ಭಾರತಕ್ಕೆ ಮುಂದಿನ ವರ್ಷದಿಂದ ಎಲ್ಎಂಜಿ ಪೂರೈಕೆ ಶುರು
ಜನವರಿಯಿಂದ ಭಾರತಕ್ಕೆ ಎಲ್ಎಂಜಿ (ಲೈಟ್ ಮಶಿನ್ ಗನ್) ಪೂರೈಕೆ ಆರಂಭಿಸಲಾಗುವುದು ಎಂದು ಇಸ್ರೇಲ್ನ ಪ್ರಮುಖ ರಕ್ಷಣಾ ಸಾಮಗ್ರಿ ತಯಾರಕ ಸಂಸ್ಥೆಯೊಂದು ಹೇಳಿದೆ.
1.70 ಲಕ್ಷ ಹೊಸ ತಲೆಮಾರಿನ ರೈಫಲ್ಗಳ (ಎಲ್ಎಂಜಿ) ಪೂರೈಕೆಗೆ ಸಂಬಂಧಿಸಿದ ಒಪ್ಪಂದವು ಅಂತಿಮ ಹಂತದಲ್ಲಿದೆ. ಇದು, ಪೂರ್ಣಗೊಂಡ ಬಳಿಕ ಮೊದಲ ಹಂತದಲ್ಲಿ 40 ಸಾವಿರ ಎಲ್ಎಂಜಿ ಪೂರೈಕೆ ಮಾಡಲಾಗುವುದು ಎಂದು ಇಸ್ರೇಲ್ ವೆಪನ್ಸ್ ಇಂಡಸ್ಟ್ರೀಜ್ (ಐಡಬ್ಲುಐ) ಸಿಇಒ ಶುಕಿ ಸ್ವಾರ್ಟ್ಸ್ ಹೇಳಿದ್ದಾರೆ.
‘ಮುಂದಿನ ವರ್ಷದಿಂದ ಆರಂಭವಾಗಿ ಮುಂದಿನ ಐದು ವರ್ಷಗಳ ವರೆಗೆ ಈ ರೈಫಲ್ಗಳ ಪೂರೈಕೆ ಪ್ರಕ್ರಿಯೆ ನಡೆಯುವುದು. ವರ್ಷಾರಂಭಕ್ಕೆ ಮೊದಲ ಹಂತದ ಪೂರೈಕೆಗೆ ಚಾಲನೆ ನೀಡಲಾಗುವುದು’ ಎಂದು ಹೇಳಿದ್ದಾರೆ.
‘ಭಾರತಕ್ಕೆ ರಕ್ಷಣಾ ಸಾಮಗ್ರಿಗಳ ಪೂರೈಕೆಗೆ ಸಂಬಂಧಿಸಿ ಎಲ್ಎಂಜಿ ಪೂರೈಕೆ ಸೇರಿ ಮೂರು ಮಹತ್ವದ ಒಪ್ಪಂದಗಳನ್ನು ಮಾಡಿಕೊಳ್ಳಲಾಗುತ್ತಿದೆ. ಸಿಕ್ಯೂಬಿ(ಕ್ಲೋಸ್ ಕ್ವಾರ್ಟರ್ಸ್ ಬ್ಯಾಟಲ್) ರೈಫಲ್ ಹಾಗೂ ಅಬೆಲ್ ತಂತ್ರಜ್ಞಾನ ಆಧಾರಿತ ಶಸ್ತ್ರಾಸ್ತ್ರ ಪೂರೈಕೆ ಇತರ ಒಪ್ಪಂದಗಳಾಗಿದ್ದು, ಇವುಗಳ ಕುರಿತು ಇನ್ನೂ ಮಾತುಕತೆ ನಡೆಯುತ್ತಿದೆ’ ಎಂದು ಹೇಳಿದ್ದಾರೆ.
‘ಎಲ್ಎಂಜಿಗಳ ಪರೀಕ್ಷಾರ್ಥ ಪ್ರಯೋಗಗಳು ಪೂರ್ಣಗೊಂಡಿದ್ದು, ಸರ್ಕಾರದಿಂದಲೂ ಪರಿಶೀಲನೆಯಾಗಿದೆ. ಇವುಗಳ ತಯಾರಿಕೆಗೆ ಪರವಾನಗಿ ಲಭಿಸಿದೆ. ಸ್ಥಳೀಯವಾಗಿ ಉತ್ಪಾದನೆ ಆರಂಭಿಸುವ ಮೂಲಕ ಮೇಕ್ ಇನ್ ಇಂಡಿಯಾ ಕಾರ್ಯಕ್ರಮಕ್ಕೆ ಬೆಂಬಲಿಸಿದ ಮೊದಲ ಕಂಪನಿ ನಮ್ಮದು’ ಎಂದೂ ಅವರು ಹೇಳಿದ್ದಾರೆ.
ರಷ್ಯಾ: ಬಿಡಿಭಾಗ ಉತ್ಪಾದನೆಗೆ ಅಸ್ತು‘ಭಾರತದಲ್ಲೇ ತಯಾರಿಸಿ’ ಅಭಿಯಾನದ ಭಾಗವಾಗಿ ತಂತ್ರಜ್ಞಾನ ಹಸ್ತಾಂತರ
ತನ್ನ ದೇಶದ ಶಸ್ತ್ರಾಸ್ತ್ರ ಹಾಗೂ ರಕ್ಷಣಾ ಉಪಕರಣಗಳ ನಿರ್ವಹಣೆಗಾಗಿ ಭಾರತದಲ್ಲಿಯೇ ಹಾರ್ಡ್ವೇರ್ ಹಾಗೂ ಬಿಡಿಭಾಗಗಳನ್ನು ತಯಾರಿಸಲು ರಷ್ಯಾ ಒಪ್ಪಿಗೆ ನೀಡಿದೆ.
ಪ್ರಧಾನಿ ನರೇಂದ್ರ ಮೋದಿ ಹಾಗೂ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಮಧ್ಯೆ ನಡೆದ ಮಾತುಕತೆಯಲ್ಲಿ ಉಭಯ ರಾಷ್ಟ್ರಗಳ ನಡುವೆ ದ್ವಿಪಕ್ಷೀಯ ರಕ್ಷಣಾ ಸಹಕಾರವನ್ನು ಬಲಪಡಿಸುವ ನಿಟ್ಟಿನಲ್ಲಿ ಈ ನಿರ್ಧಾರಕ್ಕೆ ಬರಲಾಗಿದೆ.
ರಷ್ಯಾದಿಂದ ನಿರ್ಣಾಯಕ ಬಿಡಿಭಾಗಗಳು ಹಾಗೂ ಸಲಕರಣೆ ಪೂರೈಕೆಗೆ ದೀರ್ಘ ಅವಧಿ ಬೇಕಾಗುತ್ತಿದ್ದು, ಇದರಿಂದ ಆ ದೇಶದಿಂದ ಖರೀದಿಸುತ್ತಿದ್ದ ಸೇನಾ ಉಪಕರಣಗಳ ನಿರ್ವಹಣೆಯ ಮೇಲೂ ತೀವ್ರ ಪರಿಣಾಮ ಉಂಟಾಗುತ್ತಿದೆ ಎಂದು ಸೇನೆಯು ಬಹಳ ವರ್ಷಗಳಿಂದ ದೂರುತ್ತಿತ್ತು.
‘ಮೇಕ್ ಇನ್ ಇಂಡಿಯಾ ಯೋಜನೆ ಅಡಿಯಲ್ಲಿ ತಂತ್ರಜ್ಞಾನ ಹಸ್ತಾಂತರ ಮಾಡಿಕೊಂಡು, ರಷ್ಯಾ ಮೂಲದ ಶಸ್ತ್ರಾಸ್ತ್ರಗಳು ಹಾಗೂ ಸೇನಾ ಉಪಕರಣಗಳ ಬಿಡಿಭಾಗಗಳ ತಯಾರಿಕಾ ಘಟಕಗಳನ್ನು ಜಂಟಿಯಾಗಿ ಸ್ಥಾಪಿಸಲು ಎರಡೂ ರಾಷ್ಟ್ರಗಳು ಒಪ್ಪಿಕೊಂಡಿವೆ’ ಎಂದು ಜಂಟಿ ಹೇಳಿಕೆಯಲ್ಲಿ ತಿಳಿಸಲಾಗಿದೆ.
ಭಾರತೀಯ ಸೇನೆಗೆ ಅಗತ್ಯವಾದ ಉತ್ಪನ್ನಗಳನ್ನು ಪೂರೈಸಿ, ಸಮಾನ ಸ್ನೇಹಿಯಾದ ಮೂರನೇ ದೇಶಗಳಿಗೂ ರಫ್ತು ಮಾಡಲು ಜಂಟಿ ಸಹಭಾಗಿತ್ವದಲ್ಲಿ ಘಟಕ ಸ್ಥಾಪಿಸಲು ಸಭೆಯಲ್ಲಿ ಸಮ್ಮತಿಸಿವೆ.
ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹಾಗೂ ರಷ್ಯಾ ರಕ್ಷಣಾ ಸಚಿವ ಆಂಡ್ರೆ ಬೆಲೊಸೊ ನಡುವೆ ಗುರುವಾರ ನಡೆದ ಸಭೆಯಲ್ಲೂ ದ್ವಿಪಕ್ಷೀಯ ರಕ್ಷಣಾ ಸಹಕಾರ ವೃದ್ಧಿಗೆ ಒಪ್ಪಿಗೆ ನೀಡಲಾಗಿತ್ತು.
ಭಾರತ–ರಷ್ಯಾ ಸಂಬಂಧ ವಿಶ್ವದಲ್ಲೇ ಸದೃಢ: ಸಚಿವ ಎಸ್. ಜೈಶಂಕರ್
ನವದೆಹಲಿ (ಪಿಟಿಐ): ಕಳೆದ 70–80 ವರ್ಷಗಳಿಂದಲೂ ಭಾರತ ಮತ್ತು ರಷ್ಯಾ ನಡುವಿನ ಪಾಲುದಾರಿಕೆಯು ಜಗತ್ತಿನ ‘ಅತ್ಯಂತ ಸದೃಢವಾದ ಸಂಬಂಧ’ಗಳಲ್ಲಿ ಒಂದಾಗಿದೆ. ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರ ಭಾರತ ಭೇಟಿಯು ‘ಆರ್ಥಿಕ ಒಪ್ಪಂದಗಳಿಗೆ ಮರುಜೀವ ನೀಡುವ ಉದ್ದೇಶ ಹೊಂದಿತ್ತು’ ಎಂದು ವಿದೇಶಾಂಗ ವ್ಯವಹಾರಗಳ ಸಚಿವ ಎಸ್.ಜೈಶಂಕರ್ ಅವರು ಶನಿವಾರ ಹೇಳಿದ್ದಾರೆ.
ಸಂವಾದವೊಂದರಲ್ಲಿ ಮಾತನಾಡಿದ ಸಚಿವರು, ಪುಟಿನ್ ಅವರ ಭಾರತ ಭೇಟಿಯು ಅಮೆರಿಕ–ಭಾರತದ ನಡುವೆ ನಡೆಯುತ್ತಿರುವ ದ್ವಿಪಕ್ಷೀಯ ವ್ಯಾಪಾರ ಒಪ್ಪಂದ ಮಾತುಕತೆಯನ್ನು ಜಟಿಲಗೊಳಿಸುತ್ತದೆ ಎಂಬ ವಾದಗಳನ್ನು ಅಲ್ಲಗಳೆದರು.
‘ವಿಶ್ವದ ಎಲ್ಲ ಬೃಹತ್ ರಾಷ್ಟ್ರಗಳೊಂದಿಗೂ ಭಾರತ ಸಂಬಂಧ ಹೊಂದಿದೆ ಎಂಬುದು ಎಲ್ಲರಿಗೂ ಗೊತ್ತು. ಇತರೆ ದೇಶಗಳೊಂದಿಗೆ ನಮ್ಮ ಸಂಬಂಧವನ್ನು ಹೀಗೆಯೇ ಇರಬೇಕು ಎಂದು ಬಯಸುವ ‘ವಿಶೇಷ ಅಧಿಕಾರ’ ಮತ್ತೊಂದು ದೇಶಕ್ಕೆ ಇರಬೇಕು ಎನ್ನುವುದು ಒಪ್ಪುವಂಥ ಸಂಗತಿಯಲ್ಲ’ ಎಂದು ಅವರು ‘ಹಿಂದೂಸ್ತಾನ್ ಟೈಮ್ಸ್ ನಾಯಕತ್ವ ಶೃಂಗ’ದಲ್ಲಿ ಹೇಳಿದರು.
ರಷ್ಯಾ ಮಾರುಕಟ್ಟೆಗೆ ‘ಪತಂಜಲಿ’
ಯೋಗ ಗುರು ಬಾಬಾ ರಾಮದೇವ ನೇತೃತ್ವದ ಪತಂಜಲಿ ಸಮೂಹವು ರಷ್ಯಾ ಸರ್ಕಾರದ ಜೊತೆ ಶನಿವಾರ ಒಪ್ಪಂದವೊಂದಕ್ಕೆ ಸಹಿ ಹಾಕಿದ್ದು, ಇದರ ಪರಿಣಾಮವಾಗಿ ಸಮೂಹಕ್ಕೆ ರಷ್ಯಾದ ಮಾರುಕಟ್ಟೆ ಪ್ರವೇಶಿಸಲು ಸಾಧ್ಯವಾಗಲಿದೆ.ಒಪ್ಪಂದವು ಆರೋಗ್ಯ ಮತ್ತು ಆರೈಕೆ, ಆರೋಗ್ಯ ಪ್ರವಾಸೋದ್ಯಮ, ಕುಶಲ ಮಾನವ ಸಂಪನ್ಮೂಲದ ವಿನಿಮಯ, ಸಂಶೋಧನೆಗೆ ಸಂಬಂಧಿಸಿದ ಉಪಕ್ರಮಗಳಿಗೆ ಅನುವು ಮಾಡಿಕೊಡಲಿದೆ ಎಂದು ಪ್ರಕಟಣೆಯೊಂದು ತಿಳಿಸಿದೆ.ಪತಂಜಲಿ ಸಮೂಹದ ಪರವಾಗಿ ರಾಮದೇವ ಅವರು ರಷ್ಯಾದ ವಾಣಿಜ್ಯ ಸಚಿವ ಹಾಗೂ ಇಂಡೊ–ರಷ್ಯಾ ವಾಣಿಜ್ಯ ಮಂಡಳಿಯ ಅಧ್ಯಕ್ಷ ಸರ್ಗೈ ಚೆರೆಮಿನ್ ಅವರು ಒಪ್ಪಂದದ ದಾಖಲೆಗಳಿಗೆ ಸಹಿ ಮಾಡಿದರು.ಬಾಬಾ ರಾಮದೇವ ಮತ್ತು ಆಚಾರ್ಯ ಬಾಲಕೃಷ್ಣ ಅವರು ಆರಂಭಿಸಿದ ಪತಂಜಲಿ ಸಮೂಹವು ಆಯುರ್ವೇದ ಉತ್ಪನ್ನಗಳು ಹಾಗೂ ಎಫ್ಎಂಸಿಜಿ ಉತ್ಪನ್ನಗಳಿಂದಾಗಿ ಹೆಸರುವಾಸಿ ಆಗಿದೆ. ಪತಂಜಲಿ ಆಯುರ್ವೇದ್ ಮತ್ತು ಪತಂಜಲಿ ಫುಡ್ಸ್ ಈ ಸಮೂಹದ ಅಂಗಸಂಸ್ಥೆಗಳಾಗಿವೆ.ರಷ್ಯಾದ ಜನ ಆಯುರ್ವೇದವನ್ನು ಬಹಳ ಮೆಚ್ಚಿಕೊಂಡಿದ್ದಾರೆ, ಅವರು ಯೋಗ, ಆಯುರ್ವೇದ ಮತ್ತು ಪ್ರಕೃತಿ ಚಿಕಿತ್ಸೆಯನ್ನು ಅಳವಡಿಸಿಕೊಂಡಿದ್ದಾರೆ ಎಂದು ರಾಮದೇವ ಅವರು ಹೇಳಿದ್ದಾರೆ.‘ಋಷಿಗಳು ರೂಪಿಸಿದ ಈ ಆರೋಗ್ಯ ವಿಜ್ಞಾನವನ್ನು ಜಗತ್ತಿನ ಸರಿಸುಮಾರು 200 ದೇಶಗಳಿಗೆ ಕೊಂಡೊಯ್ಯುವುದು ನಮ್ಮ ಮುಖ್ಯ ಗುರಿ. ಇದಕ್ಕೆ ರಷ್ಯಾ ಹೆಬ್ಬಾಗಿಲಾಗಿ ಇರಲಿದೆ’ ಎಂದು ರಾಮದೇವ ವಿವರಿಸಿದ್ದಾರೆ.‘ಪತಂಜಲಿ ಕಂಪನಿಯ ಆರೈಕೆ ಸೇವೆಗಳನ್ನು ರಷ್ಯಾಕ್ಕೆ ವಿಸ್ತರಿಸುವುದು ಒಪ್ಪಂದದ ಮುಖ್ಯ ಗುರಿ. ಭಾರತದ ಅಧ್ಯಾತ್ಮಿಕ ಜ್ಞಾನವನ್ನು, ಸಂಸ್ಕೃತಿಯನ್ನು, ಯೋಗವನ್ನು, ಆಯುರ್ವೇದವನ್ನು ಮತ್ತು ಅಮೂಲ್ಯವಾದ ಪರಂಪರೆಯನ್ನು ರಷ್ಯಾದ ಜೊತೆ ಹಂಚಿಕೊಳ್ಳುವುದು ಎರಡನೆಯ ಗುರಿ’ ಎಂದು ಅವರು ತಿಳಿಸಿದ್ದಾರೆ.ಈ ಒಪ್ಪಂದದ ಭಾಗವಾಗಿ ಭಾರತದ ಪ್ರಮುಖ ಜನಪ್ರಿಯ ಬ್ರ್ಯಾಂಡ್ಗಳನ್ನು ರಷ್ಯಾದಲ್ಲಿ, ರಷ್ಯಾದ ಪ್ರಮುಖ ಬ್ರ್ಯಾಂಡ್ಗಳನ್ನು ಭಾರತದಲ್ಲಿ ಜನಪ್ರಿಯಗೊಳಿಸಲಾಗುತ್ತದೆ.ಪತಂಜಲಿ ಕಂಪನಿಯ ಯೋಗ, ಆಯುರ್ವೇದ ಮತ್ತು ಪ್ರಕೃತಿ ಚಿಕಿತ್ಸೆ ಪದ್ಧತಿ ಗಳನ್ನು ಅಳವಡಿಸಿಕೊಳ್ಳುವ ಮೂಲಕ ರಷ್ಯಾದ ಜನರ ಜೀವನಶೈಲಿ ಯನ್ನು ಬದಲಾಯಿಸುವ, ಅವರನ್ನು ರೋಗಮುಕ್ತವಾಗಿಸುವ ಉದ್ದೇಶ ಇದೆ ಎಂದು ಸರ್ಗೈ ಚೆರೆಮಿನ್ ಹೇಳಿದ್ದಾರೆ.
‘ಸೀಮಾ ಸುಂಕದಲ್ಲಿ ಸುಧಾರಣೆ’
ಸೀಮಾ ಸುಂಕವನ್ನು ಸರಳವಾಗಿಸುವುದು ಕೇಂದ್ರ ಸರ್ಕಾರದ ಮುಂದಿನ ಹಂತದ ಸುಧಾರಣಾ ಪ್ರಕ್ರಿಯೆಯ ಭಾಗ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಶನಿವಾರ ಹೇಳಿದ್ದಾರೆ.ಪ್ರಸಕ್ತ ಆರ್ಥಿಕ ವರ್ಷದಲ್ಲಿ ಸರ್ಕಾರವು ಜಿಎಸ್ಟಿ ದರ ಪರಿಷ್ಕರಣೆ, ಆದಾಯ ತೆರಿಗೆ ಮಿತಿ ಏರಿಕೆಯಂತಹ ಸುಧಾರಣಾ ಕ್ರಮಗಳನ್ನು ಕೈಗೊಂಡಿದೆ.‘ನಾವು ಸೀಮಾ ಸುಂಕ ವ್ಯವಸ್ಥೆಯಲ್ಲಿ ಆಮೂಲಾಗ್ರವಾದ ಬದಲಾವಣೆಯನ್ನು ತರಬೇಕಿದೆ… ಸೀಮಾ ಸುಂಕ ವ್ಯವಸ್ಥೆಯು ಸಂಕೀರ್ಣವಾದುದಲ್ಲ ಎಂದು ಜನರಿಗೆ ಅನ್ನಿಸಬೇಕಾದರೆ ಅದನ್ನು ಸರಳಗೊಳಿಸಬೇಕು. ಅದನ್ನು ಇನ್ನಷ್ಟು ಹೆಚ್ಚು ಪಾರದರ್ಶಕ ಆಗಿಸಬೇಕು’ ಎಂದು ಸೀತಾರಾಮನ್ ಅವರು ಕಾರ್ಯಕ್ರಮವೊಂದರಲ್ಲಿ ಹೇಳಿದ್ದಾರೆ.ಆದಾಯ ತೆರಿಗೆ ವ್ಯವಸ್ಥೆಯಲ್ಲಿನ ಪಾರದರ್ಶಕ ಅಂಶಗಳನ್ನು ಸೀಮಾಸುಂಕ ವ್ಯವಸ್ಥೆಗೆ ತರಬೇಕಿದೆ. ಸೀಮಾಸುಂಕ ವ್ಯವಸ್ಥೆಯಲ್ಲಿ ತರಲು ಉದ್ದೇಶಿಸಿರುವ ಸುಧಾರಣೆಗಳು ಸಮಗ್ರವಾಗಿರುತ್ತವೆ, ಸುಂಕದ ಪ್ರಮಾಣ ಪರಿಷ್ಕರಿಸುವುದನ್ನು ಒಳಗೊಂಡಿರುತ್ತವೆ ಎಂದು ನಿರ್ಮಲಾ ಅವರು ಹೇಳಿದ್ದಾರೆ.ಇದಕ್ಕೆ ಸಂಬಂಧಿಸಿದ ಘೋಷಣೆಯು ಫೆಬ್ರುವರಿ 1ರಂದು ಮಂಡನೆಯಾಗುವ ಕೇಂದ್ರ ಬಜೆಟ್ನಲ್ಲಿ ಇರುವ ಸಾಧ್ಯತೆ ಇದೆ.‘ಕಳೆದ ಎರಡು ವರ್ಷಗಳಲ್ಲಿ ನಾವು ಸೀಮಾಸುಂಕದ ಪ್ರಮಾಣವನ್ನು ಇಳಿಕೆ ಮಾಡಿದ್ದೇವೆ. ಆದರೆ ಕೆಲವು ಉತ್ಪನ್ನಗಳ ಮೇಲಿನ ಸೀಮಾಸುಂಕವು ಸರಿಯಾದ ಮಟ್ಟದಲ್ಲಿ ಇಲ್ಲ ಎಂದು ಭಾವಿಸಲಾಗಿದೆ, ಅವುಗಳ ಮೇಲಿನ ಸೀಮಾಸುಂಕವನ್ನು ಕೂಡ ಕಡಿಮೆ ಮಾಡಬೇಕಿದೆ. ಸೀಮಾಸುಂಕ ವಿಭಾಗವನ್ನು ಸ್ವಚ್ಛಗೊಳಿಸುವುದು ನನ್ನ ಮುಂದಿರುವ ದೊಡ್ಡ ಕೆಲಸ’ ಎಂದು ನಿರ್ಮಲಾ ಸೀತಾರಾಮನ್ ಅವರು ತಿಳಿಸಿದ್ದಾರೆ.ಅಮೆರಿಕದ ಡಾಲರ್ ಎದುರು ರೂಪಾಯಿ ಮೌಲ್ಯ ಕುಸಿಯುತ್ತಿರುವುದರ ಕುರಿತು ಪ್ರತಿಕ್ರಿಯೆ ನೀಡಿದ ಸಚಿವೆ, ರೂಪಾಯಿ ತನ್ನ ಸಹಜ ಮೌಲ್ಯವನ್ನು ತಾನಾಗಿಯೇ ಕಂಡುಕೊಳ್ಳಲಿದೆ ಎಂದಿದ್ದಾರೆ.
31.25 ಗಿಗಾವಾಟ್ ಹಸಿರು ಇಂಧನ ಉತ್ಪಾದನೆ
ಪ್ರಸಕ್ತ ಹಣಕಾಸು ವರ್ಷದಲ್ಲಿ 31.25 ಗಿಗಾವಾಟ್ ಹಸಿರು ಇಂಧನವನ್ನು ದೇಶದಲ್ಲಿ ಉತ್ಪಾದಿಸಲಾಗಿದ್ದು, ಇದರಲ್ಲಿ ಸೋಲಾರ್ ವಿದ್ಯುತ್ನ ಪಾಲು 24.28 ಗಿಗಾವಾಟ್ ಎಂದು ಕೇಂದ್ರ ನವೀಕರಿಸಬಹುದಾದ ಇಂಧನ ಸಚಿವ ಪ್ರಲ್ಹಾದ ಜೋಶಿ ಶನಿವಾರ ತಿಳಿಸಿದರು.ಒಡಿಶಾದಲ್ಲಿ 1.5 ಲಕ್ಷ ಚಾವಣಿ ಸೋಲಾರ್ ಯುಎಲ್ಎ ಘಟಕಗಳನ್ನು ಸ್ಥಾಪಿಸಲಾಗುವುದು ಎಂದು ‘ಜಾಗತಿಕ ಇಂಧನ ನಾಯಕರ ಶೃಂಗಸಭೆ–2025’ರಲ್ಲಿ ಘೋಷಿಸಿದ ಸಚಿವರು, ಇದರಿಂದ ರಾಜ್ಯದ 7ಲಕ್ಷದಿಂದ 8 ಲಕ್ಷ ಜನರಿಗೆ ಅನುಕೂಲವಾಗಲಿದೆ ಎಂದು ಹೇಳಿದರು. ಒಂದು ಟೆರಾವಾಟ್ ನವೀಕರಿಸಬಹುದಾದ ಇಂಧನ ಉತ್ಪಾದನೆಗೆ ಸುಮಾರು 70 ವರ್ಷಗಳನ್ನು ತೆಗೆದುಕೊಂಡರೆ (2022), ನಂತರದ ಎರಡು ವರ್ಷಗಳಲ್ಲಿ (2024) ಎರಡು ಟೆರಾವಾಟ್ ನವೀಕರಿಸಬಹುದಾದ ಇಂಧನ ಉತ್ಪಾದನಾ ಸಾಮರ್ಥ್ಯವನ್ನು ಜಗತ್ತು ಗಳಿಸಿದೆ ಎಂದರು.ನವೀಕರಿಸಬಹುದಾದ ಇಂಧನ ಸಾಮರ್ಥ್ಯದ ಹೆಚ್ಚಳಕ್ಕೆ ಭಾರತವೇ ಪ್ರಮುಖ ಚಾಲಕ ಶಕ್ತಿಯಾಗಿದೆ. ಕಳೆದ 11 ವರ್ಷದ ಅವಧಿಯಲ್ಲಿ ದೇಶದ ಸೌರ ವಿದ್ಯುತ್ನ ಸಾಮರ್ಥ್ಯ 2.8 ಗಿಗಾವಾಟ್ನಿಂದ 130 ಗಿಗಾವಾಟ್ಗೆ ಹೆಚ್ಚಿದ್ದು, ಇದು ಶೇ 4,500 ಪಟ್ಟು ಏರಿಕೆಯಾಗಿದೆ. 2022ರಿಂದ 2024ರ ನಡುವೆ ಈ ಬೆಳವಣಿಗೆಯಾಗಿದೆ. ಜಾಗತಿಕ ಸೌರ ವಿದ್ಯುತ್ ವಲಯಕ್ಕೆ ದೇಶವು 46 ಗಿಗಾವಾಟ್ ಕೊಡುಗೆ ನೀಡಿದ್ದು, ಮೂರನೇ ಬೃಹತ್ ಕೊಡುಗೆಯಾಗಿದೆ ಎಂದು ಹೇಳಿದರು.ಒಡಿಶಾ ಮುಖ್ಯಮಂತ್ರಿ ಮೋಹನ್ ಚರಣ್ ಮಾಝಿ ಶೃಂಗಸಭೆಯನ್ನು ಉದ್ಘಾಟಿಸಿದರು. ವಿವಿಧ ರಾಜ್ಯಗಳ ಇಂಧನ ಸಚಿವರು ಭಾಗವಹಿಸಿದ್ದರು.
ಡೀಪ್ಫೇಕ್ ನಿಯಂತ್ರಣ ಮಸೂದೆ ಮಂಡನೆ
ಡೀಪ್ಫೇಕ್ ನಿಯಂತ್ರಣಕ್ಕೆ ಸೂಕ್ತ ಕಾನೂನು ರೂಪಿಸುವಂತೆ ಸಂಸದರೊಬ್ಬರು ಕೋರಿರುವ ಮಸೂದೆಯೊಂದು ಲೋಕಸಭೆಯಲ್ಲಿ ಮಂಡನೆಯಾಗಿದೆ.ಡೀಪ್ಫೇಕ್ ಮೊರೆಹೋಗುವವರಿಗೆ ಪೂರ್ವಾನುಮತಿ ಕಡ್ಡಾಯಗೊಳಿಸುವ ಮೂಲಕ ನಾಗರಿಕರ ಸುರಕ್ಷತೆ ಯನ್ನು ಖಚಿತಪಡಿಸುವ ಡೀಪ್ಫೇಕ್ ನಿಯಂತ್ರಣ ಮಸೂದೆಯನ್ನು ಶಿವಸೇನಾ ಸಂಸದ ಶ್ರೀಕಾಂತ್ ಶಿಂದೆ ಅವರು ಶುಕ್ರವಾರ ಮಂಡಿಸಿದರು. ‘ದೌರ್ಜನ್ಯ, ವಂಚನೆ ಮತ್ತು ಸುಳ್ಳುಸುದ್ದಿಗಳನ್ನು ಹರಡಲು ಡೀಪ್ಫೇಕ್ ದುರ್ಬಳಕೆ ಹೆಚ್ಚುತ್ತಿದೆ. ಅದನ್ನು ತಡೆಯಲು ಸೂಕ್ತ ಕಾನೂನು ರೂಪಿಸುವ ಅಗತ್ಯ ಇದೆ’ ಎಂದು ಹೇಳಿದರು.
ಪೀಠಿಕೆ: ‘ಜಾತ್ಯತೀತ’, ‘ಸಮಾಜವಾದ’ ತೆಗೆದುಹಾಕಿ
‘ದೇಶದ ಸಂವಿಧಾನದ ಪೀಠಿಕೆಯಲ್ಲಿ ‘ಜಾತ್ಯತೀತ’, ‘ಸಮಾಜವಾದ’ ಪದಗಳ ಅಗತ್ಯವಿಲ್ಲ. ತುರ್ತು ಪರಿಸ್ಥಿತಿ ವೇಳೆ ಪ್ರಜಾಪ್ರಭುತ್ವ ವಿರೋಧಿ ನೀತಿ ವಿಧಾನದ ಅಡಿಯಲ್ಲಿ ಅವುಗಳನ್ನು ಸೇರಿಸಿದ್ದು, ಅವುಗಳನ್ನು ತೆಗೆದು ಹಾಕಬೇಕು’ ಎಂದು ಬಿಜೆಪಿಯ ರಾಜ್ಯಸಭಾ ಸಂಸದ ಭೀಮ್ ಸಿಂಗ್ ಅವರು ಖಾಸಗಿ ಮಸೂದೆ ಮಂಡಿಸಿದ್ದಾರೆ.
ಸಿಂಗ್ ಅವರು ‘ಸಂವಿಧಾನ (ತಿದ್ದುಪಡಿ) ಕಾಯ್ದೆ 2025’ ಅನ್ನು ರಾಜ್ಯಸಭೆಯಲ್ಲಿ ಶುಕ್ರವಾರ ಮಂಡಿಸಿದ್ದು, ಮೂಲ ಸಂವಿಧಾನದಲ್ಲಿ ಈ ಪದಗಳು ಇರಲಿಲ್ಲ. ಇದರಿಂದ ಗೊಂದಲ ಸೃಷ್ಟಿಯಾಗುತ್ತಿದೆ ಎಂದು ತಿಳಿಸಿದ್ದಾರೆ.
‘ಸಂವಿಧಾನದ ಪೀಠಿಕೆಯಿಂದ ಸಮಾಜವಾದ, ಜಾತ್ಯತೀತ ಪದಗಳನ್ನು ತೆಗೆದುಹಾಕಬೇಕು ಎಂದು ಖಾಸಗಿ ಮಸೂದೆಯನ್ನು ಮಂಡಿಸಿದ್ದೇನೆ. ಮೂಲ ಸಂವಿಧಾನ 1950ರಲ್ಲಿ ಜಾರಿಗೆ ಬಂದಿತ್ತು. ತುರ್ತು ಪರಿಸ್ಥಿತಿಯ ವೇಳೆ ಸಂವಿಧಾನಕ್ಕೆ 42ನೇ ತಿದ್ದುಪಡಿ ತಂದು ಇಂದಿರಾ ಗಾಂಧಿ ಈ ಪದಗಳನ್ನು ಸೇರಿಸಿದರು. ಆ ವೇಳೆ ಈ ಬಗ್ಗೆ ಸಂಸತ್ತಿನಲ್ಲಿ ಚರ್ಚೆಯೇ ನಡೆದಿರಲಿಲ್ಲ’ ಎಂದಿದ್ದಾರೆ.