಳಿದಿದೆ. ಇದೇ ಬೆಳವಣಿಗೆ ಇಳಿಕೆಗೆ ಕಾರಣ’ ಎಂದು ಐಸಿಆರ್‌ಎ ಮುಖ್ಯ ಅರ್ಥಶಾಸ್ತ್ರಜ್ಞೆ ಅದಿತಿ ನಾಯರ್ ಹೇಳಿದ್ದಾರೆ.
  • ಕೈಗಾರಿಕಾ ಉತ್ಪಾದನಾ ಸೂಚ್ಯಂಕ (ಐಐಪಿ) ಆಧಾರದ ಮೇಲೆ ಈ ಪ್ರಗತಿಯನ್ನು ಲೆಕ್ಕ ಹಾಕಲಾಗುತ್ತದೆ.

ಪ್ರಚಲಿತ ವಿದ್ಯಮಾನಗಳು: 29ನೇ ಸೆಪ್ಟೆಂಬರ್ 2025

ಯುನೆಸ್ಕೊ ಪಟ್ಟಿಗೆಛತ್ಪೂಜೆಸೇರ್ಪಡೆಗೆ ಯತ್ನ

ಸಂದರ್ಭ: ‘ಯುನೆಸ್ಕೊ ಸಾಂಸ್ಕೃತಿಕ ಪರಂಪರೆ ಪಟ್ಟಿಗೆ ‘ಛತ್‌ ಪೂಜೆ’ಯನ್ನು ಸೇರಿಸಲು ಸರ್ಕಾರವು ಪ್ರಯತ್ನ ನಡೆಸುತ್ತಿದೆ. ಇದು ಸಾಧ್ಯವಾದರೆ, ಜಗತ್ತಿನ ಮೂಲೆ ಮೂಲೆಯಲ್ಲಿರುವ ಜನರು ಹಬ್ಬದ ವೈಭವ ಹಾಗೂ ದೈವಿಕತೆಯನ್ನು ಅನುಭವಿಸಲು ಸಾಧ್ಯವಾಗುತ್ತದೆ’.

  • ಕೋಲ್ಕತ್ತದ ದುರ್ಗಾ ಪೂಜೆಯನ್ನು ಕೂಡ ಇದೇ ಪಟ್ಟಿಗೆ ಸೇರ್ಪಡೆಗೊಳಿಸುವ ಪ್ರಯತ್ನ ನಡೆಯುತ್ತಿದೆ’.
  • ಛತ್‌ ಪವಿತ್ರ ಹಬ್ಬವನ್ನು ದೀಪಾವಳಿ ನಂತರ ಆಚರಿಸಲಾಗುತ್ತದೆ. ಈ ದೊಡ್ಡ ಹಬ್ಬವನ್ನು ಸೂರ್ಯದೇವನಿಗೆ ಸಮರ್ಪಿಸಲಾಗುತ್ತದೆ. ಸೂರ್ಯನಿಗೆ ಅರ್ಘ್ಯ ನೀಡಿ, ನಂತರ ಪೂಜಿಸಲಾಗುತ್ತದೆ. ದೇಶದ ವಿವಿಧೆಡೆ ಮಾತ್ರವಲ್ಲದೆ ಜಗತ್ತಿನಾದ್ಯಂತ ಅದರ ವೈಭವವನ್ನು ಕಾಣಬಹುದಾಗಿದೆ’.
  • ಮದ್ಯ ಮಾರಾಟ: ಕರ್ನಾಟಕ ಮೊದಲಿಗ

ಸಂದರ್ಭ: ದೇಶದಲ್ಲಿ ತಯಾರಾದ ವಿದೇಶಿ ಮದ್ಯದ (ಐಎಂಎಫ್‌ಎಲ್‌) ಮಾರಾಟದಲ್ಲಿ ದಕ್ಷಿಣದ ರಾಜ್ಯಗಳು ಹೆಚ್ಚಿನ ಪಾಲು ಹೊಂದಿವೆ. ಅದರಲ್ಲೂ ಮುಖ್ಯವಾಗಿ ಐಎಂಎಫ್‌ಎಲ್‌ ಮಾರಾಟದಲ್ಲಿ ಕರ್ನಾಟಕ ಮೊದಲ ಸ್ಥಾನದಲ್ಲಿದ್ದು, ರಾಷ್ಟ್ರಮಟ್ಟದಲ್ಲಿ ಶೇಕಡ 17ರಷ್ಟು ಪಾಲು ಹೊಂದಿದೆ.

  • ಮಾರ್ಚ್‌ 31ಕ್ಕೆ ಕೊನೆಗೊಂಡ ಆರ್ಥಿಕ ವರ್ಷದಲ್ಲಿ ದಕ್ಷಿಣದ ಆಂಧ್ರಪ್ರದೇಶ, ಕರ್ನಾಟಕ, ಕೇರಳ, ತಮಿಳುನಾಡು ಮತ್ತು ತೆಲಂಗಾಣ ರಾಜ್ಯಗಳು, ಕೇಂದ್ರಾಡಳಿತ ಪ್ರದೇಶವಾದ ಪುದುಚೇರಿ ಹೊಂದಿದ್ದ ಒಟ್ಟು ಪಾಲು ಶೇ 58ರಷ್ಟು ಆಗಿತ್ತು.
  • ದೇಶದ ಇತರ ಕಡೆಗಳಲ್ಲಿ ಆಗಿರುವ ಮಾರಾಟದ ಪ್ರಮಾಣವು ಒಟ್ಟು ಮಾರಾಟದಲ್ಲಿ ಶೇ 42ರಷ್ಟು ಇದೆ ಎಂದು ಭಾರತೀಯ ಮದ್ಯ ತಯಾರಿಕಾ ಕಂಪನಿಗಳ ಒಕ್ಕೂಟ (ಸಿಐಎಬಿಸಿ) ನೀಡಿರುವ ಅಂಕಿ–ಅಂಶಗಳು ಹೇಳುತ್ತಿವೆ.
  • 2024-25ನೇ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ ಲೋಕಸಭಾ ಚುನಾವಣೆ ಹಾಗೂ ಕೆಲವು ರಾಜ್ಯಗಳಲ್ಲಿನ ಅಬಕಾರಿ ನೀತಿಗಳ ಕಾರಣದಿಂದಾಗಿ ಹೆಚ್ಚಿನ ಪ್ರಮಾಣದಲ್ಲಿ ಮಾರಾಟ ಆಗಿರಲಿಲ್ಲ. ಇದರಿಂದಾಗಿ ಇಡೀ ವರ್ಷದ ಒಟ್ಟು ಮಾರಾಟ ಕೂಡ ಕಡಿಮೆ ಆಗಿದೆ ಎಂದು ಸಿಐಎಬಿಸಿ ಮಹಾನಿರ್ದೇಶಕ ಅನಂತ ಎಸ್. ಅಯ್ಯರ್ ಹೇಳಿದ್ದಾರೆ.
  • ‘ರಾಜ್ಯಗಳು ವಿಧಿಸುವ ಸುಂಕ ಪ್ರತಿ ವರ್ಷವೂ ಗಣನೀಯ ಪ್ರಮಾಣದಲ್ಲಿ ಹೆಚ್ಚಾಗುತ್ತಿದೆ. ಅಬಕಾರಿ ನೀತಿಗಳೂ ಬದಲಾಗುತ್ತವೆ. ಇವು ಅಲ್ಪಾವಧಿ ಹಾಗೂ ಮಧ್ಯಮಾವಧಿಯಲ್ಲಿ ಮದ್ಯ ಮಾರಾಟದ ಮೇಲೆ ಪರಿಣಾಮ ಬೀರುತ್ತವೆ’ ಎಂದು ಅಯ್ಯರ್ ಹೇಳಿದ್ದಾರೆ.
  • ವಿಸ್ಕಿ, ವೊಡ್ಕಾ, ರಮ್, ಜಿನ್ ಮತ್ತು ಬ್ರ್ಯಾಂಡಿಯನ್ನು ಐಎಂಎಫ್‌ಎಲ್‌ ಹೆಸರಿನಿಂದ ಗುರುತಿಸಲಾಗುತ್ತದೆ.
  • ಕರ್ನಾಟಕದಲ್ಲಿ 2024–25ರಲ್ಲಿ ಒಟ್ಟು 6.88 ಕೋಟಿ ಕೇಸ್ಐಎಂಎಫ್ಎಲ್ಮಾರಾಟವಾಗಿದೆ. ಕರ್ನಾಟಕದ ನಂತರದ ಸ್ಥಾನದಲ್ಲಿರುವ ತಮಿಳುನಾಡಿನಲ್ಲಿ 6.47 ಕೋಟಿ ಕೇಸ್ಗಳಷ್ಟು ಐಎಂಎಫ್ಎಲ್ಮಾರಾಟ ಆಗಿದೆ. ಉತ್ತರ ಪ್ರದೇಶದಲ್ಲಿ ಒಟ್ಟು 2.5 ಕೋಟಿ ಕೇಸ್ಗಳಷ್ಟು ಐಎಂಎಫ್ಎಲ್ಮಾರಾಟ ಆಗಿದೆ.
  • ‘ಉತ್ತರ ಪ್ರದೇಶ, ರಾಜಸ್ಥಾನ, ಪಶ್ಚಿಮ ಬಂಗಾಳ, ಒಡಿಶಾ ಮತ್ತು ಆಂಧ್ರಪ್ರದೇಶದಲ್ಲಿ ಮಾರಾಟದಲ್ಲಿ ಉತ್ತಮ ಬೆಳವಣಿಗೆ ಆಗುತ್ತಿದೆ. ದೆಹಲಿ ಕೂಡ ಪ್ರಮುಖ ಮಾರುಕಟ್ಟೆ. ಅಲ್ಲಿ ಮಾರಾಟ ಹೆಚ್ಚಳ ಕಾಣುವುದಕ್ಕೆ ಹೊಸ ಅಬಕಾರಿ ನೀತಿಗಾಗಿ ಕಾಯುತ್ತಿದ್ದೇವೆ’ ಎಂದು ಅಯ್ಯರ್ ಹೇಳಿದ್ದಾರೆ.

ಭಾರತದಲ್ಲಿ ಜನಿಸಿದ ಚೀತಾ ಪ್ರೌಢಾವಸ್ಥೆಗೆ

ಸಂದರ್ಭ: ‘ಮಧ್ಯಪ್ರದೇಶದ ಕುನೊ ರಾಷ್ಟ್ರೀಯ ಉದ್ಯಾನದಲ್ಲಿ ಜನಿಸಿದ 16 ಚೀತಾ ಮರಿಗಳ ಪೈಕಿ ಒಂದು ಮರಿಯು ಪ್ರೌಢಾವಸ್ಥೆಗೆ ತಲುಪಿದೆ. ಇದರಿಂದಾಗಿ ಚೀತಾಗಳನ್ನು ಮರುಪರಿಚಯಿಸುವ ಮೂರು ವರ್ಷಗಳ ಹಿಂದಿನ ಪ್ರಯತ್ನಕ್ಕೆ ಯಶಸ್ಸು ಸಿಗುವ ವಿಶ್ವಾಸ ಮೂಡಿದೆ.

  • 2023ರ ಮಾರ್ಚ್‌ 29ರಂದು ನಮೀಬಿಯಾದಿಂದ ತರಿಸಿದ್ದ ‘ಜ್ವಾಲಾ’ ಚೀತಾಕ್ಕೆ ಜನಿಸಿದ ‘ಮುಖಿ’ ಮರಿಯು ಪ್ರೌಢಾವಸ್ಥೆಗೆ ತಲುಪಿದೆ. ವೇಳೆಗೆ ಮರಿ ಜನಿಸಿ, 915 ದಿನಗಳು ಅಥವಾ 30 ತಿಂಗಳು ಪೂರ್ಣವಾಗಲಿದೆ. ಇದರಿಂದ ಭಾರತದಲ್ಲಿ ಚೀತಾಗಳ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಕಾಣಿಸುತ್ತಿದೆ’ ಎಂದು ‘ಪ್ರಾಜೆಕ್ಟ್‌ ಚೀತಾ’ದ ನಿರ್ದೇಶಕ ಉತ್ತಮ್‌ ಕುಮಾರ್‌ ಶರ್ಮಾ ಅವರು ತಿಳಿಸಿದ್ದಾರೆ.
  • ‘ಜ್ವಾಲಾ ಜನ್ಮ ನೀಡಿದ್ದ ನಾಲ್ಕು ಮರಿಗಳ ಪೈಕಿ ಮೂರು ಮರಿಗಳು  ವಿಪರೀತ  ತಾಪಮಾನದಿಂದಾಗಿ ಮೃತಪಟ್ಟಿದ್ದವು. ಮುಖಿ ಬದುಕುಳಿದು, ಚೆನ್ನಾಗಿ ಬೆಳೆದಿದೆ. ನಮ್ಮ ಪ್ರಯತ್ನಗಳು ಫಲವಾಗಿ ಪರಿವರ್ತನೆಯಾಗುತ್ತಿವೆ’ ಎಂದು ಆಶಾವಾದ ವ್ಯಕ್ತಪಡಿಸಿದ್ದಾರೆ.
  • ‘ಸದ್ಯ ಭಾರತದಲ್ಲಿ 27 ಚೀತಾಗಳಿದ್ದು, 16 ಭಾರತದಲ್ಲಿಯೇ ಜನಿಸಿವೆ. ಈ ಪೈಕಿ 25 ಕುನೊದಲ್ಲಿ ಇದ್ದು, ಉಳಿದ ಮೂರು ಗಾಂಧಿ ಸಾಗರ್‌ ವನ್ಯಜೀವಿ ಅಭಯಾರಣ್ಯದಲ್ಲಿವೆ’ ಎಂದು ಶರ್ಮಾ ಮಾಹಿತಿ ನೀಡಿದ್ದಾರೆ.

ಪ್ರಚಲಿತ ವಿದ್ಯಮಾನಗಳು: 28ನೇ ಸೆಪ್ಟೆಂಬರ್ 2025

ದೇಶದ ಮೊದಲ ಬುಲೆಟ್‌ ರೈಲಿಗೆ 2027ಕ್ಕೆ ಚಾಲನೆ

ಸಂದರ್ಭ: ಗುಜರಾತ್‌ನ ಸೂರತ್‌ ಮತ್ತು ಬಿಲಿಮೊರಾ ನಡುವಿನ 50 ಕಿ.ಮೀ. ಉದ್ದದ ಬುಲೆಟ್‌ ರೈಲು ಯೋಜನೆ 2027ರಲ್ಲಿ ಪೂರ್ಣಗೊಳ್ಳಲಿದ್ದು, ಈ ಮೂಲಕ ದೇಶದ ಮೊದಲ ಬುಲೆಟ್‌ ರೈಲು ಸಂಚಾರಕ್ಕೆ ಚಾಲನೆ ಸಿಗಲಿದೆ.

  • ಮುಂಬೈ ಮತ್ತು ಅಹಮದಾಬಾದ್‌ ನಡುವಿನ ಬುಲೆಟ್‌ ರೈಲು ಯೋಜನೆಯ ಮೊದಲ ಹಂತ ಇದಾಗಿದೆ.
  • ‘ಬುಲೆಟ್‌ ರೈಲು ಯೋಜನೆಯ ಕಾಮಗಾರಿಯು ಭರದಿಂದ ಸಾಗುತ್ತಿದೆ. ಠಾಣೆ–ಅಹಮದಾಬಾದ್‌ ನಡುವೆ 2028ರಲ್ಲಿ ಬುಲೆಟ್‌ ರೈಲು ಸಂಚಾರ ಆರಂಭಗೊಳ್ಳಲಿದೆ. ಮುಂಬೈ ಮತ್ತು ಅಹಮದಾಬಾದ್‌ ನಡುವೆ 2029ರಲ್ಲಿ ಬುಲೆಟ್‌ ರೈಲು ಸಂಚರಿಸಲಿದೆ. 
  • ಈ ಯೋಜನೆಯು ಪೂರ್ಣಗೊಂಡ ಬಳಿಕ ಮುಂಬೈ ಮತ್ತು ಅಹಮದಾಬಾದ್‌ ನಡುವಿನ ಪ್ರಯಾಣದ ಅವಧಿ ಕೇವಲ 2 ಗಂಟೆ 7 ನಿಮಿಷ ಇರಲಿದೆ.  
  • ಮುಂಬೈ ಮತ್ತು ಅಹಮದಾಬಾದ್‌ ನಡುವಿನ ಬುಲೆಟ್‌ ರೈಲು ಯೋಜನೆಗೆ 2017ರಲ್ಲಿ ಚಾಲನೆ ನೀಡಲಾಗಿತ್ತು. 2023ರಲ್ಲಿ ಈ ಯೋಜನೆ ಪೂರ್ಣಗೊಳಿಸಲು ಯೋಜಿಸಲಾಗಿತ್ತು, ಆದರೆ ಭೂಸ್ವಾಧೀನ ಪ್ರಕ್ರಿಯೆಯಿಂದಾಗಿ ಕಾಮಗಾರಿ ವಿಳಂಬಗೊಂಡಿದೆ.

ಕಾಂತಾರಕ್ಕೆ ಕೆಎಸ್‌ಡಿಎಲ್‌ ಸಹ ಪ್ರಾಯೋಜಕ: ಎಂ.ಬಿ.ಪಾಟೀಲ

ಸಂದರ್ಭ: ‘ಕಾಂತಾರ– ಚಾಪ್ಟರ್ 1 ಸಿನಿಮಾಕ್ಕೆ ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಗಮವು (ಕೆಎಸ್‌ಡಿಎಲ್‌), ಸುಗಂಧ ಭಾಗಿದಾರ ಆಗಿ ಸಹ ಪ್ರಾಯೋಜಕತ್ವ ನೀಡಲಿದೆ’.

  • ‘ಕನ್ನಡ ಚಿತ್ರರಂಗವು ಸ್ಯಾಂಡಲ್‌ ವುಡ್‌ ಎಂದೇ ಹೆಸರಾಗಿದೆ. ಇನ್ನು ಕೆಎಸ್‌ಡಿಎಲ್‌ ಮೈಸೂರ್‌ ಸ್ಯಾಂಡಲ್‌ ಸೋಪ್‌ಗಳಿಗೆ ಖ್ಯಾತಿ. ಈಗ ಚಿತ್ರತಂಡ ಮತ್ತು ಕೆಎಸ್‌ಡಿಎಲ್‌ ಮಧ್ಯೆ ಒಪ್ಪಂದ ವಾಗಿದ್ದು, ಚಿತ್ರದ ಪ್ರತಿ ಪ್ರದರ್ಶನದಲ್ಲೂ ಕೆಎಸ್‌ಡಿಎಲ್‌ ಉತ್ಪನ್ನ ಗಳಿಗೆ ಪ್ರಚಾರ ಸಿಗಲಿದೆ’.
  • ‘ಕನ್ನಡ, ತೆಲುಗು, ಹಿಂದಿ, ತಮಿಳು, ಮಲೆಯಾಳ, ಇಂಗ್ಲಿಷ್ ಮತ್ತು ಸ್ಪ್ಯಾನಿಷ್ ಸೇರಿ 7 ಭಾಷೆಗಳಲ್ಲಿ ಕಾಂತಾರ ತೆರೆ ಕಾಣಲಿದೆ. ಭಾರತದ 7,000 ಹಾಗೂ 30 ರಾಷ್ಟ್ರಗಳ 6,500ಕ್ಕೂ ಹೆಚ್ಚು ಪರದೆಗಳಲ್ಲಿ ಪ್ರದರ್ಶನಗೊಳ್ಳಲಿದೆ. ಅಲ್ಲೆಲ್ಲಾ ಕೆಎಸ್‌ಡಿಎಲ್‌ ಉತ್ಪನ್ನಗಳಿಗೆ ಪ್ರಚಾರ ಸಿಗಲಿದೆ. ಜಾಗತಿಕ ಮಟ್ಟದಲ್ಲಿ ಮಾರುಕಟ್ಟೆ ವಿಸ್ತರಣೆಗೆ ಯತ್ನಿಸುತ್ತಿರುವ ಕೆಎಸ್‌ಡಿಎಲ್‌ಗೆ ಇದರಿಂದ ಅನುಕೂಲ ವಾಗಲಿದೆ’.

ಅಂಡಮಾನ್‌ನಲ್ಲಿ ತೈಲ ನಿಕ್ಷೇಪ ಪತ್ತೆ

ಸಂದರ್ಭ: ಅಂಡಮಾನ್‌ ದ್ವೀಪದ ಬಳಿ ತೈಲ ನಿಕ್ಷೇಪ ಪತ್ತೆ ಆಗಿದೆ ಎಂದು ಸರ್ಕಾರಿ ಸ್ವಾಮ್ಯದ ಆಯಿಲ್‌ ಇಂಡಿಯಾ ಲಿಮಿಟೆಡ್ (ಒಐಎಲ್‌) ತಿಳಿಸಿದೆ. ಆದರೆ, ಪತ್ತೆಯಾದ ನಿಕ್ಷೇಪದ ಅಂದಾಜನ್ನು ತಿಳಿಸಿಲ್ಲ. 

  • ಅಂಡಮಾನ್‌ ಸಮುದ್ರ ಪ್ರದೇಶದ ವಿಜಯಪುರಂ–2ರ ಎರಡನೇ ಬಾವಿಯಲ್ಲಿ ನಿಕ್ಷೇ‍ಪ ಪತ್ತೆಯಾಗಿದೆ. 
  • ಆಯಿಲ್‌ ಇಂಡಿಯಾ ಲಿಮಿಟೆಡ್ ಮತ್ತು ತೈಲ ಮತ್ತು ನೈಸರ್ಗಿಕ ಅನಿಲ ನಿಗಮವು (ಒಎನ್‌ಜಿಸಿ) ಅಂಡಮಾನ್ ಸಮುದ್ರದಲ್ಲಿ ಹೈಡ್ರೋಕಾರ್ಬನ್‌ ನಿಕ್ಷೇಪದ ಪತ್ತೆಗಾಗಿ ಸಂಶೋಧನೆ ನಡೆಸುತ್ತಿವೆ.
  • ಅಂಡಮಾನ್‌ ದ್ವೀಪದ ಪೂರ್ವ ಕರಾವಳಿಯಿಂದ 9.20 ನಾಟಿಕಲ್‌ ಮೈಲು (17 ಕಿ.ಮೀ) ದೂರದಲ್ಲಿನ ಬಾವಿಯಲ್ಲಿ ತೈಲ ನಿಕ್ಷೇಪ ಪತ್ತೆ ಆಗಿದೆ.

ಅಮೆರಿಕ ಸುಂಕ: ದೇಶದ ಜಿಡಿಪಿ ಮೇಲೆ ಪರಿಣಾಮ?

ಸಂದರ್ಭ: ಭಾರತದ ಸರಕುಗಳ ಮೇಲೆ ಅಮೆರಿಕ ವಿಧಿಸಿರುವ ಅಧಿಕ ಸುಂಕವು ದೇಶದ ಜಿಡಿಪಿ ಬೆಳವಣಿಗೆ ಮೇಲೆ ಪರಿಣಾಮ ಬೀರಬಹುದು ಎಂದು ಕ್ರಿಸಿಲ್ ಇಂಟೆಲಿಜೆನ್ಸ್‌ ತನ್ನ ಸೆಪ್ಟೆಂಬರ್ ತಿಂಗಳ ವರದಿಯಲ್ಲಿ ಹೇಳಿದೆ. 

  • ಈ ಸುಂಕವು ದೇಶದ ಸರಕು ರಫ್ತು ಮತ್ತು ಹೂಡಿಕೆ ಮೇಲೆ ಪರಿಣಾಮ ಬೀರಲಿದೆ. ಆದರೂ, ದೇಶದಲ್ಲಿ ಹಣದುಬ್ಬರ ಇಳಿಕೆ ಮತ್ತು ರೆಪೊ ದರ ಕಡಿತವು ಬೆಳವಣಿಗೆಗೆ ನೆರವಾಗುವ ನಿರೀಕ್ಷೆ ಇದೆ ಎಂದು ಹೇಳಿದೆ.
  • ಪ್ರಸಕ್ತ ಆರ್ಥಿಕ ವರ್ಷದ ಜೂನ್‌ ತ್ರೈಮಾಸಿಕದಲ್ಲಿ ದೇಶದ ಜಿಡಿಪಿ ಬೆಳವಣಿಗೆ ಶೇ 7.8ರಷ್ಟಾಗಿತ್ತು. ಇದು 15 ತಿಂಗಳ ಗರಿಷ್ಠ ಮಟ್ಟ. ಇದೇ ಅವಧಿಯಲ್ಲಿ ನಾಮಿನಲ್ ಜಿಡಿಪಿ ಶೇ 10.8ರಿಂದ ಶೇ 8.8ಕ್ಕೆ ಇಳಿದಿದೆ. 
  • ಪ್ರಸಕ್ತ ಆರ್ಥಿಕ ವರ್ಷದಲ್ಲಿ ಗ್ರಾಹಕ ಬೆಲೆ ಸೂಚ್ಯಂಕ (ಸಿಪಿಐ) ಆಧಾರಿತ ಹಣದುಬ್ಬರ ಶೇ 3.5ಕ್ಕೆ ಇಳಿಯುವ ನಿರೀಕ್ಷೆ ಇದೆ. ಇದು ಕಳೆದ ಆರ್ಥಿಕ ವರ್ಷದಲ್ಲಿ ಶೇ 4.6ರಷ್ಟಿತ್ತು. 
  • ಉತ್ತಮ ಕೃಷಿ ಚಟುವಟಿಕೆಯಿಂದ ಆಹಾರ ಪದಾರ್ಥಗಳ ಹಣದುಬ್ಬರವು ನಿಯಂತ್ರಣದಲ್ಲಿ ಇರುವ ಸಾಧ್ಯತೆ ಇದೆ. ಕಚ್ಚಾ ತೈಲ ಮತ್ತು ಸರಕುಗಳ ಬೆಲೆ ನಿಯಂತ್ರಣದಲ್ಲಿ ಇದೆ. ಇದು ಆಹಾರೇತರ ವಸ್ತುಗಳ ಹಣದುಬ್ಬರ ಪ್ರಮಾಣವನ್ನು ತಗ್ಗಿಸುವ ನಿರೀಕ್ಷೆ ಇದೆ. ಅಲ್ಲದೆ, ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಮತ್ತೊಮ್ಮೆ ರೆಪೊ ದರ ಕಡಿತ ಮಾಡುವ ಸಾಧ್ಯತೆ ಇದೆ ಎಂದು ವರದಿ ಹೇಳಿದೆ.

ಶೀತಲ್ ದೇವಿ ಚಾರಿತ್ರಿಕ ಸಾಧನೆ: ಪ್ಯಾರಾ ವಿಶ್ವ ಆರ್ಚರಿ: ಕೈಗಳಿಲ್ಲದೇ ಚಿನ್ನ ಗೆದ್ದ ಮೊದಲ ಮಹಿಳೆ

  • ವಿಶ್ವ ಆರ್ಚರಿ ಚಾಂಪಿಯನ್‌ಷಿಪ್‌ನಲ್ಲಿ ಕೈಗಳ ಸಹಾಯವಿಲ್ಲದೇ ಚಿನ್ನ ಗೆದ್ದ ವಿಶ್ವದ ಮೊದಲ ಮಹಿಳಾ ಸ್ಪರ್ಧಿ ಎಂಬ ಹೆಗ್ಗಳಿಕೆ ಭಾರತದ ಶೀತಲ್ ದೇವಿ ಅವರದಾಯಿತು.
  • ಇಲ್ಲಿ ನಡೆಯುತ್ತಿರುವ ಪ್ಯಾರಾ ವಿಶ್ವ ಆರ್ಚರಿ ಚಾಂಪಿಯನ್‌ ಷಿಪ್‌ನ ಪುರುಷರ ವಿಭಾಗದ ಕಾಂಪೌಂಡ್‌ ವೈಯಕ್ತಿಕ ಸ್ಪರ್ಧೆಯಲ್ಲಿ ತೊಮನ್ ಕುಮಾರ್ ಅವರೂ ಚಿನ್ನ ಗೆದ್ದರು.
  • ಕಾಂಪೌಂಡ್ ವೈಯಕ್ತಿಕ ವಿಭಾಗದ ಫೈನಲ್‌ನಲ್ಲಿ 18 ವರ್ಷ ವಯಸ್ಸಿನ ಶೀತಲ್, ಟರ್ಕಿಯ ಅಗ್ರಕ್ರಮಾಂಕದ ಸ್ಪರ್ಧಿ ಒಝ್ನೂರ್ ಕ್ಯುರ್ ಗಿರ್ದಿ ಅವರನ್ನು 146–143 ರಿಂದ ಸೋಲಿಸಿದರು. ಕೈಗಳನ್ನು ಕಳೆದುಕೊಂಡ ಜಮ್ಮು–ಕಾಶ್ಮೀರದ ಬಾಲೆ ಶೀತಲ್ ಕಾಲಿನಿಂದಲೇ ಬಾಣ ಪ್ರಯೋಗಿಸಿ ಹೆಸರು ಮಾಡಿದ್ದಾರೆ.
  • ಕಾಂಪೌಂಡ್‌ ವಿಭಾಗದ ಸ್ಪರ್ಧಿಗಳು ಬಳಸುವ ಬಿಲ್ಲು ಕೇಬಲ್ ಮತ್ತು ಪುಟ್ಟ ರಾಟೆಗಳನ್ನು ಹೊಂದಿರುತ್ತದೆ. ರೀಕರ್ವ್ ವಿಭಾಗದ ಬಿಲ್ಲು ಸಾಂಪ್ರದಾಯಿಕ ರೀತಿಯಲ್ಲಿರುತ್ತದೆ.
  • ಶೀತಲ್ ಅವರು ಈ ಟೂರ್ನಿಯಲ್ಲಿ ಕೈಗಳಿಲ್ಲದೇ ಭಾಗವಹಿಸಿರುವ ಏಕೈಕ ಸ್ಪರ್ಧಿ ಎನಿಸಿದ್ದಾರೆ. ಅವರು ಗಲ್ಲದ ನೆರವು ಪಡೆದು ಕಾಲಿನಿಂದ ಬಾಣ ಪ್ರಯೋಗಿಸು ತ್ತಾರೆ. ಈ ಹಿಂದೆ ಪುರುಷರ ವಿಭಾಗದಲ್ಲಿ ಕೈಗಳಿಲ್ಲದೇ ಬಾಣ ಪ್ರಯೋಗಿಸಿ ಚಿನ್ನ ಗೆದ್ದ ಏಕೈಕ ದಾಖಲೆ ಇರುವುದು ಅಮೆರಿಕದ ಮ್ಯಾಟ್‌ ಸ್ಟುಟ್ಜ್‌ಮನ್ ಹೆಸರಿನಲ್ಲಿ. ಅವರು ದುಬೈ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಚಿನ್ನ ಗೆದ್ದಿದ್ದರು.
  • ತೊಮನ್‌ಗೆ ಚಿನ್ನ: ಇದಕ್ಕೆ ಮೊದಲು ಶೀತಲ್ ಅವರು ತೊಮನ್ ಕುಮಾರ್ ಜೊತೆಗೂಡಿ ಕಾಂಪೌಂಡ್‌ ಮಿಶ್ರ ವಿಭಾಗದಲ್ಲಿ ಕಂಚಿನ ಪದಕ ಗಳಿಸಿದ್ದರು. ಪ್ಲೇಆಫ್‌ನಲ್ಲಿ ಬ್ರಿಟನ್‌ನ ಜೋಡೀ  ಗ್ರೀನ್ಹಮ್– ನಥಾನ್‌ ಮೆಕ್‌ಕ್ವೀನ್ ಜೋಡಿಯನ್ನು 152–149 ರಿಂದ ಸೋಲಿಸಿದ್ದರು.
  • ನಂತರ ನಡೆದ ಪುರುಷರ ವಿಭಾಗದ ಕಾಂಪೌಂಡ್ ವೈಯಕ್ತಿಕ ವಿಭಾಗದ ಸ್ಪರ್ಧೆಯಲ್ಲಿ ತೊಮನ್ ಅವರು ಸ್ವದೇಶದ ರಾಕೇಶ್ ಕುಮಾರ್ ಅವರನ್ನು 40–20 ರಿಂದ ಸೋಲಿಸಿದರು. ರಾಕೇಶ್ ಅವರು ತಾಂತ್ರಿಕ ತೊಂದರೆಯ ಕಾರಣ ಅರ್ಧದಲ್ಲೇ ಹಿಂದೆ ಸರಿದರು. ರಾಕೇಶ್‌, ಪ್ಯಾರಿಸ್‌ ಪ್ಯಾರಾಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ಜಯಿಸಿದ್ದರು. ಇಲ್ಲಿ ಅವರ ಬಾಣ ಪ್ರಯೋಗಿಸುವ ವೇಳೆ ತಾಂತ್ರಿಕ ತೊಂದರೆ ಕಾಣಿಸಿತು.
  • ಕಾಂಪೌಂಡ್‌ ಪುರುಷರ ಓಪನ್ ವಿಭಾಗದಲ್ಲಿ ಕಂಚಿನ ಪದಕಕ್ಕೆ ನಡೆದ ಸ್ಪರ್ಧೆಯಲ್ಲಿ ಶ್ಯಾಮ್‌ ಸುಂದರ್ ಸ್ವಾಮಿ 141–148 ರಲ್ಲಿ ಬ್ರಿಟನ್‌ನ ನಥಾನ್ ಮೆಕ್‌ಕ್ವೀನ್ ಅವರಿಗೆ ಸೋತರು. ಸ್ವಾಮಿ ಸೆಮಿಫೈನಲ್‌ನಲ್ಲಿ ತೊಮನ್ ಅವರನ್ನು ಸೋಲಿಸಿದ್ದರು.

‘ಬಹುಪಕ್ಷೀಯ ವ್ಯವಸ್ಥೆ ‘ಬ್ರಿಕ್ಸ್‌’ ರಕ್ಷಿಸಲಿ’

ಸಂದರ್ಭ: ಹೆಚ್ಚುತ್ತಿರುವ ರಕ್ಷಣಾ ನೀತಿ, ಸುಂಕದ ಏರಿಳಿತ ಹಾಗೂ ಇತರ ಅಡೆತಡೆಗಳು ಬಹುಪಕ್ಷೀಯ ವ್ಯಾಪಾರ ವ್ಯವಸ್ಥೆಯ ಮೇಲೆ ಪರಿಣಾಮ ಬೀರುತ್ತಿರುವುದರಿಂದ ಜಾಗತಿಕ ವ್ಯಾಪಾರ ಸಂಬಂಧವನ್ನು  ರಕ್ಷಿಸುವಂತೆ, ವಿದೇಶಾಂಗ ವ್ಯವಹಾರಗಳ ಸಚಿವ ಎಸ್‌.ಜೈಶಂಕರ್‌ ಅವರು ‘ಬ್ರಿಕ್ಸ್‌’ಗೆ ಕರೆ ನೀಡಿದರು.

  • ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ 80ನೇ ಉನ್ನತ ಮಟ್ಟದ ಸಭೆಯ (ಯುಎನ್‌ಜಿಎ) ಸಂದರ್ಭದಲ್ಲಿ ‘ಬ್ರಿಕ್ಸ್‌’ ದೇಶಗಳ ವಿದೇಶಾಂಗ ಸಚಿವರ ಸಭೆಯು ಭಾರತದ ಅಧ್ಯಕ್ಷತೆಯಲ್ಲಿ ನಡೆಯಿತು. 
  • ‘ಬಹುಪಕ್ಷೀಯತೆಯು ಒತ್ತಡದಲ್ಲಿದ್ದಾಗ, ರಚನಾತ್ಮಕ ಬದಲಾವಣೆಯ ಗಟ್ಟಿ ದನಿಯಾಗಿ ‘ಬ್ರಿಕ್ಸ್‌’ ನಿಂತಿದೆ. ಪ್ರಕ್ಷುಬ್ಧ ಪರಿಸ್ಥಿತಿಯಲ್ಲಿ ಶಾಂತಿ ಸ್ಥಾಪನೆ, ಮಾತುಕತೆ, ರಾಜತಾಂತ್ರಿಕತೆ ಹಾಗೂ ಅಂತರ ರಾಷ್ಟ್ರೀಯ ಕಾನೂನಿನ ಪಾಲನೆಯನ್ನು, ‘ಬ್ರಿಕ್ಸ್‌’ ಬಲಪಡಿಸಬೇಕು’ ಎಂದು ಜೈಶಂಕರ್‌ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ.  
  • 2026ರಲ್ಲಿ ಭಾರತವು ‘ಬ್ರಿಕ್ಸ್‌’ ಅಧ್ಯಕ್ಷತೆ ವಹಿಸಿಕೊಳ್ಳುತ್ತಿರುವ ಕುರಿತು ಮಾತನಾಡಿದ ಅವರು, ‘ಡಿಜಟಲೀಕರಣ, ಸ್ಟಾರ್ಟ್‌ಅಪ್‌ ಗಳು, ನಾವೀನ್ಯತೆ ಮತ್ತು ಅಭಿವೃದ್ಧಿ ಪಾಲುದಾರಿಕೆಗಳ ಮೂಲಕ ಆಹಾರ, ಇಂಧನ, ಹವಾಮಾನ ಹಾಗೂ ಸುಸ್ಥಿರ ಅಭಿವೃದ್ಧಿಯ ಮೇಲೆ ದೇಶವು ಕೇಂದ್ರೀಕರಿಸಲಿದೆ’ ಎಂದರು. 

ಶೈಲೇಶ್‌ಗೆ ಹೈಜಂಪ್ ಚಿನ್ನ

ಸಂದರ್ಭ: ಭಾರತದ ಶೈಲೇಶ್ ಕುಮಾರ್ ಮತ್ತು ವರುಣ್ ಸಿಂಗ್ ಭಾಟಿ ಅವರು ಶನಿವಾರ ಆರಂಭವಾದ ವಿಶ್ವ ಪ್ಯಾರಾ ಅಥ್ಲೆಟಿಕ್ಸ್‌ ಚಾಂಪಿಯನ್‌ ಷಿಪ್‌ನಲ್ಲಿ ಪುರುಷರ ಹೈಜಂಪ್‌ ಟಿ63 ವಿಭಾಗದಲ್ಲಿ ಕ್ರಮವಾಗಿ ಚಿನ್ನ ಮತ್ತು ಕಂಚಿನ ಪದಕ ಗೆದ್ದುಕೊಂಡರು.

  • ಮೊದಲ ದಿನವೇ ಆತಿಥೇಯರು ಪದಕ ಖಾತೆ ತೆರೆದರು. 25 ವರ್ಷ ವಯಸ್ಸಿನ ಶೈಲೇಶ್ 1.91 ಮೀ. ಜಿಗಿದು ವೈಯಕ್ತಿಕ ಶ್ರೇಷ್ಠ ಸಾಧನೆ ದಾಖಲಿಸಿದರು. ಆ ಹಾದಿಯಲ್ಲಿ ಏಷ್ಯನ್ ಮತ್ತು ಚಾಂಪಿಯನ್‌ಷಿಪ್ ದಾಖಲೆ ಸುಧಾರಿಸಿದರು.
  • ಹಾಲಿ ಪ್ಯಾರಾಲಿಂಪಿಕ್ ಚಾಂಪಿಯನ್, ಅಮೆರಿಕದ ಎಝ್ರಾ ಫ್ರೆಚ್‌ ಬೆಳ್ಳಿ ಗೆದ್ದರೆ, ವರುಣ್ ಕಂಚಿನ ಪದಕ ಗೆದ್ದರು. ಇಬ್ಬರೂ 1.85 ಮೀ. ಜಿಗಿದರೂ, ಕೌಂಟ್‌ ಬ್ಯಾಂಕ್ ಆಧಾರದಲ್ಲಿ ಅಮೆರಿಕದ ಸ್ಪರ್ಧಿ ಎರಡನೇ ಸ್ಥಾನ ತಮ್ಮದಾಗಿಸಿಕೊಂಡರು. ಮೊಣಕಾಲಿನ ಮೇಲಿನವರೆಗೆ ಒಂದು ಕಾಲು ಕಳೆದುಕೊಂಡವರು ಈ ವಿಭಾಗದಲ್ಲಿ (ಟಿ63) ಸ್ಪರ್ಧಿಸುತ್ತಾರೆ.

ಪ್ರಚಲಿತ ವಿದ್ಯಮಾನಗಳು: 27ನೇ ಸೆಪ್ಟೆಂಬರ್ 2025

  • ಆಹಾರ ಸಂಸ್ಕರಣೆ ಉದ್ದಿಮೆಗಳಿಗೆ ಸಹಾಯಧನ ಬಿಡುಗಡೆ           

ಸಂದರ್ಭ: ಪ್ರಧಾನ ಮಂತ್ರಿಗಳ ಕಿರು ಆಹಾರ ಸಂಸ್ಕರಣಾ ಉದ್ದಿಮೆಗಳ ನಿಯಮ ಬದ್ಧಗೊಳಿಸುವಿಕೆ (ಪಿಎಂಎಫ್‌ಎಂಇ) ಯೋಜನೆಯಡಿ ಶೇ 35ರಷ್ಟು ಸಹಾಯಧನ ಅಂದರೆ ₹60.90 ಕೋಟಿ ಬಿಡುಗಡೆ ಮಾಡಲಾಗಿದೆ.

  • ಸೆ.28ರವರೆಗೆ ನವದೆಹಲಿಯಲ್ಲಿ ನಡೆಯಲಿರುವ ವರ್ಲ್ಡ್‌ ಫುಡ್‌ ಇಂಡಿಯಾ 2025 ವ್ಯಾಪಾರ ಮೇಳದ ಭಾಗವಾಗಿ ಸಹಾಯಧನವನ್ನು 1,642 ಫಲಾನುಭವಿಗಳ ಬ್ಯಾಂಕ್ ಖಾತೆಗಳಿಗೆ ಜಮಾ ಮಾಡಲಾಗಿದೆ.
  • ಇದರಲ್ಲಿ ಕೇಂದ್ರದ ಪಾಲು ₹ 36.54 ಕೋಟಿ ಹಾಗೂ ರಾಜ್ಯದ ಪಾಲು ₹ 24.36 ಕೋಟಿ ಆಗಿರಲಿದೆ. ಹಾಗೆಯೇ ರಾಜ್ಯ ಸರ್ಕಾರದಿಂದ ₹ 27.17 ಕೋಟಿ ಹೆಚ್ಚುವರಿ ಟಾಪ್-ಅಪ್ ಅನುದಾನವನ್ನು ಫಲಾನುಭವಿಗಳಿಗೆ ಶೀಘ್ರ ಬಿಡುಗಡೆ ಮಾಡಲಾಗುವುದು ಎಂದು ಕರ್ನಾಟಕ ರಾಜ್ಯ ಕೃಷಿ ಉತ್ಪನ್ನಗಳ ಸಂಸ್ಕರಣೆ ಹಾಗೂ ರಫ್ತು ನಿಗಮ ನಿಯಮಿತ(ಕೆಪೆಕ್‌) ಅಧ್ಯಕ್ಷ ಬಿ.ಎಚ್‌. ಹರೀಶ್‌ ತಿಳಿಸಿದ್ದಾರೆ.
  • ಈ ಅನುದಾನ ಆಹಾರ ಸಂಸ್ಕರಣಾ ಕ್ಷೇತ್ರ ಉತ್ತೇಜಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರ ಕೈಗೊಂಡಿರುವ ಮಹತ್ವದ ಹೆಜ್ಜೆಯಾಗಿದೆ ಎಂದು ತಿಳಿಸಿದ್ದಾರೆ.
  • ನಾಪತ್ತೆ ಪ್ರಕರಣ: ಆಧಾರ್ ಮಾಹಿತಿ ಒದಗಿಸಲು ನಿರ್ದೇಶನ

ಸಂದರ್ಭ:  ‘ನನ್ನ ಮಗ ನಾಪತ್ತೆ ಆಗಿದ್ದು ಆತ ಆಧಾರ್‌ ಬಳಕೆ ಮಾಡಿದ್ದ ಸ್ಥಳದ ವಿವರಗಳನ್ನು ಒದಗಿಸಲು ನಿರ್ದೇಶಿಸಬೇಕು’ ಎಂಬ ತಂದೆಯೊಬ್ಬರ ಮನವಿಯನ್ನು ಪುರಸ್ಕರಿಸಿರುವ ಹೈಕೋರ್ಟ್, ಮಾಹಿತಿ ಒದಗಿಸುವಂತೆ ವಿಶಿಷ್ಟ ಗುರುತಿನ ಚೀಟಿ ಪ್ರಾಧಿಕಾರಕ್ಕೆ (ಯುಐಎಡಿಐ) ನಿರ್ದೇಶಿಸಿದೆ.

  • ಈ ಸಂಬಂಧ ಹುಬ್ಬಳ್ಳಿಯ ರಾಮಲಿಂಗೇಶ್ವರ ನಗರದ ಕೃಷ್ಣಮೂರ್ತಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸೂರಜ್‌ ಗೋವಿಂದರಾಜ್ (ಧಾರವಾಡ) ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಕುರಿತಂತೆ ಆದೇಶಿಸಿದೆ.
  • ‘ತನಿಖೆಯ ವೇಳೆ ಪೊಲೀಸರಾಗಲಿ ಅಥವಾ ಇತರೆ ಯಾವುದೇ ಸಂಸ್ಥೆಯಾ ಗಲಿ ದೃಢೀಕರಣ ಸೇರಿದಂತೆ ಆಧಾರ್‌ ಅನ್ನು ಬಳಕೆ ಮಾಡಬೇಕಾಗಿ ಬಂದರೆ ಅಂತಹ ಸಂದರ್ಭಗಳಲ್ಲಿ ಆಧಾರ್‌ ಕಾಯ್ದೆ-2016ರ ಕಲಂ 33ರ ಅನ್ವಯ ಹೈಕೋರ್ಟ್ ಮುಂದೆ ಅರ್ಜಿ ಸಲ್ಲಿಸಬೇಕು.
  • ಹೈಕೋರ್ಟ್ ಯುಐಡಿಎಐಗೆ ಆಧಾರ್‌ ವಿವರಗಳನ್ನು ಬಳಸಿಕೊಳ್ಳಲು ಮತ್ತು ಅದನ್ನು ಕೊನೆಯದಾಗಿ ಯಾವ ಸ್ಥಳದಲ್ಲಿ ಬಳಕೆ ಮಾಡಲಾಗಿದೆ ಎಂಬ ವಿವರ ಒದಗಿಸಲು ಸೂಕ್ತ ಆದೇಶಗಳನ್ನು ಹೊರಡಿಸಲು ಸಮಯ ಮತ್ತು ಅವಕಾಶ ನೀಡುವ ಮೂಲಕ ಆದೇಶಗಳನ್ನು ನೀಡಲಿದೆ’ ಎಂದು ನ್ಯಾಯಪೀಠ ತಿಳಿಸಿದೆ.
  • ‘ಆಧಾರ್ ಕಾಯ್ದೆಯ ಕಲಂ 29ರ ಅಡಿಯಲ್ಲಿ ಮಾಹಿತಿ ನೀಡಲು ನಿರ್ಬಂಧವಿದೆ. ಆದರೆ, ಆ ನಿರ್ಬಂಧ ಮೂಲ ಬಯೋಮೆಟ್ರಿಕ್ ಮಾಹಿತಿಗಷ್ಟೇ ಸೀಮಿತವಾಗಿದೆ. ಆದರೆ, ಯಾರಾದರೂ ನಿರ್ದಿಷ್ಟವಾಗಿ ಅರ್ಜಿ ಸಲ್ಲಿಸಿದಾಗ ಆಧಾರ್‌ ಸಂಖ್ಯೆ, ಬಯೋಮೆಟ್ರಿಕ್ ಮಾಹಿತಿ ಮತ್ತು ಡೆಮೋಗ್ರಾಫಿಕ್ ಮಾಹಿತಿಯನ್ನು ಒದಗಿಸಬೇಕಾಗುತ್ತದೆ. ಕೆಲವೊಂದು ಸಂದರ್ಭಗಳಲ್ಲಿ ತನಿಖೆಯ ಉದ್ದೇಶಕ್ಕೆ ಅಗತ್ಯ ಮಾಹಿತಿಯನ್ನು ಒದಗಿಸುವಂತೆ ಯುಐಡಿಎಐಗೆ ನ್ಯಾಯಾಲಯಗಳು ಸೂಕ್ತ ನಿರ್ದೇಶನ ನೀಡಬಹುದಾಗಿದೆ’ ಎಂದು ನ್ಯಾಯಪೀಠ ವಿವರಿಸಿದೆ.
  • ‘ನನ್ನ ಮಗ 2019ರಿಂದ ಕಾಣೆ ಆಗಿದ್ದಾನೆ. ಈವರೆಗೂ ಪತ್ತೆಯಾಗಿಲ್ಲ. ಆದರೆ, 2023ರ ಜೂನ್ 20ರಂದು ಆತನ ಆಧಾರ್‌ ಬಳಕೆ ದೃಢೀಕರಣವಾಗಿರುವ ಮಾಹಿತಿ ಇದೆ. ಹಾಗಾಗಿ, ಆ ವಿವರ ಒದಗಿಸಲು ನಿರ್ದೇಶಿಸಬೇಕು’ ಎಂದು ಅರ್ಜಿದಾರರು ಕೋರಿದ್ದರು.
  • ಬ್ಯಾಡ್ಮಿಂಟನ್: ಭಾರತಕ್ಕೆ 4 ಪದಕ

ಸಂದರ್ಭ: ಭಾರತ ತಂಡದ ಸ್ಪರ್ಧಿಗಳು, ಕ್ವಾಲಾಲಂಪುರದಲ್ಲಿ ಸೆ. 16 ರಿಂದ 20ರವರೆಗೆ ನಡೆದ ವಿಶೇಷ ಒಲಿಂಪಿಕ್ಸ್‌ ಏಷ್ಯಾ ಪೆಸಿಫಿಕ್‌ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಒಂದು ಚಿನ್ನ, ಮೂರು ಬೆಳ್ಳಿ ಪದಕಗಳನ್ನು ಗೆದ್ದುಕೊಂಡಿದ್ದಾರೆ.

  • ಚಾನ್ವಿ ಶರ್ಮಾ ಮಹಿಳೆಯರ ಸಿಂಗಲ್ಸ್‌ನಲ್ಲಿ ಚಿನ್ನ ಗೆದ್ದರು. ನಂತರ ಸುಜಿತಾ ಸುಕುಮಾರನ್ ಜೊತೆಗೂಡಿ ಡಬಲ್ಸ್‌ನಲ್ಲಿ ಬೆಳ್ಳಿ ಜಯಿಸಿದರು ಎಂದು ಸ್ಪೆಷಲ್ ಒಲಿಂಪಿಕ್ಸ್‌ ಭಾರತ್ ಪ್ರಕಟಣೆ ತಿಳಿಸಿದೆ.
  • ಅಂಕಿತ್ ದಲಾಲ್‌ ಪುರುಷರ ಸಿಂಗಲ್ಸ್‌ನಲ್ಲಿ ಬೆಳ್ಳಿ ಜಯಿಸಿದರಲ್ಲದೇ, ನಂತರ ಡಬಲ್ಸ್‌ನಲ್ಲಿ ಅಮಲ್‌ ಬಿಜು ಜೊತೆಗೂಡಿ ಇನ್ನೊಂದು ಬೆಳ್ಳಿ ಪದಕವನ್ನೂ ಗೆದ್ದರು.
  • ಜೂನಿಯರ್ಶೂಟಿಂಗ್‌: ಜೊನಾಥನ್ಗೆ ಸ್ವರ್ಣ

ಸಂದರ್ಭ: ಭಾರತದ ಉದಯೋನ್ಮುಖ ಶೂಟರ್‌ ಜೊನಾಥನ್‌ ಗ್ಯಾವಿನ್‌ ಆ್ಯಂಟನಿ ಅವರು ಇಲ್ಲಿ ನಡೆಯುತ್ತಿರುವ ಐಎಸ್‌ಎಸ್‌ಎಫ್‌ ಜೂನಿಯರ್‌ ವಿಶ್ವಕಪ್‌ ಟೂರ್ನಿಯ 10 ಮೀ. ಏರ್‌ ಪಿಸ್ತೂಲ್‌ ಸ್ಪರ್ಧೆಯಲ್ಲಿ ಚಿನ್ನಕ್ಕೆ ಗುರಿ ಇಟ್ಟರು.

  • ಟೂರ್ನಿಯ ಎರಡನೇ ದಿನವಾದ ಶುಕ್ರವಾರ ನಡೆದ ಫೈನಲ್‌ ಸುತ್ತಿನಲ್ಲಿ ಜೊನಾಥನ್‌ ಅವರು 244.8 ಪಾಯಿಂಟ್ಸ್‌ ಸಂಪಾದಿಸಿದರು. ಇಟಲಿಯ ಲ್ಯೂಕಾ ಅರಿಘಿ (236.3) ಹಾಗೂ ಸ್ಪೇನ್‌ನ ಲ್ಯೂಕಾಸ‌್ ಸ್ಯಾಂಚೆಝ್‌ ಟೋಮ್‌ (215.1) ಅವರು ಕ್ರಮವಾಗಿ ಬೆಳ್ಳಿ ಹಾಗೂ ಕಂಚಿನ ಪದಕ ಗೆದ್ದರು.
  • ಕ್ವಾಲಿಫಿಕೇಶನ್‌ ಸುತ್ತಿನಲ್ಲಿ ಎರಡನೇ ಸ್ಥಾನ ಪಡೆದಿದ್ದ ಭಾರತದ ಚಿರಾಗ್‌ ಶರ್ಮಾ ಅವರು, ಫೈನಲ್‌ ಹಣಾಹಣಿಯಲ್ಲಿ ನೀರಸ ಪ್ರದರ್ಶನದೊಂದಿಗೆ (115.6) ಎಂಟನೇ ಹಾಗೂ ಕೊನೆಯ ಸ್ಥಾನ ಪಡೆದರು.
  • ರಜತ ಗೆದ್ದ ರಶ್ಮಿಕಾ: ಜೂನಿಯರ್‌ ಮಹಿಳೆಯರ 10 ಮೀ. ಏರ್‌ ರೈಫಲ್‌ ಸ್ಪರ್ಧೆಯಲ್ಲಿ ಭಾರತದ ರಶ್ಮಿಕಾ ಸೆಹಗಲ್‌ ಅವರು 236.1 ಪಾಯಿಂಟ್ಸ್‌ಗಳೊಡನೆ ಬೆಳ್ಳಿ ಪದಕಕ್ಕೆ ಕೊರಳೊಡ್ಡಿದರು. ಸ್ವತಂತ್ರ ತಟಸ್ಥ ಸ್ಪರ್ಧಿ (ಎಎನ್‌ಎ) ಎವಿಲಿನಾ ಶೀನಾ (240.9) ಸ್ವರ್ಣ ಗೆದ್ದರೆ, ಇರಾನ್‌ನ ಫಾತಿಮಾ ಶೆಕರಿ (213.8) ಕಂಚಿನ ಪದಕ ತಮ್ಮದಾಗಿಸಿಕೊಂಡರು.
  • ಆದರೆ, ಕ್ವಾಲಿಫಿಕೇಶನ್‌ ಸ್ಪರ್ಧೆಯಲ್ಲಿ ಕ್ರಮವಾಗಿ ಮೊದಲೆರಡು ಸ್ಥಾನ ಪಡೆದಿದ್ದ ವಂಶಿಕಾ ಚೌಧರಿ ಹಾಗೂ ಮೋಹಿನಿ ಸಿಂಗ್‌ ಅವರು ಪ್ರಶಸ್ತಿ ಸುತ್ತಿನಲ್ಲಿ ನಿರಾಸೆ ಅನುಭವಿಸಿದರು. ವಂಶಿಕಾ (174.2) ಅವರು 5ನೇ ಸ್ಥಾನ ಪಡೆದರೆ, ಮೋಹಿನಿ (153.2) ಅವರು 6ನೇ ಸ್ಥಾನ ಪಡೆಯಲಷ್ಟೇ ಶಕ್ತರಾದರು.

ಪ್ರಚಲಿತ ವಿದ್ಯಮಾನಗಳು: 26ನೇ ಸೆಪ್ಟೆಂಬರ್ 2025

  • ಅಂಚೆ ಮತಪತ್ರ ಎಣಿಕೆ ಸುಗಮಕ್ಕೆ ಕ್ರಮ: ಆಯೋಗ

ಸಂದರ್ಭ: ಅಂಚೆ ಮತಪತ್ರಗಳ ಎಣಿಕೆ ಪೂರ್ಣಗೊಂಡ ಬಳಿಕವಷ್ಟೇ ಇವಿಎಂ/ವಿವಿಪ್ಯಾಟ್‌ನ ಅಂತಿಮ ಸುತ್ತಿಗೂ ಮುಂಚಿನ ಸುತ್ತಿನ ಮತ ಎಣಿಕೆ ಪ್ರಕ್ರಿಯೆ ನಡೆಯಬೇಕು ಎಂದು ಚುನಾವಣಾ ಆಯೋಗ ಹೇಳಿದೆ.

  • ಆಯೋಗದ ಈ ಹೊಸ ನಿರ್ಧಾರವು ಬಿಹಾರ ವಿಧಾನಸಭಾ ಚುನಾವಣೆಯಿಂದ ಜಾರಿಗೆ ಬರಲಿದೆ.
  • ಅಂಚೆ ಮತಪತ್ರಗಳ ಎಣಿಕೆ ಪ್ರಕ್ರಿಯೆಯನ್ನು ಸುಗಮಗೊಳಿಸುವ ಉದ್ದೇಶದಿಂದ ಈ ಕ್ರಮ ತೆಗೆದುಕೊಂಡಿರುವುದಾಗಿ ಅದು ಹೇಳಿದೆ.
  • ಅಂಚೆ ಮತಪತ್ರಗಳ ಎಣಿಕೆಯ ಹಂತವನ್ನು ಲೆಕ್ಕಿಸದೆ ಇವಿಎಂ ಎಣಿಕೆ ಮುಂದುವರಿಯಬಹುದುಎಂದು 2019 ಆದೇಶದಲ್ಲಿ ಹೇಳಲಾಗಿತ್ತು.
  • ಆದೇಶವನ್ನು ಹಿಂಪಡೆದಿರುವ ಆಯೋಗ, ‘ಅಂಚೆ ಮತಪತ್ರಗಳ ಎಣಿಕ ಪೂರ್ಣಗೊಂಡ ಬಳವಷ್ಟೇ ಇವಿಎಂ/ವಿವಿಪ್ಯಾಟ್ ಕೊನೆಯ ಸುತ್ತಿಗೂ ಹಿಂದಿನ ಸುತ್ತಿನ ಮತ ಎಣಿಕೆ ನಡೆಸಲಾಗುವುದುಎಂದು ಸ್ಪಷ್ಟಪಡಿಸಿದೆ.
  • ಇವಿಎಂ ಎಣಿಕೆ ಪೂರ್ಣಗೊಳ್ಳುವ ಮೊದಲು ಅಂಚೆ ಮತಪತ್ರಗಳ ಎಣಿಕೆಯನ್ನು ಪೂರ್ಣಗೊಳಿಸಬೇಕು ಎಂಬುದು ವಿರೋಧ ಪಕ್ಷಗಳ ದೀರ್ಘಕಾಲದ ಬೇಡಿಕೆಯಾಗಿತ್ತು. ಅಂಗವಿಕಲರು ಮತ್ತು 85 ವರ್ಷ ದಾಟಿದ ಹಿರಿಯ ನಾಗರಿಕರ ಮತದಾನಕ್ಕಾಗಿ ಆಯೋಗ ಇತ್ತೀಚೆಗೆ ತೆಗೆದುಕೊಂಡ ಕ್ರಮಗಳಿಂದಾಗಿ ಅಂಚೆ ಮತಪತ್ರಗಳ ಸಂಖ್ಯೆಯಲ್ಲಿ ಗಣನೀಯ ಏರಿಕೆ ಕಂಡು ಬಂದಿದೆ. ಹೀಗಾಗಿ ಆಯೋಗ ಈ ಕುರಿತು ನಿರ್ಧಾರ ತೆಗೆದುಕೊಂಡಿದೆ.
  • ಅಗ್ನಿ ಪ್ರೈಮ್‌’ ಕ್ಷಿಪಣಿ ಪರೀಕ್ಷೆ ಯಶಸ್ವಿ

ಸಂದರ್ಭ: 2,000 ಕಿ.ಮೀ ವ್ಯಾಪ್ತಿಯಲ್ಲಿನ ಗುರಿಯನ್ನು ಹೊಡೆದುರುಳಿಸಬಲ್ಲ ಸಾಮರ್ಥ್ಯದ ‘ಅಗ್ನಿ ಪ್ರೈಮ್‌’ ಕ್ಷಿಪಣಿಯನ್ನು ರೈಲು ಬೋಗಿಯ ಮೇಲೆ ಅಳವಡಿಸಿದ್ದ ಲಾಂಚರ್‌ನಿಂದ ಉಡಾಯಿಸುವ ಪರೀಕ್ಷಾರ್ಥ ಪ್ರಯೋಗವನ್ನು ಭಾರತ ಯಶಸ್ವಿಯಾಗಿ ನಡೆಸಿದೆ.

  • ದೇಶದಲ್ಲಿ ಇದೇ ಮೊದಲ ಬಾರಿಗೆ ರೈಲು ಬೋಗಿಯ ಮೇಲಿ ನಿಂದ ಕ್ಷಿಪಣಿ ಉಡಾಯಿಸಲಾಗಿದೆ. ಯಾವುದೇ ಭಾಗಕ್ಕೆ ತ್ವರಿತವಾಗಿ ಕ್ಷಿಪಣಿ ಕೊಂಡೊಯ್ದು, ಉಡ್ಡಯನಕ್ಕೆ ಅನುಕೂಲವಾಗುವಂತೆ ಈ ವ್ಯವಸ್ಥೆಯನ್ನು ರೂಪಿಸಲಾಗಿದೆ.
  • ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಅವರು ‘ಈ ಪರೀಕ್ಷೆಯಿಂದ, ರೈಲಿನ ಮೇಲಿಂದ ಕ್ಷಿಪಣಿಯನ್ನು ಉಡಾಯಿಸಬಲ್ಲ ಸಾಮರ್ಥ್ಯವಿರುವ ದೇಶಗಳ ಗುಂಪಿಗೆ ಭಾರತ ಸೇರಿತು’ ಎಂದಿದ್ದಾರೆ.
  • ‘ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ) ಹಾಗೂ ವ್ಯೂಹಾತ್ಮಕ ಪಡೆಗಳ ಕಮಾಂಡ್‌ (ಎಸ್‌ಎಫ್‌ಸಿ) ಸಹಯೋಗದಲ್ಲಿ ಮಧ್ಯಂತರ ಶ್ರೇಣಿಯ ‘ಅಗ್ನಿ ಪ್ರೈಮ್‌’ ಕ್ಷಿಪಣಿಯನ್ನು ಯಶಸ್ವಿಯಾಗಿ ಉಡಾವಣೆ ಮಾಡಲಾಯಿತು’ ಎಂದು ರಕ್ಷಣಾ ಸಚಿವಾಲಯ ತಿಳಿಸಿದೆ.
  • ಅತ್ಯಾಧುನಿಕ ಸಂವಹನ ವ್ಯವಸ್ಥೆ ಹಾಗೂ ರಕ್ಷಣಾ ಕಾರ್ಯವಿಧಾನಗಳು ಸೇರಿದಂತೆ ಕ್ಷಿಪಣಿಯು ಎಲ್ಲಾ ವೈಶಿಷ್ಟ್ಯಗಳನ್ನು ಹೊಂದಿದೆ.
  • ₹65 ಸಾವಿರ ಕೋಟಿ ಹೂಡಿಕೆ ಪ್ರಸ್ತಾವ

ಸಂದರ್ಭ: ‘ದೇಶದ ಆಹಾರ ಸಂಸ್ಕರಣಾ ವಲಯವು ₹1 ಲಕ್ಷ ಕೋಟಿಗೂ ಹೆಚ್ಚಿನ ಹೂಡಿಕೆ ಪ್ರಸ್ತಾವಗಳನ್ನು ಆಕರ್ಷಿಸುವ ನಿರೀಕ್ಷೆ ಇದೆ’ ಎಂದು ಕೇಂದ್ರ ಆಹಾರ ಸಂಸ್ಕರಣಾ ಸಚಿವ ಚಿರಾಗ್ ಪಾಸ್ವಾನ್ ಹೇಳಿದ್ದಾರೆ.

  • ವಿಶ್ವ ಆಹಾರ ಭಾರತ ಶೃಂಗಸಭೆಯಲ್ಲಿ ಮಾತನಾಡಿದ ಅವರು,  ಈಗಾಗಲೇ  ರಿಲಯನ್ಸ್‌ ಕನ್ಸ್ಯೂಮರ್ ಪ್ರಾಡಕ್ಟ್ಸ್‌ ಲಿಮಿಟೆಡ್‌ (ಆರ್‌ಸಿಪಿಎಲ್‌) ಮತ್ತು ಕೋಕಾ–ಕೋಲಾ ಕಂಪನಿಗಳ ಘಟಕಗಳನ್ನು ಸ್ಥಾಪಿಸಲು ಅಂದಾಜು ₹65 ಸಾವಿರ ಕೋಟಿ ಹೂಡಿಕೆ ಮಾಡಲು ಸಹಿ ಹಾಕಿವೆ ಎಂದು ಹೇಳಿದ್ದಾರೆ. ವಿಶ್ವ ಆಹಾರ ಭಾರತ ಶೃಂಗಸಭೆ ಸೆಪ್ಟೆಂಬರ್‌ 28ರ ವರೆಗೆ ನಡೆಯಲಿದೆ.
  • ದೇಶದಾದ್ಯಂತ ಆಹಾರ ತಯಾರಿಕಾ ಘಟಕಗಳನ್ನು ಸ್ಥಾಪಿಸಲು ಆಹಾರ ಸಂಸ್ಕರಣಾ ಸಚಿವಾಲಯದ ಜೊತೆಗೆ ಆರ್‌ಸಿಪಿಎಲ್‌ ಒಪ್ಪಂದ ಮಾಡಿ ಕೊಂಡಿದೆ.  ಈ ಒಪ್ಪಂದದ ಮೌಲ್ಯ ₹40 ಸಾವಿರ ಕೋಟಿಯಾಗಿದೆ.
  • ಒಪ್ಪಂದದ ಪ್ರಕಾರ, ಆಹಾರ ಉತ್ಪನ್ನಗಳು ಮತ್ತು ಪಾನೀಯಗಳನ್ನು ತಯಾರಿಸಲು ಮಹಾರಾಷ್ಟ್ರದ ನಾಗ್ಪುರ ಮತ್ತು ಆಂಧ್ರ ಪ್ರದೇಶದ ಕರ್ನೂಲು ಜಿಲ್ಲೆಯಲ್ಲಿ ಘಟಕ ಸ್ಥಾಪಿಸಲಿದೆ. ಇದಕ್ಕೆ  ಆರ್‌ಸಿಪಿಎಲ್‌ ₹1,500 ಕೋಟಿಗೂ ಹೆಚ್ಚು ಹೂಡಿಕೆ ಮಾಡಲಿದೆ.
  • ಕೋಕಾ–ಕೋಲಾ ₹25,760 ಕೋಟಿ ಹೂಡಿಕೆ ಮಾಡಲಿದೆ. ಇದರಿಂದ 30 ಸಾವಿರ ನೇರ ಉದ್ಯೋಗ ಮತ್ತು 3 ಲಕ್ಷ ಪರೋಕ್ಷ ಉದ್ಯೋಗಾವಕಾಶಗಳನ್ನು ಸೃಷ್ಟಿಸುವ ನಿರೀಕ್ಷೆಯಿದೆ. ಈ ಯೋಜನೆಯ ಅನುಷ್ಠಾನವು ಈ ವರ್ಷ ಪ್ರಾರಂಭವಾಗಲಿದ್ದು, 2030ರ ವೇಳೆಗೆ ಪೂರ್ಣಗೊಳ್ಳುವ ಗುರಿಯನ್ನು ಹೊಂದಿದೆ ಎಂದು ಹೇಳಿದ್ದಾರೆ.
  • 97 ತೇಜಸ್ಜೆಟ್ಗಳ ನಿರ್ಮಾಣಕ್ಕೆ ಎಚ್ಎಎಲ್ ಜೊತೆಗೆ ಒಪ್ಪಂದ

ಸಂದರ್ಭ: ಭಾರತೀಯ ವಾಯುಪಡೆಗಾಗಿ ₹62,370 ಕೋಟಿ ವೆಚ್ಚದಲ್ಲಿ 97 ತೇಜಸ್ ಲಘು ಯುದ್ಧ ವಿಮಾನಗಳನ್ನು ಖರೀದಿಸಲು ರಕ್ಷಣಾ ಸಚಿವಾಲಯವು ಹಿಂದೂಸ್ಥಾನ್ ಏರೊನಾಟಿಕ್ಸ್ ಲಿಮಿಟೆಡ್ (ಎಚ್‌ಎಎಲ್‌) ಜೊತೆಗೆ ಒಪ್ಪಂದ ಮಾಡಿಕೊಂಡಿದೆ.

  • 2027–28ರ ವೇಳೆಗೆ ಈ ಯುದ್ಧ ವಿಮಾನಗಳನ್ನು ಎಚ್‌ಎಎಲ್ ವಿತರಿಸಲಿದೆ.
  • ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಭದ್ರತಾ ಸಂಪುಟ ಸಮಿತಿ (ಸಿಸಿಎಸ್‌) ಈ ಬೃಹತ್ ಖರೀದಿಗೆ ಒಪ್ಪಿಗೆ ನೀಡಿದ ಸುಮಾರು ಒಂದು ತಿಂಗಳ ನಂತರ ಒಪ್ಪಂದ ಮಾಡಿಕೊಳ್ಳಲಾಗಿದೆ.
  • ಸರ್ಕಾರಿ ಸ್ವಾಮ್ಯದ ಎಚ್‌ಎಎಲ್‌ಗೆ ನೀಡಲಾದ ಎರಡನೇ ಗುತ್ತಿಗೆ ಇದಾಗಿದೆ. 2021ರ ಫೆಬ್ರವರಿಯಲ್ಲಿ ವಾಯುಪಡೆಗಾಗಿ 83 ತೇಜಸ್ ಎಮ್‌ಕೆ–1ಎ ಜೆಟ್‌ಗಳನ್ನು ಖರೀದಿಸಲು ₹48,000 ಕೋಟಿಗಳ ಒಪ್ಪಂದವನ್ನು ಮಾಡಿಕೊಂಡಿತ್ತು.
  • ಲಡಾಖ್‌: ರಾಜ್ಯ ಸ್ಥಾನ, ಸ್ವಾಯತ್ತೆಗಾಗಿ ಹೋರಾಟ

2019ರ ಆಗಸ್ಟ್‌ 5. ಸಂವಿಧಾನದ 370ರ ವಿಧಿಯಡಿ ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನವನ್ನು ಕೇಂದ್ರ ಸರ್ಕಾರ ರದ್ದು ಮಾಡಿತ್ತು. ಅಲ್ಲದೇ ಜಮ್ಮು ಮತ್ತು ಕಾಶ್ಮೀರದಿಂದ ಲಡಾಖ್‌ ಅನ್ನು ಪ್ರತ್ಯೇಕಿಸಿ ಎರಡನ್ನೂ ಕೇಂದ್ರಾಡಳಿತ ಪ್ರದೇಶಗಳನ್ನಾಗಿ ರೂಪಿಸಿತ್ತು. ಕೇಂದ್ರದ ನಿರ್ಧಾರವನ್ನು ಜಮ್ಮು ಮತ್ತು ಕಾಶ್ಮೀರದ ರಾಜಕೀಯ ಪಕ್ಷಗಳು, ಮುಖಂಡರು ವಿರೋಧಿಸಿದ್ದರು. ಜನರು ಪ್ರತಿಭಟನೆ ನಡೆಸಿದ್ದರು. ಅದು ಹಿಂಸೆಗೂ ತಿರುಗಿತ್ತು. ಆದರೆ, ಪಕ್ಕದ ಲಡಾಖ್‌ ಶಾಂತವಾಗಿತ್ತು. ಅಲ್ಲಿನ ಮುಖಂಡರು ಕೇಂದ್ರದ ನಿರ್ಧಾರವನ್ನು ಸ್ವಾಗತಿಸಿದ್ದರು. ತಮ್ಮ ಬೇಡಿಕೆಗಳು ಈಡೇರುವ ಸಮಯ ಕೊನೆಗೂ ಬಂತು ಎಂಬುದು ಲಡಾಖ್‌ ಜನರ ನಿರೀಕ್ಷೆಯಾಗಿತ್ತು. ಆದರೆ, ಆರಂಭದಲ್ಲಿ ಕೇಂದ್ರದ ನಿರ್ಧಾರ ಸ್ವಾಗತಿಸಿದವರೇ ವರ್ಷವಾಗುವಷ್ಟರಲ್ಲಿ ಕೇಂದ್ರ ಸರ್ಕಾರದ ನಡೆಯನ್ನು ವಿರೋಧಿಸಲು ಆರಂಭಿಸಿದರು. ತಮ್ಮ ಬೇಡಿಕೆಗಳ ಈಡೇರಿಕೆಗಾಗಿ ಹೋರಾಟದ ದಾರಿ ಕಂಡುಕೊಂಡರು. ಪ್ರತಿಭಟನೆ, ರ‍್ಯಾಲಿ, ಉಪವಾಸ ಸತ್ಯಾಗ್ರಹಗಳಿಗೆ ಸೀಮಿತವಾಗಿದ್ದ ಹೋರಾಟ ಎರಡು ವರ್ಷಗಳಿಂದೀಚೆಗೆ ತೀವ್ರಗೊಂಡು, ಅದೀಗ ಹಿಂಸಾರೂಪ ತಾಳುವ ಮಟ್ಟಕ್ಕೆ ಏರಿದೆ. 

ಲಡಾಖ್‌ನ ಲೇಹ್‌ನಲ್ಲಿ ಬುಧವಾರ ನಡೆದ ಪ್ರತಿಭಟನೆಯು ಹಿಂಸಾಚಾರವಾಗಿ ಪರಿವರ್ತನೆಗೊಂಡು ನಾಲ್ವರು ಮೃತಪಟ್ಟಿದ್ದಾರೆ. ಹತ್ತಾರು ಮಂದಿ ಗಾಯಗೊಂಡಿದ್ದಾರೆ. ಲಡಾಖ್‌ಗೆ ರಾಜ್ಯದ ಸ್ಥಾನಮಾನ ನೀಡಬೇಕು. ಲಡಾಖ್‌ ಅನ್ನು ಸಂವಿಧಾನದ ಆರನೇ ಪರಿಚ್ಛೇದ‌ಕ್ಕೆ ಸೇರ್ಪಡೆಗೊಳಿಸಿ ಸ್ವಾಯತ್ತ ಪ್ರದೇಶ ಎಂದು ಘೋಷಿಸಬೇಕು ಎಂಬುದು ಲಡಾಖ್‌ ಜನರ ಪ್ರಮುಖ ಬೇಡಿಕೆ. 

‘ಝೆನ್‌ ಜಿ’ ಹೋರಾಟ: ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದ ಇಬ್ಬರು ತೀವ್ರ ಅಸ್ವಸ್ಥಗೊಂಡಿದ್ದು ಬುಧವಾರ ನಡೆದ ಪ್ರತಿಭಟನೆ, ಹಿಂಸಾಚಾರಕ್ಕೆ ನೆಪ. ಹಿಂಸೆಗೆ ತಿರುಗಿದ ಈ ಹೋರಾಟವನ್ನು ನೇಪಾಳದಲ್ಲಿ ಇತ್ತೀಚೆಗೆ ನಡೆದ ‘ಝೆನ್‌ ಜಿ’ ಪೀಳಿಗೆಯವರ ಪ್ರತಿಭಟನೆಗೆ ಹೋಲಿಸಲಾಗುತ್ತಿದೆ. ರಾಜ್ಯ ಸ್ಥಾನಮಾನ ನೀಡಬೇಕು ಎಂದು ಆಗ್ರಹಿಸಿ ನಡೆಯುತ್ತಿರುವ ಚಳವಳಿಯ ಮುಂಚೂಣಿಯಲ್ಲಿರುವ ಪರಿಸರವಾದಿ, ಶಿಕ್ಷಣ ತಜ್ಞ ಸೋನಮ್‌ ವಾಂಗ್‌ಚುಕ್‌ ಅವರೇ ಇದು ‘ಝೆನ್‌ ಜಿ’ ಹೋರಾಟ ಎಂದು ಹೇಳಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲೂ ಇದೇ ರೀತಿ ಬಿಂಬಿಸಲಾಗುತ್ತಿದೆ. ಹಿಂಸಾಚಾರ ನಿಯಂತ್ರಣಕ್ಕೆ ಬಂದಿದೆ. ಆದರೆ, ಲೇಹ್‌ ಇನ್ನೂ ಬೂದಿ ಮುಚ್ಚಿದ ಕೆಂಡದಂತಿದೆ. 

2019ರಲ್ಲಿ ವಿಶೇಷ ಸ್ಥಾನಮಾನ ರದ್ದುಪಡಿಸುವಾಗ ಜಮ್ಮು ಮತ್ತು ಕಾಶ್ಮೀರವನ್ನು ಕೇಂದ್ರಾಡಳಿತ ಪ್ರದೇಶವನ್ನಾಗಿ ಮಾಡಿದ್ದರೂ ಅಲ್ಲಿ ವಿಧಾನಸಭೆಯನ್ನು ಉಳಿಸಿಕೊಳ್ಳಲಾಗಿತ್ತು (ವಿಧಾನ ಪರಿಷತ್‌ ಅನ್ನು ರದ್ದುಪಡಿಸಲಾಗಿತ್ತು). ಆದರೆ, ಲಡಾಖ್‌ ಅನ್ನು ಶಾಸಕಾಂಗ ವ್ಯವಸ್ಥೆ ಇಲ್ಲದ ಕೇಂದ್ರಾಡಳಿತ ಪ್ರದೇಶವಾಗಿ ರೂಪಿಸಲಾಗಿತ್ತು. ಇದರಿಂದಾಗಿ ಲಡಾಖ್‌ನಲ್ಲಿ ರಾಜಕೀಯ ಶೂನ್ಯ ಆವರಿಸಿದೆ. ಕೇಂದ್ರ ಸರ್ಕಾರ ಲೆಫ್ಟಿನೆಂಟ್‌ ಗವರ್ನರ್‌ ಮೂಲಕ ನೇರವಾಗಿ ಆಡಳಿತ ನಡೆಸುವುದರಿಂದ ಸ್ಥಳೀಯರಿಗೆ ರಾಜಕೀಯ ಪ್ರಾತಿನಿಧ್ಯ ಇಲ್ಲದಂತಾಗಿದೆ, ಪ್ರಜಾಪ್ರಭುತ್ವದ ಹಕ್ಕುಗಳಿಗೆ ಧಕ್ಕೆಯಾಗುತ್ತಿದೆ ಎಂಬುದು ವಾಂಗ್‌ಚುಕ್‌ ಹಾಗೂ ಹೋರಾಟಗಾರರ ಆರೋಪ.

ಸೂಕ್ಷ್ಮ ಪರಿಸರ ವ್ಯವಸ್ಥೆ, ನೈಸರ್ಗಿಕ ಸಂಪತ್ತು ಹೊಂದಿರುವ ಈ ಪ್ರದೇಶದಲ್ಲಿ ಕೈಗಾರಿಕೆಗಳಿಗೆ, ಗಣಿಗಾರಿಕೆಗೆ ಕೇಂದ್ರ ಸರ್ಕಾರ ಅವಕಾಶ ನೀಡುತ್ತಿದೆ. ಇದರಿಂದ ಪರಿಸರ ನಾಶವಾಗುತ್ತಿದೆ. ಬುಡಕಟ್ಟು ಸಮುದಾಯಗಳಿಗೆ ತೊಂದರೆಯಾಗುತ್ತಿದೆ. ಲಡಾಖ್‌ನ ಸಾಂಸ್ಕೃತಿಕ ಅಸ್ಮಿತೆಗೂ ಧಕ್ಕೆಯಾಗುತ್ತಿದೆ. ಸ್ಥಳೀಯರಿಗೆ ಉದ್ಯೋಗಗಳು ಸಿಗುತ್ತಿಲ್ಲ ಎಂಬ ಆತಂಕ ಅವರದ್ದು. ಸ್ವಾಯತ್ತ ಪ್ರದೇಶವಾಗಿ ಘೋಷಿಸಿದರೆ, ಸ್ಥಳೀಯವಾಗಿ ರಾಜಕೀಯ ಪ್ರಾತಿನಿಧ್ಯ ಸಿಕ್ಕಿ, ಸ್ಥಳೀಯರೇ ಆಡಳಿತ ನಡೆಸಲು ಅನುಕೂಲವಾಗುತ್ತದೆ ಎಂಬುದು ಅವರ ವಾದ. ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು 2019ರಲ್ಲಿ ಲಡಾಖ್‌ ಅನ್ನು ಆರನೇ ಪರಿಚ್ಛೇದಕ್ಕೆ ಸೇರಿಸುವ ಭರವಸೆ ನೀಡಿತ್ತು. ಆದರೆ, ಅದನ್ನು ಇನ್ನೂ ಈಡೇರಿಸಿಲ್ಲ ಎಂಬುದು ಹೋರಾಟಗಾರರ ಕೋಪಕ್ಕೆ ಪ್ರಮುಖ ಕಾರಣ.

ಸಮಿತಿ ರಚನೆ: 2020ರಿಂದೀಚೆಗೆ ಲಡಾಖ್‌ನಲ್ಲಿ ಕಾರ್ಗಿಲ್‌ ಡೆಮಾಕ್ರಟಿಕ್‌ ಅಲಯನ್ಸ್‌ (ಕೆಡಿಎ) ಮತ್ತು ಲೇಹ್‌ ಅಪೆಕ್ಸ್‌ ಬಾಡಿ (ಎಲ್‌ಎಬಿ) ಅಡಿಯಲ್ಲಿ ನಿರಂತರವಾಗಿ ಪ್ರತಿಭಟನೆಗಳು ನಡೆಯುತ್ತಿದ್ದರಿಂದ ಅಲ್ಲಿನ ಜನರ ಬೇಡಿಕೆಗಳನ್ನು ಅಧ್ಯಯನ ನಡೆಸುವುದಕ್ಕಾಗಿ ಕೇಂದ್ರ ಸರ್ಕಾರ 2023ರ ಜನವರಿ 2ರಂದು ಉನ್ನತಾಧಿಕಾರ ಸಮಿತಿಯನ್ನು ರಚಿಸಿತ್ತು. ಕೇಂದ್ರ ಸರ್ಕಾರವು ಈ ವಿಚಾರವಾಗಿ ಲಡಾಖ್‌ ನಾಯಕತ್ವದೊಂದಿಗೆ ಹಲವು ಸುತ್ತಿನ ಮಾತುಕತೆಯನ್ನೂ ನಡೆಸಿದೆ. ಅಕ್ಟೋಬರ್‌ 6ರಂದು ಮತ್ತೊಂದು ಸುತ್ತಿನ ಮಾತುಕತೆ ನಿಗದಿಯಾಗಿದೆ.

ಈ ಹಿಂದೆ, ಲಡಾಖ್‌ನ ಮುಖಂಡರು ಕೇಂದ್ರ ಗೃಹಸಚಿವ ಅಮಿತ್‌ ಶಾ ಅವರನ್ನು ಭೇಟಿ ಮಾಡಿ ತಮ್ಮ ಬೇಡಿಕೆಯನ್ನು ಮುಂದಿಟ್ಟ ವೇಳೆ ರಾಜ್ಯ ಸ್ಥಾನಮಾನ ನೀಡಲು ಮತ್ತು ಆರನೇ ಪರಿಚ್ಛೇದ‌ಕ್ಕೆ ಸೇರ್ಪಡೆಗೊಳಿಸಲು ಅವರು ನಿರಾಕರಿಸಿದ್ದರು ಎನ್ನಲಾಗಿದ್ದು, ಇದು ಚಳವಳಿ ನಡೆಸುತ್ತಿರುವವರ ಅಸಮಾಧಾನಕ್ಕೆ ಕಾರಣ ಎಂದು ಹೇಳಲಾಗುತ್ತಿದೆ. 

ಆಧಾರ: ಪಿಟಿಐ, ಜಮ್ಮು ಮತ್ತು ಕಾಶ್ಮೀರ ಪುನರ್‌ರಚನೆ ಕಾಯ್ದೆ, ಪಿಐಬಿ, ಮಾಧ್ಯಮ ವರದಿಗಳು

ಏನಿದು 6ನೇ ಪರಿಚ್ಛೇದ?

ಸಂವಿಧಾನದ ವಿಧಿ 244(2) ಮತ್ತು ವಿಧಿ 275(1) ಅಡಿಯಲ್ಲಿ ಈ ಪರಿಚ್ಛೇದ‌ವನ್ನು ಸೇರ್ಪಡೆಗೊಳಿಸಲಾಗಿದೆ.

ಭಾರತದ ಈಶಾನ್ಯ ಭಾಗದಲ್ಲಿರುವ ಅಸ್ಸಾಂ, ಮೇಘಾಲಯ, ತ್ರಿಪುರಾ ಮತ್ತು ಮಿಜೋರಾಂ ರಾಜ್ಯಗಳ ಬುಡಕಟ್ಟು ಜನರು ವಾಸಿಸುವ ಪ್ರದೇಶಗಳಲ್ಲಿ ಆಡಳಿತ ನಿರ್ವಹಣೆಯ ಅವಕಾಶವನ್ನು ಈ ಪರಿಚ್ಛೇದ‌ ನೀಡುತ್ತದೆ. 

ಆದಿವಾಸಿಗಳು ಹೆಚ್ಚಿನ ಸಂಖ್ಯೆಯಲ್ಲಿ ವಾಸಿಸುವ ಪ್ರದೇಶದಲ್ಲಿ ಸ್ವಾಯತ್ತ ಜಿಲ್ಲಾ ಕೌನ್ಸಿಲ್‌ಗಳನ್ನು ಮತ್ತು ಪ್ರಾದೇಶಿಕ ಕೌನ್ಸಿಲ್‌ಗಳನ್ನು ಸ್ಥಾಪಿಸಬಹುದು ಎಂದು ಇದು ಹೇಳುತ್ತದೆ.

ಸ್ವಯಂ ಆಡಳಿತ ನಡೆಸಲು, ಈಶಾನ್ಯ ರಾಜ್ಯದ ಆದಿವಾಸಿ ಸಮುದಾಯಗಳ ಸಾಂಸ್ಕೃತಿಕ, ಸಾಮಾಜಿಕ ಮತ್ತು ಆರ್ಥಿಕ ಹಕ್ಕುಗಳನ್ನು ರಕ್ಷಿಸುವುದಕ್ಕಾಗಿ ಕೌನ್ಸಿಲ್‌ಗಳಿಗೆ ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗದ ಅಧಿಕಾರವನ್ನು ಈ ಪರಿಚ್ಛೇದ‌ ನೀಡುತ್ತದೆ. 

ಯಾವುದೇ ಜಿಲ್ಲೆಯ ಒಟ್ಟು ಜನಸಂಖ್ಯೆಯಲ್ಲಿ ಪರಿಶಿಷ್ಟ ಪಂಗಡಕ್ಕೆ ಮತ್ತು ಬುಡಕಟ್ಟು ಸಮುದಾಯಕ್ಕೆ ಸೇರಿದ ಜನರ ಪ್ರಮಾಣ ಶೇ 50ಕ್ಕಿಂತಲೂ ಹೆಚ್ಚು ಇದ್ದರೆ, ಆ ಪ್ರದೇಶವನ್ನು 6ನೇ ಪರಿಚ್ಛೇದ‌ಕ್ಕೆ ಸೇರಿಸಲು ಸಂವಿಧಾನದಲ್ಲಿ ಅವಕಾಶವಿದೆ.

ಕೇಂದ್ರದ ಅಂಕಿ ಅಂಶಗಳ ಪ್ರಕಾರ ಲಡಾಖ್‌ನಲ್ಲಿ ಬುಡಕಟ್ಟು ಸಮುದಾಯಗಳ ಜನಸಂಖ್ಯೆ ಶೇ 97ರಷ್ಟಿದೆ. 

ಆಯೋಗ ಶಿಫಾರಸು: ಲಡಾಖ್‌ನಲ್ಲಿ ಬುಡಕಟ್ಟು ಸಮುದಾಯದವರು ಹೆಚ್ಚಿನ ಸಂಖ್ಯೆಯಲ್ಲಿರುವುದರಿಂದ ಆ ಪ್ರದೇಶವನ್ನು ಸಂವಿಧಾನದ ಐದನೇ/ಆರನೇ ಪರಿಚ್ಛೇದ‌ಕ್ಕೆ ಸೇರ್ಪಡೆಗೊಳಿಸಬಹುದು ಎಂದು ಪರಿಶಿಷ್ಟ ಪಂಗಡಗಳ ರಾಷ್ಟ್ರೀಯ ಆಯೋಗ 2019ರ ಸೆಪ್ಟೆಂಬರ್‌ನಲ್ಲೇ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಿತ್ತು. 

ಪ್ರಮುಖ ಬೇಡಿಕೆಗಳು

lರಾಜ್ಯದ ಸ್ಥಾನಮಾನ ನೀಡಬೇಕು

lಲಡಾಖ್‌ನ ಸೂಕ್ಷ್ಮ ಪರಿಸರ, ಸಂಪನ್ಮೂಲಗಳು, ಜನರ ಭೂ ಒಡೆತನದ ಹಕ್ಕು ಮತ್ತು ಸಾಂಸ್ಕೃತಿಕ ಅನನ್ಯತೆಗೆ ಸಾಂವಿಧಾನಿಕ ರಕ್ಷಣೆ ಒದಗಿಸಬೇಕು (ಆರನೇ ಪರಿಚ್ಛೇದ‌ಕ್ಕೆ ಸೇರಿಸಬೇಕು)

lಲೇಹ್‌ ಮತ್ತು ಕಾರ್ಗಿಲ್‌ಗೆ ಪ್ರತ್ಯೇಕ ಲೋಕಸಭಾ ಕ್ಷೇತ್ರ ಬೇಕು (ಸದ್ಯ ಲಡಾಖ್‌ ಒಂದೇ ಕ್ಷೇತ್ರ ಇದೆ)

lಉದ್ಯೋಗದಲ್ಲಿ ಮೀಸಲಾತಿ ಸೌಲಭ್ಯ ಕಲ್ಪಿಸಬೇಕು

ಕೇಂದ್ರ ಸರ್ಕಾರದ ವಾದವೇನು?

ಸಂಸತ್ತಿನಲ್ಲಿ, ಸುಪ್ರೀಂಕೋರ್ಟ್‌ನಲ್ಲಿ ಜಮ್ಮು ಮತ್ತು ಕಾಶ್ಮೀರಕ್ಕೆ ಮತ್ತೆ ರಾಜ್ಯದ ಸ್ಥಾನಮಾನ ನೀಡಲು ಬದ್ಧ ಎಂದು ಕೇಂದ್ರ ಸರ್ಕಾರ ಹಲವು ಬಾರಿ ಹೇಳಿದೆ. ಆದರೆ, ಲಡಾಖ್‌ ಬಗ್ಗೆ ಅದು ಈ ರೀತಿ ಹೇಳಿಲ್ಲ. 

ಲಡಾಖ್‌ ಆಡಳಿತಕ್ಕಾಗಿ ಲಡಾಖ್‌ ಸ್ವಾಯತ್ತ ಗಿರಿ ಅಭಿವೃದ್ಧಿ ಮಂಡಳಿಗಳನ್ನು (ಲೇಹ್‌ ಮತ್ತು ಕಾರ್ಗಿಲ್‌ಗೆ) ರಚಿಸಲಾಗಿದೆ. ಇವು ಸ್ವಾಯತ್ತ ಸಂಸ್ಥೆಯಾಗಿದ್ದು, ಆಡಳಿತ, ಆರ್ಥಿಕ ಅಭಿವೃದ್ಧಿ, ಶಿಕ್ಷಣ, ಆರೋಗ್ಯ ಸೇರಿದಂತೆ ವಿವಿಧ ಕ್ಷೇತ್ರಗಳನ್ನು ನಿರ್ವಹಿಸಲು ಇವುಗಳಿಗೆ ಅಧಿಕಾರ ಇದೆ ಎಂಬುದು ಕೇಂದ್ರ ಸರ್ಕಾರದ ವಾದ. 

ಆದರೆ, ಈ ಮಂಡಳಿಯ ಅಧಿಕಾರ ಸೀಮಿತವಾಗಿದೆ ಎಂಬುದು ಹೋರಾಟಗಾರರ ಹೇಳಿಕೆ  

ಆಯೋಗ ಶಿಫಾರಸು

ಲಡಾಖ್‌ನಲ್ಲಿ ಬುಡಕಟ್ಟು ಸಮುದಾಯದವರು ಹೆಚ್ಚಿನ ಸಂಖ್ಯೆಯಲ್ಲಿರುವುದರಿಂದ ಆ ಪ್ರದೇಶವನ್ನು ಸಂವಿಧಾನದ ಐದನೇ/ಆರನೇ ಶೆಡ್ಯೂಲಿಗೆ ಸೇರ್ಪಡೆಗೊಳಿಸಬಹುದು ಎಂದು ಪರಿಶಿಷ್ಟ ಪಂಗಡಗಳ ರಾಷ್ಟ್ರೀಯ ಆಯೋಗ 2019ರ ಸೆಪ್ಟೆಂಬರ್‌ನಲ್ಲೇ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಿತ್ತು. 

ಆಯೋಗದ 119ನೇ ಸಭೆಯಲ್ಲಿ ಈ ವಿಚಾರವನ್ನು ವಿಸ್ತೃತವಾಗಿ ಚರ್ಚೆ ನಡೆಸಿ, ನಂತರ ಕೇಂದ್ರಕ್ಕೆ ಶಿಫಾರಸು ಮಾಡಲಾಗಿತ್ತು. 

ನಿರಾಸಕ್ತಿ ಏಕೆ?

ಲಡಾಖ್‌ನಲ್ಲಿ ಭಾರತ–ಚೀನಾ ಗಡಿ ಪ್ರದೇಶವಿದ್ದು, ಎರಡೂ ದೇಶಗಳ ನಡುವಿನ ಗಡಿ ಬಿಕ್ಕಟ್ಟು ಇನ್ನೂ ಬಗೆಹರಿದಿಲ್ಲ. ಆಗಾಗ ಘರ್ಷಣೆಯೂ ನಡೆಯುತ್ತಿರುತ್ತದೆ. ಅತ್ಯಂತ ಸೂಕ್ಷ್ಮವಾಗಿರುವ ಈ ಪ್ರದೇಶದ ಆಡಳಿತ ನೇರವಾಗಿ ಕೇಂದ್ರ ಸರ್ಕಾರದ ವ್ಯಾಪ್ತಿಗೆ ಬಂದರೆ ಗಡಿ ಭದ್ರತೆಯ ದೃಷ್ಟಿಯಿಂದ ಸಾಕಷ್ಟು ಅನುಕೂಲವಿದೆ ಎಂಬ ಕಾರಣಕ್ಕೆ ರಾಜ್ಯದ ಸ್ಥಾನಮಾನ ಅಥವಾ ಸಾಂವಿಧಾನಿಕವಾಗಿ ಇನ್ನಷ್ಟು ಸ್ವಾಯತ್ತೆ ನೀಡಲು ಕೇಂದ್ರ ಸರ್ಕಾರ ಆಸಕ್ತಿ ತೋರುತ್ತಿಲ್ಲ ಎಂದು ಹೇಳಲಾಗುತ್ತಿದೆ. 

  • ಪ್ಯಾಲೆಸ್ಟೀನ್‌: ಭಾರತ ನಾಯಕತ್ವ ಪ್ರದರ್ಶಿಸಬೇಕು

ಸಂದರ್ಭ: ಪ್ಯಾಲೆಸ್ಟೀನ್‌ ವಿಚಾರದಲ್ಲಿ ಭಾರತವು ನಾಯಕತ್ವವನ್ನು ಪ್ರದರ್ಶಿಸಬೇಕಾದ ಅಗತ್ಯವಿದೆ ಎಂದು ಕಾಂಗ್ರೆಸ್‌ ಸಂಸದೀಯ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಪ್ರತಿಪಾದಿಸಿದ್ದಾರೆ.

  • ಪ್ಯಾಲೆಸ್ಟೀನ್ಅನ್ನು ದೇಶವೆಂದು ಗುರುತಿಸುವಲ್ಲಿ ಬ್ರಿಟನ್‌, ಕೆನಡಾ, ಪೋರ್ಚುಗಲ್‌, ಆಸ್ಟ್ರೇಲಿಯಾ ಜತೆಗೆ ಇದೀಗ ಫ್ರಾನ್ಸ್ಸಹ ಸೇರಿಕೊಂಡಿದೆ. ದೀರ್ಘ ಕಾಲದಿಂದ ಬಳಲಿರುವ ಪ್ಯಾಲೆಸ್ಟೀನ್‌ ಜನರ ಕಾನೂನುಬದ್ಧ ಆಕಾಂಕ್ಷೆಗಳನ್ನು ಈಡೇರಿಸಲು ಇದು ಮಹತ್ವದ ಹೆಜ್ಜೆಯಾಗಿದೆ’ ಎಂದು ವಿವರಿಸಿರುವ ಅವರು, ವಿಶ್ವಸಂಸ್ಥೆಯ 193 ದೇಶಗಳ ಪೈಕಿ 150ಕ್ಕೂ ಹೆಚ್ಚು ದೇಶಗಳು ಪ್ಯಾಲೆಸ್ಟೀನ್‌ ಅನ್ನು ಬೆಂಬಲಿಸಿವೆ ಎಂದೂ ಉಲ್ಲೇಖಿಸಿದ್ದಾರೆ.
  • ಭಾರತವು 1988 ನವೆಂಬರ್‌ 18ರಂದು ಪ್ಯಾಲೆಸ್ಟೀನ್ಅನ್ನು ದೇಶವಾಗಿ ಗುರುತಿಸುವ ಮೂಲಕ ನಾಯಕತ್ವ ಪ್ರದರ್ಶಿಸಿತ್ತು.
  • ದಕ್ಷಿಣ ಆಫ್ರಿಕಾದಲ್ಲಿನ ವರ್ಣಭೇದ ನೀತಿಯನ್ನು ಸ್ವಾತಂತ್ರ್ಯ ಪೂರ್ವದಲ್ಲಿಯೇ ಭಾರತ ಪ್ರಶ್ನಿಸಿತ್ತು. ಅಲ್ಲದೆ 1954–62ರ ಅಲ್ಜೀರಿಯಾ ಸ್ವಾತಂತ್ರ್ಯ ಹೋರಾಟದ ವೇಳೆ ಭಾರತ ಅಲ್ಜೀರಿಯಾ ಪರ ಬಲವಾಗಿ ಧ್ವನಿಯೆತ್ತಿತ್ತು.
  • ಪೂರ್ವ ಪಾಕಿಸ್ತಾನದಲ್ಲಿನ ನರಮೇಧವನ್ನು ತಡೆಯಲು ಭಾರತ ಮಧ್ಯ ಪ್ರವೇಶಿಸಿತ್ತು. ಆ ಬಳಿಕ 1971ರಲ್ಲಿ ಬಾಂಗ್ಲಾದೇಶ ಜನನವಾಯಿತು ಎಂಬ ಮಾಹಿತಿಯನ್ನು ಅವರು ಲೇಖನದಲ್ಲಿ ಉಲ್ಲೇಖಿಸಿದ್ದಾರೆ. 
  • ನ್ಯಾಯ, ಗುರುತು, ಘನತೆ ಮತ್ತು ಮಾನವ ಹಕ್ಕುಗಳಿಗಾಗಿ ನಡೆಯುತ್ತಿರುವ ಪ್ಯಾಲೆಸ್ಟೀನ್‌ ಹೋರಾಟದ ಬಗ್ಗೆ ಭಾರತ ನಾಯಕತ್ವವನ್ನು ಪ್ರದರ್ಶಿಸಬೇಕಿದೆ ಎಂದು ಅವರು ಆಗ್ರಹಿಸಿದ್ದಾರೆ.
  • ತಿರುಮಲ: . ಕಮಾಂಡ್‌– ಕಂಟ್ರೋಲ್ಕೇಂದ್ರ ಸ್ಥಾಪನೆ

ಸಂದರ್ಭ: ವಿಶ್ವದ ಅತೀ ಶ್ರೀಮಂತ ಹಿಂದೂ ದೇವಾಲಯವಾದ ತಿರುಮಲದ ತಿಮ್ಮಪ್ಪನ ಸನ್ನಿಧಾನದಲ್ಲಿ ದೇಶದಲ್ಲೇ ಮೊದಲ ಕೃತಕ ಬುದ್ಧಿಮತ್ತೆ (ಎ.ಐ) ಆಧಾರಿತ ಇಂಟಿಗ್ರೇಟೆಡ್‌ ಕಮಾಂಡ್‌ ಆ್ಯಂಡ್‌ ಕಂಟ್ರೋಲ್‌ ಸೆಂಟರ್‌ (ಐಸಿಸಿಸಿ)ಗೆ ಚಾಲನೆ ನೀಡಲಾಗಿದೆ.

  • ಪ್ರತಿ ಗಂಟೆಗೆ 4,500 ಮಂದಿ ವೆಂಕಟೇಶ್ವರನ ದರ್ಶನ ಪಡೆಯುತ್ತಿದ್ದು, ಹೊಸ ಸೌಲಭ್ಯವು ಭಕ್ತಿ ಹಾಗೂ ಅತ್ಯಾಧುನಿಕ ತಂತ್ರಜ್ಞಾನದ ಸಮ್ಮಿಳಿತವಾಗಿದೆ.
  • ಅನಿವಾಸಿ ಭಾರತೀಯರು ನೀಡಿದ ದಾನದಿಂದ ಹೊಸ ವ್ಯವಸ್ಥೆಯನ್ನು ಜಾರಿಗೆ ತರಲಾಗಿದೆ. 6 ಸಾವಿರ ಎ.ಐ ನಿಗಾ ಕ್ಯಾಮೆರಾಗಳು ಕಮಾಂಡ್‌ ಕೇಂದ್ರಗಳಿಗೆ ನಿರಂತರ ಲೈವ್‌ ವಿಡಿಯೊ ರವಾನಿಸಲಿವೆ. ಇದರಿಂದ, ದಟ್ಟಣೆ ವೇಳೆ ಸರತಿಯ ಸಾಲು ನಿರ್ವಹಣೆಯ ಜೊತೆಗೆ ಕ್ಷಿಪ್ರವಾಗಿ ಸ್ಪಂದಿಸಲು ನೆರವಾಗಲಿದೆ.
  • ಗ್ರಾಮ ಸಹಾಯಕರಿಗೆ ಇಡುಗಂಟು

ಸಂದರ್ಭ: ಕಂದಾಯ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಗ್ರಾಮ ಸಹಾಯಕರು ಕೆಲಸದಿಂದ ನಿವೃತ್ತಿ ಹೊಂದಿದ ನಂತರ ಅಥವಾ ಕೆಲಸದಲ್ಲಿ ಇರುವಾಗಲೇ ಮೃತರಾದರೆ ₹10 ಲಕ್ಷಗಳ ಇಡುಗಂಟು ನೀಡಲು ನಡೆದ ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿದೆ.

  • ಅಲ್ಲದೇ, ಈ ಕೆಲಸವನ್ನು ಗ್ರೂಪ್‌ ‘ಡಿ’ ಹುದ್ದೆಯಲ್ಲಿ ಸಕ್ರಮಗೊಳಿಸುವುದು ಅಥವಾ ಗೌರವ ಧನವನ್ನು ₹15,000 ದಿಂದ ₹27,000ಕ್ಕೆ ಹೆಚ್ಚಿಸುವುದು ಇವೆರಡಲ್ಲಿ ಒಂದು ಆಯ್ಕೆ ಮಾಡಿಕೊಳ್ಳಲು ಅವಕಾಶ ನೀಡಲು ಸಭೆಯಲ್ಲಿ ತೀರ್ಮಾನಿಸಲಾಗಿದೆ ಎಂದರು.
  • ಬಾಡಿಗೆ ಮಸೂದೆಗೆ ಒಪ್ಪಿಗೆ: ಕೇಂದ್ರ ಸರ್ಕಾರವು ‘ಜನ ವಿಶ್ವಾಸ’ ಕಾಯ್ದೆಯನ್ನು ಜಾರಿಗೆ ತಂದಿದ್ದು, ಇದನ್ನು ರಾಜ್ಯದಲ್ಲಿ ಜಾರಿಗೆ ತರಲು ಕರ್ನಾಟಕ ಬಾಡಿಗೆ ಕಾಯ್ದೆ 1999ರ ವಿವಿಧ ಕಲಂಗಳ ಅಡಿಯಲ್ಲಿ ದಂಡ, ಅಪರಾಧ ನಿಬಂಧನೆ ಗಳಿಗೆ ತಿದ್ದುಪಡಿ ಮಾಡಲು ಸಂಪುಟ ಒಪ್ಪಿಗೆ ನೀಡಿದೆ.
  • ಇದು ಕೈಗಾರಿಕಾ ಕಟ್ಟಡಗಳು, ಶೆಡ್‌ಗಳ ಬಾಡಿಗೆ ಸಂಬಂಧಿಸಿ ದ್ದಾಗಿದೆ. ಈ ತಿದ್ದುಪಡಿ ಮಸೂದೆಯನ್ನು ವಿಧಾನ ಮಂಡಲದ ಅಧಿವೇಶನ ದಲ್ಲಿ ಮಂಡಿಸ ಲಾಗುವುದು. ಈ ತಿದ್ದುಪಡಿ ಮೂಲಕ ದಂಡ ಪ್ರಮಾಣವನ್ನು ತರ್ಕಬದ್ಧ ಗೊಳಿಸಲಾಗುವುದು ಎಂದು ಪಾಟೀಲ ಹೇಳಿದರು.
  • ಮುಖ್ಯವಾಗಿ ವಿವಿಧ ಅಪರಾಧದ ಪ್ರಕರಣಗಳನ್ನು ಅಪರಾಧವಲ್ಲ ಎಂದು ನಿರ್ಣಯಿಸುವುದು, ವಿವಿಧ ರೀತಿಯ ದಂಡಗಳನ್ನು ಪರಿಷ್ಕರಿಸುವುದು, ನ್ಯಾಯಾಂಗ ಅಧಿಕಾರಿ ಯನ್ನು ನೇಮಿಸುವುದು, ಮೇಲ್ಮನವಿ ಘಟಕದ ಸ್ಥಾಪನೆ ಮತ್ತು ದಂಡ ಪ್ರಮಾಣವನ್ನು ಕಾಲ ಕಾಲಕ್ಕೆ ಹೆಚ್ಚಿಸುವ ಅಂಶವನ್ನು ತಿದ್ದುಪಡಿ ಒಳಗೊಂಡಿದೆ ಎಂದರು.
  • ವಿಪತ್ತು ಉಪಶಮನಕ್ಕೆ ₹1,005 ಕೋಟಿ

ಸಂದರ್ಭ: ರಾಜ್ಯದ ವಿಪತ್ತು ಉಪಶಮನ ನಿಧಿಯಡಿ ₹1,005 ಕೋಟಿ ವೆಚ್ಚದಲ್ಲಿ ವಿವಿಧ ಜಿಲ್ಲೆಗಳಲ್ಲಿ ಉಪಶಮನ ಕಾಮಗಾರಿಗಳನ್ನು ಕೈಗೊಳ್ಳಲು ನಡೆದ ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿದೆ.

  • ಕರಾವಳಿ ಮತ್ತು ಮಲೆನಾಡಿನ ಜಿಲ್ಲೆಗಳಾದ ಚಿಕ್ಕಮಗಳೂರು, ದಕ್ಷಿಣ ಕನ್ನಡ, ಕೊಡಗು, ಶಿವಮೊಗ್ಗ, ಉತ್ತರ ಕನ್ನಡ ಮತ್ತು ಹಾಸನ ಜಿಲ್ಲೆಗಳಲ್ಲಿನ ಪುನರಾವರ್ತಿತ ಭೂಕುಸಿತವನ್ನು ತಡೆಗಟ್ಟಲು ₹466.93 ಕೋಟಿ ವೆಚ್ಚದಲ್ಲಿ 720 ಕಾಮಗಾರಿ ಕೈಗೊಳ್ಳಲು ಒಪ್ಪಿಗೆ ನೀಡಲಾಗಿದೆ ಎಂದರು.
  • ರೈತರು ತಮ್ಮ ಜಮೀನಿನಲ್ಲಿ ಬಿದ್ದ ಮಳೆಯ ನೀರನ್ನು ಹೊಂಡಗಳಲ್ಲಿ ಸಂಗ್ರಹಿಸಿ ಆಪತ್ಕಾಲದಲ್ಲಿ ಬೆಳೆಗಳಿಗೆ ಬಳಸಲುಕೃಷಿ ಭಾಗ್ಯಯೋಜನೆಯಡಿ ಹಣಕಾಸು ನೆರವು ಒದಗಿಸಲು ತೀರ್ಮಾನಿಸಲಾಗಿದೆ. ಇದಕ್ಕಾಗಿ ₹200 ಕೋಟಿ ಅನುದಾನವನ್ನು ಕೃಷಿ ಇಲಾಖೆಗೆ ಬಿಡುಗಡೆ ಮಾಡಲು ಅನುಮೋದನೆ ನೀಡಲಾಗಿದೆ ಎಂದು ಹೇಳಿದರು.
  • ಸಣ್ಣ ನೀರಾವರಿ ಇಲಾಖೆ ವಿಶ್ವ ಬ್ಯಾಂಕ್ನಿಂದ ₹550 ಕೋಟಿ ಆರ್ಥಿಕ ನೆರವು ಪಡೆದುಕೊಂಡಿದೆ. ಇದರಲ್ಲಿ ₹300 ಕೋಟಿಯನ್ನು ಬೆಂಗಳೂರು ನಗರದ ದ್ವಿತೀಯ ಹಂತದಲ್ಲಿ ಸಂಸ್ಕರಿಸಿದ ನೀರನ್ನು ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ ಪೂರೈಕೆ ಮಾಡಲು ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಗಳ ಕೆರೆಗಳಿಗೆ ಲಿಫ್ಟ್‌–4 ವೃಷಭಾವತಿ ವ್ಯಾಲಿ ಯೋಜನೆಹಂತ 2 ಮೂಲಕ ನೀರನ್ನು ತುಂಬಿಸುವ ಯೋಜನೆಗೆ ಬಳಸಲು ಒಪ್ಪಿಗೆ ನೀಡಲಾಗಿದೆ ಎಂದು ಅವರು ತಿಳಿಸಿದರು.

ಪ್ರಮುಖ ತೀರ್ಮಾನಗಳು:

  • 15 ನೇ ಹಣಕಾಸು ಆಯೋಗದ ಯೋಜನೆಯಡಿ ರಾಜ್ಯ ಅಗ್ನಿಶಾಮಕ ಮತ್ತು ತುರ್ತುಸೇವೆಗಳ ಇಲಾಖೆ ವಿಸ್ತರಣೆ ಮತ್ತು ಆಧುನೀಕರಣಕ್ಕೆ ₹329 ಕೋಟಿ ಪರಿಷ್ಕೃತ ಅಂದಾಜಿಗೆ ಒಪ್ಪಿಗೆ
  • ನವದೆಹಲಿ ಚಾಣಕ್ಯಪುರಿ ಸರ್ದಾರ್‌ ಪಟೇಲ್‌ ಮಾರ್ಗದಲ್ಲಿರುವ ಕರ್ನಾಟಕ ಭವನ–2(ಶರಾವತಿ) ಕಟ್ಟಡದ ನವೀಕರಣಕ್ಕೆ ₹16.30 ಕೋಟಿ
  • ಪ್ರಾದೇಶಿಕ ಸಾರಿಗೆ ಕಚೇರಿಗಳಲ್ಲಿ 2019 ರ ಮಾರ್ಚ್‌ 31 ಕ್ಕೆ ಮೊದಲು ನೋಂದಣಿಯಾದ ವಾಹನಗಳ ದಾಖಲೆಗಳನ್ನು ಡಿಜಿಟಲೀಕರಣ ಗೊಳಿಸುವ ಯೋಜನೆಗೆ ₹40 ಕೋಟಿ
  • ಕೆಎಸ್‌ಆರ್‌ಪಿ ಅಧೀನದಲ್ಲಿ ಹೊಸದಾಗಿ ಸ್ಥಾಪಿಸಿರುವ ಎರಡು ಐಆರ್‌ಬಿ ಪಡೆಗಳಿಗೆ ಅವಶ್ಯವಿರುವ ವಸತಿ ಮತ್ತು ವಸತಿಯೇತರ ಸೌಕರ್ಯಗಳನ್ನು ಕಲ್ಪಿಸಲು ₹60 ಕೋಟಿ
  • ಸಮಗ್ರ ವಿಶ್ವವಿದ್ಯಾಲಯ ಮತ್ತು ಕಾಲೇಜುಗಳ ನಿರ್ವಹಣಾ ತಂತ್ರಾಂಶ 2 ನೇ ಆವೃತ್ತಿಯನ್ನು ₹40.29 ಕೋಟಿ ಅಂದಾಜು ವೆಚ್ಚದಲ್ಲಿ ಅಭಿವೃದ್ಧಿಪಡಿಸಲು ಸಮ್ಮತಿ
  • ಕರ್ನಾಟಕ ಕೌಶಲ ಅಭಿವೃದ್ಧಿ ನೀತಿಗೆ ಅಸ್ತು

ಸಂದರ್ಭ: ಕರ್ನಾಟಕದ ಯುವ ಜನತೆ ಜಾಗತಿಕ ಮಟ್ಟದಲ್ಲಿ ಉದ್ಯೋಗ ಗಿಟ್ಟಿಸುವ ನಿಟ್ಟಿನಲ್ಲಿ ಕೌಶಲ ಸಾಮರ್ಥ್ಯವನ್ನು ಹೆಚ್ಚಿಸಲು ‘ಕರ್ನಾಟಕ ಕೌಶಲ ಅಭಿವೃದ್ಧಿ ನೀತಿ 2025–2032’ ಕ್ಕೆ ಸಂಪುಟ ಸಭೆ ಒಪ್ಪಿಗೆ ನೀಡಿದೆ.

ಕೌಶಲ ನೀತಿ ಪ್ರಮುಖ ಅಂಶಗಳು:

  • ಕಲಿಕೆ ಜೊತೆಗೆ ಕೌಶಲ, ನನ್ನ ವೃತ್ತಿ ನನ್ನ ಆಯ್ಕೆ ಯೋಜನೆಗೆ ಆದ್ಯತೆ.  ಅಪ್ರೆಂಟಿಸ್‌ಶಿಪ್‌, ಐಟಿಐ ತರಬೇತಿ ಮೂಲಕ ವಿಶೇಷ ಸಹಯೋಗ. ತಾಂತ್ರಿಕ ಮತ್ತು ಕೈಗಾರಿಕಾ ಬದಲಾವಣೆಗಳಿಗೆ ತಕ್ಕಂತೆ ನಿರಂತರ ಕಲಿಕೆಗೆ ಒತ್ತು.  ಮಹಿಳೆಯರು, ಅಂಗವಿಕಲರು, ನಗರ ಪ್ರದೇಶದ ಬಡವರು, ದಮನಿತ ಸಮುದಾಯಗಳಿಗೆ ತರಬೇತಿ. ಐಟಿಐಗಳ ಆಧುನೀಕರಣ, ಜಿಟಿಟಿಸಿ ವಿಸ್ತರಣೆ ಮತ್ತು ಗ್ರಾಮೀಣ ಮತ್ತು ನಗರ ಕೌಶಲ ಕೇಂದ್ರಗಳ ಸ್ಥಾಪನೆ ಮತ್ತು ಮೂಲಸೌಕರ್ಯ ಹೆಚ್ಚಳಕ್ಕೆ ಕ್ರಮ ತೆಗೆದುಕೊಳ್ಳಲಾಗುವುದು.
  • ಬೆಂಗಳೂರು ಸಿಟಿ ದಿಶಾಂಕ್ಬಿಡುಗಡೆ

ಸಂದರ್ಭ: ಗ್ರೇಟರ್ ಬೆಂಗಳೂರು ಪ್ರಾಧಿಕಾರ ಹಾಗೂ 5 ನಗರ ಪಾಲಿಕೆಗಳು ಸೇರಿದಂತೆ ಎಲ್ಲ ಮಾಹಿತಿಯನ್ನು ತಿಳಿಯಲು ಮೊಬೈಲ್‌ ತಂತ್ರಾಂಶ ‘ಬೆಂಗಳೂರು ಸಿಟಿ ದಿಶಾಂಕ್’ ಬಿಡುಗಡೆ ಮಾಡಲಾಗಿದೆ.

  • ಇದು ಜಿಐಎಸ್ ಮೊಬೈಲ್ ಅಪ್ಲಿಕೇಶನ್ ಆಗಿದ್ದು, ಜಿಬಿಎ, 5 ನಗರ ಪಾಲಿಕೆಗಳು, ವಲಯ, ವಿಧಾನಸಭಾ ಕ್ಷೇತ್ರ ಹಾಗೂ ವಾರ್ಡ್‌ಗಳ (ಹಳೆಯ 198 ವಾರ್ಡ್‌) ಅಧಿಕೃತ ಗಡಿಗಳನ್ನು ವೀಕ್ಷಿಸಬಹುದು. ಮುಂದಿನ ದಿನಗಳಲ್ಲಿ ಮತ್ತಷ್ಟು ವಿವರಗಳಿರುವ ಜಿಐಎಸ್ ಮಾಹಿತಿ ಸೇರಿಸಲಾಗುವುದು.
  • ಜೂನಿಯರ್ ಶೂಟಿಂಗ್‌: ಅನುಷ್ಕಾಗೆ ಚಿನ್ನದ ಪದಕ

ಸಂದರ್ಭ: ಭಾರತ ತಂಡವು, ಐಎಸ್‌ಎಸ್‌ಎಫ್‌ ಜೂನಿಯರ್ ವಿಶ್ವಕಪ್‌ನಲ್ಲಿ ಭರ್ಜರಿ ಆರಂಭ ಮಾಡಿತು.

  • ಮೊದಲ ದಿನವಾದ ಗುರುವಾರ 50 ಮೀ. ರೈಫಲ್ ಪ್ರೋನ್ ಸ್ಪರ್ಧೆಯಲ್ಲಿ ಮಹಿಳಾ ತಂಡ ಮೂರೂ ಪದಕ ಗೆದ್ದು ಕ್ಲೀನ್ ಸ್ವೀಪ್ ಮಾಡಿದರೆ, ಪುರುಷರ ತಂಡ ಬೆಳ್ಳಿ ಮತ್ತು ಕಂಚಿನ ಪದಕ ಗೆದ್ದುಕೊಂಡಿತು.
  • ಕರ್ನಾಟಕದ ಅನುಷ್ಕಾ ತೋಕೂರು ಅವರು ಡಾ.ಕರ್ಣಿ ಸಿಂಗ್ ರೇಂಜ್‌ನಲ್ಲಿ ನಡೆದ ಸ್ಪರ್ಧೆಯಲ್ಲಿ 621.6 ಸ್ಕೋರ್‌ನೊಡನೆ ಚಿನ್ನ ಗೆದ್ದರು.
  • 18 ವರ್ಷ ವಯಸ್ಸಿನ ಅನ್ಶಿಕಾ (619.2) ಬೆಳ್ಳಿ ಗೆದ್ದರೆ, 20 ವರ್ಷ ವಯಸ್ಸಿನ ಆಧ್ಯಾ ಅಗರವಾಲ್ (615.9) ಕಂಚಿನ ಪದಕ ಗೆದ್ದರು.
  • ಕಜಕಸ್ತಾನದಲ್ಲಿ ಇತ್ತೀಚೆಗೆ ನಡೆದ ಏಷ್ಯನ್ ಚಾಂಪಿಯನ್‌ಷಿಪ್‌ನಲ್ಲಿ ಅನುಷ್ಕಾ ಅವರು 50 ಮೀ. ರೈಫಲ್ 3 ಪೊಸಿಷನ್ ಸ್ಪರ್ಧೆಯಲ್ಲಿ ಚಿನ್ನಕ್ಕೆ ಗುರಿಯಿಡುವಲ್ಲಿ ಯಶಸ್ವಿ ಆಗಿದ್ದರು.
  • ದೀಪೇಂದ್ರ ಸಿಂಗ್ ಶೆಖಾವತ್ ಮತ್ತು ರೋಹಿತ್ ಕನ್ಯಾನ ಅವರು ಪುರುಷರ ವಿಭಾಗದ 50 ಮೀ. ರೈಪಲ್ ಪ್ರೋನ್‌ ಸ್ಪರ್ಧೆಯಲ್ಲಿ ಕ್ರಮವಾಗಿ ಬೆಳ್ಳಿ ಮತ್ತು ಕಂಚು ಗೆದ್ದರು. ತಟಸ್ಥ ಅಥ್ಲೀಟ್ಸ್ ತಂಡದ ಕಮಿಲ್‌ ನುರಿಯಾಕ್‌ಮೆಟೋವ್‌ (618.9) ಚಿನ್ನ ಗೆದ್ದರು. ದೀಪೇಂದ್ರ 617.9 ಮತ್ತು ರೋಹಿತ್‌ 616.3 ಸ್ಕೋರ್

ಪ್ರಚಲಿತ ವಿದ್ಯಮಾನಗಳು: 25ನೇ ಸೆಪ್ಟೆಂಬರ್ 2025

  • ಭಿತ್ತಿ ಉಳಿಸಿ ದೂರ ಸರಿದರು

ಸಂದರ್ಭ: ಭೈರಪ್ಪನವರ ಜೊತೆಗೆ ಕನ್ನಡ ಸಾರಸ್ವತಲೋಕದ ಒಂದು ಮಹಾಧ್ಯಾಯ ಅಂತ್ಯ ಗೊಂಡಿದೆ. ಭೈರಪ್ಪ ಅವರು ತಮ್ಮ ಸುದೀರ್ಘ ಬದುಕಿನಲ್ಲಿ ಕನ್ನಡ ಸಾಹಿತ್ಯಲೋಕಕ್ಕೆ ಮತ್ತು ಸಹೃದಯರಿಗೆ ರಸಾನಂದದ ಜಲಪಾತವನ್ನೇ  ಒದಗಿಸಿದ್ದಾರೆ.

  • ಪದ್ಮಭೂಷಣ’, ‘ಸರಸ್ವತಿ ಸಮ್ಮಾನ್ಪುರಸ್ಕೃತ ಕಾದಂಬರಿಕಾರ ಪ್ರೊ.ಎಸ್‌.ಎಲ್‌.ಭೈರಪ್ಪ (94).
  • ಕೇವಲ ಕಾದಂಬರಿಗಳನ್ನು ರಚಿಸುತ್ತೇನೆ ಎಂದು ಭೀಷ್ಮನಿಷ್ಠೆಯಿಂದ ಸಂಕಲ್ಪ ಮಾಡಿ ಬರೆದವರು ಭೈರಪ್ಪನವರು. ಸಾಹಿತ್ಯಕೃಷಿಯ ಪ್ರಾರಂಭದ ಅವಧಿಯಲ್ಲಿ ಸಣ್ಣಕತೆಗಳನ್ನು ಬರೆದರಾದರೂ ನಂತರ ತಮ್ಮ ಶಕ್ತಿ ಮತ್ತು ವಿಸ್ತಾರ ದೃಷ್ಟಿಗೆ ಅನುಕೂಲವಾಗುವಂತಹ ಕಾದಂಬರಿಯ ಪ್ರಕಾರವನ್ನೇ ಅವರ ಅಭಿವ್ಯಕ್ತಿಗೆ ಆರಿಸಿಕೊಂಡರು.
  • ತಾವು ಅಪಾರ ಪ್ರೀತಿ ಇಟ್ಟುಕೊಂಡಿದ್ದ ಹಿಂದೂಸ್ಥಾನಿ ಶೈಲಿಯ ಸಂಗೀತದಂತೆಯೇ ಮಾನವ ಸ್ವಭಾವದ ಹಲವು ಮಗ್ಗಲುಗಳನ್ನು ವಿಸ್ತಾರವಾಗಿ ಅನ್ವೇಷಿಸುವಂತಹ ರೀತಿಯಲ್ಲಿ ಕಾದಂಬರಿಗಳನ್ನು ರಚಿಸಿದರು. ಇವು ಭಾರತೀಯತೆಯ ಶ್ರುತಿಗೂ, ಜೀವನದ ಸತ್ಯ, ಶಿವ, ಸೌಂದರ್ಯಗಳ ಲಯಸಂಚಾರಕ್ಕೂ ಬದ್ಧವಾಗಿವೆ.

  • ಕತಾರ್ನಲ್ಲಿ ಯುಪಿಐ ಸೇವೆ

ಸಂದರ್ಭ: ಕ್ಯೂಆರ್‌ ಕೋಡ್ ಆಧಾರಿತ ಯುಪಿಐ ಪಾವತಿ ವ್ಯವಸ್ಥೆ ಯನ್ನು ಕತಾರ್‌ನ ಆದ್ಯಂತ ಬಳಕೆಗೆ ಲಭ್ಯವಾಗಿಸಲಾಗಿದೆ ಎಂದು ಎನ್‌ಪಿಸಿಐ ಹೇಳಿದೆ.

  • ಭಾರತದಿಂದ ಕತಾರ್‌ಗೆ ತೆರಳುವವರು ಅಲ್ಲಿನ ಪ್ರಮುಖ ಪ್ರವಾಸಿ ತಾಣಗಳಲ್ಲಿ ಇನ್ನು ಮುಂದೆ ಯುಪಿಐ ಬಳಸಿ ಹಣ ಪಾವತಿಸಬಹುದು ಎಂದು ಎನ್‌ಪಿಸಿಐ ಪ್ರಕಟಣೆ ತಿಳಿಸಿದೆ.
  • ಕತಾರ್‌ಗೆ ಭೇಟಿ ನೀಡುವ ವಿದೇಶಿಗರ ಪಟ್ಟಿಯಲ್ಲಿ ಭಾರತೀಯರು ಎರಡನೆಯ ಸ್ಥಾನದಲ್ಲಿದ್ದಾರೆ. ಯುಪಿಐ ಪಾವತಿ ಸೌಲಭ್ಯವು ಕತಾರ್‌ನಲ್ಲಿ ಲಭ್ಯವಾಗಿರುವ ಕಾರಣದಿಂದಾಗಿ ಅಲ್ಲಿ ವಹಿವಾಟು ನಡೆಸುವುದು ಸುಲಭವಾಗುತ್ತದೆ, ಭಾರತೀಯರು ಅಲ್ಲಿ ನಗದು ಇರಿಸಿಕೊಳ್ಳಬೇಕಾದ ಅಗತ್ಯ ಇನ್ನಿಲ್ಲವಾಗುತ್ತದೆ, ಕರೆನ್ಸಿ ವಿನಿಮಯದ ರಗಳೆ ತಪ್ಪುತ್ತದೆ ಎಂದು ಪ್ರಕಟಣೆ ಹೇಳಿದೆ.
  • ಈ ವ್ಯವಸ್ಥೆಯಿಂದಾಗಿ ಕತಾರ್‌ನಲ್ಲಿನ ಚಿಲ್ಲರೆ ವಹಿವಾಟುಗಳು ಹಾಗೂ ಪ್ರವಾಸೋದ್ಯಮಕ್ಕೆ ಕೂಡ ಅನುಕೂಲ ಆಗಲಿದೆ ಎಂದು ಅದು ಹೇಳಿದೆ.
  • ₹69 ಸಾವಿರ ಕೋಟಿ ಪ್ಯಾಕೇಜ್

ಸಂದರ್ಭ: ಭಾರತದಲ್ಲಿ ಹಡಗು ನಿರ್ಮಾಣ ಚಟುವಟಿಕೆಗಳಿಗೆ ಮತ್ತೆ ಜೀವ ನೀಡುವ ಉದ್ದೇಶದಿಂದ ಕೇಂದ್ರ ಸಚಿವ ಸಂಪುಟವು ₹69,725 ಕೋಟಿ ಮೊತ್ತದ ಪ್ಯಾಕೇಜ್‌ಗೆ ಒಪ್ಪಿಗೆ ನೀಡಿದೆ.

  • ಸರ್ಕಾರದ ಅಧಿಕೃತ ಹೇಳಿಕೆ ಪ್ರಕಾರ ಈ ಪ್ಯಾಕೇಜ್‌ ಅಡಿಯಲ್ಲಿ ನಾಲ್ಕು ಅಂಶಗಳು ಇರಲಿವೆ. ದೇಶದಲ್ಲಿ ಹಡಗು ನಿರ್ಮಾಣ ಸಾಮರ್ಥ್ಯವನ್ನು ಹೆಚ್ಚಿಸುವುದು, ದೀರ್ಘಾವಧಿಯಲ್ಲಿ ಈ ಚಟುವಟಿಕೆಗಳಿಗೆ ಹಣಕಾಸಿನ ನೆರವು ಹೆಚ್ಚಿಸುವುದು, ಹೊಸ ಹಾಗೂ ಈಗಾಗಲೇ ಇರುವ ಹಡಗು ನಿರ್ಮಾಣ ಘಟಕಗಳಿಗೆ ಉತ್ತೇಜನ ನೀಡುವುದು, ತಾಂತ್ರಿಕ ಸಾಮರ್ಥ್ಯ ಮತ್ತು ಕೌಶಲವನ್ನು ಹೆಚ್ಚಿಸುವುದು ಆ ಅಂಶಗಳು.
  • ಹಡಗು ನಿರ್ಮಾಣ ವಲಯದಲ್ಲಿ ದೇಶವು ‘ಆತ್ಮನಿರ್ಭರ’ ಆಗಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಈಚೆಗೆ ಹೇಳಿದ್ದರು. ಭಾರತವು ವಿದೇಶಿ ಹಡಗು ನಿರ್ಮಾಣ ಕಂಪನಿಗಳಿಂದ ಸೇವೆ ಪಡೆಯುವುದಕ್ಕೆ ವಾರ್ಷಿಕ ಅಂದಾಜು ₹6 ಲಕ್ಷ ಕೋಟಿ ಪಾವತಿಸುತ್ತಿದೆ ಎಂದು ತಿಳಿಸಿದ್ದರು.
  • ‘50 ವರ್ಷಗಳ ಹಿಂದೆ ನಾವು ನಡೆಸುತ್ತಿದ್ದ ವ್ಯಾಪಾರ ಚಟುವಟಿಕೆಗಳಲ್ಲಿ ಬಳಕೆಯಾಗುತ್ತಿದ್ದ ಹಡಗು‌ಗಳ ಪೈಕಿ ಶೇ 40ರಷ್ಟು ಭಾರತದಲ್ಲೇ ತಯಾರಾದ ವಾಗಿದ್ದವು. ಆದರೆ ಈಗ ಅವುಗಳ ಪಾಲು ಶೇ 5ಕ್ಕೆ ಕುಸಿದಿದೆ’ ಎಂದು ಪ್ರಧಾನಿ ಹೇಳಿದ್ದರು.
  • ಜಾಗತಿಕ ಮಟ್ಟದಲ್ಲಿ ಹಡಗು ನಿರ್ಮಾಣ ಮಾರುಕಟ್ಟೆಯಲ್ಲಿ ಈಗ ಭಾರತದ ಪಾಲು ಶೇ 0.06ರಷ್ಟು ಮಾತ್ರವೇ ಇದೆ. ಉದ್ಯಮದಲ್ಲಿ ಭಾರತವು 20ನೇ ಸ್ಥಾನ ಪಡೆದಿದೆ. ಆದರೆ 2030ರೊಳಗೆ ಮೊದಲ 10 ಸ್ಥಾನಗಳ ಪೈಕಿ ಒಂದರಲ್ಲಿ ತಾನಿರಬೇಕು, 2047 ವೇಳೆಗೆ ಟಾಪ್–5 ದೇಶಗಳ ಪಟ್ಟಿಯಲ್ಲಿ ತಾನಿರಬೇಕು ಎಂದು ಭಾರತ ಬಯಸಿದೆ.
  • ಈಗ ಘೋಷಣೆ ಮಾಡಿರುವ ಪ್ಯಾಕೇಜ್‌ನಿಂದಾಗಿ ದೇಶದಲ್ಲಿ ಸರಿ ಸುಮಾರು 30 ಲಕ್ಷ ಉದ್ಯೋಗ ಸೃಷ್ಟಿ ಯಾಗುವ ನಿರೀಕ್ಷೆ ಇದೆ, ದೇಶದಲ್ಲಿ ₹4.5 ಲಕ್ಷ ಕೋಟಿ ಹೂಡಿಕೆ ಆಗಲಿದೆ ಎಂದು ಸರ್ಕಾರದ ಹೇಳಿಕೆಯಲ್ಲಿ ತಿಳಿಸಲಾಗಿದೆ.
  • ಆರ್ಥಿಕ ಪರಿಣಾಮ ಮಾತ್ರವೇ ಅಲ್ಲದೆ, ಈ ಉಪಕ್ರಮವು ದೇಶದ ಇಂಧನ ಮತ್ತು ಆಹಾರ ಭದ್ರತೆಯನ್ನು ಹೆಚ್ಚಿಸುತ್ತದೆ, ಮಹತ್ವದ ಸಮುದ್ರ ಮಾರ್ಗಗಳಲ್ಲಿ ಸ್ಥಿರತೆ ತರುತ್ತದೆ ಎಂದು ಹೇಳಿಕೆಯಲ್ಲಿ ವಿವರಿಸಲಾಗಿದೆ.
  • ಎಫ್ಎಂಸಿಜಿ: ತೂಕ ಹೆಚ್ಚಳಕ್ಕೆ ಒಲವು         

ಸಂದರ್ಭ: ಪರಿಷ್ಕೃತ ಜಿಎಸ್‌ಟಿ ದರವು ಜಾರಿಗೆ ಬಂದ ನಂತರದಲ್ಲಿ ಎಫ್‌ಎಂಸಿಜಿ ವಲಯದ ಕಂಪನಿಗಳನ್ನು ಸಮಸ್ಯೆಯೊಂದು ಕಾಡುತ್ತಿದೆ.

  • ₹2, ₹5, ₹10 ಬೆಲೆಗೆ ಮಾರಾಟ ಆಗುತ್ತಿದ್ದ ವಿವಿಧ ಉತ್ಪನ್ನಗಳ ಬೆಲೆಯನ್ನು ಜಿಎಸ್‌ಟಿ ಇಳಿಕೆಗೆ ಅನುಗುಣವಾಗಿ ಕಂಪನಿಗಳು ತಗ್ಗಿಸಿವೆ. ಆದರೆ, ಜಿಎಸ್‌ಟಿ ಪರಿಷ್ಕರಣೆಯ ನಂತರದ ಬೆಲೆಯು ವಸ್ತುಗಳ ಖರೀದಿಗೆ, ಮಾರಾಟಕ್ಕೆ ಅನುಕೂಲಕರವಾದ ಹಂತದಲ್ಲಿ ಉಳಿದಿಲ್ಲ.
  • ಉದಾಹರಣೆಗೆ, ₹5ಕ್ಕೆ ಮಾರಾಟ ಆಗುತ್ತಿದ್ದ ಜನಪ್ರಿಯ ಪಾರ್ಲೆ–ಜಿ ಬಿಸ್ಕತ್ ಪ್ಯಾಕಿನ ಬೆಲೆಯು ಈಗ ₹4.50 ಆಗಿದೆ. ಈ ಹಿಂದೆ ₹2ಕ್ಕೆ ಮಾರಾಟ ಆಗುತ್ತಿದ್ದ ಶಾಂಪೂ ಪೌಚ್‌ನ ಬೆಲೆ ಈಗ ₹1.75 ಆಗಿದೆ. ಇಂತಹ ಪೌಚ್‌ಗಳಲ್ಲಿ, ಪೊಟ್ಟಣಗಳಲ್ಲಿ ಇರುವ ಉತ್ಪನ್ನಗಳ ತೂಕವನ್ನು ಹೆಚ್ಚು ಮಾಡಲು ತಕ್ಷಣಕ್ಕೆ ಸಾಧ್ಯವಾಗದೆ ಇರುವ ಕಾರಣಕ್ಕೆ, ಬೆಲೆಯನ್ನು ಈ ಬಗೆಯಲ್ಲಿ ಕಡಿಮೆ ಮಾಡಲಾಗಿದೆ ಎಂದು ಕಂಪನಿಯ ಪ್ರತಿನಿಧಿಗಳು ಹೇಳಿದ್ದಾರೆ.
  • ಸರ್ಕಾರದ ನಿರ್ದೇಶನವನ್ನು ಪಾಲಿಸುವ ಉದ್ದೇಶದಿಂದ ಜನಪ್ರಿಯ ಬೆಲೆ ಶ್ರೇಣಿಯ ಉತ್ಪನ್ನ ಗಳನ್ನು ಈ ಬಗೆಯಲ್ಲಿ ಅಸಾಂಪ್ರದಾಯಿಕ ಬೆಲೆಗೆ ಮಾರಾಟ ಮಾಡಲಾಗುತ್ತಿದೆ ಎಂದು ಉದ್ಯಮದ ಪ್ರತಿನಿಧಿಗಳು ಹೇಳಿದ್ದಾರೆ. ಆದರೆ ಇದು ತಾತ್ಕಾಲಿಕ ಕ್ರಮ ಮಾತ್ರ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
  • ‘ಇದು ನೂರಕ್ಕೆ ನೂರರಷ್ಟು ತಾತ್ಕಾಲಿಕ ಕ್ರಮ… ಅಕ್ಟೋಬರ್‌ ಮತ್ತು ನವೆಂಬರ್‌ನಲ್ಲಿ ಬಳಸುವ ಪೊಟ್ಟಣಗಳು ಮುದ್ರಣ ಆಗಿವೆ. ಈಗ ತೂಕದಲ್ಲಿ ಬದಲಾವಣೆ ತಂದು ಎಂಆರ್‌ಪಿಯನ್ನು ಮೊದಲಿನ ಹಂತದಲ್ಲಿ ಇರಿಸುವುದು ಕಷ್ಟ. ಹೀಗಾಗಿ, ನಾವು ಜಿಎಸ್‌ಟಿ ಪರಿಷ್ಕರಣೆಯ ಪ್ರಯೋಜನವನ್ನು ಈ ಬಗೆಯ ಅಸಾಂಪ್ರದಾಯಿಕ ಕ್ರಮದ ಮೂಲಕ ಗ್ರಾಹಕರಿಗೆ ವರ್ಗಾವಣೆ ಮಾಡುತ್ತಿದ್ದೇವೆ’ ಎಂದು ಪಾರ್ಲೆ ಪ್ರೊಡಕ್ಟ್ಸ್‌ನ ಉಪಾಧ್ಯಕ್ಷ ಮಯಾಂಕ್ ಶಾ ತಿಳಿಸಿದ್ದಾರೆ.
  • ಈ ಬೆಲೆಗೆ ಬಿಸ್ಕತ್ತಿನ ಪೊಟ್ಟಣ ಖರೀದಿಸುವಲ್ಲಿ ಗ್ರಾಹಕರು ಸಮಸ್ಯೆ ಅನುಭವಿಸುತ್ತಿದ್ದಾರೆಯೇ ಎಂಬ ಪ್ರಶ್ನೆಗೆ ಅವರು, ‘ಗ್ರಾಹಕರು ಒಂದಕ್ಕಿಂತ ಹೆಚ್ಚು ಪೊಟ್ಟಣ ಖರೀದಿಸಬಹುದು ಅಥವಾ ಯುಪಿಐ ಮೂಲಕ ಪಾವತಿ ಮಾಡಬಹುದು’ ಎಂದು ಉತ್ತರಿಸಿದರು.
  • ‘ಇವು ಕಂಪನಿಗಳು ಅನುಸರಿಸುತ್ತಿರುವ ಅಲ್ಪಾವಧಿಯ ಕ್ರಮಗಳು. ಕಂಪನಿಗಳು ಉತ್ಪನ್ನಗಳ ತೂಕವನ್ನು ಹೆಚ್ಚು ಮಾಡಿ ಜನಪ್ರಿಯ ಬೆಲೆ ಶ್ರೇಣಿಯಾದ ₹2, ₹5 ಹಾಗೂ ₹10ನ್ನು ಮತ್ತೆ ಜಾರಿಗೆ ತರುತ್ತವೆ. ಏಕೆಂದರೆ ನಾಲ್ಕೂವರೆ ರೂಪಾಯಿ ಪಾವತಿ ಮಾಡುವುದು ವಾಸ್ತವದಲ್ಲಿ ಸುಲಭವಲ್ಲ’ ಎಂದು ನುವಾಮಾ ಇನ್‌ಸ್ಟಿಟ್ಯೂಷನ್ ಈಕ್ವಿಟಿಸ್ ಸಂಸ್ಥೆಯ ಅಬ್ನೀಶ್ ರಾಯ್ ಹೇಳಿದ್ದಾರೆ.
  • ಭಾರತದ ಭೂ ಪ್ರದೇಶ ಖಾಲಿ ಮಾಡಿ: ಪಾಕ್ಗೆ ಭಾರತ ತರಾಟೆ

ಸಂದರ್ಭ: ‘ಪಾಕಿಸ್ತಾನವು ಭಯೋತ್ಪಾದಕರಿಗೆ ಆಶ್ರಯ ನೀಡಿ, ತನ್ನ ಸ್ವಂತ ಜನರ ಮೇಲೆ ಬಾಂಬ್‌ ದಾಳಿ ನಡೆಸುವ ಬದಲು ಅಲ್ಲಿನ ಆರ್ಥಿಕ ಸುಧಾರಣೆಗೆ ಗಮನಹರಿಸಲಿ’ ಎಂದು ಭಾರತ ತೀಕ್ಷ್ಣವಾಗಿ ಹೇಳಿದೆ.

  • ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಮಂಡಳಿಯ (ಯುಎನ್‌ಎಚ್‌ಆರ್‌ಸಿ) 60ನೇ ಅಧಿವೇಶವನದಲ್ಲಿ ಮಾತನಾಡಿದ ಜಿನಿವಾದಲ್ಲಿರುವ  ವಿಶ್ವಸಂಸ್ಥೆಯ ಭಾರತದ ಕಾಯಂ ಕಾನ್ಸುಲರ್‌ ಕ್ಷಿತಿಜ್‌ ತ್ಯಾಗಿ, ವಿಶ್ವಸಂಸ್ಥೆಯ ವೇದಿಕೆಯಲ್ಲಿ ಭಾರತದ ವಿರುದ್ಧ ಆಧಾರ ರಹಿತ ಮತ್ತು ಪ್ರಚೋದನಕಾರಿ ಹೇಳಿಕೆ ನೀಡಿದ ಪಾಕ್‌ ನಿಯೋಗವನ್ನು ತೀವ್ರ ತರಾಟೆಗೆ ತೆಗೆದುಕೊಂಡರು.
  • ‘ವಿರೋಧಾಭಾಸವನ್ನೇ ಸಾರುವ ಪಾಕ್‌ ನಿಯೋಗವು ವಿಶ್ವಸಂಸ್ಥೆಯ ವೇದಿಕೆಯನ್ನು ಭಾರತದ ವಿರುದ್ಧ ಆಧಾರ ರಹಿತ  ಆರೋಪ ಮಾಡಲು ದುರ್ಬಳಕೆ ಮಾಡಿಕೊಳ್ಳುತ್ತಿದೆ’ ಎಂದು ತ್ಯಾಗಿ ಆಕ್ಷೇಪ ವ್ಯಕ್ತಪಡಿಸಿದರು. ವಾರದ ಹಿಂದೆ ಪಾಕಿಸ್ತಾನದ ಖೈಬರ್‌ ಪಖ್ತುಂಖ್ವಾ ಪ್ರಾಂತ್ಯದಲ್ಲಿ 24 ಜನರನ್ನು ಬಲಿ ಪಡೆದ ಸ್ಫೋಟವನ್ನು ನಿರ್ದಿಷ್ಟವಾಗಿ ಹೆಸರಿಸದೆ, ‘ಪಾಕ್‌ ಮೊದಲು ತನ್ನ ದೇಶದ ಆರ್ಥಿಕ ಸ್ಥಿತಿ ಮತ್ತು ಅಲ್ಲಿನ ಮಾನವ ಹಕ್ಕುಗಳ ಸುಧಾರಣೆಗೆ ಗಮನ ಹರಿಸಲಿ’ ಎಂದು ತಿರುಗೇಟು ನೀಡಿದರು.
  • ಪಾಕ್‌ ಆಕ್ರಮಿತ ಕಾಶ್ಮೀರವನ್ನು ಉಲ್ಲೇಖಿಸಿ, ‘ನೀವು ನಮ್ಮ ಭೂಪ್ರದೇಶವನ್ನು ಅಪೇಕ್ಷಿಸುವ ಬದಲು, ಅಕ್ರಮವಾಗಿ ಆಕ್ರಮಿಸಿಕೊಂಡಿರುವ ಭಾರತದ ಭೂ ಪ್ರದೇಶವನ್ನು ಖಾಲಿ ಮಾಡುವುದೇ ಒಳ್ಳೆಯದು’ ಎಂದು ಅವರು ಎಚ್ಚರಿಸಿದರು.
  • ಪಾಕಿಸ್ತಾನವು  ಭಯೋತ್ಪಾದನೆಯನ್ನು ರಫ್ತು ಮಾಡುವುದರಿಂದ ದೂರ ಇದ್ದು, ಕುಸಿದಿರುವ ಆರ್ಥಿಕತೆಯನ್ನು ಮೇಲೆತ್ತುವ ಕೆಲಸವನ್ನು ಮೊದಲು ಮಾಡಲಿ ಎಂದು ಅವರು ಹೇಳಿದ್ದಾರೆ.
  • ಪರಿಶೀಲನಾ ವಿಧಾನಜಾರಿ: ಹೆಸರು ಅಳಿಸಿ ಹಾಕುವುದರ ದುರುಪಯೋಗ ತಪ್ಪಿಸಲು ಚುನಾವಣಾ ಆಯೋಗ ಕ್ರಮ
  • ಮತದಾರರ ಪಟ್ಟಿಯಿಂದ ಹೆಸರು ಅಳಿಸಿ ಹಾಕುವ ಸೌಲಭ್ಯದ ದುರುಪಯೋಗ ತಪ್ಪಿಸಲು ಚುನಾವಣಾ ಆಯೋಗವು ಮೊಬೈಲ್‌ ಒಟಿಪಿ ಆಧಾರಿತ ‘ಇ–ಪರಿಶೀಲನಾ ವಿಧಾನ’ವನ್ನು ಜಾರಿಗೊಳಿಸಿದೆ.
  • ಪಟ್ಟಿಯಿಂದ ಹೆಸರು ತೆಗೆದುಹಾಕಲು ಅಥವಾ ಪಟ್ಟಿಯಲ್ಲಿ ಹೆಸರು ಸೇರ್ಪಡೆ ಮಾಡುವುದಕ್ಕೆ ಆಕ್ಷೇಪಣೆ ಸಲ್ಲಿಸುವ ವ್ಯಕ್ತಿಗಳ ಮೊಬೈಲ್‌ ಸಂಖ್ಯೆಗೆ ಇನ್ನು ಮುಂದೆ ‘ಒಟಿಪಿ’ ಬರಲಿದೆ. ಈ ಒಟಿಪಿ ನಮೂದಿಸಿದ ಬಳಿಕವೇ ಮುಂದಿನ ಪ್ರಕ್ರಿಯೆ ನಡೆಯಲಿದೆ.
  • ಮತದಾರರ ಪಟ್ಟಿಯಿಂದ ಹೆಸರು ಅಳಿಸಿ ಹಾಕಲು ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸುವಾಗ, ಬೇರೆ ವ್ಯಕ್ತಿಯ ಹೆಸರು ಮತ್ತು ಮೊಬೈಲ್‌ ಸಂಖ್ಯೆ ದುರ್ಬಳಕೆ ಆಗುವ  ಸಾಧ್ಯತೆ ಇತ್ತು. ಇದನ್ನು ತಪ್ಪಿಸಲು ‘ಇ–ಪರಿಶೀಲನಾ ವಿಧಾನ ಜಾರಿಗೆ ತರಲಾಗಿದೆ. ಮತದಾರರ ಪಟ್ಟಿಯಲ್ಲಿ ಏನೇ ಪರಿಷ್ಕರಣೆ ಆಗುವುದಿದ್ದರೂ ಅದಕ್ಕೂ ಮುನ್ನ ಮತದಾರನ ಮೊಬೈಲ್‌ಗೆ ಒಟಿಪಿ ಬರುತ್ತದೆ’ ಎಂದು ಅಧಿಕಾರಿಯೊಬ್ಬರು ಹೇಳಿದರು.
  • ‘ಮತದಾರರು ಸಂಬಂಧಿಸಿದ ಕ್ಷೇತ್ರದ ಮತದಾರರ ಪಟ್ಟಿಯಿಂದ ತಮ್ಮ ಹೆಸರನ್ನು ಅಳಿಸಿ ಹಾಕುವಂತೆ ಕೋರಿ ಆನ್‌ಲೈನ್‌ ಮೂಲಕ ನಮೂನೆ –7 ಸಲ್ಲಿಸಬಹುದು. ಆದರೆ, ನಮೂನೆ–7 ಸಲ್ಲಿಕೆಯಾದ ಕೂಡಲೇ ಸ್ವಯಂಚಾಲಿತವಾಗಿ ತಮ್ಮ ಹೆಸರು ಅಳಿಸಿ ಹೋಗುತ್ತದೆ ಎಂದರ್ಥವಲ್ಲ’ ಎಂದು ಆಯೋಗ ಸ್ಪಷ್ಟಪಡಿಸಿದೆ.
  • ಕರ್ನಾಟಕದ ಆಳಂದ ವಿಧಾನಸಭಾ ಕ್ಷೇತ್ರದಲ್ಲಿ 5,994 ಮತದಾರರ ಹೆಸರು ಗಳನ್ನು ಪಟ್ಟಿಯಿಂದ ಕೈಬಿಡಲು ಯತ್ನಿಸಲಾಗಿತ್ತು ಎಂದು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಈಚೆಗೆ ಆರೋಪಿಸಿದ್ದರು. ಅದರ ಬೆನ್ನಲ್ಲೇ ಚುನಾವಣಾ ಆಯೋಗ ‘ಇ–ಪರಿಶೀಲನಾ ವಿಧಾನ’ ಜಾರಿಗೊಳಿಸಿದೆ.
  • ‘ಜ್ಞಾನೇಶ್‌ಜೀ ನಾವು ಮತಕಳ್ಳತನ ಕಂಡುಹಿಡಿದೆವು. ಆನಂತರ ನಿಮಗೆ ಬೀಗ ಹಾಕಲು ನೆನಪಾಯಿತು. ಈಗ ನಾವು ಇದರ ಹಿಂದಿನ ಕಳ್ಳರನ್ನೂ ಹಿಡಿಯುತ್ತೇವೆ’ ಎಂದು ರಾಹುಲ್‌ ಗಾಂಧಿ ಪೋಸ್ಟ್‌ ಮಾಡಿದ್ದಾರೆ.

5,994 ಅರ್ಜಿ ತಿರಸ್ಕೃತ

  • ‘ಆಳಂದ ವಿಧಾನಸಭಾ ಕ್ಷೇತ್ರದಲ್ಲಿ ಹೆಸರು ಅಳಿಸಿ ಹಾಕಲು 6,018 ಜನರು ಆನ್‌ಲೈನ್‌ ಮೂಲಕ ನಮೂನೆ –7 ಸಲ್ಲಿಸಿದ್ದರು. ಪರಿಶೀಲಿಸಿದಾಗ ಇದರಲ್ಲಿ 24 ಅರ್ಜಿಗಳು ಮಾತ್ರ ನೈಜವಾಗಿದ್ದವು. ಉಳಿದ 5,994 ಅರ್ಜಿಗಳು ತಪ್ಪಾಗಿದ್ದು, ಅವುಗಳನ್ನು ತಿರಸ್ಕರಿಸಲಾಯಿತು’ ಎಂದು ಚುನಾವಣಾ ಆಯೋಗ ಹೇಳಿದೆ.
  • ‘ಇ–ಪರಿಶೀಲನಾ ವಿಧಾನ‘ವನ್ನು ನಾವು ವಾರದ ಹಿಂದೆಯೇ ಜಾರಿಗೊಳಿಸಿದ್ದೇವೆ. ಆಳಂದ ವಿಧಾನಸಭಾ ಕ್ಷೇತ್ರದಲ್ಲಿ ಮತದಾರರ ಹೆಸರುಗಳನ್ನು ಪಟ್ಟಿಯಿಂದ ಕೈಬಿಡಲು ಯತ್ನಿಸಲಾಗಿತ್ತು ಎಂಬ ಆರೋಪಕ್ಕೆ ಚುನಾವಣಾ ಆಯೊಗದ ಪ್ರತಿಕ್ರಿಯೆ ಇದಲ್ಲ’ ಎಂದು ಅಧಿಕಾರಿಗಳು ಹೇಳಿದ್ದಾರೆ.
  • ನಾವು ಮತಕಳ್ಳತನದ ವಿಷಯ ಪ್ರಸ್ತಾಪಿಸಿದ ನಂತರವಷ್ಟೇ ಚುನಾವಣಾ ಆಯೋಗ ಇದಕ್ಕೆ ಬೀಗ ಹಾಕಿದೆ. ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್‌ ಕುಮಾರ್‌, ಎಸ್‌ಐಟಿಗೆ ಯಾವಾಗ ಆಳಂದ ಕ್ಷೇತ್ರದ ದಾಖಲೆಗಳನ್ನು ಹಸ್ತಾಂತರಿಸುತ್ತಾರೆ?
  • ಮತ್ತೆ ವಿದೇಶದಿಂದ ಭಾರತಕ್ಕೆ ಚೀತಾಗಳು?

ಸಂದರ್ಭ: ಮತ್ತೊಮ್ಮೆ ಚೀತಾಗಳನ್ನು ದೇಶಕ್ಕೆ ತರುವ ವಿಚಾರವಾಗಿ ಆಫ್ರಿಕಾದ ಕೆಲವು ದೇಶಗಳೊಂದಿಗೆ ಭಾರತ ಮಾತುಕತೆ ನಡೆಸುತ್ತಿದೆ. ಬೋಟ್ಸ್‌ವಾನಾದಿಂದ ಡಿಸೆಂಬರ್‌ನಲ್ಲಿ 8–10 ಚೀತಾಗಳನ್ನು ತರುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.

  • ಅಳಿದುಹೋಗಿದ್ದ ಚೀತಾಗಳನ್ನು ಭಾರತದಲ್ಲಿ ಮರುಪರಿಚಯಿಸುವ ಮಹತ್ವದ ಯೋಜನೆಯು ‘ಅತ್ಯುತ್ತಮ ಯಶಸ್ಸು’ ಕಂಡಿದೆ. ಆರಂಭಿಕ ಸವಾಲುಗಳನ್ನು ಮೀರಿ ಯೋಜನೆಯು ಯಶಸ್ವಿಯಾಗಿದೆ ಎಂದು ‘ಪ್ರಾಜೆಕ್ಟ್‌ ಚೀತಾ’ಕ್ಕೆ ಸಂಬಂಧಿಸಿದ ಅಧಿಕಾರಿಗಳು ತಿಳಿಸಿದರು.
  • ಸದ್ಯ ಭಾರತದಲ್ಲಿಯೇ ಜನಿಸಿರುವ 16 ಚೀತಾಗಳು ಸೇರಿ ಒಟ್ಟು 27 ಚೀತಾಗಳಿವೆ ಎಂದು ಮೂಲಗಳು ತಿಳಿಸಿವೆ.
  • ಕುನೊ ರಾಷ್ಟ್ರೀಯ ಉದ್ಯಾನದಲ್ಲಿ ಚೀತಾ ಮರಿಗಳ ಬದುಕುಳಿಯುವಿಕೆ ದರವು ಶೇಕಡ 61ರಷ್ಟಿದೆ. ಇದಕ್ಕೆ ಪ್ರತಿಯಾಗಿ ಜಾಗತಿಕವಾಗಿ ಚೀತಾ ಮರಿಗಳ ಬದುಕುಳಿಯುವಿಕೆ ದರವು ಶೇ 40ರಷ್ಟಿದೆ ಎಂದು ತಿಳಿಸಿವೆ.
  • 26ಕ್ಕೆ ಮಿಗ್–21ಗೆ ವಿದಾಯ

ಸಂದರ್ಭ: ಭಾರತದ ಕೀರ್ತಿಯನ್ನು ಬಾನೆತ್ತರದಲ್ಲಿ ಹಾರಿಸಿದ, ದೇಶದ ವಾಯುಪಡೆಯ ಸಾಮರ್ಥ್ಯವನ್ನು ಜಗತ್ತಿಗೆ ಸಾರಿದ ರಷ್ಯಾ ನಿರ್ಮಿತ ಮಿಗ್–21 ಯುದ್ಧ ವಿಮಾನವು ಇದೇ 26ರಿಂದ ನಿವೃತ್ತಿ ಪಡೆಯಲಿದೆ.

  • ಚಂಡೀಗಢದ ವಾಯುನೆಲೆಯಲ್ಲಿ 23 ಸ್ಕ್ವಾಡ್ರನ್‌ಗೆ ಸೇರಿದ ‘ಪ್ಯಾಂಥರ್ಸ್‌’ ಹೆಸರಿನ ಮಿಗ್‌–21 ಯುದ್ಧ ವಿಮಾನಕ್ಕೆ ಬೀಳ್ಕೊಡುಗೆ ಸಮಾರಂಭವನ್ನು ಆಯೋಜಿಸಲಾಗಿದೆ.
  • ರಕ್ಷಣಾ ಸಚಿವ ರಾಜನಾಥ ಸಿಂಗ್‌, ಸೇನಾಪಡೆಗಳ ಮುಖ್ಯಸ್ಥ (ಸಿಡಿಎಸ್‌) ಅನಿಲ್‌ ಚೌಹಾಣ್‌, ಸೇನೆಯ ಮುಖ್ಯಸ್ಥ ಜನರಲ್‌ ಉಪೇಂದ್ರ ದ್ವಿವೇದಿ, ಏರ್‌ ಚೀಫ್‌ ಮಾರ್ಷಲ್ ಎ.ಪಿ.ಸಿಂಗ್‌, ನೌಕಾಪಡೆಯ ಮುಖಸ್ಥ ಅಡ್ಮಿರಲ್‌ ದಿನೇಶ್‌ ಕೆ.ತ್ರಿಪಾಠಿ ಮತ್ತಿತರರು ಸಮಾರಂಭದಲ್ಲಿ ಭಾಗಿಯಾಗಲಿದ್ದಾರೆ.
  • ಆರು ದಶಕ ವಾಯುಪಡೆಯ ಬೆನ್ನೆಲುಬಾಗಿದ್ದ ಮಿಗ್‌–21 ಯುದ್ಧ ವಿಮಾನಗಳು ಪಾಕಿಸ್ತಾನದೊಂದಿಗಿನ 1965 ಮತ್ತು 1971 ಯುದ್ಧದಲ್ಲಿ ಹಾಗೂ 1999 ಕಾರ್ಗಿಲ್ಯುದ್ಧದಲ್ಲಿ ನಿರ್ಣಾಯಕ ಪಾತ್ರ ವಹಿಸಿದ್ದವು. 2019 ಬಾಲಾಕೋಟ್ವಾಯುದಾಳಿಯಲ್ಲಿಯೂ ಮಹತ್ವದ ಮಾತ್ರ ವಹಿಸಿದ್ದವು.
  • ದುಡಿಯುವವರ ಸಂಖ್ಯೆ: ದೇಶದಲ್ಲಿ ಹೆಚ್ಚಳ

ಪ್ರಚಲಿತ ವಿದ್ಯಮಾನಗಳು: 24ನೇ ಸೆಪ್ಟೆಂಬರ್ 2025

  • ನೌಕರರ ಆರೋಗ್ಯಕ್ಕೆಸಂಜೀವಿನಿ

ಸಂದರ್ಭ: ರಾಜ್ಯ ಸರ್ಕಾರಿ ನೌಕರರು ಹಾಗೂ ಅವರ ಕುಟುಂಬದ ಅವಲಂಬಿತ ಸದಸ್ಯರಿಗೆ ನಗದುರಹಿತ ಚಿಕಿತ್ಸೆ ಒದಗಿಸುವ ‘ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆ’ (ಕೆಎಎಸ್‌ಎಸ್‌) ಅ.1ರಿಂದ ಅಧಿಕೃತವಾಗಿ ಜಾರಿಯಾಗಲಿದೆ.

  • ಹಲವು ವರ್ಷಗಳ ಹಿಂದೆಯೇ ಯೋಜನೆ ರೂಪಿಸಲಾಗಿತ್ತಾದರೂ ಕೆಲ ತಾಂತ್ರಿಕ ಕಾರಣಗಳಿಂದ ಅನುಷ್ಠಾನ ವಿಳಂಬವಾಗಿತ್ತು.
  • ರಾಜ್ಯದ ಸುಮಾರು 5.20 ಲಕ್ಷ ಸರ್ಕಾರಿ ನೌಕರರು, ನಿಗಮ, ಮಂಡಳಿ, ಅನುದಾನಿತ ಸಂಸ್ಥೆಗಳ 3 ಲಕ್ಷ ಸಿಬ್ಬಂದಿ ಹಾಗೂ ಅವರ ಕುಟುಂಬದ ಅವಲಂಬಿತ ಸದಸ್ಯರಿಗೆ ಪ್ರಯೋಜನ ಸಿಗಲಿದೆ.
  • ಜ್ಯೋತಿ ಸಂಜೀವಿನಿ ಯೋಜನೆಯಲ್ಲಿ ಪುರುಷ ನೌಕರರ ತಂದೆತಾಯಿಗೆ ಮಾತ್ರ ಸಿಗುತ್ತಿದ್ದ ಆರೋಗ್ಯ ಸೌಲಭ್ಯವನ್ನು ಬಾರಿ ಮಹಿಳಾ ನೌಕರರ ತಂದೆತಾಯಿಗೂ ವಿಸ್ತರಿಸಲಾಗಿದೆ.
  • ಸುವರ್ಣ ಕರ್ನಾಟಕ ಆರೋಗ್ಯ ಸುರಕ್ಷಾ ಟ್ರಸ್ಟ್‌ (ಎಸ್ಎಎಸ್ಟಿ) ಯೋಜನೆಯ ಅನುಷ್ಠಾನದ ಸಂಸ್ಥೆಯಾಗಿ ಹೊಣೆ ನಿರ್ವಹಿಸಲಿದ್ದು, ಎಲ್ಲ ವರ್ಗದ ನೌಕರರು ಪ್ರತಿ ತಿಂಗಳು ತಮ್ಮ ಪಾಲಿನ ಕಂತು ಪಾವತಿಸಬೇಕಿದೆ. ಯೋಜನೆ ವ್ಯಾಪ್ತಿಗೆ ಒಳಪಡಿಸಲು ಇಚ್ಛಿಸದವರು ಅ.18ರ ಒಳಗೆ ತಮ್ಮ ಮೇಲಧಿಕಾರಿಗಳ ಮೂಲಕ ಲಿಖಿತ ಆಕ್ಷೇಪ ಸಲ್ಲಿಸಬೇಕು ಎಂದು ಆದೇಶದಲ್ಲಿ ವಿವರಿಸಲಾಗಿದೆ.
  • 71ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು

  • ಇಪಿಎಫ್ವಿಮೆ: ನಿಯಮ ಸರಳ

ಕುಟುಂಬದಲ್ಲಿ ದುಡಿಯುವ ವ್ಯಕ್ತಿ ಆಕಸ್ಮಿಕವಾಗಿ ಮೃತಪಟ್ಟರೆ ಆ ಕುಟುಂಬ ಎದುರಿಸಬೇಕಾಗುವ ಸವಾಲುಗಳು ಒಂದೆರಡಲ್ಲ. ಇಡೀ ಕುಟುಂಬ ಆರ್ಥಿಕ ಮುಗ್ಗಟ್ಟಿಗೆ ಸಿಲುಕುತ್ತದೆ. ಅವಲಂಬಿತರು ಬದುಕಿನ ಬಂಡಿ ಎಳೆಯಲು ಕಷ್ಟಪಡುತ್ತಾರೆ. ಜೀವನದ ಅಂಥ ಅನಿರೀಕ್ಷಿತ ಅವಘಡಗಳಿಂದ ರಕ್ಷಣೆ ನೀಡುವುದು ವಿಮಾ ಸೌಲಭ್ಯ. ದೇಶದಲ್ಲಿ ಖಾಸಗಿ ವಲಯದಲ್ಲಿ ದುಡಿಯುವವರ ಸಂಖ್ಯೆ ಹೆಚ್ಚಿದೆ. ಆದರೆ, ಇಂದಿನ ಧಾವಂತದ ಬದುಕಿನಲ್ಲಿ ವಿಮೆಗೆ ಆದ್ಯತೆ ನೀಡುವವರು ಕಡಿಮೆ. ಬಹುತೇಕರ ಆದ್ಯತೆಯ ಪಟ್ಟಿಯಲ್ಲಿ ವಿಮೆಯದ್ದು ಕೊನೆಯ ಸ್ಥಾನ.

ಸರ್ಕಾರಿ ನೌಕರರಿಗೆ ಹೋಲಿಸಿದರೆ ಖಾಸಗಿ ವಲಯದ ಉದ್ಯೋಗಿಗಳಿಗೆ ಸಾಮಾಜಿಕ ಭದ್ರತಾ ಸೌಲಭ್ಯ ಅತ್ಯಲ್ಪ. ಹಾಗಾಗಿಯೇ, ಖಾಸಗಿ ವಲಯದ ಸಂಬಳ ಪಡೆಯುವ ಉದ್ಯೋಗಿಗಳಿಗೆ ಜೀವ ವಿಮೆಯ ಸೌಲಭ್ಯ ಕಲ್ಪಿಸಲು ಕೇಂದ್ರ ಸರ್ಕಾರವು 1976ರಲ್ಲಿ ಉದ್ಯೋಗಿಯ ಠೇವಣಿ ಆಧಾರಿತ ವಿಮಾ ಯೋಜನೆಯನ್ನು (ಇಡಿಎಲ್‌ಐ- ಎಂಪ್ಲಾಯೀಸ್‌ ಡೆಪಾಸಿಟ್‌ ಲಿಂಕ್ಡ್‌ ಇನ್ಸೂರೆನ್ಸ್‌ ಸ್ಕೀಮ್‌) ಪರಿಚಯಿಸಿತು. ನೌಕರರ ಭವಿಷ್ಯ ನಿಧಿ ಸಂಘಟನೆಯು (ಇಪಿಎಫ್‌ಒ) ಇಪಿಎಫ್ ಖಾತೆದಾರರಿಗೆ ಒದಗಿಸುವ ವಿಮಾ ರಕ್ಷಣೆ ಇದಾಗಿದೆ. ಸೇವಾವಧಿಯಲ್ಲಿ ವಿಮೆಗೆ ಒಳಪಟ್ಟ ವ್ಯಕ್ತಿಯು (ಉದ್ಯೋಗಿ) ಮೃತಪಟ್ಟ ಸಂದರ್ಭದಲ್ಲಿ, ಅವರ ಕುಟುಂಬಕ್ಕೆ ವಿಮಾ ಮೊತ್ತ ಸಿಗಲಿದೆ.

ಸರಳಗೊಂಡ ನಿಯಮಗಳು: ಸದ್ಯ ಈ ವಿಮೆ ಪಡೆಯಲು ನಿಗದಿಪಡಿಸಿದ್ದ ಷರತ್ತುಗಳನ್ನು ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯ ಸಡಿಲಗೊಳಿಸಿದೆ. ಇದು ಉದ್ಯೋಗಿಗಳ ಪಾಲಿಗೆ ವರದಾನವಾಗಿದೆ.

1. ಈ ಮೊದಲು ಉದ್ಯೋಗಿ ಮೃತಪಟ್ಟ ನಂತರ ಅವರ ಭವಿಷ್ಯ ನಿಧಿ (ಪಿ.ಎಫ್) ಖಾತೆಯಲ್ಲಿರುವ ಮೊತ್ತ ಆಧರಿಸಿ ಸಂತ್ರಸ್ತ ಕುಟುಂಬಕ್ಕೆ ಸಿಗಬೇಕಾದ ವಿಮಾ ಪರಿಹಾರವನ್ನು ಲೆಕ್ಕ ಹಾಕಲಾಗುತ್ತಿತ್ತು. ಪ್ರಸ್ತುತ ಆ ನಿಯಮವನ್ನು ತೆಗೆದುಹಾಕಲಾಗಿದೆ. 

ಇನ್ನು ಮುಂದೆ ಇಪಿಎಫ್‌ಒ ಚಂದಾದಾರರಾದ ಯಾವುದೇ ಉದ್ಯೋಗಿ ಕೆಲಸದಲ್ಲಿ ಇರುವಾಗ ಮೃತಪಟ್ಟರೆ ಅವರ ಪಿ.ಎಫ್. ಖಾತೆಯಲ್ಲಿ ₹50 ಸಾವಿರಕ್ಕಿಂತ ಕಡಿಮೆ ಮೊತ್ತವಿದ್ದರೂ ಅವರ ಕುಟುಂಬಕ್ಕೆ ಕನಿಷ್ಠ ₹50 ಸಾವಿರ ಪರಿಹಾರ ಸಿಗಲಿದೆ. ದೇಶದಲ್ಲಿ ಪ್ರತಿವರ್ಷ 5 ಸಾವಿರಕ್ಕೂ ಹೆಚ್ಚು ಕಾರ್ಮಿಕ ಕುಟುಂಬಗಳಿಗೆ ಈ ಹೊಸ ನಿಯಮ ಊರುಗೋಲಾಗಲಿದೆ ಎಂದು ಸಚಿವಾಲಯ ತಿಳಿಸಿದೆ.

2. ಉದ್ಯೋಗಿಗಳು ವೈಯಕ್ತಿಕ ಹಾಗೂ ಇತರ ಕಾರಣಗಳಿಗೆ ಕಂಪನಿ ಬದಲಿಸುವುದು ಸಾಮಾನ್ಯ. ಈ ಹಿಂದೆ, ಉದ್ಯೋಗಿಯ 12 ತಿಂಗಳ ನಿರಂತರ ಕೆಲಸವನ್ನು ಲೆಕ್ಕ ಹಾಕಿ ವಿಮಾ ಪರಿಹಾರ ನೀಡಲಾಗುತ್ತಿತ್ತು. ಇದರಿಂದ ಒಂದು ಕಂಪನಿಯಿಂದ ಕೆಲಸ ಬಿಟ್ಟು, ಮತ್ತೊಂದು ಕಂಪನಿಗೆ ಸೇರಿಕೊಳ್ಳುವ ಉದ್ಯೋಗಿಗಳು ಮರಣ ಹೊಂದಿದರೆ ಅವರ ಕುಟುಂಬಗಳು ಇಡಿಎಲ್‌ಐ ಪ್ರಯೋಜನ ಪಡೆಯಲು ತೊಡಕಾಗುತ್ತಿತ್ತು. ಈಗ, ಈ ನಿಯಮವನ್ನೂ ಪರಿಷ್ಕರಿಸಲಾಗಿದೆ. ಉದ್ಯೋಗಿಯು ಒಂದು ಕಂಪನಿ ತೊರೆದು ಮತ್ತೊಂದು ಕಂಪನಿಗೆ ಸೇರಿಕೊಳ್ಳಲು 60 ದಿನಗಳಾದರೂ ಅದನ್ನು ಈಗ ಪರಿಗಣಿಸುವುದಿಲ್ಲ. ಹಳೆಯ ಮತ್ತು ಹೊಸ ಕೆಲಸದ ಅವಧಿಯನ್ನು ಒಟ್ಟಿಗೆ ಸೇರಿಸಿ, ‘ನಿರಂತರ ಕೆಲಸ’ ಎಂದು ಪರಿಗಣಿಸಲಾಗುತ್ತದೆ.

3. ಪಿ.ಎಫ್‌ ಖಾತೆಗೆ ಕೊನೆಯ ಕೊಡುಗೆ ನೀಡಿದ ಆರು ತಿಂಗಳ ಒಳಗಾಗಿ ಉದ್ಯೋಗಿ ಮೃತಪಟ್ಟು, ಅವರ ಹೆಸರು ಕಂಪನಿ/ಸಂಸ್ಥೆಯ ವೇತನದಾರರ ಪಟ್ಟಿಯಲ್ಲಿದ್ದರೆ ಇಡಿಎಲ್‌ಐ ‍ಪ್ರಯೋಜನಕ್ಕೆ ಅರ್ಹ ಎಂದು ಹೊಸ ನಿಯಮದಲ್ಲಿ ಸ್ಪಷ್ಟಪಡಿಸಲಾಗಿದೆ.    

ನಿಯಮಗಳ ಸರಳೀಕರಣದಿಂದಾಗಿ ಆಗಾಗ್ಗೆ ಉದ್ಯೋಗ ಬದಲಾಯಿಸುವ, ಮಾಸಿಕ ಕಡಿಮೆ ಸಂಬಳ ಪಡೆಯುವ ಉದ್ಯೋಗಿಗಳು ಎದುರಿಸುತ್ತಿದ್ದ ದೀರ್ಘಕಾಲೀನ ಸಮಸ್ಯೆಗೆ ಪರಿಹಾರ ಸಿಕ್ಕಿದಂತಾಗಿದೆ.

ಆಧಾರ:ಕಾರ್ಮಿಕ ಸಚಿವಾಲಯದ ಅಧಿಸೂಚನೆ, ಇಪಿಎಫ್‌ಒ ವಾರ್ಷಿಕ ವರದಿ

ವಿಮಾ ಲೆಕ್ಕಾಚಾರ ಹೇಗೆ?

ಇಡಿಎಲ್‌ಐ ಅಡಿ ಪ್ರಯೋಜನ ಪಡೆಯಲು 12 ತಿಂಗಳುಗಳಲ್ಲಿ ಚಂದಾದಾರರ ಪಿ.ಎಫ್‌ ಖಾತೆಯಲ್ಲಿನ ಸರಾಸರಿ ಮೊತ್ತವನ್ನು ಪರಿಗಣಿಸಲಾಗುತ್ತದೆ. ಒಟ್ಟಾರೆ ವಿಮಾ ರಕ್ಷಣೆಯ ಲೆಕ್ಕಾಚಾರವು ಎರಡು ಹಂತದ ಪ್ರಕ್ರಿಯೆ. ಮೃತ ಉದ್ಯೋಗಿಯ 12 ತಿಂಗಳ ಸರಾಸರಿ ಮಾಸಿಕ ವೇತನವನ್ನು (ಮೂಲ ವೇತನ + ತುಟ್ಟಿಭತ್ಯೆ ) ಗರಿಷ್ಠ ₹15 ಸಾವಿರಕ್ಕೆ ಮಿತಿಗೊಳಿಸಿ, ಅದನ್ನು 35 ಪಟ್ಟು ಗುಣಿಸುವುದು ಒಂದು ಹಂತ; 12 ತಿಂಗಳಿನಲ್ಲಿ ಮೃತ ಉದ್ಯೋಗಿಯ ಭವಿಷ್ಯ ನಿಧಿ ಖಾತೆಯಲ್ಲಿರುವ ಸರಾಸರಿ ಮೊತ್ತದ ಶೇ 50ರಷ್ಟನ್ನು ಪರಿಗಣಿಸುವುದು ಎರಡನೇ ಹಂತ.

ಈ ಸೌಲಭ್ಯ ಪಡೆಯಲು ಗರಿಷ್ಠ ವೇತನ ಮಿತಿಯನ್ನು ₹15 ಸಾವಿರಕ್ಕೆ ಮಿತಿಗೊಳಿಸಲಾಗಿದೆ. ಮೂಲ ವೇತನವು ಇದಕ್ಕಿಂತಲೂ ಹೆಚ್ಚಿದ್ದರೂ ವಿಮಾ ಸೌಲಭ್ಯ ಪಡೆಯುವಾಗ ₹15 ಸಾವಿರವನ್ನಷ್ಟೇ ಪರಿಗಣಿಸಲಾಗುತ್ತದೆ. 

ಉದಾಹರಣೆಗೆ, ಮಾಸಿಕ ಸಂಬಳ ₹25 ಸಾವಿರ ಇದ್ದು, ಪಿ.ಎಫ್‌. ಖಾತೆಯಲ್ಲಿ ₹6 ಲಕ್ಷ ಇದೆ ಎಂದಿಟ್ಟುಕೊಳ್ಳಿ. ಆಗ ಈ ವಿಧಾನದಲ್ಲಿ ಲೆಕ್ಕ ಹಾಕಿದಾಗ (₹25,000×35= ₹8.75 ಲಕ್ಷ ಮತ್ತು ₹6 ಲಕ್ಷದ ಶೇ 50 ಅಂದರೆ ₹3 ಲಕ್ಷ ) ವಿಮಾ ಮೊತ್ತವು ₹11.75 ಲಕ್ಷ ಆಗುತ್ತದೆ. ಆದರೆ, 2021ರಲ್ಲಿ ಇಡಿಎಲ್‌ಐ ಅಡಿ ಗರಿಷ್ಠ ವಿಮಾ ಮೊತ್ತವನ್ನು ₹7 ಲಕ್ಷಕ್ಕೆ ನಿಗದಿಪಡಿಸಲಾಗಿದೆ. ಹಾಗಾಗಿ, ನಾಮಿನಿಗೆ ಇಷ್ಟು ಮೊತ್ತವಷ್ಟೇ ಸಿಗುತ್ತದೆ. ಪರಿಷ್ಕೃತ ನಿಯಮಗಳ ಪ್ರಕಾರ ಈ ಯೋಜನೆಯಡಿ ಕನಿಷ್ಠ ₹50 ಸಾವಿರ ಮತ್ತು ಗರಿಷ್ಠ ₹7 ಲಕ್ಷ ವಿಮೆ ಸೌಲಭ್ಯ ಕುಟುಂಬದವರಿಗೆ ಸಿಗಲಿದೆ. 

ಪ್ರಯೋಜನ ಪಡೆಯುವುದು ಹೇಗೆ?

ವಿಮಾದಾರರು (ಉದ್ಯೋಗಿ) ಸೂಚಿಸಿದ ನಾಮಿನಿಗೆ ಯೋಜನೆಯಡಿ ಪರಿಹಾರ ಸಿಗಲಿದೆ. ಒಂದು ವೇಳೆ ನಾಮಿನಿ ಹೆಸರನ್ನು ನೋಂದಾಯಿಸದಿದ್ದರೆ, ಅವರ ಕುಟುಂಬದ ಸದಸ್ಯರು ಅಥವಾ ಕಾನೂನುಬದ್ಧ ಉತ್ತರಾಧಿಕಾರಿ ಸೌಲಭ್ಯಕ್ಕೆ ಅರ್ಜಿ ಸಲ್ಲಿಸಬಹುದು. ಹಕ್ಕುದಾರರು ಭರ್ತಿ ಮಾಡಿದ ಇಡಿಎಲ್‌ಐ ಅರ್ಜಿಗೆ ಉದ್ಯೋಗದಾತ ಕಂಪನಿ/ ಸಂಸ್ಥೆ ಸಹಿ ಮಾಡಿ ದೃಢೀಕರಿಸಬೇಕು.

ಒಂದು ವೇಳೆ, ಉದ್ಯೋಗದಾತರು ಇಲ್ಲದಿದ್ದರೆ ಅಥವಾ ಉದ್ಯೋಗದಾತರ ಸಹಿ ಪಡೆಯಲು ಸಾಧ್ಯವಾಗದಿದ್ದರೂ ಪರ್ಯಾಯ ಕ್ರಮದ ಮೂಲಕ ವಿಮಾ ಸೌಲಭ್ಯದ ಹಾದಿಯನ್ನು ಸುಗಮಗೊಳಿಸಲಾಗಿದೆ.

ಬ್ಯಾಂಕ್ ವ್ಯವಸ್ಥಾಪಕರು (ಮೃತ ಉದ್ಯೋಗಿಯ ಖಾತೆ ಇರುವ ಬ್ಯಾಂಕ್‌), ಸ್ಥಳೀಯ ಸಂಸದ ಅಥವಾ ಶಾಸಕರು, ಗೆಜೆಟೆಡ್ ಅಧಿಕಾರಿ, ನ್ಯಾಯಾಧೀಶರು, ಸ್ಥಳೀಯ ನಗರ ಸಂಸ್ಥೆಯ ಸದಸ್ಯರು/ ಅಧ್ಯಕ್ಷರು, ಪೋಸ್ಟ್ ಮಾಸ್ಟರ್ ಅಥವಾ ಸಬ್-ಪೋಸ್ಟ್ ಮಾಸ್ಟರ್, ಇಪಿಎಫ್‌ ಅಥವಾ ಇಪಿಎಫ್‌ಒ ಕೇಂದ್ರೀಯ ಧರ್ಮದರ್ಶಿ ಮಂಡಳಿಯ (ಸಿಬಿಟಿ) ಪ್ರಾದೇಶಿಕ ಸಮಿತಿ ಸದಸ್ಯರಿಂದ ಕ್ಲೇಮು ಅರ್ಜಿ ದೃಢೀಕರಿಸಿ ಸೂಕ್ತ ದಾಖಲೆಗಳ ಸಮೇತ ಪ್ರಾದೇಶಿಕ ಇಪಿಎಫ್ ಆಯುಕ್ತರ ಕಚೇರಿಗೆ ಅರ್ಜಿ ಸಲ್ಲಿಸಬೇಕು. ಈ ಅರ್ಜಿ ಸ್ವೀಕರಿಸಿದ ನಂತರ ಆಯುಕ್ತರು 30 ದಿನಗಳೊಗೆ ಇತ್ಯರ್ಥಪಡಿಸಬೇಕೆಂಬ ನಿಯಮವಿದೆ.

ಗಿಗ್‌ ಕಾರ್ಮಿಕರಿಗೆ ಸೌಲಭ್ಯ

ಗಿಗ್‌ ಕಾರ್ಮಿಕರು ಸಾಂಪ್ರದಾಯಿಕವಾದ ಉದ್ಯೋಗದಾತ ಮತ್ತು ಉದ್ಯೋಗಿ ನಡುವಿನ ಕೆಲಸದ ವ್ಯವಸ್ಥೆಯಿಂದ ದೂರ ಇರುತ್ತಾರೆ. ಈ ವಲಯದಲ್ಲಿ ದುಡಿಯುವವರಿಗೆ ಸಾಮಾಜಿಕ ಭದ್ರತೆ ಕಲ್ಪಿಸಲು ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯ ಕಾರ್ಯನಿರತವಾಗಿದೆ. ಇದರಿಂದ ದೇಶದ ಆರ್ಥಿಕತೆಗೆ ಮತ್ತಷ್ಟು ಬೆಂಬಲ ನೀಡಿದಂತಾಗುತ್ತದೆ ಎಂಬುದು ಸಚಿವಾಲಯದ ಲೆಕ್ಕಾಚಾರ. ಗಿಗ್‌ ಕಾರ್ಮಿಕರಿಗೆ ಇಡಿಎಲ್‌ಐ ಸೌಲಭ್ಯ ಒದಗಿಸಲು ಕೇಂದ್ರ ಸರ್ಕಾರ ನಿರ್ಧರಿಸಿದ್ದು, ಈ ಕುರಿತು ಚೌಕಟ್ಟು ರೂಪಿಸುವುದಾಗಿ ಕೇಂದ್ರ ಕಾರ್ಮಿಕ ಸಚಿವ ಮನ್ಸುಖ್‌ ಮಾಂಡವೀಯ ಹೇಳಿದ್ದಾರೆ. 

ಈ ವಿಷಯದಲ್ಲಿ ಕರ್ನಾಟಕ ಸರ್ಕಾರವು ಒಂದು ಹೆಜ್ಜೆ ಮುಂದೆ ಇಟ್ಟಿದ್ದು, ‘ಕರ್ನಾಟಕ ಪ್ಲಾಟ್‌ಫಾರ್ಮ್‌ ಆಧಾರಿತ ಗಿಗ್‌ ಕಾರ್ಮಿಕರ (ಸಾಮಾಜಿಕ ಭದ್ರತೆ ಮತ್ತು ಕ್ಷೇಮಾಭಿವೃದ್ಧಿ) ಕಾಯ್ದೆ– 2025’ ರೂಪಿಸಿದೆ. ಈ ಕಾರ್ಮಿಕರು ಸರಕು ಸೇವೆ ವಿತರಣೆ ವೇಳೆ ಅವಘಡಕ್ಕೀಡಾಗಿ ಅಂಗವಿಕಲರಾದರೆ ಅಥವಾ ಮೃತಪಟ್ಟರೆ ಅವರ ಅವಲಂಬಿತರು ತೊಂದರೆಗೆ ಸಿಲುಕುತ್ತಾರೆ. ಇದಕ್ಕಾಗಿ ಕಾರ್ಮಿಕರು ಮತ್ತು ಅವರ ಅವಲಂಬಿತರಿಗೆ ಸಾಮಾಜಿಕ ಭದ್ರತೆ ಒದಗಿಸುವುದು ಕಾಯ್ದೆಯ ಉದ್ದೇಶ.

ಆನ್‌ಲೈನ್‌ ಪ್ಲಾಟ್‌ಫಾರ್ಮ್‌ ಆಧಾರಿತ ಸೇವೆಯ ಪ್ರತಿ ವಹಿವಾಟಿನ ಮೇಲೆ ಶೇ 1ರಿಂದ ಶೇ 2ರಷ್ಟು ಮೀರದಂತೆ ಕ್ಷೇಮಾಭಿವೃದ್ಧಿ ಶುಲ್ಕ ಸಂಗ್ರಹಿಸಲಾಗುತ್ತದೆ. ಅವರಿಗೆ ಭವಿಷ್ಯ ನಿಧಿ, ಅಪಘಾತ ಸೌಲಭ್ಯ, ಮಕ್ಕಳಿಗೆ ಶೈಕ್ಷಣಿಕ ಸೌಲಭ್ಯಕ್ಕೆ ನೆರವು, ಅಂತ್ಯಸಂಸ್ಕಾರಕ್ಕೆ ಧನಸಹಾಯ ನೀಡಲು ಕಾಯ್ದೆ ಅವಕಾಶ ಕಲ್ಪಿಸಿದೆ. 

2025–26ನೇ ಆರ್ಥಿಕ ವರ್ಷದಲ್ಲಿ ಗಿಗ್‌ ವಲಯದಲ್ಲಿ ದುಡಿಯುವ ಕಾರ್ಮಿಕರ ಸಂಖ್ಯೆ ದೇಶದಲ್ಲಿ ಒಂದು ಕೋಟಿ ದಾಟಲಿದ್ದು, 2029–30ರ ವೇಳೆಗೆ 2.35 ಕೋಟಿಗೆ ತಲುಪಲಿದೆ ಎಂದು ನೀತಿ ಆಯೋಗ ಅಂದಾಜಿಸಿದೆ. ಕರ್ನಾಟಕದಲ್ಲಿ 4 ಲಕ್ಷ ಗಿಗ್‌ ಕಾರ್ಮಿಕರಿದ್ದಾರೆ.

ಸೌಲಭ್ಯಕ್ಕೆ ಯಾರು ಅರ್ಹ?

ನೌಕರರ ಭವಿಷ್ಯ ನಿಧಿ (ಇಪಿಎಫ್‌) ಮತ್ತು ವಿವಿಧ ನಿಬಂಧನೆಗಳ ಕಾಯ್ದೆ 1952ರ ಅಡಿ ನೋಂದಣಿಯಾದ ಎಲ್ಲಾ ಕಂಪನಿಗಳು/ ಸಂಸ್ಥೆಗಳು ಇಡಿಎಲ್‌ಐ ಯೋಜನೆಗೆ ಒಳಪಡುತ್ತವೆ. ಅಂತಹ ಸಂಸ್ಥೆಗಳು ಉದ್ಯೋಗಿಗಳಿಗೆ ಇಡಿಎಲ್‌ಐ ಸೌಲಭ್ಯ ಒದಗಿಸಬೇಕಿದೆ. ನೌಕರರ ಭವಿಷ್ಯ ನಿಧಿ ಮತ್ತು ನೌಕರರ ಪಿಂಚಣಿ ಯೋಜನೆ (ಇಪಿಎಸ್‌) ಸಂಯೋಜಿತ ಯೋಜನೆ ಇದಾಗಿದೆ. ಇಪಿಎಫ್‌ ಖಾತೆ ಹೊಂದಿರುವ ಯಾವುದೇ ಉದ್ಯೋಗಿ ಸ್ವಯಂಚಾಲಿತವಾಗಿ ಇಡಿಎಲ್‌ಐಗೆ ಅರ್ಹರಾಗುತ್ತಾರೆ. ಪ್ರತಿ ಉದ್ಯೋಗಿಯು ಅವರ ಹುದ್ದೆ ಅಥವಾ ಸಂಬಳ ಲೆಕ್ಕಿಸದೆ ವಿಮೆಗೆ ಒಳಪಡುತ್ತಾರೆ.

ಉದ್ಯೋಗಿಯು ಈ ವಿಮಾ ಸೌಲಭ್ಯ ಪಡೆಯಲು ವೈಯಕ್ತಿಕವಾಗಿ ಕಂತು ಪಾವತಿಸಬೇಕಿಲ್ಲ. ಕಂಪನಿಗಳೇ ಉದ್ಯೋಗಿಯ ಮೂಲ ವೇತನದ ಶೇ 0.5ರಷ್ಟು ಅಥವಾ ಪ್ರತಿ ತಿಂಗಳು ₹75 ಅನ್ನು ಇಡಿಎಲ್‌ಐಗೆ ಕೊಡುಗೆಯಾಗಿ ನೀಡುತ್ತವೆ. 

  • ಖನಿಜಗಳ ಮೇಲೆ ತೆರಿಗೆಸುಪ್ರೀಂಗೆ ಮೇಲ್ಮನವಿ

ಸಂದರ್ಭ: ಗಣಿಗಾರಿಕೆ ಹಾಗೂ ಖನಿಜಗಳಿರುವ ಜಮೀನುಗಳ ಮೇಲೆ ತೆರಿಗೆ ವಿಧಿಸಲು ರಾಜ್ಯಗಳು ಶಾಸನಬದ್ಧ ಅಧಿಕಾರ ಹೊಂದಿವೆ ಎಂಬ ಸುಪ್ರೀಂ ಕೋರ್ಟ್‌ನ ಸಂವಿಧಾನ ಪೀಠ ನೀಡಿದ್ದ ತೀರ್ಪು ಪ್ರಶ್ನಿಸಿ ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್‌ಗೆ ಪರಿಹಾರಾತ್ಮಕ ಅರ್ಜಿ ಸಲ್ಲಿಸಿದೆ.

  • ‘9 ಸದಸ್ಯರು ಇದ್ದ ನ್ಯಾಯಪೀಠವು 8:1ರ ಅನುಪಾತದಲ್ಲಿ ಬಹುಮತ ತೀರ್ಪು ನೀಡಿದೆ. ತೆರಿಗೆ ವಿಧಿಸುವ ವಿಚಾರ ಗಂಭೀರವಾಗಿರುವ ಕಾರಣ, ಈ ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸಲಾಗುತ್ತಿದೆ’ ಎಂದು ಸಾಲಿಸಿಟರ್‌ ಜನರಲ್ ತುಷಾರ್‌ ಮೆಹ್ತಾ ಅವರು ನ್ಯಾಯಮೂರ್ತಿಗಳಾದ ವಿಕ್ರಮ ನಾಥ್‌ ಹಾಗೂ ಸಂದೀಪ್‌ ಮೆಹ್ತಾ ಅವರು ಇರುವ ಪೀಠಕ್ಕೆ ತಿಳಿಸಿದ್ದಾರೆ.
  • ಗಣಿಗಾರಿಕೆ ಹಾಗೂ ಖನಿಜಗಳಿರುವ ಜಮೀನುಗಳ ಮೇಲೆ ತೆರಿಗೆ ವಿಧಿಸುವುದಕ್ಕೆ ಸಂಬಂಧಿಸಿ, ಆಗ ಮುಖ್ಯ ನ್ಯಾಯಮೂರ್ತಿಯಾಗಿದ್ದ ಡಿ.ವೈ.ಚಂದ್ರಚೂಡ್‌ ನೇತೃತ್ವದ 9 ಸದಸ್ಯರಿದ್ದ ಸಂವಿಧಾನ ಪೀಠವು, ಕಳೆದ ವರ್ಷ ಜುಲೈ 25ರಂದು 8:1ರ ಬಹುಮತದ ತೀರ್ಪು ನೀಡಿತ್ತು.
  • ಖನಿಜಗಳಿರುವ ಜಮೀನುಗಳ ಮೇಲೆ ತೆರಿಗೆ ವಿಧಿಸಲು ರಾಜ್ಯಗಳಿಗೆ ಅಧಿಕಾರ ಇದೆ. ತೆರಿಗೆ ಮತ್ತು ರಾಯಧನ ಬೇರೆಬೇರೆ ಎಂದೂ ಪೀಠ ಸ್ಪಷ್ಟಪಡಿಸಿತ್ತು.
  • ನ್ಯಾಯಮೂರ್ತಿ ಬಿ.ವಿ.ನಾಗರತ್ನ ಅವರು ಭಿನ್ನ ನಿಲುವು ವ್ಯಕ್ತಪಡಿಸಿದ್ದರು. ರಾಯಧನ ಕೂಡ ತೆರಿಗೆಯ ಒಂದು ರೂಪವೇ ಆಗಿದ್ದು, ಇಂತಹ ತೆರಿಗೆ ಆಕರಣೆ ಮಾಡುವುದಕ್ಕೆ ಕೇಂದ್ರಕ್ಕೆ ಅಧಿಕಾರ ಇದೆ ಎಂದು ಭಿನ್ನ ತೀರ್ಪು ನೀಡಿದ್ದರು.
  • ಡ್ರಗ್ಪ್ರೊಟ್ಎಐ ಔಷಧ ಸಂಶೋಧನೆಯಲ್ಲಿ ಕ್ರಾಂತಿ

ಸಂದರ್ಭ: ಜೀವವನ್ನು ಉಳಿಸುವ ಔಷಧಗಳನ್ನು ಕಂಡುಹಿಡಿಯುವುದು ಒಂದು ದೀರ್ಘ ಮತ್ತು ಸವಾಲಿನ ಹಾದಿ.

  • ಹೊಸ ಔಷಧವೊಂದನ್ನು ಮಾರುಕಟ್ಟೆಗೆ ತರಲು ಹಲವು ವರ್ಷಗಳ ಸಮಯ ಮತ್ತು ಕೋಟಿಗಟ್ಟಲೆ ಹಣ ಬೇಕಾಗುತ್ತದೆ. ಆದರೂ, ಶೇ 90ರಷ್ಟು ಔಷಧಗಳು ಯಶಸ್ವಿಯಾಗದೆ ಪ್ರಯೋಗ ಹಂತದಲ್ಲೇ ವಿಫಲಗೊಳ್ಳುತ್ತವೆ. ಇದಕ್ಕೆ ಮುಖ್ಯ ಕಾರಣ, ರೋಗದ ಮೇಲೆ ಪರಿಣಾಮ ಬೀರಬಲ್ಲ ಸೂಕ್ತ ಪ್ರೋಟೀನ್ ಗುರಿಯನ್ನು ಆರಂಭದಲ್ಲೇ ನಿರ್ದಿಷ್ಟವಾಗಿ ಗುರುತಿಸಲು ವಿಜ್ಞಾನಿಗಳಿಗೆ ಇರುವ ಸವಾಲು. ಇದಕ್ಕೊಂದು ಪರಿಹಾರವಾಗಿ, ಮುಂಬೈನ ಐಐಟಿ ಬಾಂಬೆ ಸಂಸ್ಥೆಯ ವಿಜ್ಞಾನಿಗಳುಡ್ರಗ್ಪ್ರೊಟ್ಎಐ’ (DrugProtAI) ಎಂಬ ಕೃತಕ ಬುದ್ಧಿಮತ್ತೆ ಆಧಾರಿತ ನವೀನ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಿದ್ದಾರೆ. ಇದು ಔಷಧ ಸಂಶೋಧನೆಯ ಹಾದಿಯನ್ನು ಬದಲಿಸಬಲ್ಲ ಮಹತ್ವದ ಹೆಜ್ಜೆಯಾಗಿದೆ.
  • ನಮ್ಮ ದೇಹದಲ್ಲಿ ಸುಮಾರು 20,000ಕ್ಕೂ ಹೆಚ್ಚು ವಿಭಿನ್ನ ಪ್ರೋಟೀನ್ಗಳಿವೆ. ಇವು ನಮ್ಮ ದೇಹದ ಜೈವಿಕ ಕ್ರಿಯೆಗಳಿಗೆ ಆಧಾರ. ಪ್ರತಿಯೊಂದು ರೋಗಕ್ಕೂ ಒಂದು ನಿರ್ದಿಷ್ಟ ಕಾರಣವಿರುತ್ತದೆ ಮತ್ತು ಆ ಕಾರಣಕ್ಕೆ ಯಾವುದಾದರು ಪ್ರೋಟೀನ್‌ಗಳ ಪಾತ್ರವಿರುತ್ತದೆ. ಉದಾಹರಣೆಗೆ, ಕ್ಯಾನ್ಸರ್‌ಕೋಶಗಳ ಬೆಳವಣಿಗೆಗೆ ಕೆಲವು ಪ್ರೋಟೀನ್‌ಗಳು ಕಾರಣವಾಗಿರುತ್ತವೆ. ಔಷಧಗಳು ಈ ಪ್ರೋಟೀನ್‌ಗಳಿಗೆ ಅಂಟಿಕೊಂಡು ಅವುಗಳ ಚಟುವಟಿಕೆಯನ್ನು ನಿಯಂತ್ರಿಸಬೇಕು ಅಥವಾ ನಿಲ್ಲಿಸಬೇಕು.
  • ಪ್ರೋಟೀನೊಂದು ಔಷಧವೊಂದರ ಗುರಿಯಾಗಲು ಸೂಕ್ತವಾಗಿದೆಯೇ ಎಂಬುದನ್ನು ವೈಜ್ಞಾನಿಕವಾಗಿ ‘ಡ್ರಗ್ಗೆಬಿಲಿಟಿ’ (Druggability) ಎಂದು ಕರೆಯುತ್ತಾರೆ. ಇದನ್ನು ಗುರುತಿಸುವುದು ಸುಲಭವಲ್ಲ. ಏಕೆಂದರೆ, ಔಷಧಗಳಿಗೆ ಸೂಕ್ತ ಗುರಿಯಾಗಬಲ್ಲ ಪ್ರೋಟೀನ್‌ಗಳ ಸಂಖ್ಯೆ ಬಹಳ ಕಡಿಮೆ. ಸಾಂಪ್ರದಾಯಿಕ ವಿಧಾನಗಳಲ್ಲಿ ಇದರ ಪತ್ತೆಗೆ ಪ್ರಯೋಗಾಲಯಗಳ ಸಂಶೋಧನೆ ಮತ್ತು ಗಣಕಯಂತ್ರ ಆಧಾರಿತ ವಿಶ್ಲೇಷಣೆ ಎರಡನ್ನೂ ಬಳಸಲಾಗುತ್ತದೆ. ಈ ವಿಧಾನಗಳು ನಿಧಾನ ಮತ್ತು ನಿಖರತೆಯಲ್ಲಿ ಸ್ವಲ್ಪ ಕಡಿಮೆ.
  • ಹಿಂದಿನ ತಂತ್ರಜ್ಞಾನಗಳಿಗೆ ಹೋಲಿಸಿದರೆ, ಹೊಸಡ್ರಗ್ಪ್ರೊಟ್ಎಐ ತಂತ್ರಜ್ಞಾನ ಹೆಚ್ಚು ಮಾಹಿತಿಯನ್ನು ವಿಶ್ಲೇಷಿಸುತ್ತದೆ. ಪ್ರೋಟೀನ್ಗಳು ಅಮೈನೊ ಆಮ್ಲಗಳಿಂದ (amino acids) ರೂಪುಗೊಂಡಿರುತ್ತವೆ.
  • ಹಿಂದಿನ ತಂತ್ರಜ್ಞಾನಗಳು ಕೇವಲ ಅಮೈನೊ ಆಮ್ಲಗಳ ರಚನೆಯನ್ನು ಮಾತ್ರ ಪರಿಗಣಿಸುತ್ತಿದ್ದವು. ಆದರೆ, ಡ್ರಗ್ಪ್ರೊಟ್ಎಐಸುಮಾರು 183 ವಿವಿಧ ಪ್ರೋಟೀನ್ಗಳ ಗುಣಲಕ್ಷಣಗಳನ್ನು ವಿಶ್ಲೇಷಿಸುತ್ತದೆ. ಇದರಲ್ಲಿ, ಪ್ರೋಟೀನ್‌ನ ಭೌತಿಕ ಹಾಗೂ ರಾಸಾಯನಿಕ ಗುಣಗಳು, ಅದರ ಅಮೈನೊ ಆಮ್ಲಗಳ ಅನುಕ್ರಮ (sequence), ಇತರೆ ಪ್ರೋಟೀನ್‌ಗಳೊಂದಿಗೆ ಅದು ಹೇಗೆ ಸಂವಹನ ನಡೆಸುತ್ತದೆ, ಮತ್ತು ಕೋಶದ ಯಾವ ಭಾಗದಲ್ಲಿ ಅದು ಇದೆ ಎಂಬ ವಿವರಗಳೂ ಸೇರಿವೆ. ಇದು ಕೇವಲ ಒಂದು ಪ್ರೋಟೀನನ್ನು ಅದರ ರಚನೆಯ ಆಧಾರದ ಮೇಲೆ ನೋಡುವುದಿಲ್ಲ, ಬದಲಿಗೆ ಅದರ ಸಂಪೂರ್ಣ ಗುಣಲಕ್ಷಣಗಳನ್ನು ಆಧರಿಸಿ ವಿಶ್ಲೇಷಿಸುತ್ತದೆ. ಇದು ನಿಖರತೆಯನ್ನು ಹೆಚ್ಚಿಸಿದೆ. ಈ ಕಾರಣಕ್ಕಾಗಿಯೇ ‘ಡ್ರಗ್‌ಪ್ರೊಟ್‌ಎಐ’ ಇತರ ತಂತ್ರಜ್ಞಾನಗಳಾದ ‘ಸ್ಪೈಡರ್’ (SPIDER) ಮತ್ತು ‘ಡ್ರಗ್‌ಟಾರ್’(DrugTar)ಗಿಂತ ಉತ್ತಮವಾಗಿ ಕಾರ್ಯನಿರ್ವಹಿಸಿದೆ ಎಂದು ಸಂಶೋಧಕರು ಹೇಳಿದ್ದಾರೆ.
  • ಕೃತಕ ಬುದ್ಧಿಮತ್ತೆ ಆಧಾರಿತ ತಂತ್ರಜ್ಞಾನಗಳನ್ನು ಅಭಿವೃದ್ಧಿಪಡಿಸುವಲ್ಲಿ ಇರುವ ಒಂದು ದೊಡ್ಡ ಸವಾಲು, ‘ಅಸಮತೋಲಿತ ದತ್ತಾಂಶ’ (imbalanced data) ಅಥವಾ ಮಾಹಿತಿ. ಔಷಧಗಳ ಗುರಿಯಾಗದ ಪ್ರೋಟೀನ್‌ಗಳ ಸಂಖ್ಯೆ, ಗುರಿಯಾಗುವ ಪ್ರೋಟೀನ್‌ಗಳ ಸಂಖ್ಯೆಗಿಂತ ಬಹಳ ಜಾಸ್ತಿ ಇದೆ. ಹೀಗಾಗಿ, ಕೃತಕ ಬುದ್ಧಿಮತ್ತೆಯ ಮಾದರಿಯು ಈ ಮಾಹಿತಿಯ ಮೇಲೆ ತರಬೇತಿಗೊಂಡರೆ, ಅದು ಕೇವಲ ಗುರಿಯಾಗದ ಪ್ರೋಟೀನ್‌ಗಳನ್ನೇ ಹೆಚ್ಚು ನಿಖರವಾಗಿ ಗುರುತಿಸುತ್ತದೆ. ಆದರೆ, ವಿರಳವಾಗಿರುವ, ಆದರೆ ಪ್ರಮುಖವಾಗಿರುವ ಗುರಿಯಾಗಬಲ್ಲ ಪ್ರೋಟೀನ್‌ಗಳನ್ನು ಗುರುತಿಸಲು ವಿಫಲವಾಗುತ್ತದೆ.
  • ಈ ಸಮಸ್ಯೆಯನ್ನು ಪರಿಹರಿಸಲು, ‘ಡ್ರಗ್‌ಪ್ರೊಟ್‌ಎಐ’ ಅನ್ನು ಅಭಿವೃದ್ಧಿಪಡಿಸಿದ ವಿಜ್ಞಾನಿಗಳು ‘ಪಾರ್ಟಿಷನಿಂಗ್-ಆಧಾರಿತ ಸಮಗ್ರ ವಿಧಾನ’ (partitioning-based ensemble method) ಎಂಬ ವಿಶೇಷ ತಂತ್ರವನ್ನು ಬಳಸಿದ್ದಾರೆ. ಇದರಡಿಯಲ್ಲಿ, ಗುರಿಯಾಗದ ಪ್ರೋಟೀನ್‌ಗಳ ದೊಡ್ಡ ಸಮೂಹವನ್ನು ಸಣ್ಣ ಸಣ್ಣ ಗುಂಪುಗಳಾಗಿ ವಿಂಗಡಿಸಲಾಗುತ್ತದೆ. ನಂತರ, ಹಲವಾರು ಕೃತಕ ಬುದ್ಧಿಮತ್ತೆ ಮಾದರಿಗಳನ್ನು ತರಬೇತಿಗೊಳಿಸಲಾಗುತ್ತದೆ. ಪ್ರತಿಯೊಂದು ಮಾದರಿಯು ಒಂದು ಸಣ್ಣ ಗುಂಪಿನೊಂದಿಗೆ, ಮತ್ತು ಗುರಿಯಾಗಬಲ್ಲ ಪ್ರೋಟೀನ್‌ಗಳ ಸಂಪೂರ್ಣ ಗುಂಪಿನೊಂದಿಗೆ ತರಬೇತಿ ಪಡೆಯುತ್ತದೆ. ಇದರಿಂದ, ಎಲ್ಲ ಮಾದರಿಗಳಿಗೂ ಸಮತೋಲಿತ ಮಾಹಿತಿ ಸಿಗುತ್ತದೆ ಮತ್ತು ಪ್ರಮುಖ ಮಾಹಿತಿಯು ಕಣ್ಮರೆಯಾಗುವುದಿಲ್ಲ. ಈ ತಂತ್ರದಿಂದಾಗಿ, ‘ಡ್ರಗ್‌ಪ್ರೊಟ್‌ಎಐ’ ಶೇ. 87ರಷ್ಟು ನಿಖರತೆಯನ್ನು ಸಾಧಿಸಿದೆ.
  • ತಮ್ಮ ಸಾಧನವು ನೈಜವಾಗಿ ಎಷ್ಟು ಪರಿಣಾಮಕಾರಿ ಎಂದು ಪರೀಕ್ಷಿಸಲು, ಸಂಶೋಧಕರು ಒಂದು ವಿಶೇಷ ಪರೀಕ್ಷೆ ನಡೆಸಿದರು. ಅವರು ‘ಡ್ರಗ್‌ಪ್ರೊಟ್‌ಎಐ’ಅನ್ನು ಇತ್ತೀಚೆಗೆ ಔಷಧಗಳಿಗೆ ಗುರಿ ಎಂದು ಗುರುತಿಸಲ್ಪಟ್ಟಿದ್ದ ಪ್ರೋಟೀನ್‌ಗಳನ್ನು ಗುರುತಿಸಲು ಬಳಸಿದರು. ಈ ಪ್ರೋಟೀನ್‌ಗಳನ್ನು ಕೃತಕ ಬುದ್ಧಿಮತ್ತೆ ಮಾದರಿಯ ತರಬೇತಿಯ ಸಮಯದಲ್ಲಿ ಬಳಸಲಾಗಿರಲಿಲ್ಲ. ಈ ಪರೀಕ್ಷೆಯಲ್ಲಿ, ‘ಡ್ರಗ್‌ಪ್ರೊಟ್‌ಎಐ’ 81 ಹೊಸ ಗುರಿಗಳಲ್ಲಿ 61 ಪ್ರೋಟೀನ್‌ಗಳನ್ನು ಸರಿಯಾಗಿ ಗುರುತಿಸಿತು. ಇದು ಈ ತಂತ್ರಜ್ಞಾನದ ಪ್ರಾಯೋಗಿಕ ಮತ್ತು ನೈಜ-ಜೀವನದ ಅನ್ವಯಿಕತೆಯನ್ನು ಸಾಬೀತುಪಡಿಸುತ್ತದೆ.
  • ಈ ಸಾಧನದ ಮತ್ತೊಂದು ಪ್ರಮುಖ ವೈಶಿಷ್ಟ್ಯವೆಂದರೆ, ಕೇವಲ ಪ್ರೋಟೀನ್‌ಗಳನ್ನು ಒಂದು ನಿರ್ದಿಷ್ಟ ಮಟ್ಟದಲ್ಲಿ ಊಹಿಸುವುದು (prediction) ಮಾತ್ರ ಅಲ್ಲ, ಅದು ‘ಏಕೆ’ ಒಂದು ಪ್ರೋಟೀನ್ ಡ್ರಗ್ಗೆಬಲ್ ಆಗಿದೆ ಎಂಬುದನ್ನು ವಿವರಿಸುತ್ತದೆ. ಶ್ಯಾಪ್’ (SHAP – SHapley Additive exPlanations) ಎಂಬ ತಂತ್ರವನ್ನು ಬಳಸಿ, ಪ್ರೋಟೀನ್ ಯಾವ ಗುಣಲಕ್ಷಣಗಳು ಅದರ ಡ್ರಗ್ಗೆಬಿಲಿಟಿಗೆ ಹೆಚ್ಚು ಕಾರಣವಾಗಿವೆ ಎಂಬುದನ್ನು ಇದು ವಿಶ್ಲೇಷಿಸುತ್ತದೆ. ಉದಾಹರಣೆಗೆ, ಕೋಶ ಸಂಕೇತಗಳನ್ನು (cell signalling) ನಿಯಂತ್ರಿಸುವಕೈನೇಸ್‌’ (kinases) ಎಂಬ ಪ್ರೋಟೀನ್ಗಳು ಮತ್ತು ಕೆಲವು ನಿರ್ದಿಷ್ಟ ರಚನೆಗಳು ಪ್ರೋಟೀನ್ಗಳು ಔಷಧಕ್ಕೆ ಸೂಕ್ತವಾಗಿವೆ ಎಂಬುದರ ಪ್ರಬಲ ಸೂಚಕಗಳಾಗಿವೆ ಎಂದು ತಂತ್ರಜ್ಞಾನ ತೋರಿಸಿಕೊಟ್ಟಿದೆ. ಈ ಅಂಶವು ಸಂಶೋಧಕರಿಗೆ ಒಂದು ನಿರ್ದಿಷ್ಟ ಔಷಧವನ್ನು ಅಭಿವೃದ್ಧಿಪಡಿಸುವ ನಿರ್ಧಾರ ತೆಗೆದುಕೊಳ್ಳಲು ಸಹಕಾರಿಯಾಗಿದೆ.
  • ‘ಡ್ರಗ್‌ಪ್ರೊಟ್‌ಎಐ’ನಂತಹ ಸಾಧನಗಳು ಔಷಧ ಸಂಶೋಧನೆಯ ಸಮಯ ಮತ್ತು ಹಣವನ್ನು ಕಡಿಮೆ ಮಾಡಬಹುದು. ಇದು ವಿಶೇಷವಾಗಿ ಬೆಂಗಳೂರು ಮತ್ತು ಕರ್ನಾಟಕದಲ್ಲಿರುವ ಹಲವು ಜೈವಿಕ ತಂತ್ರಜ್ಞಾನ ಮತ್ತು ಔಷಧ ಸಂಶೋಧನಾ ಸಂಸ್ಥೆಗಳಿಗೆ ಬಹಳ ಸಹಕಾರಿ ಆಗಬಹುದು. ಈ ತಂತ್ರಜ್ಞಾನವು ಹೆಚ್ಚು ನಿಖರ ಮತ್ತು ವೇಗವಾಗಿ ಕಾರ್ಯನಿರ್ವಹಿಸುವುದರಿಂದ, ವೈದ್ಯಕೀಯ ಕ್ಷೇತ್ರದಲ್ಲಿ ಹೊಸ ಆವಿಷ್ಕಾರ ಗಳಿಗೆ ದಾರಿ ಮಾಡಿಕೊಡುತ್ತದೆ. ಸಂಶೋಧಕರು ಹೊಸ ಔಷಧಗಳನ್ನು ವೇಗವಾಗಿ ಕಂಡುಹಿಡಿದು, ಮನುಕುಲದ ಒಳಿತಿಗಾಗಿ ಅದನ್ನು ಇನ್ನಷ್ಟು ಶೀಘ್ರವಾಗಿ ಮಾರುಕಟ್ಟೆಗೆ ತರಬಹುದು. ಎಲ್ಲಕ್ಕಿಂತ ಮುಖ್ಯವಾಗಿ, ‘ಡ್ರಗ್‌ಪ್ರೊಟ್‌ಎಐ’ ಅನ್ನು ಆನ್‌ಲೈನ್‌ನಲ್ಲಿ ಉಚಿತವಾಗಿ ಲಭ್ಯವಾಗುವಂತೆ ಮಾಡಲಾಗಿದೆ.
  • ಹಣ್ಣುಗಳ ಸಂರಕ್ಷಣೆಗೆ ಪ್ರೋಟೀನ್

ಸಂದರ್ಭ: ಹಣ್ಣುಗಳು ನಮ್ಮ ಆಹಾರದ ಪ್ರಮುಖ ಭಾಗ. ಇವು ನಮ್ಮ ಪೋಷಣೆ ಮತ್ತು ಬೆಳವಣಿಗೆಗೆ ಅತ್ಯವಶ್ಯವಾಗಿ ಬೇಕಾದ ಆಹಾರದ ವಿಧ; ಸೂಕ್ಷ್ಮ ಪೋಷಕಾಂಶಗಳ ಆಕರ; ತುರ್ತಾಗಿ ನಮ್ಮ ದೇಹಕ್ಕೆ ಚೈತನ್ಯ ನೀಡಬಲ್ಲ ಶಕ್ತಿಯ ಮೂಲ.

  • ನಮ್ಮ ಆಹಾರದಲ್ಲಿ ಇಷ್ಟೆಲ್ಲಾ ಮಹತ್ವದ ಪಾತ್ರ ವಹಿಸುವ ಹಣ್ಣುಗಳು ಅಷ್ಟೇ ಬೇಗ ಹಾಳಾಗಿ ಹೋಗುವಂಥವು. ಹಾಗಾಗಿ ಹಣ್ಣುಗಳನ್ನು ದೀರ್ಘಕಾಲ ಸಂರಕ್ಷಿಡುವುದು ಅನಿವಾರ್ಯ. ಕಟಾವು ಮಾಡಿದ ನಂತರ ಒಣಗಿಸುವುದು, ಉಪ್ಪಿನಕಾಯಿ ತಯಾರಿಸುವುದು, ಫರ್ಮೆಂಟೇಶನ್‌ (ಹುದುಗುವಿಕೆ), ಸಕ್ಕರೆ ಪಾಕದಲ್ಲಿ ನೆನೆಸಿಡುವುದು ಮುಂತಾದ ಸಾಂಪ್ರದಾಯಿಕ ವಿಧಾನಗಳನ್ನು ನಾವು ಕೂಡ ಅನುಸರಿಸುತ್ತಿದ್ದೆವು. ಇವು ಇಂದಿಗೂ ಬಳಕೆಯಲ್ಲಿವೆಯೆನ್ನಿ. ಆದರೆ ಈ ವಿಧಾನಗಳಲ್ಲಿ ಹಣ್ಣನ್ನು ಸಂರಕ್ಷಿಸಿ ಅದರಿಂದ ಸಿಗಬೇಕಾದ ಪೋಷಣೆಯನ್ನೇನೊ ಪಡೆದುಕೊಳ್ಳಬಹುದು, ಆಯಾ ಹಣ್ಣುಗಳ ಋತುಮಾನದಿಂದಾಚೆಗೂ! ಆದರೆ ಈ ವಿಧಾನದಿಂದ ತಾಜಾ ಹಣ್ಣುಗಳು ತಿನ್ನಲು ಸಿಗದೆ ಹಣ್ಣನ್ನು ಬೇರೆ ರುಚಿಯಲ್ಲಿ ಸವಿಯಬಹುದಷ್ಟೆ.
  • ವಿಜ್ಞಾನದಲ್ಲಿ ನಾವು ಮುಂದುವರೆದಂತೆ, ಹಣ್ಣುಗಳನ್ನು ಯಥಾವತ್ತಾಗಿ ಶೈತ್ಯಾಗಾರಗಳಲ್ಲಿ ಸಂಗ್ರಹಿಸುವುದು (ಡೀಪ್ಫ್ರೀಜಿಂಗ್‌), ಹಣ್ಣಿನ ರಸಗಳನ್ನು ತೆಗೆದು ಬಾಟಲಿಗಳಲ್ಲಿ ಸಂಗ್ರಹಿಸುವುದು (ಕ್ಯಾನಿಂಗ್), ಒಣಗಿಸಬಹುದಾದ ಹಣ್ಣುಗಳಾದರೆ ಒಣಗಿಸುವುದು, ಫರ್ಮೆಂಟೇಷನ್ಮತ್ತು ಸಕ್ಕರೆ ಪಾಕದಲ್ಲಿ ಸಂಗ್ರಹಿಸುವುದು, ಹೈಡ್ರೋಫೋಬಿಕ್ಸರ್ಫೇಸ್ಟ್ರೀಟ್ಮೆಂಟ್‌ (ತೇವಾಂಶವನ್ನು ಹೀರಿಕೊಳ್ಳದ ಸಿಲೇನುಗಳು, ಫ್ಲೂರೋಕಾರ್ಬನ್ಗಳಂತಹ ರಾಸಾಯನಿಕಗಳನ್ನು ಹಣ್ಣುಗಳ ಹೊರಪದರಕ್ಕೆ ಲೇಪಿಸುವುದು), ತುಸು ಜಟಿಲವಾದ ಹೊರಪದರವಿರುವ ಹಣ್ಣುಗಳಿಗೆ ನೈಸರ್ಗಿಕ ಪಾಲಿಮರುಗಳಾದ ಕೈಟೋಸಾನ್‌, ಶರ್ಕರಗಳ ಪದರವನ್ನು ಲೇಪಿಸುವುದುಹೀಗೆ ಹಲವಾರು ವಿಧಾನಗಳಿಂದ ಹಣ್ಣುಗಳನ್ನು ಹಾಳಾಗದಂತೆ ಶೇಖರಿಸುವ ಅವಧಿಯನ್ನು ವಿಸ್ತರಿಸುವುದನ್ನು ಆರಂಭಿಸಿದೆವು.
  • ಇನ್ನು, ಹೆಚ್ಚಿನ ಪ್ರಮಾಣದಲ್ಲಿ ಬೆಳೆದ, ವೇಗವಾಗಿ ಹಾಳಾಗಿಹೋಗುವಂಥ ಹಣ್ಣುಗಳೆಲ್ಲವನ್ನು ದೀರ್ಘ ಕಾಲದವರೆಗೆ ತಾಜಾರೂಪದಲ್ಲಿ ಬಳಸಬೇಕಾದರೆ ಮತ್ತು ಆರ್ಥಿಕವಾಗಿಯೂ ನಷ್ಟವಾಗದಂತೆ ಖಾತರಿವಹಿಸಲು ಇನ್ನೂ ಆಧುನಿಕವಾದ ಸಂರಕ್ಷಣಾ ವಿಧಾನ ಅನಿವಾರ್ಯವಾಗಿತ್ತು. ಜೆನೆಟಿಕ್‌ ಮಾಡಿಫಿಕೇಶನ್‌, ಶೈತ್ಯಾಗಾರಗಳಲ್ಲಿ ಶೇಖರಿಸುವ ಮತ್ತು ಫಾರ್ಮಾಲ್ಡಿಹೈಡ್‌, ಕಾಫರ್‌ ಸಲ್ಫೇಟ್‌, ಪೊಟ್ಯಾಶಿಯಂ ಸಾರ್ಬೇಟ್‌ ಇತ್ಯಾದಿಗಳಂತಹ ರಾಸಾಯನಿಕಗಳನ್ನು ಬಳಸಿ ಸಂರಕ್ಷಿಸುವ ವಿಧಾನಗಳನ್ನು ಕೂಡ ಅನ್ವೇಷಿ ಸಲಾದರೂ ಇವು ಆರ್ಥಿಕವಾಗಿಯೂ ದುಬಾರಿ ಮತ್ತು ಇಂಗಾಲ ಹೊರಸೂಸುವಿಕೆಯಿಂದಾಗಿ ಪರಿಸರ ಮಾಲಿನ್ಯಕ್ಕೂ ಕಾರಣವಾಗುತ್ತವೆ.
  • ಹಾಗಾಗಿ ಈ ಎಲ್ಲ ಅಡ್ಡಪರಿಣಾಮಗಳನ್ನು ನಿವಾರಿಸುತ್ತ ನಾವು ಬೆಳೆದ ಹಣ್ಣುಗಳನ್ನು ಪರಿಣಾಮಕಾರಿಯಾಗಿ ಸಂರಕ್ಷಿಸುವ ವಿಶೇಷ, ಸುಲಭ ಹಾಗೂ ಪರಿಸರಸ್ನೇಹಿ ಪರಿಹಾರವೊಂದನ್ನು ಚೀನಿವಿಜ್ಞಾನಿಗಳು ಪತ್ತೆ ಮಾಡಿದ್ದಾರಂತೆ. ಅದುವೇ ಕಂಪ್ಯೂಟರ್ಸಹಾಯದಿಂದಮಾಲಿಕ್ಯುಲಾರ್ ಸಿಮ್ಯುಲೇಷನ್‌ ’ ತಂತ್ರವನ್ನು ಬಳಸಿಕೊಂಡು ಪ್ರೋಟೀನು ಸಂಯೋಜನೆಯೊಂದನ್ನು ಸಿದ್ಧಪಡಿಸಿ ಹಣ್ಣಿನ ಮೇಲ್ಭಾಗಕ್ಕೆ ಲೇಪನ ಮಾಡುವುದು! ಈ ಸುದ್ದಿಯನ್ನು ಮೊನ್ನೆ ನೇಚರ್‌ ಪತ್ರಿಕೆಯಲ್ಲಿ ಚೀನಾದ ಶಾಂಕ್ಸಿ ನಾರ್ಮಲ್‌ ಯೂನಿವರ್ಸಿಟಿಯ ವಿಜ್ಞಾನಿಗಳು ವರದಿ ಮಾಡಿದ್ದಾರೆ.
  • ಲೈಸೋಜೈಮುಎನ್ನುವ ಕಿಣ್ವಗಳಲ್ಲಿರುವ ಡೈ ಸಲ್ಫೈಡ್ಬಂಧಗಳನ್ನು ಇಳಿಸಿ ಹಾಗೂ ಆಲ್ಫಾ ಸುರುಳಿ ಆಕಾರವನ್ನು ರೂಪಾಂತರಿಸಿ, ಸೋಡಿಯಂ ಆಲ್ಜಿನೇಟ್ಮತ್ತು ಸೆಲ್ಯುಲೋಸಿನ ಸೂಕ್ಷ್ಮಕಣಗಳೊಂದಿಗೆ ಹೊಂದಿಸಿ ಸಿದ್ಧಪಡಿಸಿರುವ ಪ್ರೋಟೀನ್ಇದು. ಸೋಡಿಯಂ ಆಲ್ಜಿನೇಟ್ನೀರಿನಲ್ಲಿ ಕರಗುವ ಒಂದು ನೈಸರ್ಗಿಕ ಪಾಲಿಸ್ಯಾಕರೈಡ್ಆಗಿದ್ದು ಎಮಲ್ಸಿಕಾರಕವಾಗಿ ಬಳಸಬಹುದಾಗಿದೆ. ಸೆಲ್ಯುಲೋಸ್ಒಂದು ನೈಸರ್ಗಿಕ ಪಾಲಿಮರ್‌. ಮೂರು ಪದಾರ್ಥಗಳನ್ನು ಬಳಸಿ ತಯಾರಿಸಿದ ಪ್ರೋಟೀನು ಹಣ್ಣಿನ ಹೊರಪದರೊಂದಿಗೆ ಬೆರೆತುಕೊಂಡು ಹಣ್ಣಿನಲ್ಲಿರುವ ನೀರಿನಾಂಶವನ್ನು ಹೊರಬಿಡದೆ, ಸೂಕ್ಷ್ಮಾಣುಜೀವಿ ಗಳನ್ನು ಬೆಳೆಯಗೊಡದಂತೆ ಹಣ್ಣನ್ನು ರಕ್ಷಿಸುತ್ತದೆ. ಪ್ರೋಟೀನು ನೀರನ್ನು ಇಷ್ಟಪಡದ ಸ್ವಭಾವದಾದ್ದರಿಂದ ಹೊರಗಿನಿಂದ ಹಣ್ಣಿನ ಮೇಲೆ ನೀರು ಬಿದ್ದರೂ ಅದನ್ನು ಹೀರಿಕೊಳ್ಳುವುದಿಲ್ಲ. ಲೇಪಿಸಲೂ ಸುಲಭ. ತನ್ಮೂಲಕ ಹಣ್ಣನ್ನು ಕೆಡದಂತೆ ಸಂಪೂರ್ಣವಾಗಿ ರಕ್ಷಿಸಿಡುತ್ತದೆ.
  • ಕಟಾವು ಮಾಡಿತಂದ ಹಣ್ಣುಗಳು ಗಾಳಿಗೆ ತೆರೆದಿಟ್ಟಾಗ ವೇಗವಾಗಿ ಆಕ್ಸಿಡೀಕರಣಕ್ಕೊಳಗಾಗುತ್ತವೆ. ಆಗ ಪೋಷಕಾಂಶಗಳೂ ನಷ್ಟವಾಗಿ, ಸೂಕ್ಷ್ಮಾಣುಜೀವಿಗಳೂ ಹಣ್ಣಿನ ಒಳಪ್ರವೇಶಿಸಲು ಅನುಕೂಲ ವಾತಾವರಣ ಸೃಷಿಯಾಗುತ್ತದೆ. ಆದರೆ ವಿಜ್ಞಾನಿಗಳು ರೂಪಿಸಿರುವ ಪ್ರೋಟೀನ್‌ ಸಂಯೋಜನೆಯು ಇವೆಲ್ಲವನ್ನೂ ನಿವಾರಿಸುವ ಅತ್ಯುತ್ತಮ ಗುಣವುಳ್ಳವಾಗಿವೆ ಹಾಗೂ ಇದನ್ನು, ಕತ್ತರಿಸಿದ ಹಣ್ಣಿನ ತೊಳೆಗಳನ್ನೂ ತಾಜಾವಾಗಿರಿಸಲು ಬಳಸಬಹುದಾದ್ದರಿಂದ ಜಾಗತಿಕವಾಗಿ ಎದುರಿಸುತ್ತಿರುವ ಆಹಾರ ತ್ಯಾಜ್ಯಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ನಿವಾರಿಸಲು ಇದೂ ಒಂದು ಉತ್ತಮ ಮತ್ತು ಸುಸ್ಥಿರ ಪರಿಹಾರವಾಗಿ ಹೊರಹೊಮ್ಮಲಿದೆ ಎನ್ನುವುದು ವಿಜ್ಞಾನಿಗಳ ಆಶಯ.
  • ಪ್ರೋಟೀನು ಹಣ್ಣುಗಳ ಅವಧಿಯನ್ನು ಸುಮಾರು ಎರಡರಿಂದ ಐದು ಪಟ್ಟು ವಿಸ್ತರಿಸುವುದಲ್ಲದೆ, ಸುಮಾರು ಹದಿನೇಳು ರೀತಿಯ ಹಣ್ಣುಗಳನ್ನು ಸಂರಕ್ಷಿಸಲು ತಂತ್ರವನ್ನು ಬಳಸಬಹುದಾಗಿದೆಯಂತೆ. ಹಣ್ಣುಗಳಲ್ಲಿ ಕೆಲವು ಕಟಾವು ಮಾಡಿದ ನಂತರವೂ ಮಾಗಲು ಬೇಕಾದ ಹಾರ್ಮೋನ್‌, ಇಥಿಲೀನ್ ಉತ್ಪಾದನೆಯಾಗುವುದರಿಂದ ಮಾಗುವುದು ಮುಂದುವರೆಯುತ್ತದೆ. ಉದಾಹರಣೆಗೆ, ಬಾಳೆಹಣ್ಣು, ಮಾವು, ಟೊಮ್ಯಾಟೋ ಇತ್ಯಾದಿ. ಕೆಲವು ಹಣ್ಣುಗಳಲ್ಲಿ ಕಟಾವು ಮಾಡಿದ ನಂತರ ಇಥಿಲೀನ್ಉತ್ಪಾದನೆಯಾಗದಿರುವುದರಿಂದ ಮರದಲ್ಲಿಯೇ ಪೂರ್ತಿ ಹಣ್ಣಾದ ನಂತರವಷ್ಟೇ ಕಟಾವು ಮಾಡಬೇಕಿರುತ್ತದೆ. ಉದಾಹರಣೆಗೆ ಸ್ಟ್ರಾಬೆರಿ, ಕಿತ್ತಳೆ, ದ್ರಾಕ್ಷಿ ಮುಂತಾದವು. ಆದರೆ ಈ ಪ್ರೋಟೀನನ್ನು ಇಂಥ ಎರಡೂ ರೀತಿಯ ಹಣ್ಣುಗಳಲ್ಲಿ ಬಳಸಿ ಸಂರಕ್ಷಿಸ ಬಹುದು ಎನ್ನುವುದು ಮತ್ತೊಂದು ಪ್ರಯೋಜನ.
  • ಅಲ್ಲದೇ, ಸಂರಕ್ಷಿಸಿದಷ್ಟೂ ದಿನಗಳವರೆಗೆ ಪೋಷಕಾಂಶಗಳ ಪ್ರಮಾಣ ಸುಮಾರು ಪ್ರತಿಶತ 60-98ರಷ್ಟು ಉಳಿದಿತ್ತಂತೆ. ಅರ್ಥಾತ್‌, ಅವಧಿ ವಿಸ್ತರಣೆಯಾದಷ್ಟೂ ಹಲವು ದಿನಗಳವರೆಗೆ ಪೋಷಕಾಂಶಗಳೂ ಸುಸ್ಥಿರವಾಗಿರುತ್ತವೆ.
  • ಹಣ್ಣಿನೊಳಗಿನ ನೀರಿನಾಂಶವನ್ನೂ ನಷ್ಟವಾಗದಂತೆ ಕಾಪಾಡುವುದರಿಂದ ಹಣ್ಣಿನ ತೂಕದಲ್ಲಿಯೂ ಇಳಿಕೆಯಾಗುವುದಿಲ್ಲ. ಇತರೆ ಆಹಾರ ಸಂಸ್ಕರಣಾ ವಿಧಾನಗಳಲ್ಲಿ ಪೋಷಕಾಂಶಗಳು ನಷ್ವವಾಗುವ ಸಾಧ್ಯತೆ ಇದ್ದು, ಇಲ್ಲಿ ಹಣ್ಣುಗಳು ತಾಜಾರೂಪದಲ್ಲಿ ಸಿಗುವುದಲ್ಲದೆ, ಪೋಷಕಾಂಶಗಳನ್ನೂ ಪೂರ್ಣಪ್ರಮಾಣದಲ್ಲಿ ಉಳಿಸಿಕೊಡುತ್ತದೆ.
  • ಹಣ್ಣುಗಳನ್ನು ಸಂರಕ್ಷಿಸುವ ಇತರೆ ವಿಧಾನಗಳಿಗೆ ಹೋಲಿಸಿದರೆ ಇಂಗಾಲ ಹೊರಸೂಸುವಿಕೆಯಲ್ಲಿಯೂ ಸುಮಾರು ಪ್ರತಿಶತ 90ರಷ್ಟು ಇಳಿಕೆಯಾಗುತ್ತ ದಂತೆ.
  • ಜೊತೆಗೆ ಹೀಗೆ ಲೇಪಿಸುವ ಪ್ರೋಟೀನ್‌ನ ಪದರವು ತಿನ್ನಬಲ್ಲದಾದ್ದರಿಂದ ಅಕಸ್ಮಾತಾಗಿ ಹೊಟ್ಟೆ ಸೇರಿದರೂ ತೊಂದರೆಯಿಲ್ಲ. ಹಣ್ಣುಗಳನ್ನು ಕತ್ತರಿಸುವ ಮುಂಚೆ ಹೊರಪದರವನ್ನು ತೊಳೆಯುವಾಗ ಈ ಪ್ರೋಟೀನ್‌ನ ಲೇಪನವನ್ನು ತೊಳೆದು ಸ್ವಚ್ಛಗೊಳಿಸುವುದೂ ಸುಲಭವಂತೆ. ಸಾಂಪ್ರದಾಯಿಕ ವಿಧಾನಗಳು ಕೆಲವೇ ಹಣ್ಣುಗಳನ್ನು ಮಾತ್ರವೇ ಸಂರಕ್ಷಿಸಲು ಬಳಕೆಯಾದರೆ, ಈ ಪ್ರೋಟೀನ್‌ ವಿಧಾನವು ವೈವಿಧ್ಯಮಯ ಹಣ್ಣುಗಳನ್ನು ಸಂರಕ್ಷಿಸಲು ಬಳಕೆಯಾಗಬಲ್ಲ, ಆರ್ಥಿಕವಾಗಿಯೂ ಅಗ್ಗವಾಗಿರುವ, ಸುರಕ್ಷಿತ ಹಾಗೂ ಪರಿಸರಸ್ನೇಹಿ ಉಪಾಯ ಎನ್ನುತ್ತಾರೆ, ವಿಜ್ಞಾನಿಗಳು.

ಪ್ರಚಲಿತ ವಿದ್ಯಮಾನಗಳು: 23ನೇ ಸೆಪ್ಟೆಂಬರ್ 2025

ಎಸ್‌ಟಿ ಸ್ಥಾನಮಾನ ಪ್ರಕ್ರಿಯೆ ಹೇಗೆ?

ಪರಿಶಿಷ್ಟ ಪಂಗಡದ ಪಟ್ಟಿಯಲ್ಲಿರುವ ಸಮುದಾಯಗಳ ಸಾಮಾಜಿಕ ನೆಲೆ ಏನು? 

  • ಸಂವಿಧಾನದ 342ನೇ ವಿಧಿಯ ಅನ್ವಯ ಪರಿಶಿಷ್ಟ ಪಂಗಡವನ್ನು ರೂಪಿಸಲಾಗಿದ್ದು, ಪ್ರಸ್ತುತ ರಾಜ್ಯದ ಈ ಪಟ್ಟಿಯಲ್ಲಿ 50 ಜಾತಿಗಳು ಸ್ಥಾನ ಪಡೆದಿವೆ. ಶ್ರೇಣೀಕೃತ ಜಾತಿ ವ್ಯವಸ್ಥೆಯಲ್ಲಿ ಪರಿಶಿಷ್ಟ ಜಾತಿಗಳಂತೆಯೇ (ಎಸ್‌ಸಿ) ಪರಿಶಿಷ್ಟ ಪಂಗಡಗಳೂ (ಎಸ್‌ಟಿ) ಸಾಮಾಜಿಕವಾಗಿ, ಆರ್ಥಿಕವಾಗಿ ಸವಲತ್ತುಗಳಿಂದ ವಂಚಿತವಾಗಿದ್ದು, ಆ ಸಮುದಾಯಗಳನ್ನು ಸಶಕ್ತಗೊಳಿಸುವ ದಿಸೆಯಲ್ಲಿ ಹಲವು ಕ್ರಮಗಳನ್ನು ಅನುಸರಿಸಲಾಗುತ್ತಿದೆ. ಲೋಕಸಭೆ ಮತ್ತು ವಿಧಾನಸಭೆಗಳಲ್ಲಿ ಎಸ್‌ಸಿಗಳಂತೆ ಎಸ್‌ಟಿ ಸಮುದಾಯಗಳಿಗೂ ಮೀಸಲಾತಿ ಸೌಲಭ್ಯ ಕಲ್ಪಿಸಿರುವುದು ಅದರಲ್ಲಿ ಪ್ರಮುಖವಾದುದು.

ಸಂವಿಧಾನ ಏನು ಹೇಳುತ್ತದೆ?

  • ಸಂವಿಧಾನದ 342ನೇ ವಿಧಿಯು ಯಾವುದೇ ರಾಜ್ಯ ಅಥವಾ ಕೇಂದ್ರಾಡಳಿತ ಪ್ರದೇಶದಲ್ಲಿ ಅಲ್ಲಿನ ರಾಜ್ಯಪಾಲರ ಸಲಹೆ ಪಡೆದು ನಿರ್ದಿಷ್ಟ ಸಮುದಾಯ ಅಥವಾ ಜಾತಿಯನ್ನು ಪರಿಶಿಷ್ಟ ಪಂಗಡ ಎಂದು ಅಧಿಸೂಚನೆ ಹೊರಡಿಸುವ ಅಧಿಕಾರವನ್ನು ರಾಷ್ಟ್ರಪತಿಯವರಿಗೆ ನೀಡುತ್ತದೆ.
  • ಸಂವಿಧಾನದ 366ನೇ ವಿಧಿಯ 25ನೇ ಕಲಂ ‍ಪರಿಶಿಷ್ಟ ಪಂಗಡಕ್ಕೆ ಸೇರಿದವರು ಯಾರು ಎಂಬುದನ್ನು ವಿವರಿಸುವಾಗ, ಸಂವಿಧಾನದ 342ನೇ ವಿಧಿಯನ್ನೇ ಉಲ್ಲೇಖಿಸುತ್ತದೆ. ಎಸ್‌ಟಿ ಎಂದು ಗುರುತಿಸಲಾದ ಎಲ್ಲ ಸಮುದಾಯಗಳನ್ನು 1950ರ ರಾಷ್ಟ್ರಪತಿಯವರ (ಪರಿಶಿಷ್ಟ ಪಂಗಡಗಳು) ಆದೇಶದಲ್ಲಿ ಪಟ್ಟಿ ಮಾಡಲಾಗಿದೆ. ಈ ಸಮುದಾಯಗಳನ್ನು ಪರಿಶಿಷ್ಟ ಪಂಗಡಕ್ಕೆ ಸೇರಿದವು ಎಂದು ಸಂವಿಧಾನದ ಪ್ರಕಾರವೇ ಪರಿಗಣಿಸಲಾಗುತ್ತದೆ. 
  • ಸಂಸತ್ತು, ಹೊಸ ಕಾನೂನು ರೂಪಿಸುವುದರ ಮೂಲಕ ಪರಿಶಿಷ್ಟ ವರ್ಗಗಳ ವ್ಯಾಪ್ತಿಗೆ ಹೊಸ ಜಾತಿಯನ್ನು ಸೇರಿಸಬಹುದು ಇಲ್ಲವೇ, ಜಾತಿ ಹೆಸರನ್ನು ತೆಗೆದು ಹಾಕಬಹುದು. 

ಎಸ್‌ಟಿ ಪಟ್ಟಿ ಸೇರ್ಪಡೆಗೆ ಮಾನದಂಡವೇನು?

  • ದೇಶದಲ್ಲಿ 1931ರಲ್ಲಿ ನಡೆದಿದ್ದ ಕೊನೆಯ ಜಾತಿಗಣತಿಯಲ್ಲಿ ‘ಆದಿವಾಸಿ ಬುಡಕಟ್ಟು’ (ಪ್ರಿಮಿಟಿವ್‌ ಟ್ರೈಬ್ಸ್‌) ಸಮುದಾಯಗಳನ್ನು ಪಟ್ಟಿ ಮಾಡಲಾಗಿತ್ತು. ನಂತರ 1935ರ ಭಾರತ ಸರ್ಕಾರ ಕಾಯ್ದೆಯಲ್ಲಿ ‘ಹಿಂದುಳಿದ ಬುಡಕಟ್ಟು’ ಸಮುದಾಯಗಳ ಪಟ್ಟಿಯನ್ನು ರೂಪಿಸಿ, ಎಸ್‌ಟಿ ಜಾತಿಗಳ ಪಟ್ಟಿಗೆ ಸೇರ್ಪಡೆಗೊಳಿಸಲಾಗಿತ್ತು. ದೇಶದ ಸಂವಿಧಾನವು ನಿರ್ದಿಷ್ಟ ಸಮುದಾಯವನ್ನು ಎಸ್‌ಟಿ ಎಂದು ಗುರುತಿಸುವ ಮಾನದಂಡವನ್ನು ವ್ಯಾಖ್ಯಾನಿಸದೇ ಇರುವುದರಿಂದ 1950ರ ರಾಷ್ಟ್ರಪತಿಯವರ ಸಾಂವಿಧಾನಿಕ ಆದೇಶವನ್ನೇ ಪರಿಗಣಿಸಲಾಗುತ್ತದೆ. 
  • 1950ರ ಆದೇಶದಲ್ಲಿ ಪರಿಶಿಷ್ಟ ಪಂಗಡಗಳ ಅಡಿಯಲ್ಲಿ ಬರುವ ಜಾತಿಗಳನ್ನು ಪಟ್ಟಿ ಮಾಡುವಾಗ ಸಮುದಾಯಗಳ ಆದಿಮ ಸ್ವರೂಪ ಮತ್ತು ತೀರಾ ಹಿಂದುಳಿದಿರುವಿಕೆ– ಈ ಎರಡು ಅಂಶಗಳನ್ನು ಪ್ರಮುಖವಾಗಿ ಪರಿಗಣಿಸಲಾಗಿತ್ತು. ಪರಿಶಿಷ್ಟ ಜಾತಿಗಳಂತೆ ಪರಿಶಿಷ್ಟ ವರ್ಗಗಳ ಅಡಿಯಲ್ಲಿ ಬರುವ ಸಮುದಾಯಗಳು ಧರ್ಮ ಆಧಾರಿತವಲ್ಲ. 

ಪರಿಶಿಷ್ಟ ಪಂಗಡದ ಪಟ್ಟಿ ಸೇರ್ಪಡೆಯ ಮಾನದಂಡ ಬದಲಾಗಿರುವ ಇತಿಹಾಸವಿದೆಯೇ?

  • 1950 ಮತ್ತು 1960ರ ದಶಕಗಳಲ್ಲಿ ಭಾಷೆಗಳ ಆಧಾರದಲ್ಲಿ ಪ್ರತ್ಯೇಕ ರಾಜ್ಯಗಳನ್ನು ರೂಪುಗೊಳಿಸಲಾಯಿತು. ಪರಿಶಿಷ್ಟ ಪಂಗಡಗಳ ಪಟ್ಟಿಯಲ್ಲಿ ಹಲವು ರೀತಿಯ ವ್ಯತ್ಯಾಸಗಳು, ಸಮಸ್ಯೆಗಳು ಕಾಣಿಸಿಕೊಂಡವು. ಉದಾಹರಣೆಗೆ, ಬ್ರಿಟಿಷರ ಕಾಲದಲ್ಲಿ ಅಪರಾಧ ಬುಡಕಟ್ಟು ಎಂದು ಪರಿಗಣಿತವಾಗಿದ್ದ ಪಾರ್ಧಿ ಸಮುದಾಯವನ್ನು ಮಹಾರಾಷ್ಟ್ರ ಮತ್ತು ಮಧ್ಯಪ್ರದೇಶದಲ್ಲಿ ಎಸ್‌ಟಿ ಪಟ್ಟಿಗೆ ಸೇರಿಸಲಾಗಿತ್ತು. ಆದರೆ, ಅದೇ ಸಮುದಾಯವನ್ನು ರಾಜಸ್ಥಾನದಲ್ಲಿ ಎಸ್‌ಸಿ ಪಟ್ಟಿಗೆ ಸೇರಿಸಲಾಗಿತ್ತು. ಈ ದಿಸೆಯಲ್ಲಿ ಕೇಂದ್ರ ಸರ್ಕಾರವು 1965ರಲ್ಲಿ ಆಗ ಕಾನೂನು ಕಾರ್ಯದರ್ಶಿಯಾಗಿದ್ದ ಪಿ.ಬಿ.ಲೋಕೂರ್ ಅವರ ನೇತೃತ್ವದಲ್ಲಿ ಸಮಿತಿ ರಚಿಸಿ, ಪರಿಶಿಷ್ಟ ಪಂಗಡ ಎನ್ನುವುದನ್ನು ಸೂಕ್ತವಾಗಿ ವ್ಯಾಖ್ಯಾನಿಸಲು, ಎಸ್‌ಟಿ ಪಟ್ಟಿಯಲ್ಲಿ ಜಾತಿಗಳನ್ನು ಸೇರಿಸಲು ಮಾನದಂಡಗಳನ್ನು ನಿಗದಿಪಡಿಸುವಂತೆ ಸೂಚಿಸಿತು. 

ಎಸ್‌ಟಿ ಪಟ್ಟಿಯಲ್ಲಿ ಬದಲಾವಣೆ ಮಾಡಲು ಯಾವ ಪ್ರಕ್ರಿಯೆಯನ್ನು ಅನುಸರಿಸಬೇಕು?

  • ಪರಿಶಿಷ್ಟ ಪಂಗಡಕ್ಕೆ ಸಂಬಂಧಿಸಿದ ರಾಷ್ಟ್ರಪತಿಯವರ 1950ರ ಆದೇಶವನ್ನು ಬದಲಾಯಿಸಿ, ನಿರ್ದಿಷ್ಟ ಜಾತಿಯನ್ನು ಪಟ್ಟಿಗೆ ಸೇರಿಸುವಂತೆ ಅಥವಾ ನಿರ್ದಿಷ್ಟ ಜಾತಿಯನ್ನು ಪಟ್ಟಿಯಿಂದ ಕೈಬಿಡುವಂತೆ ಪ್ರಸ್ತಾವವನ್ನು ಕೇಂದ್ರ ಬುಡಕಟ್ಟು ವ್ಯವಹಾರಗಳ ಸಚಿವಾಲಯಕ್ಕೆ ಕಳುಹಿಸಲಾಗುತ್ತದೆ. ನಂತರ, ಆ ಪ್ರಸ್ತಾವವನ್ನು ಪರಿಶಿಷ್ಟ ಪಂಗಡಗಳ ರಾಷ್ಟ್ರೀಯ ಆಯೋಗ ಮತ್ತು ರಿಜಿಸ್ಟ್ರಾರ್ ಜನರಲ್ ಆಫ್ ಇಂಡಿಯಾಕ್ಕೆ (ಆರ್‌ಜಿಐ) ಕಳುಹಿಸಿ, ಅವರ ಅಭಿಪ್ರಾಯ ಮತ್ತು ಸಲಹೆ ಕೇಳಲಾಗುತ್ತದೆ. ಆರ್‌ಜಿಐನವರು ಆಂಥ್ರೊಪೊಲಾಜಿಕಲ್ ಸರ್ವೆ ಆಫ್ ಇಂಡಿಯಾ ಸೇರಿದಂತೆ ಹಲವು ಸಂಸ್ಥೆಗಳ, ತಜ್ಞರ ಅಭಿಪ್ರಾಯ ಪಡೆಯುತ್ತಾರೆ; ಪ್ರಸ್ತಾವವು ಲೋಕೂರ್ ಸಮಿತಿ ನಿಗದಿಪಡಿಸಿರುವ ಮಾನದಂಡಗಳಿಗೆ ಅನುಗುಣವಾಗಿದೆಯೇ ಎನ್ನುವುದನ್ನು ಪರಿಶೀಲಿಸುತ್ತಾರೆ.

ಎಸ್‌ಟಿ ಪಟ್ಟಿ ಬದಲಾವಣೆ ಮಾಡುವ ದಿಸೆಯಲ್ಲಿ ಲೋಕಸಭೆಯಲ್ಲಿ ಯಾವ ಪ್ರಕ್ರಿಯೆ ನಡೆಯುತ್ತದೆ?

  • ಆರ್‌ಜಿಐ ಮತ್ತು ಪರಿಶಿಷ್ಟ ಪಂಗಡಗಳ ರಾಷ್ಟ್ರೀಯ ಆಯೋಗದ ಸಲಹೆಗಳ ಆಧಾರದಲ್ಲಿ ಪರಿಶಿಷ್ಟ ಪಂಗಡಗಳ ಪಟ್ಟಿಯನ್ನು ಬದಲಾಯಿಸುವ ದಿಸೆಯಲ್ಲಿ ತಿದ್ದುಪಡಿ ಮಸೂದೆಯನ್ನು ಸಂಸತ್‌ನಲ್ಲಿ ಮಂಡಿಸುತ್ತದೆ. ಆ ಮಸೂದೆಯು ವಿಶೇಷ ಬಹುಮತದೊಂದಿಗೆ ಸಂಸತ್‌ನ ಉಭಯ ಸದನಗಳಲ್ಲಿ ಅಂಗೀಕಾರವಾಗಬೇಕು; ಮೂರನೇ ಎರಡರಷ್ಟು ಸದಸ್ಯರು ಸದನದಲ್ಲಿ ಹಾಜರಿರಬೇಕು ಮತ್ತು ಮತ ಚಲಾಯಿಸಬೇಕು. ಆ ಸಂಖ್ಯೆಯು ಸಂಸತ್‌ನ ಒಟ್ಟು ಬಲದಲ್ಲಿ ಶೇ 50ಕ್ಕಿಂತ ಹೆಚ್ಚಿರಬೇಕು. ಆಧಾರ: ಲೋಕೂರ್ ಸಮಿತಿಯ ವರದಿ, ಮಾಧ್ಯಮ ವರದಿಗಳು

ಲೋಕೂರ್‌ ಸಮಿತಿಯ ವರದಿಯಲ್ಲೇನಿತ್ತು?

  • ಪರಿಶಿಷ್ಟ ಪಂಗಡಗಳ ವ್ಯಾಪ್ತಿಗೆ ಬರುವ ಸಮುದಾಯಗಳ ಪಟ್ಟಿಯನ್ನು ಪರಿಷ್ಕರಿಸುವುದಕ್ಕಾಗಿ ಸಮಿತಿಯು ಆದಿವಾಸಿಗಳ ಗುಣಲಕ್ಷಣಗಳನ್ನು ಹೊಂದಿರುವುದು, ವಿಭಿನ್ನ ಸಂಸ್ಕೃತಿ, ಭೌಗೋಳಿಕವಾಗಿ ಪ್ರತ್ಯೇಕವಾಗಿ ವಾಸ ಇರುವುದು, ಇತರ ಸಮುದಾಯಗಳೊಂದಿಗೆ ಸಂಪರ್ಕ ಸಾಧಿಸಲು ಮತ್ತು ಬೆರೆಯಲು ಸಂಕೋಚ ಪಡುವುದು ಮತ್ತು ತೀರಾ ಹಿಂದುಳಿದಿರುವಿಕೆಗಳನ್ನು ಪ್ರಮುಖ ಮಾನದಂಡಗಳನ್ನಾಗಿ ಪರಿಗಣಿಸಿತ್ತು.
  • ಯಾವುದೇ ಬುಡಕಟ್ಟು ಸಮುದಾಯಕ್ಕೆ ಸೇರಿದ ಜನರು ಮುಖ್ಯವಾಹಿನಿ ಜನರೊಂದಿಗೆ ಬೆರೆತಿದ್ದರೆ, ಅಂತಹವರು ಪರಿಶಿಷ್ಟ ಪಂಗಡಗಳ ಪಟ್ಟಿಗೆ ಸೇರಲು ಅರ್ಹರಲ್ಲ ಎಂದೂ ಸಮಿತಿ ಪ್ರತಿಪಾದಿಸಿತ್ತು. 
  • ‘ಕೆಲವು ರಾಜ್ಯಗಳಲ್ಲಿ ಒಂದೇ ಹೆಸರಿನ ಎರಡು ಭಿನ್ನ ಸಮುದಾಯಗಳಿವೆ. ಆದರೆ, ಅವುಗಳಲ್ಲಿ ಒಂದು ಸಮುದಾಯ ಮಾತ್ರ ಎಸ್‌ಟಿ ಪಟ್ಟಿಗೆ ಸೇರಲು ಅರ್ಹವಾಗಿರುವುದು ಕಂಡು ಬಂದಿದೆ. ಬುಡಕಟ್ಟು ಸಮುದಾಯಗಳಿಗೆ ಸೇರಿದ ಜನರು ರಾಜ್ಯವೊಂದರ ನಿರ್ದಿಷ್ಟ ಪ್ರದೇಶಗಳಲ್ಲಿ ನೆಲಸಿರುವ ಮತ್ತು ಅದೇ ಸಮುದಾಯದ ಮತ್ತೂ ಕೆಲವರು ರಾಜ್ಯದ ಉಳಿದ ಪ್ರದೇಶಗಳಲ್ಲಿ ವಾಸಿಸುತ್ತಿರುವ ಕೆಲವು ಉದಾಹರಣೆಗಳು ಕಂಡುಬಂದಿವೆ. ಇವರಲ್ಲಿ ನಿರ್ದಿಷ್ಟ ಪ್ರದೇಶಗಳಲ್ಲಿ ವಾಸಿಸುತ್ತಿರುವವರನ್ನು ಎಸ್‌ಟಿ ಪಟ್ಟಿಗೆ ಸೇರಿಸುವ ಅಗತ್ಯವಿದೆ. ಉಳಿದ ಕಡೆಗಳಲ್ಲಿ ನೆಲಸಿರುವವರು ಈ ಪಟ್ಟಿಗೆ ಸೇರುವ ಅರ್ಹತೆ ಪಡೆದಿಲ್ಲ’ ಎಂದು ಸಮಿತಿಯು ತನ್ನ ವರದಿಯಲ್ಲಿ ತಿಳಿಸಿತ್ತು. 
  • ಆದರೆ, ನಂತರದ ವರ್ಷಗಳಲ್ಲಿ ಕೇಂದ್ರ ಸರ್ಕಾರವು ಪಟ್ಟಿಗೆ ಜಾತಿಗಳನ್ನು ಸೇರ್ಪಡೆಯಾಗಲು ಅಥವಾ ಪಟ್ಟಿಯಿಂದ ತೆಗೆದು ಹಾಕಲು ಇರಬೇಕಾದ ವಿಧಾನಗಳನ್ನು ಬದಲಾಯಿಸಿತು.

ಕುರುಬ ಸಮುದಾಯದ ಬೇಡಿಕೆ

  • ಕುರುಬರನ್ನು ಎಸ್‌ಟಿ ಪಟ್ಟಿಗೆ ಸೇರಿಸಬೇಕು ಎನ್ನುವ ಒತ್ತಾಯ ಹಿಂದಿನಿಂದಲೂ ಕೇಳಿಬರುತ್ತಿದೆ. ಪ್ರಸ್ತುತ ಕುರುಬ ಸಮುದಾಯವು ಹಿಂದುಳಿದ ‘ಎ’ ಪಟ್ಟಿಯಲ್ಲಿದ್ದು, ಅದೇ ಪಟ್ಟಿಯಲ್ಲಿರುವ ಇತರೆ 102 ಜಾತಿಗಳೊಂದಿಗೆ ಶೇ 15ರ ಮೀಸಲಾತಿಯನ್ನು ಹಂಚಿಕೊಳ್ಳುತ್ತಿದೆ. ಕುರುಬ ಸಮುದಾಯವನ್ನು ಎಸ್‌ಟಿ ಪಟ್ಟಿಗೆ ಸೇರಿಸುವಂತೆ 2023ರಲ್ಲೇ ರಾಜ್ಯ ಸರ್ಕಾರವು ಕೇಂದ್ರಕ್ಕೆ ಶಿಫಾರಸು ಮಾಡಿತ್ತು. ಈ ಸಂಬಂಧ ಮೈಸೂರಿನ ಬುಡಕಟ್ಟು ಸಂಶೋಧನಾ ಸಂಸ್ಥೆ ನಡೆಸಿದ ಕುಲಶಾಸ್ತ್ರೀಯ ಅಧ್ಯಯನದ ವರದಿಯನ್ನೂ ಲಗತ್ತಿಸಲಾಗಿತ್ತು. ಆದರೆ, ಪ್ರಸ್ತಾವವನ್ನು ಕೇಂದ್ರವು ವಾಪಸ್ ಕಳುಹಿಸಿತ್ತು.       
  • ಕುರುಬರು, ಭಾರತದ ಮೂಲನಿವಾಸಿಗಳಾಗಿದ್ದು, ಸಮುದಾಯವನ್ನು 1868 ಮತ್ತು 1901ರ ಜನಗಣತಿಯ ಸಂದರ್ಭದಲ್ಲಿ ಪರಿಶಿಷ್ಟ ಪಂಗಡ ಎಂದೇ ಗುರುತಿಸಲಾಗಿತ್ತು. ಸ್ವಾತಂತ್ರ್ಯಾನಂತರ ಪಟ್ಟಿಯಿಂದ ಕೈಬಿಡಲಾಗಿತ್ತು. ದೇವರಾಜ ಅರಸರು ಕಾಡು ಕುರುಬ ಮತ್ತು ಜೇನು ಕುರುಬರನ್ನು ಎಸ್‌ಟಿ ಪಟ್ಟಿಗೆ ಸೇರಿಸಿದರು. ಆಂಧ್ರಪ್ರದೇಶ ಮತ್ತು ತಮಿಳುನಾಡಿನಲ್ಲಿ ಕುರುಬರನ್ನು ಎಸ್‌ಟಿ ಎಂದು ಪರಿಗಣಿಸಲಾಗುತ್ತಿದೆ ಎನ್ನುವುದು ಸಮುದಾಯದ ಮುಖಂಡರ ವಾದ. ಆದರೆ, ಕುರುಬ ಸಮುದಾಯವನ್ನು ಎಸ್‌ಟಿ ಪಟ್ಟಿಗೆ ಸೇರಿಸುವುದಕ್ಕೆ ವಾಲ್ಮೀಕಿ ಮಹಾಸಭಾ ಸೇರಿದಂತೆ ಹಲವು ಸಂಘಟನೆಗಳು, ಸಮುದಾಯಗಳು ವಿರೋಧ ವ್ಯಕ್ತಪಡಿಸಿವೆ.

ಅತ್ಯಲ್ಪ ಯಶಸ್ಸು

  • ಕರ್ನಾಟಕದಲ್ಲಿ ಹಲವು ಜಾತಿಗಳನ್ನು ಅವುಗಳ ಸ್ಥಿತಿಗತಿ ಆಧರಿಸಿ ಎಸ್‌ಟಿ ಪಟ್ಟಿಗೆ ಸೇರಿಸುವ ಸಂಬಂಧ ಹಿಂದಿನಿಂದಲೂ ಪ್ರಸ್ತಾವಗಳನ್ನು ಕಳುಹಿಸುವುದು ನಡೆದೇ ಇದೆ.  ಕಾಡುಗೊಲ್ಲರನ್ನು ಎಸ್‌ಟಿ ಪಟ್ಟಿಗೆ ಸೇರಿಸಬೇಕೆನ್ನುವ ಬೇಡಿಕೆ ಬಹಳ ಕಾಲದಿಂದಲೂ ಇದೆ. ಈ ಸಂಬಂಧ ರಾಜ್ಯದಿಂದ ಹಿಂದೆಯೇ ಶಿಫಾರಸು ಮಾಡಲಾಗಿತ್ತು. ಇದೇ ರೀತಿ ಗಂಗಾಮತ ಮತ್ತು ಅದರ ಉಪಜಾತಿಗಾಳದ ಕೋಲಿ, ಕಬ್ಬಲಿಗ, ಬೆಸ್ತ, ಬಾರಿಕ, ಅಂಬಿಗ ಇವುಗಳನ್ನು ‌ಎಸ್‌ಟಿ ಪಟ್ಟಿಗೆ ಸೇರಿಸಬೇಕು ಎನ್ನುವ ಒತ್ತಾಯ ಇದೆ. ಬಹಳ ಹಿಂದಿನಿಂದಲೂ ಈ ಬೇಡಿಕೆ ಇದ್ದು, ಮೂರು ಬಾರಿ ಶಿಫಾರಸು ಮಾಡಲಾಗಿತ್ತು. ಮೂರು ಬಾರಿಯೂ ಪ್ರಸ್ತಾವವನ್ನು ವಾಪಸ್ ಕಳುಹಿಸಲಾಗಿದೆ. ರಾಜ್ಯದ ಇಂಥ ಪ್ರಯತ್ನಗಳ ಪೈಕಿ ಯಶ ಕಂಡಿರುವುದು ಕೆಲವು ಮಾತ್ರ. ರಾಜ್ಯ ಸರ್ಕಾರದ ಶಿಫಾರಸು ಆಧರಿಸಿ ಮೇದಾರ, ತಳವಾರರನ್ನು ಎಸ್‌ಟಿ ಪಟ್ಟಿಗೆ ಸೇರಿಸಲಾಗಿದೆ. ಇದೇ ರೀತಿ ಕೆಲವು ಜಿಲ್ಲೆಗಳಲ್ಲಿರುವ ಸಿದ್ಧಿ ಸಮುದಾಯವನ್ನೂ ಎಸ್‌ಟಿ ಪಟ್ಟಿಗೆ ಸೇರಿಸಲಾಗಿದೆ. ಆದರೆ, ರಾಜ್ಯದ ಪ್ರಯತ್ನಗಳಿಗೆ ಸಿಕ್ಕಿರುವ ಯಶಸ್ಸು ಅತ್ಯಲ್ಪ. 
  • 2025ರ ಸೆಪ್ಟೆಂಬರ್‌ 16ರಂದು ಕರೆದಿದ್ದ ಸಭೆಯಲ್ಲಿ ಕುರುಬರನ್ನು ಎಸ್‌ಟಿ ಪಟ್ಟಿಗೆ ಸೇರಿಸುವ ವಿಚಾರದ ಜತೆಗೆ ಗಂಗಾಮತಸ್ಥರನ್ನು ಎಸ್‌ಟಿ ಪಟ್ಟಿಗೆ ಸೇರಿಸುವ ಪ್ರಸ್ತಾವದ ಬಗ್ಗೆಯೂ ಚರ್ಚಿಸಬೇಕಾಗಿತ್ತು. ಆದರೆ, ನಂತರ ಆ ಸಭೆ ಮುಂದೂಡಲಾಯಿತು. 

ಫಿಡೆ ವಿಶ್ವಕಪ್‌: ದಿವ್ಯಾ ದೇಶಮುಖ್‌ಗೆ ವೈಲ್ಡ್‌ಕಾರ್ಡ್
ಸಂದರ್ಭ: ಫಿಡೆ ಮಹಿಳಾ ವಿಶ್ವಕಪ್ ವಿಜೇತೆ ಗ್ರ್ಯಾಂಡ್ ಮಾಸ್ಟರ್ ದಿವ್ಯಾ ದೇಶಮುಖ್ ಅವರು ಗೋವಾದಲ್ಲಿ ನಡೆಯಲಿರುವ 2025 ಆವೃತ್ತಿಯ ಫಿಡೆ ವಿಶ್ವಕಪ್ಗೆ ವೈಲ್ಡ್‌ಕಾರ್ಡ್ ಪ್ರವೇಶ ಪಡೆದಿದ್ದಾರೆ.
  • ವಿಶ್ವಕಪ್‌ ಟೂರ್ನಿಯು ಅಕ್ಟೋಬರ್ 31ರಿಂದ ನವೆಂಬರ್ 27ರ ತನಕ ನಡೆಯಲಿದೆ. ಒಬ್ಬ ಸ್ಪರ್ಧಿಯು ಕೊನೆಯ ಕ್ಷಣದಲ್ಲಿ ಹಿಂದೆ ಸರಿದ ಕಾರಣ 19 ವರ್ಷದ ದಿವ್ಯಾ ಅವರಿಗೆ ಅವಕಾಶ ದೊರಕಿದೆ.
  • ಫಿಡೆ ವಿಶ್ವಕಪ್ ಪ್ರತಿ ಎರಡು ವರ್ಷ ಗಳಿಗೊಮ್ಮೆ ನಡೆಯುತ್ತದೆ. ವಿಶ್ವದ 206 ಚೆಸ್‌ಪಟುಗಳು ಕಣಕ್ಕೆ ಇಳಿಯಲಿದ್ದಾರೆ.
  • 20 ಆಟಗಾರರನ್ನು ಒಳಗೊಂಡ ಭಾರತದ ಸವಾಲನ್ನು ವಿಶ್ವ ಚಾಂಪಿಯನ್ ಡಿ. ಗುಕೇಶ್ ಮುನ್ನಡೆಸಲಿದ್ದಾರೆ.

ಮೂಲಸೌಕರ್ಯ ವಲಯದ ಬೆಳವಣಿಗೆ 13 ತಿಂಗಳ ಗರಿಷ್ಠ
ಸಂದರ್ಭ: ದೇಶದ ಪ್ರಮುಖ ಎಂಟು ಮೂಲಸೌಕರ್ಯ ವಲಯಗಳ ಬೆಳವಣಿಗೆ ಆಗಸ್ಟ್‌ನಲ್ಲಿ 13 ತಿಂಗಳ ಗರಿಷ್ಠ ಮಟ್ಟಕ್ಕೆ ಏರಿಕೆ ಆಗಿದ್ದು, ಶೇ 6.3ರಷ್ಟು ದಾಖಲಾಗಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.
  • ಕಲ್ಲಿದ್ದಲು, ಉಕ್ಕು, ಸಿಮೆಂಟ್ ಉತ್ಪಾದನೆಯಲ್ಲಿನ ಹೆಚ್ಚಳದಿಂದಾಗಿ ಈ ಬೆಳವಣಿಗೆ ಸಾಧ್ಯವಾಗಿದೆ ಎಂದು ತಿಳಿಸಿದೆ.
  • ಜುಲೈನಲ್ಲಿ ವಲಯದ ಉತ್ಪಾದನೆ ಶೇ 3.7ರಷ್ಟಿತ್ತು. ಕಳೆದ ವರ್ಷದ ಆಗಸ್ಟ್‌ನಲ್ಲಿ ಬೆಳವಣಿಗೆ ಶೇ (–) 1.5 ದಾಖಲಾಗಿತ್ತು.
  • ಪ್ರಸಕ್ತ ಆರ್ಥಿಕ ವರ್ಷದ ಏಪ್ರಿಲ್‌ ನಿಂದ ಆಗಸ್ಟ್‌ವರೆಗಿನ ಅವಧಿಯಲ್ಲಿ ವಲಯದ ಪ್ರಗತಿ ಶೇ 2.8ರಷ್ಟಾಗಿದೆ ಎಂದು ಕೇಂದ್ರ ತಿಳಿಸಿದೆ. ಕಳೆದ ಆರ್ಥಿಕ ವರ್ಷದ ಇದೇ ಅವಧಿಯಲ್ಲಿ ಇದು ಶೇ 4.6ರಷ್ಟಿತ್ತು.
  • ಕಲ್ಲಿದ್ದಲು (ಶೇ 11.4), ಉಕ್ಕು (ಶೇ 14.2), ಸಿಮೆಂಟ್‌ (ಶೇ 6.1), ಸಂಸ್ಕರಿ ಸಿದ ಉತ್ಪನ್ನಗಳು (ಶೇ 3), ರಸಗೊಬ್ಬರ (ಶೇ 4.6), ವಿದ್ಯುತ್‌ (ಶೇ 3.1ರಷ್ಟು) ಉತ್ಪಾದನೆ ಹೆಚ್ಚಳ ವಾಗಿದೆ. ಕಚ್ಚಾ ತೈಲ, ನೈಸರ್ಗಿಕ ಅನಿಲ ಉತ್ಪಾದನೆ ಇಳಿಕೆ ಆಗಿದೆ ಎಂದು ತಿಳಿಸಿದೆ.