Thu. May 7th, 2026

Kannada

ಪ್ರಚಲಿತ ವಿದ್ಯಮಾನಗಳು: 2ನೇ ಸೆಪ್ಟೆಂಬರ್ 2025

ಸಾಮಾನ್ಯ ಅಧ್ಯಯನ 2: ರಾಜಕೀಯ; ಮಹಾನಗರಗಳಲ್ಲಿ ಆಡಳಿತ ಸುಧಾರಣೆಗಳು

ಜಿಬಿಎ ನಿಗಾದಡಿ ಪಾಲಿಕೆಗಳ ಕಾರ್ಯ

ಸಂದರ್ಭ: ನಗರ ಪಾಲಿಕೆಗಳ ಆಡಳಿತದಲ್ಲಿ ‘ಗ್ರೇಟರ್‌ ಬೆಂಗಳೂರು ಪ್ರಾಧಿಕಾರ’ (ಜಿಬಿಎ)  ಹಸ್ತಕ್ಷೇಪ ಮಾಡುವುದಿಲ್ಲ ಎಂದು ಹೇಳುತ್ತಿದ್ದರೂ, ಚುನಾವಣೆ ಆಗುವವರೆಗೂ ಮುಖ್ಯ ಆಯುಕ್ತರ ಅಡಿಯಲ್ಲೇ ಐದೂ ನಗರ ಪಾಲಿಕೆಗಳ ಆಯುಕ್ತರು ಕಾರ್ಯ ನಿರ್ವಹಿಸಲಿದ್ದಾರೆ.

  • ಜಿಬಿಎ ಹಾಗೂ ನಗರ ಪಾಲಿಕೆಯ ಪ್ರಸ್ತಾವಿತ ಕಾರ್ಯನಿರ್ವಹಣೆಯ ಪಟ್ಟಿಯಂತೆ (ಆರ್ಗನೈಸೇಷನ್‌ ಚಾರ್ಟ್‌) ಬೃಹತ್‌ ಕಾಮಗಾರಿಗಳನ್ನು ನಿರ್ವಹಿಸುವ ಬಿ–ಸ್ಮೈಲ್‌ ಸೇರಿದಂತೆ ಜಿಬಿಎನಲ್ಲಿ ತಾಂತ್ರಿಕ ಜಾಗೃತಿ ಕೋಶ (ಟಿವಿಸಿಸಿ), ಗುಣಮಟ್ಟ ನಿಯಂತ್ರಣ (ಕ್ಯೂಸಿ), ಬೆಂಗಳೂರು ಘನತ್ಯಾಜ್ಯ ನಿರ್ವಹಣೆ ನಿಯಮಿತ (ಬಿಎಸ್‌ಡಬ್ಲ್ಯುಎಂಎಲ್‌), ಯೋಜನೆ ವಿಭಾಗಗಳು ಜಿಬಿಎ ಮುಖ್ಯ ಆಯುಕ್ತರ ಅಡಿಯಲ್ಲಿ ಕಾರ್ಯನಿರ್ವಹಿಸಲಿದ್ದಾರೆ.
  • ಟಿವಿಸಿಸಿ, ಕ್ಯೂಸಿ,  ಬಿಎಸ್‌ಡಬ್ಲ್ಯು ಎಂಎಲ್‌, ಯೋಜನೆ ವಿಭಾಗಗಳ ಮುಖ್ಯ ಎಂಜಿನಿಯರ್‌ಗಳಿಗೆ ತಲಾ ಒಬ್ಬರು ಅಧೀಕ್ಷಕ ಎಂಜಿನಿಯರ್‌ (ಎಸ್‌ಇ), ತಲಾ 10 ಕಾರ್ಯಪಾಲಕ ಎಂಜಿನಿಯರ್‌ (ಇಇ), ತಲಾ 20 ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ (ಎಇಇ), ತಲಾ 20 ಸಹಾಯಕ ಎಂಜಿನಿಯರ್‌ (ಎಇ) ಇರಲಿದ್ದಾರೆ.  ಬಿ–ಸ್ಮೈಲ್‌ನಲ್ಲಿ ಸಿಒಒ ಜೊತೆಗೆ ನಾಲ್ವರು ಮುಖ್ಯ ಎಂಜಿನಿಯರ್‌, ನಾಲ್ವರು ಎಸ್ಇ, 20 ಇಇ, 30 ಎಇಇ, 50 ಎಇಗಳಿರುತ್ತಾರೆ.
  • ಜಿಬಿಎ ಮುಖ್ಯ ಆಯುಕ್ತರಡಿ ಐದು ಪಾಲಿಕೆಗಳ ಆಯುಕ್ತರು ಕಾರ್ಯ ನಿರ್ವಹಿಸಬೇಕಿದೆ. ನಗರ ಪಾಲಿಕೆಯ ಹೆಚ್ಚುವರಿ ಆಯುಕ್ತರು ಕಂದಾಯ, ಆಸ್ತಿ, ಮಾರುಕಟ್ಟೆ, ಆಡಳಿತ, ಹಣಕಾಸು, ಜಾಹೀರಾತು, ಸರ್ವೆ, ಮಾಹಿತಿ ತಂತ್ರಜ್ಞಾನ ವಿಭಾಗದ ಜವಾಬ್ದಾರಿ ನೀಡಲಾಗಿದೆ.
  • ಜಂಟಿ ಆಯುಕ್ತರಿಗೆ ಯೋಜನೆ, ಆರೋಗ್ಯ–ಸ್ವಾಸ್ಥ್ಯ, ಶಿಕ್ಷಣ, ಅರಣ್ಯ–ತೋಟಗಾರಿಕೆ– ಕೆರೆ, ನಗರ ಯೋಜನೆ, ಟಿಡಿಆರ್‌, ಕಲ್ಯಾಣ ವಿಭಾಗಗಳನ್ನು ಹಂಚಲಾಗಿದೆ. ಜಿಬಿಎನಲ್ಲಿರುವ ವಿಶೇಷ ಆಯುಕ್ತರು ಹೆಚ್ಚುವರಿ– ಜಂಟಿ ಆಯುಕ್ತರು ಹೊಂದಿರುವ ಜವಾಬ್ದಾರಿಗಳನ್ನೇ ಹೊಂದಿದ್ದು, ಅವರು ಇವರ ಮೇಲೆ ಹಿಡಿತ ಸಾಧಿಸಲಿದ್ದಾರೆ.
  • ನಗರ ಪಾಲಿಕೆಗಳಲ್ಲಿ ತಲಾ ಮೂವರು ಮುಖ್ಯ ಎಂಜಿನಿಯರ್‌ಗಳಿರುತ್ತಾರೆ. ಯೋಜನೆ ಹಾಗೂ ವಲಯ ಮಟ್ಟದ ಕಾಮಗಾರಿಗಳನ್ನು ಇವರು ನಿರ್ವಹಿಸ ಲಿದ್ದಾರೆ. ವಾರ್ಡ್‌ ಎಂಜಿನಿಯರಿಂಗ್‌ ಕಾಮಗಾರಿ,  ತ್ಯಾಜ್ಯ ನಿರ್ವಹಣೆ, ಬೀದಿ ದೀಪ, 50 x 80 ಅಡಿಗಳವರೆಗಿನ ಕಟ್ಟಡಗಳಿಗೆ ನಕ್ಷೆ ಅನುಮೋದನೆಗೆ ಸಿಒ– ವಾರ್ಡ್‌ ಎಂಬ ಹುದ್ದೆ ಸೃಷ್ಟಿಸಲಾಗಿದೆ.

ಕಾರ್ಯಾಚರಣೆಗೆ ಸಿದ್ಧತೆ: ಮಹೇಶ್ವರ್‌ ರಾವ್‌

  • ‘ಗ್ರೇಟರ್‌ ಬೆಂಗಳೂರು ಪ್ರಾಧಿಕಾರ’ (ಜಿಬಿಎ) ಕಾರ್ಯಕಲಾಪಗಳನ್ನು ನಡೆಸಲು ಸಜ್ಜಾಗಿದ್ದು, ಐದು ನಗರ ಪಾಲಿಕೆಗಳ ರಚನೆಯ ಅಧಿಸೂಚನೆ ಹೊರಬೀಳುತ್ತಿದ್ದಂತೆಯೇ ನಿಯೋಜಿತ ಅಧಿಕಾರಿಗಳು ಕಾರ್ಯನಿರ್ವಹಿಸಲಿದ್ದಾರೆ.
  • ‘198 ವಾರ್ಡ್‌ಗಳು ನಗರ ಪಾಲಿಕೆಗಳಿಗೆ ವಿಂಗಡಣೆಯಾಗಲಿದ್ದು, ಅದರಂತೆಯೇ ಕಾರ್ಯನಿರ್ವಹಿಸಲಿವೆ. ಕಾಮಗಾರಿಗಳು ಅಥವಾ ಬಿಲ್‌ ಪಾವತಿಗೆ ಅಷ್ಟೇನು ತೊಂದರೆಯಾಗದು. 
  • ಬಿಬಿಎಂಪಿ ಬಜೆಟ್‌ ಅನ್ನೇ ಮುಂದುವರಿಸಲಾಗು ತ್ತದೆ. ನಗರ ಪಾಲಿಕೆಗಳು ರಚನೆಗೊಂಡ ಮೇಲೆ ಅವರಿಗೆ ಅನುಸಾರವಾಗಿ ಪುನರ್‌ ವಿಮರ್ಶೆ ಮನವಿಯನ್ನು ಸಲ್ಲಿಸಿದರೆ ಜಿಬಿಎ ಅದನ್ನು ಪರಿಶೀಲಿಸಿ, ಕ್ರಮ ಕೈಗೊಳ್ಳುತ್ತದೆ’ ಎಂದು ಸುದ್ದಿಗಾರರಿಗೆ ಸೋಮವಾರ ಮಾಹಿತಿ ನೀಡಿದರು.

‘ಉಪ ಆಯುಕ್ತರಿಗೆ ಆಯುಕ್ತರ ಹೊಣೆ’

  •  ‘ಆಡಳಿತಾತ್ಮಕ ಅನುಭವ ಇರುವ, ಉಪ ಆಯುಕ್ತ ರುಗಳಾಗಿ ಕೆಲಸ ನಿರ್ವಹಿಸಿರುವ ಹಿರಿಯ ಅಧಿಕಾರಿಗಳನ್ನು ಗ್ರೇಟರ್ ಬೆಂಗಳೂರು ಪ್ರಾಧಿಕಾರದ (ಜಿಬಿಎ) ಐದು ಪಾಲಿಕೆಗಳಿಗೆ ಆಯುಕ್ತರನ್ನಾಗಿ ನೇಮಿಸಲು ತೀರ್ಮಾನಿಸಲಾಗಿದೆ’.

ಆಯಾ ಪಾಲಿಕೆಗೆ ಎ, ಬಿ, ಸಿ, ಡಿ ನೌಕರರು

  • ಬಿಬಿಎಂಪಿ ವ್ಯಾಪ್ತಿಯಲ್ಲಿರುವ ಎ, ಬಿ, ಸಿ, ಡಿ ವೃಂದದ ನೌಕರರು ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ ಕಚೇರಿಯು ಹೊಸದಾಗಿ ರಚನೆಯಾಗುವ ಯಾವ ನಗರ ಪಾಲಿಕೆಗೆ ಬರುತ್ತದೋ ಅದರಡಿ ಕೆಲಸ ನಿರ್ವಹಿಸುವಂತೆ ನಗರಾಭಿವೃದ್ಧಿ ಇಲಾಖೆ ಅಧಿಸೂಚನೆ ಹೊರಡಿಸಿದೆ.
  • ಜಿಬಿಎ ಅಸ್ತಿತ್ವಕ್ಕೆ ಬಂದಿರುವುದರಿಂದ ಬಿಬಿಎಂಪಿ ನಿರಶನಗೊಂಡಿರುವುದ ರಿಂದ, ಬಿಬಿಎಂಪಿಗೆ ಮಂಜೂರಾಗಿರುವ ವಿವಿಧ ವೃಂದದ ಹುದ್ದೆಗಳನ್ನು ಮರು ಹಂಚಿಕೆ ಮಾಡಲಾಗಿದೆ.
  • ಜಿಬಿಎಗೆ ಅಥವಾ ಇತರೆ ನಗರ ಪಾಲಿಕೆಗೆ ವರ್ಗಾಯಿಸಲು ನಿರ್ದಿಷ್ಟ ಆದೇಶ ಹೊರಡಿಸಿದರೆ ಮಾತ್ರ ಅವರು ಬೇರೆಡೆಗೆ ಹೋಗಬಹುದು. 198 ವಾರ್ಡ್ ಕಚೇರಿಗಳು ಯಾವ ನಗರ ಪಾಲಿಕೆಗಳ ವ್ಯಾಪ್ತಿಗೆ ಬರುತ್ತವೋ ಅಲ್ಲಿಯೇ ಆ ಸಿಬ್ಬಂದಿಯ ಕೆಲಸ ಮುಂದುವರಿಯುತ್ತದೆ.
  • ಬಿಬಿಎಂಪಿ ಕೇಂದ್ರ ಕಚೇರಿ ಅಥವಾ ಯಾವುದೇ ಕಚೇರಿಯಲ್ಲಿರುವ ಸಿಬ್ಬಂದಿಯ ಹುದ್ದೆ ಮುಂದುವರಿಸಿರುವ ಆದೇಶವಿಲ್ಲದಿದ್ದರೆ, ಅಂತಹವರು ಸರ್ಕಾರ ಅಥವಾ ಜಿಬಿಎಯಲ್ಲಿ ಸ್ಥಳ ನಿರೀಕ್ಷಣೆಗಾಗಿ ವರದಿ ಮಾಡಿಕೊಳ್ಳಬೇಕು.
  • ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿರುವ ಅಧಿಕಾರಿಗಳು ಜಿಬಿಎ ಮುಖ್ಯ ಆಯುಕ್ತರ ಬಳಿ ವರದಿ ಮಾಡಿಕೊಂಡು, ಐದು ನಗರ ಪಾಲಿಕೆಗಳು, ಬಿ-ಸ್ಮೈಲ್ ಗೆ ಕಡತಗಳನ್ನು ವರ್ಗಾಯಿಸುವ ಪೂರ್ಣ ಜವಾಬ್ದಾರಿ ನಿಭಾಯಿಸಬೇಕು ಎಂದು ಆದೇಶದಲ್ಲಿ ತಿಳಿಸಲಾಗಿದೆ.
  • ವ್ಯವಸ್ಥಾಪಕರು, ಎಫ್ ಡಿಎ, ಎಸ್ ಡಿಎ, ಸ್ಟೆನೊಗ್ರಾಫರ್, ಚಾಲಕರು ಮತ್ತು ಗ್ರೂಪ್-ಡಿ ನೌಕರರು (1,820), ಲೆಕ್ಕಾಧಿಕಾರಿಗಳು (44), ಆಡಳಿತ ವಿಭಾಗ (3), ಕ್ಲಿನಿಕಲ್ ಹೆಲ್ತ್, ಕೌನ್ಸಿಲ್, ಶಿಕ್ಷಣ, ಮುಖ್ಯ- ಅಧೀಕ್ಷಕ- ಕಾರ್ಯಪಾಲಕ, ಸಹಾಯಕ, ಕಿರಿಯ ಎಂಜಿನಿಯರ್ ಗಳು, ಅರಣ್ಯ, ಕಾನೂನು ಘಟಕ, ತೋಟಗಾರಿಕೆ, ಮಾಹಿತಿ ತಂತ್ರಜ್ಞಾನ, ಸಾರ್ವಜನಿಕ ಆರೋಗ್ಯ, ಸಾರ್ವಜನಿಕ ಸಂಪರ್ಕಾಧಿಕಾರಿ, ಕಂದಾಯ, ಆಸ್ತಿ, ಜಾಹೀರಾತು, ಟಿಡಿಆರ್, ಮಾರುಕಟ್ಟೆ, ನೈರ್ಮಲ್ಯ, ಪೌರಕಾರ್ಮಿಕರು, ಸರ್ವೆ, ನಗರ ಯೋಜನೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಯನ್ನು ಜಿಬಿಎ ಹಾಗೂ ಐದು ನಗರ ಪಾಲಿಕೆಗಳು, ವಲಯ ಕಚೇರಿಗಳಿಗೆ ನಿಯೋಜಿಸಿ ಆದೇಶ ಹೊರಡಿಸಲಾಗಿದೆ.

ಮೂಲಗಳು: ಪ್ರಜಾವಾಣಿ

ಸಾಮಾನ್ಯ ಅಧ್ಯಯನ 2: ದುರ್ಬಲ ವರ್ಗಗಳ ಕಲ್ಯಾಣ

ಅನ್ನಪೂರ್ಣ ಯೋಜನೆ ಜಾರಿ

ಸಂದರ್ಭ: ಬೆಂಗಳೂರು ಜಲಮಂಡಳಿ ವ್ಯಾಪ್ತಿಯಲ್ಲಿ ನಿತ್ಯ ಕೆಲಸ ಮಾಡುವ 700ಕ್ಕೂ ಹೆಚ್ಚು ಸ್ವಚ್ಛತಾ ಕಾರ್ಮಿಕರಿಗೆ ಅನ್ನಪೂರ್ಣ ಯೋಜನೆ ಜಾರಿಗೊಳಿಸಲಾಗಿದೆ.

  • ಪ್ರತಿ ತಿಂಗಳು ₹1500 ಅನ್ನು ಅನ್ನಪೂರ್ಣ ಯೋಜನೆಯಡಿ ಸ್ವಚ್ಛತಾ ಕಾರ್ಮಿಕರು ಪಡೆಯಲಿದ್ದಾರೆ. ಆ್ಯಕ್ಸಿಸ್ಬ್ಯಾಂಕ್ಜೊತೆಗೂಡಿ ಯೋಜನೆ ಜಾರಿಗೊಳಿಸಲಾಗಿದೆ.
  • ಕರ್ನಾಟಕದ ಇತರೆ ನಗರಗಳಲ್ಲಿ ಸ್ವಚ್ಛತಾ ಕಾರ್ಮಿಕರಿಗೆ ಬೆಳಗಿನ ಉಪಾಹಾರ ವ್ಯವಸ್ಥೆ ಮಾಡಲಾಗಿದೆ. ಆದರೆ, ಉಪಾಹಾರದ ಬದಲು ತಮಗೆ ಇಷ್ಟವಾದ ಆಹಾರ ಸೇವಿಸಲಿ ಎನ್ನುವ ಉದ್ದೇಶದಿಂದ ನೇರವಾಗಿ ಹಣ ನೀಡಲಾಗುತ್ತಿದೆ.

ಮೂಲಗಳು: ಪ್ರಜಾವಾಣಿ

ಕ್ರೀಡಾ ಸಂಗತಿಗಳು

ಮಹಿಳಾ ಏಕದಿನ ವಿಶ್ವಕಪ್‌: ಗೆಲ್ಲುವ ತಂಡಕ್ಕೆ ₹39.55 ಕೋಟಿ!

ಸಂದರ್ಭ: ಮುಂಬರುವ ಐಸಿಸಿ ಮಹಿಳಾ ಏಕದಿನ ವಿಶ್ವಕಪ್‌ ಕ್ರಿಕೆಟ್‌ ಚಾಂಪಿಯನ್ನರು ಟೂರ್ನಿಯ ಇತಿಹಾಸ ದದಲ್ಲೇ ಅತ್ಯಧಿಕ ಮೊತ್ತದ ಬಹುಮಾನ ಮೊತ್ತ ಗಳಿಸಲಿದ್ದಾರೆ. ವಿಜೇತರಿಗೆ ನೀಡುವ ಬಹುಮಾನದ ಹಣವನ್ನು ₹11.65 ಕೋಟಿಯಿಂದ ₹39.55 ಕೋಟಿಗೆ ಏರಿಸಲಾಗಿದೆ ಎಂದು ಅಂತರರಾಷ್ಟ್ರೀಯ ಕ್ರಿಕೆಟ್‌ ಸಮಿತಿ ಪ್ರಕಟಿಸಿದೆ.

  • 2023ರ ಪುರುಷರ ವಿಶ್ವಕಪ್‌ ಗೆದ್ದ ಆಸ್ಟ್ರೇಲಿಯಾ ತಂಡ ₹31.35 ಕೋಟಿ ಗಳಿಸಿತ್ತು.
  • ಮಹಿಳಾ ವಿಶ್ವಕಪ್‌ನ 13ನೇ ಆವೃತ್ತಿ ಸೆಪ್ಟೆಂಬರ್‌ 30ರಂದು ಆರಂಭವಾಗಲಿದೆ. ಭಾರತ ಮತ್ತು ಶ್ರೀಲಂಕಾ ಆತಿಥ್ಯ ವಹಿಸಿವೆ. ಎಂಟು ತಂಡಗಳು ಕಣದಲ್ಲಿರುವ ಈ ಟೂರ್ನಿಯ ಬಹುಮಾನ ಮೊತ್ತ ಸುಮಾರು ಮೂರು ಪಟ್ಟು ಹೆಚ್ಚಾಗಿದೆ.
  • ಈ ಬಾರಿ ಟೂರ್ನಿಯ ಒಟ್ಟು  ಬಹುಮಾನ ಮೊತ್ತ ₹122.5 ಕೋಟಿ ($13.88 ದಶಲಕ್ಷ). ನ್ಯೂಜಿಲೆಂಡ್‌ನಲ್ಲಿ ಕಳೆದ ಬಾರಿಯ (2022ರ) ಆವೃತ್ತಿಗೆ ಹೋಲಿಸಿದರೆ ಇದು ಶೇ 297ರಷ್ಟು ಅಧಿಕ. ಈ ಏರಿಕೆಯು 2023ರ ಪುರುಷರ ಏಕದಿನ ವಿಶ್ವಕಪ್‌ ಟೂರ್ನಿಯ ಬಹುಮಾನ ಮೊತ್ತ (ಸುಮಾರು ₹88.26 ಕೋಟಿ) ಮೀರಿಸಿದೆ ಎಂದು ಐಸಿಸಿ ವಿವರಿಸಿದೆ.
  • ರನ್ನರ್‌ ಅಪ್‌ ಸ್ಥಾನ ಪಡೆಯುವ ತಂಡ ₹19.77 ಕೋಟಿ ಮೊತ್ತ ($2.24 ದಶಲಕ್ಷ) ಸಂಪಾದಿಸಲಿದೆ. ಇದು ಕಳೆದ ಬಾರಿಯ ಮೊತ್ತವಾದ ₹5.30 ಕೋಟಿಗೆ ಹೋಲಿಸಿದಲ್ಲಿ ಶೇ. 273ರಷ್ಟು ಹೆಚ್ಚು.
  • ಸೆಮಿಫೈನಲ್‌ನಲ್ಲಿ ಸೋತ ತಂಡಗಳು ₹9.89 ಕೋಟಿ ಮೊತ್ತ ತಮ್ಮದಾಗಿಸಿಕೊಳ್ಳಲಿವೆ. 2022ರಲ್ಲಿ ಸೆಮಿಫೈನಲ್‌ನಲ್ಲಿ ಸೋತ ತಂಡಗಳು ಪಡೆದ ಬಹುಮಾನ ಮೊತ್ತ ₹2.65 ಕೋಟಿ.
  • ಗುಂಪು ಹಂತದಲ್ಲಿ ಗೆಲ್ಲುವ ತಂಡಗಳು ₹30.29 ಲಕ್ಷ ಸಂಪಾದಿಸಲಿವೆ. ಐದು ಮತ್ತು ಆರನೇ ಸ್ಥಾನ ಪಡೆಯುವ ತಂಡಗಳಿಗೆ ₹62 ಲಕ್ಷ ದೊರೆಯಲಿದೆ. ಏಳು ಮತ್ತು ಎಂಟನೇ ಸ್ಥಾನ ಪಡೆಯುವ ತಂಡಗಳು ₹24.71 ಲಕ್ಷ ಸಂಪಾದಿಸಲಿವೆ. ಭಾಗವಹಿಸುವ ಪ್ರತಿಯೊಂದು ತಂಡಗಳಿಗೆ ₹22 ಲಕ್ಷ ಸಿಗಲಿದೆ.
  • ‘ಮಹಿಳಾ ಕ್ರಿಕೆಟ್‌ಗೆ ಜನಪ್ರಿಯತೆ ಹೆಚ್ಚಿಸುವ ಉದ್ದೇಶವನ್ನು ಗಮನದಲ್ಲಿಟ್ಟುಕೊಂಡು ಈ ಕ್ರಮ ಕೈಗೊಳ್ಳಲಾಗಿದೆ. 2024ರ ವಿಶ್ವಕಪ್‌ಗೆ ಮೊದಲು ಘೋಷಿಸಿದಂತೆ ಬಹುಮಾನ ಮೊತ್ತದಲ್ಲಿ ಸಮಾನತೆ ತರುವ ಉದ್ದೇಶದಿಂದಲೂ ಈ ನಿರ್ಧಾರಕ್ಕೆ ಬರಲಾಗಿದೆ’ ಎಂದು ಐಸಿಸಿ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
  • ಈ ಬಾರಿಯ ವಿಶ್ವಕಪ್‌ ಪಂದ್ಯಗಳು ಐದು ತಾಣಗಳಲ್ಲಿ– ಭಾರತದ ಗುವಾಹಟಿ, ಇಂದೋರ್‌, ನವಿ ಮುಂಬೈ, ವಿಶಾಖಪಟ್ಟಣ ಮತ್ತು ಶ್ರೀಲಂಕಾದ ಕೊಲಂಬೊದಲ್ಲಿ (ತಟಸ್ಥ ತಾಣ)– ನಡೆಯಲಿವೆ. ಪಾಕಿಸ್ತಾನ ತನ್ನ ಪಂದ್ಯಗಳನ್ನು ಕೊಲಂಬೊದಲ್ಲಿ ಆಡಲಿದೆ.
  • ‘ಮಹಿಳಾ ಕ್ರಿಕೆಟ್‌ಗೆ ಆದ್ಯತೆ ನೀಡುವುದು ಈ ಕ್ರಮದ ಹಿಂದಿನ ಉದ್ದೇಶ. ಮಹಿಳಾ ಕ್ರಿಕೆಟ್‌  ಬೆಳವಣಿಗೆಯ ದೃಷ್ಟಿಯಿಂದ ಇದು ಮಹತ್ವದ ಮೈಲಿಗಲ್ಲಾಗಿದೆ’ ಎಂದು ಐಸಿಸಿ ಅಧ್ಯಕ್ಷ ಜಯ್‌ ಶಾ ತಿಳಿಸಿದರು.

ಮೂಲಗಳು: ಪ್ರಜಾವಾಣಿ

ಕ್ರೀಡಾ ಸಂಗತಿಗಳು

ನವದೆಹಲಿಯಲ್ಲಿ ಮುಂದಿನ ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್‌ಷಿಪ್

ಸಂದರ್ಭ: ಭಾರತವು 2026ರ ವಿಶ್ವಬ್ಯಾಡ್ಮಿಂಟನ್‌ ಚಾಂಪಿಯನ್‌ಷಿಪ್‌ನ ಅತಿಥ್ಯ ವಹಿಸಿಕೊಂಡಿದೆ. ರಾಜಧಾನಿ ನವದೆಹಲಿ ಯಲ್ಲಿ 30ನೇ ಆವೃತ್ತಿಯ ಈ ಪ್ರತಿಷ್ಠಿತ ಚಾಂಪಿಯನ್‌ಷಿಪ್‌ ನಡೆಯಲಿದೆ.

  • 17 ವರ್ಷಗಳ ನಂತರ ಭಾರತಕ್ಕೆ ವಿಶ್ವ ಚಾಂಪಿಯನ್‌ಷಿಪ್ ಮರಳುತ್ತಿದೆ. 2009ರಲ್ಲಿ ಕೊನೆಯ ಬಾರಿ ಈ ಚಾಂಪಿಯನ್‌ಷಿಪ್‌ ಭಾರತದಲ್ಲಿ (ಹೈದರಾಬಾದಿನಲ್ಲಿ) ನಡೆದಿತ್ತು.
  • ಪ್ಯಾರಿಸ್‌ನಲ್ಲಿ 29ನೇ ವಿಶ್ವ ಚಾಂಪಿಯನ್‌ಷಿಪ್‌ನ ಸಮಾರೋಪದಲ್ಲಿ ಆತಿಥ್ಯದ ಘೋಷಣೆ ಮಾಡಲಾಯಿತು.
  • ‘ಪ್ಯಾರಿಸ್‌ನಲ್ಲಿ ಆಯೋ ಜನೆಗೊಂಡ ರೀತಿಯಲ್ಲೇ ಈ ಚಾಂಪಿಯನ್‌ಷಿಪ್‌ ಅನ್ನು ಗುಣಮಟ್ಟ ಮತ್ತು ವೈಭವದಿಂದ ನಡೆಸಲು ಶತಪ್ರಯತ್ನ ಹಾಕಲಿದ್ದೇವೆ.
  • ಬ್ಯಾಡ್ಮಿಂಟನ್ ಪರಿವಾರವನ್ನು ದೆಹಲಿಗೆ ಸ್ವಾಗತಿಸಲು ನಾವು ಎದುರುನೋಡುತ್ತಿದ್ದೇವೆ’ ಎಂದು ಭಾರತ ಬ್ಯಾಡ್ಮಿಂಟನ್‌ ಸಂಸ್ಥೆಯ ಗೌರವ ಮಹಾ ಕಾರ್ಯದರ್ಶಿ ಅವರನ್ನು ಉಲ್ಲೇಖಿಸಿ ಬಿಎಐ ಪ್ರಕಟಣೆ ತಿಳಿಸಿದೆ.

ಮೂಲಗಳು: ಪ್ರಜಾವಾಣಿ

ಪ್ರಚಲಿತ ವಿದ್ಯಮಾನಗಳು: 1ನೇ ಸೆಪ್ಟೆಂಬರ್ 2025

ಸಾಮಾನ್ಯ ಅಧ್ಯಯನ 2: ಸರ್ಕಾರೇತರ ಸಂಸ್ಥೆ; ಶಿಕ್ಷಣ ಮತ್ತು ಮಹಿಳಾ ಸಬಲೀಕರಣ

‘ಎಜುಕೇಟ್‌ ಗರ್ಲ್ಸ್‌’ಗೆ ಮ್ಯಾಗ್ಸೆಸೆ

ಸಂದರ್ಭ: ಹೆಣ್ಣುಮಕ್ಕಳಿಗೆ ಶಿಕ್ಷಣ ನೀಡಿ, ವಿವಿಧ ರೀತಿಯ ಶೋಷಣೆಯಿಂದ ಅವರನ್ನು ವಿಮೋಚನೆ ಗೊಳಿಸುವಲ್ಲಿ ನಿರತವಾಗಿರುವ ಸ್ವಯಂ ಸೇವಾ ಸಂಸ್ಥೆ ‘ಎಜುಕೇಟ್‌ ಗರ್ಲ್ಸ್’ಗೆ ಈ ಬಾರಿಯ ಪ್ರತಿಷ್ಠಿತ ರೇಮನ್‌ ಮ್ಯಾಗ್ಸೆಸೆ ಪ್ರಶಸ್ತಿ ಲಭಿಸಿದೆ.
  • ಎಜುಕೇಟ್ಗರ್ಲ್ಸ್‌’ ಸಂಸ್ಥೆಯು ರೇಮನ್ಮ್ಯಾಗ್ಸೆಸೆ ಪ್ರಶಸ್ತಿಗೆ ಆಯ್ಕೆಯಾಗಿರುವ ಭಾರತದ ಮೊದಲ ಸಂಘಟನೆಯಾಗಿದೆ. ಇದೊಂದು ಐತಿಹಾಸಿಕ ಕ್ಷಣ’ ಎಂದು ರೇಮನ್‌ ಮ್ಯಾಗ್ಸೆಸೆ ಅವಾರ್ಡ್ ಫೌಂಡೇಷನ್‌ (ಆರ್‌ಎಂಎಎಫ್‌) ಪ್ರಕಟಣೆಯಲ್ಲಿ ತಿಳಿಸಿದೆ.
  • ‘ದಿ ಫೌಂಡೇಷನ್ ಟು ಎಜುಕೇಟ್ ಗರ್ಲ್ಸ್‌ ಗ್ಲೋಬಲಿ’ ಎಂಬುದು ಸಂಸ್ಥೆಯ ಮೂಲ ಹೆಸರಾಗಿದ್ದು, ಇದು ‘ಎಜುಕೇಟ್‌ ಗರ್ಲ್ಸ್‌’ ಎಂದೇ ಪ್ರಸಿದ್ಧ. ಸಫೀನಾ ಹುಸೇನ್ಅವರು ಸಂಘಟನೆಯನ್ನು 2007ರಲ್ಲಿ ಸ್ಥಾಪಿಸಿದ್ದಾರೆ.
  • ಫಿಲಿಪ್ಪೀನ್ಸ್ ರಾಜಧಾನಿ ಮನಿಲಾದಲ್ಲಿ ನವೆಂಬರ್ 7ರಂದು ನಡೆಯುವ ಸಮಾರಂಭದಲ್ಲಿ 67ನೇ ರೇಮನ್ ಮ್ಯಾಗ್ಸೆಸೆ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ.
  • ಪರಿಸರ ಸಂರಕ್ಷಣೆ ಕ್ಷೇತ್ರದಲ್ಲಿನ ಕಾರ್ಯಕ್ಕಾಗಿ ಮಾಲ್ದೀವ್ಸ್ ಶಾಹಿನಾ ಅಲಿ ಹಾಗೂ ಫಿಲಿಪ್ಪೀನ್ಸ್ ಫ್ಲಾವಿಯಾನೊ ಆಂಟೊನಿಯೊ ಎಲ್ವಿಲ್ಲಾನುಯೆವಾ ಅವರಿಗೂ ಪ್ರತಿಷ್ಠಿತ ಪ್ರಶಸ್ತಿ ಲಭಿಸಿದೆ.

ಐತಿಹಾಸಿಕ ಕ್ಷಣ: ಸಫೀನಾ

  • ‘ಸಂಸ್ಥೆಗೆ ರೇಮನ್‌ ಮ್ಯಾಗ್ಸೆಸೆ ಪ್ರಶಸ್ತಿ ಲಭಿಸಿರುವುದು ಭಾರತದ ಪಾಲಿಗೆ ಐತಿಹಾಸಿಕ ಕ್ಷಣ. ದೇಶದ ಮೂಲೆಯೊಂದರಲ್ಲಿ ಒಬ್ಬ ಬಾಲಕಿಯಿಂದ ಈ ಶಿಕ್ಷಣ ಅಭಿಯಾನ ಆರಂಭಗೊಂಡಿತು. ಜನರೇ ಮುನ್ನಡೆಸುತ್ತಿರುವ ಚಳವಳಿಯೊಂದು ಈಗ ಜಾಗತಿಕ ಮಟ್ಟದಲ್ಲಿ ಗಮನ ಸೆಳೆದಿರುವುದು ಖುಷಿ ತಂದಿದೆ’ ಎಂದು ‘ಎಜುಕೇಟ್‌ ಗರ್ಲ್ಸ್‌’ನ ಸಂಸ್ಥಾಪಕಿ ಸಫೀನಾ ಹುಸೇನ್‌.
  • ‘ಸಂಘಟನೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ‘ಟೀಮ್‌ ಬಾಲಿಕಾ’ದ ಸ್ವಯಂ ಸೇವಕರು, ಪಾಲುದಾರರು, ಬೆಂಬಲ ನೀಡುತ್ತಿರುವವರಿಗೆ ಈ ಪ್ರಶಸ್ತಿಯಿಂದ ಗೌರವ ಸಿಕ್ಕಂತಾಗಿದೆ. ಅಲ್ಲದೇ, ಲಕ್ಷಾಂತರ ಬಾಲಕಿಯರು ತಮ್ಮ ಶಿಕ್ಷಣದ ಹಕ್ಕನ್ನು ಮರಳಿ ಪಡೆದಿರುವುದನ್ನು ಸಹ ಈ ಪ್ರಶಸ್ತಿ ದೃಢೀಕರಿಸುತ್ತದೆ.
  • ‘ಸಾಂಪ್ರದಾಯಿಕ ಕಟ್ಟಳೆಗಳ ಬಂಧನ ಹಾಗೂ ಅನಕ್ಷರತೆಯಿಂದ ಬಾಲಕಿಯರು ಮತ್ತು ಯುವತಿಯರನ್ನು ಮುಕ್ತರನ್ನಾಗಿಸುವುದು, ಆ ಮೂಲಕ ಅವರಲ್ಲಿ ಧೈರ್ಯ ತುಂಬುವುದು, ಕೌಶಲಗಳನ್ನು ಮೈಗೂಡಿಸಿಕೊಳ್ಳುವಂತೆ ಮಾಡಿ, ಅವರಲ್ಲಿನ ಸುಪ್ತಪ್ರತಿಭೆಯನ್ನು ಪೋಷಿಸುವ ದಿಸೆಯಲ್ಲಿ ‘ಎಜುಕೇಟ್‌ ಗರ್ಲ್ಸ್‌’‌ ಪ್ರದರ್ಶಿಸಿದ ಬದ್ಧತೆ ಗಮನಿಸಿ, ಏಷ್ಯಾದ ಈ ಪ್ರತಿಷ್ಠಿತ ಪ್ರಶಸ್ತಿಗೆ ಸಂಘಟನೆಯನ್ನು ಆಯ್ಕೆ ಮಾಡಲಾಗಿದೆ’ ಎಂದು ಆರ್‌ಎಂಎಎಫ್‌ ತಿಳಿಸಿದೆ.
  • ರಾಜಸ್ಥಾನದಲ್ಲಿ ಆರಂಭಗೊಂಡ ಸಂಘಟನೆಯು ಶಾಲೆಯಿಂದ ದೂರ ಉಳಿದ ಹಾಗೂ ಶಾಲೆಯನ್ನು ಅರ್ಧಕ್ಕೆ ಬಿಟ್ಟ ಬಾಲಕಿಯರನ್ನು ಗುರುತಿಸಿ, ಅವರನ್ನು ಪುನಃ ಶಿಕ್ಷಣದ ಮುಖ್ಯ ವಾಹಿನಿಗೆ ತರುವ ಕೆಲಸ ಆರಂಭಿಸಿತು. ಅವರು ಉನ್ನತ ಶಿಕ್ಷಣ ಪೂರೈಸಿ, ಉದ್ಯೋಗ ಪಡೆಯುವವರೆಗೆ ಅವರ ಬೆಂಬಲಕ್ಕೆ ನಿಲ್ಲುವ ಕಾರ್ಯ ಮಾಡುತ್ತಿದೆ ಎಂದು ಫೌಂಡೇಷನ್‌ ಹೇಳಿದೆ.
  • ‘ಪ್ರಾಯೋಗಿಕವಾಗಿ 50 ಗ್ರಾಮಗಳ ಶಾಲೆಗಳಲ್ಲಿ ತನ್ನ ಕಾರ್ಯಕ್ರಮ ಆರಂಭಿಸಿದ್ದ ಸಂಘಟನೆ, ದೇಶದಾದ್ಯಂತ 30 ಸಾವಿರಕ್ಕೂ ಅಧಿಕ ಗ್ರಾಮಗಳಿಗೆ ತನ್ನ ಕಾರ್ಯಚಟುವಟಿಕೆಗಳನ್ನು ವಿಸ್ತರಿಸಿದೆ. 20 ಲಕ್ಷಕ್ಕೂ ಅಧಿಕ ಬಾಲಕಿಯರಿಗೆ ಶಿಕ್ಷಣ ನೀಡಿದೆ’ ಎಂದೂ ತಿಳಿಸಿದೆ.

ಮೂಲಗಳು: ಪ್ರಜಾವಾಣಿ

ಸಾಮಾನ್ಯ ಅಧ್ಯಯನ 2: ಭಾರತದಲ್ಲಿ ಮಳೆಯ ಮಾದರಿ

ಪಂಜಾಬ್‌: 25 ವರ್ಷದಲ್ಲೇ ಅಧಿಕ ಮಳೆ

ಸಂದರ್ಭ:ಪಂಜಾಬ್‌ನಲ್ಲಿ ಆಗಸ್ಟ್‌ ತಿಂಗಳಲ್ಲಿ 25.37 ಸೆಂ.ಮೀ.ನಷ್ಟು ಮಳೆ ಸುರಿದಿದೆ. ಈ ಪ್ರಮಾಣವು ವಾಡಿಕೆಗಿಂತ ಶೇ 74ರಷ್ಟು ಅಧಿಕವಾಗಿದೆ. ಕಳೆದ 25 ವರ್ಷಗಳಲ್ಲೇ ಈ ಪ್ರಮಾಣದ ಮಳೆಯನ್ನು ರಾಜ್ಯ ಕಂಡಿರಲಿಲ್ಲ.
  • ಭಾರಿ ಮಳೆಯಿಂದಾಗಿ ಜಮ್ಮು ಮತ್ತು ಕಾಶ್ಮೀರ ಹಾಗೂ ಪಂಜಾಬ್‌ನ ಹಲವು ಭಾಗಗಳಲ್ಲಿ ಪ್ರವಾಹ ಉಂಟಾಗಿದೆ.
  • ಜನರ ಸುರಕ್ಷತೆಗಾಗಿ ಸೇನೆಯು ‘ಮಾನವ ನೆರವು ಮತ್ತು ವಿಪತ್ತು ಪರಿಹಾರ’ (ಎಚ್‌ಎಡಿಆರ್‌) ಕಾರ್ಯಾಚರಣೆ ನಡೆಸುತ್ತಿದೆ. ವಾಯುಪಡೆಯು 20 ವಿಮಾನಗಳು, ಮೂರು ಹೆಲಿಕಾಪ್ಟರ್‌ಗಳನ್ನು ಸನ್ನದ್ಧ ಸ್ಥಿತಿಯಲ್ಲಿ ಇರಿಸಿದೆ.
  • ತೀವ್ರ ಮಳೆಯಿಂದಾಗಿ ಹಿಮಾಚಲ ಪ್ರದೇಶದ ಮೂರು ರಾಷ್ಟ್ರೀಯ ಹೆದ್ದಾರಿಗಳೂ ಸೇರಿ ಒಟ್ಟು 822 ರಸ್ತೆಗಳು ಮುಚ್ಚಿವೆ. 1,236 ವಿದ್ಯುತ್‌ ಪರಿವರ್ತಕಗಳು ಮತ್ತು 424 ಜಲ ಪೂರೈಕೆ ಯೋಜನೆಗಳಿಗೆ ಹಾನಿಯಾಗಿದೆ.

ಮೂಲಗಳು: ಪ್ರಜಾವಾಣಿ

ಪ್ರಚಲಿತ ವಿದ್ಯಮಾನಗಳು: 31ನೇ ಆಗಸ್ಟ್ 2025

7 ವರ್ಷ ಬಳಿಕ ಮೋದಿ ಚೀನಾಕ್ಕೆ
ಎರಡು ದಿನಗಳ ಜಪಾನ್ ಪ್ರವಾಸದ ಬಳಿಕ ಪ್ರಧಾನಿ ನರೇಂದ್ರ ಮೋದಿ ಅವರು ಶಾಂಘೈ ಸಹಕಾರ ಸಂಘಟನೆಯ (ಎಸ್‌ಸಿಒ) ಶೃಂಗಸಭೆಯಲ್ಲಿ ಭಾಗವಹಿಸಲು ಶನಿವಾರ ಚೀನಾದ ತಿಯಾನ್‌ಜಿನ್‌ಗೆ ಬಂದಿಳಿದರು.

  • ತಿಯಾನ್‌ಜಿನ್‌ ನಗರದಲ್ಲಿ ‘ಎಸ್‌ಸಿಒ’ ಶೃಂಗಸಭೆ ನಡೆಯಲಿದೆ. ಸುಮಾರು ಏಳು ವರ್ಷಗಳ ಬಳಿಕ ಮೋದಿ ಅವರು ಚೀನಾಕ್ಕೆ ತೆರಳಿದ್ದಾರೆ.
  • ಪೂರ್ವ ಲಡಾಖ್‌ನ ಗಾಲ್ವನ್‌ ಕಣಿವೆಯಲ್ಲಿನ ಸಂಘರ್ಷದ ಬಳಿಕ ಭಾರತ–ಚೀನಾ ನಡುವಿನ ಸಂಬಂಧ ಹಳಸಿತ್ತು. ಸಂಬಂಧ ಸುಧಾರಣೆ ನಿಟ್ಟಿನಲ್ಲೂ ಮೋದಿ ಅವರ ಭೇಟಿ ಪ್ರಾಮುಖ್ಯ ಪಡೆದಿದೆ.
  • ಇನ್ನೊಂದೆಡೆ ಅಮೆರಿಕದ ಸುಂಕ ಸಮರದಿಂದ (ಶೇ 50ರಷ್ಟು ಸುಂಕ) ಮೋದಿ ಅವರು ಜಪಾನ್‌, ಚೀನಾ ಸೇರಿ ಪೂರ್ವ ಏಷ್ಯಾ ರಾಷ್ಟ್ರಗಳೊಂದಿಗೆ ಆರ್ಥಿಕ ಪಾಲುದಾರಿಕೆ ವಿಸ್ತರಿಸಲು ಆಸಕ್ತಿ ತೋರಿಸಿದ್ದಾರೆ. ಈ ನಿಟ್ಟಿನಲ್ಲಿ ಚೀನಾ ಅಧ್ಯಕ್ಷ ಷಿ ಜಿನ್‌ಪಿಂಗ್ ಅವರೊಂದಿಗೆ ನಿಗದಿಯಾಗಿರುವ ಸಭೆಯ ಮೇಲೆ ಎಲ್ಲರ ಕಣ್ಣು ನೆಟ್ಟಿದೆ.
  • ‘ಎಸ್‌ಸಿಒ’ ಶೃಂಗಸಭೆ ಸಂದರ್ಭದಲ್ಲಿ ಪ್ರಧಾನಿ ಮೋದಿ ಅವರು ವಿವಿಧ ದೇಶಗಳ ಮುಖಂಡರೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದಾರೆ. ರಷ್ಯಾ ಅಧ್ಯಕ್ಷ ವ್ಲಾದಿಮಿರ್‌ ಪುಟಿನ್‌ ಅವರೊಂದಿಗೂ ಮಾತುಕತೆ ನಡೆಸುವ ಸಾಧ್ಯತೆ ಇದೆ.
  • ಪಾಶ್ಚಿಮಾತ್ಯ ದೇಶಗಳ ಪ್ರಾಬಲ್ಯದ ನ್ಯಾಟೊ ಮಿಲಿಟರಿ ಮೈತ್ರಿಕೂಟದ ವಿರುದ್ಧ, ಮಧ್ಯ ಏಷ್ಯಾದ ರಾಷ್ಟ್ರಗಳ ನಡುವಿನ ಸಂಬಂಧ ಗಾಢವಾಗಿಸುವ ನಿಟ್ಟಿನಲ್ಲಿ ರಷ್ಯಾ ಮತ್ತು ಚೀನಾಕ್ಕೂ ‘ಎಸ್‌ಸಿಒ’ ವೇದಿಕೆ ಮಹತ್ವದ್ದಾಗಿದೆ.
  • ಪುಟಿನ್ ಮಾತುಕತೆ: ಉಕ್ರೇನ್‌ – ರಷ್ಯಾ ಸಂಘರ್ಷದ ವಿಚಾರವಾಗಿ ಮಧ್ಯಸ್ಥಿಕೆ ವಹಿಸಿದ್ದ ಟರ್ಕಿಯ ಅಧ್ಯಕ್ಷ ರೆಸೆಪ್‌ ತಯ್ಯಿಪ್‌ ಎರ್ಡೊಗನ್‌ ಅವರೊಂದಿಗೆ ಪುಟಿನ್‌ ಮಾತುಕತೆ ನಡೆಸಲಿದ್ದಾರೆ. ಇರಾನ್‌ ಅಧ್ಯಕ್ಷ ಪೆಜೆಶ್ಕಿಯಾನ್‌ ಅವರೊಂದಿಗೆ ಟೆಹರಾನ್‌ ಪರಮಾಣು ಕಾರ್ಯಕ್ರಮದ ಬಗ್ಗೆ ಮಾತುಕತೆ ನಡೆಸಲಿದ್ದಾರೆ ಎಂದು ರಷ್ಯಾದ ಆಡಳಿತ ಕಚೇರಿ ಕ್ರೆಮ್ಲಿನ್‌ ಹೇಳಿದೆ.
  • 20ಕ್ಕೂ ಹೆಚ್ಚು ದೇಶಗಳ ನಾಯಕರು ಭಾಗಿ: ಶಾಂಘೈ ಸಹಕಾರ ಸಂಘಟನೆಯಲ್ಲಿ ಚೀನಾ, ಭಾರತ, ರಷ್ಯಾ, ಪಾಕಿಸ್ತಾನ, ಇರಾನ್‌, ಕಜಾಕಸ್ತಾನ, ಕಿರ್ಗಿಸ್ತಾನ, ತಜಿಕಿಸ್ತಾನ, ಉಜ್ಬೆಕಿಸ್ತಾನ ಮತ್ತು ಬೆಲಾರಸ್‌ ಸೇರಿ 10 ಸದಸ್ಯ ದೇಶಗಳಿವೆ.
  • ಇದಲ್ಲದೆ 16 ದೇಶಗಳು ‘ಎಸ್‌ಸಿಒ’ನ ವೀಕ್ಷಕರು ಅಥವಾ ಸಂವಾದ ಪಾಲುದಾರ ದೇಶಗಳಾಗಿವೆ. ತಿಯಾನ್‌ಜಿನ್‌ನಲ್ಲಿ ನಡೆಯಲಿರುವ ಸಭೆಯಲ್ಲಿ 20ಕ್ಕೂ ಹೆಚ್ಚು ದೇಶಗಳ ನಾಯಕರು ಭಾಗವಹಿಸಲಿದ್ದಾರೆ.

ಜಿನ್‌ಪಿಂಗ್ ಜತೆ ಚರ್ಚೆ ಇಂದು

  • ಶೃಂಗಸಭೆ ಸಂದರ್ಭದಲ್ಲಿ ಮೋದಿ ಅವರು ಚೀನಾ ಅಧ್ಯಕ್ಷ ಷಿ ಜಿನ್‌ಪಿಂಗ್ ಅವರೊಂದಿಗೆ ಮಾತುಕತೆ ನಡೆಸಲಿದ್ದಾರೆ. ಜಗತ್ತಿನಾದ್ಯಂತ ಬಹುತೇಕ ಎಲ್ಲ ಪ್ರಮುಖ ದೇಶಗಳ ಆರ್ಥಿಕತೆ ಮೇಲೆ ಅಮೆರಿಕದ ಸುಂಕ ಹೇರಿಕೆಯು ನಕಾರಾತ್ಮಕ ಪರಿಣಾಮ ಬೀರಿದೆ. ಈ ಹಿನ್ನೆಲೆಯಲ್ಲಿ ಮೋದಿ ಅವರು ಚೀನಾ ಅಧ್ಯಕ್ಷರೊಂದಿಗೆ ನಡೆಸಲಿರುವ ಮಾತುಕತೆ ಮಹತ್ವ ಪಡೆದುಕೊಂಡಿದೆ.ಭಾರತ– ಚೀನಾ ಆರ್ಥಿಕ ಸಹಕಾರ ವಿಸ್ತರಣೆ ಮತ್ತು ಗಡಿ ವಿಚಾರವೂ ಉಭಯ ಮುಖಂಡರ ನಡುವಿನ ಸಭೆಯಲ್ಲಿ ಚರ್ಚೆಗೆ ಬರಲಿದೆ.
  • ‘ಜಾಗತಿಕವಾಗಿ ಆರ್ಥಿಕ ಸ್ಥಿರತೆ ತರುವ ನಿಟ್ಟಿನಲ್ಲಿ ಒಟ್ಟಾಗಿ ಕೆಲಸ ಮಾಡುವುದು ಭಾರತ ಮತ್ತು ಚೀನಾ ಎರಡೂ ದೇಶಗಳಿಗೆ ಮಹತ್ವದ್ದು, ಭಾರತ–ಚೀನಾ ನಡುವಿನ ದ್ವಿಪಕ್ಷೀಯ ಸಂಬಂಧವು, ಪ್ರಾದೇಶಿಕ ಮತ್ತು ಜಾಗತಿಕ ಶಾಂತಿ, ಸಮೃದ್ಧಿಯ ಮೇಲೆ ಸಕಾರಾತ್ಮಕ ಪರಿಣಾಮ ಬೀರಲಿದೆ’ ಎಂದು ಮೋದಿ ಹೇಳಿದ್ದಾರೆ.

‘ಸುವರ್ಣ ಅಧ್ಯಾಯ’

  • ‘ಜಪಾನ್‌ ಭೇಟಿಯು ಫಲದಾಯಕವಾಗಿದೆ. ಉಭಯ ದೇಶಗಳ ನಡುವೆ ಮಹತ್ವದ 13 ಒಪ್ಪಂದಗಳಿಗೆ ಸಹಿ ಹಾಕಲಾಗಿದೆ. ಇದರ ಪ್ರಯೋಜನ ದೇಶದ ಜನರಿಗೆ ಲಭಿಸಲಿದೆ. ಜಪಾನ್‌ ಪ್ರಧಾನಿ ಶಿಗೆರು ಇಶಿಬಾ, ಅಲ್ಲಿನ ಸರ್ಕಾರ ಮತ್ತು ಜನರಿಗೆ ಧನ್ಯವಾದ ತಿಳಿಸುತ್ತೇನೆ’ ಎಂದು ಮೋದಿ ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿದ್ದಾರೆ.
  • ‘ಭಾರತ – ಜಪಾನ್‌ ನಡುವೆ ಆರ್ಥಿಕ ಪಾಲುದಾರಿಕೆಯ ಹೊಸ ಮತ್ತು ಸುವರ್ಣ ಅಧ್ಯಾಯವೊಂದು ಆರಂಭಗೊಂಡಿದೆ’ ಎಂದು ಪ್ರಧಾನಿ ಹೇಳಿದ್ದಾರೆ.