- ಭಾರತ ಸಂಜಾತ ನ್ಯೂಯಾರ್ಕ್ ಮೇಯರ್
ಸಂದರ್ಭ: ನ್ಯೂಯಾರ್ಕ್ ನಗರದ ಮೇಯರ್ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿ, ಭಾರತ ಸಂಜಾತ ಜೊಹ್ರಾನ್ ಮಮ್ದಾನಿ (34) ಐತಿಹಾಸಿಕ ಗೆಲುವು ದಾಖಲಿಸಿದ್ದಾರೆ.

- ಅಮೆರಿಕದ ಅತಿ ದೊಡ್ಡ ನಗರವಾದ ನ್ಯೂಯಾರ್ಕ್ನ ‘ಪ್ರಥಮ ಪ್ರಜೆ’ಯಾಗಿ ಆಯ್ಕೆಯಾದ ಮೊದಲ ಮುಸ್ಲಿಂ ಹಾಗೂ ದಕ್ಷಿಣ ಏಷ್ಯಾದ ಮೊದಲ ವ್ಯಕ್ತಿ ಎಂಬ ಹೆಗ್ಗಳಿಕೆಗೂ ಅವರು ಪಾತ್ರರಾಗಿದ್ದಾರೆ.
- ಜೊಹ್ರಾನ್ ಅವರು ಭಾರತದ ಸಿನಿಮಾ ನಿರ್ದೇಶಕಿ ಮತ್ತು ನಿರ್ಮಾಪಕಿ ಮೀರಾ ನಾಯರ್ ಮತ್ತು ಪ್ರೊ. ಮಹಮದ್ ಮಮ್ದಾನಿ ಅವರ ಪುತ್ರ.
- ಮಮ್ದಾನಿ ಜನಿಸಿದ್ದು ಉಗಾಂಡಾದ ಕಂಪಾಲದಲ್ಲಿ. ಅವರಿಗೆ 5 ವರ್ಷವಿದ್ದಾಗ ದಕ್ಷಿಣ ಆಫ್ರಿಕಾದ ಕೇಪ್ ಟೌನ್ಗೆ, ನಂತರ 7 ವರ್ಷ ಇದ್ದಾಗ ನ್ಯೂಯಾರ್ಕ್ಗೆ ವಲಸೆ ಬಂದು ಅವರ ಕುಟುಂಬ ನೆಲೆಗೊಂಡಿತ್ತು. ಮಮ್ದಾನಿ ಅವರಿಗೆ 2018ರಲ್ಲಿ ಅಮೆರಿಕದ ಪೌರತ್ವ ಲಭಿಸಿತ್ತು.ಅಮೆರಿಕನ್ ಅನಿಮೇಟರ್ ರಮಾ ಸವಾಫ್ ದುವಾಜಿ ಅವರ ಪತ್ನಿ.
- ಯಾರ್ಕ್ನ ಮಾಜಿ ಗವರ್ನರ್, ಪ್ರಭಾವಿ ರಾಜಕೀಯ ಮುಖಂಡ ಆ್ಯಂಡ್ರ್ಯೂ ಕೌಮೊ ಮತ್ತು ರಿಪಬ್ಲಿಕನ್ ಅಭ್ಯರ್ಥಿ ಕರ್ಟಿಸ್ ಸ್ಲಿವಾ ಅವರನ್ನು ಮಮ್ದಾನಿ ಸೋಲಿಸಿದ್ದಾರೆ.
- ಮಮ್ದಾನಿ ಅವರು ಜನವರಿ 1ರಂದು ಅಮೆರಿಕದ ಅತಿ ದೊಡ್ಡ ನಗರವಾದ ನ್ಯೂಯಾರ್ಕ್ನ ಮೇಯರ್ ಪಟ್ಟಕ್ಕೇರು ವಾಗ, ಈ ಸ್ಥಾನ ಅಲಂಕರಿಸುತ್ತಿರುವ ಮೊದಲ ಮುಸ್ಲಿಂ, ಮೊದಲ ಭಾರತೀಯ, ಆಫ್ರಿಕಾದಲ್ಲಿ ಜನಿಸಿದ ಮೊದಲ ವ್ಯಕ್ತಿ ಮತ್ತು ಕಳೆದೊಂದು ಶತಮಾನದಲ್ಲಿ ಮೇಯರ್ ಹುದ್ದೆಗೇರಿದ ಕಿರಿಯ ವ್ಯಕ್ತಿ ಎಂಬ ಹೆಗ್ಗಳಿಕೆಗಳಿಗೂ ಪಾತ್ರರಾಗಲಿದ್ದಾರೆ.
- ಮಮ್ದಾನಿ ಗೆಲುವಿನೊಂದಿಗೆ ನ್ಯೂಯಾರ್ಕ್ ನಗರ ಮತ್ತು ಅಮೆರಿಕವು ಹೊಸ ರಾಜಕೀಯ ಮತ್ತು ಸೈದ್ಧಾಂತಿಕ ಯುಗಕ್ಕೆ ಮುನ್ನುಡಿ ಬರೆದಿದೆ. ಬಂಡವಾಳಶಾಹಿಯ ವಿರುದ್ಧ ಪ್ರಜಾಪ್ರಭುತ್ವವಾದಿ, ಸಮಾಜವಾದಿಯ ಐತಿಹಾಸಿಕ ಗೆಲುವು, ದೇಶದ ರಾಜಕೀಯ ಸ್ಥಿತ್ಯಂತರಕ್ಕೂ ಕಾರಣವಾಗಲಿವೆ ಎಂಬ ವಿಶ್ಲೇಷಣೆಗಳು ನಡೆಯುತ್ತಿವೆ.
- ಮಮ್ದಾನಿ ಅವರು ಬ್ರಾಂಕ್ಸ್ ಹೈಸ್ಕೂಲ್ ಆಫ್ ಸೈನ್ಸ್ನಲ್ಲಿ ಪ್ರೌಢ ಶಿಕ್ಷಣ ಹಾಗೂ ಬೌಡೊಯಿನ್ ಕಾಲೇಜಿನಿಂದ ಪದವಿ ಪಡೆದಿದ್ದಾರೆ. ಪ್ರೌಢಶಾಲಾ ಹಂತದ ಕ್ರಿಕೆಟ್ ತಂಡದಲ್ಲೂ ಅವರು ಪ್ರಮುಖ ಆಟಗಾರರಾಗಿದ್ದರು.
- ವಸತಿ ಸಲಹೆಗಾರ ಅಧಿಕಾರಿ ಯಾಗಿಯೂ ಕಾರ್ಯನಿರ್ವಹಿಸಿದ್ದ ಅವರು, ನ್ಯೂಯಾರ್ಕ್ನಲ್ಲಿ ಕಡಿಮೆ ಆದಾಯ ಹೊಂದಿರುವ ವಲಸಿಗರನ್ನು ಮನೆಗಳಿಂದ ಹೊರಹಾಕುವುದನ್ನು ತಡೆಗಟ್ಟಲು ಅಪಾರವಾಗಿ ಶ್ರಮಿಸಿದ್ದರು. ಈ ಕಾರ್ಯಕ್ಕಾಗಿ ವಲಸಿಗರ, ಕಾರ್ಮಿಕರ ವಿಶ್ವಾಸ ಗಳಿಸಿದ್ದ ಅವರು, 2020ರಲ್ಲಿ ಮೊದಲ ಬಾರಿ ನ್ಯೂಯಾರ್ಕ್ ಅಸೆಂಬ್ಲಿಗೆ ಆಯ್ಕೆಯಾಗಿದ್ದರು.
- ನ್ಯೂಯಾರ್ಕ್ ಮೇಯರ್ ಚುನಾವಣೆಯ ಪ್ರಾಥಮಿಕ ಹಂತದಿಂದಲೇ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಮಮ್ದಾನಿ ಅವರನ್ನು ವಿರೋಧಿ ಸಿಕೊಂಡು ಬಂದಿದ್ದರು.
‘ವೆಚ್ಚ ಕಡಿಮೆಗೊಳಿಸಿ, ಜೀವನ ಸುಗಮಗೊಳಿಸಿ’
- ಬೆಲೆ ಏರಿಕೆ, ಹಣದುಬ್ಬರ ಹೆಚ್ಚಳ, ಉದ್ಯೋಗ ಕಡಿತ ಸೇರಿದಂತೆ ರಾಜಕೀಯ ಮತ್ತು ಆರ್ಥಿಕ ಅಸ್ಥಿರತೆ ಎದುರಿಸುತ್ತಿರುವ ಅಮೆರಿಕನ್ನರಿಗೆ, ವಿಶೇಷವಾಗಿ ನ್ಯೂಯಾರ್ಕ್ನ ಜನರಿಗೆ, ‘ಜೀವನ ನಿರ್ವಹಣೆ ವೆಚ್ಚವನ್ನು ಕಡಿಮೆ ಮಾಡಲೆಂದೇ ನ್ಯೂಯಾರ್ಕ್ನ ಮೇಯರ್ ಸ್ಥಾನಕ್ಕೆ ಸ್ಪರ್ಧಿಸುತ್ತಿದ್ದೇನೆ’ ಎಂಬ ಮಮ್ದಾನಿ ಅವರ ಭರವಸೆಯ ನುಡಿಗಳು ವಿಶ್ವಾಸ ಮೂಡಿಸಿದ್ದವು. ನಗರ ಸಾರಿಗೆ ಬಸ್ಗಳಲ್ಲಿ ಉಚಿತ ಪ್ರಯಾಣ, ಮಕ್ಕಳಿಗಾಗಿ ಸಾರ್ವಜನಿಕ ಆಸ್ಪತ್ರೆ, ಕಡಿಮೆ ವೆಚ್ಚದ ಮನೆಗಳು ಸೇರಿದಂತೆ ‘ವೆಚ್ಚ ಕಡಿಮೆಗೊಳಿಸಿ, ಜೀವನ ಸುಗಮಗೊಳಿಸಿ’ ಎನ್ನುವುದು ಅವರ ಚುನಾವಣಾ ಘೋಷಣೆಯಾಗಿತ್ತು.
- ಬಂಡವಾಳಶಾಹಿ ವ್ಯವಸ್ಥೆಗೆ ವಿರುದ್ಧವಾಗಿದ್ದ ಈ ಯುವ ರಾಜಕಾರಣಿಯು ನ್ಯೂಯಾರ್ಕ್ನ ಯುವಸಮೂಹ ಹಾಗೂ ಶ್ರಮಿಕ ವರ್ಗದ ಅಪಾರ ಬೆಂಬಲವನ್ನು ಗಳಿಸಿರುವುದು ಚುನಾವಣಾ ಫಲಿತಾಂಶದಲ್ಲಿ ಸ್ಪಷ್ಟವಾಗಿದೆ.
ಭಾರತದ ನಂಟು
- ತಮ್ಮ ಮೊದಲ ವಿಜಯೋತ್ಸವ ಭಾಷಣದಲ್ಲಿ ಮಮ್ದಾನಿ, ಭಾರತ ಅಥವಾ ಭಾರತೀಯರನ್ನು ನೇರವಾಗಿ ಉಲ್ಲೇಖಿಸದಿದ್ದರೂ, ನೆಹರೂ ಮತ್ತು ‘ಧೂಮ್ ಮಚಾಲೆ’ ಹಾಡಿನ ಮೂಲಕ ತಮ್ಮ ಭಾರತೀಯ ಬೇರನ್ನು ಸ್ಮರಿಸಲು ಮರೆಯಲಿಲ್ಲ. ವಿಜಯೋತ್ಸವ ಭಾಷಣದ ಬೆನ್ನಲ್ಲೇ ವೇದಿಕೆಯಲ್ಲಿ ಬಾಲಿವುಡ್ನ ಜನಪ್ರಿಯ ‘ಧೂಮ್ ಮಚಾಲೆ’ ಹಾಡು ಕೇಳಿಬಂತು. ಮಮ್ದಾನಿ ಅವರ ವಾಕ್ಚಾತುರ್ಯ ಮತ್ತು ಸಾಮಾಜಿಕ ಮಾಧ್ಯಮದ ಮೇಲಿನ ಹಿಡಿತ ಕೂಡ ಅವರ ಗೆಲುವಿನಲ್ಲಿ ನಿರ್ಣಾಯಕ ಪಾತ್ರ ವಹಿಸಿದೆ ಎನ್ನಲಾಗುತ್ತಿದೆ.
ದಾಖಲೆ ಮತ ಚಲಾವಣೆ
- ನ್ಯೂಯಾರ್ಕ್ ಮೇಯರ್ ಚುನಾವಣೆಯಲ್ಲಿ 1969ರ ಬಳಿಕ ಇದೇ ಮೊದಲ ಬಾರಿಗೆ 20 ಲಕ್ಷ ಮತಗಳು ಚಲಾವಣೆಯಾಗಿವೆ ಎಂದು ನ್ಯೂಯಾರ್ಕ್ನ ಚುನಾವಣಾ ಮಂಡಳಿ ಹೇಳಿದೆ.
- ಕೃತಕ ಬುದ್ಧಿಮತ್ತೆ ವಿಷಯ ಪರಿಚಯ
ಸಂದರ್ಭ: ಸ್ಯಾಮ್ಸಂಗ್ ಹಾಗೂ ಹಲವು ವಿ.ವಿ.ಗಳ ಜತೆ ಬೆಂಗಳೂರು ಕೃಷಿ ವಿ.ವಿ ಒಪ್ಪಂದ: ಬೆಂಗಳೂರು ಕೃಷಿ ವಿಶ್ವ ವಿದ್ಯಾಲಯದ ಬೋಧನೆ, ಸಂಶೋಧನೆ ಹಾಗೂ ವಿಸ್ತರಣಾ ಚಟುವಟಿಕೆಗಳಲ್ಲಿ ಕೃತಕ ಬುದ್ಧಿಮತ್ತೆ (ಎಐ) ಹಾಗೂ ಮಷಿನ್ ಲರ್ನಿಂಗ್ (ಎಂಎಲ್) ತಂತ್ರಜ್ಞಾನ ಅಳವಡಿಸಿಕೊಳ್ಳುವ ಉದ್ದೇಶದಿಂದ 2025–26ನೇ ಶೈಕ್ಷಣಿಕ ಸಾಲಿನಿಂದ ಪದವಿ ಹಾಗೂ ಸ್ನಾತಕೋತ್ತರ ಪದವಿ (ಬಿ.ಎಸ್ಸಿ ಕೃಷಿ ಹಾಗೂ ಎಂ.ಎಸ್ಸಿ ಕೃಷಿ) ವಿದ್ಯಾರ್ಥಿಗಳಿಗೆ ಎಐ ಹಾಗೂ ಎಂಎಲ್ ವಿಷಯವನ್ನು ಪರಿಚಯಿಸಲಾಗುತ್ತಿದೆ.
- ಬೆಂಗಳೂರು ಕೃಷಿ ವಿಶ್ವವಿದ್ಯಾಲ ಯವು ಸ್ಯಾಮ್ಸಂಗ್ ಕಂಪನಿಯೊಂದಿಗೆ ಎಐ ಮತ್ತು ಎಂಎಲ್ ವಿಷಯದ ತರಬೇತಿ ನೀಡುವ ಕುರಿತು ಒಪ್ಪಂದ ಮಾಡಿಕೊಂಡಿದೆ. ಸ್ಯಾಮ್ಸಂಗ್ನ ಕಾರ್ಪೊರೇಟ್ ಸಾಮಾಜಿಕ ಹೊಣೆಗಾರಿಕೆ ನಿಧಿಯಡಿ (ಸಿಎಸ್ಆರ್) ಮೊದಲ ಹಂತದಲ್ಲಿ ಸ್ನಾತಕೋತ್ತರ ಪದವಿ ಅಧ್ಯಯನ ಮಾಡುತ್ತಿರುವ 300 ವಿದ್ಯಾರ್ಥಿಗಳಿಗೆ ಎಐ–ಎಂಎಲ್ ವಿಷಯದ ಬಗ್ಗೆ 80 ಗಂಟೆಗಳ ಕಾಲ ಆನ್ಲೈನ್ ಹಾಗೂ ಆಫ್ಲೈನ್ ತರಬೇತಿ ಕಾರ್ಯಕ್ರಮ ನಡೆಯುತ್ತಿದೆ.
- ‘ಬೆಂಗಳೂರು ಕೃಷಿ ವಿಶ್ವವಿದ್ಯಾಲಯ ದ ಪ್ರಥಮ ವರ್ಷದ ಪದವಿಯ ಎರಡನೇ ಸೆಮಿಸ್ಟರ್ನಲ್ಲಿ ಎಐ–ಎಂಎಲ್ ವಿಷಯ ಇರಲಿದ್ದು, ಇದಕ್ಕೆ ಅಂಕಗಳು ಇರುವುದಿಲ್ಲ. ಆದರೆ ಕಡ್ಡಾಯವಾಗಿ ಉತ್ತೀರ್ಣ ಆಗಬೇಕು. ಎಂ.ಎಸ್ಸಿ ಪ್ರಥಮ ವರ್ಷದ ಎರಡನೇ ಸೆಮಿಸ್ಟರ್ಗೆ ಎಐ–ಎಲ್ ವಿಷಯ ಇರಲಿದ್ದು, ವಿದ್ಯಾರ್ಥಿಗಳಿಗೆ ಆರು ತಿಂಗಳ ತರಬೇತಿ ನೀಡಲಾಗುತ್ತದೆ.
- ‘ವಿಶ್ವವಿದ್ಯಾಲಯದಲ್ಲಿ ಕೃತಕ ಬುದ್ಧಿಮತ್ತೆ (ಎಐ) ಹಾಗೂ ಮಷಿನ್ ಲರ್ನಿಂಗ್ (ಎಂಎಲ್) ಎಂಬ ನೂತನ ವಿಭಾಗವನ್ನು ಪ್ರಾರಂಭಿಸಲಾಗಿದೆ. ಇದು ಬಹುಶಿಸ್ತೀಯ ಅಧ್ಯಯನ ವಿಭಾಗವಾಗಿದ್ದು, ಕಂಪ್ಯೂಟರ್ ತಂತ್ರಜ್ಞಾನದ ಬಗ್ಗೆ ಹೆಚ್ಚು ಮಾಹಿತಿ ಇರುವವರನ್ನು ಇದರ ಮುಖ್ಯಸ್ಥರನ್ನಾಗಿ ಮಾಡಲಾಗುತ್ತದೆ’ ಎಂದು ಹೇಳಿದರು.
- ‘ಎಐ–ಎಂಎಲ್ ನೂತನ ವಿಭಾಗದಲ್ಲಿ ಕೆಲಸ ಮಾಡುವ ಸಿಬ್ಬಂದಿಗೆ ನಗರದ ಹಲವು ಎಂಜಿನಿಯರಿಂಗ್ ಕಾಲೇಜುಗಳ ನುರಿತ ತಜ್ಞರಿಂದ ತರಬೇತಿ ನೀಡಲಾಗುತ್ತದೆ. ಇದರ ಭಾಗವಾಗಿ ಈಗಾಗಲೇ ಗೀತಂ ವಿಶ್ವ ವಿದ್ಯಾಲಯದೊಂದಿಗೆ ಒಪ್ಪಂದ ಮಾಡಿಕೊಳ್ಳಲಾಗಿದೆ. ರೇವಾ ವಿಶ್ವವಿದ್ಯಾಲಯ, ಮಣಿಪಾಲ್ ಅಕಾಡೆಮಿಯೊಂದಿಗೆ ಒಪ್ಪಂದ ಮಾಡಿಕೊಳ್ಳುವ ಕುರಿತು ಮಾತುಕತೆ ನಡೆಯುತ್ತಿದೆ. ಎಐ–ಎಂಎಲ್ಗೆ ಸಂಬಂಧಿಸಿದ ಕಂಪ್ಯೂಟರ್ ಆಧಾರಿತ ಪಠ್ಯ ವಿಷಯಗಳ ಬಗ್ಗೆ ಎಂಜಿನಿಯರಿಂಗ್ ಕಾಲೇಜು ಹಾಗೂ ವಿಶ್ವವಿದ್ಯಾಲಯಗಳ ಅಧ್ಯಾಪಕರು ನಮ್ಮ ವಿದ್ಯಾರ್ಥಿಗಳಿಗೆ ಪಾಠ ಮಾಡಲಿದ್ದಾರೆ’ ಎಂದರು.
- ‘ಸ್ಯಾಮ್ಸಂಗ್ ಕಂಪನಿಯೊಂದಿಗೆ ಮತ್ತೊಂದು ಒಪ್ಪಂದ ಮಾಡಿಕೊಳ್ಳ ಲಾಗುತ್ತಿದ್ದು, ನೂತನ ಎಐ–ಎಂಎಲ್ನ ವಿಭಾಗದ ವಿಷಯಗಳಿಗೆ ಸಂಬಂಧಿಸಿದಂತೆ ಕಂಪನಿಯ ಸಿಬ್ಬಂದಿಯು ವಿದ್ಯಾರ್ಥಿಗಳಿಗೆ ತರಬೇತಿ ನೀಡಲಿದ್ದಾರೆ. ಪದವಿ ಹಂತದಲ್ಲಿಯೇ ವಿದ್ಯಾರ್ಥಿಗಳಿಗೆ ಇಂತಹ ಈ ವಿಷಯಗಳನ್ನು ಪರಿಚಯಿಸುತ್ತಿದ್ದೇವೆ. ವಿದ್ಯಾರ್ಥಿಗಳು ಉತ್ತೀರ್ಣರಾದ ನಂತರ ಕೃಷಿ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಉದ್ಯೋಗ ಪಡೆದುಕೊಳ್ಳಲು ಸಹಾಯಕವಾಗಲಿದೆ’ ಎಂದು ತಿಳಿಸಿದರು.
‘ಎಐ–ಎಂಎಲ್ ಪದವಿ ಪ್ರಾರಂಭಿಸುವ ಚಿಂತನೆ’
- ‘ರಾಜ್ಯದಲ್ಲಿರುವ ಕೃಷಿ ವಿಶ್ವವಿದ್ಯಾಲಯಗಳ ಪೈಕಿ ಬೆಂಗಳೂರು ಕೃಷಿ ವಿಶ್ವವಿದ್ಯಾಲಯದಲ್ಲಿ ಎಐ–ಎಂಎಲ್ ಕೋರ್ಸ್ ಅನ್ನು ಮೊದಲ ಬಾರಿಗೆ ಪರಿಚಯಿಸಲಾಗುತ್ತಿದೆ. ನಾಲ್ಕು ವರ್ಷಗಳ ನಂತರ ಬಿ.ಎಸ್ಸಿ ಅಗ್ರಿ ಇನ್ ಎಐ–ಎಂಎಲ್, ಬಿ.ಎಸ್ಸಿ ಹಾರ್ಟಿಕಲ್ಚರ್ ಇನ್ ಎಐ–ಎಂಲ್ ವಿಷಯಗಳಲ್ಲಿ ಪದವಿಯನ್ನೂ ಪ್ರಾರಂಭಿಸುವ ಚಿಂತನೆ ಇದೆ’ ಎಂದು ಎಸ್.ವಿ. ಸುರೇಶ ತಿಳಿಸಿದರು.
- ‘ಈಗ ಬಹುತೇಕ ಎಲ್ಲ ಕ್ಷೇತ್ರಗಳಲ್ಲೂ ಎಐ–ಎಂಎಲ್ ಆಕ್ರಮಿಸಿಕೊಂಡಿದೆ. ಆದ್ದರಿಂದ ಕೃಷಿ ಕ್ಷೇತ್ರದಲ್ಲಿ ಬದಲಾವಣೆ ತರಲು ವಿದ್ಯಾರ್ಥಿಗಳನ್ನು ಈ ನೂತನ ಕೋರ್ಸ್ಗೆ ಅಣಿಗೊಳಿಸುತ್ತಿದ್ದೇವೆ’ ಎಂದರು.
- ಅರಣ್ಯ: ಕಾಮಗಾರಿಗಳಿಗೆ ಷರತ್ತುಬದ್ಧ ಒಪ್ಪಿಗೆ
ಸಂದರ್ಭ: ವನ್ಯಜೀವಿ ಮಂಡಳಿ ಸ್ಥಾಯಿ ಸಮಿತಿ ಸಭೆ l ಚಿತ್ತಾಪುರದಲ್ಲಿ ಚಿರತೆ ಸಂರಕ್ಷಣಾ ಮೀಸಲು ಪ್ರಸ್ತಾವ: ಶರಾವತಿ ಸಿಂಗಳೀಕ ವನ್ಯಜೀವಿಧಾಮ, ರಂಗನತಿಟ್ಟು ಪಕ್ಷಿಧಾಮ ಪರಿಸರ ಸೂಕ್ಷ್ಮ ವಲಯ ಹಾಗೂ ಸೋಮೇಶ್ವರ ವನ್ಯಜೀವಿಧಾಮ ದಲ್ಲಿ ರಸ್ತೆ ನಿರ್ಮಾಣ ಮತ್ತು ರಸ್ತೆ ಅಗಲೀಕರಣದ ಯೋಜನೆಗಳಿಗೆ ನಡೆದ ವನ್ಯಜೀವಿ ಮಂಡಳಿಯ ಸ್ಥಾಯಿ ಸಮಿತಿ ಸಭೆ ಷರತ್ತುಬದ್ಧ ಒಪ್ಪಿಗೆ ನೀಡಿದೆ.
- ವನ್ಯಜೀವಿಗಳಿಗೆ ಯಾವುದೇ ರೀತಿಯಲ್ಲಿ ತೊಂದರೆ ಆಗದಂತೆ ಯೋಜನೆಯನ್ನು ರೂಪಿಸಬೇಕು ಎಂಬ ಕರಾರು ವಿಧಿಸಿ ಸಭೆ ಅನುಮೋದನೆ ನೀಡಿತು. ಚಿತ್ತಾಪುರದಲ್ಲಿ ಚಿರತೆ ಸಂರಕ್ಷಣಾ ಮೀಸಲು ಸ್ಥಾಪಿಸುವ ಕುರಿತು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿ ವರದಿ ಸಲ್ಲಿಸುವಂತೆ ಅರಣ್ಯ ಸಚಿವ ಈಶ್ವರ ಖಂಡ್ರೆ ಸೂಚಿಸಿದರು.
- ಸಿಂಗಳೀಕ ವನ್ಯಜೀವಿಧಾಮದ ವ್ಯಾಪ್ತಿಯ ಉತ್ತರ ಕನ್ನಡ ಜಿಲ್ಲೆ ಹೊನ್ನಾವರ ತಾಲ್ಲೂಕಿನ ಹಿರೇಬೈಲ್ ಗ್ರಾಮದ ಅಂದಬಳ್ಳಿ ಮತ್ತು ಇತರ 5 ಗ್ರಾಮಗಳ 325 ಮನೆಗಳಿಗೆ, ಹೊನ್ನಾವರ ಪಟ್ಟಣ ಮತ್ತು ಮಾರ್ಗದಲ್ಲಿರುವ 9 ಗ್ರಾಮ ಪಂಚಾಯಿತಿಗಳಿಗೆ ಕುಡಿಯುವ ನೀರಿನ ಪೈಪ್ಲೈನ್ ಯೋಜನೆಗೆ 0.976 ಹೆಕ್ಟೇರ್ ಅರಣ್ಯ ಪ್ರದೇಶವನ್ನು ನೀಡುವ ಯೋಜನೆಗೆ ಅನುಮೋದನೆ ಪಡೆಯಲು ರಾಷ್ಟ್ರೀಯ ವನ್ಯಜೀವಿ ಮಂಡಳಿಗೆ ಪ್ರಸ್ತಾವ ಕಳುಹಿಸಲು ಸಭೆ ತೀರ್ಮಾನಿಸಿದೆ.
- ಚಾಮರಾಜನಗರ ಜಿಲ್ಲೆ ಕೊಳ್ಳೇಗಾಲ ತಾಲ್ಲೂಕಿನ ಹನೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ 291 ಜನವಸತಿ ಪ್ರದೇಶಗಳಿಗೆ (ಯೋಜನೆ ಹಂತ–2 ರಲ್ಲಿ 193 ಜನವಸತಿ ಪ್ರದೇಶಗಳಿಗೆ) ಕುಡಿಯುವ ನೀರಿನ ಸಂಪರ್ಕ ನೀಡುವ ಪ್ರಸ್ತಾವದ ಬಗ್ಗೆ ಚರ್ಚಿಸಿದ ಮಂಡಳಿ, ಇದಕ್ಕಾಗಿ 4.4 ಹೆಕ್ಟೇರ್ ಅರಣ್ಯ ಭೂಮಿ ನೀಡುವ ಪ್ರಸ್ತಾವಕ್ಕೆ ಒಪ್ಪಿಗೆ ಪಡೆಯಲು ರಾಷ್ಟ್ರೀಯ ವನ್ಯಜೀವಿ ಮಂಡಳಿಯ ಅನುಮೋದನೆಗೆ ಕಳುಹಿಸಲು ತೀರ್ಮಾನಿಸಲಾಗಿದೆ.
- ಅತ್ತಿವೇರಿ ಪಕ್ಷಿಧಾಮ, ಶರಾವತಿ ಸಿಂಗಳೀಕ ವನ್ಯಜೀವಿಧಾಮ ಹಾಗೂ ಸೋಮೇಶ್ವರ ವನ್ಯಜೀವಿಧಾಮದಲ್ಲಿ ಸಂವಹನ ಕಂಬಗಳನ್ನು ಅಳವಡಿಸುವ ಕುರಿತಾದ ಬಿಎಸ್ಎನ್ಎಲ್ ಪ್ರಸ್ತಾವವನ್ನು ಮುಂದೂಡಲು ಸಭೆಯಲ್ಲಿ ತೀರ್ಮಾನಿಸಲಾಯಿತು. ಈ ಸಂವಹನ ಕಂಬಗಳಿಂದ ಪರಿಸರಕ್ಕೆ, ಪಶುಪಕ್ಷಿ ಗಳಿಗೆ ಆಗುವ ತೊಂದರೆ ಕುರಿತು ವಿವರ ಮಂಡಿಸಲು ಸೂಚಿಸಲಾಯಿತು.
- ಪಶ್ಚಿಮಘಟ್ಟದಲ್ಲಿ ಕಾರ್ಯಗತವಾಗಿರುವ ರಸ್ತೆ ಮತ್ತಿತರ ಅಭಿವೃದ್ಧಿ ಯೋಜನೆಗಳಲ್ಲಿ ಷರತ್ತುಗಳ ಪಾಲನೆ ಆಗಿದೆಯೇ ಇಲ್ಲವೇ ಎಂಬ ಬಗ್ಗೆ ಪರಾಮರ್ಶೆ ನಡೆಸುವಂತೆ ಈಶ್ವರ ಖಂಡ್ರೆ ಸೂಚಿಸಿದರು.
- ಅರಣ್ಯ ಮತ್ತು ವನ್ಯಜೀವಿಧಾಮಗಳಲ್ಲಿ ಯಾವುದೇ ಯೋಜನೆಗೆ ಅನುಮತಿ ನೀಡುವಾಗ ವನ್ಯಜೀವಿಗಳಿಗೆ ತೊಂದರೆ ಆಗದಂತೆ ಅಪಾಯ ತಗ್ಗಿಸುವ ಪರಿಹಾರಗಳೊಂದಿಗೆ ಪ್ರಸ್ತಾವನೆ ಮಂಡಿಸುವುದನ್ನು ಕಡ್ಡಾಯಗೊಳಿಸುವಂತೆ ಅವರು ನಿರ್ದೇಶನ ನೀಡಿದರು.
‘ರೇಡಿಯೊ ಕಾಲರ್ ಹಾಕಿ ಕಾಡಿಗೆ ಬಿಡಿ’
- ಚಿಕ್ಕಮಗಳೂರು ಜಿಲ್ಲೆ ಶೃಂಗೇರಿ ಬಳಿಯ ಕೆರೆಕಟ್ಟೆ ಸಮೀಪ ಸೆರೆ ಹಿಡಿಯಲಾಗಿರುವ ಆನೆಗೆ ರೇಡಿಯೊ ಕಾಲರ್ ಅಳವಡಿಸಿ ಕಾಡಿಗೆ ಬಿಡುವುದು ಸೂಕ್ತ ಎಂದು ಸಚಿವ ಈಶ್ವರ ಖಂಡ್ರೆ ಸಭೆಯಲ್ಲಿ ಸೂಚಿಸಿದರು.
ಕುಂಬ್ಳೆ ಕರೆಯಲು ಸೂಚನೆ
- ಅರಣ್ಯ ಮತ್ತು ವನ್ಯಜೀವಿ ರಾಯಭಾರಿ ಯಾಗಿ ನೇಮಕಗೊಂಡಿರುವ ಅನಿಲ್ ಕುಂಬ್ಳೆ ಅವರನ್ನು ಮುಂದಿನ ಸಭೆಗಳಿಗೆ ಆಹ್ವಾನಿಸುವಂತೆ ಮುಖ್ಯ ವನ್ಯಜೀವಿ ಪರಿಪಾಲಕರಿಗೆ ಖಂಡ್ರೆ ಸೂಚನೆ ನೀಡಿದರು.
- 2025ರ ಪ್ರಕಾಶಮಾನ ಚಂದಿರ ಗೋಚರ
ಸಂದರ್ಭ: ಪ್ರಸಕ್ತ ವರ್ಷದ ಅತಿದೊಡ್ಡ ಹಾಗೂ ಅತ್ಯಂತ ಪ್ರಕಾಶಮಾನವಾದ ಚಂದ್ರ (ಸೂಪರ್ ಮೂನ್) ಬುಧವಾರ ಗೋಚರಿಸಿದೆ. ‘ನವೆಂಬರ್ ಸೂಪರ್ ಮೂನ್’ ಎಂದು ಕರೆಯಲಾಗುವ ಈ ಚಂದ್ರ, ಸಾಮಾನ್ಯ ಹುಣ್ಣಿಮೆಯ ಚಂದ್ರನಿಗಿಂತಲೂ ಭೂಮಿಗೆ ಬರೋಬ್ಬರಿ 17,000 ಮೈಲಿಗಳಷ್ಟು ಸಮೀಪದಲ್ಲಿದ್ದದ್ದು ವಿಶೇಷ.
- 2025ನೇ ಸಾಲಿನಲ್ಲಿ ಕಾಣಿಸಿ ಕೊಳ್ಳುವ ಮೂರು ಸೂಪರ್ ಮೂನ್ಗಳ ಪೈಕಿ ಇದು ಎರಡನೆಯದ್ದಾಗಿದ್ದು, ಸಾಮಾನ್ಯ ಹುಣ್ಣಿಮೆ ಚಂದ್ರನಿಗಿಂತ ಈ ಸೂಪರ್ ಮೂನ್ ಶೇಕಡ 14ರಷ್ಟು ದೊಡ್ಡದಾಗಿ ಹಾಗೂ ಶೇ 30ರಷ್ಟು ಹೆಚ್ಚು ಪ್ರಕಾಶಮಾನವಾಗಿ ಕಾಣಿಸಿಕೊಂಡಿದೆ.
- ಭೂಮಿಯಿಂದ 3,57,000 ಕಿ.ಮೀ.ದೂರದಲ್ಲಿ ಅಂದರೆ ಅತ್ಯಂತ ಸಮೀಪದಲ್ಲಿ ಚಂದ್ರ ಗೋಚರಿಸಿರುವ ಕಾರಣ, ಇದು ಅತ್ಯಂತ ದೊಡ್ಡದಾಗಿ ಹಾಗೂ ಪ್ರಕಾಶಮಾನವಾಗಿ ಕಾಣಿಸಿಕೊಂಡಿದೆ ಎಂದು ಎನ್ಡಿಟಿವಿ ವರದಿ ಮಾಡಿದೆ.
- ಸಂಜೆ 6.49ರ ಸುಮಾರಿಗೆ ದೇಶದ ವಿವಿಧ ಭಾಗಗಳಲ್ಲಿ ಜನರು ಸೂಪರ್ ಮೂನ್ ವೀಕ್ಷಿಸಲು ಸಾಧ್ಯವಾಗಿದ್ದು, ಹಲವರು ‘ಅತ್ಯಂತ ಪ್ರಕಾಶಮಾನವಾದ ಸೂಪರ್ ಮೂನ್’ ಎಂಬ ಶೀರ್ಷಿಕೆಗಳೊಂದಿಗೆ ಫೋಟೊಗಳನ್ನು ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.
- ದಶಕ ಕಳೆದರೂ ಸಿಗದ ನ್ಯಾಯಬೆಲೆ

- ‘ಎ.ಐ: ಅಗತ್ಯ ಎದುರಾದರೆ ನಿಯಂತ್ರಣ’
ಸಂದರ್ಭ: ಕೃತಕ ಬುದ್ಧಿಮತ್ತೆ (ಎ.ಐ) ವಲಯದಲ್ಲಿ ಅಗತ್ಯ ಸೃಷ್ಟಿಯಾದಾಗ ನಿಯಂತ್ರಣ ಕ್ರಮಗಳನ್ನು ಅಥವಾ ಕಾನೂನನ್ನು ಜಾರಿಗೆ ತರಲಾಗುತ್ತದೆ ಎಂದು ಕೇಂದ್ರ ಮಾಹಿತಿ ತಂತ್ರಜ್ಞಾನ (ಐ.ಟಿ.) ಕಾರ್ಯದರ್ಶಿ ಎಸ್. ಕೃಷ್ಣನ್ ಹೇಳಿದ್ದಾರೆ.
- ಈಗ ಸರ್ಕಾರವು ಕೃತಕ ಬುದ್ಧಿಮತ್ತೆ ವಲಯದಲ್ಲಿನ ಆವಿಷ್ಕಾರಗಳ ಮೇಲೆ ಗಮನ ನೀಡುತ್ತಿದೆ. ಎ.ಐ. ಮೂಲಕ ದೇಶದ ಜನರಿಗೆ ಅತ್ಯಂತ ಹೆಚ್ಚಿನ ಲಾಭ ತಂದುಕೊಡಲು ಸರ್ಕಾರ ಬಯಸುತ್ತಿದೆ ಎಂದು ಅವರು ಹೇಳಿದ್ದಾರೆ.
- ‘ಆವಿಷ್ಕಾರಗಳಿಗೆ ಹೆಚ್ಚಿನ ಆದ್ಯತೆ ನೀಡುವುದು ಇಂದಿನ ಅಗತ್ಯ ಎಂದು ಭಾವಿಸುವುದಾದರೆ, ನಿಯಂತ್ರಣ ಕ್ರಮಗಳನ್ನು ಜಾರಿಗೆ ತರುವುದು ಇಂದಿನ ಆದ್ಯತೆ ಆಗುವುದಿಲ್ಲ… ಆದರೆ ನಿಯಂತ್ರಣ ಕ್ರಮಗಳಿಗೆ ಅಥವಾ ಕಾನೂನಿನ ಜಾರಿಗೆ ಅಗತ್ಯ ಎದುರಾದರೆ ಸರ್ಕಾರ ಆಗ ಹಿಂದೇಟು ಹಾಕುವುದಿಲ್ಲ’ ಎಂದು ಕೃಷ್ಣನ್ ತಿಳಿಸಿದ್ದಾರೆ.
- ಡಿಸೆಂಬರ್ನಿಂದ ರಷ್ಯಾ ತೈಲ ಇಲ್ಲ
ಸಂದರ್ಭ: ನೇರ ಆಮದು ನಿಲ್ಲುವ ಸಾಧ್ಯತೆ, ಮಧ್ಯವರ್ತಿಗಳ ಮೂಲಕ ಆಮದು ಮುಂದುವರಿಕೆ: ಭಾರತದ ಕಂಪನಿಗಳು ರಷ್ಯಾದಿಂದ ಕಚ್ಚಾ ತೈಲವನ್ನು ನೇರವಾಗಿ ಆಮದು ಮಾಡಿಕೊಳ್ಳುವುದನ್ನು ನವೆಂಬರ್ ಕೊನೆಯ ವಾರದಿಂದ ಕಡಿಮೆ ಮಾಡಲಿವೆ.
- ರಷ್ಯಾದ ರೊಸ್ನೆಫ್ಟ್ ಹಾಗೂ ಲುಕಾಯಿಲ್ ಕಂಪನಿಗಳ ಮೇಲೆ ಅಮೆರಿಕವು ವಿಧಿಸಿರುವ ನಿರ್ಬಂಧಕ್ಕೆ ಅನುಗುಣವಾಗಿ ಭಾರತದ ತೈಲ ಸಂಸ್ಕರಣಾ ಕಂಪನಿಗಳು ನಡೆದುಕೊಳ್ಳುವ ನಿರೀಕ್ಷೆ ಇದೆ ಎಂದು ತಜ್ಞರು ಹೇಳಿದ್ದಾರೆ.
- ಇದರಿಂದಾಗಿ ಡಿಸೆಂಬರ್ನಲ್ಲಿ ಭಾರತಕ್ಕೆ ಬರುವ ರಷ್ಯಾದ ಕಚ್ಚಾ ತೈಲದ ಪ್ರಮಾಣ ತೀವ್ರವಾಗಿ ತಗ್ಗಲಿದೆ. ನಂತರದಲ್ಲಿ, 2026ರ ಆರಂಭದಿಂದ ಮಧ್ಯವರ್ತಿಗಳು ಹಾಗೂ ಪರ್ಯಾಯ ವ್ಯಾಪಾರ ಮಾರ್ಗಗಳ ಮೂಲಕ ರಷ್ಯಾದ ಕಚ್ಚಾ ತೈಲದ ಆಮದು ನಿಧಾನವಾಗಿ ಹೆಚ್ಚಳವಾಗುವ ಅಂದಾಜು ಇದೆ.
- ರಷ್ಯಾದಿಂದ ಕಚ್ಚಾ ತೈಲ ಆಮದು ಮಾಡಿಕೊಳ್ಳುವ ಕಂಪನಿಗಳ ಸಾಲಿನಲ್ಲಿ ಮೊದಲ ಸ್ಥಾನದಲ್ಲಿರುವ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಅಲ್ಲಿಂದ ಖರೀದಿಯನ್ನು ನಿಲ್ಲಿಸಲಿದೆ. ಸರ್ಕಾರಿ ಸ್ವಾಮ್ಯದ ಇತರ ಎರಡು ಸಂಸ್ಕರಣಾ ಕಂಪನಿಗಳು ರಷ್ಯಾದಿಂದ ತೈಲ ಆಮದು ನಿಲ್ಲಿಸುವುದಾಗಿ ಹೇಳಿವೆ. ಎಂಆರ್ಪಿಎಲ್ ಹಾಗೂ ಎಚ್ಪಿಸಿಎಲ್–ಮಿತ್ತಲ್ ಎನರ್ಜಿ ಲಿಮಿಟೆಡ್ ಕಂಪನಿ ಮುಂದಿನ ದಿನಗಳಲ್ಲಿ ಆಮದನ್ನು ಅಮಾನತಿನಲ್ಲಿ ಇರಿಸುವ ಆಲೋಚನೆ ಇರುವುದಾಗಿ ಹೇಳಿವೆ.
- ಆದರೆ ನಯಾರಾ ಎನರ್ಜಿ ಕಂಪನಿಯ ವಾದಿನಾರ್ ತೈಲ ಸಂಸ್ಕರಣಾ ಘಟಕವು ರಷ್ಯಾದಿಂದ ತೈಲ ಆಮದನ್ನು ಮುಂದುವರಿಸುವ ನಿರೀಕ್ಷೆ ಇದೆ. ನಯಾರಾ ಕಂಪನಿಯಲ್ಲಿ ರೊಸ್ನೆಫ್ಟ್ನ ಹೂಡಿಕೆ ಇದೆ.
- ದತ್ತಾಂಶ ವಿಶ್ಲೇಷಣಾ ಸಂಸ್ಥೆ ಕೆಪ್ಲರ್ನ ಮುಖ್ಯ ಸಂಶೋಧನಾ ವಿಶ್ಲೇಷಕ ಸುಮಿತ್ ರಿತೋಲಿಯಾ ಅವರ ಪ್ರಕಾರ, ಅಕ್ಟೋಬರ್ನಲ್ಲಿ ಭಾರತಕ್ಕೆ ಕಚ್ಚಾ ತೈಲ ಪೂರೈಸಿದ ದೇಶಗಳ ಸಾಲಿನಲ್ಲಿ ರಷ್ಯಾ ಮೊದಲ ಸ್ಥಾನದಲ್ಲಿದೆ. ಇರಾಕ್ ಮತ್ತು ಸೌದಿ ಅರೇಬಿಯಾ ನಂತರದ ಸ್ಥಾನಗಳಲ್ಲಿವೆ.
- ತಜ್ಞರ ಪ್ರಕಾರ ರಷ್ಯಾದಿಂದ ಕಚ್ಚಾ ತೈಲ ಆಮದು ಸಂಪೂರ್ಣವಾಗಿ ನಿಲ್ಲುವ ಸಾಧ್ಯತೆ ಇಲ್ಲ. ಆದರೆ ಮುಂದಿನ ದಿನಗಳಲ್ಲಿ ಆಮದು ಹೆಚ್ಚು ಸಂಕೀರ್ಣವಾದ ಸಾಗಣೆ ಮತ್ತು ಖರೀದಿ ವ್ಯವಸ್ಥೆಯನ್ನು ಆಶ್ರಯಿಸಲಿದೆ.
- ‘ಡಿಸೆಂಬರ್ನಲ್ಲಿ ರಷ್ಯಾದ ಕಚ್ಚಾ ತೈಲ ಆಮದು ಗಣನೀಯವಾಗಿ ಕಡಿಮೆ ಆಗಬಹುದು. 2026ರ ಮೊದಲಾರ್ಧದ ಮಧ್ಯಭಾಗದಲ್ಲಿ ಅಥವಾ ಕೊನೆಯ ಹಂತದಲ್ಲಿ, ಹೊಸ ಮಧ್ಯವರ್ತಿಗಳು ಹಾಗೂ ಪರ್ಯಾಯ ಮಾರ್ಗಗಳು ಸೃಷ್ಟಿಯಾದ ನಂತರ ಅಲ್ಲಿಂದ ತೈಲ ತರಿಸಿಕೊಳ್ಳುವುದು ಹಂತ ಹಂತವಾಗಿ ಹೆಚ್ಚಳವಾಗಬಹುದು’ ಎಂದು ಹೇಳಿದ್ದಾರೆ.
- ಸ್ಟಾರ್ಲಿಂಕ್ ಜೊತೆ ಮಹಾರಾಷ್ಟ್ರ ಸರ್ಕಾರ ಒಪ್ಪಂದ
ಸಂದರ್ಭ: ಉಪಗ್ರಹ ಆಧಾರಿತ ಇಂಟರ್ನೆಟ್ ಸೇವೆ ಒದಗಿಸುವ, ಉದ್ಯಮಿ ಇಲಾನ್ ಮಸ್ಕ್ ಒಡೆತನದ ಸ್ಟಾರ್ಲಿಂಕ್ ಕಂಪನಿಯ ಜೊತೆ ಮಹಾರಾಷ್ಟ್ರ ಸರ್ಕಾರ ಒಪ್ಪಂದ ಮಾಡಿಕೊಂಡಿದೆ.
- ಮಹಾರಾಷ್ಟ್ರವು ಸ್ಟಾರ್ಲಿಂಕ್ ಜೊತೆಗೆ ಒಪ್ಪಂದ ಮಾಡಿಕೊಂಡ ದೇಶದ ಮೊದಲ ರಾಜ್ಯವಾಗಿದೆ ಎಂದು ಮಹಾರಾಷ್ಟ್ರ ಸರ್ಕಾರ ತಿಳಿಸಿದೆ. ಈ ಕುರಿತ ಒಪ್ಪಂದಕ್ಕೆ ಸರ್ಕಾರವು ಸ್ಟಾರ್ಲಿಂಕ್ ಸ್ಯಾಟ್ಲೈಟ್ ಕಮ್ಯುನಿಕೇಷನ್ಸ್ ಪ್ರೈವೆಟ್ ಲಿಮಿಟೆಡ್ನೊಂದಿಗೆ ಸಹಿ ಹಾಕಿದೆ.
- ‘ಈ ಒಪ್ಪಂದದಿಂದ ಉಪಗ್ರಹ ಆಧಾರಿತ ಇಂಟರ್ನೆಟ್ ಸೇವೆಯನ್ನು ಸರ್ಕಾರಿ ಸಂಸ್ಥೆಗಳು, ಗ್ರಾಮೀಣ ಪ್ರದೇಶಗಳು, ಕುಗ್ರಾಮ ಮತ್ತು ಹಿಂದುಳಿದ ಪ್ರದೇಶಗಳಲ್ಲಿ ಒದಗಿಸಲಾಗುವುದು’ ಎಂದು ಮಹಾರಾಷ್ಟ್ರದ ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್ ‘ಎಕ್ಸ್’ನಲ್ಲಿ ತಿಳಿಸಿದ್ದಾರೆ.
- ‘ಸ್ಟಾರ್ಲಿಂಕ್ ಮಾಹಿತಿ ಮತ್ತು ಸಂವಹನ ತಂತ್ರಜ್ಞಾನ (ಐಸಿಟಿ) ಕ್ಷೇತ್ರದ ಅತಿದೊಡ್ಡ ಕಂಪನಿಗಳಲ್ಲಿ ಒಂದಾಗಿದೆ. ಕಂಪನಿಯೊಂದಿಗೆ ಮಹಾರಾಷ್ಟ್ರ ಒಪ್ಪಂದ ಹೊಂದಿರುವುದು ನಮಗೆ ಗೌರವವಾಗಿದೆ’ ಎಂದು ತಿಳಿಸಿದ್ದಾರೆ.
- ಈ ಸಹಯೋಗವು ಡಿಜಿಟಲ್ ಮಹಾರಾಷ್ಟ್ರ ಮಿಷನ್, ಕರಾವಳಿ ಅಭಿವೃದ್ಧಿ ಸೇರಿ ಹಲವು ಅಭಿವೃದ್ಧಿಗೆ ನೆರವಾಗಲಿದೆ ಎಂದು ಹೇಳಿದ್ದಾರೆ.
- ಡೆಟ್ರಾಯಿಟ್: ಮೊದಲ ಮಹಿಳಾ ಮೇಯರ್ ಆಯ್ಕೆ
- ಡೆಟ್ರಾಯಿಟ್ನ ಮೊದಲ ಮಹಿಳಾ ಮೇಯರ್ ಆಗಿ ಮೇರಿ ಶೆಫೀಲ್ಡ್ ಅವರು ಆಯ್ಕೆಯಾಗಿದ್ದಾರೆ. ಸದ್ಯ ಅವರು ಸಿಟಿ ಕೌನ್ಸಿಲ್ ಅಧ್ಯಕ್ಷೆ ಆಗಿದ್ದಾರೆ.
- ಪ್ರಮುಖ ಚರ್ಚ್ವೊಂದರ ಪ್ರಸಿದ್ಧ ಪಾದ್ರಿ ಸೊಲೊಮನ್ ಕಿನ್ನೊಚ್ ಅವರನ್ನು ಶೆಫೀಲ್ಡ್ ಸಾರ್ವತ್ರಿಕ ಚುನಾವಣೆಯಲ್ಲಿ ಪರಾಭವಗೊಳಿಸಿದ್ದಾರೆ. ಮೇಯರ್ ಆಗಿ ಜನವರಿಯಲ್ಲಿ ಅವರು ಅಧಿಕಾರ ಸ್ವೀಕರಿಸಲಿದ್ದಾರೆ.
- 2013ರಲ್ಲಿ ಶೆಫೀಲ್ಡ್ ತಮ್ಮ 26ನೇ ವಯಸ್ಸಿನಲ್ಲಿ ಸಿಟಿ ಕೌನ್ಸಿಲ್ಗೆ ಆಯ್ಕೆಯಾಗಿದ್ದು, 2022ರಲ್ಲಿ ಕೌನ್ಸಿಲ್ನ ಅಧ್ಯಕ್ಷರಾಗಿದ್ದರು.
- ‘ಡೆಟ್ರಾಯಿಟ್ನ ಮಕ್ಕಳಿಗೆ ಶಿಕ್ಷಣ ನೀಡುವ ಕಡೆ ಹೆಚ್ಚು ಗಮನ ನೀಡುತ್ತೇನೆ. ಸಾರ್ವಜನಿಕರ ಸುರಕ್ಷತೆ ಮತ್ತು ಜೀವನಮಟ್ಟ ಸುಧಾರಿಸುವುದು ಚುನಾಯಿತ ಮೇಯರ್ ಆಗಿ ನನ್ನ ಆದ್ಯತೆಯಾಗಿದೆ’ ಎಂದು ಮೇರಿ ಶೆಫೀಲ್ಡ್ ಹೇಳಿದ್ದಾರೆ.
- ಸಾಲದ ಹಣ ಕೌಶಲ ವೃದ್ಧಿಗೆ ಬಳಕೆ: ಸಮೀಕ್ಷೆ
ಸಂದರ್ಭ: ದೇಶದ ಯುವಕರು ಸಾಲದ ರೂಪದಲ್ಲಿ ಪಡೆಯುವ ಹಣವನ್ನು ಬಹಳ ಜವಾಬ್ದಾರಿಯಿಂದ ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಅವರು ಈ ಹಣವನ್ನು ಕೌಶಲ ಹೆಚ್ಚಿಸಿಕೊಳ್ಳಲು, ವೃತ್ತಿಯಲ್ಲಿ ಬೆಳವಣಿಗೆ ಸಾಧಿಸಲು, ಉದ್ಯಮ ಲೋಕದಲ್ಲಿನ ಗುರಿಗಳನ್ನು ಸಾಧಿಸಲು ಬಳಸುತ್ತಿದ್ದಾರೆ ಎಂದು ಸಮೀಕ್ಷೆಯೊಂದು ಹೇಳಿದೆ.
- ಸಾಲ ನೀಡುವ ವೇದಿಕೆ ಎಂ–ಪಾಕೆಟ್ ನಡೆಸಿರುವ ಸಮೀಕ್ಷೆಯ ಪ್ರಕಾರ ಇಂದಿನ ತಲೆಮಾರಿನ ಜನರಿಗೆ ಸಾಲ ಪಡೆಯುವುದು ಹೊಸ ಸಾಧ್ಯತೆಗಳನ್ನು ಅರಸಲು ಇರುವ ಒಂದು ಮಾರ್ಗ.
- ಸಮೀಕ್ಷೆಯಲ್ಲಿ ಭಾಗಿಯಾಗಿದ್ದವರ ಪೈಕಿ ಶೇಕಡ 63ರಷ್ಟು ಮಂದಿ ಸಾಲದಿಂದಾಗಿ ತಮ್ಮ ಹಣಕಾಸಿನ ಸ್ಥಿತಿಯ ಮೇಲೆ ಉತ್ತಮ ಪರಿಣಾಮ ಉಂಟಾಗಿದೆ ಎಂದು ಹೇಳಿದ್ದಾರೆ, ಶೇ 40ರಷ್ಟು ಮಂದಿ ಸಾಲವನ್ನು ವೃತ್ತಿಯಲ್ಲಿ ಮುಂದೆ ಬರಲು, ಜೀವನಶೈಲಿಯಲ್ಲಿ ಸುಧಾರಣೆ ತರಲು, ಶಿಕ್ಷಣಕ್ಕಾಗಿ ಬಳಕೆ ಮಾಡಿಕೊಂಡಿದ್ದಾರೆ.
- ಮೂರು ಸಾವಿರಕ್ಕೂ ಹೆಚ್ಚು ಯುವಕರು ಈ ಸಮೀಕ್ಷೆಯಲ್ಲಿ ಭಾಗಿಯಾಗಿದ್ದರು. ಶೇ 23.4ರಷ್ಟು ಮಂದಿ ಆರೋಗ್ಯ ವೆಚ್ಚ ನಿಭಾಯಿಸಲು ಸಾಲ ಪಡೆಯುತ್ತಿದ್ದಾರೆ, ಶೇ 12.4ರಷ್ಟು ಮಂದಿ ತುರ್ತು ಸಂದರ್ಭ ನಿಭಾಯಿಸಲು ಸಾಲ ಪಡೆಯುತ್ತಿದ್ದಾರೆ. ಯುವಕರು ಸಾಲ ಪಡೆದು ತಮ್ಮ ಸ್ಥಿತಿಯನ್ನು ಉತ್ತಮಪಡಿಸಿಕೊಳ್ಳಲು, ದೀರ್ಘಾವಧಿಯಲ್ಲಿ ಬೆಳವಣಿಗೆ ಸಾಧಿಸಲು ಅದನ್ನು ಬಳಸಿಕೊಳ್ಳುತ್ತಿರುವುದು ಸಮೀಕ್ಷೆಯಲ್ಲಿ ಕಂಡುಬಂದಿದೆ.
- ಅಣ್ವಸ್ತ್ರ ಪರೀಕ್ಷೆ ಪುನರಾರಂಭ: ವ್ಲಾದಿಮಿರ್ ಪುಟಿನ್ ಸೂಚನೆ
ಸಂದರ್ಭ: ‘ಅಣ್ವಸ್ತ್ರ ಪರೀಕ್ಷೆಗಳನ್ನು ಪುನರಾರಂಭಿಸುವ ಸಾಧ್ಯತೆ ಕುರಿತು ಶೀಘ್ರವೇ ಪ್ರಸ್ತಾವ ಸಲ್ಲಿಸಿ’ ಎಂದು ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅಧಿಕಾರಿಗಳಿಗೆ ಆದೇಶಿಸಿದ್ದಾರೆ.
- ಅಮೆರಿಕವು ಅಣ್ವಸ್ತ್ರ ಪರೀಕ್ಷೆಗಳನ್ನು ಪುನರಾರಂಭಿಸುವ ಬಗ್ಗೆ, ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಇತ್ತೀಚಿನ ಹೇಳಿಕೆಗೆ ಪ್ರತಿಯಾಗಿ ರಷ್ಯಾ ಈ ಪ್ರತಿಕ್ರಿಯೆ ನೀಡಿದೆ.
- ಭದ್ರತಾ ಮಂಡಳಿ ಸದಸ್ಯರೊಂದಿಗೆ ಚರ್ಚೆ ನಡೆಸಿದ ಪುಟಿನ್, ‘ಅಮೆರಿಕ ಮೊದಲು ಅಣ್ವಸ್ತ್ರ ಪರೀಕ್ಷೆ ನಡೆಸಿದರೆ ಮಾತ್ರ ರಷ್ಯಾ ಅಣ್ವಸ್ತ್ರ ಪರೀಕ್ಷೆಗಳನ್ನು ಪುನರಾರಂಭಿಸುತ್ತದೆ’ ಎಂಬ ತಮ್ಮ ಹಿಂದಿನ ಹೇಳಿಕೆಯನ್ನು ದೃಢಪಡಿಸಿದರು.
- ಮತ್ತೆ ಮೇಯರ್ ಆದ ಪುರೆವಾಲ್
ಸಂದರ್ಭ: ಭಾರತೀಯ ಮೂಲದ ಪುರೆವಾಲ್ ಅವರು ಅಮೆರಿಕದ ಉಪಾಧ್ಯಕ್ಷ ಜೆ.ಡಿ.ವ್ಯಾನ್ಸ್ ಅವರ ಸಹೋದರ ಕೋರಿ ಬೌಮನ್ ಅವರನ್ನು ಪರಾಭವಗೊಳಿಸಿ ಎರಡನೇ ಬಾರಿಗೆ ಸಿನ್ಸಿನಾಟಿಯ ಮೇಯರ್ ಹುದ್ದೆಗೇರಿದ್ದಾರೆ.
- ಇದರೊಂದಿಗೆ ಡೆಮಾಕ್ರಟ್ಗಳು ಸಿನ್ಸಿನಾಟಿಯ ಸ್ಥಳೀಯ ಸರ್ಕಾರದ ಹಿಡಿತವನ್ನು ಪಡೆದಿದ್ದಾರೆ ಮತ್ತು ಒಹಿಯೊನಲ್ಲಿ ಪುರೆವಾಲ್ ಅವರ ರಾಜಕೀಯ ಭವಿಷ್ಯವು ಉಜ್ವಲವಾಗುವ ಸೂಚನೆ ಲಭಿಸಿದೆ ಎಂದು ಸ್ಥಳೀಯ ಮಾಧ್ಯಮಗಳಲ್ಲಿ ವರದಿಯಾಗಿದೆ.
- ನಾಸ್ಕಾಂ ಫೌಂಡೇಷನ್ನಿಂದ ಮಹಿಳಾ ಉದ್ಯಮಿಗಳಿಗೆ ನೆರವು
ಸಂದರ್ಭ: ಮಹಿಳಾ ಉದ್ಯಮಿಗಳನ್ನು ಇ–ವಾಣಿಜ್ಯ ಕ್ಷೇತ್ರದ ಮುಖ್ಯವಾಹಿನಿಗೆ ತರುವ ಉದ್ದೇಶದಿಂದ ನಾಸ್ಕಾಂ ಫೌಂಡೇಷನ್ ಮತ್ತು ಒಎನ್ಡಿಸಿ ನೆಟ್ವರ್ಕ್ ಜೊತೆಯಾಗಿ ಹೊಸ ಯೋಜನೆಯೊಂದನ್ನು ರೂಪಿಸಿವೆ. ಇದು ಕರ್ನಾಟಕದ ಮಹಿಳಾ ಉದ್ಯಮಿಗಳನ್ನು ಆದ್ಯತೆಯನ್ನಾಗಿ ಇರಿಸಿಕೊಂಡಿದೆ.
- ಈ ಯೋಜನೆಯ ಮೂಲಕ ಮಹಿಳೆಯರ ನೇತೃತ್ವದ 200 ಉದ್ಯಮಗಳನ್ನು ಒಎನ್ಡಿಸಿ ನೆಟ್ವರ್ಕ್ ವ್ಯಾಪ್ತಿಗೆ ತರಲಾಗಿದೆ, ಅವರಿಗೆ ಇ–ವಾಣಿಜ್ಯ ಮಾರುಕಟ್ಟೆ ಲಭ್ಯವಾಗುವಂತೆ ಮಾಡಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.
- ‘ಭಾರತದ ಇ–ವಾಣಿಜ್ಯ ಮಾರುಕಟ್ಟೆಯು 2034ರ ವೇಳೆಗೆ ಅಮೆರಿಕದ ಇ–ವಾಣಿಜ್ಯ ಮಾರುಕಟ್ಟೆಯನ್ನು ಮೀರಿ ಬೆಳೆಯುವ ಅಂದಾಜು ಇದೆ. ಹೀಗಿದ್ದರೂ, ಈ ವಲಯದಲ್ಲಿ ಬೆಳೆಯಲು ಬೇಕಿರುವ ಡಿಜಿಟಲ್ ಪರಿಣತಿಯು ಸಣ್ಣ ಹಾಗೂ ಮಧ್ಯಮ ಗಾತ್ರದ ವ್ಯಾಪಾರಿಗಳ ಪೈಕಿ ಹಲವರಿಗೆ ಈಗಲೂ ಇಲ್ಲ.
- ಒಎನ್ಡಿಸಿ ಜೊತೆಗಿನ ನಮ್ಮ ಪಾಲುದಾರಿಕೆಯು 200ಕ್ಕೂ ಹೆಚ್ಚು ಮಹಿಳಾ ಉದ್ಯಮಿಗಳಿಗೆ ಆನ್ಲೈನ್ ಮಾರುಕಟ್ಟೆಯಲ್ಲಿ ಬೆಳವಣಿಗೆ ಸಾಧಿಸಲು ನೆರವಾಗಿದೆ’ ಎಂದು ನಾಸ್ಕಾಂ ಫೌಂಡೇಷನ್ನ ಸಿಇಒ ಜ್ಯೋತಿ ಶರ್ಮಾ ಹೇಳಿದ್ದಾರೆ. ಬೆಂಗಳೂರು, ಮೈಸೂರು, ಹುಬ್ಬಳ್ಳಿ, ಬೆಳಗಾವಿ, ಉಡುಪಿ ಸೇರಿದಂತೆ 22 ಜಿಲ್ಲೆಗಳ ಗ್ರಾಮೀಣ ಹಾಗೂ ನಗರ ಪ್ರದೇಶಗಳಲ್ಲಿ ಈ ಯೋಜನೆಯನ್ನು ಅನುಷ್ಠಾನಕ್ಕೆ ತರಲಾಗಿದೆ ಎಂದು ಪ್ರಕಟಣೆಯಲ್ಲಿ ಹೇಳಲಾಗಿದೆ.