Sat. Feb 7th, 2026
  • ಅರಣ್ಯ: ಭೂ ಮಂಜೂರಾತಿಗೆ ಭಂಗ

ಸಂದರ್ಭ: ಅಧಿಸೂಚಿತ ಅರಣ್ಯ ಪ್ರದೇಶಗಳಲ್ಲಿ 1980ರ ನಂತರ ಖಾಸಗಿ ವ್ಯಕ್ತಿಗಳು, ಖಾಸಗಿ ಸಂಸ್ಥೆಗಳು ಹಾಗೂ ಸರ್ಕಾರಿ ಸಂಸ್ಥೆಗಳಿಗೆ ಮಂಜೂರು ಮಾಡಿದ ಎಲ್ಲ ಭೂಮಿಯೂ ಕಾನೂನುಬಾಹಿರ ವಾಗಿದ್ದು, ಇಂತಹ ಪ್ರಕರಣಗಳ ಪಟ್ಟಿಯನ್ನು ಸಿದ್ಧಪಡಿಸಿ, ವರದಿ ಸಲ್ಲಿಸುವಂತೆ ಜಿಲ್ಲಾ ಮಟ್ಟದ ವಿಶೇಷ ತನಿಖಾ ತಂಡಗಳಿಗೆ (ಎಸ್‌ಐಟಿ) ಸರ್ಕಾರ ಸೂಚಿಸಿದೆ.

  • ಜಿಲ್ಲಾ ಮಟ್ಟದ ಎಸ್‌ಐಟಿಗಳು ನಿರ್ವಹಿಸಬೇಕಾದ ಕಾರ್ಯವಿಧಾನ ಕುರಿತು ಅರಣ್ಯ ಇಲಾಖೆಯು ಹೊರಡಿಸಿದ ಸುತ್ತೋಲೆಯಲ್ಲಿ ಈ ಸೂಚನೆ ನೀಡಲಾಗಿದೆ. ಅಧಿಸೂಚಿತ ಅರಣ್ಯ ಪ್ರದೇಶಗಳಲ್ಲಿ ಹಂಚಿಕೆ, ಮಂಜೂರು ಮಾಡಿದ ಪ್ರದೇಶಗಳ ಪಟ್ಟಿಯನ್ನು ರಾಜ್ಯ ಮಟ್ಟದ ವಿಶೇಷ ತನಿಖಾ ತಂಡಕ್ಕೆ ಸಲ್ಲಿಸುವಂತೆ ಹೇಳಿದೆ.
  • ಅರಣ್ಯ ಸಂರಕ್ಷಣಾ ಕಾಯಿದೆ–1980ರ ಪೂರ್ವದಲ್ಲಿ ಕಂದಾಯ ಇಲಾಖೆಯು ಅಧಿಸೂಚಿತ ಅರಣ್ಯ ಪ್ರದೇಶಗಳಲ್ಲಿ ಮಾಡಿರುವ ಮಂಜೂರಾತಿಯನ್ನು ಸಕ್ಷಮ ಪ್ರಾಧಿಕಾರದಿಂದ ಮಾಡಲಾಗಿದೆಯೇ? ಒಂದು ವೇಳೆ ಸಕ್ಷಮ ಪ್ರಾಧಿಕಾರದಿಂದ ಮಂಜೂರು ಮಾಡಿದ್ದರೆ ಅಂತಹ ಅಧಿಕಾರವನ್ನು ಯಾವ ಕಾಯ್ದೆ, ನಿಯಮ, ಆದೇಶಗಳ ಮೂಲಕ ನೀಡಲಾಗಿದೆ ಎನ್ನುವ ಕುರಿತು ದಾಖಲೆಗಳನ್ನು ಸಂಗ್ರಹಿಸಬೇಕು. ಕಂದಾಯ ಇಲಾಖೆಯ ಸಕ್ಷಮ ಪ್ರಾಧಿಕಾರ ಹೊರತುಪಡಿಸಿ, ಇತರೆ ಪ್ರಾಧಿಕಾರಗಳು ಮಂಜೂರು ಮಾಡಿದ ವಿವರಗಳನ್ನು ಪ್ರತ್ಯೇಕವಾಗಿ ಪಟ್ಟಿ ಮಾಡಬೇಕು ಎಂದು ಸೂಚನೆ ನೀಡಲಾಗಿದೆ.
  • 1996ರ ನಂತರ ಸರ್ಕಾರಿ ದಾಖಲೆಗಳಲ್ಲಿ ಅರಣ್ಯ ಎಂದು ನಮೂದಿಸಿ ರುವ ಪ್ರದೇಶಗಳಲ್ಲಿ ಕಂದಾಯ ಇಲಾಖೆ ಭೂ ಮಂಜೂರಾತಿ ಮಾಡಿದ್ದರೆ ಅಂತಹ ದಾಖಲೆಗಳನ್ನು ಸಮಗ್ರವಾಗಿ ಪರಿಶೀಲಿಸಬೇಕು. ಸೂಕ್ತ ಶಿಫಾರಸು ಗಳೊಂದಿಗೆ ರಾಜ್ಯಮಟ್ಟದ ವಿಶೇಷ ತನಿಖಾ ತಂಡಕ್ಕೆ ಸಲ್ಲಿಸಬೇಕು ಎಂದು ವಿವರಿಸಲಾಗಿದೆ.

ದಂಡ ವಸೂಲಿಗೆ ಮಾರ್ಗಸೂಚಿ ದರ

  • ಕಾನೂನುಬಾಹಿರವಾಗಿ ಮಂಜೂರು ಮಾಡಿದ ಪ್ರತಿ ಪ್ರಕರಣ ಪಟ್ಟಿ ಮಾಡಿ, ಅಂತಹ ಪ್ರದೇಶಗಳನ್ನು ಮರಳಿ ಅರಣ್ಯ ಇಲಾಖೆಯ ವಶಕ್ಕೆ ಪಡೆಯಲು ಕ್ರಮಗಳನ್ನು ತೆಗೆದುಕೊಳ್ಳಬೇಕು. ಒಂದು ವೇಳೆ ಮಂಜೂರಾತಿ ನೀಡಿದ ಅರಣ್ಯ ಪ್ರದೇಶವನ್ನು ಮರಳಿ ವಶಕ್ಕೆ ಪಡೆಯುವುದು ಸಾರ್ವಜನಿಕ ಹಿತದೃಷ್ಟಿಯಿಂದ ಪೂರಕವಲ್ಲದಿದ್ದರೆ, ಸರ್ಕಾರದ ಮಾರ್ಗಸೂಚಿ ದರಗಳ ಅನುಸಾರ ಭೂಮಾಲೀಕರಿಂದ ದಂಡ ವಸೂಲಿ ಮಾಡುವುದೂ ಸೇರಿದಂತೆ ಅಳಡಿಸಿಕೊಳ್ಳ ಬಹುದಾದ ವಿಧಾನದ ಕುರಿತು ವರದಿಯಲ್ಲಿ ಉಲ್ಲೇಖಿಸುವಂತೆ ಅರಣ್ಯ ಇಲಾಖೆ ಸೂಚಿಸಿದೆ.
  • ಕರ್ನಾಟಕ ರಾಜ್ಯ ದೂರ ಸಂವೇದಿ ಆನ್ವಯಿಕ ಕೇಂದ್ರವು ಅರಣ್ಯ ಭೂಮಿಗಳ ಕ್ರೋಡೀಕೃತ ದಾಖಲೆಗಳನ್ನು ತಯಾರಿಸಲು ಅಭಿವೃದ್ಧಿಪಡಿಸಲಾದ ಪೋರ್ಟಲ್‌ ಅನ್ನು ತಾಲ್ಲೂಕು, ಹೋಬಳಿ, ಗ್ರಾಮ, ಸರ್ವೆ ಸಂಖ್ಯೆ, ವಿಸ್ತೀರ್ಣವನ್ನು ಗುರುತಿಸಲು ಉಪಯೋಗಿಸಿಕೊಳ್ಳಲು ಹೇಳಿದೆ.
  • 6.13 ಕೋಟಿ ಜನರ ಜಾತಿವಾರು ಸಮೀಕ್ಷೆ ಪೂರ್ಣ

ಸಂದರ್ಭ: ಸಾಮಾಜಿಕಶೈಕ್ಷಣಿಕ ಸಮೀಕ್ಷೆ ಭಾಗವಾಗಿ ಈವರೆಗೆ 6.13 ಕೋಟಿ ಜನರ ವಿವರಗಳನ್ನು ಕಲೆ ಹಾಕಲಾಗಿದ್ದು, 4.22 ಲಕ್ಷದಷ್ಟು ಕುಟುಂಬದವರು ಮಾಹಿತಿ ನೀಡಲು ನಿರಾಕರಿಸಿದ್ದಾರೆ ಎಂದು ರಾಜ್ಯ ಹಿಂದುಳಿದ ವರ್ಗಗಳ ಆಯೋಗ ಹೇಳಿದೆ.

  • ಆಯೋಗವು ನಡಸಿದ್ದ ಸಮೀಕ್ಷೆಯ ಮನೆ–ಮನೆ ಭೇಟಿ ಹಂತವು (ಅಕ್ಟೋಬರ್ 31ಕ್ಕೆ) ಕೊನೆಗೊಂಡಿದೆ.
  • ರಾಜ್ಯದಾದ್ಯಂತ ಒಟ್ಟು 6.85 ಕೋಟಿ ಜನರನ್ನು ಸಮೀಕ್ಷೆಗೆ ಒಳಪಡಿಸುವ ಗುರಿಯನ್ನು ಹಾಕಿಕೊಳ್ಳಲಾಗಿತ್ತು. ಅದರಲ್ಲಿ 6.13 ಕೋಟಿ ಜನರನ್ನು ಸಮೀಕ್ಷೆಗೆ ಒಳಪಡಿಸಿದ್ದು, 72 ಲಕ್ಷ ಜನರು ಸಮೀಕ್ಷೆಯಲ್ಲಿ ಭಾಗಿಯಾಗಿಲ್ಲ ಎಂದು ಆಯೋಗದ ಪ್ರಕಟಣೆ ತಿಳಿಸಿದೆ.
  • ರಾಜ್ಯದಾದ್ಯಂತ ನಡೆದ ಸಮೀಕ್ಷೆಯ ವೇಳೆ 34.49 ಲಕ್ಷ ಮನೆಗಳಿಗೆ ಬೀಗ ಹಾಕಲಾಗಿತ್ತು ಇಲ್ಲವೇ ಮನೆಗಳು ಖಾಲಿ ಇದ್ದವು. ಈ ಪೈಕಿ ಗ್ರೇಟರ್‌ ಬೆಂಗಳೂರು ಪ್ರಾಧಿಕಾರದ ವ್ಯಾಪ್ತಿಯಲ್ಲೇ 29 ಲಕ್ಷಕ್ಕೂ ಹೆಚ್ಚು ಮನೆಗಳನ್ನು ಖಾಲಿ/ಬೀಗ ಹಾಕಲಾದ/ಸಮೀಕ್ಷೆ ಮಾಡಲಾಗದ ಮನೆಗಳು ಎಂದು ಗುರುತಿಸಲಾಗಿದೆ. ರಾಜ್ಯದಾದ್ಯಂತ ಒಟ್ಟು
  • ಸಮೀಕ್ಷೆಯ ಮನೆ–ಮನೆ ಭೇಟಿ ಹಂತವು ಕೊನೆಗೊಂಡಿದ್ದರೂ, ಆನ್‌ಲೈನ್‌ನಲ್ಲಿ ಮಾಹಿತಿ ನಮೂದಿಸಲು ನವೆಂಬರ್ 10ರವರೆಗೆ ಅವಕಾಶವಿದೆ.
  • ದ್ರಾಕ್ಷಿ: ಕೈಸೇರದ ವಿಮೆ ಪರಿಹಾರ

ಸಂದರ್ಭ: ಫಸಲ್ಬಿಮಾ ಯೋಜನೆ: 31,470 ರೈತರಿಂದ ₹39 ಕೋಟಿ ಪ್ರೀಮಿಯಂ ಪಾವತಿ: ದ್ರಾಕ್ಷಿ ಬೆಳೆಗಾರರ ಬದುಕಿನೊಂದಿಗೆ ವಿಮೆ ಕಂಪನಿಯವರು ಚೆಲ್ಲಾಟವಾಡಬಾರದು. ಪರಿಹಾರ ಪಾವತಿ ವಿಳಂಬ ಮಾಡಬಾರದು ಅಭಯಕುಮಾರ್ನಾಂದ್ರೇಕರ, ಅಧ್ಯಕ್ಷ, ಕರ್ನಾಟಕ ದ್ರಾಕ್ಷಿ ಬೆಳೆಗಾರರ ಸಂಘ.

  • ಬೆಳೆ ವಿಮೆ (ಫಸಲ್‌ ಬಿಮಾ) ಯೋಜನೆಯಡಿ 2024ರ ಏಪ್ರಿಲ್‌ನಿಂದ 2025ರ ಮಾರ್ಚ್‌ ಅವಧಿಯಲ್ಲಿ ದ್ರಾಕ್ಷಿ ಬೆಳೆಗೆ ವಿಮೆ ಮಾಡಿಸಿದ್ದ ರಾಜ್ಯದ 31,470 ಬೆಳೆಗಾರರಿಗೆ ಇನ್ನೂ ಪರಿಹಾರ ಸಿಕ್ಕಿಲ್ಲ.
  • ದ್ರಾಕ್ಷಿಯನ್ನು ವಿಜಯಪುರ, ಬೆಳಗಾವಿ, ಬಾಗಲಕೋಟೆ, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ತುಮಕೂರು, ಕಲಬುರಗಿ, ಕೊಪ್ಪಳ, ಯಾದಗಿರಿ, ಬೀದರ್‌, ಕೋಲಾರ ಜಿಲ್ಲೆಗಳಲ್ಲಿ ಹವಾಮಾನ ಆಧಾರಿತ ಬೆಳೆಯಾಗಿ ಬೆಳೆಯಲಾಗುತ್ತದೆರಾಜ್ಯದಲ್ಲಿ 42 ಸಾವಿರ ಹೆಕ್ಟೇರ್ಗಿಂತ ಹೆಚ್ಚಿನ ಪ್ರದೇಶದಲ್ಲಿ ಬೆಳೆ ಇದೆ. ಮಳೆ, ಪ್ರತಿಕೂಲ ಹವಾಮಾನದಿಂದ ಕಳೆದ ವರ್ಷ ಅಪಾರ ಪ್ರಮಾಣದಲ್ಲಿ ಬೆಳೆ ಹಾನಿಯಾಗಿತ್ತು.
  • ಬೆಳೆ ವಿಮೆ ಯೋಜನೆಯಡಿ  31,470 ರೈತರು  ಹೆಕ್ಟೇರ್‌ಗೆ ₹14 ಸಾವಿರ ಕಂತು (ಪ್ರೀಮಿಯಂ) ಪಾವತಿಸಿದ್ದರು. 27,953 ಹೆಕ್ಟೇರ್‌ ವಿಮೆ ಯೋಜನೆಗೆ ಒಳಪಟ್ಟಿತ್ತು. ₹39.13 ಕೋಟಿ ವಿಮೆ ಮೊತ್ತ ಪಾವತಿಯಾಗಿತ್ತು. 
  • ಬೆಳೆ ಹಾನಿಯಾದರೆ ಪ್ರತಿ ಹೆಕ್ಟೇರ್‌ಗೆ ₹2.80 ಲಕ್ಷ ಪರಿಹಾರ ಬರಬೇಕಿತ್ತು. ಆದರೆ, ವಿಮೆ ಅವಧಿ ಮುಗಿದರೂ ಹಣ ಕೈಸೇರಿಲ್ಲ. ಪ್ರಕ್ರಿಯೆ ವಿಳಂಬವಾಗಿದ್ದರಿಂದ ರೈತರು ಇಕ್ಕಟ್ಟಿಗೆ ಸಿಲುಕಿದ್ದಾರೆ.
  • ‘ನಾನು ನಾಲ್ಕು ಎಕರೆಯಲ್ಲಿ ದ್ರಾಕ್ಷಿ ಬೆಳೆದಿದ್ದು, ವಿಮೆಯನ್ನೂ ಮಾಡಿಸಿದ್ದೆ. ಹವಾಮಾನ ವೈಪರೀತ್ಯದಿಂದ ಬೆಳೆ ಕೈಕೊಟ್ಟಿತು. ಈಗ ವಿಮೆ ಪರಿಹಾರವೂ ಸಿಗದೆ ತೊಂದೆರೆಯಾಗಿದೆ’ ಎಂದು ಅಥಣಿ ತಾಲ್ಲೂಕಿನ ತೆಲಸಂಗದ ರೈತ ರವಿ.
  • ‘ಅಕ್ರಮವಾಗಿ ವಿಮೆ ಪರಿಹಾರ ಪಡೆಯಲು ಕೆಲ ರೈತರು ಯತ್ನಿಸಿದ್ದಾರೆ. ದ್ರಾಕ್ಷಿ ಬೆಳೆಯದಿದ್ದರೂ ವಿಮೆ ಮಾಡಿಸಿದ್ದಾರೆ ಎಂಬ ಆರೋಪವಿದೆ. ಪರಿಶೀಲನೆ ನಂತರ ಪರಿಹಾರ ಕೊಡುತ್ತೇವೆ ಎಂದು ವಿಮೆ ಕಂಪನಿ ಅಧಿಕಾರಿಗಳು ಹೇಳುತ್ತಾರೆ’ ಎಂದು ಹೇಳಿದರು.
  • ವಿತ್ತೀಯ ಕೊರತೆ ₹5.73 ಲಕ್ಷ ಕೋಟಿ

ಸಂದರ್ಭ: ಕೇಂದ್ರದಿಂದ ರಾಜ್ಯಗಳಿಗೆ ₹6.31 ಲಕ್ಷ ಕೋಟಿ ತೆರಿಗೆ ಪಾಲು ವರ್ಗಾವಣೆ: ಸಿಜಿಎ ಪ್ರಸಕ್ತ ಆರ್ಥಿಕ ವರ್ಷದ ಏಪ್ರಿಲ್ಸೆಪ್ಟೆಂಬರ್ ಅವಧಿಯಲ್ಲಿ ಕೇಂದ್ರ ಸರ್ಕಾರದ ವರಮಾನ ಮತ್ತು ವೆಚ್ಚದ ನಡುವಿನ ಅಂತರವಾದ ವಿತ್ತೀಯ ಕೊರತೆಯು ಇಡೀ ವರ್ಷದ ಗುರಿಯ ಶೇ 36.5ರಷ್ಟಾಗಿದೆ.

  • ಹಣಕಾಸಿನ ಮೌಲ್ಯದ ಲೆಕ್ಕದಲ್ಲಿ ಇದು ₹5.73 ಲಕ್ಷ ಕೋಟಿಯಾಗಿದೆ ಎಂದು ಲೆಕ್ಕಪತ್ರಗಳ ಮಹಾನಿಯಂತ್ರಕರ (ಸಿಜಿಎ) ವರದಿ ಶುಕ್ರವಾರ ತಿಳಿಸಿದೆ.
  • ಕಳೆದ ಆರ್ಥಿಕ ವರ್ಷದ ಇದೇ ಅವಧಿಯಲ್ಲಿ ವಿತ್ತೀಯ ಕೊರತೆಯು ₹4.7 ಲಕ್ಷ ಕೋಟಿಯಷ್ಟು (ಶೇ 29) ಇತ್ತು. 2025–26ರಲ್ಲಿ  ವಿತ್ತೀಯ ಕೊರತೆಯನ್ನು ಜಿಡಿಪಿಯ ಶೇ 4.4ಕ್ಕೆ (ಹಣಕಾಸಿನ ಮೌಲ್ಯದ ಲೆಕ್ಕದಲ್ಲಿ ₹15.69 ಲಕ್ಷ ಕೋಟಿ) ತಗ್ಗಿಸಲು ಸರ್ಕಾರ ಬಜೆಟ್‌ನಲ್ಲಿ ಗುರಿ ನಿಗದಿಪಡಿಸಲಾಗಿದೆ.
  • ಏಪ್ರಿಲ್‌ನಿಂದ ಸೆಪ್ಟೆಂಬರ್‌ ವರೆಗೆ ಸರ್ಕಾರವು ₹17.3 ಲಕ್ಷ ಕೋಟಿ (ಶೇ 49.5) ವರಮಾನ ಸ್ವೀಕರಿಸಿದೆ. ಒಟ್ಟು ವೆಚ್ಚವು ₹23 ಲಕ್ಷ ಕೋಟಿ ಆಗಿದೆ. ಇದು ಬಜೆಟ್‌ ಅಂದಾಜಿನ ಶೇ 45ರಷ್ಟಾಗಿದೆ.
  • ಕೇಂದ್ರ ಸರ್ಕಾರ ಸ್ವೀಕರಿಸಿದ ಒಟ್ಟು ಮೊತ್ತದ ಪೈಕಿ ₹12.29 ಲಕ್ಷ ಕೋಟಿ ತೆರಿಗೆ ವರಮಾನದಿಂದ ಸಂಗ್ರಹಿಸಿದೆ. ₹4.66 ಲಕ್ಷ ಕೋಟಿ ತೆರಿಗೆಯೇತರ ವರಮಾನ ಮತ್ತು ಇತರೆ ಮೂಲಗಳಿಂದ ₹34,770 ಕೋಟಿ ಸಂಗ್ರಹಿಸಿದೆ.
  • ಕೇಂದ್ರ ಸರ್ಕಾರವು, ರಾಜ್ಯ ಸರ್ಕಾರಗಳಿಗೆ ₹6.31 ಲಕ್ಷ ಕೋಟಿಯನ್ನು ತೆರಿಗೆ ಪಾಲಾಗಿ ವರ್ಗಾಯಿಸಿದೆ. ಇದು ಕಳೆದ ಆರ್ಥಿಕ ವರ್ಷದ ಇದೇ ಅವಧಿಗೆ ಹೋಲಿಸಿದರೆ ₹86,948 ಕೋಟಿಯಷ್ಟು ಅಧಿಕವಾಗಿದೆ ಎಂದು ತಿಳಿಸಿದೆ.
  • ವಿದೇಶಿ ವಿನಿಮಯ ಸಂಗ್ರಹ ಇಳಿಕೆ

ಸಂದರ್ಭ: ಅಕ್ಟೋಬರ್‌ 24ಕ್ಕೆ ಅಂತ್ಯಗೊಂಡ ವಾರದಲ್ಲಿ ದೇಶದ ವಿದೇಶಿ ವಿನಿಮಯ ಮೀಸಲು ಸಂಗ್ರಹದ ಪ್ರಮಾಣವು ₹61,434 ಕೋಟಿಯಷ್ಟು ಕಡಿಮೆ ಆಗಿದೆ.

  • ಪ್ರಸ್ತುತ ಒಟ್ಟು ಮೀಸಲು ಸಂಗ್ರಹ ₹61.69 ಲಕ್ಷ ಕೋಟಿಯಷ್ಟಾಗಿದೆ ಎಂದು ಭಾರತೀಯ ರಿಸರ್ವ್‌ ಬ್ಯಾಂಕ್‌ (ಆರ್‌ಬಿಐ) ತಿಳಿಸಿದೆ.
  • ವಿದೇಶಿ ಕರೆನ್ಸಿಗಳ ಸಂಪತ್ತಿನ ಮೌಲ್ಯ ₹34,266 ಕೋಟಿಯಷ್ಟು ಕಡಿಮೆಯಾಗಿದ್ದು, ₹50.26 ಲಕ್ಷ ಕೋಟಿಯಾಗಿದೆ. ಚಿನ್ನದ ಮೀಸಲು ಸಂಗ್ರಹದಲ್ಲಿ ₹26,706 ಕೋಟಿ ಇಳಿಕೆಯಾಗಿದ್ದು, ₹9.36 ಲಕ್ಷ ಕೋಟಿಯಾಗಿದೆ. ಸ್ಪೆಷಲ್ ಡ್ರಾಯಿಂಗ್ ರೈಟ್ಸ್‌ (ಎಸ್‌ಡಿಆರ್) ₹1.65 ಲಕ್ಷ ಕೋಟಿ ಆಗಿದೆ. ಅಂತರರಾಷ್ಟ್ರೀಯ ಹಣಕಾಸು ನಿಧಿಯಲ್ಲಿ ಭಾರತದ ಪಾಲು ₹40,887 ಕೋಟಿಯಾಗಿದೆ ಎಂದು ತಿಳಿಸಿದೆ.
0 0 votes
Article Rating
Subscribe
Notify of
guest

0 Comments
Oldest
Newest Most Voted
Inline Feedbacks
View all comments