Kannada
ಪ್ರಚಲಿತ ವಿದ್ಯಮಾನಗಳು: 15ನೇ ನವೆಂಬರ್ 2025
- ವಿಶ್ವ ರ್ಯಾಂಕಿಂಗ್: ಕ್ರೈಸ್ಟ್ ಸಾಧನೆ
ಸಂದರ್ಭ: ಕ್ವಾಕ್ವರೇಲ್ಲಿ ಸೈಮಂಡ್ಸ್ (ಕ್ಯೂಎಸ್) ಸಂಸ್ಥೆ ಕ್ಯೂಎಸ್ ಜಾಗತಿಕ ವಿಶ್ವವಿದ್ಯಾಲಯ ರ್ಯಾಂಕಿಂಗ್ ಪಟ್ಟಿ ಬಿಡುಗಡೆ ಮಾಡಿದೆ.
- ಕಳೆದ ಬಾರಿ 681–700ನೇ ಸ್ಥಾನದಲ್ಲಿದ್ದ ಕ್ರೈಸ್ಟ್ (ಡೀಮ್ಡ್ ಟು ಬಿ ಯುನಿವರ್ಸಿಟಿ) ವಿಶ್ವವಿದ್ಯಾಲಯವು ಈ ಬಾರಿ 537ನೇ ಶ್ರೇಯಾಂಕ ವನ್ನು ಪಡೆದಿದೆ. ದಕ್ಷಿಣ ಏಷ್ಯಾ ವಿಭಾಗದಲ್ಲಿಯೂ ವಿಶ್ವವಿದ್ಯಾಲಯವು ಉತ್ತಮ ಸ್ಥಾನ ಪಡೆದಿದ್ದು, 140ನೇ ಸ್ಥಾನ ಗಳಿಸಿದೆ.
- ಈ ವರ್ಷ ಏಷ್ಯಾದ ಪಟ್ಟಿಯಲ್ಲಿ 1,526 ವಿಶ್ವವಿದ್ಯಾಲಯಗಳಲ್ಲಿ ಕ್ರೈಸ್ಟ್ ವಿಶ್ವವಿದ್ಯಾಲಯವೂ ಸೇರಿದೆ. ಭಾರತದ 294 ಸಂಸ್ಥೆಗಳಲ್ಲಿ ಕ್ರೈಸ್ಟ್ ಕೂಡ ಒಂದಾಗಿದೆ ಎಂದು ವಿಶ್ವವಿದ್ಯಾಲಯದ ಕುಲಪತಿ ಜೋಸೆಫ್ ಸಿ.ಸಿ. ತಿಳಿಸಿದ್ದಾರೆ.
ಭಾರತದ ನಗರಗಳ ಜಲಸಂಕಷ್ಟ

ನೀರು ಜೀವಸಂಕುಲದ ಅಮೃತ. ಸಕಲ ಚರಾಚರಗಳ ಅಳಿವು ಉಳಿವಿನ ಸಂಜೀವಿನಿ. ಆದರೆ, ಬೇಸಿಗೆ ಬಂತೆಂದರೆ ಈ ಸಂಜೀವಿನಿಗಾಗಿ ಭಾರತದ ಮಹಾನಗರಗಳಲ್ಲಿ ಹಾಹಾಕಾರ. ಮಳೆಗಾಲದಲ್ಲಿ ಅದೇ ನೀರಿನ ರುದ್ರನರ್ತನಕ್ಕೆ ನಲುಗಿ ಹೋಗುವವು ಈ ನಗರಗಳು. ನಮ್ಮ ಬೆಂಗಳೂರು ಇರಲಿ, ರಾಷ್ಟ್ರ ರಾಜಧಾನಿ ದೆಹಲಿಯಾಗಲಿ, ಮುಂಬೈ ಮಹಾನಗರಿಯಾಗಲಿ, ಕೋಲ್ಕತ್ತ ಅಥವಾ ಚೆನ್ನೈ ಇರಲಿ, ಬಹುತೇಕ ಎಲ್ಲ ಮಹಾನಗರಗಳೂ ಜಲಸಂಕಷ್ಟದ ಈ ಎರಡು ವೈಪರೀತ್ಯಗಳಿಂದ ಪ್ರತಿ ವರ್ಷ ನಲುಗಿ ಹೋಗುತ್ತಿವೆ.
ಒಂದೆಡೆ ನಗರಗಳನ್ನು ನಿಷ್ಕ್ರಿಯಗೊಳಿಸುವ ಪ್ರವಾಹಗಳು, ಇನ್ನೊಂದೆಡೆ ಲಕ್ಷಾಂತರ ಜನರು ಹನಿ ನೀರಿಗೆ ಹೆಣಗಾಡುತ್ತಿರುವ ದೃಶ್ಯ- ಈ ವಿರೋಧಾಭಾಸವು ಮುಂಬೈ, ಬೆಂಗಳೂರು, ಚೆನ್ನೈ, ದೆಹಲಿ ಮತ್ತು ಕೋಲ್ಕತ್ತಾದಂತಹ ಮಹಾನಗರಗಳಲ್ಲಿ ಇತ್ತೀಚಿನ ವರ್ಷಗಳಲ್ಲಿ ಹೆಚ್ಚಾಗಿ ಕಂಡುಬರುತ್ತಿದೆ. ಬೇಸಿಗೆಯಲ್ಲಿ ಟ್ಯಾಂಕರ್ಗಳ ಹಿಂದೆ ಸಾಲುಸಾಲು ನಿಂತ ಜನರು, ಮಳೆಗಾಲದಲ್ಲಿ ರಸ್ತೆಯನ್ನೇ ನದಿಯನ್ನಾಗಿ ಮಾಡಿರುವ ಪ್ರವಾಹಗಳು; ಈ ‘ಹೈಡ್ರೊ-ಸ್ಕಿಜೋಫ್ರೀನಿಯಾ’ ಎಂಬ ಜಲ ವಿಕೃತಿಯು ಮಹಾನಗರಗಳ ಅನಿಯಂತ್ರಿತ ಬೆಳವಣಿಗೆಯ ಪ್ರತಿಬಿಂಬವಾಗಿದೆ.
ಅಸಮಾನತೆಯ ಬೇರುಗಳು
ಮಾರ್ಗನ್ ಸ್ಟಾನ್ಲಿಯ ಆರ್ಥಿಕ ತಜ್ಞ ರುಚಿರ್ ಶರ್ಮಾ ಅವರು ತಮ್ಮ ‘10 ರೂಲ್ಸ್ ಆಫ್ ಸಕ್ಸಸ್ಫುಲ್ ನೇಷನ್ಸ್’ ಪುಸ್ತಕದಲ್ಲಿ ರಾಷ್ಟ್ರಗಳ ಬೆಳವಣಿಗೆಯ ಅಸಮತೋಲನದ ಕುರಿತು ಎಚ್ಚರಿಸುತ್ತಾರೆ. ರಾಷ್ಟ್ರದ ಅಥವಾ ಒಂದು ಪ್ರದೇಶ/ರಾಜ್ಯದ ಮೊದಲ ಅತಿ ದೊಡ್ಡ ನಗರ ಮತ್ತು ಎರಡನೆಯ ದೊಡ್ಡ ನಗರದ ನಡುವಿನ ಅಗಾಧವಾದ ಆರ್ಥಿಕ ಅಸಮಾನತೆಯ ಪ್ರಮಾಣವು ದೇಶದ ಸಮತೋಲನದ ಪ್ರಗತಿಗೆ ಮಾರಕವಾಗಬಲ್ಲದು ಎಂಬುದನ್ನು ಅವರು ವಿವರಿಸುತ್ತಾರೆ.
ಉದಾಹರಣೆಗೆ, ಭಾರತದ ಸಿಲಿಕಾನ್ ವ್ಯಾಲಿ ಎಂದೇ ಪ್ರಶಂಸಿಸಲ್ಪಡುವ ನಮ್ಮ ಬೆಂಗಳೂರಿನ ಜನಸಂಖ್ಯೆ ಮೈಸೂರಿಗಿಂತ 10 ಪಟ್ಟು ಹೆಚ್ಚು. ಮುಂಬೈ ಜನಸಂಖ್ಯೆಯು ಪುಣೆಗಿಂತ 4 ಪಟ್ಟು ಜಾಸ್ತಿ. ಕೋಲ್ಕತ್ತ ಜನಸಂಖ್ಯೆ ಅಸನ್ಸೋಲ್ಗಿಂತ 10 ಪಟ್ಟು ಇದೆ. ಚೆನ್ನೈ ಮಹಾನಗರದ್ದು ಕೊಯಮತ್ತೂರಿಗಿಂತ 5ರಷ್ಟು ಮತ್ತು 3 ಕೋಟಿಗಿಂತಲೂ ಹೆಚ್ಚು ಇರುವ ದೆಹಲಿಯು ಉತ್ತರ ಭಾರತದಲ್ಲಿ ಅಸಾಧಾರಣ ಜನಸಂಖ್ಯೆ ಹೊಂದಿದೆ. ಈ ಅಸಮಾನತೆಗಳು ಕೇವಲ ಜನಸಂಖ್ಯೆಯಲ್ಲಿ ಅಲ್ಲ, ಹೂಡಿಕೆಯಲ್ಲಿ, ಮೂಲಸೌಕರ್ಯದಲ್ಲಿ, ನೀರಿನ ಒತ್ತಡದಲ್ಲೂ ಕಾಣಿಸುತ್ತವೆ.
ರುಚಿರ್ ಶರ್ಮಾರ ಈ ಸಂಶೋಧನೆಯು ಭಾರತದ ಮಹಾನಗರ ಪ್ರದೇಶಗಳಲ್ಲಿನ ನೀರಿನ ವೈಪರೀತ್ಯಗಳಿಗೆ ಹಾಗೂ ಬಿಕ್ಕಟ್ಟಿನ ಪ್ರಮುಖ ಸುಳಿವನ್ನು ನೀಡುತ್ತದೆ.
ಅನಿಯಂತ್ರಿತ ನಗರ ವಿಸ್ತರಣೆ
ಪ್ರತಿ ವರ್ಷ ಬರ ಹಾಗೂ ಪ್ರವಾಹದಂತಹ ವೈಪರೀತ್ಯಗಳು ಬಂದು ಅಪ್ಪಳಿಸುತ್ತಿದ್ದರೂ ಇದರ ಬಗ್ಗೆ ಯಾವುದೇ ಕಾಳಜಿ ಇಲ್ಲದಂತೆ, ದೇಶದ ಮಹಾನಗರಗಳು ದಿಕ್ಕು ದೆಸೆಯಿಲ್ಲದೆ ಅಗಾಧವಾಗಿ ಬೆಳೆಯುತ್ತಾ ಹೋಗುತ್ತಿವೆ. ಆದರೆ, ಈ ಬೆಳವಣಿಗೆಯ ಅಂತ್ಯದ ಅರಿವು ಮಾತ್ರ ಯಾರಿಗೂ ಇಲ್ಲ. ಈ ಏಕಪಕ್ಷೀಯ ಬೆಳವಣಿಗೆ ಎಲ್ಲಿಯವರೆಗೆ ವಿಸ್ತರಿಸುತ್ತದೆ, ಹತ್ತಿರದ ಎಷ್ಟು ಪಟ್ಟಣಗಳನ್ನು ಕಬಳಿಸುತ್ತದೆ ಮತ್ತು ಇದೆಲ್ಲವೂ ಎಲ್ಲಿ ಕೊನೆಗೊಳ್ಳುತ್ತದೆ ಎಂಬುದು ಯಾರಿಗೂ ತಿಳಿದಿಲ್ಲ. ಮುಂಬೈ ನಗರವು ಈಗಾಗಲೇ ಠಾಣೆ ಜಿಲ್ಲೆಗೆ ಪ್ರವೇಶಿಸಿದರೆ, ಬೆಂಗಳೂರು ನಗರ ಉತ್ತರದಲ್ಲಿ ತುಮಕೂರು, ಪಶ್ಚಿಮದಲ್ಲಿ ರಾಮನಗರ ಮತ್ತು ಪೂರ್ವದಲ್ಲಿ ಕೋಲಾರ ಹತ್ತಿರದ ಪಟ್ಟಣಗಳನ್ನು ಭಕ್ಷಿಸುವತ್ತ ಸಾಗಿದೆ. ದೇಶದ ಇತರೆ ಮಹಾನಗರಗಳು ಇದಕ್ಕೆ ಭಿನ್ನವಾಗಿಲ್ಲ.
ದೇಶದ ಮಹಾನಗರಗಳ ಈ ಗೊತ್ತು ಗುರಿ ಇಲ್ಲದ ವಿಸ್ತರಣೆಗೆ ಯಾವುದೇ ಮಿತಿಗಳಿಲ್ಲದಿರಬಹುದು, ಆದರೆ ಅದು ನೀರಿಗೆ ಮಾತ್ರ ಅನ್ವಯಿಸುವುದಿಲ್ಲ ಎನ್ನುವುದು ಬಹುತೇಕ ಮಂದಿಗೆ ಗೊತ್ತಿಲ್ಲ. ನದಿಗಳಿಗಾಗಲಿ ಅಥವಾ ಭೂಜಲಕ್ಕಾಗಲಿ ಒಂದು ಪರಿಮಿತಿ ಇದ್ದೇ ಇದೆ. ಉದಾಹರಣೆ, ಜಲಸಂಪನ್ಮೂಲ ‘ವರುಣ’ನ ಅನುಗ್ರಹ ಮತ್ತು ಅನುಕಂಪದಲ್ಲಿದೆ. ಇದಲ್ಲದೆ ದೇಶದಾದ್ಯಂತ ಅನೇಕ ನ್ಯಾಯಮಂಡಳಿಗಳು ತಮ್ಮ ತೀರ್ಪುಗಳಿಂದ ರಾಜ್ಯಗಳಿಗೆ ಜಲ ಸಂಪನ್ಮೂಲವನ್ನು ಹಂಚಿಕೆಯ ಮೂಲಕ ಸೀಮಿತಗೊಳಿಸಿವೆ. ಆದುದರಿಂದ ನೀರನ್ನು ಮನಬಂದಂತೆ ಬಳಕೆ ಮಾಡುವಂತಿಲ್ಲ.
ಜಲಸಂಪನ್ಮೂಲಗಳಿಗೆ ಇಷ್ಟೆಲ್ಲಾ ನಿರ್ಬಂಧಗಳಿದ್ದರೂ ಕೆಲವರು ಸಾವಿರಾರು ಕಿಲೋಮೀಟರ್ ದೂರದ ನದಿಗಳಿಂದ ಮಹಾನಗರಗಳಿಗೆ ನೀರು ಹರಿಸುವ ಪ್ರಸ್ತಾವಗಳನ್ನು ಮುಂದಿಡುತ್ತಾರೆ. ಈ ಪ್ರಸ್ತಾವಗಳು ಕಾಗದದ ಮೇಲೆ ಆಕರ್ಷಕವಾಗಿ ಕಾಣುತ್ತವೆ. ಇದಕ್ಕೆ ತಗಲುವ ಆರ್ಥಿಕ ವೆಚ್ಚ, ತಾಂತ್ರಿಕ ತೊಂದರೆಗಳು, ನೀರಿನ ಸಂಘರ್ಷಗಳು ಹಾಗೂ ಪರಿಸರ ಹಾನಿ ಇವೆಲ್ಲವೂ ಇದರ ಸದುದ್ದೇಶಗಳನ್ನು ಮೀರುವ ಸಾಧ್ಯತೆಗಳಿವೆ. ಇವೆಲ್ಲಕ್ಕಿಂತ, ಮಹಾನಗರಗಳು ಇನ್ನಷ್ಟು ಬೆಳೆದು, ಮತ್ತಷ್ಟು ನೀರಿಗಾಗಿ ಹಾಹಾಕಾರದ ಪರಿಸ್ಥಿತಿ ನಿರ್ಮಾಣವಾದರೆ ನೀರನ್ನು ದೇಶದ ಯಾವ ನದಿಯಿಂದ, ಇನ್ನೆಷ್ಟು ದೂರದಿಂದ ಮತ್ತು ಎಲ್ಲಿಯವರೆಗೆ ತರಬಹುದು ಎಂಬ ಅಂಶವನ್ನು ದೇಶದ ಜನರು ನಿರ್ಧರಿಸಬೇಕಿದೆ. ಉದಾಹರಣೆಗೆ, ಕೇವಲ 70 ಕಿ.ಮೀ. ದೂರದಲ್ಲಿರುವ ತುಮಕೂರಿನ ಹತ್ತಿರ ಬೆಳೆದ ಬೆಂಗಳೂರು, ಅಲ್ಲಿಗೇ ನಿಲ್ಲುತ್ತದೆ ಎಂಬುದಕ್ಕೆ ಖಾತರಿ ಏನು?
ಹಾಗಾಗಿ, ಜಲ ಸಂಕಷ್ಟದ ದೃಷ್ಟಿಯಿಂದ ಈ ದಿಕ್ಕು ದೆಸೆಯಿಲ್ಲದ ಅಸಮಾನತೆಯ ಬೆಳವಣಿಗೆಯನ್ನು ನಿಲ್ಲಿಸಲು ರಾಜಕೀಯ, ಆಡಳಿತ ಮತ್ತು ಯೋಜನಾ ತಂತ್ರಜ್ಞರು ಈಗಲಾದರೂ ಚಿಂತನೆ ಮಾಡಲೇಬೇಕಾಗಿದೆ.
ತಾತ್ಕಾಲಿಕ ಪರಿಹಾರಗಳು
ಭಾರತದ ಮಹಾನಗರ ಪ್ರದೇಶಗಳಲ್ಲಿನ ನೀರಿನ ವೈಪರೀತ್ಯಗಳಿಗೆ ಮೂಲ ಕಾರಣ ನಗರ ಪ್ರದೇಶಗಳ ಬಿರುಸಿನ ವಿಸ್ತರಣೆ, ಸ್ಫೋಟಗೊಳ್ಳುತ್ತಿರುವ ಜನಸಂಖ್ಯೆ, ಕ್ಷೀಣಿಸುತ್ತಿರುವ ಮೂಲಗಳು ಮತ್ತು ಶಿಥಿಲಗೊಂಡ ಒಳಚರಂಡಿಯ ಅವ್ಯವಸ್ಥೆ. ಇವುಗಳ ಮುಂದೆ ಬರ/ಪ್ರವಾಹಗಳಿಗೆ ಪರಿಹಾರಗಳೆಂದು ಹೇಳಲ್ಪಡುವ ಮಳೆನೀರು ಸಂಗ್ರಹ, ಅಂತರ್ಜಲ ಮರುಪೂರಣ, ಚಾವಣಿಯ ಮಳೆನೀರು ಸಂಗ್ರಹ, ತ್ಯಾಜ್ಯ ನೀರಿನ ಮರುಬಳಕೆ… ಮುಂತಾದವು ಕೇವಲ ತಾತ್ಕಾಲಿಕ ಪರಿಹಾರಗಳು. ಅಂದರೆ ‘ಬ್ಯಾಂಡ್ ಏಡ್’ನಂತೆ. ಏಕೆಂದರೆ ಈ ಪರಿಹಾರಗಳು ಆಸ್ಪಿರಿನ್ನಂತೆ ನೋವನ್ನು ಮಾತ್ರ ಕಡಿಮೆ ಮಾಡುತ್ತವೆ; ಮೂಲ ರೋಗವನ್ನು ಗುಣಪಡಿಸುವುದಿಲ್ಲ.
ಭಾರತದ ನಗರ ಪ್ರದೇಶಗಳ ಜಲ ಬಿಕ್ಕಟ್ಟು, ವೈಪರೀತ್ಯಗಳಿಗೆ ಮೂಲ ಹಾಗೂ ಅಂತಿಮ ಪರಿಹಾರ ಸಿಗಬೇಕು ಎಂದರೆ, ದೇಶದ ಅನೇಕ ರಾಜ್ಯಗಳಲ್ಲಿ ಒಂದು ನಗರದ ಬೆಳವಣಿಗೆಗೆ ಕೊಡುತ್ತಿರುವ ಅಪರಿಮಿತ ಪ್ರಾಮುಖ್ಯ ಮತ್ತು ಚಿಕ್ಕ ಚಿಕ್ಕ ಪಟ್ಟಣಗಳ ಅಭಿವೃದ್ಧಿಯ ನಿರ್ಲಕ್ಷ್ಯ- ಇವೆರಡಕ್ಕೂ ಕಡಿವಾಣ ಬೀಳಬೇಕು.
ಒಂದೇ ನಗರಕ್ಕೆ ಹರಿದುಹೋಗುತ್ತಿರುವ ಅಪರಿಮಿತ ಹೂಡಿಕೆ, ಶ್ರೀಮಂತಿಕೆಯ ಕೇಂದ್ರೀಕರಣ ಮತ್ತು ಇದರ ಕಾರಣವಾಗಿ ಮಹಾನಗರಗಳ ಅನಿಯಂತ್ರಿತ 360 ಡಿಗ್ರಿಯ ವಿಸ್ತರಣೆ- ಇವೆಲ್ಲದರ ಕಡಿವಾಣವೇ ಮಹಾನಗರಗಳ ಮಹಾವೈಪರೀತ್ಯಗಳಾದ ಬರ/ಪ್ರವಾಹಗಳಿಗೆ ನೀಡಬಹುದಾದ ಮೂಲ ಚಿಕಿತ್ಸೆ. ಇದನ್ನು ನಿರ್ಲಕ್ಷಿಸಿ ತಾತ್ಕಾಲಿಕ ‘ಬ್ಯಾಂಡ್ ಏಡ್’ ಪರಿಹಾರಗಳನ್ನು ಅವಲಂಬಿಸಿದರೆ ಸಮಸ್ಯೆಯು ಪರಿಹಾರವಾಗುವ ಬದಲು ಮತ್ತಷ್ಟು ಜಟಿಲವಾಗುತ್ತದೆ.
ಪುನರ್ ವಿತರಣೆಯೇ ಪರಿಹಾರ
ಆದುದರಿಂದ ತುರ್ತಾಗಿ, ದೆಹಲಿ, ಮುಂಬೈ, ಬೆಂಗಳೂರು, ಕೋಲ್ಕತ್ತ ಮತ್ತು ಚೆನ್ನೈನಂತಹ ಮಹಾನಗರಗಳ ಸುತ್ತಮುತ್ತ ಇರುವ, ಹತ್ತಿರವಿರುವ ಸಣ್ಣ ನಗರಗಳಿಗೆ ದೇಶದ/ರಾಜ್ಯದ ಸಂಪತ್ತಿನ ಪುನರ್ ವಿತರಣೆಯಾಗಬೇಕಿದೆ. ಈ ಬಗ್ಗೆ ಆರ್ಥಿಕ ತಜ್ಞರು/ಯೋಜನೆ ರೂಪಿಸುವವರು ತುರ್ತು ಗಮನ ಹರಿಸಬೇಕು. ನೈಸರ್ಗಿಕ ವಿಕೋಪಗಳನ್ನು ನಿಭಾಯಿಸುವ ಶಕ್ತಿಗನುಗುಣವಾಗಿ ಈ ಸಣ್ಣ ನಗರಗಳಿಗೆ ಹೂಡಿಕೆ, ಅಭಿವೃದ್ಧಿ ಮತ್ತು ಸಂಪತ್ತು ಪುನರ್ ವಿತರಣೆ ಮಾಡಬೇಕು. ಬೆಂಗಳೂರಿಗೆ ಬರುವ ಹೂಡಿಕೆಯ ಶೇಕಡ ಒಂದು ಭಾಗವನ್ನಾದರೂ ತುಮಕೂರು, ರಾಮನಗರ, ಹಾಸನ, ಮಂಡ್ಯದಂತಹ ಸಣ್ಣ ನಗರಗಳಿಗೆ ವಿತರಿಸಲು ಚಿಂತನೆ ಮಾಡಬೇಕು.
ಹಾಗೆ ಮಹಾನಗರಗಳ ಕಡೆ ಹೊರಟಿರುವ ಮತ್ತು ಜಲ ಬಿಕ್ಕಟ್ಟಿಗೆ ಕಾರಣವಾಗುತ್ತಿರುವ ಜನರ ವಲಸೆಯನ್ನು ಸಣ್ಣ ನಗರಗಳ ಕಡೆ ತಿರುಗಿಸಬೇಕಿದೆ. ಭಾರತದ ಮಹಾನಗರಗಳ ಹೈಡ್ರೊ-ಸ್ಕಿಜೋಫ್ರೀನಿಯಾದ ಸಮಸ್ಯೆಗಳಾದ ಬೇಸಿಗೆಯ ಕೊರತೆ ಮತ್ತು ಮುಂಗಾರಿನ ಪ್ರವಾಹ ಇವುಗಳನ್ನು ನಿವಾರಿಸಲು ಇರುವ ಏಕೈಕ ಸಂಭಾವ್ಯ ಮಾರ್ಗ ಇದು.
ಲೇಖಕ: ಬೆಂಗಳೂರಿನಲ್ಲಿರುವ ಕೇಂದ್ರ ಜಲ ಆಯೋಗದ ನಿರ್ದೇಶಕ
(ಈ ಬರಹದಲ್ಲಿರುವುದು ಲೇಖಕರ ವೈಯಕ್ತಿಕ ಅಭಿಪ್ರಾಯಗಳು)
ನೀರು ಸಂಜೀವಿನಿಯೂ ಹೌದು, ಮರೀಚಿಕೆಯೂ ಹೌದು
ಭಾರತದ ಮಹಾನಗರಗಳ ಅಸಹಜ ಜನಸಂಖ್ಯೆ, ಅಡ್ಡಾದಿಡ್ಡಿ ವಿಸ್ತೀರ್ಣ ಹಾಗೂ ಹೂಡಿಕೆಯ ಫಲಿತಂಶವೇ ಈ ಎಲ್ಲ ಜಲಸಂಕಷ್ಟಗಳಿಗೆ ಪ್ರಮುಖ ಕಾರಣ. ಹಾಗೆ ನೀರಿನ ಬೇಡಿಕೆಯ ಮೇಲಿನ ಇವೆಲ್ಲದರ ಪರಿಣಾಮವನ್ನು ಒಮ್ಮೆ ನೋಡೋಣ: 2015ರಲ್ಲಿ ದೆಹಲಿಯಲ್ಲಿ ಸುಮಾರು 4,760 ಎಂಎಲ್ಡಿ ನೀರಿನ ಬೇಡಿಕೆಯಿದ್ದರೆ ಪೂರೈಕೆ ಮಾತ್ರ 3,546 ಎಂಎಲ್ಡಿ ಇತ್ತು. ಎರಡರ ನಡುವೆ ಸುಮಾರು 1,000 ಎಂಎಲ್ಡಿಯಷ್ಟು ಅಂತರವಿತ್ತು; ಇವತ್ತಿನ ದಿನ, ಕೋಲ್ಕತ್ತ ಸುಮಾರು 1,875 ಎಂಎಲ್ಡಿ ನೀರಿನ ಬೇಡಿಕೆಯನ್ನು ಹೊಂದಿದೆ ಮತ್ತು ಸೋರಿಕೆ, ಕಳ್ಳತನ ಮತ್ತು ವಿತರಣಾ ಅಂತರವನ್ನು ಪರಿಗಣಿಸಿದರೆ ಸುಮಾರು 400 ಎಂಎಲ್ಡಿ ಕೊರತೆ ಕಾಣುತ್ತದೆ. ಚೆನ್ನೈ ನಗರ ಪ್ರದೇಶದ ನೀರಿನ ಬೇಡಿಕೆ 1,850 ಎಂಎಲ್ಡಿ ಆಗಿದ್ದು, ಪೂರೈಕೆ ಮಾತ್ರ 1,510 ಎಂಎಲ್ಡಿ. ಇದರಿಂದ ಸುಮಾರು 300 ಎಂಎಲ್ಡಿ ಕೊರತೆ ಇದೆ. ಮುಂದಿನ ವರ್ಷ (2026) ನಮ್ಮ ಬೆಂಗಳೂರು ನಗರ ಪ್ರದೇಶದ ಬೇಡಿಕೆ ಮತ್ತು ಪೂರೈಕೆ ಕ್ರಮವಾಗಿ 3,437 ಎಂಎಲ್ಡಿ ಮತ್ತು 2,235 ಎಂಎಲ್ಡಿ ಇರಲಿದ್ದು, ಇನ್ನೂ 1,262 ಎಂಎಲ್ಡಿಯಷ್ಟು ಕೊರತೆ ಉಂಟಾಗಲಿದೆ. ಇದರಿಂದ ಆತಂಕಕಾರಿ ಪರಿಸ್ಥಿತಿ ನಿರ್ಮಾಣವಾಗಲಿದೆ.
ಈ ಅಂಕಿಅಂಶಗಳು, ನಗರಗಳಲ್ಲಿನ ಬೆಳವಣಿಗೆಗೆ ಸಂಬಂಧಿಸಿದ, ಪ್ರಜ್ಞಾಪೂರ್ವಕ ನೀತಿಗಳ ಕೊರತೆಯ ಪ್ರತಿರೂಪಗಳಾಗಿವೆ.
ಅಸಮಾನತೆಯ ಬೆಳವಣಿಗೆ ಬದಲಾವಣೆ ಅಗತ್ಯ
ಮುಂಗಾರು ಈಗ ತಾನೇ ಮುಗಿದಿದೆ, ಹಿಂಗಾರು ಆರಂಭವಾಗಿದೆ. ಬೇಸಿಗೆ ಮುಂದಿದೆ. ಬೇಸಿಗೆಯಲ್ಲಿ ಜಲಕ್ಷಾಮಕ್ಕೆ ಒಳಗಾಗಿದ್ದ ಮುಂಬೈ, ಚೆನ್ನೈ, ಬೆಂಗಳೂರು ಮತ್ತು ಹೈದರಾಬಾದ್ ನಗರಗಳು ಮುಂಗಾರಿನ ನಂತರ ಈಗ ಪುನಃ ಹಿಂಗಾರಿನ ಪ್ರವಾಹದ ಬಿಕ್ಕಟ್ಟನ್ನು ಎದುರಿಸುವ ಅಪಾಯವಿದೆ. ನಂತರ ಬೇಸಿಗೆ– ನೀರಿಗೆ ಪುನಃ ಹಾಹಾಕಾರ. ಇದು ಎಚ್ಚರಿಕೆಯ ಗಂಟೆ ಮತ್ತು ನೀತಿನಿರೂಪಕರಿಗೆ ಆಪತ್ಕಾಲದ ಕರೆಯಾಗಿದೆ. ‘ಅದೇ ರಾಗ ಅದೇ ಹಾಡು’ ಎಂಬಂತೆ ಪ್ರತಿವರ್ಷವೂ ಬಂದೆರಗುವ ಈ ಹಾಹಾಕಾರದ ಪುನರಾವರ್ತಿತ ಪ್ರದರ್ಶನ ನಿಲ್ಲಿಸಬೇಕಾದರೆ, ನಾವೆಲ್ಲರೂ ಮಹಾನಗರಗಳ ವಿನ್ಯಾಸದ ದಿಕ್ಕು ಬದಲಿಸಲೇಬೇಕಿದೆ.
ಆದುದರಿಂದ ಜಲ ಹಾಗೂ ಆರ್ಥಿಕ ತಜ್ಞರು/ಯೋಜಕರು (ಮತ್ತು ನಾವು/ನೀವು) ಜೊತೆಗೂಡಿ ದೇಶದ ನಗರ/ಪಟ್ಟಣಗಳ ಈ ಆರ್ಥಿಕ ಅಸಮಾನತೆಯನ್ನು, ಏಕಪಕ್ಷೀಯ ಬೆಳವಣಿಗೆಯನ್ನು ಎಷ್ಟು ಬೇಗ ಅರಿತು ಬದಲಾಯಿಸುವೆವೋ, ಅಷ್ಟು ಬೇಗ ಮಹಾನಗರಗಳ ಬೆನ್ನತ್ತಿರುವ ಹೈಡ್ರೊ-ಸ್ಕಿಜೋಫ್ರೀನಿಯಾ ಅಂದರೆ ಈ ನೀರಿನ ಹಾಹಾಕಾರ/ಪ್ರವಾಹಗಳ ಅವಳಿ ಬಿಕ್ಕಟಿಗೆ ಅಂತಿಮ ತೆರೆ ಎಳೆಯಬಹುದಾಗಿದೆ.
1.6 ಕೋಟಿ ಟನ್ ಅಡುಗೆ ಎಣ್ಣೆ ಆಮದು
ಸಂದರ್ಭ: 2024–25ರ ತೈಲ ಮಾರುಕಟ್ಟೆ ವರ್ಷದಲ್ಲಿ ₹1.61 ಲಕ್ಷ ಕೋಟಿ ಮೌಲ್ಯದ ಎಣ್ಣೆ ಆಮದು: ಎಸ್ಇಎ
- 2024–25ರ ತೈಲ ಮಾರುಕಟ್ಟೆ ವರ್ಷದಲ್ಲಿ (ನವೆಂಬರ್ನಿಂದ ಅಕ್ಟೋಬರ್) ದೇಶಕ್ಕೆ 1.6 ಕೋಟಿ ಟನ್ ಅಡುಗೆ ಎಣ್ಣೆ ಆಮದಾಗಿದೆ. ಇದು ಹಣಕಾಸಿನ ಮೌಲ್ಯದಲ್ಲಿ ₹1.61 ಲಕ್ಷ ಕೋಟಿಯಷ್ಟಾಗಿದೆ ಎಂದು ಭಾರತೀಯ ಎಣ್ಣೆ ಗಿರಣಿ ಮಾಲೀಕರ ಸಂಘ (ಎಸ್ಇಎ) ತಿಳಿಸಿದೆ.
- 2023–24ರ ತೈಲ ಮಾರುಕಟ್ಟೆ ವರ್ಷದಲ್ಲಿ 1.59 ಕೋಟಿ ಟನ್ ಅಡುಗೆ ಎಣ್ಣೆ ಆಮದಾಗಿತ್ತು. ಇದರ ಮೌಲ್ಯ ₹1.32 ಲಕ್ಷ ಕೋಟಿಯಷ್ಟಾಗಿತ್ತು. ಜಾಗತಿಕ ಮಾರುಕಟ್ಟೆಯಲ್ಲಿ ಅಡುಗೆ ಎಣ್ಣೆ ಬೆಲೆ ಹೆಚ್ಚಳವಾಗಿದೆ. ಇದರಿಂದ ಆಮದು ಮಾಡಿಕೊಂಡ ಅಡುಗೆ ಎಣ್ಣೆಯ ಬೆಲೆ, ಹಣಕಾಸಿನ ಮೌಲ್ಯದಲ್ಲಿ ಶೇ 22ರಷ್ಟು ಹೆಚ್ಚಳವಾಗಿದೆ ಎಂದು ತಿಳಿಸಿದೆ.
- ಪೂರೈಕೆ ಮತ್ತು ಬೇಡಿಕೆಯ ನಡುವಿನ ಅಂತರವನ್ನು ಕಡಿಮೆ ಮಾಡಲು, ಭಾರತವು 1990ರ ದಶಕದಿಂದಲೂ ಎಣ್ಣೆ ಆಮದು ಮಾಡಿಕೊಳ್ಳುತ್ತಿದೆ. ಆರಂಭಿಕ ಅವಧಿಯಲ್ಲಿ, ಆಮದು ಪ್ರಮಾಣವು ತುಂಬಾ ಕಡಿಮೆ ಇತ್ತು. ಆದರೆ, ಕಳೆದ 20 ವರ್ಷಗಳಲ್ಲಿ (2004-05ರಿಂದ 2024-25), ಆಮದು ಪ್ರಮಾಣವು 2 ಪಟ್ಟು ಹೆಚ್ಚಾಗಿದ್ದರೆ, ಆಮದು ವೆಚ್ಚವು ಸುಮಾರು 15 ಪಟ್ಟು ಏರಿಕೆಯಾಗಿದೆ ಎಂದು ತಿಳಿಸಿದೆ.
- 2022–23ರ ಮಾರುಕಟ್ಟೆ ವರ್ಷದಲ್ಲಿ 1.64 ಕೋಟಿ ಟನ್, 2021–22ರಲ್ಲಿ 1.40 ಕೋಟಿ ಟನ್ ಮತ್ತು 2020–21ರಲ್ಲಿ 1.31 ಕೋಟಿ ಟನ್ ಆಮದಾಗಿತ್ತು.
- 2024–25ರ ತೈಲ ಮಾರುಕಟ್ಟೆ ವರ್ಷದಲ್ಲಿ 17.37 ಲಕ್ಷ ಟನ್ ರಿಫೈನ್ಡ್ ಎಣ್ಣೆ ಆಮದಾಗಿದೆ. 2023–24ರ ಇದೇ ಅವಧಿಯಲ್ಲಿ 19.31 ಲಕ್ಷ ಟನ್ ಆಮದಾಗಿತ್ತು. 2015–16ರಲ್ಲಿ ಸೋಯಾಬಿನ್ ಎಣ್ಣೆ ಆಮದು 42.3 ಲಕ್ಷ ಟನ್ನಷ್ಟಿತ್ತು. ಅದು 2024–25ರ ವೇಳೆಗೆ 54.7 ಲಕ್ಷ ಟನ್ಗೆ ಏರಿಕೆಯಾಗಿದೆ. ತಾಳೆ ಎಣ್ಣೆ ಆಮದು 90 ಲಕ್ಷ ಟನ್ನಿಂದ 75.8 ಲಕ್ಷ ಟನ್ಗೆ ಇಳಿದಿದೆ ಎಂದು ತಿಳಿಸಿದೆ.
- ಭಾರತವು ಇಂಡೊನೇಷ್ಯಾ ಮತ್ತು ಮಲೇಷ್ಯಾದಿಂದ ತಾಳೆ ಎಣ್ಣೆ ಆಮದು ಮಾಡಿಕೊಳ್ಳುತ್ತದೆ. ಅರ್ಜೆಂಟೀನಾ ಮತ್ತು ಬ್ರೆಜಿಲ್ನಿಂದ ಸೋಯಾಬಿನ್ ಎಣ್ಣೆ ಆಮದಾಗುತ್ತದೆ.
- ಸಗಟು ಹಣದುಬ್ಬರ ಇಳಿಕೆ
ಸಂದರ್ಭ: ಜಿಎಸ್ಟಿ ಇಳಿಕೆಯಿಂದ ಸಗಟು ಬೆಲೆ ಸೂಚ್ಯಂಕ (ಡಬ್ಲ್ಯುಪಿಐ) ಆಧಾರಿತ ಹಣದುಬ್ಬರ ದರವು ಅಕ್ಟೋಬರ್ ತಿಂಗಳಿನಲ್ಲಿ ಶೇ (–) 1.21ಕ್ಕೆ ಇಳಿಕೆ ಆಗಿದೆ. ಇದು 27 ತಿಂಗಳದ ಕನಿಷ್ಠ ಮಟ್ಟವಾಗಿದೆ.
- ಕಳೆದ ವರ್ಷದ ಅಕ್ಟೋಬರ್ನಲ್ಲಿ ಶೇ 2.75ರಷ್ಟು ಸಗಟು ಹಣದುಬ್ಬರ ದಾಖಲಾಗಿತ್ತು. ಈ ವರ್ಷದ ಸೆಪ್ಟೆಂಬರ್ನಲ್ಲಿ ಶೇ 0.13ರಷ್ಟಿತ್ತು ಎಂದು ಸರ್ಕಾರದ ಅಂಕಿ–ಅಂಶಗಳು ತಿಳಿಸಿದೆ.
- ಆಹಾರ ಪದಾರ್ಥಗಳ ಬೆಲೆ ಇಳಿಕೆಯಾಗಿದೆ. ಕಚ್ಚಾ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸೇರಿ ಹಲವು ವಸ್ತುಗಳ ಬೆಲೆ ಕಡಿಮೆಯಾಗಿದೆ. ಇದರಿಂದ ಅಕ್ಟೋಬರ್ ತಿಂಗಳಿನಲ್ಲಿ ಹಣದುಬ್ಬರ ಪ್ರಮಾಣ ತಗ್ಗಿದೆ ಎಂದು ಕೇಂದ್ರ ಕೈಗಾರಿಕಾ ಸಚಿವಾಲಯ ತಿಳಿಸಿದೆ.
- ಆಹಾರ ಪದಾರ್ಥಗಳ ಬೆಲೆ ಶೇ 8.31ರಷ್ಟು ಇಳಿಕೆ ಆಗಿದೆ. ಈರುಳ್ಳಿ, ಆಲೂಗೆಡ್ಡೆ, ತರಕಾರಿಗಳು, ದ್ವಿದಳ ಧಾನ್ಯಗಳು ಬೆಲೆ ಸಹ ಕಡಿಮೆ ಆಗಿದೆ.
- ತಯಾರಿಕಾ ವಲಯದ ಉತ್ಪನ್ನಗಳ ಹಣದುಬ್ಬರ ಸೆಪ್ಟೆಂಬರ್ನಲ್ಲಿ ಶೇ 2.33ರಷ್ಟಿತ್ತು. ಅದು ಅಕ್ಟೋಬರ್ನಲ್ಲಿ ಶೇ 1.54ಕ್ಕೆ ಇಳಿದಿದೆ. ಇಂಧನ ಮತ್ತು ವಿದ್ಯುತ್ ಹಣದುಬ್ಬರ ಶೇ 2.58ರಿಂದ ಶೇ 2.55ಕ್ಕೆ ಇಳಿದಿದೆ.
- ಸೆಪ್ಟೆಂಬರ್ 22ರಿಂದ ಜಾರಿಗೆ ಬಂದ ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ) ಇಳಿಕೆಯಿಂದ ಸರಕುಗಳ ಬೆಲೆ ಕಡಿಮೆ ಆಯಿತು. ಇದು ಸಗಟು ಮತ್ತು ಚಿಲ್ಲರೆ ಹಣದುಬ್ಬರ ಇಳಿಕೆಗೆ ಪ್ರಮುಖ ಕಾರಣವಾಗಿದೆ. ಅಕ್ಟೋಬರ್ನಲ್ಲಿ ಚಿಲ್ಲರೆ ಹಣದುಬ್ಬರ ಶೇ 0.25ರಷ್ಟು ದಾಖಲಾಗಿದೆ. ಇದು ದಶಕದ ಕನಿಷ್ಠ ಮಟ್ಟವಾಗಿದೆ ಎಂದು ತಿಳಿಸಿದೆ.
- ಪಿಎಂ–ಕಿಸಾನ್ ನಿಧಿ ಬಿಡುಗಡೆ 19ರಂದು
ಸಂದರ್ಭ: ಪಿಎಂ–ಕಿಸಾನ್ ಯೋಜನೆಯ 21ನೇ ಕಂತನ್ನು ಪ್ರಧಾನಿ ನರೇಂದ್ರ ಮೋದಿ ಅವರು, ನವೆಂಬರ್ 19ರಂದು ಬಿಡುಗಡೆ ಮಾಡಲಿದ್ದಾರೆ.
- ಈ ಯೋಜನೆಯಡಿ ಪ್ರತಿ ಫಲಾನುಭವಿಗೆ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ (ಪಿಎಂ-ಕಿಸಾನ್) ಯೋಜನೆಯಡಿ ವಾರ್ಷಿಕ ₹6 ಸಾವಿರ ನೀಡಲಾಗುತ್ತದೆ. ಪ್ರತಿ ನಾಲ್ಕು ತಿಂಗಳಿಗೆ ಮೂರು ಬಾರಿ ರೈತರಿಗೆ ₹2 ಸಾವಿರವನ್ನು ನೇರವಾಗಿ ಅವರ ಬ್ಯಾಂಕ್ ಖಾತೆಗಳಿಗೆ ಜಮೆ ಮಾಡಲಾಗುತ್ತದೆ.
- ಭೂಮಿಗೆ ಮರಳಿದ ಚೀನಾದ ಗಗನಯಾನಿಗಳು
ಸಂದರ್ಭ: ಬೀಜಿಂಗ್, ಚೀನಾ (ಪಿಟಿಐ): ವ್ಯೋಮನೌಕೆಯು ಅಂತರಿಕ್ಷದ ಅವಶೇಷಗಳಿಗೆ ಡಿಕ್ಕಿ ಹೊಡೆದಿದ್ದರಿಂದ ಭೂಮಿಗೆ ಬರಲು ವಿಳಂಬವಾಗಿದ್ದ ಚೀನಾದ ಗಗನಯಾನಿಗಳು ಸುರಕ್ಷಿತವಾಗಿ ಬಂದಿಳಿದಿದ್ದಾರೆ.
- ‘ಶೆಂಝೌ-14 ಬಾಹ್ಯಾಕಾಶ ನೌಕೆಯ ಮೂಲಕ ಚೆನ್ ಡಾಂಗ್, ಚೆನ್ ಝೆಂಗುರಿ ಹಾಗೂ ವಾಂಗ್ ಜಿ ಅವರು ಉತ್ತರ ಚೀನಾದ ಡಾಂಗ್ಫೆಂಗ್ ನಿಲ್ದಾಣಕ್ಕೆ ಬಂದಿಳಿದರು’ ಎಂದು ಚೀನಾದ ಮಾನವಸಹಿತ ಬಾಹ್ಯಾಕಾಶ ಸಂಸ್ಥೆ (ಸಿಎಂಎಸ್ಎ) ತಿಳಿಸಿದೆ.
- ‘ನವೆಂಬರ್ 5ರಂದೇ ಈ ಮೂವರು ಗಗನಯಾನಿಗಳು ಭೂಮಿಗೆ ಮರಳಬೇಕಿತ್ತು. ಅಂತರಿಕ್ಷದಲ್ಲಿ ವ್ಯೋಮನೌಕೆಗೆ ಕೊನೆಯ ಹಂತದಲ್ಲಿ ಅವಶೇಷಗಳು ಡಿಕ್ಕಿ ಹೊಡೆದಿದದ್ದರಿಂದ ಸಣ್ಣದಾಗಿ ಬಿರುಕು ಕಾಣಿಸಿಕೊಂಡಿತ್ತು. ಹೀಗಾಗಿ, ಪ್ರಯಾಣವನ್ನು ಮುಂದೂಡಲಾಗಿತ್ತು. ನಂತರ ಅವುಗಳನ್ನು ಸರಿಪಡಿಸಿದ ನಂತರ, ಅವರು ವ್ಯೋಮನೌಕೆಯಲ್ಲಿ ಬಂದಿಳಿದರು’ ಎಂದು ಸಿಎಂಎಸ್ಎ ತನ್ನ ಪ್ರಕಟಣೆಯಲ್ಲಿ ವಿವರಿಸಿದೆ.
- 2011ರಲ್ಲಿ ಬಾಹ್ಯಾಕಾಶ ನಿಲ್ದಾಣ ನಿರ್ಮಾಣ ಮಾಡಿದ ಬಳಿಕ ಇದೇ ಮೊದಲ ಬಾರಿ ಈ ಸಮಸ್ಯೆ ತಲೆದೋರಿತ್ತು. ಈ ನಿಲ್ದಾಣದಲ್ಲಿ ಮೂವರು ಗಗನಯಾನಿಗಳಿಗೆ ಏಕಕಾಲಕ್ಕೆ ಉಳಿಯುವ ವ್ಯವಸ್ಥೆ ಮಾಡಲಾಗಿದೆ. ಪ್ರತಿ ಆರು ತಿಂಗಳಿಗೊಮ್ಮೆ ಬೇರೆ ಗಗನ ಯಾನಿಗಳನ್ನು ಚೀನಾವು ಅಲ್ಲಿಗೆ ಕಳುಹಿಸಿಕೊಡುತ್ತದೆ.
- ವಿಶ್ವ ಶೂಟಿಂಗ್: ಇಶಾಗೆ ಕಂಚಿನ ಪದಕ
ಸಂದರ್ಭ: ಭಾರತದ ಅನುಭವಿ ಶೂಟರ್ ಇಶಾ ಸಿಂಗ್ ಅವರು ಇಲ್ಲಿ ನಡೆಯುತ್ತಿರುವ ಐಎಸ್ಎಸ್ಎಫ್ ವಿಶ್ವ ಚಾಂಪಿಯನ್ಷಿಪ್ನ ಮಹಿಳೆಯರ 25 ಮೀ. ಸ್ಪೋರ್ಟ್ ಪಿಸ್ತೂಲ್ ಸ್ಪರ್ಧೆಯಲ್ಲಿ ಕಂಚಿನ ಪದಕ ಗೆದ್ದರು. ಆದರೆ, ಒಲಿಂಪಿಕ್ಸ್ ಅವಳಿ ಪದಕ ವಿಜೇತೆ ಮನು ಭಾಕರ್ ನಿರಾಸೆ ಮೂಡಿಸಿದರು.
- 26 ವರ್ಷದ ಇಶಾ ಅವರಿಗೆ ಇದು ವಿಶ್ವ ಚಾಂಪಿ ಯನ್ಷಿಪ್ನಲ್ಲಿ ಮೊದಲ ವೈಯಕ್ತಿಕ ಪದಕವಾಗಿದೆ. ಶುಕ್ರವಾರ ಫೈನಲ್ ಸ್ಪರ್ಧೆಯಲ್ಲಿ 30 ಅಂಕಗಳೊಂದಿಗೆ ಇಶಾ ಮೂರನೇ ಸ್ಥಾನ ಗಳಿಸಿದರು.
- ಹಾಲಿ ಒಲಿಂಪಿಕ್ ಚಾಂಪಿಯನ್, ಕೊರಿಯಾದ ಯಾಂಗ್ ಜಿಯಿನ್ (40 ಅಂಕ) ಚಿನ್ನದ ಸಾಧನೆ ಮಾಡಿದರೆ, ಚೀನಾದ ಯಾವೋ ಕಿಯಾನ್ಕ್ಸನ್ (38) ಬೆಳ್ಳಿ ಪದಕ ತಮ್ಮದಾಗಿಸಿಕೊಂಡರು. ಮನು ಐದನೇ ಸ್ಥಾನದೊಂದಿಗೆ ಅಭಿಯಾನ ಮುಗಿಸಿದರು.
- ಮೂರು ಚಿನ್ನ, ಐದು ಬೆಳ್ಳಿ ಮತ್ತು ನಾಲ್ಕು ಕಂಚಿನ ಪದಕ ಗೆದ್ದ ಭಾರತ ಪದಕ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ.
- ಇಶಾ ಕರ್ನಾಟಕದ ಮೊದಲ ಮಹಿಳಾ ಗ್ರ್ಯಾಂಡ್ಮಾಸ್ಟರ್
ಸಂದರ್ಭ: ದಕ್ಷಿಣ ಕನ್ನಡ ಜಿಲ್ಲೆ ಬೆಳ್ತಂಗಡಿಯ ಇಶಾ ಶರ್ಮಾ ಅವರು ಕರ್ನಾಟಕದ ಮೊದಲ ಮಹಿಳಾ ಗ್ರ್ಯಾಂಡ್ಮಾಸ್ಟರ್ ಎಂಬ ಗೌರವಕ್ಕೆ ಪಾತ್ರರಾದರು. ಸರ್ಬಿಯಾದ ಸುಬೊಟಿಕಾದಲ್ಲಿ ನಡೆದ ಐಎಂ ಸರ್ಕಿಟ್ ಟೂರ್ನಿಯಲ್ಲಿ ಅವರು ಮೂರನೇ ಡಬ್ಲ್ಯುಜಿಎಂ ನಾರ್ಮ್ ಪಡೆದು ಅಗತ್ಯವಿದ್ದ ಅರ್ಹತೆ ಪೂರೈಸಿದರು.
- ಡಬ್ಲ್ಯುಜಿಎಂ ‘ಟೈಟಲ್’ ಪಡೆಯಲು ಆಟಗಾರ್ತಿಯೊಬ್ಬರು ಮೂರು ನಾರ್ಮ್ ಗಳ ಜೊತೆ 2300 ಫಿಡೆ ರೇಟಿಂಗ್ ಗಳಿಸ ಬೇಕಾಗುತ್ತದೆ. ಅವರು 2022ರ ಆಗಸ್ಟ್ನಲ್ಲೇ ಈ ರೇಟಿಂಗ್ ಪೂರೈಸಿದ್ದರು.
- 2022ರಲ್ಲಿ ಸ್ಲೊವಾಕಿಯಾದಲ್ಲಿ ಅವರು ಮೊದಲ ನಾರ್ಮ್ ಪಡೆದಿದ್ದರು. ಮರುವರ್ಷ ಮೊರಾಕೊದಲ್ಲಿ ಎರಡನೇ ಡಬ್ಲ್ಯುಜಿಎಂ ನಾರ್ಮ್ ಗಳಿಸಿದ್ದರು.
- 2019ರಲ್ಲಿ ಅವರು ಮಹಿಳಾ ಐಎಂ (ಡಬ್ಲ್ಯುಐಎಂ) ಆಗಿದ್ದರು. ಈ ಸಾಧನೆಗೆ ಪಾತ್ರರಾಗಿದ್ದ ರಾಜ್ಯದ ಮೊದಲಿಗರಾಗಿದ್ದರು.
- ‘ಇದಕ್ಕಾಗಿ ಐದು ವರ್ಷಗಳಿಂದ ಶ್ರಮ ಹಾಕಿದ್ದೆ. ಈಗ ಸಾಕಾರಗೊಂಡಿರುವುದು ಸಂತಸಕ್ಕಿಂತ ನಿರಾಳತೆ ನೀಡಿದೆ’ ಎಂದು ಇಶಾ ಸರ್ಬಿಯಾದಿಂದ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.
- ಇಶಾ ಅವರು ಈ ವರ್ಷ ಚೆಸ್ ಆಟಗಾರ ಐಎಂ ಶರಣ್ ರಾವ್ ಅವರನ್ನು ವಿವಾಹವಾಗಿದ್ದಾರೆ. ಮಂಗಳೂರಿ ನಲ್ಲಿರುವ ಶರಣ್ ಅವರ ರಾವ್ ಚೆಸ್ ಅಕಾಡೆಮಿಯಲ್ಲಿ ಇಶಾ ಮುಖ್ಯ ಕೋಚ್ ಆಗಿದ್ದಾರೆ.
- ‘ಆಟಕ್ಕಿಂತಲೂ ಈಗ ತರಬೇತಿ ನೀಡುವತ್ತ ಹೆಚ್ಚಿನ ಗಮನ ನೀಡುತ್ತಿ ದ್ದೇನೆ’ ಎಂದೂ ಅವರು ಹೇಳಿದರು.
- ಏಷ್ಯನ್ ಆರ್ಚರಿ: ಅಂಕಿತಾ, ಧೀರಜ್ಗೆ ಚಿನ್ನದ ಪದಕ
ಸಂದರ್ಭ: ಭಾರತದ ಬಿಲ್ಗಾರರಾದ ಅಂಕಿತಾ ಭಕತ್ ಮತ್ತು ಧೀರಜ್ ಬೊಮ್ಮದೇವರ ಅವರು ಶುಕ್ರವಾರ ನಡೆದ ಏಷ್ಯನ್ ಆರ್ಚರಿ ಚಾಂಪಿಯನ್ಷಿಪ್ನ ರಿಕರ್ವ್ ವೈಯಕ್ತಿಕ ಸ್ಪರ್ಧೆಯಲ್ಲಿ ಚಿನ್ನದ ಸಾಧನೆ ಮಾಡಿದರು.
- 27 ವರ್ಷದ ಅಂಕಿತಾ ಮಹಿಳೆಯರ ವಿಭಾಗದ ಫೈನಲ್ನಲ್ಲಿ 7–3 ಅಂತರದಿಂದ ಪ್ಯಾರಿಸ್ ಒಲಿಂಪಿಕ್ಸ್ ಬೆಳ್ಳಿ ಪದಕ ವಿಜೇತೆ, ದಕ್ಷಿಣ ಕೊರಿಯಾದ ನಾಮ್ ಸುಹಿಯೋನ್ ಅವರಿಗೆ ಆಘಾತ ನೀಡಿದರು. ಪುರುಷರ ವಿಭಾಗದಲ್ಲಿ ಪ್ರಶಸ್ತಿ ಸುತ್ತಿನಲ್ಲಿ ಧೀರಜ್ 6–2ರಿಂದ ಸ್ವದೇಶದ ರಾಹುಲ್ ಅವರನ್ನು ಮಣಿಸಿದರು.
- ಅಂಕಿತಾ ಸೆಮಿಫೈನಲ್ನಲ್ಲಿ ಸ್ವದೇಶದ ಅನುಭವಿ ದೀಪಿಕಾ ಅವರನ್ನು ಸೋಲಿಸಿದ್ದರು. 5–5 ಅಂಕಗಳಿಂದ ಸಮಬಲ ಸಾಧಿಸಿದ ಬಳಿಕ ಶೂಟ್ ಆಫ್ನಲ್ಲೂ ಪಾಯಿಂಟ್ಸ್ (9) ಸಮನಾಯಿತು. ಆದರೆ, ಅಂಕಿತಾ ಅವರ ಬಾಣವು ಹೆಚ್ಚು ನಿಖರವಾಗಿದ್ದರಿಂದ ಅವರು ಫೈನಲ್ಗೆ ಮುನ್ನಡೆದರು.
- ಐದು ಬಾರಿಯ ಒಲಿಂಪಿಯನ್ ದೀಪಿಕಾ ಕುಮಾರಿ ಕಂಚಿನ ಪದಕ ಗೆದ್ದುಕೊಂಡರು. ಕಂಚಿನ ಪ್ಲೇ ಆಫ್ ಸುತ್ತಿನಲ್ಲಿ ಸ್ವದೇಶದ ಸಂಗೀತಾ ಅವರನ್ನು ಶೂಟ್ ಆಫ್ನಲ್ಲಿ (6–5) ಮಣಿಸಿದರು.
- ಸೆಮಿಫೈನಲ್ನಲ್ಲಿ ಮೊದಲ ಸೆಟ್ ಕಳೆದುಕೊಂಡಿದ್ದ ಧೀರಜ್ ನಂತರ ಲಯ ಕಂಡುಕೊಂಡು 6–2ರಿಂದ ಕೊರಿಯಾದ ಅನುಭವಿ ಆಟಗಾರ ಜಾಂಗ್ ಚೆಹ್ವಾನ್ ಅವರನ್ನು ಸೋಲಿಸಿದ್ದರು.
- ಭಾರತವು ಆರು ಚಿನ್ನ, ಮೂರು ಬೆಳ್ಳಿ ಮತ್ತು ಒಂದು ಕಂಚು ಸೇರಿ ಒಟ್ಟು 10 ಪದಕಗಳೊಂದಿಗೆ ಅಭಿಯಾನವನ್ನು ಮುಗಿಸಿತು.
ಪ್ರಚಲಿತ ವಿದ್ಯಮಾನಗಳು: 14ನೇ ನವೆಂಬರ್ 2025
ಸಾಫ್ಟ್ವೇರ್ ರಫ್ತು: ಭಾರಿ ಏರಿಕೆ ಗುರಿ: ನಗರಗಳಲ್ಲಿ ಐಟಿ ಬೆಳವಣಿಗೆಗೆ ಒತ್ತು l ಮಾಹಿತಿ ತಂತ್ರಜ್ಞಾನ ನೀತಿಗೆ ಅಸ್ತು
ಸಂದರ್ಭ: ಕರ್ನಾಟಕದಿಂದ ಸಾಫ್ಟ್ವೇರ್ ರಫ್ತನ್ನು 2030 ವೇಳೆಗೆ ₹4.09 ಲಕ್ಷ ಕೋಟಿಯಿಂದ ₹11.5 ಲಕ್ಷ ಕೋಟಿಗೆ ಹೆಚ್ಚಿಸುವ ಗುರಿ ಹೊಂದಿದ ‘ಕರ್ನಾಟಕ ಮಾಹಿತಿ ತಂತ್ರಜ್ಞಾನ ನೀತಿ 2025–2030’ಕ್ಕೆ ಸಚಿವ ಸಂಪುಟ ಸಭೆ ಅನುಮೋದನೆ ನೀಡಿದೆ.
- ಬೆಂಗಳೂರಿನಾಚೆಗೆ ಮೈಸೂರು, ಮಂಗಳೂರು, ಹುಬ್ಬಳ್ಳಿ–ಧಾರವಾಡ, ಬೆಳಗಾವಿ, ತುಮಕೂರು, ಕಲಬುರಗಿ ಮತ್ತು ಶಿವಮೊಗ್ಗದಂತಹ ನಗರಗಳಲ್ಲಿ ಕೃತಕ ಬುದ್ಧಿಮತ್ತೆ ಹಾಗೂ ಇತರ ನೂತನ ತಂತ್ರಜ್ಞಾನ ಗಳ ಮೇಲೆ ಹೂಡಿಕೆಗೆ ಆದ್ಯತೆ ನೀಡುವ ಬಗ್ಗೆಯೂ ನೀತಿ ಪ್ರಸ್ತಾಪಿಸಿದೆ.
- ‘ರಾಜ್ಯದ ಆದಾಯ ಮೌಲ್ಯ ವರ್ಧನೆಗೆ ಐಟಿ ವಲಯದ ಕೊಡುಗೆಯನ್ನು ಶೇ 26ರಿಂದ ಶೇ 36ಕ್ಕೆ ಹೆಚ್ಚಿಸಲು ಗುರಿ ನಿಗದಿ ಮಾಡಲಾಗಿದೆ.
- ಜಾಗತಿಕ ತಂತ್ರಜ್ಞಾನ ಮಾರುಕಟ್ಟೆಗಳಲ್ಲಿ ಕರ್ನಾಟಕದ ನಾಯಕತ್ವ ಬಲಪಡಿಸುವುದು ಮತ್ತು ಕರ್ನಾಟಕದ ಬ್ರ್ಯಾಂಡ್ ಅನ್ನು ಕೃತಕ ಬುದ್ದಿಮತ್ತೆಯ ಸ್ಥಳೀಯ ತಾಣವಾಗಿ (ಎಐ–ನೇಟಿವ್) ಉನ್ನತೀಕರಿಸಲು ಅಗತ್ಯ ಯೋಜನೆ ರೂಪಿಸಲಾಗುವುದು.
ನೀತಿಯ ಮುಖ್ಯಾಂಶಗಳು
- ಕೃತಕ ಬುದ್ದಿಮತ್ತೆ, ಬ್ಲಾಕ್ಚೈನ್, ಕ್ವಾಂಟಮ್ ಕಂಪ್ಯೂಟಿಂಗ್, ಹಸಿರು ಐಟಿ ಮತ್ತು ಮುಂದುವರಿದ ಸೈಬರ್ ಭದ್ರತೆಗೆ ತಂತ್ರಜ್ಞಾನಕ್ಕೆ ಉತ್ತೇಜನ
- ಡಿಜಿಟಲ್ ಸಂಪರ್ಕ, ಹಸಿರು ಆವರಣಗಳು ಮತ್ತು ಗ್ರಾಮೀಣ–ನಗರ ಏಕೀಕರಣವನ್ನು ಉತ್ತೇಜಿಸಲು ಮೂಲಸೌಕರ್ಯ ಅಭಿವೃದ್ಧಿ
- ಸೈಬರ್ ಸುರಕ್ಷತೆ, ವಿಪತ್ತು ನಿರ್ವಹಣೆ ಮತ್ತು ವಿದ್ಯುತ್ ಭದ್ರತೆ ಮೂಲಕ ಬಲಿಷ್ಠ ಐಟಿ ಕಾರ್ಯಾಚರಣೆಗಳನ್ನು ಖಾತ್ರಿಪಡಿಸಲಾಗುವುದು
- ನಿಯಮಗಳನ್ನು ಸರಳಗೊಳಿಸಿ, ತಡೆ ರಹಿತ, ಪಾರದರ್ಶಕ ಮತ್ತು ಏಕಗವಾಕ್ಷಿ ಆಡಳಿತ ಸಕ್ರಿಯಗೊಳಿಸಲಾಗುವುದು
- ಕ್ನೋವರ್ಸ್ ಅಂದರೆ ಸಂಯೋಜಿತ ತಂತ್ರಜ್ಞಾನ ಆವರಣಗಳ ಸ್ಥಾಪನೆ ಮತ್ತು ಮುಂಬರುವ ಜಾಗತಿಕ ನಾವೀನ್ಯತಾ ಜಿಲ್ಲೆಗಳಲ್ಲಿ (ಜಿಐಡಿಗಳು) ಇವುಗಳ ಸ್ಥಾಪನೆ ಆಗಲಿದೆ.
- ರಾಜ್ಯವ್ಯಾಪಿ ಡಿಜಿಟಲ್ ಹಬ್ ಗ್ರಿಡ್ (ಎಸ್ಡಿಎಚ್ಜಿ), ಐಟಿ ಪಾರ್ಕ್ಗಳು, ಶ್ರೇಷ್ಠತೆಯ ಕೇಂದ್ರಗಳು, ನಾವೀನ್ಯತೆ ಕೇಂದ್ರಗಳು, ಸಂಶೋಧನೆ ಮತ್ತು ಅಭಿವೃದ್ಧಿ ಸೌಲಭ್ಯಗಳನ್ನು ಏಕೀಕರಿಸಲಾಗುವುದು.
- 1,000 ಮಧ್ಯಮ–ವೃತ್ತಿ ಜೀವನದ ಮಹಿಳಾ ತಂತ್ರಜ್ಞಾನ ವೃತ್ತಿಪರರಿಗೆ ತರಬೇತಿ ನೀಡಲು ಮೀಸಲಾದ ಮಹಿಳಾ ಗ್ಲೋಬಲ್ ಟೆಕ್ ಮಿಷನ್ಸ್ ಫೆಲೋಶಿಪ್ ಆರಂಭಿಸಲಾಗುವುದು
- ಬೆಂಗಳೂರಿನ ಹೊರಗೆ ಇರುವ ಕಂಪನಿಗಳಿಗೆ 16 ಬಗೆಯ ಪ್ರೋತ್ಸಾಹ.
ರಾಜ್ಯಕ್ಕೆ ‘ಸುಪ್ರೀಂ’ ಜಯ
ಸಂದರ್ಭ:ಕಾವೇರಿ ನದಿಗೆ ಅಡ್ಡಲಾಗಿ ಮೇಕೆದಾಟು ಸಮತೋಲನ ಜಲಾಶಯ ನಿರ್ಮಿಸುವ ಕರ್ನಾಟಕ ಸರ್ಕಾರದ ಯೋಜನೆ ವಿರುದ್ಧ ತಮಿಳುನಾಡು ಸರ್ಕಾರ ಸಲ್ಲಿಸಿದ್ದ ಅರ್ಜಿಗಳನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದೆ. ಇದರಿಂದ, ತಮಿಳುನಾಡಿಗೆ ಭಾರಿ ಹಿನ್ನಡೆಯಾಗಿದೆ.

- ಪ್ರಕರಣದ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಬಿ.ಆರ್.ಗವಾಯಿ, ನ್ಯಾಯಮೂರ್ತಿಗಳಾದ ಕೆ. ವಿನೋದ್ ಚಂದ್ರನ್ ಹಾಗೂ ಎನ್.ವಿ. ಅಂಜಾರಿಯಾ ಪೀಠವು, ‘ಮೇಕೆದಾಟು ಅಣೆಕಟ್ಟೆ ನಿರ್ಮಾಣಕ್ಕೆ ವಿಸ್ತೃತ ಯೋಜನಾ ವರದಿ (ಡಿಪಿಆರ್) ತಯಾರಿಸಲು ಮಾತ್ರ ಕೇಂದ್ರ ಜಲ ಆಯೋಗ (ಸಿಡಬ್ಲ್ಯುಸಿ) ಅನುಮತಿ ನೀಡಿದೆ.
- ತಮಿಳುನಾಡಿನ ಆಕ್ಷೇಪಣೆ ಗಳನ್ನು ತಜ್ಞರು ಪರಿಶೀಲಿಸಿದ ಬಳಿಕವೇ ಈ ಪ್ರಕ್ರಿಯೆ ನಡೆದಿದೆ. ಈ ಹಂತದಲ್ಲಿ ಇದನ್ನು ಪ್ರಶ್ನಿಸಿ ತಮಿಳುನಾಡು ಅರ್ಜಿ ಸಲ್ಲಿಸಿರುವುದು ಅವಧಿಪೂರ್ವ (ಪ್ರಿಮೆಚೂರ್)’ ಎಂದು ಅಭಿಪ್ರಾಯಪಟ್ಟಿದೆ.
- ‘ತಮಿಳುನಾಡಿನ ಆಕ್ಷೇಪಣೆಗಳನ್ನು ಹಾಗೂ ತಜ್ಞ ಸಂಸ್ಥೆಗಳು, ಕಾವೇರಿ ನೀರು ನಿಯಂತ್ರಣ ಸಮಿತಿ (ಸಿಡಬ್ಲ್ಯುಆರ್ಸಿ) ಮತ್ತು ಕಾವೇರಿ ನೀರು ನಿರ್ವಹಣ ಪ್ರಾಧಿಕಾರಗಳ (ಸಿಡಬ್ಲ್ಯುಎಂಎ) ಅಭಿಪ್ರಾಯಗಳನ್ನು ಪರಿಗಣಿಸಿದ ನಂತರವೇ ಆಯೋಗವು ಯೋಜನೆಗೆ ಅನುಮೋದನೆ ನೀಡಲಿದೆ’ ಎಂದು ಪೀಠ ತಿಳಿಸಿದೆ.
- ‘ನ್ಯಾಯಾಲಯ ಮತ್ತು ಪ್ರಾಧಿಕಾರಗಳ ನಿರ್ದೇಶನಗಳನ್ನು ಅನುಸರಿಸಿ ಕರ್ನಾಟಕ ರಾಜ್ಯವು ಕಾವೇರಿ ನೀರನ್ನು ಹರಿಸಲು ಬದ್ಧವಾಗಿರಬೇಕು. ಒಂದು ವೇಳೆ, ಈ ನ್ಯಾಯಾಲಯದ ನಿರ್ದೇಶನಗಳನ್ನು ಪಾಲಿಸಲು ಕರ್ನಾಟಕ ವಿಫಲವಾದರೆ, ನ್ಯಾಯಾಂಗ ನಿಂದನೆ ಎಸಗಿದ ಅಪಾಯ ಎದುರಿಸಲಿದೆ’ ಎಂದು ಪೀಠ ಎಚ್ಚರಿಸಿದೆ. ಆದಾಗ್ಯೂ, ‘ನ್ಯಾಯಾಲಯದ ಎಲ್ಲ ನಿರ್ದೇಶನಗಳನ್ನು ಪಾಲಿಸಲಾಗಿದೆ. ತಮಿಳುನಾಡು ಎತ್ತಿರುವ ಅನೇಕ ಪ್ರಶ್ನೆಗಳು ಅತಿಯಾದುದು’ ಎಂದು ಕರ್ನಾಟಕ ವಾದಿಸಿದೆ.
ಬಾಹ್ಯಾಕಾಶ: ‘ನಂ 1’ಗೆ ಜಿಗಿತದತ್ತ ನಡೆ
ಸಂದರ್ಭ: ಕರ್ನಾಟಕ ಬಾಹ್ಯಾಕಾಶ ತಂತ್ರಜ್ಞಾನ ನೀತಿ 2025–2030’ ನೀತಿಗೆ ಸಂಪುಟ ಸಭೆ ಒಪ್ಪಿಗೆ: ರಾಜ್ಯದಲ್ಲಿರುವ ಬಾಹ್ಯಾಕಾಶ ವಿಜ್ಞಾನ ಮತ್ತು ತಂತ್ರಜ್ಞಾನ ಪರಿಸರ ವ್ಯವಸ್ಥೆಯನ್ನು ಬಳಸಿಕೊಂಡು ಕರ್ನಾಟಕವನ್ನು ಬಾಹ್ಯಾಕಾಶ ತಂತ್ರಜ್ಞಾನದ ಜಾಗತಿಕ ತಾಣವಾಗಿ ಪರಿವರ್ತಿಸುವ ಉದ್ದೇಶದ ‘ಕರ್ನಾಟಕ ಬಾಹ್ಯಾಕಾಶ ತಂತ್ರಜ್ಞಾನ ನೀತಿ 2025–2030’ಕ್ಕೂ ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿದೆ.
- ಬಾಹ್ಯಾಕಾಶ ತಂತ್ರಜ್ಞಾನ ಕ್ಷೇತ್ರದಲ್ಲಿ ರಾಷ್ಟ್ರೀಯ ಮಾರುಕಟ್ಟೆ ಪಾಲಿನ ಶೇ 50 ಅನ್ನು ಹೊಂದುವ ಮೂಲಕ ಕರ್ನಾಟಕ ವನ್ನು ಭಾರತದಲ್ಲಿ ನಂಬರ್ 1 ತಾಣವಾಗಿ ಉಳಿಸಿಕೊಳ್ಳುವುದು ಮತ್ತು ಜಾಗತಿಕ ಮಾರುಕಟ್ಟೆ ಪಾಲಿನ ಶೇ 5 ಅನ್ನು ಹೊಂದುವ ಮೂಲಕ ಕರ್ನಾಟಕವನ್ನು ಬಾಹ್ಯಾಕಾಶ ತಂತ್ರಜ್ಞಾನದ ಜಾಗತಿಕ ತಾಣವಾಗಿಸುವುದು ಸರ್ಕಾರದ ಉದ್ದೇಶ.
- ಜಾಗತಿಕ ಮತ್ತು ದೇಶೀಯ ಬಾಹ್ಯಾಕಾಶ ವಲಯದಿಂದ ಉದ್ಯೋಗ ಪಡೆಯಬಹುದಾದ ಹೆಚ್ಚು ಕೌಶಲಪೂರ್ಣ ಕಾರ್ಯಪಡೆ ರೂಪಿಸು ವುದು, ಕರ್ನಾಟಕದಲ್ಲಿ ಬಾಹ್ಯಾಕಾಶ ತಂತ್ರಜ್ಞಾನ ಕ್ಷೇತ್ರಕ್ಕೆ ಸಂಬಂಧಿಸಿದ ಕೈಗಾ ರಿಕೆಗಳ ಒಟ್ಟುಗೂಡುವಿಕೆಗೆ ಪ್ರೇರಕ ಶಕ್ತಿ ಯಾಗಿ ಕಾರ್ಯ ನಿರ್ವಹಿಸಲು 50 ಸಾವಿರ ಯುವ ವೃತ್ತಿಪರರು, ವಿದ್ಯಾರ್ಥಿ ಗಳಿಗೆ ತರಬೇತಿ ನೀಡಿಕೌಶಲ ಅಭಿವೃದ್ಧಿಗೆ ಪ್ರೋತ್ಸಾಹ ನೀಡಲಾಗುವುದು.
ಸಂಘರ್ಷ ತಡೆ: 8 ಅಂಶಗಳ ಯೋಜನೆಗೆ ಅಸ್ತು: ಮಾನವ– ವನ್ಯಪ್ರಾಣಿ ಸಂಘರ್ಷ ತಪ್ಪಿಸಲು ಸಿಬ್ಬಂದಿ, ಅನುದಾನ: ಸಿ.ಎಂ
ಸಂದರ್ಭ: ‘ಮಾನವ– ವನ್ಯಪ್ರಾಣಿ ಸಂಘರ್ಷ ತಪ್ಪಿಸಲು ಡ್ರೋನ್ ಕ್ಯಾಮರಾ ಗಳ ನಿಗಾ ಹೆಚ್ಚಿಸಬೇಕು. ಕೃಪಾಕರ ಸೇನಾನಿ–ಸಂಜಯ್ ಗುಬ್ಬಿ ಸೇರಿದಂತೆ ತಜ್ಞರ ಜೊತೆ ಚರ್ಚಿಸಿ ವೈಜ್ಞಾನಿಕ ಮಾರ್ಗಗಳನ್ನು ರೂಪಿಸಬೇಕು’ ಎಂದು ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚನೆ ನೀಡಿದರು.
- ರಾಜ್ಯ ಮಟ್ಟದ ಸಮಗ್ರ ಮಾನವ- ವನ್ಯಜೀವಿ ಸಂಘರ್ಷ ನಿರ್ವಹಣಾ ಕಾರ್ಯತಂತ್ರಗಳನ್ನು ರೂಪಿಸಲು ಹಾಗೂ ಮುನ್ನೆಚ್ಚರಿಕೆ ಕ್ರಮಗಳ ಕುರಿತು ಚರ್ಚಿಸಲು ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು.
- ‘ವಯಸ್ಸಾದ ಕಾರಣಕ್ಕೆ, ಯುವ ಹುಲಿಗಳ ದಾಳಿಯಿಂದ ಗಾಯಗೊಂಡ ಹಾಗೂ ಇತರೆ ಕಾರಣಗಳಿಂದ ಅರಣ್ಯ ಪ್ರದೇಶದಿಂದ ಹೊರಗೆ ಸಂಚರಿಸುತ್ತಿರುವ 15-20 ಹುಲಿಗಳನ್ನು ಡ್ರೋನ್ ಕ್ಯಾಮರಾ ನೆರವಿನಿಂದ ತಕ್ಷಣ ಹಿಡಿಯಲು ಕ್ರಮ ತೆಗೆದುಕೊಳ್ಳಬೇಕು. ಅದಕ್ಕೆ ಅಗತ್ಯವಾದ ಸಿಬ್ಬಂದಿ, ಅನುದಾನ ಸೇರಿ ಎಲ್ಲ ನೆರವು ನೀಡಲಾಗುವುದು’ ಎಂದು ಅವರು ಭರವಸೆ ನೀಡಿದರು.
- ‘ಈಗಾಗಲೇ ಎಂಟು ಕುಮ್ಕಿ ಆನೆಗಳನ್ನು ಕಾರ್ಯಾಚರಣೆಗೆ ಬಳಸಲಾಗುತ್ತಿದ್ದು ಅಗತ್ಯಕ್ಕೆ ತಕ್ಕಂತೆ ಸಿಬ್ಬಂದಿ ಮತ್ತು ಸ್ಕ್ವಾಡ್ಗಳ ಸಂಖ್ಯೆಯನ್ನು ಸಂಘರ್ಷ ಪೀಡಿತ ಅರಣ್ಯ ಪ್ರದೇಶದಲ್ಲಿ ಬಳಸಬೇಕು’ ಎಂದೂ ಅವರು ಸೂಚನೆ ನೀಡಿದರು.
- ಚಾಮರಾಜನಗರ, ಕೊಡಗು, ಹಾಸನ, ಮೈಸೂರು ಹಾಗೂ ರಾಮನಗರ ಜಿಲ್ಲೆಯಲ್ಲಿ ಅತಿ ಹೆಚ್ಚು ಮಾನವ ಪ್ರಾಣ ಹಾನಿ ಪ್ರಕರಣಗಳು ಸಂಭವಿಸಿವೆ. ಕಳೆದ ಮೂರು ವರ್ಷಗಳಿಗೆ ಹೋಲಿಸಿದರೆ 2024-25ರಲ್ಲಿ ಇಂತಹ ಪ್ರಕರಣ ಶೇ 30ರಷ್ಟು ಕಡಿಮೆಯಾಗಿದೆ.
- ವನ್ಯಜೀವಿಗಳು ಆಹಾರ ಹುಡುಕಿಕೊಂಡು ಕಾಡಿನಿಂದ ಹೊರಗೆ ಬರುವುದನ್ನು ನಿಗ್ರಹಿಸಬೇಕು. ಬೇಸಿಗೆ ಕಾಲದಲ್ಲಿ ವನ್ಯಜೀವಿ ಗಳಿಗೆ ಅರಣ್ಯದೊಳಗೆ ನೀರಿನ ವ್ಯವಸ್ಥೆ ಕಲ್ಪಿಸಬೇಕು. ಅರಣ್ಯದಲ್ಲಿ ವ್ಯಾಪಕವಾಗಿ ಹರಡುವ ಲಂಟಾನ ಕಳೆ ತೆಗೆಯಲು ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು’ ಎಂದು ಮುಖ್ಯಮಂತ್ರಿ ಹೇಳಿದರು.
ಎಂಟು ಅಂಶಗಳು ಯಾವುವು?
l ಮಾನವ– ವನ್ಯಜೀವಿ ಸಂಘರ್ಷದ ಜಾಗ ಗುರುತಿಸಿ, ಯಾವ ಸ್ವರೂಪದ ಸಂಘರ್ಷವೆಂದು ಪಟ್ಟಿ ಮಾಡಬೇಕು
l ಸಂಘರ್ಷದ ತೀವ್ರತೆಯ ಆಧಾರದಲ್ಲಿ ಅಧಿಕಾರಿ, ಸಿಬ್ಬಂದಿಗಳನ್ನು ನಿಯೋಜಿಸಬೇಕು
l ಅರಣ್ಯದ ಅಂಚಿನ ಗ್ರಾಮಗಳಲ್ಲಿ ಗಸ್ತು ಹೆಚ್ಚಳ, ರಿಜಿಸ್ಟರ್ ನಿರ್ವಹಣೆ
l ಮಾನವ ವನ್ಯ ಜೀವಿ ಸಂಘರ್ಷ ಇರುವ ಗ್ರಾಮದಲ್ಲಿ ಹಿರಿಯ ಅಧಿಕಾರಿಗಳು ನಿಯಮಿತವಾಗಿ ವಾಸ್ತವ್ಯ ಮಾಡಬೇಕು
l ಅರಣ್ಯದಂಚಿನ ಸ್ಥಳೀಯರನ್ನು ಗುರುತಿಸಿ ‘ಅರಣ್ಯ ಮಿತ್ರ’ ಎಂದು ಪರಿಗಣಿಸಿ ಗಸ್ತು, ವನ್ಯಜೀವಿ, ಸೆರೆ, ಕಾರ್ಯಾಚರಣೆಗೆ ಬಳಸಿಕೊಳ್ಳಬೇಕು
l ವನ್ಯಜೀವಿಗಳು ಸಂಚರಿಸುವ ಕಾರ್ಯತಂತ್ರ ಸ್ಥಳಗಳಲ್ಲಿ 24X7 ವಾಹನ ಮತ್ತು ಅರಣ್ಯ ಸಿಬ್ಬಂದಿ ಲಭ್ಯವಾಗುವಂತೆ ಮಾಡಬೇಕು
l ವನ್ಯಜೀವಿ ಸೆರೆ, ವನ್ಯಜೀವಿ ದಾಳಿ ಮಾಡಿದಾಗ ಏನು ಮಾಡಬೇಕೆಂಬ ಬಗ್ಗೆ ಮಾಹಿತಿ ನೀಡಲು ಅಣಕು ಪ್ರದರ್ಶನ ಏರ್ಪಡಿಸಬೇಕು
l ಜಿಲ್ಲಾ ಮಟ್ಟದಲ್ಲಿ ಸಮನ್ವಯ, ಸಹಯೋಗ ಸಮಿತಿ, ತಾಲ್ಲೂಕು ಮಟ್ಟದಲ್ಲಿ ಉಪಸಮಿತಿ ರಚಿಸಬೇಕು
ವನ್ಯಪ್ರಾಣಿ ಹಾವಳಿ 200 ಜೀವಹಾನಿ
- ಕರ್ನಾಟಕದಲ್ಲಿ 6,395 ಆನೆಗಳಿದ್ದು, ಆನೆಗಳ ಸಂಖ್ಯೆಯಲ್ಲಿ ರಾಜ್ಯವು ದೇಶದಲ್ಲಿ ಮೊದಲ ಸ್ಥಾನದಲ್ಲಿದೆ. 563 ಹುಲಿಗಳಿದ್ದು, ದೇಶದಲ್ಲಿ ಎರಡನೇ ಸ್ಥಾನದಲ್ಲಿದೆ. 1,879 ಚಿರತೆಗಳಿದ್ದು ದೇಶದಲ್ಲಿ ಮೂರನೇ ಸ್ಥಾನದಲ್ಲಿದೆ.
- ರಾಜ್ಯದಲ್ಲಿ ವನ್ಯಪ್ರಾಣಿಗಳ ಹಾವಳಿಯಿಂದ 2022-23ರಲ್ಲಿ 57, 2023-24ರಲ್ಲಿ 65, 2024-25ರಲ್ಲಿ 46, 2025-26ರಲ್ಲಿ 32 ಮಾನವ ಜೀವಹಾನಿ ಸಂಭವಿಸಿದೆ.
ಗಣಿಗಾರಿಕೆಗೆ ‘ಸುಪ್ರೀಂ’ ನಿಷೇಧ: ರಾಷ್ಟ್ರೀಯ ಉದ್ಯಾನಗಳ 1 ಕಿ.ಮೀ. ವ್ಯಾಪ್ತಿಯಲ್ಲಿ ನಿರ್ಬಂಧ
ಸಂದರ್ಭ: ರಾಷ್ಟ್ರೀಯ ಉದ್ಯಾನಗಳು ಮತ್ತು ವನ್ಯಜೀವಿ ಅಭಯಾರಣ್ಯಗಳ ಒಂದು ಕಿ.ಮೀ. ವ್ಯಾಪ್ತಿಯಲ್ಲಿ ಗಣಿಗಾರಿಕೆ ಚಟುವಟಿಕೆ ನಡೆಸುವುದನ್ನು ಸುಪ್ರೀಂ ಕೋರ್ಟ್ ನಿಷೇಧಿಸಿದೆ.
- ‘ರಾಷ್ಟ್ರೀಯ ಉದ್ಯಾನಗಳು ಹಾಗೂ ಅಭಯಾರಣ್ಯಗಳ ಒಳಗೆ ಮತ್ತು ಅಂತಹ ಸಂರಕ್ಷಿತ ಪ್ರದೇಶಗಳ ಗಡಿಯಿಂದ ಒಂದು ಕಿ.ಮೀ. ವ್ಯಾಪ್ತಿಯಲ್ಲಿ ಗಣಿಗಾರಿಕೆಯನ್ನು ಅನುಮತಿಸಬಾರದು ಎಂದು ನಾವು ನಿರ್ದೇಶಿಸುತ್ತೇವೆ’ ಎಂಬುದಾಗಿ ಮುಖ್ಯ ನ್ಯಾಯಮೂರ್ತಿ ಬಿ.ಆರ್.ಗವಾಯಿ ಮತ್ತು ನ್ಯಾಯಮೂರ್ತಿಗಳಾದ ಕೆ.ವಿನೋದ ಚಂದ್ರನ್ ಅವರ ಪೀಠ ಹೇಳಿದೆ.
- ‘ಸಂರಕ್ಷಿತ ಪ್ರದೇಶದ ಒಂದು ಕಿ.ಮೀ ವ್ಯಾಪ್ತಿಯೊಳಗೆ ಗಣಿಗಾರಿಕೆ ಚಟುವಟಿಕೆಗಳು ವನ್ಯಜೀವಿಗಳಿಗೆ ಅಪಾಯಕಾರಿ ಎಂಬುದನ್ನು ಈ ನ್ಯಾಯಾಲಯ ಮನಗಂಡಿದೆ.
- ಈ ಹಿಂದೆ ಗೋವಾ ಫೌಂಡೇಶನ್ ಪ್ರಕರಣದಲ್ಲಿ, ಗೋವಾ ರಾಜ್ಯಕ್ಕೆ ಸಂಬಂಧಿಸಿದಂತೆ ಇದೇ ರೀತಿಯ ನಿರ್ದೇಶನಗಳನ್ನು ನೀಡಲಾಗಿದೆ. ಇದೀಗ ಇಡೀ ದೇಶಕ್ಕೆ ಅನ್ವಯವಾಗುವಂತೆ ಅಂತಹ ನಿರ್ದೇಶನ ನೀಡುತ್ತಿದ್ದೇವೆ’ ಎಂದಿತು.
- ಜಾರ್ಖಂಡ್ನ ಸಾರಂಡಾ ಅಭಯಾರಣ್ಯ ಮತ್ತು ಸಾಸಂಗದಾಬುರು ಅರಣ್ಯ ಪ್ರದೇಶ ಗಳನ್ನು ಮೀಸಲು ಅರಣ್ಯ ಪ್ರದೇಶವಾಗಿ ಘೋಷಿಸುವ ಅಧಿಸೂಚನೆಗೆ ಸಂಬಂಧಿಸಿದ ಅರ್ಜಿಗಳ ಕುರಿತು ಸುಪ್ರೀಂ ಕೋರ್ಟ್ ವಿಚಾರಣೆ ನಡೆಸುತ್ತಿದೆ. ಈ ಪ್ರದೇಶಗಳನ್ನು ವನ್ಯಜೀವಿ ಅಭಯಾರಣ್ಯವೆಂದು ಘೋಷಿಸುವಂತೆ ಸುಪ್ರೀಂ ಕೋರ್ಟ್, ಜಾರ್ಖಂಡ್ ಸರ್ಕಾರಕ್ಕೆ ನಿರ್ದೇಶನ ನೀಡಿದೆ.
- ಅರಣ್ಯ ಹಕ್ಕುಗಳ ಕಾಯ್ದೆಯಡಿ ಈ ಪ್ರದೇಶದ ಬುಡಕಟ್ಟು ಜನರು ಮತ್ತು ಅರಣ್ಯವಾಸಿಗಳ ಹಕ್ಕುಗಳನ್ನು ರಕ್ಷಿಸಬೇಕು ಎಂದು ಸ್ಪಷ್ಟಪಡಿಸಿದ ನ್ಯಾಯಾಲಯ, ಈ ಬಗ್ಗೆ ವ್ಯಾಪಕ ಪ್ರಚಾರ ನೀಡುವಂತೆ ಜಾರ್ಖಂಡ್ ಸರ್ಕಾರಕ್ಕೆ ಸೂಚಿಸಿದೆ.
‘ಬಡ್ಡಿ ದರ ಕಡಿಮೆ ಮಟ್ಟದಲ್ಲಿರಲಿ’
ಸಂದರ್ಭ: ಹಣಕಾಸಿನ ಒಳಗೊಳ್ಳುವಿಕೆಯನ್ನು ಹೆಚ್ಚಿಸಲು ಕಿರು ಹಣಕಾಸು ಸಂಸ್ಥೆಗಳು ತಮ್ಮ ಬಡ್ಡಿ ದರವನ್ನು ಕೈಗೆಟಕುವ ಮಟ್ಟದಲ್ಲಿ ಇರಿಸಬೇಕು ಎಂದು ಕೇಂದ್ರ ಹಣಕಾಸು ಸೇವೆಗಳ ಇಲಾಖೆಯ ಕಾರ್ಯದರ್ಶಿ ಹೇಳಿದ್ದಾರೆ.
- ‘ಕೆಲವು ಕಿರು ಹಣಕಾಸು ಸಂಸ್ಥೆಗಳು ಅಸಹನೀಯ ಮಟ್ಟದಲ್ಲಿ ಬಡ್ಡಿ ದರವನ್ನು ನಿಗದಿ ಮಾಡಿರುವುದನ್ನು ನಾನು ನೋಡಿದ್ದೇನೆ. ಇದಕ್ಕೆ ಕಾರಣ ಆ ಕಿರು ಹಣಕಾಸು ಸಂಸ್ಥೆಗಳಲ್ಲಿನ ಅಸಾಮರ್ಥ್ಯ’ ಅವರು ಕಾರ್ಯಕ್ರಮವೊಂದರಲ್ಲಿ ಹೇಳಿದ್ದಾರೆ.
- ಕಿರು ಹಣಕಾಸು ಸಂಸ್ಥೆಗಳು ವೆಚ್ಚಗಳಲ್ಲಿ ದಕ್ಷತೆಯನ್ನು, ಹೆಚ್ಚಿನ ಉತ್ಪಾದಕತೆಯನ್ನು ಸಾಧಿಸಲು ವಿಫಲವಾದ ಕಾರಣಕ್ಕೆ ಹೆಚ್ಚಿನ ಬಡ್ಡಿ ದರ ವಸೂಲಿ ಮಾಡುತ್ತಿರಬಹುದು ಎಂದು ಅವರು ಹೇಳಿದ್ದಾರೆ.
- ಸಂಸ್ಥೆಗಳು ವೆಚ್ಚಗಳಲ್ಲಿ ದಕ್ಷತೆಯನ್ನು ಸಾಧಿಸಬೇಕು, ಹೆಚ್ಚಿನ ಉತ್ಪಾದಕತೆ ಸಾಧಿಸಬೇಕು. ಅದರ ಮೂಲಕ ಸಾಲಗಾರರಿಗೆ ಕಡಿಮೆ ಬಡ್ಡಿ ದರಕ್ಕೆ ಸಾಲ ನೀಡುವಂತೆ ಆಗಬೇಕು ಎಂದು ಕಿವಿಮಾತು ಹೇಳಿದ್ದಾರೆ.
- ಹಣದ ಅಗತ್ಯ ತೀವ್ರವಾಗಿ ಇರುವವರು ಹೆಚ್ಚಿನ ಬಡ್ಡಿ ದರಕ್ಕೆ ಸಾಲ ಪಡೆಯಬಹುದು. ಆದರೆ ಅವರಿಗೆ ಆ ಸಾಲವನ್ನು ಮರುಪಾವತಿಸಲು ಆಗುವುದಿಲ್ಲ. ಇದರ ಪರಿಣಾಮವು ಹಣಕಾಸು ವ್ಯವಸ್ಥೆಯ ಮೇಲೆ ಆಗುತ್ತದೆ ಎಂದು ಅವರು ತಿಳಿಸಿದ್ದಾರೆ.
- ಕಿರು ಹಣಕಾಸು ಸಂಸ್ಥೆಗಳು ದೇಶದಲ್ಲಿ ಹಣಕಾಸಿನ ಒಳಗೊಳ್ಳುವಿಕೆಯನ್ನು ಸಾಧಿಸಲು ಬಹಳ ಮುಖ್ಯ. ಈ ಸಂಸ್ಥೆಗಳು ಮನೆಬಾಗಿಲಿಗೆ ತೆರಳಿ ಸಾಲ ನೀಡುವ ಕಾರಣದಿಂದಾಗಿ ಇವು ಮಹಿಳೆಯರ ಸಬಲೀಕರಣಕ್ಕೂ ಬಹಳ ಅಗತ್ಯ ಎಂದು ಅವರು ಹೇಳಿದ್ದಾರೆ.
- ‘ಹಣಕಾಸಿನ ಒಳಗೊಳ್ಳುವಿಕೆಯ ವ್ಯಾಪ್ತಿಗೆ ನಾವು ಇನ್ನೂ ಅಂದಾಜು 35 ಕೋಟಿಯಷ್ಟು ಯುವಕರನ್ನು ತರಬೇಕಿದೆ. ಸರ್ಕಾರ ರೂಪಿಸಿರುವ ಯೋಜನೆಗಳು ಹಲವಿದ್ದರೂ, ದೇಶದ ಜನಸಂಖ್ಯೆಯಲ್ಲಿ ದೊಡ್ಡ ವರ್ಗವೊಂದು ಹಣಕಾಸಿನ ಒಳಗೊಳ್ಳುವಿಕೆಯ ತೆಕ್ಕೆಗೆ ಬಂದಿಲ್ಲ. ಈ ಬಗ್ಗೆ ಕಿರು ಹಣಕಾಸು ಸಂಸ್ಥೆಗಳು ಆದ್ಯತೆ ನೀಡಬೇಕು’ ಎಂದು ಅವರು ಕರೆ ನೀಡಿದ್ದಾರೆ.
ಗ್ರಾಮೀಣ ಪ್ರದೇಶದವರಿಗೆ ಪ್ರತ್ಯೇಕ ಕ್ರೆಡಿಟ್ ಅಂಕ: ನಬಾರ್ಡ್
ಸಂದರ್ಭ: ನಬಾರ್ಡ್ ಅಧ್ಯಕ್ಷ ಶಾಜಿ ಕೆ.ವಿ., ‘ನಾವು ಸ್ವಸಹಾಯ ಸಂಘಗಳ ವ್ಯವಸ್ಥೆಯ ಡಿಜಿಟಲೀಕರಣದಲ್ಲಿ ತೊಡಗಿದ್ದೇವೆ. ಗ್ರಾಮೀಣ ಪ್ರದೇಶದವರಿಗಾಗಿ ಕ್ರೆಡಿಟ್ ಅಂಕ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸುತ್ತಿದ್ದೇವೆ’ ಎಂದು ಹೇಳಿದ್ದಾರೆ.
- ‘ಕಡುಬಡವರ ಜೊತೆ ಕೆಲಸ ಮಾಡುತ್ತಿರುವ ಕೆಲವು ಕಿರು ಹಣಕಾಸು ಸಂಸ್ಥೆಗಳ ಜೊತೆ ಸೇರಿ ನಾವು ಗ್ರಾಮೀಣ ಪ್ರದೇಶದವರಿಗೆ ನೀಡುವ ಕ್ರೆಡಿಟ್ ಅಂಕದ ವಿಚಾರವಾಗಿ ಒಂದಿಷ್ಟು ಪ್ರಾಯೋಗಿಕ ಕೆಲಸ ಮಾಡುತ್ತಿದ್ದೇವೆ’ ಎಂದರು.
- ಕೇಂದ್ರದ 2025–26ನೇ ಸಾಲಿನ ಬಜೆಟ್ನಲ್ಲಿ ‘ಗ್ರಾಮೀಣ ಕ್ರೆಡಿಟ್ ಅಂಕ’ದ ಬಗ್ಗೆ ಪ್ರಸ್ತಾವ ಇದೆ. ಗ್ರಾಮೀಣ ಪ್ರದೇಶಗಳ ಜನರಿಗಾಗಿ ಹಾಗೂ ಸ್ವಸಹಾಯ ಸಂಘಗಳ ಸದಸ್ಯರಿಗಾಗಿ ಕ್ರೆಡಿಟ್ ಅಂಕಗಳ ಚೌಕಟ್ಟೊಂದನ್ನು ಸರ್ಕಾರಿ ಸ್ವಾಮ್ಯದ ಬ್ಯಾಂಕ್ಗಳ ಜೊತೆ ಸೇರಿ ಅಭಿವೃದ್ಧಿಪಡಿಸುವ ಘೋಷಣೆ ಇದು.
- ಈಗ ಚಾಲ್ತಿಯಲ್ಲಿರುವ ಕ್ರೆಡಿಟ್ ಅಂಕ ನೀಡುವ ವ್ಯವಸ್ಥೆಯು ಎಲ್ಲರಿಗೂ ಒಂದೇ ಬಗೆಯ ನಿಯಮ ಅನ್ವಯ ಮಾಡುತ್ತದೆ, ಅದು ಗ್ರಾಮೀಣ ಪ್ರದೇಶದವರ ಅಗತ್ಯಗಳನ್ನು ಗಮನದಲ್ಲಿ ಇಟ್ಟುಕೊಂಡಿಲ್ಲ.
- ಸ್ವಸಹಾಯ ಸಂಘಗಳ ಸದಸ್ಯರು ಹಾಗೂ ಗ್ರಾಮೀಣ ಪ್ರದೇಶದ ಜನರು ಸಾಲಕ್ಕೆ ಅರ್ಜಿ ಸಲ್ಲಿಸಿದಾಗ, ಅದರ ಬಗ್ಗೆ ಸೂಕ್ತವಾದ ತೀರ್ಮಾನ ತೆಗೆದುಕೊಳ್ಳಲು ಸಹಾಯ ಆಗುವಂತೆ ಗ್ರಾಮೀಣ ಕ್ರೆಡಿಟ್ ಅಂಕ ವ್ಯವಸ್ಥೆ ಯನ್ನು ರೂಪಿಸಲಾಗುತ್ತದೆ. ಆಗ ಸ್ವಸಹಾಯ ಸಂಘಗಳ ಸದಸ್ಯರಿಗೆ, ಗ್ರಾಮೀಣ ಪ್ರದೇಶದ ಜನರಿಗೆ, ರೈತರಿಗೆ, ದುರ್ಬಲ ವರ್ಗಗಳ ಜನರಿಗೆ ಹಣಕಾಸು ಸಂಸ್ಥೆಗಳಿಂದ ಸಾಲ ಸಿಗುವ ಪ್ರಕ್ರಿಯೆಯಲ್ಲಿ ಸುಧಾರಣೆ ಸಾಧ್ಯವಾಗುತ್ತದೆ ಎಂದು ನಿರೀಕ್ಷಿಸಲಾಗಿದೆ.
‘ಸಂಪುಟದ ನಿರ್ಧಾರದಿಂದ ರಫ್ತುದಾರರಿಗೆ ಅನುಕೂಲ’
ಸಂದರ್ಭ: ದೇಶದ ರಫ್ತು ವಲಯಕ್ಕೆ ಉತ್ತೇಜನ ನೀಡಲು ಕೇಂದ್ರ ಸರ್ಕಾರ ₹45 ಸಾವಿರ ಕೋಟಿ ವೆಚ್ಚದ ಎರಡು ಯೋಜನೆಗಳಿಗೆ ಅನುಮೋದನೆ ನೀಡಿರುವುದರಿಂದ ದೇಶದ ರಫ್ತು ವಲಯ ಸದೃಢಗೊಳ್ಳಲಿದೆ ಮತ್ತು ಜಾಗತಿಕ ಮಾರುಕಟ್ಟೆಯಲ್ಲಿ ದೇಶದ ರಫ್ತು ವಲಯದ ಸ್ಪರ್ಧಾತ್ಮಕತೆ ಹೆಚ್ಚಲಿದೆ ಎಂದು ರಫ್ತುದಾರರು ಹೇಳಿದ್ದಾರೆ.
- ರಫ್ತು ಉತ್ತೇಜನಾ ಮಿಷನ್ಗೆ ₹25,060 ಕೋಟಿ ಮತ್ತು ಸಾಲ ಖಾತರಿ ಯೋಜನೆಗೆ ₹20 ಸಾವಿರ ಕೋಟಿ ಮೊತ್ತ ವಿನಿಯೋಗಿಸಲು ಕೇಂದ್ರ ಸಚಿವ ಸಂಪುಟವು ಒಪ್ಪಿದೆ. ಈ ಯೋಜನೆಗಳಿಂದ ಉದ್ಯಮಗಳಿಗೆ ಸಾಲವು ಕೈಗೆಟಕುವಂತಾಗಲಿದೆ ಎಂದು ರಫ್ತುದಾರರು ತಿಳಿಸಿದ್ದಾರೆ.
- ‘ಸರ್ಕಾರದ ಈ ಕ್ರಮವು ಅತಿಸಣ್ಣ, ಸಣ್ಣ ಮತ್ತು ಮಧ್ಯಮ ಪ್ರಮಾಣದ ಉದ್ದಿಮೆಗಳು (ಎಂಎಸ್ಎಂಇ), ಮೊದಲ ಬಾರಿಗೆ ರಫ್ತು ಮಾಡುವವರ ಕೈ ಬಲಪಡಿಸುವ ಉದ್ದೇಶ ಹೊಂದಿದೆ’ ಎಂದು ಭಾರತೀಯ ಕೈಗಾರಿಕಾ ಒಕ್ಕೂಟದ (ಸಿಐಐ) ರಫ್ತು ವಿಭಾಗದ ರಾಷ್ಟ್ರೀಯ ಸಮಿತಿಯ ಅಧ್ಯಕ್ಷ ಹೇಳಿದ್ದಾರೆ.
- ‘ಕೇಂದ್ರ ಸರ್ಕಾರ ಈ ಯೋಜನೆಗಳಿಗೆ ಒಪ್ಪಿಗೆ ನೀಡಿರುವುದರಿಂದ ಉದ್ಯಮಗಳಿಗೆ ಹಣಕಾಸಿನ ನೆರವು ದೊರೆಯಲಿದೆ. ದೇಶದ ರಫ್ತು ವ್ಯವಸ್ಥೆ ಸದೃಢಗೊಳ್ಳಲಿದ್ದು, ಅಗಾಧ ಪ್ರಮಾಣದಲ್ಲಿ ಉದ್ಯೋಗ ಸೃಷ್ಟಿ ಆಗಲಿದೆ’ ಎಂದು ಸಿದ್ಧ ಉಡುಪು ರಫ್ತು ಉತ್ತೇಜನ ಮಂಡಳಿಯ (ಎಇಪಿಸಿ) ಉಪಾಧ್ಯಕ್ಷ ಹೇಳಿದ್ದಾರೆ.
ಜವಳಿ ಉತ್ಪನ್ನಗಳ ರಫ್ತು ಏರಿಕೆ
ಸಂದರ್ಭ: ಪ್ರಸಕ್ತ ಆರ್ಥಿಕ ವರ್ಷದ ಏಪ್ರಿಲ್ನಿಂದ ಸೆಪ್ಟೆಂಬರ್ವರೆಗೆ 111 ದೇಶಗಳಿಗೆ ಭಾರತದಿಂದ ಆಗಿರುವ ಜವಳಿ ಉತ್ಪನ್ನಗಳ ರಫ್ತು ಶೇ 10ರಷ್ಟು ಏರಿಕೆ ಆಗಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.
- ಕಳೆದ ಆರ್ಥಿಕ ವರ್ಷದ ಮೊದಲ ಆರು ತಿಂಗಳಿನಲ್ಲಿ ದೇಶದ ಜವಳಿ ಉತ್ಪನ್ನಗಳ ರಫ್ತು ಹಣಕಾಸಿನ ಮೌಲ್ಯದಲ್ಲಿ ₹68,453 ಕೋಟಿಯಷ್ಟಾಗಿತ್ತು. ಈ ಬಾರಿ ಅದು ₹75,291 ಕೋಟಿಯಷ್ಟಾಗಿದೆ. ಜಾಗತಿಕ ಮಟ್ಟದಲ್ಲಿ ಉಂಟಾಗಿದ್ದ ಅನಿಶ್ಚಿತತೆ, ಸುಂಕ ಸಂಬಂಧಿತ ಸವಾಲುಗಳ ನಡುವೆಯೂ ದೇಶದ ಜವಳಿ ರಫ್ತು ಮೌಲ್ಯ ಹೆಚ್ಚಳವಾಗಿದೆ ಎಂದು ತಿಳಿಸಿದೆ.
- ಒಟ್ಟಾರೆ ದೇಶದ ಜವಳಿ ಉತ್ಪನ್ನಗಳು, ಸಿದ್ಧ ಉಡುಪುಗಳ ಜಾಗತಿಕ ರಫ್ತು ಪ್ರಮಾಣ ಕಳೆದ ಆರ್ಥಿಕ ವರ್ಷದ ಇದೇ ಅವಧಿಗೆ ಹೋಲಿಸಿದರೆ ಈ ಬಾರಿ ಶೇ 0.1ರಷ್ಟು ಏರಿಕೆಯಾಗಿದೆ ಎಂದು ಹೇಳಿದೆ.
- ಹಾಂಗ್ಕಾಂಗ್ಗೆ ದೇಶದ ರಫ್ತು ಶೇ 69ರಷ್ಟು ಹೆಚ್ಚಳವಾಗಿದೆ. ಈಜಿಪ್ಟ್, ಸೌದಿ ಅರೇಬಿಯಾ, ಯುಎಇ, ಬ್ರಿಟನ್, ಜಪಾನ್, ಜರ್ಮನಿ, ಸ್ಪೇನ್ ಮತ್ತು ಫ್ರಾನ್ಸ್ಗೆ ರಫ್ತು ಸಕಾರಾತ್ಮಕ ಬೆಳವಣಿಗೆ ದಾಖಲಿಸಿದೆ. ಜವಳಿ ಉತ್ಪನ್ನಗಳ ಒಟ್ಟು ರಫ್ತು ಶೇ 3.42ರಷ್ಟು ಮತ್ತು ಸೆಣಬು ಶೇ 5.56ರಷ್ಟು ಏರಿಕೆ ಆಗಿದೆ ಎಂದು ತಿಳಿಸಿದೆ.
ಓಪನ್ಎಐ-ಫೋನ್ಪೇ ಪಾಲುದಾರಿಕೆ
ಸಂದರ್ಭ: ದೇಶದ ಹಣಕಾಸು ತಂತ್ರಜ್ಞಾನ ಕಂಪನಿ ‘ಫೋನ್ಪೇ’ ತನ್ನ ಬಳಕೆದಾರರಿಗೆ ಚಾಟ್ಜಿಪಿಟಿ ಸೌಲಭ್ಯಗಳನ್ನು ಕಲ್ಪಿಸಲು ಅಮೆರಿಕದ ಕೃತಕ ಬುದ್ಧಿಮತ್ತೆ ತಂತ್ರಜ್ಞಾನ (ಎ.ಐ) ಕಂಪನಿ ಓಪನ್ಎಐ ಜೊತೆ ಪಾಲುದಾರಿಕೆ ಮಾಡಿಕೊಂಡಿದೆ.
- ಫೋನ್ಪೇ ಗ್ರಾಹಕರ ಆ್ಯಪ್ ಮತ್ತು ಫೋನ್ಪೇ ಬಿಸಿನೆಸ್ ಆ್ಯಪ್ ಮೂಲಕವೇ ‘ಚಾಟ್ಜಿಪಿಟಿ’ಯ ಆಧುನಿಕ ಎ.ಐ ಸೌಲಭ್ಯವನ್ನು ಬಳಕೆದಾರರು ಪಡೆದುಕೊಳ್ಳ ಬಹುದು ಎಂದು ಕಂಪನಿ ತಿಳಿಸಿದೆ.
- ಇದು ಬಳಕೆದಾರರಿಗೆ ಪ್ರವಾಸದ ಯೋಜನೆ ರೂಪಿಸುವುದರಿಂದ ಆರಂಭಿಸಿ ಶಾಪಿಂಗ್ ನಡೆಸುವುದರವರೆಗಿನ ದಿನನಿತ್ಯದ ಅಗತ್ಯಗಳಿಗೆ ಸಂಬಂಧಿಸಿದ ಎಲ್ಲ ಮಾಹಿತಿಯನ್ನು ಒದಗಿಸುತ್ತದೆ ಎಂದು ತಿಳಿಸಿದೆ.
ಸೆಸ್ ಪ್ರಸ್ತಾವ ಒಪ್ಪದ ಆರ್ಥಿಕ ಇಲಾಖೆ
ಸಂದರ್ಭ: ಅಸಂಘಟಿತ ಕಾರ್ಮಿಕರ ಕಲ್ಯಾಣಕ್ಕಾಗಿ ಪ್ರತಿ ಲೀಟರ್ ಪೆಟ್ರೋಲ್, ಡೀಸೆಲ್ ಮೇಲೆ ₹1 ಸೆಸ್ ವಿಧಿಸುವ ಕಾರ್ಮಿಕ ಇಲಾಖೆಯು ಆರ್ಥಿಕ ಇಲಾಖೆಗೆ ಪ್ರಸ್ತಾವ ಸಲ್ಲಿಸಿದೆ.
- ಆದರೆ, ಈ ಪ್ರಸ್ತಾವ ಅನುಷ್ಠಾನಕ್ಕೆ ಸೂಕ್ತವಾಗಿಲ್ಲ ಎಂದು ಹೇಳಿರುವ ಆರ್ಥಿಕ ಇಲಾಖೆ, ಪ್ರಸ್ತಾವವನ್ನು ತಿರಸ್ಕರಿಸಿದೆ.
- ‘ಅಸಂಘಟಿತ ವಲಯದಲ್ಲಿ ಸುಮಾರು 1.30 ಕೋಟಿ ಕಾರ್ಮಿಕರು ಇದ್ದಾರೆ. ಇಂತಹ ಕಾರ್ಮಿಕರ ಕಲ್ಯಾಣ ಹಾಗೂ ಅವರಿಗೆ ಉಚಿತ ಆರೋಗ್ಯ ಸೇವೆ ಒದಗಿಸಲು ದೊಡ್ಡ ಮೊತ್ತದ ಸಂಪನ್ಮೂಲದ ಅಗತ್ಯವಿದೆ. ಪೆಟ್ರೋಲ್, ಡೀಸೆಲ್ ಮತ್ತು ಎಥೆನಾಲ್ ಮೇಲೆ ಸೆಸ್ ವಿಧಿಸುವುದರಿಂದ ವಾರ್ಷಿಕ ಸುಮಾರು ₹2,120 ಕೋಟಿ ಸಂಗ್ರಹವಾಗುತ್ತದೆ. ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಯೋಜನೆಗಳಾದ ಆರೋಗ್ಯ ಸೌಲಭ್ಯ, ಅಪಘಾತ ಪರಿಹಾರ, ಮಕ್ಕಳ ಶಿಕ್ಷಣಕ್ಕೆ ನೆರವು ನೀಡಲು ಬಳಸಲಾಗುವುದು’ ಎಂದು ಮುಖ್ಯಮಂತ್ರಿಗೆ ಸಲ್ಲಿಸಿದ ಪ್ರಸ್ತಾವದಲ್ಲಿ ಕಾರ್ಮಿಕ ಸಚಿವ ಸಂತೋಷ್ ಲಾಡ್ ವಿವರಿಸಿದ್ದಾರೆ.
- ‘ಅಸಂಘಟಿತ ವಲಯಕ್ಕೆ ಪ್ರತ್ಯೇಕ ಸೆಸ್ ಸಂಗ್ರಹಿಸಿದರೆ ಆರೋಗ್ಯ ಸೌಲಭ್ಯಕ್ಕೆ ₹1,772 ಕೋಟಿ ವಿನಿಯೋಗಿಸಲಾಗು ವುದು. ಉಳಿದ ಹಣವನ್ನು 62 ಲಕ್ಷ ಕಾರ್ಮಿಕ ಕುಟುಂಬಗಳ ಕಲ್ಯಾಣ ಕಾರ್ಯಗಳಿಗೆ ಬಳಸಲಾಗುವುದು. ಮೃತ ಕಾರ್ಮಿಕರ ಅಂತ್ಯ ಸಂಸ್ಕಾರಕ್ಕೂ ಹಣ ನೀಡಲಾಗುವುದು’ ಎಂದು ಲಾಡ್ ಹೇಳಿದ್ದಾರೆ.
‘ಕೈಗಾರಿಕಾ ಕಾರಿಡಾರ್ ಅಭಿವೃದ್ಧಿ’
ಸಂದರ್ಭ: ಕರ್ನಾಟಕದ ಒಂಬತ್ತು ಜಿಲ್ಲೆಗಳನ್ನು ಒಳಗೊಂಡ ರಾಷ್ಟ್ರೀಯ ಕೈಗಾರಿಕಾ ಕಾರಿಡಾರ್ ಅಭಿವೃದ್ಧಿ ಯೋಜನೆ ಅನುಷ್ಠಾನಗೊಳಿಸಬೇಕೆಂದು ಕೋರಿ ಕೇಂದ್ರದ ಬೃಹತ್ ಕೈಗಾರಿಕೆ ಮತ್ತು ಉಕ್ಕು ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು ಕೇಂದ್ರದ ವಾಣಿಜ್ಯ ಮತ್ತು ಕೈಗಾರಿಕೆ ಸಚಿವ ಪೀಯೂಷ್ ಗೋಯಲ್ ಅವರೊಂದಿಗೆ ಚರ್ಚೆ ನಡೆಸಿದರು.
- ಮಂಡ್ಯ, ಮೈಸೂರು, ಚಾಮರಾಜನಗರ, ಕೋಲಾರ, ಹಾಸನ, ದಕ್ಷಿಣ ಕನ್ನಡ, ಹುಬ್ಬಳ್ಳಿ-ಧಾರವಾಡ, ರಾಯಚೂರು ಮತ್ತು ಬೀದರ್ ಜಿಲ್ಲೆಗಳನ್ನು ಒಳಗೊಂಡ ರಾಷ್ಟ್ರೀಯ ಕೈಗಾರಿಕಾ ಕಾರಿಡಾರ್ ಅಭಿವೃದ್ಧಿ ಯೋಜನೆ ಅನುಷ್ಠಾನ ಮಾಡಬೇಕೆಂದು ಕೋರಿದರು.
- ಪ್ರಾದೇಶಿಕ ಕೈಗಾರಿಕಾ ಬೆಳವಣಿಗೆ ಬಲಪಡಿಸಿ ಉತ್ತೇಜಿಸಲು, ಸಾಗಾಣಿಕೆಯ ಮೂಲಸೌಕರ್ಯ ಅಭಿವೃದ್ಧಿಪಡಿಸಲು ಹಾಗೂ ಕರ್ನಾಟಕದ ಉದ್ದಗಲಕ್ಕೂ ಬೃಹತ್ ಪ್ರಮಾಣದಲ್ಲಿ ಉದ್ಯೋಗಾವಕಾಶ ಸೃಷ್ಟಿಸಲು ಈ ಯೋಜನೆಯು ಬಹುದೊಡ್ಡ ಮಟ್ಟದಲ್ಲಿ ಕೊಡುಗೆ ನೀಡುತ್ತದೆ ಎಂಬ ಅಂಶವನ್ನು ಸಚಿವ ಗೋಯಲ್ ಅವರಿಗೆ ಮನವರಿಕೆ ಮಾಡಿಕೊಡಲಾಯಿತು. ನನ್ನ ಪ್ರಸ್ತಾವನೆಗೆ ಅವರು ಸಕಾರಾತ್ಮಕವಾಗಿ ಸ್ಪಂದಿಸಿದರು. ರಾಜ್ಯದ ಕೈಗಾರಿಕಾಭಿವೃದ್ಧಿಗೆ ಕೈಜೋಡಿಸುವುದಾಗಿ ಭರವಸೆ ನೀಡಿದರು ಎಂದು ಕುಮಾರಸ್ವಾಮಿ ಮಾಹಿತಿ ನೀಡಿದರು.
- ಈ ಯೋಜನೆ ಅನುಷ್ಠಾನಕ್ಕೆ ಬಂದರೆ ಸಾಗಾಣಿಕೆ ಸುಲಭ ವಾಗಿ ಕೈಗಾರಿಕಾಭಿವೃದ್ಧಿ ವೇಗಗತಿಯಲ್ಲಿ ಸಾಗುತ್ತದೆ. ಉದ್ದೇಶಿತ ಜಿಲ್ಲೆಗಳಲ್ಲಿ ಯೋಜನೆ ಬಂದರೆ ಇಡೀ ರಾಜ್ಯಕ್ಕೆ ಸಮಗ್ರವಾಗಿ ಅನುಕೂಲ ಆಗುತ್ತದೆ. ಮುಖ್ಯವಾಗಿ ಈ ಪ್ರದೇಶಗಳು ಸಾಮೂಹಿಕವಾಗಿ ದೊಡ್ಡ ಮಟ್ಟದಲ್ಲಿ ಕೈಗಾರಿಕಾ ಅಭಿವೃದ್ಧಿ ಕಾಣುವುದಲ್ಲದೆ, ಸಮತೋಲಿತ ಪ್ರಾದೇಶಿಕ ಬೆಳವಣಿಗೆಗೆ ಕಾಣಿಕೆ ನೀಡುತ್ತವೆ ಎಂದು ಕುಮಾರಸ್ವಾಮಿ ತಿಳಿಸಿದರು.
- ಭಾರತಕ್ಕೆ ಎಂಟು ಚೀತಾ ಹಸ್ತಾಂತರ
ಸಂದರ್ಭ: ಬೋಟ್ಸ್ವಾನಾ ಎಂಟು ಚೀತಾ ಗಳನ್ನು ಭಾರತಕ್ಕೆ ಹಸ್ತಾಂತರಿಸಲಾಯಿತು.
- ಬೋಟ್ಸ್ವಾನಾಕ್ಕೆ ಭೇಟಿ ನೀಡಿದ್ದ ಭಾರತದ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಈ ಚೀತಾಗಳನ್ನು ಅಲ್ಲಿನ ಅಧ್ಯಕ್ಷ ಡುಮಾ ಗಿಡೋನ್ ಬೋಕೊ ಹಸ್ತಾಂತರ ಮಾಡಿದರು.
- ಬೋಟ್ಸ್ವಾನಾಗೆ ಮುರ್ಮು ಅವರು ಮೂರು ದಿನಗಳ ಪ್ರವಾಸ ಕೈಗೊಂಡಿದ್ದರು. ಪ್ರವಾಸದ ಅಂತಿಮ ದಿನ ಮೊಕೊಲೋಡಿ ಮೀಸಲು ಅರಣ್ಯ ಪ್ರದೇಶದಲ್ಲಿ ಚೀತಾಗಳನ್ನು ಸಾಂಕೇತಿಕವಾಗಿ ಹಸ್ತಾಂತರಿಸಲಾಯಿತು.
- ಸಂರಕ್ಷಿತ ಅರಣ್ಯ ಪ್ರದೇಶವನ್ನು ಬೋಕೊ ಅವರ ಜೊತೆಗೂಡಿ ಮುರ್ಮು ಅವರು ಸಫಾರಿ ವಾಹನದಲ್ಲಿ ತೆರಳಿ ವೀಕ್ಷಿಸಿದರು. ಭಾರತ ಮತ್ತು ಬೋಟ್ಸ್ವಾನಾನ ವನ್ಯಜೀವಿ ಅಧಿಕಾರಿಗಳು ಹಸ್ತಾಂತರ ಪ್ರಕ್ರಿಯೆ ಬಗ್ಗೆ ವಿವರಿಸಿದರು.
- ಎಂಟು ಚೀತಾಗಳನ್ನು ಸದ್ಯ ಪ್ರತ್ಯೇಕವಾಗಿರಿಸಲಾಗಿದ್ದು, ಕೆಲವೇ ವಾರಗಳಲ್ಲಿ ಭಾರತಕ್ಕೆ ಸ್ಥಳಾಂತರಗೊಳ್ಳಲಿವೆ. ಎಂಟು ಚೀತಾಗಳಲ್ಲಿ ಮರಿಗಳೂ ಸೇರಿವೆ.
- ಅಮೆರಿಕನ್ನರಿಗೆ ತರಬೇತಿ ನೀಡಿ ವಾಪಸಾಗಬೇಕು: ಬೆಸೆಂಟ್
ಸಂದರ್ಭ: ‘ಕೌಶಲ ಹೊಂದಿರುವ ವಿದೇಶಿ ಉದ್ಯೋಗಿ ಗಳನ್ನು ಕರೆತರುವುದು ಹಾಗೂ ಅವರಿಂದ ಅಮೆರಿಕನ್ನರಿಗೆ ತರಬೇತಿ ಕೊಡಿಸುವುದು. ಆ ಬಳಿಕ ಅವರು ತಮ್ಮ ದೇಶಗಳಿಗೆ ಮರಳಬೇಕು. ಇದು ಎಚ್–1ಬಿ ವೀಸಾದ ಮುಖ್ಯ ಉದ್ದೇಶ’ ಎಂದು ಅಮೆರಿಕದ ಹಣಕಾಸು ಕಾರ್ಯದರ್ಶಿ ಸ್ಕಾಟ್ ಬೆಸೆಂಟ್ ಹೇಳಿದ್ದಾರೆ.
- ಫಾಕ್ಸ್ ನ್ಯೂಸ್ಗೆ ಸಂದರ್ಶನ ನೀಡಿರುವ ಅವರು, ‘ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಉದ್ದೇಶವೂ ಇದೇ ಆಗಿದೆ’ ಎನ್ನುವ ಮೂಲಕ ಎಚ್–1ಬಿ ವೀಸಾ ಯೋಜನೆಯನ್ನು ಸಮರ್ಥಿಸಿ ಕೊಂಡಿದ್ದಾರೆ. ‘ವಿದೇಶಗಳಿಂದ ಬರುವ ಉದ್ಯೋಗಿಗಳು ಮೂರು, ಐದು ಇಲ್ಲವೇ ಏಳು ವರ್ಷ ಇಲ್ಲಿ ಕೆಲಸ ಮಾಡಬೇಕು. ಈ ಅವಧಿಯಲ್ಲಿ ಅವರು ಅಮೆರಿಕನ್ ಉದ್ಯೋಗಿಗಳಿಗೆ ತರಬೇತಿ ನೀಡಿ ತಮ್ಮ ದೇಶಗಳಿಗೆ ಹಿಂತಿರುಗಬೇಕು. ನಂತರ, ಅಮೆರಿಕದ ನೌಕರರೇ ಎಲ್ಲ ಕೆಲಸಗಳನ್ನು ನಿರ್ವಹಣೆ ಮಾಡುವಂತಾಗಬೇಕು ಎಂಬುದು ಟ್ರಂಪ್ ಅವರ ಉದ್ದೇಶವಾಗಿದೆ’ ಎಂದು ಸ್ಕಾಟ್ ಹೇಳಿದ್ದಾರೆ.
- ‘ಕೆಲವು ಕೆಲಸಗಳನ್ನು ನಿರ್ವಹಿಸ ಬಲ್ಲಂತಹ ಪ್ರತಿಭಾವಂತರು ಅಮೆರಿಕದಲ್ಲಿ ಇಲ್ಲ’ ಎಂಬ ಟ್ರಂಪ್ ಅವರ ಹೇಳಿಕೆ ಕುರಿತು ಪ್ರಶ್ನಿಸಿದಾಗ, ‘ಕಳೆದ 20–30 ವರ್ಷಗಳವರೆಗೆ ಕೆಲ ನಿರ್ದಿಷ್ಟ ಕೆಲಸಗಳನ್ನು ಇತರ ದೇಶಗಳ ನುರಿತ ಕೆಲಸಗಾರರಿಂದಲೇ ಮಾಡಿಸಲಾಗಿದೆ. ಈಗ, ನೀವು ರಾತ್ರೋರಾತ್ರಿ ಹಡಗು ನಿರ್ಮಾಣ ಕಲಿಯಬೇಕು ಎಂದು ಸ್ಥಳೀಯ ಉದ್ಯೋಗಿಗಳಿಗೆ ಸೂಚನೆ ನೀಡಲು ಸಾಧ್ಯವೇ?’ ಎಂದು ಅವರು ಉತ್ತರಿಸಿದ್ದಾರೆ.
- ಕ್ರಿಸ್ಟಿ ಸಮರ್ಥನೆ: ‘ಅಮೆರಿಕವು ಎಚ್–1ಬಿ ವೀಸಾ ಕಾರ್ಯಕ್ರಮವನ್ನು ಮುಂದುವರಿಸಲಿದೆ. ಈ ವೀಸಾ ಸೌಲಭ್ಯ ಪಡೆದು ಇಲ್ಲಿ ಬಂದವರು ಭಯೋತ್ಪಾದಕರನ್ನು ಹಾಗೂ ಅಮೆರಿಕ ದ್ವೇಷಿಸುವವರನ್ನು ಬೆಂಬಲಿಗರಾಗಿರಬಾರದು’ ಎಂದು ಆಂತರಿಕ ಭದ್ರತಾ ಇಲಾಖೆ ಕಾರ್ಯದರ್ಶಿ ಕ್ರಿಸ್ಟಿ ನೋಯಮ್ ಹೇಳಿದ್ದಾರೆ.
- ಮಿಂಚಿದ ಜ್ಯೋತಿ: ಭಾರತಕ್ಕೆ 3 ಚಿನ್ನ
ಸಂದರ್ಭ: ಅನುಭವಿ ಸ್ಪರ್ಧಿ ಜ್ಯೋತಿ ಸುರೇಖಾ ವೆನ್ನಂ ಮುಂಚೂಣಿ ಯಲ್ಲಿದ್ದ ಭಾರತ ಕಾಂಪೌಂಡ್ ಆರ್ಚರಿ ತಂಡ ಏಷ್ಯನ್ ಚಾಂಪಿಯನ್ಷಿಪ್ ನಲ್ಲಿ ಅಮೋಘ ಪ್ರದರ್ಶನ ನೀಡಿ ಮೂರು ಚಿನ್ನ ಮತ್ತು ಎರಡು ಬೆಳ್ಳಿ ಪದಕಗಳನ್ನು ಬಾಚಿಕೊಂಡಿತು.

- 29 ವರ್ಷ ವಯಸ್ಸಿನ ಜ್ಯೋತಿ ಅವರು ಕಾಂಪೌಂಡ್ ವಿಭಾಗದಲ್ಲಿ ವೈಯಕ್ತಿಕ ಚಿನ್ನ ಗೆದ್ದರಲ್ಲದೇ, ತಂಡ ವಿಭಾಗದಲ್ಲೂ ಚಿನ್ನ ಗೆಲ್ಲಲು ನೆರವಾದರು.
- ದೀಪ್ಶಿಕಾ, ಪ್ರತೀಕಾ ಪ್ರದೀಪ್ ಅವರ ಜೊತೆಗೂಡಿದ ಜ್ಯೋತಿ ತಂಡ ವಿಭಾಗದ ಫೈನಲ್ನಲ್ಲಿ 236–234 ರಿಂದ ದಕ್ಷಿಣ ಕೊರಿಯಾವನ್ನು (ಪಾರ್ಕ್ ಯೆರಿನ್, ಒಹ್ ಯೂಹ್ಯುನ್, ಜುಂಗ್ಯೂನ್ ಪಾರ್ಕ್) ಸೋಲಿಸಲು ನೆರವಾದರು.
- ಭಾರತೀಯ ಬಿಲ್ಗಾರ್ತಿಯರ ವ್ಯವಹಾರವಾಗಿದ್ದ ವೈಯಕ್ತಿಕ ಫೈನಲ್ನಲ್ಲಿ ಜ್ಯೋತಿ, 17 ವರ್ಷ ವಯಸ್ಸಿನ ಪ್ರತೀಕಾ ಅವರಿಂದ ಕಠಿಣ ಸವಾಲು ಎದುರಿಸಿದರೂ ಅಂತಿಮವಾಗಿ 147–145ರಲ್ಲಿ ಗೆದ್ದರು.
- ಕಾಂಪೌಂಡ್ ಮಿಶ್ರ ವಿಭಾಗದ ಫೈನಲ್ನಲ್ಲಿ ಅಭಿಷೇಕ್ ವರ್ಮಾ– ದೀಪಿಕಾ ಜೋಡಿ 153–151 ರಿಂದ ಬಾಂಗ್ಲಾದೇಶದ ಜೋಡಿಯನ್ನು ಸೋಲಿಸಿ ಭಾರತ ಮತ್ತೊಂದು ಚಿನ್ನ ತನ್ನದಾಗಿಸಿಕೊಂಡಿತು.
- ಕಾಂಪೌಂಡ್ ತಂಡ ವಿಭಾಗದ ಫೈನಲ್ನಲ್ಲಿ ಭಾರತ 229–230ರಲ್ಲಿ ಕಜಾಕಸ್ತಾನ ತಂಡಕ್ಕೆ ಸೋತು ಬೆಳ್ಳಿ ಪದಕ ಗಳಿಸಿತು. ಅಭಿಷೇಕ್ ವರ್ಮಾ, ಸಾಹಿಲ್ ರಾಜೇಶ್ ಜಾಧವ್, ಪ್ರಥಮೇಶ ಬಾಲಚಂದ್ರ ಫುಗೆ ತಂಡದಲ್ಲಿದ್ದರು.
- ಸ್ನೂಕರ್: ಅನುಪಮಾಗೆ ಕಿರೀಟ
ಸಂದರ್ಭ: ಭಾರತದ ಅನುಪಮಾ ರಾಮಚಂದ್ರನ್ ಅವರು ಗುರುವಾರ ನಡೆದ ವಿಶ್ವ ಸ್ನೂಕರ್ ಫೈನಲ್ನಲ್ಲಿ ಹಾಂಗ್ಕಾಂಗ್ನ ಎನ್ಜಿ ಆನ್ ಯಿ ಅವರನ್ನು ಸೋಲಿಸಿ ಪ್ರಶಸ್ತಿ ಯನ್ನು ಮುಡಿಗೇರಿಸಿಕೊಂಡರು.

- ಚೆನ್ನೈನ 23 ವರ್ಷದ ಅನುಪಮಾ ಅವರು 3–2 (51-74, 65-41, 10-71, 78-20, 68-60) ಅಂತರದಿಂದ ಆನ್ ಯಿ ಅವರನ್ನು ಮಣಿಸಿ ಐಬಿಎಸ್ಎಫ್ ವಿಶ್ವ ಸ್ನೂಕರ್ ಕಿರೀಟವನ್ನು ಗೆದ್ದ ಭಾರತದ ಮೊದಲ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾದರು.
- ಕಳೆದ ವರ್ಷ ಏಷ್ಯನ್ ಸ್ನೂಕರ್ ಪ್ರಶಸ್ತಿಯನ್ನು ಗೆದ್ದಿದ್ದ ಅನುಪಮಾ ಇಲ್ಲಿ ಕೊನೆಯ ಹಂತದಲ್ಲಿ ಅದೃಷ್ಟಶಾಲಿ ಯಾಗಿ ಜಯ ಗಳಿಸಿದರು. ಮೂರು ಬಾರಿ ಚಾಂಪಿಯನ್ ಆನ್ ಯೀ ನಿರ್ಣಾಯಕ ಪಂದ್ಯದಲ್ಲಿ 60-61 ಅಂತರದಿಂದ ಎಡವಿದರು.
- ಸೆಮಿ ಫೈನಲ್ನಲ್ಲಿ ಅನುಪಮಾ 3–1ರಿಂದ ಸ್ವದೇಶದ ಕೀರ್ತನಾ ಪಾಂಡಿಯನ್ ಅವರನ್ನು ಮಣಿಸಿ ಪ್ರಶಸ್ತಿ ಸುತ್ತಿಗೆ ಮುನ್ನಡೆದಿದ್ದರು. ಆನ್ ಯಿ 3–0ಯಿಂದ ತಮ್ಮದೇ ದೇಶದ ಸೋ ಮನ್ ಯಾನ್ ಅವರನ್ನು ಸೋಲಿಸಿದ್ದರು.
ಪ್ರಚಲಿತ ವಿದ್ಯಮಾನಗಳು: 13ನೇ ನವೆಂಬರ್ 2025
- ‘ರಾಜ್ಯದಲ್ಲಿ ಹೂಡಿಕೆಗೆ ಸಿಂಗಪುರ ಉತ್ಸುಕ’
ಸಂದರ್ಭ: ಬೆಂಗಳೂರಿನಲ್ಲಿ ವ್ಯಾಪಾರ ವಹಿವಾಟು ನಡೆಸಲು ಸಿಂಗಪುರ ಹೆಚ್ಚು ಉತ್ಸುಕವಾಗಿದೆ. ಆ ದೇಶದ ಜತೆ ತಂತ್ರಜ್ಞಾನ ಹಂಚಿಕೊಳ್ಳುವ ಮತ್ತು ಕೈಗಾರಿಕಾ ಪಾರ್ಕ್ ಸ್ಥಾಪಿಸುವ ಕುರಿತು ಸಿಂಗಪುರದ ವಿದೇಶಾಂಗ ಸಚಿವರ ಜತೆ ಚರ್ಚೆ ನಡೆಸಲಾಗಿದೆ.
- ಸಿಂಗಪುರ ವಿದೇಶಾಂಗ, ವಾಣಿಜ್ಯ ಮತ್ತು ಕೈಗಾರಿಕಾ ಸಚಿವೆ ಗಾನ್ ಶಿಯೋ ಹುಯಂಗ್ ಅವರ ನೇತೃತ್ವದ ನಿಯೋಗದ ಜತೆ ಚರ್ಚೆ.
- ಹಲವು ದೇಶಗಳ ಜನ ಬೆಂಗಳೂರಿನಲ್ಲಿ ಉದ್ಯೋಗ ಮಾಡುತ್ತಿದ್ದು, ಹೀಗಾಗಿ ಸಿಂಗಪುರ ಇಲ್ಲಿ ಬಂಡವಾಳ ಹೂಡಿಕೆಗೆ ಮುಂದಾಗಿದೆ ಎಂದರು.
‘2026ರಲ್ಲಿ ಸಿಂಗಪುರಕ್ಕೆ’
- ‘ಭಾರತದಲ್ಲಿ ಅತ್ಯಧಿಕ ವಿದೇಶಿ ನೇರ ಹೂಡಿಕೆ ಮಾಡುತ್ತಿ ರುವ ಸಿಂಗಪುರ ಜತೆ ಕೈಗಾರಿಕಾ ಮತ್ತು ವಾಣಿಜ್ಯ ಸಹಭಾಗಿತ್ವ ಬೆಳೆಸಿಕೊಳ್ಳಲು ರಾಜ್ಯದ ಪಾಲಿಗೆ ಒಳ್ಳೆಯ ಅವಕಾಶ. ಇದನ್ನು ಸದ್ಭಳಕೆ ಮಾಡಿಕೊಳ್ಳುವ ಉದ್ದೇಶದಿಂದ 2026ರಲ್ಲಿ ಸಿಂಗಪುರಕ್ಕೆ ಭೇಟಿ ನೀಡಲಾಗುವುದು’ ಎಂದು ಕೈಗಾರಿಕಾ ಸಚಿವ.
- ಸಿಂಗಪುರ ಭೇಟಿಗೂ ಮುನ್ನ ದ್ವಿಪಕ್ಷೀಯ ಕೈಗಾರಿಕಾ ಬಾಂಧವ್ಯ ವರ್ಧನೆ ಕುರಿತು ಅಧಿಕಾರಿಗಳ ಮಟ್ಟದಲ್ಲಿ ವಿಚಾರ ವಿನಿಮಯ ನಡೆಸಲಾಗುವುದು. ಮಾಹಿತಿ ತಂತ್ರಜ್ಞಾನ, ಸೆಮಿಕಂಡಕ್ಟರ್, ಫಿನ್-ಟೆಕ್, ಚಿಪ್ ವಿನ್ಯಾಸ, ಔಷಧ ತಯಾರಿಕೆ ಮುಂತಾದ ಕ್ಷೇತ್ರಗಳಲ್ಲಿ ಹೂಡಿಕೆಗೆ ಅತ್ಯುತ್ತಮ ಅವಕಾಶಗಳಿವೆ ಎಂದರು.
‘ಹೂಡಿಕೆ: ಅಮೆರಿಕ ಕಂಪನಿಗಳ ಆಸಕ್ತಿ’
- ‘ಅಮೆರಿಕದ ಉತಾ ಪ್ರಾಂತ್ಯದ ವೈಮಾಂತರಿಕ್ಷ ಕ್ಷೇತ್ರದ ಉದ್ಯಮಗಳು ರಾಜ್ಯದಲ್ಲಿ ಹೂಡಿಕೆ ಮಾಡಲು ಆಸಕ್ತಿ ತೋರಿಸಿವೆ, ಬೃಹತ್ ಕೈಗಾರಿಕಾ ಸಚಿವ.
- ‘ತಯಾರಿಕಾ, ಜೀವವಿಜ್ಞಾನ, ರೋಗನಿಧಾನ, ಶಿಕ್ಷಣ ಮತ್ತು ವಿದ್ಯುತ್ ಚಾಲಿತ ಸಾರ್ವಜನಿಕ ಸಾರಿಗೆ ಹಾಗೂ ವಾಹನ ಕ್ಷೇತ್ರದ ಕಂಪನಿಗಳು ಕರ್ನಾಟಕದಲ್ಲಿ ಹೂಡಿಕೆ ಮಾಡಲು ಆಸಕ್ತಿ ಹೊಂದಿವೆ.
- ‘ಇನ್ಫೊಸಿಸ್ ಪ್ರಶಸ್ತಿ’ ಪ್ರಕಟ

- ವರ್ಷಕ್ಕೆ 12 ಮುಟ್ಟಿನ ರಜೆ: ಆದೇಶ
ಸಂದರ್ಭ: ಉದ್ಯೋಗಸ್ಥ ಮಹಿಳೆಯರಿಗೆ ತಿಂಗಳಿಗೆ ಒಂದರಂತೆ ವರ್ಷಕ್ಕೆ 12 ಮುಟ್ಟಿನ ರಜೆಯನ್ನು (ವೇತನ ಸಹಿತ) ನೀಡುವ ಕುರಿತು ಕಾರ್ಮಿಕ ಇಲಾಖೆ ಆದೇಶ ಹೊರಡಿಸಿದೆ.
- ಕರ್ನಾಟಕ ಅಂಗಡಿ ಮತ್ತು ವಾಣಿಜ್ಯ ಸಂಸ್ಥೆಗಳ ಕಾಯ್ದೆ, ತೋಟ ಕಾರ್ಮಿಕರ ಕಾಯ್ದೆ, ಬೀಡಿ ಮತ್ತು ಸಿಗಾರ್ ಕಾರ್ಮಿಕರ ಕಾಯ್ದೆ, ಮೋಟಾರು ಸಾರಿಗೆ ಕಾಯ್ದೆ ಅಡಿಯಲ್ಲಿ ನೋಂದಣಿ ಆಗಿರುವ ಕೈಗಾರಿಕೆಗಳು ಮತ್ತು ಸಂಸ್ಥೆಗಳೂ ಸೇರಿದಂತೆ ಎಲ್ಲ ವಲಯಗಳಲ್ಲಿ ಕೆಲಸ ಮಾಡುತ್ತಿರುವವರಿಗೆ ಅನ್ವಯವಾಗಲಿದೆ.
- 18ರಿಂದ 52ರ ವಯೋಮಾನದ ಎಲ್ಲ ಕಾಯಂ, ಗುತ್ತಿಗೆ ಹಾಗೂ ಹೊರಗುತ್ತಿಗೆ ನೌಕರರಿಗೆ ಈ ಸೌಲಭ್ಯ ನೀಡಬೇಕು ಎಂದು ಎಲ್ಲ ಉದ್ಯೋಗದಾತರಿಗೂ ಆದೇಶದಲ್ಲಿ ಸೂಚಿಸಿದೆ.
ಷರತ್ತುಗಳು:
- ಆಯಾ ತಿಂಗಳ ರಜೆಯನ್ನು ಆಯಾ ತಿಂಗಳಲ್ಲೇ ಬಳಸಿಕೊಳ್ಳಬೇಕು
- ಒಂದು ತಿಂಗಳ ರಜೆಯನ್ನು ಮುಂದಿನ ತಿಂಗಳಿಗೆ ವಿಸ್ತರಿಸುವಂತಿಲ್ಲ
- ಮುಟ್ಟಿನ ರಜೆ ಪಡೆಯಲು ವೈದ್ಯಕೀಯ ಪ್ರಮಾಣಪತ್ರ ನೀಡಬೇಕಿಲ್ಲ
- 52 ವರ್ಷ ಮೇಲ್ಪಟ್ಟ ಮಹಿಳೆಯರಿಗೆ ಈ ರಜೆಯ ಸೌಲಭ್ಯ ಇಲ್ಲ
- ಸರ್ಕಾರಿ, ಬಹುರಾಷ್ಟ್ರೀಯ, ಮಾಹಿತಿ ತಂತ್ರಜ್ಞಾನ ಕ್ಷೇತ್ರಕ್ಕೂ ಅನ್ವಯ
- ಮೀಸಲಾತಿ ಅಧಿಸೂಚನೆ: ನೋಟಿಸ್ :ಹೈಕೋರ್ಟ್ ಮೆಟ್ಟಿಲೇರಿದ ರಾಜ್ಯ ಚುನಾವಣಾ ಆಯೋಗ
ಸಂದರ್ಭ: ‘ಮುಂದಿನ ವರ್ಷ ಜನವರಿಯಲ್ಲಿ ಅವಧಿ ಪೂರ್ಣಗೊಳ್ಳಲಿರುವ 5,950 ಗ್ರಾಮ ಪಂಚಾಯಿತಿಗಳಿಗೆ ಸಕಾಲದಲ್ಲಿ ಚುನಾವಣೆ ನಡೆಸಲು ಅನುಕೂಲವಾಗುವಂತೆ ಅಂತಿಮ ಮೀಸಲಾತಿಯ ಅಧಿಸೂಚನೆ ಹೊರಡಿಸಲು ತಕ್ಷಣವೇ ಕ್ರಮ ಕೈಗೊಳ್ಳಲು ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಬೇಕು’ ಎಂದು ಕೋರಿ ರಾಜ್ಯ ಚುನಾವಣಾ ಆಯೋಗ ಹೈಕೋರ್ಟ್ ಮೆಟ್ಟಿಲೇರಿದೆ.
- ಈ ಸಂಬಂಧ ರಾಜ್ಯ ಚುನಾವಣಾ ಆಯೋಗ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ನೇತೃತ್ವದ ವಿಭಾಗೀಯ ನ್ಯಾಯಪೀಠ ವಿಚಾರಣೆ ನಡೆಸಿತು.
- ಕೆಲ ಕಾಲ ವಾದ ಆಲಿಸಿದ ನ್ಯಾಯಪೀಠ, ‘ಇದೊಂದು ಗಂಭೀರ ವಿಷಯವಾಗಿದ್ದು, ಸರ್ಕಾರದಿಂದ ಅಗತ್ಯ ಮಾಹಿತಿಗಳನ್ನು ಪಡೆದು ಎರಡು ವಾರಗಳಲ್ಲಿ ನ್ಯಾಯಾಲಯಕ್ಕೆ ತಿಳಿಸಬೇಕು’ ಎಂದು ಸರ್ಕಾರಿ ವಕೀಲರಿಗೆ ಸೂಚಿಸಿ ಪ್ರತಿವಾದಿಗಳಾದ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ, ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಇಲಾಖೆ ಪ್ರಧಾನ ಕಾರ್ಯದರ್ಶಿಗೆ ನೋಟಿಸ್ ಜಾರಿಗೊಳಿ ಸಲು ಆದೇಶಿಸಿತು. ವಿಚಾರಣೆಯನ್ನು ಡಿಸೆಂಬರ್ 11ಕ್ಕೆ ಮುಂದೂಡಲಾಗಿದೆ.
- ವಿವಾದಾತ್ಮಕ ಮಸೂದೆ ಜಂಟಿ ಸಮಿತಿ ರಚನೆ
ಸಂದರ್ಭ: ಕನಿಷ್ಠ 30 ದಿನ ಜೈಲುವಾಸ ಅನುಭವಿಸಿದ ಪ್ರಧಾನಿ, ರಾಜ್ಯ/ಕೇಂದ್ರಾಡಳಿತ ಪ್ರದೇಶಗಳ ಮುಖ್ಯಮಂತ್ರಿ, ಸಚಿವರನ್ನು ಹುದ್ದೆಯಿಂದ ಪದಚ್ಯುತಗೊಳಿಸಲು ಅವಕಾಶ ಕಲ್ಪಿಸುವ ವಿವಾದಾತ್ಮಕ ಮಸೂದೆಗಳನ್ನು ಪರಿಶೀಲಿಸಲು ಸಂಸತ್ತಿನ ಜಂಟಿ ಸಮಿತಿಯನ್ನು ರಚಿಸಲಾಗಿದೆ.
- ಮಸೂದೆಯನ್ನು ಸಂಸದರ ಸಮಿತಿಯ ಪರಿಶೀಲನೆಗೆ ಕಳುಹಿಸುವ ನಿರ್ಣಯವನ್ನು ಸಂಸತ್ತು ಅಂಗೀಕರಿಸಿ 84 ದಿನಗಳು ಕಳೆದಿವೆ. ಆದರೆ, ಎನ್ಸಿಪಿ (ಎಸ್ಪಿ) ಹೊರತುಪಡಿಸಿ ಇಂಡಿಯಾ ಮೈತ್ರಿಕೂಟವು ಯಾವುದೇ ಸಂಸದರನ್ನು ಈ ಸಮಿತಿಗೆ ನಾಮನಿರ್ದೇಶನ ಮಾಡಲು ನಿರಾಕರಿಸಿದ್ದರಿಂದ ಸಮಿತಿ ರಚನೆ ಕಾರ್ಯ ಬಾಕಿ ಉಳಿದಿತ್ತು.
- ಬಿಜೆಪಿಯ ಅಪರಾಜಿತಾ ಸಾರಂಗಿ ಅಧ್ಯಕ್ಷತೆಯಲ್ಲಿ 31 ಸದಸ್ಯರ ಸಮಿತಿ ರಚಿಸಲಾಗಿದೆ. ಸಮಿತಿಯಲ್ಲಿ ಬಿಜೆಪಿಯ 15 ಮಂದಿ ಸೇರಿ ಎನ್ಡಿಎನ 26 ಸಂಸದರು, ವಿರೋಧ ಪಕ್ಷಗಳ ನಾಲ್ವರು ಸದಸ್ಯರಿದ್ದಾರೆ. ಕರ್ನಾಟಕದ ಸುಧಾಮೂರ್ತಿ ಈ ಸಮಿತಿಗೆ ನಾಮನಿರ್ದೇಶಿತ ಸದಸ್ಯರಾಗಿದ್ದಾರೆ. ಜೆಡಿಎಸ್ ಸಂಸದ ಎಂ. ಮಲ್ಲೇಶಬಾಬು ಸಹ ಈ ಸಮಿತಿ ಸದಸ್ಯರು.
- ಸುಪ್ರಿಯಾ ಸುಳೆ (ಎನ್ಸಿಪಿ –ಎಸ್ಪಿ), ಅಕಾಲಿ ದಳದ ಹರ್ಸಿಮ್ರತ್ ಕೌರ್, ವೈಎಸ್ಆರ್ ಕಾಂಗ್ರೆಸ್ನ ಎಸ್. ನಿರಂಜನ ರೆಡ್ಡಿ ಮತ್ತು ಎಐಎಂಐಎಂನ ಅಸಾದುದ್ದೀನ್ ಓವೈಸಿ ಈ ಸಮಿತಿಯಲ್ಲಿರುವ ವಿರೋಧ ಪಕ್ಷಗಳ ಸಂಸದರು. ಬಿಜೆಡಿ ಮತ್ತು ಬಿಆರ್ಎಸ್ನ ಸಂಸದರು ಈ ಸಮಿತಿಯಲ್ಲಿ ಇಲ್ಲ.
- ಸಮಿತಿಯಲ್ಲಿ ಲೋಕಸಭೆಯ 21, ರಾಜ್ಯಸಭೆಯ 10 ಸದಸ್ಯರು ಇದ್ದಾರೆ. ಮುಂದಿನ ಚಳಿಗಾಲದ ಅಧಿವೇಶನದ ಮೊದಲ ವಾರದ ಕೊನೆಯ ದಿನ ಸಮಿತಿ ವರದಿ ಸಲ್ಲಿಸಲಿದೆ. ಆದರೂ, ವರದಿ ಸಲ್ಲಿಸಲು ನಿಗದಿಪಡಿಸಿರುವ ಗಡುವು ವಿಸ್ತರಣೆಯಾಗುವ ಸಾಧ್ಯತೆಗಳಿವೆ.
- ಇಂಡಿಯಾ ಮೈತ್ರಿಕೂಟ, ತೃಣಮೂಲ ಕಾಂಗ್ರೆಸ್, ಎಎಪಿ, ಸಮಾಜವಾದಿ ಪಾರ್ಟಿ ಮತ್ತು ಶಿವಸೇನಾ (ಯುಬಿಟಿ) ಈ ಸಮಿತಿಯನ್ನು ಬಹಿಷ್ಕರಿಸುವುದಾಗಿ ಹೇಳಿವೆ.
- 77 ಅಡಿ ರಾಮನ ಪ್ರತಿಮೆ: ಪರ್ತಗಾಳಿ ಮಠ: ನ.28ಕ್ಕೆ ಪ್ರಧಾನಿಯಿಂದ ಜನಾರ್ಪಣೆ
ಸಂದರ್ಭ: ಗೌಡ ಸಾರಸ್ವತ ಬ್ರಾಹ್ಮಣ ಸಮುದಾಯದ ಶ್ರೀ ಸಂಸ್ಥಾನ ಗೋಕರ್ಣ ಪರ್ತಗಾಳಿ ಜೀವೋತ್ತಮ ಮಠವು ಕರ್ನಾಟಕ ಗೋವಾ ಗಡಿ ಭಾಗದ ಕಾನಕೋಣ ಸಮೀಪದ ಪರ್ತಗಾಳಿಯಲ್ಲಿ ನಿರ್ಮಿಸಿರುವ 77 ಅಡಿ ಎತ್ತರದ ರಾಮನ ಕಂಚಿನ ಪ್ರತಿಮೆ ಹಾಗೂ ರಾಮಾಯಣ ವನ ನ.28ಕ್ಕೆ ಜನಾರ್ಪಣೆಗೊಳ್ಳಲಿದೆ.
- ಐದೂವರೆ ಶತಮಾನದ ಇತಿಹಾಸ ಹೊಂದಿರುವ ಗೋಕರ್ಣ ಪರ್ತಗಾಳಿ ಜೀವೋತ್ತಮ ಮೂಲ ಮಠದಲ್ಲಿ ಅಭಿವೃದ್ದಿ ಕಾಮಗಾರಿ ಕೈಗೊಳ್ಳಲಾಗಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಅಂದು ಮಧ್ಯಾಹ್ನ 3.50ಕ್ಕೆ ಉದ್ಘಾಟಿಸುವರು.
- 13ನೇ ಶತಮಾನದಲ್ಲಿ ಮಧ್ವಾ ಚಾರ್ಯರು ಸ್ಥಾಪಿಸಿದ ಮಠವಿದು. ಸದ್ಯ ದಕ್ಷಿಣ ಗೋವಾದ ಪರ್ತಗಾಳಿ ಗ್ರಾಮದ ಕುಶಾವತಿ ನದಿಯ ದಡದಲ್ಲಿರುವ ಪ್ರಧಾನ ಮಠದ ಆವರಣದಲ್ಲಿ ಸುಮಾರು ₹16 ಕೋಟಿ ವೆಚ್ಚದಲ್ಲಿ ಭಾರತದಲ್ಲಿಯೇ ಅತಿ ಎತ್ತರದ ರಾಮನ ಕಂಚಿನ ಪ್ರತಿಮೆ ನಿರ್ಮಿಸಲಾಗಿದೆ. ಇದರೊಟ್ಟಿಗೆ ರಾಮಾಯಣ ಉದ್ಯಾನ, 3ಡಿ ಮ್ಯಾಪಿಂಗ್, ವಿಶಾಲ ಸಭಾಂಗಣ, ಬಹು ಬಳಕೆಯ ಕಟ್ಟಡ, ಮ್ಯೂಸಿಯಂ ಅನ್ನು ರೂಪಿಸಲಾಗಿದೆ ಎಂದರು.
- ಮಠದ 24ನೇ ಪೀಠಾಧ್ಯಕ್ಷರಾದ ವಿದ್ಯಾಧೀಶ ತೀರ್ಥ ಶ್ರೀಪಾದ ವಡೇರ್ ಸ್ವಾಮೀಜಿ ಮಾರ್ಗದರ್ಶನದಲ್ಲಿಯೇ 550ನೇ ವರ್ಷದ ಆಚರಣೆ, ಧಾರ್ಮಿಕ ಕಾರ್ಯಕ್ರಮಗಳು ನ.27ರಂದು ಆರಂಭಗೊಂಡು ಡಿ.7ರವರೆಗೂ ಪರ್ತಗಾಳಿಯಲ್ಲಿ ಇರಲಿವೆ. ಪ್ರತಿ ದಿನ ಸಂಜೆ ಸಾಂಸ್ಕೃತಿಕ ಕಾರ್ಯಕ್ರಮ ಏರ್ಪಡಿಸಲಾಗಿದೆ ಎಂದರು
- ಮಠದ 550 ನೇ ವರ್ಷದ ಸಂದರ್ಭದಲ್ಲಿ ವೇದಿಕ್ ಪಾಠ ಶಾಲೆ ನಿರ್ಮಿಸಿ, ಗುರುಕುಲ ಮಾದರಿಯಲ್ಲಿ 12 ವರ್ಷ ಶಿಕ್ಷಣವನ್ನು ನೀಡಲು ಮಠ ಮುಂದಾಗಿದೆ. 1 ಲಕ್ಷ ಚದರಡಿ ಪ್ರದೇಶದಲ್ಲಿ ಗುರುಕುಲ ವಿದ್ಯಾಪೀಠ ಕೆಲಸವೂ ಶುರುವಾಗಿದೆ ಎಂದು ಹೇಳಿದರು.
- ರಫ್ತು ಉತ್ತೇಜನಾ ಯೋಜನೆಗೆ ಒಪ್ಪಿಗೆ
ಸಂದರ್ಭ: ಆರು ವರ್ಷಗಳ ಅವಧಿಯಲ್ಲಿ ಜಾರಿಗೆ ಬರುವ, ₹25 ಸಾವಿರ ಕೋಟಿ ಮೊತ್ತದ ರಫ್ತು ಉತ್ತೇಜನಾ ಯೋಜನೆಗೆ ಕೇಂದ್ರ ಸಚಿವ ಸಂಪುಟವು ಒಪ್ಪಿಗೆ ನೀಡಿದೆ. ಯೋಜನೆಯು ಈ ಹಣಕಾಸು ವರ್ಷದಿಂದಲೇ ಜಾರಿಗೆ ಬರಲಿದೆ.
- ಈ ಯೋಜನೆಯು, ಅಮೆರಿಕವು ಭಾರತದ ಸರಕುಗಳ ಮೇಲೆ ವಿಧಿಸಿರುವ ಭಾರಿ ಪ್ರಮಾಣದ ಸುಂಕದ ಪರಿಣಾಮವನ್ನು ನಿಭಾಯಿಸಲು ರಫ್ತುದಾರರಿಗೆ ನೆರವಾಗಲಿದೆ. ಎರಡು ಉಪ ಯೋಜನೆಗಳ ಮೂಲಕ (‘ನಿರ್ಯಾತ್ ಪ್ರೋತ್ಸಾಹನ್’ ಮತ್ತು ‘ನಿರ್ಯಾತ್ ದಿಶಾ’) ಈ ಯೋಜನೆಯನ್ನು ಜಾರಿಗೆ ತರಲಾಗುತ್ತಿದೆ.
- ಈ ಯೋಜನೆಯು ರಫ್ತು ವ್ಯವಸ್ಥೆಗೆ ಬೆಂಬಲವಾಗಿ ನಿಲ್ಲಲಿದೆ ಎಂದು ಮಾಹಿತಿ ಮತ್ತು ಪ್ರಸಾರ ಸಚಿವ ಅಶ್ವಿನಿ ವೈಷ್ಣವ್ ಅವರು ಸಭೆಯ ನಂತರ ತಿಳಿಸಿದರು.
- ಚಿಲ್ಲರೆ ಹಣದುಬ್ಬರ ಇಳಿಕೆ: ದಶಕದ ಕನಿಷ್ಠ ಮಟ್ಟಕ್ಕೆ ಹಣದುಬ್ಬರ l ಇಳಿಕೆಗೆ ಜಿಎಸ್ಟಿ ಪರಿಷ್ಕರಣೆಯೂ ಕಾರಣ
ಸಂದರ್ಭ: ಚಿಲ್ಲರೆ ಹಣದುಬ್ಬರ ಪ್ರಮಾಣವು ಅಕ್ಟೋಬರ್ ನಲ್ಲಿ ಶೇಕಡ 0.25ಕ್ಕೆ ಇಳಿಕೆಯಾಗಿದೆ. ಜನರು ನಿತ್ಯದ ಬದುಕಿನಲ್ಲಿ ಹೆಚ್ಚಾಗಿ ಬಳಕೆ ಮಾಡುವ ಸರಿಸುಮಾರು 380 ಉತ್ಪನ್ನಗಳ ಮೇಲಿನ ಜಿಎಸ್ಟಿ ದರವನ್ನು ಕಡಿಮೆ ಮಾಡಿದ್ದುದು ಕೂಡ ಹಣದುಬ್ಬರ ಇಳಿಕೆಗೆ ಒಂದು ಕಾರಣ ಎಂದು ತಜ್ಞರು ಹೇಳಿದ್ದಾರೆ.
- ಅಲ್ಲದೆ, ತರಕಾರಿ, ಹಣ್ಣುಗಳು ಮತ್ತು ಮೊಟ್ಟೆ ಬೆಲೆಯು ಕಡಿಮೆ ಆಗಿರುವುದು ಕೂಡ ಹಣದುಬ್ಬರ ದರವನ್ನು ತಗ್ಗಿಸಿದೆ. ಅಕ್ಟೋಬರ್ನಲ್ಲಿ ದಾಖಲಾಗಿರುವ, ಗ್ರಾಹಕ ಬೆಲೆ ಸೂಚ್ಯಂಕ (ಸಿಪಿಐ) ಆಧಾರಿತ ಚಿಲ್ಲರೆ ಹಣದುಬ್ಬರ ಪ್ರಮಾಣವು 2014ರ ಜನವರಿ ನಂತರದ ಅತ್ಯಂತ ಕನಿಷ್ಠ ಮಟ್ಟವಾಗಿದೆ.
- ಸೆಪ್ಟೆಂಬರ್ ತಿಂಗಳಲ್ಲಿ ಚಿಲ್ಲರೆ ಹಣದುಬ್ಬರ ಪ್ರಮಾಣವು ಶೇ 1.44ರಷ್ಟು ಇತ್ತು. ಹಿಂದಿನ ವರ್ಷದ ಅಕ್ಟೋಬರ್ನಲ್ಲಿ ಇದು ಶೇ 6.21ರಷ್ಟು ಆಗಿತ್ತು.
- ರಾಷ್ಟ್ರೀಯ ಸಾಂಖ್ಯಿಕ ಕಚೇರಿ (ಎನ್ಎಸ್ಒ) ಬಿಡುಗಡೆ ಮಾಡಿರುವ ಅಂಕಿ–ಅಂಶಗಳ ಪ್ರಕಾರ ಅಕ್ಟೋಬರ್ನಲ್ಲಿ ಆಹಾರ ವಸ್ತುಗಳ ಹಣದುಬ್ಬರ ಪ್ರಮಾಣವು ಶೇ (–)5.02ರಷ್ಟು ಆಗಿತ್ತು.
- ಹಣದುಬ್ಬರವು ಇಳಿಕೆ ಕಂಡಿರುವುದಕ್ಕೆ ಮುಖ್ಯ ಕಾರಣಗಳಲ್ಲಿ ಜಿಎಸ್ಟಿ ದರ ಪರಿಷ್ಕರಣೆಯೂ ಸೇರಿದೆ ಎಂದು ಎನ್ಎಸ್ಒ ಹೇಳಿದೆ. ಎಣ್ಣೆ ಮತ್ತು ಕೊಬ್ಬುಗಳು, ತರಕಾರಿಗಳು, ಹಣ್ಣುಗಳು, ಮೊಟ್ಟೆ, ಪಾದರಕ್ಷೆ, ಏಕದಳ ಧಾನ್ಯಗಳು ಮತ್ತು ಅವುಗಳ ಉತ್ಪನ್ನಗಳು, ಸಾರಿಗೆ ಹಾಗೂ ಸಂವಹನ ವರ್ಗಗಳಲ್ಲಿ ಹಣ ದುಬ್ಬರ ಇಳಿಕೆ ಆಗಿದ್ದುದು ಕೂಡ ಒಂದು ಕಾರಣ ಎಂದು ಎನ್ಎಸ್ಒ ಹೇಳಿದೆ.
- ಗ್ರಾಮೀಣ ಪ್ರದೇಶಗಳಲ್ಲಿ ಹಣದುಬ್ಬರ ಪ್ರಮಾಣವು (–)0.25 ಆಗಿದೆ. ನಗರ ಪ್ರದೇಶಗಳಲ್ಲಿ ಇದು ಶೇ 0.88ರ ಮಟ್ಟದಲ್ಲಿದೆ.
- ಭಾರತೀಯ ರಿಸರ್ವ್ ಬ್ಯಾಂಕ್ನ ಹಣಕಾಸು ನೀತಿ ಸಮಿತಿಯು (ಎಂಪಿಸಿ) ಚಿಲ್ಲರೆ ಹಣದುಬ್ಬರದ ಅಂದಾಜು ಪ್ರಮಾಣವನ್ನು ಪ್ರಸಕ್ತ ಆರ್ಥಿಕ ವರ್ಷಕ್ಕೆ ಶೇ 2.6ರ ಮಟ್ಟದಿಂದ ತುಸು ಕಡಿಮೆ ಮಾಡುವ ಸಾಧ್ಯತೆ ಇದೆ ಎಂದು ಐಸಿಆರ್ಎ ಸಂಸ್ಥೆಯ ಮುಖ್ಯ ಅರ್ಥ ಶಾಸ್ತ್ರಜ್ಞೆ ಅದಿತಿ ನಾಯರ್ ಹೇಳಿದ್ದಾರೆ.
- ‘ಸಮಿತಿಯು ಅಕ್ಟೋಬರ್ನಲ್ಲಿ ನಡೆಯಲಿರುವ ಸಭೆಯಲ್ಲಿ ರೆಪೊ ದರವನ್ನು ಶೇ 0.25ರಷ್ಟು ಕಡಿಮೆ ಮಾಡುವುದಕ್ಕೆ ಹಣದುಬ್ಬರದ ಇಳಿಕೆಯು ಒತ್ತಾಸೆ ನೀಡುತ್ತದೆ. ಪ್ರಸಕ್ತ ಹಣಕಾಸು ವರ್ಷದ ಎರಡನೆಯ ತ್ರೈಮಾಸಿಕದ ಜಿಡಿಪಿ ಬೆಳವಣಿಗೆ ದರವು ಆಶ್ಚರ್ಯಕರ ಮಟ್ಟದಲ್ಲಿ ಏರಿಕೆ ಕಾಣದೆ ಇದ್ದರೆ, ರೆಪೊ ದರ ಇಳಿಕೆಯ ಸಾಧ್ಯತೆಗೆ ಬಲ ಬರುತ್ತದೆ’ ಎಂದು ಅದಿತಿ ಅವರು ಅಭಿಪ್ರಾಯಪಟ್ಟಿದ್ದಾರೆ.
- ಜಿಎಸ್ಟಿ ದರ ಪರಿಷ್ಕರಣೆಯು ಸೆಪ್ಟೆಂಬರ್ ಕೊನೆಯಲ್ಲಿ ಜಾರಿಗೆ ಬಂತು. ಅದರ ಧನಾತ್ಮಕ ಪರಿಣಾಮವು ಅಕ್ಟೋಬರ್ನಲ್ಲಿ ಕಂಡುಬಂದಿದೆ ಎಂದು ಕೇರ್ಎಜ್ ರೇಟಿಂಗ್ಸ್ ಸಂಸ್ಥೆಯ ಮುಖ್ಯ ಅರ್ಥಶಾಸ್ತ್ರಜ್ಞೆ ರಜನಿ ಸಿನ್ಹಾ ಹೇಳಿದ್ದಾರೆ.
- ‘ಹಣಕಾಸು ನೀತಿಗಳ ದೃಷ್ಟಿಯಿಂದ ಹೇಳುವುದಾದರೆ, ಹಣದುಬ್ಬರ ಕಡಿಮೆ ಆಗಿರುವುದು, ಆರ್ಥಿಕ ಬೆಳವಣಿಗೆಯ ಮೇಲೆ ಗಮನ ನೀಡಲು ಆರ್ಬಿಐಗೆ ಹೆಚ್ಚಿನ ಅವಕಾಶ ಮಾಡಿಕೊಡುತ್ತದೆ… ಈ ಹಣಕಾಸು ವರ್ಷದ ದ್ವಿತೀಯಾರ್ಧದಲ್ಲಿ ಆರ್ಥಿಕ ಬೆಳವಣಿಗೆ ದರವು ಕಡಿಮೆ ಆದರೆ, ರೆಪೊ ದರ ಕಡಿತಕ್ಕೆ ಸಂದರ್ಭ ಸೃಷ್ಟಿಯಾಗುತ್ತದೆ’ ಎಂದು ಸಿನ್ಹಾ ಅವರು ಹೇಳಿದ್ದಾರೆ.
- ‘ಕ್ವಾಂಟಮ್ ಎಕೋಸಿಸ್ಟಮ್ ಮ್ಯಾಪ್’ಗೆ ಸೂಚನೆ
ಸಂದರ್ಭ: ಕ್ವಾಂಟಮ್ ತಂತ್ರಜ್ಞಾನದ ಬಗ್ಗೆ ಸಮಗ್ರ ಮಾಹಿತಿ ಪ್ರಚುರಪಡಿಸಲು ‘ಕರ್ನಾಟಕ ಕ್ವಾಂಟಮ್ ಎಕೋಸಿಸ್ಟಮ್ ಮ್ಯಾಪ್’ ತಯಾರಿಸಲು ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎನ್.ಎಸ್.ಬೋಸರಾಜು ಅವರು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
- ಸ್ವಿಟ್ಜರ್ಲೆಂಡ್ನಲ್ಲಿ ಕ್ವಾಂಟಮ್ ತಂತ್ರಜ್ಞಾನದ ಬಗ್ಗೆ ಸಮಗ್ರ ಮಾಹಿತಿ ಪ್ರಚುರಪಡಿಸಲು ‘ಸ್ವಿಸ್ನೆಕ್ಸ್ ಕ್ವಾಂಟಮ್ ಮ್ಯಾಪ್’ ಸಿದ್ಧಪಡಿಸಿದೆ. ಅದೇ ಮಾದರಿ ಯಲ್ಲಿ ಇಲ್ಲೂ ಕ್ವಾಂಟಮ್ ಎಕೋಸಿಸ್ಟಮ್ ಮ್ಯಾಪ್ ಸಿದ್ದಪಡಿಸುವ ಅಗತ್ಯವಿದೆ ಎಂದು ಅವರು ಪ್ರತಿಪಾದಿಸಿದರು.
- ವಿಕಾಸಸೌಧದ ತಮ್ಮ ಕಚೇರಿಯಲ್ಲಿ ಸ್ವಿಸ್ನೆಕ್ಸ್ ಇಂಡಿಯಾದ ಸಿಇಓ ಮತ್ತು ಕೌನ್ಸಲ್ ಜನರಲ್ ಡಾ ಎಂಜೆಲಾ ಹೊನೆಗ್ಗರ್ ಮತ್ತು ರಾಜ್ಯದ ಅಧಿಕಾರಿಗಳ ಜತೆ ಬೋಸರಾಜು ಮಾತುಕತೆ ನಡೆಸಿದರು. ಸಭೆಯಲ್ಲಿ ಕರ್ನಾಟಕ ಮತ್ತು ಸ್ವಿಟ್ಜರ್ಲೆಂಡ್ ಮಧ್ಯೆ ಸಂಶೋಧನೆ ಮತ್ತು ಉದ್ಯಮಗಳ ತಂತ್ರಜ್ಞಾನ ವಿನಿಮಯಕ್ಕೆ ವೇದಿಕೆಯನ್ನು ರಚಿಸಲು ಅಗತ್ಯ ಕ್ರಮ ಕೈಗೊಳ್ಳುವ ಕುರಿತೂ ವಿವರವಾಗಿ ಚರ್ಚಿಸಲಾಯಿತು.
- ಬೆಂಗಳೂರು ನಗರವು ದೇಶದ ಕ್ವಾಂಟಮ್ ನವೋದ್ಯಮದ ರಾಜಧಾನಿ. ಕ್ವಾಂಟಮ್ ಕ್ಷೇತ್ರದಲ್ಲಿ ತೊಡಗಿಸಿ ಕೊಂಡಿರುವ ಸಾಕಷ್ಟು ನವೋದ್ಯಮಗಳು ಮತ್ತು ಉದ್ಯಮಗಳು ಕಾರ್ಯನಿರ್ವಹಿಸುತ್ತಿವೆ. ಹಲವಾರು ಸಂಸ್ಥೆಗಳೂ ಸಂಶೋಧನೆಯಲ್ಲಿ ತೊಡಗಿಕೊಂಡಿವೆ. ದೇಶದಲ್ಲಿಯೇ ಅತಿ ಹೆಚ್ಚು ಕ್ವಾಂಟಮ್ ಕ್ಷೇತ್ರದಲ್ಲಿ ಪ್ರಾವೀಣ್ಯತೆ ಹೊಂದಿರುವ ಮಾನವ ಸಂಪನ್ಮೂಲವೂ ಲಭ್ಯವಿದೆ ಎಂದು ಬೋಸರಾಜು ತಿಳಿಸಿದರು.
- ದೇಶದಲ್ಲೇ ಮೊದಲ ಕ್ಯೂ–ಸಿಟಿಯನ್ನು ನಿರ್ಮಾಣ ಮಾಡಲು ಸರ್ಕಾರ ಭೂಮಿ ಮಂಜೂರು ಮಾಡಿದೆ. ಈ ಎಲ್ಲಾ ವಿಷಯಗಳನ್ನು ಉತ್ತಮ ರೀತಿಯಲ್ಲಿ ಪ್ರಚುರ ಪಡಿಸಲು ಮ್ಯಾಪ್ ರಚಿಸುವುದು ಅಗತ್ಯವಿದೆ ಎಂದರು.
- ಈ ಪ್ರಸ್ತಾವಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ ಸ್ವಿಸ್ನೆಕ್ಸ್ ಸಿಇಓ ಡಾ. ಎಂಜೆಲಾ ಹೊನೆಗ್ಗರ್ ಅವರು, ಸ್ವಿಟ್ಜರ್ಲೆಂಡ್ ಕ್ವಾಂಟಮ್ ಕ್ಷೇತ್ರದ ಆವಿಷ್ಕಾರ ಹಾಗೂ ಉದ್ಯಮಗಳ ಸ್ಥಾಪನೆಯಲ್ಲಿ ಮುಂಚೂಣಿಯಲ್ಲಿದೆ. ಈ ಬಗ್ಗೆ ಅಮೆರಿಕಾ ಹಾಗೂ ಇನ್ನಿತರ ದೇಶಗಳಲ್ಲಿ ಪ್ರಚಾರ ಮಾಡುವ ಮತ್ತು ಮಾಹಿತಿಯನ್ನು ಹಂಚಿಕೊಳ್ಳುವ ನಿಟ್ಟಿನಲ್ಲಿ ಸ್ವಿಸ್ನೆಕ್ಸ್ ಕ್ವಾಂಟಮ್ ಮ್ಯಾಪ್ ರಚಿಸಲಾಯಿತು ಎಂದರು.
- ಸ್ವಿಸ್ನೆಕ್ಸ್ ಕ್ವಾಂಟಮ್ ಮ್ಯಾಪ್ನಿಂದ ಕ್ವಾಂಟಮ್ ಕ್ಷೇತ್ರದ ಯಾವ ವಿಷಯದಲ್ಲಿ ಯಾವ ಯಾವ ಉದ್ಯಮಗಳು ಕಾರ್ಯನಿರ್ವಹಿಸುತ್ತಿವೆ. ಸಹಯೋಗದ ಅವಕಾಶ ಎಲ್ಲಿದೆ ಎನ್ನುವ ಮಾಹಿತಿಯನ್ನು ಕ್ರೋಡೀಕರಿಸಲಾಗಿತ್ತು. ಇದೇ ರೀತಿ ಮ್ಯಾಪ್ ಸಿದ್ದಪಡಿಸಿದರೆ ಎರಡೂ ರಾಷ್ಟ್ರಗಳ ನಡುವೆ ವಿಚಾರ ವಿನಿಮಯದ ಮೊದಲ ಹೆಜ್ಜೆ ಯಾಗಲಿದೆ ಎಂದು ಹೇಳಿದರು.
- ಎ.ಐ ಪರಿಕರದಿಂದ ಶೇ 50ರಷ್ಟು ಕೆಲಸ: ಸೇಲ್ಸ್ಫೋರ್ಸ್
ಸಂದರ್ಭ: 2027ರ ವೇಳೆಗೆ ದೇಶದ ಸೇವಾ ವಲಯದಲ್ಲಿ ಗ್ರಾಹಕರಿಂದ ಬರುವ ಕೋರಿಕೆಗಳ ಪೈಕಿ ಶೇ 50ರಷ್ಟಕ್ಕೆ ಕೃತಕ ಬುದ್ಧಿಮತ್ತೆ (ಎ.ಐ) ಆಧಾರಿತ ಪರಿಕರಗಳೇ ಪರಿಹಾರ ನೀಡಲಿವೆ ಎಂದು ಸೇಲ್ಸ್ಫೋರ್ಸ್ ಸಮೀಕ್ಷೆ ಹೇಳಿದೆ.
- ಅಮೆರಿಕ ಮೂಲದ ಸೇಲ್ಸ್ಫೋರ್ಸ್ ಕಂಪನಿಯು ಕ್ಲೌಡ್ ಆಧಾರಿತ ತಂತ್ರಾಂಶ ಸೇವೆಗಳನ್ನು ಒದಗಿಸುತ್ತದೆ.
- ಸೇವಾ ವಲಯದ ತಜ್ಞರ ಪ್ರಕಾರ, ಗ್ರಾಹಕರಿಂದ ಈಗ ಸೇವಾ ವಿಷಯಗಳಿಗೆ ಸಂಬಂಧಿಸಿದಂತೆ ಬರುತ್ತಿರುವ ಕೋರಿಕೆಗಳ ಪೈಕಿ ಶೇ 30ರಷ್ಟನ್ನು ಕೃತಕ ಬುದ್ಧಿಮತ್ತೆ ತಂತ್ರಜ್ಞಾನವು ಪರಿಹರಿಸುತ್ತಿದೆ. ಇದು 2027ರ ವೇಳೆಗೆ ಶೇ 50ಕ್ಕೆ ತಲುಪುವ ನಿರೀಕ್ಷೆ ಇದೆ ಎಂದು ಸೇಲ್ಸ್ಫೋರ್ಸ್ ತನ್ನ ಇತ್ತೀಚಿನ ವರದಿಯೊಂದರಲ್ಲಿ ತಿಳಿಸಿದೆ.
- ‘ಎ.ಐ ತಂತ್ರಜ್ಞಾನದ ಬಳಕೆಯಿಂದ ಸೇವಾ ವೆಚ್ಚವು ಕಡಿತಗೊಂಡಿದ್ದು, ಗ್ರಾಹಕರಿಗೆ ನೀಡುವ ಸೇವೆಯಲ್ಲಿ ಸುಧಾರಣೆ ಆಗಿದೆ’ ಎಂದು ಸೇಲ್ಸ್ಫೋರ್ಸ್ ಇಂಡಿಯಾದ ಸಲ್ಯೂಷನ್ ಎಂಜಿನಿಯರಿಂಗ್ ವಿಭಾಗದ ಉಪಾಧ್ಯಕ್ಷ ದೀಪು ಚಾಕೊ ಅವರು ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
- ‘ಸೇವಾ ವಲಯದ ಕಂಪನಿಗಳು, ಈ ತಂತ್ರಜ್ಞಾನ ಬಳಸುವುದಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಿವೆ. ಈ ತಂತ್ರಜ್ಞಾನದ ಬಳಕೆಯಿಂದ ವರಮಾನವು ಶೇ 16ರಷ್ಟು ಹೆಚ್ಚಳವಾಗಲಿದೆ ಎಂದು ದೇಶದ ಸೇವಾ ವಲಯದ ಕಂಪನಿಗಳು ಭಾವಿಸಿವೆ’ ಎಂದು ಸೇಲ್ಸ್ಫೋರ್ಸ್ ಇಂಡಿಯಾದ ಮಾರಾಟ ಮತ್ತು ವಿತರಣೆಯ ವ್ಯವಸ್ಥಾಪಕ ನಿರ್ದೇಶಕಿ ಮನ್ಕಿರಣ್ ಚೌಹಾನ್ ತಿಳಿಸಿದರು.
- ಈ ವರ್ಷದ ಏಪ್ರಿಲ್ 25ರಿಂದ ಜೂನ್ 6ರವರೆಗೆ ಜಗತ್ತಿನ 6,500 ಕಂಪನಿಗಳಿಂದ ಸಂಗ್ರಹಿಸಿದ ಮಾಹಿತಿ ಆಧರಿಸಿ ಈ ವರದಿ ತಯಾರಿಸಲಾಗಿದೆ.
- ‘ವಿಶ್ವದೆಲ್ಲೆಡೆಯಿಂದ ಪ್ರತಿಭಾವಂತರ ಕರೆತರಲು ಎಚ್–1ಬಿ ವೀಸಾ ಅಗತ್ಯ’
ಸಂದರ್ಭ: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಎಚ್–1ಬಿ ವೀಸಾ ಕಾರ್ಯಕ್ರಮ ವನ್ನು ಬಲವಾಗಿ ಸಮರ್ಥಿಸಿಕೊಂಡಿದ್ದಾರೆ.
- ‘ಕೆಲ ಕ್ಷೇತ್ರಗಳಿಗೆ ಸಂಬಂಧಿಸಿ ಅಮೆರಿಕದಲ್ಲಿ ಪ್ರತಿಭಾವಂತರು ಇಲ್ಲ. ಈ ಕೊರತೆ ನೀಗಿಸಲು ವಿಶ್ವದ ವಿವಿಧ ಭಾಗಗಳಿಂದ ಪ್ರತಿಭಾವಂತರನ್ನು ಅಮೆರಿಕಕ್ಕೆ ಕರೆತರುವುದು ಅಗತ್ಯ. ಹೀಗಾಗಿ ಎಚ್–1ಬಿ ವೀಸಾ ಅಗತ್ಯ’ ಎಂದು ಹೇಳಿದ್ದಾರೆ.
- ಫಾಕ್ಸ್ ನ್ಯೂಸ್ನ ಲಾರಾ ಇನ್ಗ್ರಹಾಮ್ ಅವರಿಗೆ ನೀಡಿದ ಸಂದರ್ಶನದಲ್ಲಿ ಅವರು ಈ ಮಾತು ಹೇಳಿದ್ದಾರೆ.
- ‘ಎಚ್–1ಬಿ ವೀಸಾ ಯೋಜನೆ ಟ್ರಂಪ್ ಆಡಳಿತದ ಆದ್ಯತೆ ಆಗಿಲ್ಲವೇ? ಒಂದು ವೇಳೆ, ಅಮೆರಿಕನ್ನರಿಗೆ ನೀಡುವ ವೇತನವನ್ನು ಹೆಚ್ಚಳ ಮಾಡಿದಲ್ಲಿ ಇತರ ದೇಶಗಳಿಂದ ಉದ್ಯೋಗ ಅರಸಿ ಇಲ್ಲಿಗೆ ಬರುವವರ ಸಂಖ್ಯೆ ಕಡಿಮೆ ಯಾಗುವುದಿಲ್ಲವೇ’ ಎಂಬ ಲಾರಾ ಅವರ ಪ್ರಶ್ನೆಗೆ ಟ್ರಂಪ್ ಈ ಪ್ರತಿಕ್ರಿಯೆ ನೀಡಿದ್ದಾರೆ.
‘ನಮ್ಮಲ್ಲಿಯೇ ಸಾಕಷ್ಟು ಪ್ರತಿಭೆಗಳಿವೆ ಯಲ್ಲ?’ ಎಂದೂ ಲಾರಾ ಪ್ರಶ್ನಿಸಿದ್ದಾರೆ.
- ಇದಕ್ಕೆ ಪ್ರತಿಕ್ರಿಯಿಸಿರುವ ಟ್ರಂಪ್, ‘ಇಲ್ಲ. ಅಮೆರಿಕವು ಕೆಲ ಕ್ಷೇತ್ರಗಳಿಗೆ ಸಂಬಂಧಿಸಿ ಪ್ರತಿಭೆಗಳನ್ನು ಹೊಂದಿಲ್ಲ. ಅಂತಹ ಪ್ರತಿಭಾವಂತರನ್ನು ಇತರ ದೇಶಗಳಿಂದ ಕರೆತರಬೇಕು. ಇಲ್ಲಿನ ಜನರು ಇನ್ನಷ್ಟು ಕಲಿಯಬೇಕಿದೆ’ ಎಂದು ಅವರು ಹೇಳಿದ್ದಾರೆ.
- ಎಚ್–1ಬಿ ವೀಸಾ ದುರ್ಬಳಕೆ ತಡೆಯುವ ಉದ್ದೇಶದಿಂದ ಕಳೆದ ವಾರ ಟ್ರಂಪ್ ಆಡಳಿತವು ತನಿಖೆ ಆರಂಭಿಸಿತ್ತು. ‘ಅಮೆರಿಕದಲ್ಲಿನ ಉದ್ಯೋಗಗಳ ಸಂರಕ್ಷಣೆ ಮಾಡುವ ಅಗತ್ಯ ಇದ್ದು, ಇದಕ್ಕಾಗಿ ಎಚ್–1ಬಿ ವೀಸಾ ದುರ್ಬಳಕೆಗೆ ಕಡಿವಾಣ ಹಾಕಬೇಕಿದೆ. ಹೀಗಾಗಿ 175 ಪ್ರಕರಣಗಳ ಕುರಿತು ತನಿಖೆ ಕೈಗೊಂಡಿದ್ದೇವೆ’ ಎಂದು ಕಾರ್ಮಿಕ ಇಲಾಖೆ ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿತ್ತು.
- ಎಚ್–1ಬಿ ವೀಸಾ ಅರ್ಜಿ ಶುಲ್ಕ ಹೆಚ್ಚಳ ಮಾಡುವ ಆದೇಶಕ್ಕೆ ಟ್ರಂಪ್ ಅವರು ಸೆಪ್ಟೆಂಬರ್ನಲ್ಲಿ ಸಹಿ ಹಾಕಿದ್ದರು. ಈ ನೂತನ ಆದೇಶದ ಪ್ರಕಾರ, ಈ ವೀಸಾಕ್ಕಾಗಿ ಹೊಸದಾಗಿ ಅರ್ಜಿ ಸಲ್ಲಿಸುವವರು 1 ಲಕ್ಷ ಡಾಲರ್(ಅಂದಾಜು ₹88 ಲಕ್ಷ) ಶುಲ್ಕ ನೀಡಬೇಕಾಗುತ್ತದೆ.
- ಟ್ರಂಪ್ ಅವರ ಈ ಕ್ರಮದಿಂದ, ಉದ್ಯೋಗ ಅರಸಿ ಅಮೆರಿಕಕ್ಕೆ ತೆರಳುವ ಭಾರತೀಯರಿಗೆ ಅದರಲ್ಲೂ ಮಾಹಿತಿ ತಂತ್ರಜ್ಞಾನ ಕ್ಷೇತ್ರದವರಿಗೆ ಭಾರಿ ಸಮಸ್ಯೆಯಾಗಿದೆ. ವಿಶೇಷ ಕೌಶಲ ಅಗತ್ಯವಿರುವ ವಿದೇಶಿ ಉದ್ಯೋಗಿಗಳನ್ನು ನೇಮಕ ಮಾಡಿಕೊಳ್ಳುವ ಅಮೆರಿಕದ ಕಂಪನಿಗಳಿಗೂ ಈ ಆದೇಶದಿಂದ ಹೊರೆಯಾಗುತ್ತಿದೆ.