- ಡಿಜಿಟಲ್ ಅರೆಸ್ಟ್ ವಿರುದ್ಧ ಕಠಿಣ ಕಾನೂನು: ಸುಪ್ರೀಂ
ಸಂದರ್ಭ: ‘ಡಿಜಿಟಲ್ ಅರೆಸ್ಟ್’ ಹೆಸರಿನಲ್ಲಿ ದೇಶದ ಜನರನ್ನು ಬೆದರಿಸಿ ₹3,000 ಕೋಟಿಗೂ ಹೆಚ್ಚು ಮೊತ್ತವನ್ನು ಸುಲಿಗೆ ಮಾಡಲಾಗಿದೆ ಎಂದು ಕೇಂದ್ರ ಗೃಹ ಸಚಿವಾಲಯ ಮತ್ತು ಸಿಬಿಐ ಸುಪ್ರೀಂ ಕೋರ್ಟ್ಗೆ ತಿಳಿಸಿವೆ. ಈ ಕುರಿತು ತೀವ್ರ ಆಘಾತ ವ್ಯಕ್ತಪಡಿಸಿರುವ ಸುಪ್ರೀಂ ಕೋರ್ಟ್, ‘ಈ ಪಿಡುಗು ನಿಯಂತ್ರಣಕ್ಕೆ ಕಠಿಣ ಕ್ರಮ ಅಗತ್ಯ’ ಎಂದು ಹೇಳಿದೆ.
- ಹರಿಯಾಣದ ವೃದ್ಧ ದಂಪತಿ ತಾವು ‘ಡಿಜಿಟಲ್ ಅರೆಸ್ಟ್’ನಲ್ಲಿ ₹1.5 ಕೋಟಿ ಕಳೆದುಕೊಂಡಿರುವ ಬಗ್ಗೆ ಸುಪ್ರೀಂ ಕೋರ್ಟ್ನ ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ ಅವರಿಗೆ ಪತ್ರ ಬರೆದಿದ್ದರು. ಇದನ್ನು ಆಧರಿಸಿ ನ್ಯಾಯಾಲಯವು ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡು ವಿಚಾರಣೆ ನಡೆಸುತ್ತಿದೆ.
- ಎಲ್ಲ ಕೇಂದ್ರಾಡಳಿತ ಪ್ರದೇಶಗಳು ಮತ್ತು ರಾಜ್ಯಗಳು ತಮ್ಮ ವ್ಯಾಪ್ತಿಯಲ್ಲಿ ನಡೆದ ಇಂಥ ಪ್ರಕರಣಗಳ ಮಾಹಿತಿ ನೀಡುವಂತೆ ಸುಪ್ರೀಂ ಕೋರ್ಟ್ ಅ.27ರಂದು ನಡೆದ ವಿಚಾರಣೆ ವೇಳೆ ಸೂಚನೆ ನೀಡಿತ್ತು. ಇದರಂತೆ, ಕೇಂದ್ರ ಗೃಹ ಸಚಿವಾಲಯ ಮತ್ತು ಸಿಬಿಐ ಮುಚ್ಚಿದ ಲಕೋಟೆಯಲ್ಲಿ ವರದಿ ನೀಡಿವೆ.
- ನ್ಯಾಯಮೂರ್ತಿಗಳಾದ ಸೂರ್ಯ ಕಾಂತ್, ಉಜ್ಜಲ್ ಭುಯಾನ್ ಮತ್ತು ಜಾಯ್ ಮಾಲ್ಯಾ ಬಾಗ್ಚಿ ಅವರಿರುವ ಪೀಠವು ಈ ವರದಿಯನ್ನು ಪರಿಶೀಲಿಸಿತು. ‘ಗೃಹ ಸಚಿವಾಲಯ ಮತ್ತು ಸಿಬಿಐ ವರದಿಯನ್ನು ಪರಿಶೀಲಿಸಿ ನಮ್ಮ ಕಚೇರಿಯು ಸಣ್ಣ ವರದಿಯೊಂದನ್ನು ಸಿದ್ಧಪಡಿಸಿದೆ’ ಎಂದು ಪೀಠ ತಿಳಿಸಿತು.
- ‘ಡಿಜಿಟಲ್ ಅರೆಸ್ಟ್’ ಎನ್ನವುದು ನಾವು ಅಂದುಕೊಂಡಿದ್ದಕ್ಕಿಂತ ಬಹಳ ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ. ವರದಿಯನ್ನು ನೋಡಿದರೆ ದಿಗಿಲಾಗುತ್ತಿದೆ ಎಂದರು.
- ಅಮಿಕಸ್ ಕ್ಯೂರಿ ನೇಮಕ: ಸೈಬರ್ ಅಪರಾಧ, ಪ್ರಮುಖವಾಗಿ ‘ಡಿಜಿಟಲ್ ಅರೆಸ್ಟ್’ ಹೆಸರಿನ ವಂಚನೆ ನಿಯಂತ್ರಣ ಕುರಿತು ನ್ಯಾಯಾಲಯಕ್ಕೆ ಸಲಹೆ ಮತ್ತು ಸಹಕಾರ ನೀಡಲು ಅಮಿಕಸ್ ಕ್ಯೂರಿಯನ್ನು ನೇಮಿಸಲಾಗುವುದು ಎಂದು ಪೀಠ ಹೇಳಿತು. ಹಿರಿಯ ವಕೀಲೆ, ಸೈಬರ್ ಕಾನೂನು ತಜ್ಞೆ ಎನ್.ಎಸ್. ನಪ್ಪಿನಾಯ್ ಅವರನ್ನು ಅಮಿಕಸ್ ಕ್ಯೂರಿಯನ್ನಾಗಿ ನೇಮಿಸಿತು. ಸೈಬರ್ ಅಪರಾಧಗಳಿಗೆ ಸಂಬಂಧಿಸಿ ಕಾನೂನುಗಳ ಬಗ್ಗೆ ಮಾಹಿತಿ ನೀಡುವ ‘ಸೈಬರ್ ಸಾಥಿ’ ಎಂಬ ವೆಬ್ಸೈಟ್ ಅನ್ನೂ ಇವರು ಸ್ಥಾಪಿಸಿದ್ದಾರೆ.
- ‘ಕೇಂದ್ರ ಗೃಹ ಸಚಿವಾಲಯದಲ್ಲಿ ಪ್ರತ್ಯೇಕ ತಂಡವೊಂದು ಸೈಬರ್ ಅಪರಾಧಗಳಿಗೆ ಸಂಬಂಧಿಸಿ ಕೆಲಸ ಮಾಡುತ್ತಿದೆ, ಬೇಕಾದ ಕ್ರಮಗಳನ್ನೂ ಕೈಗೊಂಡಿದೆ’ ಎಂದು ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಪೀಠಕ್ಕೆ ತಿಳಿಸಿದರು. ಅಮಿಕಸ್ ಕ್ಯೂರಿ ಅವರಿಂದ ಸಲಹೆ ಪಡೆದ ಬಳಿಕ ಕೆಲವು ಮಾರ್ಗಸೂಚಿಗಳನ್ನು ನೀಡುವುದಾಗಿ ಹೇಳಿದ ಪೀಠವು, ಮುಂದಿನ ವಿಚಾರಣೆಯನ್ನು ನ.10ಕ್ಕೆ ಮುಂದೂಡಿತು.
- ‘ನೊಬೆಲ್’ ಪುರಸ್ಕೃತರ ಜತೆ ಸಂವಾದ
ಸಂದರ್ಭ: ಸಮಾಜದ ಅಭ್ಯುದಯ ಮತ್ತು ಪ್ರಗತಿಯ ಸಾಧ್ಯತೆಗಳು ಸದ್ಯ ತಿರುವು ದಾರಿಗೆ ಬಂದು ನಿಂತಿವೆ ಎಂದು ನೊಬೆಲ್ ಪ್ರಶಸ್ತಿ ಪುರಸ್ಕೃತ ಜೇಮ್ಸ್ ರಾಬಿನ್ಸನ್ ಅಭಿಪ್ರಾಯಪಟ್ಟರು. ಟಾಟಾ ಟ್ರಸ್ಟ್ ಸಹಭಾಗಿತ್ವದಲ್ಲಿ ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ ಆಯೋಜಿಸಿದ್ದ ಸಂವಾದದಲ್ಲಿ ಅವರು ಮಾತನಾಡಿದರು.
- ‘ಒನ್ ವೇ ಸ್ಟ್ರೀಟ್’ ಸಿದ್ಧಾಂತವನ್ನು ವಿವರಿಸಿದ ಅವರು, ‘ನಾನು ಸಮೃದ್ಧಿ ಮತ್ತು ಪ್ರಗತಿ ಬಗ್ಗೆ ಯೋಚಿಸುವಾಗ, ಈ ವಿಚಾರಗಳ ಕುರಿತ ಚಿಂತನೆ ಯಾವಾಗ ಪ್ರಾರಂಭವಾಯಿತು’ ಎಂಬ ಪ್ರಶ್ನೆ ತಲೆದೋರುತ್ತದೆ. ಇದನ್ನು ವಿಶ್ವ ಇತಿಹಾಸದ ಅನೇಕ ಹಂತಗಳಲ್ಲಿ ಪರಿಗ ಣಿಸಬಹುದು. ಆದರೆ, ಅದಕ್ಕೆ ಒಂದು ಉಲ್ಲೇಖದ ಬಿಂದುವಾಗಿ ಇಬ್ಬರು ಸ್ಕಾಟ್ಲೆಂಡ್ ಚಿಂತಕರು 18ನೇ ಶತಮಾನದಲ್ಲಿ ನಡೆದ ನಗರೀಕರಣ, ಕೈಗಾರೀಕರಣ, ಸಾಮಾಜಿಕ ಬದಲಾವಣೆ ಗಮನಿಸುತ್ತಾ ಒಂದು ಸಿದ್ಧಾಂತ ರೂಪಿಸಿ ದರು. ಅದನ್ನು ‘ಒನ್ ವೇ ಸ್ಟ್ರೀಟ್ ಸಿದ್ಧಾಂತ’ ಎಂದು ಕರೆಯುವೆ’ ಎಂದರು.
- ಸಿಗದ ಎಫ್ಆರ್ಪಿ ರಾಜ್ಯದ ಕಬ್ಬು ನೆರೆರಾಜ್ಯಕ್ಕೆ

ಕೇಂದ್ರ ಸರ್ಕಾರವು ಪ್ರತಿ ಟನ್ ಕಬ್ಬಿಗೆ ನಿಗದಿಪಡಿಸಿರುವ ನ್ಯಾಯಸಮ್ಮತ ಮತ್ತು ಲಾಭದಾಯಕ ದರ (ಎಫ್ಆರ್ಪಿ) ಆಧಾರದಲ್ಲಿ ರಾಜ್ಯದಲ್ಲಿ ಬೆಲೆ ನಿಗದಿ ಮಾಡಲಾಗಿದ್ದರೂ ಸಕ್ಕರೆ ಕಾರ್ಖಾನೆಗಳು ಕಡಿಮೆ ದರ ನೀಡಲು ಮುಂದಾಗಿವೆ. ಈ ಕಾರಣಕ್ಕೆ ರಾಜ್ಯದ ಗಡಿ ಭಾಗದ ಜಿಲ್ಲೆಗಳ ಕಬ್ಬು ಬೆಳೆಗಾರರು ಹೆಚ್ಚಿನ ದರ ನೀಡುತ್ತಿರುವ ಮತ್ತು ಸಕಾಲದಲ್ಲಿ ಹಣ ಪಾವತಿಸುತ್ತಿರುವ ಹೊರರಾಜ್ಯಗಳ ಸಕ್ಕರೆ ಕಾರ್ಖಾನೆಗಳತ್ತ ಮುಖ ಮಾಡುತ್ತಿದ್ದಾರೆ.
ಉತ್ತರ ಕರ್ನಾಟಕ ಭಾಗದ ಗಡಿ ಜಿಲ್ಲೆಗಳಾದ ಬೆಳಗಾವಿ, ವಿಜಯಪುರ, ಕಲಬುರಗಿಯ ಕಬ್ಬು ಬೆಳೆಗಾರರು ಮಹಾರಾಷ್ಟ್ರದ ಸಕ್ಕರೆ ಕಾರ್ಖಾನೆಗಳಿಗೆ ಕಬ್ಬು ಮಾರಾಟ ಮಾಡುತ್ತಿದ್ದಾರೆ. ದಕ್ಷಿಣದ ಚಾಮರಾಜನಗರ ಜಿಲ್ಲೆಯಲ್ಲಿ ಬೆಳೆಗಾರರು ತಮಿಳುನಾಡಿನ ಸಕ್ಕರೆ ಕಾರ್ಖಾನೆಗಳಿಗೆ ಕಬ್ಬು ಪೂರೈಸುತ್ತಿದ್ದಾರೆ.
ಕೇಂದ್ರ ಸರ್ಕಾರವು 2025ರ ಸಾಲಿಗೆ ಶೇ 10.25ರಷ್ಟು ಇಳುವರಿ (recovery rate) ಇರುವ ಟನ್ ಕಬ್ಬಿಗೆ ₹3,550 ನಿಗದಿ ಮಾಡಿದೆ. ಇದರ ಆಧಾರದಲ್ಲಿ ರಾಜ್ಯ ಕಬ್ಬು ಅಭಿವೃದ್ಧಿ ಹಾಗೂ ಸಕ್ಕರೆ ನಿರ್ದೇಶನಾಲಯದ ಆಯುಕ್ತರು ರಾಜ್ಯದಲ್ಲಿರುವ 81 ಕಾರ್ಖಾನೆಗಳು 2025–26ನೇ ಸಾಲಿಗೆ ಬೆಳೆಗಾರರಿಗೆ ಮೊದಲ ಕಂತಿನಲ್ಲಿ ಪಾವತಿಸಬೇಕಾದ ದರವನ್ನು ನಿಗದಿಪಡಿಸಿ ಸೆಪ್ಟೆಂಬರ್ 15ರಂದು ಆದೇಶ ಹೊರಡಿಸಿದ್ದಾರೆ. 2024–25ನೇ ಸಾಲಿನಲ್ಲಿ ಕಾರ್ಖಾನೆಗಳಲ್ಲಿ ಅರೆದ ಕಬ್ಬಿನಿಂದ ಉತ್ಪಾದನೆಯಾದ ಸಕ್ಕರೆಯ ಆಧಾರದಲ್ಲಿ ಎಫ್ಆರ್ಪಿ ನಿಗದಿಪಡಿಸಲಾಗಿದೆ.
ಆದರೆ, ರಾಜ್ಯದ ಯಾವ ಕಾರ್ಖಾನೆಯೂ ಇಷ್ಟು ಬೆಲೆ ನೀಡಲು ಮುಂದಾಗಿಲ್ಲ. ₹2,700ರಿಂದ ₹3,100ರವರೆಗೆ ದರ ನೀಡಲು ತೀರ್ಮಾನಿಸಿವೆ .
ಸಾಮಾನ್ಯವಾಗಿ ಕಾರ್ಖಾನೆಗಳು ಕಬ್ಬಿನ ಕಟಾವು ಮತ್ತು ಸಾಗಣೆ ವೆಚ್ಚವನ್ನು ಲೆಕ್ಕಹಾಕಿ ಅದನ್ನು ದರದಲ್ಲಿ ಕಡಿತ ಮಾಡುತ್ತವೆ. ₹800ರಿಂದ ₹900ವರೆಗೂ ಕಡಿತ ಮಾಡುತ್ತವೆ. ಹಾಗಾದಾಗ, ಟನ್ ಕಬ್ಬಿನ ದರ ಇನ್ನಷ್ಟು ಕಡಿಮೆಯಾಗುತ್ತದೆ.
‘ರಾಜ್ಯದಲ್ಲಿ ಕಾರ್ಖಾನೆಗಳು ನೀಡುವ ದರವನ್ನು ನೋಡಿದಾಗ, ಮಹಾರಾಷ್ಟ್ರದಲ್ಲಿ ಇಲ್ಲಿಗಿಂತ ಪ್ರತಿ ಟನ್ಗೆ ₹300–₹400 ಹೆಚ್ಚು ಸಿಗುತ್ತಿದೆ. ಅಲ್ಲಿನ ಕಾರ್ಖಾನೆಗಳು ಪ್ರತಿ ಟನ್ ಕಬ್ಬಿಗೆ ₹3,400 ನೀಡುತ್ತಿವೆ. ರಾಜ್ಯದ ಕಾರ್ಖಾನೆಗಳು ಹಣ ಪಾವತಿಯನ್ನು ವಿಳಂಬ ಮಾಡುತ್ತಿವೆ. ಅಲ್ಲಿನ ಕಾರ್ಖಾನೆಗಳು ತಕ್ಷಣ ಪಾವತಿಸುತ್ತಿವೆ. ಇಲ್ಲಿ ಕಡಿಮೆ ಪಾವತಿಯ ಜೊತೆಗೆ ತೂಕ, ಇಳುವರಿ ಪ್ರಮಾಣದಲ್ಲೂ ಕಾರ್ಖಾನೆಗಳು ಮೋಸ ಮಾಡುತ್ತವೆ’ ಎಂದು ಹೇಳುತ್ತಾರೆ ಕಬ್ಬು ಬೆಳೆಗಾರರು.
‘ಕೇಂದ್ರ ಸರ್ಕಾರವು ಶೇ 10.25ರಷ್ಟು ಇಳುವರಿ ದರ ಆಧರಿಸಿ ಎಫ್ಆರ್ಪಿ ನಿಗದಿ ಮಾಡಿದೆ. ಇದು ಕೂಡ ಅವೈಜ್ಞಾನಿಕ. ಇಳುವರಿ ಪ್ರಮಾಣ ಶೇ 9.5ರ ಆಧಾರದ ಮೇಲೆ ಎಫ್ಆರ್ಪಿ ಘೋಷಿಸಬೇಕು. ಆಗ ಮಾತ್ರ ರೈತರಿಗೆ ಲಾಭದಾಯಕ ದರ ಸಿಗಲು ಸಾಧ್ಯ. ಎಫ್ಆರ್ಪಿ ಘೋಷಣೆ ಮಾಡಿದ ಮೇಲೂ ದರ ಪರಿಷ್ಕರಣೆ ಮಾಡುವ ಅಧಿಕಾರ ಕರ್ನಾಟಕ ಕಬ್ಬು ನಿಯಂತ್ರಣ ಮಂಡಳಿಗೆ ಇದೆ. ರಾಜ್ಯದ ಬಹುಪಾಲು ಕಾರ್ಖಾನೆಗಳನ್ನು ಜನಪ್ರತಿನಿಧಿಗಳು, ರಾಜಕಾರಣಿಗಳೇ ನಡೆಸುತ್ತಿದ್ದಾರೆ. ಅವರು ಮಂಡಳಿಯನ್ನು ಹಿಡಿತದಲ್ಲಿಟ್ಟು ದರ ಪರಿಷ್ಕರಣೆ ಆಗದಂತೆ ನೋಡಿಕೊಳ್ಳುತ್ತಿದ್ದಾರೆ’ ಎಂಬುದು ಅವರ ತಕರಾರು.
10 ಲಕ್ಷ ಟನ್ ಕಬ್ಬು ಮಹಾರಾಷ್ಟ್ರಕ್ಕೆ: ನೆರೆಯ ಮಹಾರಾಷ್ಟ್ರದೊಂದಿಗೆ ಗಡಿ ಹಂಚಿಕೊಂಡಿರುವ ಬೆಳಗಾವಿ ಜಿಲ್ಲೆಯ ಅಥಣಿ, ಚಿಕ್ಕೋಡಿ, ನಿಪ್ಪಾಣಿ, ರಾಯಬಾಗ ಮತ್ತು ಕಾಗವಾಡ ತಾಲ್ಲೂಕುಗಳ ಹಲವು ರೈತರು ಮಹಾರಾಷ್ಟ್ರದ ಸಕ್ಕರೆ ಕಾರ್ಖಾನೆಗಳಿಗೆ ಕಬ್ಬು ಸಾಗಿಸುತ್ತಾರೆ.
ಅಂದಾಜಿನ ಪ್ರಕಾರ, ಪ್ರತಿ ವರ್ಷ 10 ಲಕ್ಷ ಟನ್ಗಳಷ್ಟು ಜಿಲ್ಲೆಯ ಕಬ್ಬು ‘ಮಹಾ’ ಕಾರ್ಖಾನೆಗಳಲ್ಲಿ ನುರಿಯುತ್ತಿದೆ. ಜಿಲ್ಲೆಯಲ್ಲಿ 29 ಸಕ್ಕರೆ ಕಾರ್ಖಾನೆಗಳು ಇದ್ದಾಗ್ಯೂ ಮಹಾರಾಷ್ಟ್ರಕ್ಕೆ ಅಪಾರ ಪ್ರಮಾಣದ ಕಬ್ಬು ಸಾಗಣೆಯಾಗುತ್ತಿದೆ.
ಮಹಾರಾಷ್ಟ್ರದ ಕೊಲ್ಹಾಪುರ ಜಿಲ್ಲೆಯಲ್ಲಿರುವ ಕಲ್ಲಪ್ಪಣ್ಣ ಅವಾಡೆ ಸಹಕಾರ ಸಕ್ಕರೆ ಕಾರ್ಖಾನೆ (ಹುಪರಿ), ದತ್ತ ಸೇತ್ಕರಿ ಸಹಕಾರ ಸಕ್ಕರೆ ಕಾರ್ಖಾನೆ (ಶಿರೋಳ), ಪಂಚಗಂಗಾ ಸಹಕಾರ ಸಕ್ಕರೆ ಕಾರ್ಖಾನೆ (ಇಚಲಕರಂಜಿ), ಛತ್ರಪತಿ ಶಾಹೂ ಸಹಕಾರ ಸಕ್ಕರೆ ಕಾರ್ಖಾನೆ (ಕಾಗಲ್), ಸದಾಶಿವರಾವ್ ಮಂಡಲಿಕ್ ಸಹಕಾರ ಸಕ್ಕರೆ ಕಾರ್ಖಾನೆ (ಹಮೀದವಾಡ), ಸಂತಾಜಿ ಘೋರ್ಪಡೆ ಸಹಕಾರ ಸಕ್ಕರೆ ಕಾರ್ಖಾನೆ (ಸೇನಾಪತಿ ಕಾಪಸಿ), ದೂದಗಂಗಾ ವೇದಗಂಗಾ ಸಹಕಾರ ಸಕ್ಕರೆ ಕಾರ್ಖಾನೆ (ಬಿದರಿ), ಗುರುದತ್ತ ಸಕ್ಕರೆ ಕಾರ್ಖಾನೆ (ಟಾಕಳಿ) ಮುಂತಾದ ಕಾರ್ಖಾನೆಗಳು ಬೆಳಗಾವಿ ಜಿಲ್ಲೆಯ ರೈತರ ಕಬ್ಬನ್ನೇ ನೆಚ್ಚಿಕೊಂಡಿವೆ.
ಜಿಲ್ಲೆಯ ಕಾರ್ಖಾನೆಗಳು ಟನ್ ಕಬ್ಬಿಗೆ ₹3,010 ದರ ವಾಗ್ದಾನ ಮಾಡಿವೆ. ಜಿಲ್ಲಾಧಿಕಾರಿ ಮಧ್ಯಸ್ಥಿಕೆಯಲ್ಲಿ ನಡೆದ ಸಭೆಯಲ್ಲಿ ಇದನ್ನು ₹3,200ಕ್ಕೆ ಏರಿಸುವ ಭರವಸೆ ನೀಡಲಾಗಿದೆ. ಆದರೆ, ₹3,500ಕ್ಕೆ ಏರಿಸಲೇಬೇಕು ಎಂದು ರೈತರು ಜಿಲ್ಲೆಯಾದ್ಯಂತ ಬೃಹತ್ ಪ್ರಮಾಣದ ಪ್ರತಿಭಟನೆ ನಡೆಸಿದ್ದಾರೆ.
‘ಜಿಲ್ಲಾಡಳಿತ ಮಧ್ಯಸ್ಥಿಕೆ ವಹಿಸಿದರೂ ಉತ್ತಮ ದರ ಸಿಗುತ್ತಿಲ್ಲ. ಸದ್ಯ ಕಾರ್ಖಾನೆಗಳು ಕಬ್ಬು ಕಟಾವು ಹಾಗೂ ಸಾಗಣೆ ವೆಚ್ಚ ಸೇರಿಸಿ ₹3,200 ದರ ನೀಡುವುದಾಗಿ ಹೇಳಿವೆ. ಸಾಗಣೆ ವೆಚ್ಚವನ್ನೂ ರೈತರ ಕಬ್ಬಿನ ಬಿಲ್ಲಿನಿಂದಲೇ ಕತ್ತರಿಸಿ ವಾಹನದವರಿಗೆ ನೀಡುತ್ತಾರೆ. ಇದರಿಂದ ರೈತರಿಗೆ ಅನ್ಯಾಯವಾಗುತ್ತಿದೆ. ಹಾಗಾಗಿ, ಕಟಾವು ಮತ್ತು ಸಾಗಣೆ ವೆಚ್ಚದ ಹೊರತಾಗಿ ₹3,500 ದರ ನೀಡಬೇಕು ಎಂದು ರೈತರು ಪಟ್ಟು ಹಿಡಿದಿದ್ದಾರೆ’ ಎನ್ನುವುದು ಕಬ್ಬು ಬೆಳೆಗಾರ, ರೈತ ಮುಖಂಡ ಚೂಣಪ್ಪ ಪೂಜಾರಿ ಅವರ ಮಾತು.
ಕಬ್ಬು ಸಾಗಿಸಲು ಅಣಿ: ವಿಜಯಪುರ ಜಿಲ್ಲೆಯಲ್ಲಿ ಇದೇ 1ರಿಂದ ಪ್ರಸಕ್ತ ಸಾಲಿನ ಕಬ್ಬು ಅರೆಯುವಿಕೆ ಆರಂಭವಾಗಬೇಕಿತ್ತು. ಆದರೆ, ಈವರೆಗೆ ಯಾವೊಂದು ಸಕ್ಕರೆ ಕಾರ್ಖಾನೆಯೂ ಕಬ್ಬಿನ ದರವನ್ನು ಘೋಷಿಸಿಲ್ಲ. ಜಿಲ್ಲೆಯ 10 ಸಕ್ಕರೆ ಕಾರ್ಖಾನೆಗಳು ಬೆಳೆಗಾರರಿಗೆ ನೀಡಬೇಕಾದ ದರವನ್ನು ಜಿಲ್ಲಾಧಿಕಾರಿಯವರು ನಿಗದಿಪಡಿಸಿದ್ದಾರೆ. ಇನ್ನೂ ಕಬ್ಬು ನುರಿಯುವಿಕೆ ಆರಂಭವಾಗಿಲ್ಲ.
ಇದರ ನಡುವೆಯೇ ಜಿಲ್ಲೆಯ ಗಡಿಭಾಗದ ಇಂಡಿ, ಚಡಚಣ, ಆಲಮೇಲ ಭಾಗದ ಕಬ್ಬು ಬೆಳೆಗಾರರಿಗೆ ಮಹಾರಾಷ್ಟ್ರ ಸಕ್ಕರೆ ಕಾರ್ಖಾನೆಗಳು ಹೆಚ್ಚಿನ ದರ ನೀಡುವ ಭರವಸೆ ನೀಡಿದ್ದು, ಬೆಳೆಗಾರರು ಮಹಾರಾಷ್ಟ್ರದ ಸಕ್ಕರೆ ಕಾರ್ಖಾನೆಗಳಿಗೆ ಕಬ್ಬು ಸಾಗಿಲು ಅಣಿಯಾಗಿದ್ದಾರೆ.
ಮಹಾರಾಷ್ಟ್ರದಲ್ಲಿ ಕಬ್ಬು ನುರಿಸುವ ಹಂಗಾಮು ನವೆಂಬರ್ 1 ರಿಂದ ಆರಂಭವಾಗಿದೆ. ಸೋಲಾಪುರದ ಸಿದ್ದೇಶ್ವರ, ಲೋಕಮಂಗಲ, ಸಿದ್ದನಾಥ ಮತ್ತು ಅಕ್ಕಲಕೋಟದ ಜೈನ್ ಸಕ್ಕರೆ ಕಾರ್ಖಾನೆ ಸೇರಿದಂತೆ ಇತರೆ ಕಾರ್ಖಾನೆಗಳು ಪ್ರತಿ ಟನ್ಗೆ ₹3,500 ನೀಡುವುದಾಗಿ ರೈತರೊಂದಿಗೆ ಮಾತುಕತೆ ನಡೆಸಿವೆ. ಸಾಗಣೆ ವೆಚ್ಚ ಪಡೆಯದೇ ಜಿಲ್ಲೆಯ ಕಬ್ಬು ಖರೀದಿಸಲು ಮುಂದಾಗಿವೆ. ಅದಲ್ಲದೆ, ಮಹಾರಾಷ್ಟ್ರದ ಬಹುತೇಕ ಕಾರ್ಖಾನೆಗಳು ಎಥೆನಾಲ್ ಘಟಕ ಹೊಂದಿದ್ದು, ಕಬ್ಬು ಖರೀದಿಗೆ ಪೈಪೋಟಿ ಒಡ್ಡುತ್ತಿವೆ. ಒಂದು ವೇಳೆ ಮಹಾರಾಷ್ಟ್ರಕ್ಕೆ ಹೆಚ್ಚಿನ ಪ್ರಮಾಣದಲ್ಲಿ ಕಬ್ಬು ಸಾಗಣೆಯಾದರೆ ರಾಜ್ಯ ಸರ್ಕಾರಕ್ಕೆ ಕೋಟ್ಯಂತರ ತೆರಿಗೆ ನಷ್ಟವಾಗಲಿದೆ ಎನ್ನುತ್ತಾರೆ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಜಿಲ್ಲಾ ಘಟಕದ ಅಧ್ಯಕ್ಷ ಸಂಗಮೇಶ ಸಗರ.
ಮಾಹಿತಿ: ಸಂತೋಷ ಈ.ಚಿನಗುಡಿ, ಬಸವರಾಜ ಸಂಪಳ್ಳಿ, ಮನೋಜ್ಕುಮಾರ್ ಗುದ್ದಿ, ಬಾಲಚಂದ್ರ ಎಚ್.
ಕಲಬುರಗಿ ಕಬ್ಬು ಮಹಾರಾಷ್ಟ್ರಕ್ಕೆ
ಕಾರ್ಖಾನೆಗಳು ಸಮೀಪದಲ್ಲಿವೆ ಮತ್ತು ಸಕಾಲದಲ್ಲಿ ಹಣ ಸಿಗುತ್ತದೆ ಎಂಬ ಕಾರಣಕ್ಕೆ ಮಹಾರಾಷ್ಟ್ರ ಹಾಗೂ ತೆಲಂಗಾಣದೊಂದಿಗೆ ಗಡಿ ಹಂಚಿಕೊಂಡಿರುವ ಕಲಬುರಗಿ ಜಿಲ್ಲೆಯ ಗಡಿ ಭಾಗದ ಗ್ರಾಮಗಳ ಬೆಳೆಗಾರರು ನೆರೆ ರಾಜ್ಯದ ಸಕ್ಕರೆ ಕಾರ್ಖಾನೆಗಳಿಗೆ ಕಬ್ಬನ್ನು ಸಾಗಿಸುತ್ತಾರೆ.
ಜಿಲ್ಲೆಯಲ್ಲಿ ಹೆಚ್ಚು ಕಬ್ಬನ್ನು ಬೆಳೆಯುವ ಅಫಜಲಪುರ ತಾಲ್ಲೂಕಿನಲ್ಲಿ ರೇಣುಕಾ ಶುಗರ್ಸ್ ಹಾಗೂ ಕೆಪಿಆರ್ ಶುಗರ್ಸ್ ಸಕ್ಕರೆ ಕಾರ್ಖಾನೆಗಳಿದ್ದು, ಹೆಚ್ಚಿನ ಪ್ರಮಾಣದ ಕಬ್ಬನ್ನು ಇವೆರಡು ಕಾರ್ಖಾನೆಗಳಿಗೇ ಸಾಗಿಸಲಾಗುತ್ತದೆ. ಆದರೆ, ಇತ್ತೀಚಿನ ವರ್ಷಗಳಲ್ಲಿ ಸಕಾಲಕ್ಕೆ ಬಾಕಿ ಪಾವತಿ ಮಾಡದೇ ಇರುವುದರಿಂದ ಹಾಗೂ ಬೆಲೆಯೂ ಕಮ್ಮಿ ನಿಗದಿ ಆಗುವುದರಿಂದ ನೆರೆಯ ಮಹಾರಾಷ್ಟ್ರದ ಸಕ್ಕರೆ ಕಾರ್ಖಾನೆಗಳಿಗೆ ಕಬ್ಬನ್ನು ಪೂರೈಸುತ್ತಿದ್ದಾರೆ.
‘ಮಹಾರಾಷ್ಟ್ರದ 10 ಸಕ್ಕರೆ ಕಾರ್ಖಾನೆಗಳಿಗೆ ಅಫಜಲಪುರ, ಆಳಂದ ತಾಲ್ಲೂಕಿನ ರೈತರು ಕಬ್ಬು ಸಾಗಣೆ ಮಾಡುತ್ತಾರೆ. ಸೋಲಾಪುರ ಜಿಲ್ಲೆಯ ಸಕ್ಕರೆ ಕಾರ್ಖಾನೆಗಳು ಈಗಾಗಲೇ ಪ್ರತಿ ಟನ್ ಕಬ್ಬಿಗೆ ₹3,440 ಬೆಲೆ ನಿಗದಿ ಮಾಡಿವೆ. ಹೀಗಾಗಿ ಕಬ್ಬು ಬೆಳೆಗಾರರು ಅಲ್ಲಿನ ಸಕ್ಕರೆ ಕಾರ್ಖಾನೆಗಳಿಗೆ ಕಬ್ಬು ಪೂರೈಸುತ್ತಿದ್ದಾರೆ’ ಎಂಬುದು ಕಲಬುರಗಿ ಜಿಲ್ಲಾ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ರಮೇಶ ಹೂಗಾರ ಅನಿಸಿಕೆ.
ಚಾ.ನಗರದಿಂದ ತಮಿಳುನಾಡಿಗೆ
ಚಾಮರಾಜನಗರ ಜಿಲ್ಲೆಯ ಕೆಲವು ಬೆಳೆಗಾರರು ಕಬ್ಬನ್ನು ಕೊಳ್ಳೇಗಾಲ ಸಮೀಪದ ಕುಂತೂರಿನಲ್ಲಿರುವ ಬಣ್ಣಾರಿ ಅಮ್ಮನ್ ಸಕ್ಕರೆ ಕಾರ್ಖಾನೆಯ ಬದಲಿಗೆ ತಮಿಳುನಾಡಿನ ಈರೋಡ್ನಲ್ಲಿರುವ ಶಕ್ತಿ ಶುಗರ್ಸ್ ಸೇರಿದಂತೆ ಇತರೆ ಕಾರ್ಖಾನೆಗಳಿಗೆ ಪೂರೈಸುತ್ತಿದ್ದಾರೆ.
‘ಬಣ್ಣಾರಿ ಅಮ್ಮನ್ ಸಕ್ಕರೆ ಕಾರ್ಖಾನೆಯು ಪ್ರತಿ ಟನ್ಗೆ ₹3,320 ನೀಡುತ್ತಿದ್ದು, ತಮಿಳುನಾಡಿನ ಕಾರ್ಖಾನೆಗಳು ₹4,000ವರೆಗೂ ನೀಡಲು ಮುಂದೆ ಬಂದಿವೆ. ಹೆಚ್ಚು ಬೆಲೆ ಸಿಗುವ ಕಾರಣಕ್ಕೆ ರೈತರು ಅಲ್ಲಿನ ಕಾರ್ಖಾನೆಗಳಿಗೆ ಸಾಗಿಸುತ್ತಿದ್ದಾರೆ’ ಎಂದು ರೈತ ಮುಖಂಡರು ಹೇಳಿದ್ದಾರೆ.
ಜಿಲ್ಲೆಯಲ್ಲಿ 10 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಕಬ್ಬು ಬೆಳೆಯಲಾಗುತ್ತಿದೆ. ಜಿಲ್ಲೆಯ ರೈತರ ಹಿತದೃಷ್ಟಿಯಿಂದ ಹಾಗೂ ಉತ್ತಮ ದರ ಸಿಗಬೇಕು ಎಂಬ ಕಾರಣಕ್ಕೆ ಜಿಲ್ಲೆಯಿಂದ ಹೊರಜಿಲ್ಲೆ ಹಾಗೂ ರಾಜ್ಯಗಳಿಗೆ ಕಬ್ಬು ಪೂರೈಕೆ ಮಾಡಲು ಯಾವುದೇ ನಿರ್ಬಂಧ ವಿಧಿಸಲಾಗಿಲ್ಲ.
ನಷ್ಟ ಅನುಭವಿಸಬೇಕೇ?
‘ರಾಜ್ಯದ ಬಹುತೇಕ ಸಕ್ಕರೆ ಕಾರ್ಖಾನೆಗಳ ಮಾಲೀಕತ್ವ ಸಚಿವರು, ಶಾಸಕರು, ಸಂಸದರು, ರಾಜಕಾರಣಿಗಳಲ್ಲಿದೆ. ಇವರು ಯಾರೂ ಬೆಳೆಗಾರರ ಪರವಾಗಿ ಯೋಚನೆ ಮಾಡುವುದಿಲ್ಲ. ಕೇಂದ್ರ ಸರ್ಕಾರ ನಿಗದಿಪಡಿಸಿದ ಎಫ್ಆರ್ಪಿ ದರವನ್ನು ನೀಡಲೂ ಕಾರ್ಖಾನೆಗಳು ಹಿಂದೆ ಮುಂದೆ ನೋಡುತ್ತವೆ. ಕೇಂದ್ರವು ಶೇ 10.25ರಷ್ಟು ಇಳುವರಿ ದರ ಆಧರಿಸಿ ಎಫ್ಆರ್ಪಿ ನಿಗದಿಪಡಿಸಿದೆ. ಒಂದು ವೇಳೆ ಇಳುವರಿ ಪ್ರಮಾಣ ಹೆಚ್ಚಿದ್ದರೆ ಹೆಚ್ಚು ದರ ನೀಡಬೇಕು. ಇಳುವರಿ ಶೇ 1ರಷ್ಟು ಹೆಚ್ಚಿದ್ದರೆ ₹346 ಹೆಚ್ಚುವರಿ ನೀಡಬೇಕು. ಬೆಳಗಾವಿ ಜಿಲ್ಲೆಯಲ್ಲಿ ಬೆಳೆಯುತ್ತಿರುವ ಕಬ್ಬಿನ ಇಳುವರಿ ಪ್ರಮಾಣ ಶೇ 12– ಶೇ 13ರವರೆಗೂ ಇದೆ. ಈ ಲೆಕ್ಕದಲ್ಲಿ ಕಾರ್ಖಾನೆಗಳು ಹೆಚ್ಚು ದರ ನೀಡಬೇಕು. ಆದರೆ, ಯಾವ ಕಾರ್ಖಾನೆಗಳೂ ನೀಡುತ್ತಿಲ್ಲ. ರೈತರು ನಷ್ಟ ಅನುಭವಿಸುವುದನ್ನು ತಪ್ಪಿಸಲು ಮಹಾರಾಷ್ಟ್ರದ ಕಾರ್ಖಾನೆಗಳಿಗೆ ಮಾರಾಟ ಮಾಡುತ್ತಾರೆ ಇದು ತಪ್ಪೇ’ ಎಂದು ಪ್ರಶ್ನಿಸುತ್ತಾರೆ ರಾಜ್ಯ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕುರುಬೂರು ಶಾಂತಕುಮಾರ್.
‘ಮಹಾರಾಷ್ಟ್ರದಲ್ಲಿ ಸಹಕಾರಿ ಕಾರ್ಖಾನೆಗಳು ಹೆಚ್ಚಿವೆ. ಉತ್ತಮ ಬೆಲೆ ಜೊತೆಗೆ ಸಕಾಲದಲ್ಲಿ ಹಣ ಪಾವತಿ ಮಾಡುತ್ತಿವೆ. ರಾಜ್ಯದ ಬಹುತೇಕ ಕಾರ್ಖಾನೆಗಳು ತೂಕ, ಇಳುವರಿ ದರದಲ್ಲಿ ಮೋಸ ಮಾಡುವುದರ ಜೊತೆಗೆ ಕಟಾವು, ಸಾಗಣೆ ವೆಚ್ಚವನ್ನು ಹೆಚ್ಚು ಕಡಿತ ಮಾಡುತ್ತವೆ. ವಿಳಂಬವಾಗಿ ಪಾವತಿ ಮಾಡುತ್ತವೆ’ ಎಂಬುದು ಅವರ ದೂರು.
ಮಾರಾಟಕ್ಕೆ ಅವಕಾಶ
ಕರ್ನಾಟಕ ಕಬ್ಬು (ಖರೀದಿ ಮತ್ತು ಸರಬರಾಜು ನಿಯಂತ್ರಣ) ಕಾಯ್ದೆಗೆ 2014ರಲ್ಲಿ ತಿದ್ದುಪಡಿಯಾಗಿದೆ. ಆದರೆ, ಇದು ರೈತರ ಕಬ್ಬು ಸಾಗಣೆ ಮೇಲೆ ಯಾವುದೇ ನಿಯಂತ್ರಣ ಹೇರುವುದಿಲ್ಲ. ಹಾಗಾಗಿ, ಕೃಷಿಕ ತನ್ನ ಉತ್ಪನ್ನವನ್ನು ಎಲ್ಲಿಯಾದರೂ (ಅಂತರ ಜಿಲ್ಲೆ, ಅಂತರ ರಾಜ್ಯ) ಮಾರಲು ಸ್ವತಂತ್ರ. ಆದರೆ, ಕಾರ್ಖಾನೆಗಳು ನೆರೆ ರಾಜ್ಯದ ಕಬ್ಬು ತರಿಸಿಕೊಳ್ಳಬೇಕಿದ್ದರೆ, ನಿಯಮ ಪಾಲಿಸಬೇಕು. ಇದಕ್ಕಾಗಿ ಕರ್ನಾಟಕ ಹಾಗೂ ಮಹಾರಾಷ್ಟ್ರ ಗಡಿಯಲ್ಲಿರುವ ಬಹುತೇಕ ಕಾರ್ಖಾನೆಗಳು ಅಂತರರಾಜ್ಯ ಅನುಮತಿ (ಮಲ್ಟಿಸ್ಟೇಟ್ ಲೈಸನ್ಸ್) ಪಡೆದಿರುತ್ತವೆ. ಆದರೆ, ರಾಜ್ಯದ ಬಹುಪಾಲು ಸಕ್ಕರೆ ಕಾರ್ಖಾನೆಗಳು, ಸ್ಥಳೀಯವಾಗಿ ಬೆಳೆದ ಕಬ್ಬನ್ನು ತಮಗೇ ಮಾರಾಟ ಮಾಡಬೇಕು ಎಂದು ಬೆಳೆಗಾರರಿಗೆ ನಿರ್ದೇಶನ ನೀಡಬೇಕು ಎಂದು ಜಿಲ್ಲಾಡಳಿತಗಳನ್ನು ಒತ್ತಾಯಿಸತ್ತಲೇ ಬಂದಿವೆ.
- 9 ರಾಜ್ಯಗಳು, 3 ಕೇಂದ್ರಾಡಳಿತ ಪ್ರದೇಶಗಳಲ್ಲಿ ಎಸ್ಐಆರ್ ಶುರು
ಸಂದರ್ಭ: ದೇಶದ ಮೂರು ಕೇಂದ್ರಾಡಳಿತ ಪ್ರದೇಶಗಳು ಮತ್ತು 9 ರಾಜ್ಯಗಳ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ (ಎಸ್ಐಆರ್) ಪ್ರಕ್ರಿಯೆಯು ಆರಂಭವಾಗಲಿದೆ.
- ಡಿಸೆಂಬರ್ 4ಕ್ಕೆ ಎಸ್ಐಆರ್ ಪ್ರಕ್ರಿಯೆ ಪೂರ್ಣಗೊಳ್ಳಲಿದ್ದು, ಡಿ.9ಕ್ಕೆ ಮತದಾರರ ಪಟ್ಟಿಯ ಕರಡನ್ನು ಚುನಾವಣಾ ಆಯೋಗವು ಬಿಡುಗಡೆ ಮಾಡಲಿದೆ. ಅಂತಿಮ ಪಟ್ಟಿಯನ್ನು 2026ರ ಫೆ.7ರಂದು ಬಿಡುಗಡೆ ಮಾಡಲಿದೆ. ಆಯೋಗವು ಬಿಹಾರದಲ್ಲಿ ಇತ್ತೀಚೆಗಷ್ಟೇ ಎಸ್ಐಆರ್ ಪ್ರಕ್ರಿಯೆ ಪೂರ್ಣಗೊಳಿಸಿತ್ತು.
- ಎಲ್ಲೆಲ್ಲಿ?: ಅಂಡಮಾನ್ ಮತ್ತು ನಿಕೋಬಾರ್, ಲಕ್ಷದ್ವೀಪ, ಪುದುಚೇರಿ, ಛತ್ತೀಸಗಢ, ಗೋವಾ, ಗುಜರಾತ್, ಮಧ್ಯ ಪ್ರದೇಶ, ರಾಜಸ್ಥಾನ, ತಮಿಳುನಾಡು, ಕೇರಳ, ಉತ್ತರ ಪ್ರದೇಶ ಮತ್ತು ಪಶ್ಚಿಮ ಬಂಗಾಳದಲ್ಲಿ ಎಸ್ಐಆರ್ ನಡೆಯಲಿದೆ.
- ಈ ಪೈಕಿ ತಮಿಳುನಾಡು, ಪಶ್ಚಿಮ ಬಂಗಾಳ, ಪುದುಚೇರಿ ಮತ್ತು ಕೇರಳದಲ್ಲಿ 2026ರಲ್ಲಿ ಚುನಾವಣೆ ನಡೆಯಲಿದೆ. ತಮಿಳುನಾಡಿನಲ್ಲಿ ಎಸ್ಐಆರ್ ನಡೆಸದಂತೆ ತಡೆಯಲು ಸುಪ್ರೀಂ ಕೋರ್ಟ್ಗೆ ಹೋಗುವುದಾಗಿ ಅಲ್ಲಿನ ಸರ್ಕಾರ ಹೇಳಿದೆ.
‘ಅಸ್ಸಾಂಗೆ ಪ್ರತ್ಯೇಕ ದಿನಾಂಕ’
- ‘ಅಸ್ಸಾಂನಲ್ಲಿ ಪೌರತ್ವವನ್ನು ಪರಿಶೀಲಿಸುವ ಕಾರ್ಯ ಪ್ರಗತಿಯಲ್ಲಿದೆ. ಈ ಕಾರ್ಯವು ಸುಪ್ರೀಂ ಕೋರ್ಟ್ನ ಮೇಲ್ವಿಚಾರಣೆಯಲ್ಲಿ ನಡೆಯುತ್ತಿದೆ. ಆದ್ದರಿಂದ, ಈ ರಾಜ್ಯದಲ್ಲಿ ಎಸ್ಐಆರ್ ಆರಂಭಿಸಲು ಪ್ರತ್ಯೇಕವಾಗಿ ದಿನಾಂಕ ಘೋಷಿಸಲಾಗುವುದು’ ಎಂದು ಚುನಾವಣಾ ಆಯೋಗ ಹೇಳಿದೆ. ಅಸ್ಸಾಂನಲ್ಲಿ 2026ರಲ್ಲಿ ವಿಧಾನಸಭೆಗೆ ಚುನಾವಣೆ ನಡೆಯಲಿದೆ.
‘ಐತಿಹಾಸಿಕ ಸಾಧನೆ’
- ಬಿಹಾರದಲ್ಲಿ ಎಸ್ಐಆರ್ ನಡೆದಿದ್ದು, ಜಗತ್ತಿನಲ್ಲೇ ಅತಿ ದೊಡ್ಡ ‘ಶುದ್ಧೀಕರಣ’ ಪ್ರಕ್ರಿಯೆಯಾಗಿತ್ತು. ಜೊತೆಗೆ, ಭಾರತದ ಪ್ರಜಾಪ್ರಭುತ್ವಕ್ಕೆ ಇದೊಂದು ಮೈಲಿಗಲ್ಲು. ಸದ್ಯ ಬಿಹಾರದಲ್ಲಿ ಮಾತ್ರವೇ ಈ ಪ್ರಕ್ರಿಯೆ ಪೂರ್ಣಗೊಂಡಿದೆ.
- ಈ ಪ್ರಕ್ರಿಯೆ ಯನ್ನು ದೇಶದಾದ್ಯಂತ ವಿಸ್ತರಿಸಿದರೆ, ಅದು ದೇಶದ ಮತ್ತು ಚುನಾವಣಾ ಆಯೋಗದ ಅತ್ಯಂತ ದೊಡ್ಡ ಐತಿಹಾಸಿಕ ಸಾಧನೆಯಾಗಲಿದೆ.
- ದೇಶದಾದ್ಯಂತ ಈ ಪ್ರಕ್ರಿಯೆಯು ಪೂರ್ಣಗೊಂಡರೆ, ಆಯೋಗದ ಕುರಿತು ಮಾತ್ರವಲ್ಲ, ನಮ್ಮ ದೇಶ ಪ್ರಜಾತಂತ್ರ ವ್ಯವಸ್ಥೆ ಬಗ್ಗೆಯೇ ದೇಶದ ಜನರು ಹೆಮ್ಮೆ ಪಡುತ್ತಾರೆ
- ಯುಪಿಐ ವಹಿವಾಟು ₹27.28 ಲಕ್ಷ ಕೋಟಿ
ಸಂದರ್ಭ: ಅಕ್ಟೋಬರ್ ತಿಂಗಳಿನಲ್ಲಿ ಏಕೀಕೃತ ಪಾವತಿ ವ್ಯವಸ್ಥೆ (ಯುಪಿಐ) ಮೂಲಕ 2,070 ಕೋಟಿ ವಹಿವಾಟುಗಳು ನಡೆದಿವೆ. ಹಣದ ಲೆಕ್ಕದಲ್ಲಿ ಒಟ್ಟು ₹27.28 ಲಕ್ಷ ಕೋಟಿಯಷ್ಟು ವಹಿವಾಟುಗಳು ನಡೆದಿವೆ ಎಂದು ರಾಷ್ಟ್ರೀಯ ಪಾವತಿ ನಿಗಮ (ಎನ್ಪಿಸಿಐ) ತಿಳಿಸಿದೆ.
- ಹಬ್ಬದ ಋತುವಿನ ಅಂಗವಾಗಿ ಖರೀದಿ ಹೆಚ್ಚಿದ ಕಾರಣದಿಂದಾಗಿ ವಹಿವಾಟು ಹೆಚ್ಚಳ ಆಗಿದೆ ಎಂದು ನಿಗಮ ತಿಳಿಸಿದೆ.
- ಕಳೆದ ವರ್ಷದ ಅಕ್ಟೋಬರ್ನಲ್ಲಿ ₹23.49 ಲಕ್ಷ ಕೋಟಿ ಮೌಲ್ಯದ ವಹಿವಾಟು ನಡೆದಿತ್ತು. ಇದಕ್ಕೆ ಹೋಲಿಸಿದರೆ ಶೇ 16ರಷ್ಟು ಬೆಳವಣಿಗೆ ದಾಖಲಿಸಿದೆ ಎಂದು ಹೇಳಿದೆ. ಅಕ್ಟೋಬರ್ನಲ್ಲಿ ದಿನನಿತ್ಯ ಸರಾಸರಿ 66.8 ಕೋಟಿ ವಹಿವಾಟುಗಳು ನಡೆದಿವೆ. ಇದರ ಮೌಲ್ಯ ದಿನಕ್ಕೆ ಸರಾಸರಿ ₹87,993 ಕೋಟಿ.
- ಈ ವರ್ಷದ ಮೇ ತಿಂಗಳಿನಲ್ಲಿ ₹25.14 ಲಕ್ಷ ಕೋಟಿಯಷ್ಟು ಮೌಲ್ಯದ ವಹಿವಾಟು ನಡೆದಿತ್ತು. ಇದು ಆವರೆಗಿನ ಗರಿಷ್ಠ ಮಟ್ಟದ ವಹಿವಾಟು ನಡೆದ ತಿಂಗಳಾ ಗಿತ್ತು. ಆದರೆ, ಅಕ್ಟೋಬರ್ ವಹಿವಾಟು ಇದಕ್ಕಿಂತಲೂ ಹೆಚ್ಚಳವಾಗಿದೆ.
ಮಲೇಷ್ಯಾದಲ್ಲೂ ಯುಪಿಐ: ಮಲೇಷ್ಯಾದಲ್ಲಿ ಯುಪಿಐ ಬಳಸುವ ಮೂಲಕ ವಹಿವಾಟು ನಡೆಸಬಹುದಾಗಿದೆ ಎಂದು ಎನ್ಪಿಸಿಐ ತಿಳಿಸಿದೆ. ಎನ್ಪಿಸಿಐ ಇಂಟರ್ನ್ಯಾಷನಲ್ ಮತ್ತು ರೇಜರ್ಪೇ ಕರ್ಲೆಕ್ ಈ ಕುರಿತು ಒಪ್ಪಂದ ಮಾಡಿಕೊಂಡಿವೆ.
- 18ರಿಂದ ಬೆಂಗಳೂರು ಟೆಕ್ ಶೃಂಗಸಭೆ
ಸಂದರ್ಭ:‘28ನೇ ಆವೃತ್ತಿಯ ಬೆಂಗಳೂರು ಟೆಕ್ ಶೃಂಗಸಭೆ ತುಮಕೂರು ರಸ್ತೆಯ ಬೆಂಗಳೂರು ಅಂತರ ರಾಷ್ಟ್ರೀಯ ವಸ್ತುಪ್ರದರ್ಶನ ಕೇಂದ್ರದಲ್ಲಿ (ಬಿಐಇಸಿ) ಇದೇ 18ರಿಂದ ಮೂರು ದಿನ ನಡೆಯಲಿದೆ’ ಎಂದು ಮಾಹಿತಿ ಮತ್ತು ಜೈವಿಕ ತಂತ್ರಜ್ಞಾನ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದರು.
- ‘ಈ ಶೃಂಗಸಭೆ ಯಲ್ಲಿ 60 ದೇಶಗಳ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ. ತಂತ್ರಜ್ಞಾನ ಮತ್ತು ಉದ್ಯಮವನ್ನು ಒಂದೇ ವೇದಿಕೆಗೆ ತರುವ ಜಾಗತಿಕ ಕಾರ್ಯಕ್ರಮ ಇದಾಗಿದ್ದು, ಈ ಬಾರಿ ಕ್ವಾಂಟಮ್ ಕಂಪ್ಯೂಟಿಂಗ್, ಎಐ, ಸ್ಪೇಸ್ಟೆಕ್, ಹೆಲ್ತ್ ಟೆಕ್ಗೆ ವಿಶೇಷ ಗಮನ ನೀಡ ಲಾಗುವುದು’ ಎಂದು ಹೇಳಿದರು.
- ‘20ರಂದು ಫ್ಯೂಚರ್ ಮೇಕರ್ಸ್ ಕಾನ್ಕ್ಲೇವ್ ನಡೆಯ ಲಿದ್ದು, 10 ಸಾವಿರಕ್ಕೂ ಹೆಚ್ಚಿನ ಉದ್ಯಮಿಗಳು, ಹೂಡಿಕೆದಾರರು, ಸ್ಟಾರ್ಟ್ ಅಪ್ ಸಂಸ್ಥಾಪಕರು ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಆವಿಷ್ಕಾರ ಮಾಡಿ ರುವವರು ಪಾಲ್ಗೊಳ್ಳಲಿದ್ದಾರೆ’ ಎಂದರು.
- ಹೊಸ ನೀತಿ: ‘ಸ್ಟಾರ್ಟ್ ಅಪ್ ಐಟಿ ಸ್ಪೇಸ್ ಟೆಕ್ಗೆ ಹೊಸ ನೀತಿ ತರಲು ನಿರ್ಧರಿಸಲಾಗಿದೆ. ಒಟ್ಟಾರೆ, ಈ ಬಾರಿ ನೀತಿಗಳನ್ನು ಜಾಗತಿಕ ದೃಷ್ಟಿಕೋನದಲ್ಲೇ ರೂಪಿಸಲಾಗಿದೆ. ಮಾಹಿತಿ ತಂತ್ರಜ್ಞಾನ, ಸ್ಟಾರ್ಟ್ ಅಪ್, ಸ್ಪೇಸ್ ಟೆಕ್ನಲ್ಲಿ ಕರ್ನಾಟಕ ಮುಂಚೂಣಿಯಲ್ಲಿದೆ. ಈ ನೀತಿಯ ಮೂಲಕ ಕರ್ನಾಟಕದಲ್ಲಿರುವ ಇನ್ನಷ್ಟು ಅವಕಾಶಗಳ ಅರಿವು ಮೂಡಿ ಸಲು ಪ್ರಯತ್ನಿಸಲಾಗುವುದು’ ಎಂದರು.
- ₹600 ಕೋಟಿ ಹೂಡಿಕೆ: ‘ಕರ್ನಾಟಕವನ್ನು ಭಾರತದ ಡೀಪ್ ಟೆಕ್ ರಾಜಧಾನಿಯಾಗಿ ರೂಪಿಸುವ ಉದ್ದೇಶದಿಂದ ಸರ್ಕಾರ ₹600 ಕೋಟಿ ಹೂಡಿಕೆಗೆ ಬದ್ಧವಾಗಿದೆ. ಇದರಲ್ಲಿ ಎಐ, ಕ್ವಾಂಟಮ್ ಕಂಪ್ಯೂಟಿಂಗ್, ರೋಬೊಟಿಕ್ಸ್ ಹಾಗೂ ಸುಸ್ಥಿರತೆ ಆಧಾರಿತ ಆವಿಷ್ಕಾರಗಳಿಗೂ ಪ್ರೋತ್ಸಾಹ ನೀಡಲಾಗುವುದು’ ಎಂದೂ ಅವರು ತಿಳಿಸಿದರು.
- ತಯಾರಿಕಾ ಚಟುವಟಿಕೆ ಏರಿಕೆ
ಸಂದರ್ಭ: ದೇಶದ ತಯಾರಿಕಾ ವಲಯದ ಚಟುವಟಿಕೆ ಅಕ್ಟೋಬರ್ ತಿಂಗಳಿನಲ್ಲಿ ಏರಿಕೆಯಾಗಿದೆ ಎಂದು ಎಸ್ ಆ್ಯಂಡ್ ಪಿ ಗ್ಲೋಬಲ್ ಸಂಸ್ಥೆಯ ಮಾಸಿಕ ಸಮೀಕ್ಷಾ ವರದಿ ತಿಳಿಸಿದೆ.
- ಎಸ್ ಆ್ಯಂಡ್ ಪಿ ಗ್ಲೋಬಲ್ ಸಂಸ್ಥೆಯು ನಿರ್ವಹಿಸುವ ‘ಎಚ್ಎಸ್ಬಿಸಿ ಇಂಡಿಯಾ ಮ್ಯಾನುಫ್ಯಾಕ್ಚರಿಂಗ್ ಪರ್ಚೇಸಿಂಗ್ ಮ್ಯಾನೇಜರ್ಸ್ ಸೂಚ್ಯಂಕ’ವು ಸೆಪ್ಟೆಂಬರ್ ತಿಂಗಳಲ್ಲಿ 57.7 ದಾಖಲಾಗಿತ್ತು. ಇದು ಅಕ್ಟೋಬರ್ನಲ್ಲಿ 59.2ಕ್ಕೆ ಏರಿಕೆಯಾಗಿದೆ.
- ಪಿಎಂಐ ಸೂಚ್ಯಂಕವು 50ಕ್ಕಿಂತ ಹೆಚ್ಚಿನ ಮಟ್ಟದಲ್ಲಿ ಇದ್ದರೆ ಅದನ್ನು ಬೆಳವಣಿಗೆ ಎಂದು ಗುರುತಿಸಲಾಗುತ್ತದೆ.
- ಜಿಎಸ್ಟಿ ಇಳಿಕೆಯಿಂದ ಖರೀದಿ ಹೆಚ್ಚಳವಾಯಿತು. ದೇಶೀಯ ಮಾರುಕಟ್ಟೆಯಲ್ಲಿ ಸರಕುಗಳಿಗೆ ಹೆಚ್ಚಿದ ಬೇಡಿಕೆ ಮತ್ತು ಹೊಸ ರಫ್ತು ಕಾರ್ಯಾದೇಶದಿಂದ ಸೂಚ್ಯಂಕವು ಏರಿಕೆ ಕಂಡಿದೆ ಎಂದು ತಿಳಿಸಿದೆ. ಜೊತೆಗೆ ತಂತ್ರಜ್ಞಾನ ಕಂಪನಿಗಳು ಹೂಡಿಕೆ ಪ್ರಮಾಣವನ್ನು ಹೆಚ್ಚಿಸಿದ್ದು ಸಹ ಸೂಚ್ಯಂಕಗಳ ಏರಿಕೆಗೆ ಕಾರಣವಾಗಿದೆ ಎಂದು ತಿಳಿಸಿದೆ.
- ಆದರೆ, ಇದೇ ಅವಧಿಯಲ್ಲಿ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಮಾರಾಟ ಮಂದಗೊಂಡಿದೆ ಎಂದು ಹೇಳಿದೆ.
- ‘ಅಕ್ಟೋಬರ್ನಲ್ಲಿ ತಯಾರಿಕಾ ವಲಯದ ಉತ್ಪಾದನೆ ಏರಿಕೆಯಾಗಿದೆ. ಹೊಸ ಕಾರ್ಯಾದೇಶ ಮತ್ತು ಉದ್ಯೋಗ ಸೃಷ್ಟಿ ಹೆಚ್ಚಳವಾಗಿದೆ’ ಎಂದು ಎಚ್ಎಸ್ಬಿಸಿ ಇಂಡಿಯಾದ ಮುಖ್ಯ ಅರ್ಥಶಾಸ್ತ್ರಜ್ಞೆ ಪ್ರಾಂಜುಲ್ ಭಂಡಾರಿ ಹೇಳಿದ್ದಾರೆ.
- ಅಣ್ವಸ್ತ್ರ ಪರೀಕ್ಷೆ: ಟ್ರಂಪ್ ಸಮರ್ಥನೆ
ಸಂದರ್ಭ:‘ಅಣ್ವಸ್ತ್ರಗಳನ್ನು ಪರೀಕ್ಷಿಸುತ್ತಿರುವ ದೇಶಗಳಲ್ಲಿ ಪಾಕಿಸ್ತಾನ ಮತ್ತು ಚೀನಾ ಸೇರಿವೆ’ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.
- ಮೂರು ದಶಕಗಳ ನಂತರ ಅಮೆರಿಕದ ಸ್ವಂತ ಅಣ್ವಸ್ತ್ರಗಳ ಪರೀಕ್ಷೆಯನ್ನು ಪುನರಾರಂಭಿಸುವ ತಮ್ಮ ಆಡಳಿತದ ಯೋಜನೆಗಳನ್ನು ಸಮರ್ಥಿಸಿಕೊಳ್ಳುವ ಭಾಗವಾಗಿ ಟ್ರಂಪ್ ಈ ಹೇಳಿಕೆ ನೀಡಿದ್ದಾರೆ ಎನ್ನಲಾಗಿದೆ.
- ಕಳೆದ ವಾರ ಚೀನಾ ಅಧ್ಯಕ್ಷ ಷಿ ಜಿನ್ಪಿಂಗ್ ಅವರೊಂದಿಗಿನ ಭೇಟಿಗೂ ಮುನ್ನ ಟ್ರಂಪ್ ಅವರು, ಅಮೆರಿಕವು ಪ್ರತಿಸ್ಪರ್ಧಿ ಶಕ್ತಿಗಳೊಂದಿಗೆ ಸರಿಸಮವಾಗಿ ಅಣ್ವಸ್ತ್ರಗಳ ಪರೀಕ್ಷೆ ಆರಂಭಿಸುವುದಾಗಿ ಘೋಷಿಸಿದ್ದರು.
- ‘ಸಿಬಿಎಸ್ ನ್ಯೂಸ್’ಗೆ ನೀಡಿದ ಸಂದರ್ಶನದಲ್ಲಿ ಟ್ರಂಪ್ ಅವರು, ರಷ್ಯಾ, ಚೀನಾ, ಉತ್ತರ ಕೊರಿಯಾ ಮತ್ತು ಪಾಕಿಸ್ತಾನ ಪರಮಾಣು ಶಸ್ತ್ರಾಸ್ತ್ರಗಳನ್ನು ಪರೀಕ್ಷಿಸುವ ದೇಶಗಳೆಂದು ಹೆಸರಿಸಿದರು.
- ‘ರಷ್ಯಾ, ಚೀನಾ ಪರೀಕ್ಷೆ ನಡೆಸುತ್ತಿವೆ. ಆದರೆ, ಅವರು ಅದರ ಬಗ್ಗೆ ಮಾತನಾಡುವು ದಿಲ್ಲ. ಉತ್ತರ ಕೊರಿಯಾ, ಪಾಕಿಸ್ತಾನ ಪರೀಕ್ಷೆ ನಡೆಸುತ್ತಿ ರುವುದು ನಿಸ್ಸಂಶಯ’ ಎಂದು ಟ್ರಂಪ್ ಹೇಳಿದರು.
- ‘ನಾವೂ ಪರಮಾಣು ಶಸ್ತ್ರಾಸ್ತ್ರಗಳನ್ನು ಪರೀಕ್ಷಿಸಬೇಕು. ಶಸ್ತ್ರಾಸ್ತ್ರಗಳ ವಿಶ್ವಾಸಾರ್ಹತೆ ಯನ್ನು ಖಚಿತಪಡಿಸಿ ಕೊಳ್ಳಲು ಇಂತಹ ಪರೀಕ್ಷೆ ಅಗತ್ಯ’ ಎಂದು ಟ್ರಂಪ್ ಹೇಳಿದರು.
- ಅಮೆರಿಕದ ಮಾಧ್ಯಮ ವರದಿಗಳ ಪ್ರಕಾರ, ‘ಅಮೆರಿಕ ಸೇನೆಯು ಪರಮಾಣು ಸಿಡಿತಲೆಯನ್ನು ಹೊತ್ತೊಯ್ಯುವ ಸಾಮರ್ಥ್ಯವಿರುವ ತನ್ನ ಕ್ಷಿಪಣಿಗಳನ್ನು ನಿಯಮಿತವಾಗಿ ಪರೀಕ್ಷಿಸುತ್ತದೆ. ಆದರೆ, 1992ರಿಂದ ಶಸ್ತ್ರಾಸ್ತ್ರಗಳನ್ನು ಸ್ಫೋಟಿಸಿಲ್ಲ.
- ರಷ್ಯಾ ಪೋಸಿಡಾನ್ ಪರಮಾಣು ಸಾಮರ್ಥ್ಯದ ಸೂಪರ್ ಟಾರ್ಪಿಡೊವನ್ನು ಪರೀಕ್ಷಿಸಿದೆ ಎಂದು ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಕಳೆದ ವಾರ ಹೇಳಿದ್ದರು.