ಯುಕೆಪಿಗೆ ಇಚ್ಛಾಶಕ್ತಿ ಕೊರತೆ
ಕೃಷ್ಣಾ ಕೊಳ್ಳದಲ್ಲಿ ಸಂಗ್ರಹವಾಗುವ ಒಟ್ಟು ನೀರಿನಲ್ಲಿ, ಕರ್ನಾಟಕವು 173 ಟಿಎಂಸಿ ಅಡಿಗಳಷ್ಟು ನೀರನ್ನು ಬಳಸಿಕೊಳ್ಳಬಹುದು ಎಂದು ಕೃಷ್ಣಾ ಜಲವಿವಾದ ನ್ಯಾಯಮಂಡಳಿ–2 ತೀರ್ಪಿತ್ತು 15 ವರ್ಷಗಳೇ ಕಳೆದಿವೆ.
5.95 ಲಕ್ಷ ಹೆಕ್ಟೇರ್ಗೆ ನೀರಾವರಿ ಒದಗಿಸಬಹುದಾಗಿದ್ದ ಈ ಯೋಜನೆ ವಿಳಂಬವಾದಷ್ಟೂ ರೈತರ ಬದುಕು ಹಸನಾಗುವುದು ಮುಂದೆ ಹೋಗುತ್ತಿದೆ.
ಕೃಷ್ಣಾ ಜಲವಿವಾದ ಹೊಸತಲ್ಲ. 1956ರಲ್ಲೇ ಆಂಧ್ರಪ್ರದೇಶ ನೀರು ಹಂಚಿಕೆ ಸಂಬಂಧ ತಕರಾರು ದಾಖಲಿ ಸಿತ್ತು. ಸುಪ್ರೀಂಕೋರ್ಟ್ ಮತ್ತು ಆನಂತರ ರಚನೆಯಾದ ಕೃಷ್ಣಾ ಜಲವಿವಾದ ನ್ಯಾಯಮಂಡಳಿಯು ಕಾಲಕಾಲಕ್ಕೆ ಮಹಾರಾಷ್ಟ್ರ, ಕರ್ನಾಟಕ ಮತ್ತು ಆಂಧ್ರಪ್ರದೇಶಕ್ಕೆ ನೀರು ಹಂಚಿಕೆ ಮಾಡಿ ತೀರ್ಪಿತ್ತಿದೆ. ಆ ಪ್ರಕಾರವೇ ಕರ್ನಾಟಕವು ಕೃಷ್ಣಾ ಮೇಲ್ದಂಡೆ ಹಂತ–1ರ ಕಾಮಗಾರಿ ಮುಗಿಸಿದೆ, ಹಂತ–2ರ ಕಾಮಗಾರಿ ಮುಗಿಯುವ ವಿವಿಧ ಹಂತಗಳಲ್ಲಿ ಇದೆ. ಈ ಮಧ್ಯೆಯೇ ನ್ಯಾಯಮಂಡಳಿಯು ಆಲಮಟ್ಟಿ ಅಣೆಕಟ್ಟೆಯ ಎತ್ತರವನ್ನು 519.6 ಮೀಟರ್ಗಳಿಂದ 524.25 ಮೀಟರ್ಗಳಿಗೆ ಹೆಚ್ಚಿಸಲು ಹಾಗೂ ಕರ್ನಾಟಕಕ್ಕೆ ಕೃಷ್ಣಾ ಕೊಳ್ಳದ 173 ಟಿಎಂಸಿ ನೀರು ಹಂಚಿಕೆ ಮಾಡಿ 2010ರಲ್ಲೇ ಅಂತಿಮ ತೀರ್ಪು ನೀಡಿತ್ತು.
2013ರ ನವೆಂಬರ್ನಲ್ಲಿ ಪೂರಕ ವರದಿ ನೀಡಿತ್ತು.
ನ್ಯಾಯಮಂಡಳಿಯ ತೀರ್ಪು ಪ್ರಕಟವಾಗುತ್ತಿದ್ದಂತೆ ವಿಜಯಪುರ, ಬಾಗಲಕೋಟೆ, ಯಾದಗಿರಿ, ಕಲಬುರಗಿ, ಗದಗ, ಕೊಪ್ಪಳ, ರಾಯಚೂರು ಭಾಗದ ಬಹುತೇಕ ರೈತರು, ತಮ್ಮ ಹೊಲಗಳಿಗೆ ನೀರು ಹರಿಯುವ ಮತ್ತು ತಾವು ಚಿನ್ನದ ಬೆಲೆಯ ಬೆಳೆ ಬೆಳಯುವ ಕನಸು ಕಂಡಿದ್ದರು. ರಾಜ್ಯ ಸರ್ಕಾರವು ಭೂಸ್ವಾಧೀನಕ್ಕೆ ತಯಾರಿ ನಡೆಸುತ್ತಿದ್ದಂತೆ ತಕರಾರುಗಳು ಆರಂಭವಾಗಿದ್ದವು.
2013ರಲ್ಲಿ ಅಂದಾಜಿಸಿದ್ದಂತೆ, ಅಣೆಕಟ್ಟೆಯ ಎತ್ತರವನ್ನು 524.25 ಮೀಟರ್ಗಳಿಗೆ ಹೆಚ್ಚಿಸಿದರೆ 75,000 ಎಕರೆಯಷ್ಟು ಜಮೀನು ಮುಳುಗಡೆಯಾಗಲಿದೆ. ಕಾಲುವೆ ನಿರ್ಮಾಣ ಮತ್ತಿತರ ಕಾಮಗಾರಿಯೂ ಒಳಗೊಂಡು ಒಟ್ಟು 1.33 ಲಕ್ಷ ಎಕರೆ ಪ್ರದೇಶವನ್ನು ಭೂಸ್ವಾಧೀನಕ್ಕೆ ತೆಗೆದುಕೊಳ್ಳಬೇಕಾಗುತ್ತದೆ. ರಾಜ್ಯದಲ್ಲೇ ಆವರೆಗಿನ ಅತ್ಯಂತ ದೊಡ್ಡ ನೀರಾವರಿ ಯೋಜನೆ ಅದಾಗಿತ್ತು. ಅಂತೆಯೇ ಭೂಸ್ವಾಧೀನ ಪ್ರಕ್ರಿಯೆ ವಿರುದ್ಧ ಮತ್ತು ಹೆಚ್ಚಿನ ಪರಿಹಾರ ಕೋರಿ ವಿವಿಧ ನ್ಯಾಯಾಲಯಗಳಲ್ಲಿ 28,000ಕ್ಕೂ ಹೆಚ್ಚು ಪ್ರಕರಣಗಳು ದಾಖಲಾದವು. ಬೃಹತ್ ಯೋಜನೆ ಎಂಬ ಹೆಗ್ಗಳಿಕೆ ಜತೆಗೇ ಅತಿಹೆಚ್ಚು ಪ್ರಕರಣಗಳನ್ನು ಎದುರಿಸಿದ ಯೋಜನೆ ಎಂಬ ಅಪಖ್ಯಾತಿಗೂ ಕೃಷ್ಣಾ ಮೇಲ್ದಂಡೆ –3ನೇ ಹಂತವು ಗುರಿಯಾಗಬೇಕಾಯಿತು.
ಹತ್ತಾರು ಸಾವಿರ ಪ್ರಕರಣಗಳು ಇದ್ದ ಕಾರಣಕ್ಕೆ, ಭೂಸ್ವಾಧೀನ ಪ್ರಕ್ರಿಯೆ ವಿಳಂಬವಾಯಿತು. ‘ಈ ಸಮಸ್ಯೆಯ ಗಂಭೀರತೆಯನ್ನು ಅರಿಯದ ಸರ್ಕಾರಗಳು, ಪ್ರಕರಣಗಳನ್ನು ನಿರ್ಲಕ್ಷ್ಯ ಮಾಡುತ್ತಾ ಬಂದವು. 2013ರಿಂದ ಈವರೆಗೆ ಆಡಳಿತ ನಡೆಸಿದ ಎಲ್ಲ ಪಕ್ಷಗಳ ಸರ್ಕಾರಗಳೂ ಯೋಜನೆಯನ್ನು ಕಡೆಗಣಿಸಿಯೇ ಇದ್ದವು. ಈ ಕಾರಣದಿಂದಲೇ 100 ರೂಪಾಯಿ ಪರಿಹಾರ ಕೊಡಬೇಕಾಗಿದ್ದೆಡೆ, 1,000 ರೂಪಾಯಿ ಕೊಡಬೇಕಾದ ಸ್ಥಿತಿ ಬಂದಿದೆ’ ಎಂಬುದು ನೀರಾವರಿ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರ ಟೀಕೆ.
ಯೋಜನೆಯ ರೂಪುರೇಷೆ ಸಿದ್ಧಪಡಿಸಿದ್ದಾಗ ₹17,600 ಕೋಟಿ ವೆಚ್ಚವನ್ನು ಅಂದಾಜು ಮಾಡಲಾಗಿತ್ತು. ಪ್ರಕರಣಗಳು ವಿಳಂಬವಾದಂತೆ ಒಮ್ಮೆ ವೆಚ್ಚವನ್ನು ₹24,000 ಕೋಟಿಗೆ, ಇನ್ನೊಮ್ಮೆ ₹51,148 ಕೋಟಿಗೆ, ಈಗ ಮತ್ತೆ ₹1 ಲಕ್ಷ ಕೋಟಿಗೆ ಪರಿಷ್ಕರಿಸಲಾಗಿದೆ. ಇದರಲ್ಲಿ ಭೂಸ್ವಾಧೀನ ಪ್ರಕ್ರಿಯೆಗೇ ಸುಮಾರು ₹80,000 ಕೋಟಿ ಬೇಕಾಗುತ್ತದೆ ಎಂಬುದು ಸರ್ಕಾರದ ಅಂದಾಜು. ಒಂದು ಹಂತದಲ್ಲಿ ಭೂಸ್ವಾಧೀನದ ವೆಚ್ಚವೇ ₹2.10 ಲಕ್ಷ ಕೋಟಿಗೆ ಮುಟ್ಟುವಂತಹ ಸ್ಥಿತಿ ಎದುರಾಗಿತ್ತು. ‘ಬಾಗಲಕೋಟೆಯ ಒಂದು ಜಮೀನಿಗೆ ಪ್ರತಿ ಎಕರೆಗೆ ₹23 ಕೋಟಿ, ವಿಜಯಪುರದಲ್ಲಿ ಒಂದು ಎಕರೆಗೆ ₹11.92 ಕೋಟಿ ಪರಿಹಾರ ನೀಡುವಂತೆ ವಿವಿಧ ನ್ಯಾಯಾಲಯಗಳು ಆದೇಶ ನೀಡಿದ್ದವು. ಆ ಪ್ರಕಾರ ಒಟ್ಟು 75,000 ಎಕರೆ ಭೂಸ್ವಾಧೀನಕ್ಕೆ ₹2.10 ಲಕ್ಷ ಕೋಟಿ ಬೇಕಾಗುತ್ತದೆ’ ಎಂದು ನೀರಾವರಿ ಸಚಿವರೂ ಆದ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ವಿಧಾನಸಭೆಗೆ ಉತ್ತರ ನೀಡಿದ್ದರು.
ಭೂಸ್ವಾಧೀನದ ವೆಚ್ಚವೇ ₹2 ಲಕ್ಷ ಕೋಟಿ ದಾಟುತ್ತದೆ ಎಂಬುದು ಗೊತ್ತಾದಾಗ, ಇನ್ನು ಈ ಯೋಜನೆ ಸಂಪೂರ್ಣವಾಗಿ ನನೆಗುದಿಗೆ ಬಿದ್ದಹಾಗೆ ಎಂಬುದು ಉತ್ತರ ಕರ್ನಾಟಕದ ರೈತರು ಕೈಚೆಲ್ಲಿದ್ದರು. ವಿರೋಧ ಪಕ್ಷಗಳು ಮತ್ತು ಆಡಳಿತ ಪಕ್ಷದ ಕೆಲ ಶಾಸಕರು, ಈ ಯೋಜನೆ ಅನುಷ್ಠಾನ ಸಾಧ್ಯವೇ ಇಲ್ಲ ಎಂಬಂತಹ ಹೇಳಿಕೆಗಳನ್ನು ನೀಡಿದರು. ಯೋಜನೆ ಕೈತಪ್ಪುವ ಅಪಾಯವನ್ನು ಅರಿತ ಸರ್ಕಾರ ತಡವಾಗಿಯಾದರೂ ಎಚ್ಚೆತ್ತುಕೊಂಡಿತು.
ಭೂಮಿ ಕಳೆದುಕೊಳ್ಳಲಿರುವ ರೈತರ ಜಮೀನಿಗೆ ಏಕರೀತಿಯ ಪರಿಹಾರ ನಿಗದಿ ಮಾಡಲು ಮತ್ತು ನ್ಯಾಯಾಲಯಗಳಲ್ಲಿ ಇರುವ ಪ್ರಕರಣಗಳನ್ನು ಹಿಂಪಡೆಯುವಂತೆ ರೈತರ ಮನವೊಲಿಸಲು ಮುಂದಾಯಿತು. ರೈತ ಮುಖಂಡರ ಜತೆಗೆ, ಸಂಬಂಧಿತ ಜಿಲ್ಲೆಯ ಜನಪ್ರತಿನಿಧಿಗಳ ಜತೆಗೆ ಸಾಲು–ಸಾಲು ಸಭೆ ನಡೆಸಿತು. ಕಡೆಗೆ ಪ್ರತಿ ಎಕರೆ ಖುಷ್ಕಿ ಜಮೀನಿಗೆ ₹25 ಲಕ್ಷ ಮತ್ತು ಪ್ರತಿ ಎಕರೆ ನೀರಾವರಿ ಜಮೀನಿಗೆ ₹30 ಲಕ್ಷ ನಿಗದಿ ಮಾಡುವುದಾಗಿ ಘೋಷಿಸಿತು. ಈ ಮೊತ್ತದ ಪರಿಹಾರಕ್ಕೆ ರೈತರಿಂದ ಮತ್ತೆ ವ್ಯಾಪಕ ವಿರೋಧ ವ್ಯಕ್ತವಾಯಿತು. ಮತ್ತಷ್ಟು ಸುತ್ತಿನ ಸಭೆ ನಡೆಸಿದ ಸರ್ಕಾರವು ಪ್ರತಿ ಎಕರೆ ಖುಷ್ಕಿ ಜಮೀನಿಗೆ ₹30 ಲಕ್ಷ ಮತ್ತು ಪ್ರತಿ ಎಕರೆ ನೀರಾವರಿ ಜಮೀನಿಗೆ ₹40 ಲಕ್ಷ ಪರಿಹಾರವನ್ನು ನಿಗದಿಪಡಿಸಿತು.
ಇಷ್ಷಕ್ಕೇ, ಈ ಯೋಜನೆಯ ಕಾಮಗಾರಿ ಆರಂಭವಾಗುತ್ತದೆ ಎಂದುಕೊಂಡರೆ ತಪ್ಪಾಗುತ್ತದೆ. ಏಕೆಂದರೆ ಇನ್ನು 13,900ಕ್ಕೂ ಹೆಚ್ಚು ಪ್ರಕರಣಗಳು ನ್ಯಾಯಾಲಯದಲ್ಲಿ ಇವೆ. ರೈತರು ಆ ಎಲ್ಲ ಪ್ರಕರಣಗಳನ್ನು ವಾಪಸ್ ಪಡೆಯಬೇಕು. ಆನಂತರವೇ ಸರ್ಕಾರ ಭೂಸ್ವಾಧೀನ ಪ್ರಕ್ರಿಯೆ ಆರಂಭಿಸಲು ಸಾಧ್ಯವಾಗುತ್ತದೆ. ಆದರೆ ಈ ಕೆಲಸ ಅಷ್ಟು ಸುಲಭದಂತೆ ಕಾಣುತ್ತಿಲ್ಲ. ಭೂಸ್ವಾಧೀನ ವಿಳಂಬವಾದರೆ, ವೆಚ್ಚ ಇನ್ನಷ್ಟು ಹೆಚ್ಚಾಗಲಿದೆ ಎಂಬ ಅಪಾಯವೂ ಇದ್ದೇ ಇದೆ. ಒಟ್ಟಿನಲ್ಲಿ ಭೂಸ್ವಾಧೀನ ವಿರೋಧಿಸಿ ಮತ್ತು ಹೆಚ್ಚಿನ ಪರಿಹಾರ ಕೋರಿ ದಾಖಲಿಸಲಾದ ಪ್ರಕರಣಗಳ ನಿರ್ವಹಣೆಯಲ್ಲಿ ಎಲ್ಲ ಸರ್ಕಾರಗಳು ಹಾಗೂ ಸಂಬಂಧಿತ ಅಧಿಕಾರಿಗಳು ಎಡವಿದ ಕಾರಣಕ್ಕೆ ₹17,600 ಕೋಟಿ ವೆಚ್ಚದ ಯೋಜನೆ, ಈಗ ₹1 ಲಕ್ಷ ಕೋಟಿಯಷ್ಟಾಗಿದೆ.
ನ್ಯಾಯಮಂಡಳಿಯು 2010ರಲ್ಲಿ ತೀರ್ಪು ನೀಡಿದ ಮತ್ತು ಅಣೆಕಟ್ಟೆ ಎತ್ತರವನ್ನು 1956ರ ಮೂಲ ಯೋಜನೆಯಲ್ಲಿ ಇದ್ದಂತೆ 524.25 ಮೀಟರ್ಗೆ ಹೆಚ್ಚಿಸಲು ಸುಪ್ರೀಂ ಕೋರ್ಟ್ ಅನುಮತಿ ನೀಡಿದ ನಂತರ ಕೇಂದ್ರ ಸರ್ಕಾರವು ಈ ಸಂಬಂಧ ಅಧಿಸೂಚನೆ ಹೊರಡಿಸಬೇಕಿತ್ತು. ಆದರೆ ಈವರೆಗೆ ಅಂತಹ ಅಧಿಸೂಚನೆ ಹೊರಡಿಸಿಲ್ಲ.
ಕೃಷ್ಣಾ ಜಲವಿವಾದ ನ್ಯಾಯಮಂಡಳಿ–2, ‘ಈ ತೀರ್ಪಿನ ಅನುಷ್ಠಾನಕ್ಕಾಗಿ ಕೃಷ್ಣಾ ಜಲ ತೀರ್ಪು ಅನುಷ್ಠಾನ ಮಂಡಳಿ ರಚಿಸಬೇಕು’ ಎಂದು ತೀರ್ಪಿನಲ್ಲಿ ಆದೇಶಿಸಿತ್ತು. ಆದರೆ ಈವರೆಗೆ ಅನುಷ್ಠಾನ ಮಂಡಳಿ ರಚನೆಯಾಗಿಲ್ಲ.
2010ರ ತೀರ್ಪಿನ ವಿರುದ್ಧ ಆಂಧ್ರಪ್ರದೇಶ ಸರ್ಕಾರ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದೆ.
‘ಮುಂದಿನ ಆದೇಶದವರೆಗೆ, ನ್ಯಾಯಮಂಡಳಿಯು ತೆಗೆದುಕೊಳ್ಳಬಹುದಾದ ಯಾವುದೇ ನಿರ್ಧಾರಗಳಿಗೆ ಅಧಿಸೂಚನೆ ಹೊರಡಿಸಬಾರದು’ ಎಂದು ತಡೆಯಾಜ್ಞೆ ನೀಡಿದೆ. ಇದು ಪೂರ್ವಾನ್ವಯ ಆಗದೇ ಇದ್ದರೂ, ಕೇಂದ್ರ ಸರ್ಕಾರದ ಪ್ರತಿನಿಧಿಗಳು ಕೃಷ್ಣಾ ಮೇಲ್ದಂಡೆ ಯೋಜನೆಗೆ ಅಧಿಸೂಚನೆ ಹೊರಡಿಸದೇ ಇರಲು ಈ ತಡೆಯಾಜ್ಞೆಯನ್ನು ಮುಂದು ಮಾಡಿದ್ದಿದೆ. ಈ ತಡೆಯಾಜ್ಞೆ ವಿರುದ್ಧ ಮೇಲ್ಮನವಿ ಸಲ್ಲಿಸಿ ಎಂದು ರಾಜ್ಯ ಸರ್ಕಾರವು ಕೋರಿದ್ದರೂ, 14 ವರ್ಷದಲ್ಲಿ ಕೇಂದ್ರ ಸರ್ಕಾರವು ಅಂತಹದ್ದೊಂದು ಕ್ರಮ ತೆಗೆದುಕೊಂಡಿಲ್ಲ.
ಕೃಷ್ಣಾ ನದಿಯ ನೀರನ್ನು ಮಹಾರಾಷ್ಟ್ರ, ಕರ್ನಾಟಕ ಮತ್ತು ಆಂಧ್ರಪ್ರದೇಶ ರಾಜ್ಯಗಳು ಅವಲಂಬಿಸಿರುವ ಕಾರಣಕ್ಕೆ ನದಿಯ ಪಾತ್ರದಲ್ಲಿ ಕೈಗೊಳ್ಳುವ ಯಾವುದೇ ಕಾಮಗಾರಿಗೆ ಕೇಂದ್ರ ಸರ್ಕಾರವು ಅಧಿಸೂಚನೆ ಹೊರಡಿಸುವುದು ಕಡ್ಡಾಯ. ಬೃಹತ್ ಯೋಜನೆ ಆಗಿರುವ ಕಾರಣಕ್ಕೆ ಇದನ್ನು ‘ರಾಷ್ಟ್ರೀಯ ಯೋಜನೆ’ ಎಂದೂ ಘೋಷಿಸಬೇಕಾಗುತ್ತದೆ. ಕೃಷ್ಣಾ ಮೇಲ್ದಂಡೆ ಯೋಜನೆ–3ನೇ ಹಂತ ಅನುಷ್ಠಾನಕ್ಕೆ ಬಂದರೆ ಮಹಾರಾಷ್ಟ್ರಕ್ಕೂ ಹೆಚ್ಚು ನೀರು ಲಭ್ಯವಾಗುತ್ತದೆ ಮತ್ತು ಆಂಧ್ರಪ್ರದೇಶಕ್ಕೂ ಜಲಾಶಯದಿಂದ ಹೆಚ್ಚು ನೀರು ಬಿಡಬೇಕಾಗುತ್ತದೆ. ಆದರೆ ಪ್ರಮುಖ ಕಾಮಗಾರಿಗಳೆಲ್ಲವೂ ಕರ್ನಾಟಕ ನೆಲದಲ್ಲಿ ನಡೆಯುತ್ತದೆ ಹಾಗೂ ಪೂರ್ಣ ವೆಚ್ಚವನ್ನು ಕರ್ನಾಟಕವೇ ಭರಿಸಬೇಕಾಗುತ್ತದೆ. ಇದೊಂದು ರೀತಿಯಲ್ಲಿ ಕರ್ನಾಟಕವು ಹೊರೆ ಹೊತ್ತುಕೊಂಡು ಮಹಾರಾಷ್ಟ್ರಕ್ಕೆ ಮತ್ತು ಆಂಧ್ರಪ್ರದೇಶಕ್ಕೆ ನೀರಿನ ಅನುಕೂಲ ಮಾಡಿಕೊಡುವ ಕೆಲಸವಾಗುತ್ತದೆ.
ಕರ್ನಾಟಕಕ್ಕೆ ಆಗುವ ಈ ಹೆಚ್ಚಿನ ಹೊರೆಯನ್ನು ತಪ್ಪಿಸಲು ಕೇಂದ್ರ ಸರ್ಕಾರವೂ ಒಂದಷ್ಟು ಹಣ ಬಿಡುಗಡೆ ಮಾಡಬೇಕಾಗುತ್ತದೆ. ಕೇಂದ್ರವು ಹಾಗೆ ಹಣ ಬಿಡುಗಡೆ ಮಾಡಲು ಅಧಿಸೂಚನೆ ಹೊರಡಿಸಿದ್ದರಷ್ಟೇ ಸಾಧ್ಯ.
‘ಜಲ ವ್ಯವಹಾರಗಳ ಸಂಸದೀಯ ಸಮಿತಿಯು 2018ರಲ್ಲಿ ಕೇಂದ್ರ ಸರ್ಕಾರಕ್ಕೆ ಸಲ್ಲಿಸಿದ್ದ ವರದಿಯ ಪ್ರಕಾರ ಕೃಷ್ಣಾ ಮೇಲ್ದಂಡೆ ಯೋಜನೆಯನ್ನು ‘ರಾಷ್ಟ್ರೀಯ ಯೋಜನೆ’ ಎಂದು ಘೋಷಿಸಿದರೆ, ಕೇಂದ್ರವು ಅಂದಾಜು ₹29,000 ಕೋಟಿಯನ್ನು ರಾಜ್ಯಕ್ಕೆ ನೀಡಬೇಕಾಗುತ್ತದೆ. ₹19,000 ಕೋಟಿಯಷ್ಟು ನೇರವಾಗಿ ಯೋಜನೆಗೆ ನೀಡಿದರೆ, ಕೇಂದ್ರ ಪ್ರಾಯೋಜಿತ ವಿವಿಧ ನೀರಾವರಿ ಯೋಜನೆಗಳ ಅಡಿಯಲ್ಲಿ ಸುಮಾರು ₹10,000 ಕೋಟಿಯನ್ನು ಕರ್ನಾಟಕಕ್ಕೆ ಒದಗಿಸಬೇಕಾಗುತ್ತದೆ. ಇದು ರಾಜ್ಯ ಸರ್ಕಾರದ ವೆಚ್ಚವನ್ನು ಶೇ 30ರಷ್ಟು ಕಡಿಮೆ ಮಾಡುವ ಸಂಭವವಿತ್ತು. ಆದರೆ ಈ ವರದಿಯನ್ನು ಕೇಂದ್ರವು ಗಂಭೀರವಾಗಿ ಪರಿಗಣಿಸಲೇ ಇಲ್ಲ. ಸಮಿತಿ ಮತ್ತೊಮ್ಮೆ ಅಂತಹ ವರದಿ ನೀಡಲಿಲ್ಲ. ಯೋಜನೆ ಕುರಿತಾಗಿ ಅಧಿಸೂಚನೆ ಹೊರಡಿಸುವ ಬಗ್ಗೆ ಕೇಂದ್ರ ಸರ್ಕಾರ ಯಾವ ತರಹದ ಕ್ರಮವನ್ನೂ ತೆಗೆದುಕೊಂಡಿಲ್ಲ’ ಎಂಬುದು ಕರ್ನಾಟಕ ನೀರಾವರಿ ನಿಗಮದ ಅಧಿಕಾರಿಯೊಬ್ಬರ ಆರೋಪ.
2010ರಿಂದ 2023ರವರೆಗೆ ರಾಜ್ಯದಲ್ಲಿ ಐದು ಸರ್ಕಾರಗಳು ಆಡಳಿತ ನಡೆಸಿದ್ದು, ಕೇಂದ್ರದಿಂದ ಅಧಿಸೂಚನೆ ಪಡೆಯುವಂತೆ ಮಾಡುವಲ್ಲಿ ವಿಫಲವಾಗಿವೆ. ಈಗಿನ ಕಾಂಗ್ರೆಸ್ ಸರ್ಕಾರವು, ‘ಅಧಿಸೂಚನೆ ಹೊರಡಿಸಿ’ ಎಂದು ಕೇಂದ್ರಕ್ಕೆ ಹಲವು ಬಾರಿ ಪತ್ರ ಬರೆದಿದೆ. ಮುಖ್ಯಮಂತ್ರಿ, ನೀರಾವರಿ ಸಚಿವರೂ ಆಗಿರುವ ಉಪ ಮುಖ್ಯಮಂತ್ರಿ ಪತ್ರ ಬರೆದಿದ್ದಾರೆ. ಆದರೆ ಕೇಂದ್ರ ಸರ್ಕಾರವು ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಈ ಸಂಬಂಧ ಕೇಂದ್ರಕ್ಕೆ ಸರ್ವಪಕ್ಷ ನಿಯೋಗ ಕರೆದೊಯ್ಯುವುದಾಗಿ ರಾಜ್ಯ ಸರ್ಕಾರವು ಹಲವು ಬಾರಿ ಹೇಳಿದೆ. ಆದರೆ, ಅದೂ ಸಾಧ್ಯವಾಗಿಲ್ಲ.
ಕೇಂದ್ರದ ಆಡಳಿತಾರೂಢ ಎನ್ಡಿಎ ಮೈತ್ರಿಕೂಟದ ಪಕ್ಷಗಳ ಸಂಸದರು ಈವರೆಗೆ ಈ ವಿಷಯದ ಬಗ್ಗೆ ಪ್ರಸ್ತಾಪಿಸಿಲ್ಲ.
ಮಹಾರಾಷ್ಟ್ರ ತಕರಾರು, ಆಂಧ್ರದ ಅಸಹಕಾರ
ಅಣೆಕಟ್ಟೆಯ ಎತ್ತರವನ್ನು ಹೆಚ್ಚಿಸಿದರೆ ತಮ್ಮ ಸಾಂಗ್ಲಿ ಮತ್ತು ಕೊಲ್ಲಾಪುರ ಜಿಲ್ಲೆಗಳಲ್ಲಿ ಪ್ರವಾಹ ತಲೆದೋರುತ್ತದೆ ಎಂದು ಮಹಾರಾಷ್ಟ್ರ ಸರ್ಕಾರವು ಇತ್ತೀಚೆಗೆ ತಕರಾರು ಎತ್ತಿದೆ. ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್ ಅವರು ಈ ಬಗ್ಗೆ ಸಾರ್ವಜನಿಕ ಸಭೆಗಳಲ್ಲಿ ಮಾತನಾಡಿದ್ದಲ್ಲದೆ, ಕೇಂದ್ರ ಸರ್ಕಾರದಲ್ಲೂ ತಕರಾರು ದಾಖಲಿಸಿದ್ದರು.
‘ಮಹಾರಾಷ್ಟ್ರದ ಈ ನಡೆಯ ಹಿಂದೆ ರಾಜಕೀಯವಲ್ಲದೆ ಬೇರೇನಿಲ್ಲ. ಸಾಂಗ್ಲಿ ಮತ್ತು ಕೊಲ್ಲಾಪುರದಲ್ಲಿ ನದಿಪಾತ್ರವನ್ನು ಒತ್ತುವರಿ ಮಾಡಿರುವುದರಿಂದ ಪ್ರವಾಹ ಉಂಟಾಗುತ್ತಿದೆ. ಆಲಮಟ್ಟಿ ಅಣೆಕಟ್ಟಿನ ಎತ್ತರ ಹೆಚ್ಚಿಸುವುದರಿಂದ ಯಾವುದೇ ಅಪಾಯವಿಲ್ಲ ಎಂದು ಮಹಾರಾಷ್ಟ್ರ ಸರ್ಕಾರವೇ ಜಲತಜ್ಞ ವಡ್ನೇರೆ ನೇತೃತ್ವದ ತಜ್ಞರ ಸಮಿತಿ 2019ರಲ್ಲಿ ಮನವಿ ಸಲ್ಲಿಸಿತ್ತು. ಸುಪ್ರೀಂ ಕೋರ್ಟ್ ಸಹ ಈ ವರದಿಯನ್ನು ಒಪ್ಪಿಕೊಂಡಿತ್ತು. ಆದರೆ ದೇವೇಂದ್ರ ಫಡಣವೀಸ್ ಅವರು ರಾಜಕೀಯಕ್ಕಾಗಿ ತಕರಾರು ಎತ್ತುತ್ತಿದ್ದಾರೆ’ ಎಂದು ಈ ಹಿಂದೆ ನೀರಾವರಿ ಖಾತೆ ನಿರ್ವಹಿಸಿದ್ದ ಸಚಿವ ಎಂ.ಬಿ.ಪಾಟೀಲ ಅವರು ಬಹಿರಂಗವಾಗಿಯೇ ಹೇಳಿದ್ದರು.
ಇನ್ನು ಯೋಜನೆ ಸಂಬಂಧ ಕೇಂದ್ರವು ಅಧಿಸೂಚನೆ ಹೊರಡಿಸದೇ ಇರುವ ಬಗ್ಗೆ ತಕರಾರು ದಾಖಲಿಸಲು ಹಾಗೂ ಅಧಿಸೂಚನೆ ಹೊರಡಿಸುವಂತೆ ಒತ್ತಡ ಹೇರಲು ರಾಜ್ಯ ಸರ್ಕಾರವು ಆಂಧ್ರಪ್ರದೇಶ ಸರ್ಕಾರವನ್ನು ಹಲವು ಭಾರಿ ಕೋರಿದೆ. ಯೋಜನೆಯ ಅತ್ಯಂತ ದೊಡ್ಡ ಫಲಾನುಭವಿ ಆದ ಆಂಧ್ರವು (ಆಂಧ್ರಕ್ಕೆ 193 ಟಿಎಂಸಿ ಅಡಿ, ಕರ್ನಾಟಕಕ್ಕೆ 173 ಟಿಎಂಸಿ ಅಡಿ ನೀರು ಹಂಚಿಕೆಯಾಗಿದೆ) ಈ ಕೋರಿಕೆಗೆ ಸ್ಪಂದಿಸಿಲ್ಲ. ಆಂಧ್ರದಲ್ಲಿ ಸರ್ಕಾರ ನಡೆಸುತ್ತಿರುವ ಟಿಡಿಪಿ ಪಕ್ಷವು ಕೇಂದ್ರ ಸರ್ಕಾರದ ಬಹುಮುಖ್ಯ ಮಿತ್ರ ಪಕ್ಷ. ಆದರೂ ಕರ್ನಾಟಕ ಸರ್ಕಾರದ ಪ್ರಯತ್ನಕ್ಕೆ ಟಿಡಿಪಿ ಸಹಕರಿಸುತ್ತಿಲ್ಲ.
‘ಆಂಧ್ರಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರಿಗೆ ನಾನೇ ಸ್ವತಃ 30 ಬಾರಿ ಕರೆ ಮಾಡಿದ್ದೇನೆ. ಆದರೆ ಅವರು ಸರಿಯಾಗಿ ಸ್ಪಂದಿಸುತ್ತಿಲ್ಲ. ಕೃಷ್ಣಾ ಮೇಲ್ದಂಡೆ ಯೋಜನೆಗೆ ಕೇಂದ್ರವು ಅಧಿಸೂಚನೆ ಹೊರಡಿಸಿದರಷ್ಟೇ ಅನುಷ್ಠಾನ ಸಾಧ್ಯ. ಅವರು ತಮ್ಮ ರಾಜಕೀಯ ಹಿತಾಸಕ್ತಿಗಾಗಿ ಅವರ ರಾಜ್ಯದ ಜನರ ಹಿತಾಸಕ್ತಿ ಬಲಿಕೊಡುತ್ತಿದ್ದಾರೆ. ಜತೆಗೆ, ಕರ್ನಾಟಕದ ರೈತರನ್ನು ನ್ಯಾಯವಂಚಿತರನ್ನಾಗಿಸುತ್ತಿದ್ದಾರೆ. ತುಂಗಭದ್ರಾ ಅಣೆಕಟ್ಟೆಯ ಕ್ರೆಸ್ಟ್ಗೇಟ್ಗಳನ್ನು ಬದಲಿಸುವ ವಿಚಾರದಲ್ಲೂ ಅವರು ಇಂಥದ್ದೇ ರಾಜಕೀಯ ಮಾಡುತ್ತಿದ್ದಾರೆ’ ಎಂಬುದು ಡಿ.ಕೆ.ಶಿವಕುಮಾರ್ ಅವರ ಆರೋಪ.
ರಾಜ್ ಕುಮಾರ್ ಗೋಯಲ್ ನೂತನ ಮುಖ್ಯ ಮಾಹಿತಿ ಆಯುಕ್ತ
ಕೇಂದ್ರ ಮಾಹಿತಿ ಆಯೋಗದ ಮುಖ್ಯ ಮಾಹಿತಿ ಆಯುಕ್ತರನ್ನಾಗಿ (ಸಿಐಸಿ) ಮಾಜಿ ಕಾನೂನು ಕಾರ್ಯದರ್ಶಿ ರಾಜ್ ಕುಮಾರ್ ಗೋಯಲ್ ಅವರನ್ನು ನೇಮಕ ಮಾಡಲಾಗಿದೆ. ಇವರೊಂದಿಗೆ 8 ಆಯುಕ್ತರನ್ನೂ ನೇಮಿಸಲಾಗಿದೆ.
ಆಯೋಗದಲ್ಲಿ ಖಾಲಿ ಇದ್ದ ಎಲ್ಲ ಸ್ಥಾನಗಳು ಕಳೆದ 7 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಭರ್ತಿಯಾಗಿವೆ. ಇದೇ ಸೆಪ್ಟೆಂಬರ್ನಲ್ಲಿ ನಿವೃತ್ತರಾದ ಹೀರಾಲಾಲ್ ಸಮಾರಿಯಾ ಅವರ ಬಳಿಕ ಆಯೋಗಕ್ಕೆ ಮುಖ್ಯ ಮಾಹಿತಿ ಆಯುಕ್ತರೇ ಇಲ್ಲದಂತಾಗಿತ್ತು. ಈವರೆಗೆ ಆಯೋಗದಲ್ಲಿ ಇಬ್ಬರೇ ಆಯುಕ್ತರು ಕಾರ್ಯನಿರ್ವಹಿಸುತ್ತಿದ್ದರು.
ಸೋಮವಾರ ಬೆಳಿಗ್ಗೆ 11 ಗಂಟೆಗೆ ಗೋಯಲ್ ಅವರು ಪ್ರಮಾಣವಚನ ಸ್ವೀಕರಿಸಲಿದ್ದಾರೆ. ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಪ್ರಮಾಣವಚನ ಬೋಧಿಸಲಿದ್ದಾರೆ. ಬಳಿಕ, ಗೋಯಲ್ ಅವರು 8 ಆಯುಕ್ತರಿಗೆ ಪ್ರಮಾಣವಚನ ಬೋಧಿಸಲಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಆಯ್ಕೆ ಸಮಿತಿಯು ಖಾಲಿ ಇದ್ದ ಹುದ್ದೆಗಳಿಗೆ ನೇಮಕಾತಿ ಮಾಡಿದೆ. ಸಮಿತಿಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಇದ್ದರು.
‘ಆಯುಕ್ತರ ಆಯ್ಕೆಯಲ್ಲಿ ಬಹುಜನ ಸಮಾಜಕ್ಕೆ ಮನ್ನಣೆ ನೀಡಲಾಗಿಲ್ಲ’ ಎಂದು ರಾಹುಲ್ ತಮ್ಮ ಆಕ್ಷೇಪ ಮುಂದಿಟ್ಟಿದ್ದರು. ಆದರೆ, ಈ ಆಕ್ಷೇಪವನ್ನು ಕೇಂದ್ರ ತಳ್ಳಿ ಹಾಕಿದೆ. ಹೀರಾಲಾಲ್ ಅವರು ದಲಿತ ಸಮುದಾಯಕ್ಕೆ ಸೇರಿದ ಮೊದಲ ಮುಖ್ಯ ಮಾಹಿತಿ ಆಯುಕ್ತರಾಗಿದ್ದರು.
ಮೂವರು ಮಹಿಳಾ ಆಯುಕ್ತರು
ರೈಲ್ವೆ ಮಂಡಳಿಯ ಮಾಜಿ ಮುಖ್ಯಸ್ಥೆ ಜಯಾ ವರ್ಮಾ ಸಿನ್ಹಾ, ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ನಿಯಂತ್ರಕ ಮಂಡಳಿಯ ಸದಸ್ಯರಾಗಿದ್ದ ಸುಧಾ ರಾಣಿ ರೇಲಂಗಿ ಅವರನ್ನು ಹೊಸದಾಗಿ ನೇಮಕ ಮಾಡಲಾಗಿದೆ. ಈ ಮೂಲಕ ಆಯೋಗದಲ್ಲಿ ಸದ್ಯ ಮೂವರು ಮಹಿಳಾ ಮಾಹಿತಿ ಆಯುಕ್ತರಾಗಿದ್ದಾರೆ. ಸತರ್ಕ್ ನಾಗರಿಕ್ ಸಂಘಟನ್ ಅವರ ಅಧ್ಯಯನದ ಪ್ರಕಾರ, ಮಾಹಿತಿ ಆಯುಕ್ತರಲ್ಲಿ ನೇಮಕವಾಗುವ ಒಟ್ಟು ಅಧಿಕಾರಿಗಳ ಪೈಕಿ ಶೇ 9ರಷ್ಟು ಮಾತ್ರ ಮಹಿಳೆಯಾಗಿರುತ್ತಾರೆ.
ಅರ್ಧದಷ್ಟು ಮಂದಿ ಅಧಿಕಾರಿ ವರ್ಗದವರು: ಆಯೋಗಕ್ಕೆ ನೇಮಕ ಆಗಿರುವವರಲ್ಲಿ ಅರ್ಧದಷ್ಟು ಮಂದಿ ಮಾಜಿ ಅಧಿಕಾರಿಗಳಾಗಿದ್ದಾರೆ. ಮಾಹಿತಿ ಆಯುಕ್ತರಾಗಿ ನೇಮಕವಾಗುವವರಲ್ಲಿ ಶೇ 58ರಷ್ಟು ಮಂದಿ ಸರ್ಕಾರದ ನಿವೃತ್ತ ಅಧಿಕಾರಿಗಳಾಗಿರುತ್ತಾರೆ ಎಂದು ಇದೇ ಸಂಘಟನೆಯ ಅಧ್ಯಯನ ತಿಳಿಸಿದೆ.