- ಲಕ್ಕವಳ್ಳಿ ಜಲಾಶಯಕ್ಕೆ ಹರಿಯಲಿದ್ದಾಳೆ ತುಂಗೆ
ಸಂದರ್ಭ: ಭದ್ರಾ ಮೇಲ್ದಂಡೆ ಯೋಜನೆ ಅಡಿ ಗಾಜನೂರಿನ ತುಂಗಾ ಜಲಾಶಯದಿಂದ ನಾಲೆಯ ಮೂಲಕ ಲಕ್ಕವಳ್ಳಿಯ ಭದ್ರಾ ಜಲಾಶಯಕ್ಕೆ 17.4 ಟಿಎಂಸಿ ಅಡಿ ನೀರು ಹರಿಸುವ ಯೋಜನೆಯ ಕಾಮಗಾರಿ ಅಂತಿಮ ಹಂತ ತಲುಪಿದೆ. ಬೇಸಿಗೆಯಲ್ಲಿ ಪ್ರಾಯೋಗಿಕವಾಗಿ ನೀರು ಹರಿಸಲು (ಟ್ರಯಲ್ ರನ್) ವಿಶ್ವೇಶ್ವರಯ್ಯ ಜಲ ನಿಗಮ (ವಿಜೆಎನ್ಎಲ್) ಸಿದ್ಧತೆ ನಡೆಸಿದೆ.
- ಚಿಕ್ಕಮಗಳೂರು ಜಿಲ್ಲೆಯ ಎನ್.ಆರ್.ಪುರ ತಾಲ್ಲೂಕಿನ ಮುತ್ತಿನಕೊಪ್ಪ ಬಳಿ ತುಂಗಾ ಜಲಾಶಯದ ಹಿನ್ನೀರನ್ನು ಆರಂಭದಲ್ಲಿ ಗುರುತ್ವ ಬಲ, ನಂತರ ಪಂಪ್ ಮಾಡಿ ನಾಲೆಗೆ ಹರಿಸಿ, ಅಲ್ಲಿಂದ 11.2 ಕಿ.ಮೀ. ಅಂತರದ ನೆಲಗದ್ದೆಗೆ ಕೊಂಡೊಯ್ದು, ಗುರುತ್ವ ಕಾಲುವೆಯ ಮೂಲಕ ಭದ್ರಾ ಜಲಾಶಯಕ್ಕೆ ಹರಿಸಲಾಗುತ್ತದೆ. ಇದಕ್ಕಾಗಿ ಕೆ.ಕಣಬೂರು, ಸಾತಕುಳಿ ಬಳಿ ಪಂಪ್ಹೌಸ್ ನಿರ್ಮಿಸಲಾಗಿದೆ.
- ‘ಕಣಬೂರು ಪಂಪ್ಹೌಸ್ ಪೂರ್ಣಗೊಂಡಿದೆ. ಸಾತಕುಳಿಯಲ್ಲಿ ಕಾಮಗಾರಿ ಅಂತಿಮ ಹಂತದಲ್ಲಿದೆ. ಪಂಪ್ ಅಳವಡಿಕೆ, ವಿದ್ಯುತ್ ಟವರ್ ಹಾಕುವ ಕೆಲಸವೂ ಮುಗಿದಿದೆ. ಈಗ ಪಂಪ್ಹೌಸ್ಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲು ಅರಣ್ಯ ಇಲಾಖೆಯಿಂದ ಅನುಮತಿ ಹಾಗೂ ರೈಸಿಂಗ್ ಲೈನ್ನಲ್ಲಿ ಒಂದು ಪೈಪ್ ಅಳವಡಿಕೆ ಕಾರ್ಯ ಮಾತ್ರ ಬಾಕಿ ಉಳಿದಿದೆ.
- 15 ವರ್ಷಗಳ ಅವಧಿ: ಪ್ರತಿ ವರ್ಷ ಜೂನ್ನಿಂದ ಅಕ್ಟೋಬರ್ವರೆಗೆ ತುಂಗಾ ಹಿನ್ನೀರಿನಿಂದ ಭದ್ರಾ ಜಲಾಶಯಕ್ಕೆ ನೀರು ಹರಿಸುವ ಯೋಜನೆ, ₹ 324 ಕೋಟಿ ವೆಚ್ಚದ ಈ ಕಾಮಗಾರಿಗೆ 2008ರಲ್ಲಿ ಟೆಂಡರ್ ಕರೆಯಲಾಗಿತ್ತು. 2010ರಲ್ಲಿ ಕೆಲಸ ಆರಂಭವಾಗಿದೆ. ನಿಗದಿಯಂತೆ 2011ರಲ್ಲೇ ಕೆಲಸ ಮುಗಿಯಬೇಕಿತ್ತು. ಅರಣ್ಯ ಪ್ರದೇಶದಲ್ಲಿ ಕಾಮಗಾರಿಗೆ ಅನುಮತಿ, ಹಣ ಬಿಡುಗಡೆಗೆ ವಿಳಂಬದ ಕಾರಣ ಆಗಲಿಲ್ಲ. ಜೂನ್ 2020ರ ನಂತರ ಕಾಮಗಾರಿ ವೇಗ ಪಡೆದಿದ್ದು, ಈಗ 15 ವರ್ಷಗಳ ನಂತರ ಯೋಜನೆ ಅಂತಿಮ ಹಂತ ತಲುಪಿದೆ.
- ಭದ್ರಾ ಮೇಲ್ದಂಡೆ ಯೋಜನೆ ಜಾರಿ ಭಾಗವಾಗಿ 2019ರಿಂದ ಚಿತ್ರದುರ್ಗ ಜಿಲ್ಲೆಯ ವಾಣಿವಿಲಾಸ ಸಾಗರಕ್ಕೆ ಭದ್ರಾ ಜಲಾಶಯದಿಂದ ಬೇಸಿಗೆಯಲ್ಲಿ ಮೂರು ಟಿಎಂಸಿ ಅಡಿ ನೀರು ಹರಿಸಲಾಗುತ್ತಿದೆ.
ತುಂಗೆಯ ಪಾಲೇ ಅಧಿಕ!
- ಭದ್ರಾ ಮೇಲ್ದಂಡೆ ಯೋಜನೆಯಡಿ ಚಿತ್ರದುರ್ಗ, ದಾವಣಗೆರೆ, ಚಿಕ್ಕಮಗಳೂರು, ತುಮಕೂರು ಜಿಲ್ಲೆಗಳ ಬಯಲು ಸೀಮೆಯ 2,25,515 ಹೆಕ್ಟೇರ್ ಪ್ರದೇಶಕ್ಕೆ ಕಾಲುವೆ, ಕೆರೆ ಹಾಗೂ ಹನಿ ನೀರಾವರಿ ಮೂಲಕ 29.9 ಟಿಎಂಸಿ ಅಡಿ ನೀರು ಹರಿಸಲಾಗುತ್ತದೆ.
- ಅದಕ್ಕೆ ಭದ್ರಾ ನದಿಯಿಂದ 12.5 ಟಿಎಂಸಿ ಅಡಿ ಹಾಗೂ ತುಂಗಾದಿಂದ 17.4 ಟಿಎಂಸಿ ಅಡಿ ನೀರು ಹಂಚಿಕೆ ಮಾಡಲಾಗಿದೆ. ಹೆಸರು ಭದ್ರಾ ಮೇಲ್ದಂಡೆ ಆದರೂ ಯೋಜನೆಗೆ ತುಂಗಾ ನದಿಯ ನೀರಿನ ಪಾಲು ಹೆಚ್ಚಿದೆ.
- ಎತ್ತಿನಹೊಳೆಗೆ 432 ಎಕರೆ ಅರಣ್ಯ ಬಳಕೆ
ಸಂದರ್ಭ:ಬಯಲುಸೀಮೆ ಜಿಲ್ಲೆಗಳಿಗೆ ಕುಡಿಯುವ ನೀರು ಪೂರೈಸುವ ಎತ್ತಿನಹೊಳೆ ಯೋಜನೆಗೆ ಹಾಸನ ಹಾಗೂ ತುಮಕೂರು ಜಿಲ್ಲೆಗಳ 432 ಎಕರೆ ಅರಣ್ಯ ಬಳಕೆಗೆ ತಾತ್ವಿಕ ಅನುಮೋದನೆ ನೀಡುವಂತೆ ಕೋರಿ ಕರ್ನಾಟಕ ಸರ್ಕಾರವು ಕೇಂದ್ರ ಅರಣ್ಯ ಸಚಿವಾಲಯಕ್ಕೆ ಮತ್ತೆ ಪ್ರಸ್ತಾವ ಸಲ್ಲಿಸಿದೆ.
- ಹಾಸನ, ತುಮಕೂರು ಜಿಲ್ಲೆಗಳಲ್ಲಿ ಗುರುತ್ವಾಕರ್ಷಣೆ ಕಾಲುವೆ ನಿರ್ಮಿಸಲು ತುಮಕೂರಿನ ಬೆಣ್ಣೆಹಳ್ಳದ ಕಾವಲ್, ಕಂಚಿಗಾನಹಳ್ಳಿ ಹಾಗೂ ಹಾಸನದ ಐದಹಳ್ಳಿ ಕಾವಲ್, ಕುಮರಿಹಳ್ಳಿ ಗ್ರಾಮದ ಅರಣ್ಯ ಭೂಮಿ ಬಳಸಲು ಒಪ್ಪಿಗೆ ಕೊಡಬೇಕು ಎಂದು ಅರಣ್ಯ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಅವರು ಅರಣ್ಯ ಸಚಿವಾಲಯದ ಕಾರ್ಯದರ್ಶಿಗೆ ಅಕ್ಟೋಬರ್ 8ರಂದು ಪ್ರಸ್ತಾವ ಸಲ್ಲಿಸಿದ್ದಾರೆ.
- 432 ಎಕರೆ ಅರಣ್ಯ ಬಳಕೆಗೆ ಒಪ್ಪಿಗೆ ಕೋರಿ ರಾಜ್ಯ ಸರ್ಕಾರ ಈ ಹಿಂದೆ ಪ್ರಸ್ತಾವ ಸಲ್ಲಿಸಿತ್ತು. ಯೋಜನೆಯ ಅನುಷ್ಠಾನದ ಸಂದರ್ಭದಲ್ಲಿ ವ್ಯಾಪಕ ಪ್ರಮಾಣದಲ್ಲಿ ನಿಯಮ ಉಲ್ಲಂಘನೆ ಆಗಿದೆ ಎಂಬ ಕಾರಣ ನೀಡಿ ಕೇಂದ್ರ ಅರಣ್ಯ ಸಲಹಾ ಸಮಿತಿ ಅನುಮೋದನೆ ಕೊಟ್ಟಿರಲಿಲ್ಲ. ನಿಯಮ ಉಲ್ಲಂಘಿಸಿದ ಅಧಿಕಾರಿಗಳ ವಿರುದ್ಧ ಶಿಸ್ತುಕ್ರಮ ಕೈಗೊಳ್ಳಬೇಕು ಹಾಗೂ ದಂಡ ವಿಧಿಸಬೇಕು ಎಂದು ತಾಕೀತು ಮಾಡಿತ್ತು. ಇದರಿಂದಾಗಿ, ಎತ್ತಿನಹೊಳೆ ಕಾಮಗಾರಿ ಸ್ಥಗಿತವಾಗಿತ್ತು.
- ಆ ಬಳಿಕ ಹಾಸನ ಹಾಗೂ ತುಮಕೂರು ಜಿಲ್ಲೆಗಳ ಡಿಸಿಎಫ್ಗಳು ಸೆಪ್ಟೆಂಬರ್ನಲ್ಲಿ ಯೋಜನಾ ಸ್ಥಳ ಪರಿಶೀಲನೆ ನಡೆಸಿ ವರದಿ ಸಲ್ಲಿಸಿದ್ದರು. ‘ನಿಯಮ ಉಲ್ಲಂಘಿಸಿದವರ ವಿರುದ್ಧ 2019ರಲ್ಲೇ ಎಫ್ಐಆರ್ ದಾಖಲಿಸಲಾಗಿದೆ. ಬಯಲುಸೀಮೆ ಜಿಲ್ಲೆಗಳ ನೀರಿನ ದಾಹ ಇಂಗಿಸಲು ಈ ಯೋಜನೆ ಅಗತ್ಯ‘ ಎಂದು ಶಿಫಾರಸು ಮಾಡಿದ್ದರು.
- ‘ತುಮಕೂರು ಜಿಲ್ಲೆಯ ಮಾರಶೆಟ್ಟಿಹಳ್ಳಿ ಮೀಸಲು ಅರಣ್ಯದಲ್ಲಿ ಕಾಲುವೆ ನಿರ್ಮಿಸಲಾಗುತ್ತಿದೆ. ಇದರಿಂದ ಕಾಡಿಗೆ ಭಾರಿ ಹಾನಿಯಾಗುತ್ತದೆ. ಇದನ್ನು ತಪ್ಪಿಸಲು ನೆಲದಡಿ ಕಾಲುವೆ ನಿರ್ಮಿಸಬೇಕು‘ ಎಂದು ಸಲಹಾ ಸಮಿತಿ ಸೂಚಿಸಿತ್ತು.
- ‘ಕಾಲುವೆ ನಿರ್ಮಾಣಕ್ಕಾಗಿ 7,500 ಮರಗಳನ್ನು ಕಡಿಯಲು ಉದ್ದೇಶಿಸಲಾಗಿತ್ತು. ಇದೀಗ, ಈ ಭಾಗದಲ್ಲಿ ಕಾಲುವೆಯ ವಿನ್ಯಾಸ ಬದಲಿಸಲಾಗಿದೆ. 4,043 ಮರಗಳನ್ನಷ್ಟೇ ಕಡಿಯಲಾಗುತ್ತದೆ‘ ಎಂದು ತುಮಕೂರು ಡಿಸಿಎಫ್ ತಮ್ಮ ವರದಿಯಲ್ಲಿ ತಿಳಿಸಿದ್ದರು. ‘ಈ ಅರಣ್ಯದಲ್ಲಿ ಭೂಗತ ಕಾಲುವೆ ನಿರ್ಮಾಣ ಕಾರ್ಯಸಾಧುವಲ್ಲ. ಇದರಿಂದಾಗಿ, ಭೂಕುಸಿತದಂತಹ ಸಮಸ್ಯೆಗಳು ಸೃಷ್ಟಿಯಾಗಬಹುದು. ವಿನ್ಯಾಸ ಬದಲಿಸಿದ್ದರಿಂದ ರಾಜ್ಯ ಸರ್ಕಾರಕ್ಕೆ ₹170 ಕೋಟಿ ಹೆಚ್ಚುವರಿ ಹೊರೆ ಆಗಲಿದೆ‘ ಎಂದು ಜಲಸಂಪನ್ಮೂಲ ಇಲಾಖೆಯ ಅಧಿಕಾರಿಗಳು ಪ್ರತಿಕ್ರಿಯಿಸಿದ್ದಾರೆ.
- ‘ಕಂದಾಯ ದಾಖಲೆಗಳ ಆಧಾರದಲ್ಲಿ ರೈತರ ಸ್ವಾಧೀನದಲ್ಲಿದ್ದ ಜಾಗಗಳಲ್ಲಿ ಕಾಲುವೆ ನಿರ್ಮಾಣ ಕಾಮಗಾರಿ ನಡೆಸಲಾಗಿತ್ತು. ಈ ಪ್ರದೇಶವು ಅರಣ್ಯ ಭೂಮಿ ಎಂಬುದು ಜಲಸಂಪನ್ಮೂಲ ಇಲಾಖೆ ಅಧಿಕಾರಿಗಳಿಗೆ ಗೊತ್ತಿರಲಿಲ್ಲ. ಇದು ಉದ್ದೇಶಪೂರ್ವಕ ಉಲ್ಲಂಘನೆ ಅಲ್ಲ. ಇದಕ್ಕಾಗಿ ಯಾವುದೇ ವ್ಯಕ್ತಿ ಅಥವಾ ಇಲಾಖೆಯನ್ನು ಹೊಣೆಗಾರರನ್ನಾಗಿ ಮಾಡಬಾರದು‘ ಎಂದು ಎಸಿಎಸ್ ಅವರು ಪ್ರಸ್ತಾವದಲ್ಲಿ ವಿನಂತಿಸಿದ್ದಾರೆ.
- ‘ಎ.ಐ ಕಂಪನಿಗಳ ಗುರುತಿಸಲು ₹100 ಕೋಟಿ’
ಸಂದರ್ಭ: ‘ದೇಶದಲ್ಲಿನ ಕೃತಕ ಬುದ್ಧಿಮತ್ತೆ (ಎ.ಐ) ತಂತ್ರಜ್ಞಾನದ ಅಗ್ರ 50 ಕಂಪನಿಗಳನ್ನು ಗುರುತಿಸಲು ರಾಜ್ಯ ಸರ್ಕಾರವು ₹100 ಕೋಟಿ ನಿಧಿಯನ್ನು ಆರಂಭಿಸಲಿದೆ’ ಎಂದು ಮಾಹಿತಿ ತಂತ್ರಜ್ಞಾನ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.
- ಕರ್ನಾಟಕ ಇಂದು ಇತರೆ ರಾಜ್ಯಗ ಳೊಂದಿಗೆ ಸ್ಪರ್ಧಿಸುತ್ತಿಲ್ಲ; ನಾವೀನ್ಯ, ಕೌಶಲ ಮತ್ತು ರಾಜಕೀಯ ಇಚ್ಛಾಶಕ್ತಿಯ ಮೂಲಕ ಜಾಗತಿಕ ಪರಿಹಾರಗಳನ್ನು ರೂಪಿಸಲು ನಾವು ನಮ್ಮೊಂದಿಗೆ ಸ್ಪರ್ಧಿಸುತ್ತಿದ್ದೇವೆ.
- ಕೃಷಿ ತಂತ್ರಜ್ಞಾನದಿಂದ ಬಾಹ್ಯಾಕಾಶದವರೆಗೆ ಪ್ರಗತಿಯನ್ನು ಸಾಧಿಸುವ ಮೂಲಕ ಕರ್ನಾಟಕವು ವಿಶ್ವದ ಅತ್ಯಂತ ನಾವೀನ್ಯ ಕೇಂದ್ರಗಳಲ್ಲಿ ಒಂದಾಗಿ ವಿಕಸನಗೊಂಡಿದೆ. ಕರ್ನಾಟಕ ಕೇವಲ ಹೂಡಿಕೆ ತಾಣವಲ್ಲ, ಜಾಗತಿಕ ಜ್ಞಾನ, ಕೌಶಲದ ಕೇಂದ್ರ. ಮಂಗಳೂರು, ಮೈಸೂರು, ಹುಬ್ಬಳ್ಳಿ-ಧಾರವಾಡ ಮತ್ತು ಬೆಳಗಾವಿಯಾದ್ಯಂತ ನಾವೀನ್ಯತೆ ಕ್ಲಸ್ಟರ್ ಗಳನ್ನು ನಿರ್ಮಿಸಲು ₹1,000 ಕೋಟಿ ಹೂಡಿಕೆ ಮಾಡುತ್ತಿದ್ದೇವೆ. ಪ್ರಗತಿಯ ಪ್ರಯೋಜನ ಪ್ರತಿ ಪ್ರದೇಶವನ್ನು ತಲುಪು ವಂತೆ ನೋಡಿಕೊಳ್ಳುತ್ತೇವೆ ಎಂ ದರು.
- ಫಿಲಿಪ್ಪೀನ್ಸ್ನಲ್ಲಿ ಪ್ರಬಲ ಭೂಕಂಪ: ಐವರ ಸಾವು
ಸಂದರ್ಭ: ಫಿಲಿಪ್ಪೀನ್ಸ್ನ ದಕ್ಷಿಣ ಭಾಗದಲ್ಲಿ ಶುಕ್ರವಾರ ಬೆಳಗ್ಗೆ ಪ್ರಬಲ ಭೂಕಂಪ ಸಂಭವಿಸಿ ಕನಿಷ್ಠ ಐವರು ಸಾವಿಗೀಡಾಗಿದ್ದಾರೆ. ರಿಕ್ಟರ್ ಮಾಪಕದಲ್ಲಿ ಭೂಕಂಪನದ ತೀವ್ರತೆ 7.4ರಷ್ಟು ದಾಖಲಾಗಿತ್ತು.
- ಭೂಮಿ ಕಂಪಿಸಿದ್ದರಿಂದ ಹಲವೆಡೆ ಭೂಕುಸಿತ ಉಂಟಾಗಿದೆ. ಆಸ್ಪತ್ರೆ, ಶಾಲೆಗಳು ಸೇರಿ ಹಲವು ಕಟ್ಟಡಗಳಿಗೆ ಹಾನಿಯಾಗಿದೆ. ಸುನಾಮಿ ಮುನ್ನೆಚ್ಚರಿಕೆ ಹಿನ್ನೆಲೆಯಲ್ಲಿ ಕರಾವಳಿ ತೀರದ ಜನರನ್ನು ಸುರಕ್ಷಿತ ಜಾಗಕ್ಕೆ ಸ್ಥಳಾಂತರ ಮಾಡಲಾಗಿದೆ.
- ಮನಾಯ್ ನಗರ ಪೂರ್ವದ ಸಮುದ್ರದಲ್ಲಿ 43 ಕಿ.ಮೀ. ದೂರದಲ್ಲಿ ಕಂಪನ ಕೇಂದ್ರ ದಾಖಲಾಗಿದ್ದು, ಡಾವೋ ನಗರದಲ್ಲಿ ಹೆಚ್ಚು ಹಾನಿಯಾಗಿದೆ ಎಂದು ಅಧ್ಯಕ್ಷ ಫೆರ್ಡಿನಾಂಡ್ ಮಾರ್ಕಸ್ ಜೂನಿಯರ್ ತಿಳಿಸಿದ್ದಾರೆ.
- ಚಾರಿತ್ರಿಕ ಕಂಚು ಜಯಿಸಿದ ಭಾರತ
ಸಂದರ್ಭ: ಆತಿಥೇಯ ಭಾರತ ತಂಡವು ವಿಶ್ವ ಜೂನಿಯರ್ ಬ್ಯಾಡ್ಮಿಂಟನ್ ಮಿಶ್ರ ತಂಡ ಚಾಂಪಿಯನ್ಷಿಪ್ನ ಸೆಮಿಫೈನಲ್ನಲ್ಲಿ ಶುಕ್ರವಾರ ಹಾಲಿ ಚಾಂಪಿಯನ್ ಇಂಡೊನೇಷ್ಯಾ ವಿರುದ್ಧ ಸೋತ ನಂತರ ಚಾರಿತ್ರಿಕ ಕಂಚಿನ ಪದಕದೊಂದಿಗೆ ಅಭಿಯಾನ ಮುಗಿಸಿತು.
- ಭಾರತ ತಂಡವು ಕ್ವಾರ್ಟರ್ ಫೈನಲ್ನಲ್ಲಿ ಮಾಜಿ ಚಾಂಪಿಯನ್ ದಕ್ಷಿಣ ಕೊರಿಯಾ ತಂಡವನ್ನು ಮಣಿಸಿ ಮಿಶ್ರ ತಂಡ ಸ್ಪರ್ಧೆಯಲ್ಲಿ ಐತಿಹಾಸಿಕ ಮೊದಲ ಪದಕ ಖಚಿತ ಪಡಿಸಿಕೊಂಡಿತ್ತು. ನಾಲ್ಕರ ಘಟ್ಟದ ಪಂದ್ಯದಲ್ಲಿ 35-45, 21-45ರಿಂದ ಪ್ರಬಲ ಇಂಡೊನೇಷ್ಯಾ ತಂಡಕ್ಕೆ ಮಣಿಯಿತು.
- ಮತ್ತೊಂದು ಸೆಮಿಫೈನಲ್ನಲ್ಲಿ 14 ಬಾರಿಯ ಚಾಂಪಿಯನ್ ಚೀನಾ ಮತ್ತು ಜಪಾನ್ ಸೆಣಸಲಿದ್ದು, ವಿಜೇತ ತಂಡವನ್ನು ಇಂಡೊ ನೇಷ್ಯಾ ಫೈನಲ್ನಲ್ಲಿ ಎದುರಿಸಲಿದೆ.
- ಪ್ಯಾರಾ ಪವರ್ಲಿಫ್ಟಿಂಗ್: ವಿನಯ್ಗೆ ಚಿನ್ನ
ಸಂದರ್ಭ: ಭಾರತದ ವಿನಯ್ ಅವರು ಇಲ್ಲಿ ನಡೆಯುತ್ತಿರುವ ವಿಶ್ವ ಪ್ಯಾರಾ ಪವರ್ಲಿಫ್ಟಿಂಗ್ ಚಾಂಪಿಯನ್ಷಿಪ್ನಲ್ಲಿ ಚಿನ್ನದ ಪದಕ ಗೆದ್ದುಕೊಂಡರು.
- ಜೂನಿಯರ್ ಪುರುಷರ 72 ಕೆ.ಜಿ. ವಿಭಾಗದಲ್ಲಿ ಕಣಕ್ಕಿಳಿದಿದ್ದ ಅವರು, ಎರಡನೇ ಯತ್ನದಲ್ಲಿ 142 ಕೆ.ಜಿ. ಭಾರ ಎತ್ತುವುದರೊಂದಿಗೆ ಸ್ವರ್ಣಕ್ಕೆ ಕೊರಳೊಡ್ಡಿದರು. ಉತ್ತರಪ್ರದೇಶದ ಗೋರಖಪುರದ ವಿನಯ್, ಮೊದಲ ಯತ್ನದಲ್ಲಿ 137 ಕೆ.ಜಿ. ಭಾರ ಎತ್ತಿದ್ದರು. ಮೂರನೇ ಯತ್ನದಲ್ಲಿ 147 ಕೆ.ಜಿ. ಎತ್ತಿದರಾದರೂ, ರೆಫ್ರಿಗಳು ಅದನ್ನು ಅಸಿಂಧುಗೊಳಿಸಿದರು.
- ಪೋಲೆಂಡ್ನ ಮಿಕೊಲಾಜ್ ಕೊಸುಬಿನ್ಸ್ಕಿ (141 ಕೆ.ಜಿ.) ಬೆಳ್ಳಿ ಗೆದ್ದರೆ, ಈಕ್ವೆಡಾರ್ನ ಸೆಬಾಸ್ಟಿಯನ್ ಎಫ್ (137 ಕೆ.ಜಿ.) ಅವರು ಕಂಚಿನ ಪದಕ ತಮ್ಮದಾಗಿಸಿಕೊಂಡರು.
- ವಿನಯ್ ಅವರು 2024ರ ಪ್ಯಾರಾ ಪವರ್ಲಿಫ್ಟಿಂಗ್ ವಿಶ್ವಕಪ್ನಲ್ಲಿ ಜೂನಿಯರ್ ವಿಭಾಗದ 59 ಕೆ.ಜಿ. ಸ್ಪರ್ಧೆಯಲ್ಲಿ ಚಿನ್ನದ ಪದಕ ಜಯಿಸಿದ್ದರು.
- ಹಸಿರು ಪಟಾಕಿಗಷ್ಟೇ ಅವಕಾಶ
ಸಂದರ್ಭ: ರಾಜ್ಯದಾದ್ಯಂತ ‘ಪರಿಸರಸ್ನೇಹಿ ದೀಪಾವಳಿ’ ಆಚರಣೆಗೆ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಸೂಚಿಸಿದ್ದು, ಹಸಿರು ಪಟಾಕಿಗಳಿಗೆ ಮಾತ್ರ ಅವಕಾಶ ನೀಡಬೇಕು ಎಂದು ಜಿಲ್ಲಾಧಿಕಾರಿಗಳು, ಪೊಲೀಸರಿಗೆ ತಾಕೀತು ಮಾಡಿದೆ.
- ನಿಷೇಧಿಸಿರುವ ಪಟಾಕಿಗಳನ್ನು ಮಾರಾಟ ಮಾಡುವವರು, ದಾಸ್ತಾನು ಹೊಂದಿರುವವರ ವಿರುದ್ಧ ಪರಿಸರ ಕಾಯ್ದೆಯಡಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ತಿಳಿಸಲಾಗಿದೆ. ಅಲ್ಲದೆ, ಶಬ್ದ ಮಾಲಿನ್ಯವನ್ನು ನಿಯಂತ್ರಿಸಲು 2004ರಲ್ಲಿ ಪ್ರತಿ ಜಿಲ್ಲೆಯಲ್ಲೂ ಸ್ಥಾಪನೆಯಾಗಿರುವ ‘ಜಿಲ್ಲಾ ಪರಿಸರ ಸಂರಕ್ಷಣೆ ಪ್ರಾಧಿಕಾರ’ಕ್ಕೆ ಜವಾಬ್ದಾರಿ ವಹಿಸಲಾಗಿದೆ.
- ರಾಸಾಯನಿಕ ಹೊಂದಿರುವ ಪಟಾಕಿಗಳ ಬಳಕೆಯಿಂದ ವಾತಾವರಣದಲ್ಲಿ ರಾಸಾಯನಿಕ ಬಿಡುಗಡೆಯಾಗಿ ವಾಯು ಮಾಲಿನ್ಯ ವಾಗುತ್ತದೆ. ಪಟಾಕಿಗಳನ್ನು ಅಸುರಕ್ಷಿತ ಸ್ಥಳಗಳಲ್ಲಿ ಸಂಗ್ರಹಿಸಿ, ಅವುಗಳು ಸ್ಫೋಟಗೊಂಡು ಅನೇಕ ಜನರ ಪ್ರಾಣಹಾನಿ/ ಆರೋಗ್ಯಕ್ಕೆ ತೊಂದರೆಯಾಗಿದೆ. ಹಬ್ಬದ ಸಮಯದ ವಾಯು ಮಾದರಿಗಳಲ್ಲಿ ವಾಯು ಮಾಲಿನ್ಯ ವಿಪರೀತವಾಗಿರುವುದು ಕಂಡುಬಂದಿದೆ. ಇದನ್ನೆಲ್ಲ ಗಮನಿಸಿ ಸುಪ್ರೀಂ ಕೋರ್ಟ್ ಮಾಲಿನ್ಯ ತಡೆಗಟ್ಟಲು ತೀರ್ಪು ನೀಡಿರುತ್ತದೆ. ಅದರಂತೆ, ಸರ್ಕಾರವೂ ಮಾರ್ಗಸೂಚಿಗಳನ್ನು ಹೊರಡಿಸಿದ್ದು, ಅವುಗಳನ್ನು ಪರಿಣಾಮ ಕಾರಿಯಾಗಿ ವಿವಿಧ ಇಲಾಖೆಗಳು, ಪ್ರಾಧಿಕಾರಗಳು ಜಾರಿಗೆ ತರಬೇಕು ಎಂದು ಸುತ್ತೋಲೆಯಲ್ಲಿ ವಿವರಿಸಲಾಗಿದೆ.
- ‘ಆಯುಷ್ಮಾನ್’ಗೆ ಎಪಿಎಲ್ ಕುಟುಂಬ ನಿರಾಸಕ್ತಿ
ಸಂದರ್ಭ: ಸರ್ಕಾರಿ ಆಸ್ಪತ್ರೆಗಳಿಂದ ಶಿಫಾರಸು, ಚಿಕಿತ್ಸಾ ವೆಚ್ಚದಲ್ಲಿ ಶೇ 30 ರಷ್ಟು ಮಾತ್ರ ಹಣ ಪಾವತಿ ಸೇರಿ ವಿವಿಧ ಕಾರಣಗಳಿಂದ ರಾಜ್ಯದಲ್ಲಿ ‘ಆಯುಷ್ಮಾನ್ ಭಾರತ್–ಆರೋಗ್ಯ ಕರ್ನಾಟಕ’ (ಎಬಿ–ಎಆರ್ಕೆ) ಯೋಜನೆಯಡಿ ಚಿಕಿತ್ಸೆ ಪಡೆಯಲು ಎಪಿಎಲ್ ಕುಟುಂಬದ ಸದಸ್ಯರು ನಿರಾಸಕ್ತಿ ತೋರಿದ್ದಾರೆ. ಈವರೆಗೆ ಯೋಜನೆಯಡಿ ಚಿಕಿತ್ಸೆ ಪಡೆದವರಲ್ಲಿ ಶೇ 4ರಷ್ಟು ಮಂದಿ ಮಾತ್ರ ಎಪಿಎಲ್ ಕುಟುಂಬದ ಫಲಾನುಭವಿಗಳಾಗಿದ್ದಾರೆ.
- ಯೋಜನೆಯಡಿ ಚಿಕಿತ್ಸೆಗೆ ಇರುವ ತೊಡಕುಗಳೇ ನಿರಾಸಕ್ತಿಗೆ ಕಾರಣವಾಗಿವೆ. ಎಪಿಎಲ್ ಕುಟುಂಬದ ಸದಸ್ಯರಿಗೆ ಚಿಕಿತ್ಸಾ ವೆಚ್ಚದಲ್ಲಿ ಶೇ 30ರಷ್ಟು ಹಣವನ್ನು ಮಾತ್ರ ಪಾವತಿಸಲಾಗುತ್ತಿದೆ. ಇದರ ಪ್ರಯೋಜನ ಪಡೆಯಬೇಕಾದರೆ ಫಲಾನುಭವಿಗಳು ಮೊದಲು ಸರ್ಕಾರಿ ಆಸ್ಪತ್ರೆಗೆ ದಾಖಲಾಗಬೇಕು. ಅಲ್ಲಿ ಚಿಕಿತ್ಸೆ ಲಭ್ಯವಿಲ್ಲದಿದ್ದಲ್ಲಿ ಬೇರೆ ಆಸ್ಪತ್ರೆಗೆ ಶಿಫಾರಸು ಆಧಾರದಲ್ಲಿ ತೆರಳಿ ಚಿಕಿತ್ಸೆ ಪಡೆದುಕೊಳ್ಳಬೇಕು. ಇದರಿಂದ ಚಿಕಿತ್ಸೆ ವಿಳಂಬವಾಗುವ ಜತೆಗೆ ರೋಗಿಯ ಸ್ಥಿತಿ ಮತ್ತಷ್ಟು ಹದಗೆಡಲಿದೆ. ಆದ್ದರಿಂದ ಯೋಜನೆಯಡಿ ದೊರೆಯುತ್ತಿದ್ದ ಅಲ್ಪ ನೆರವಿಗೆ ಎಪಿಎಲ್ ಕುಟುಂಬಸ್ಥರು ಆಸಕ್ತಿ ತೋರುತ್ತಿಲ್ಲ.
- ವೆಚ್ಚ ₹10 ಸಾವಿರ ಕೋಟಿ: ಎಪಿಎಲ್ ಬಳಕೆ ₹120 ಕೋಟಿ
ಸಂದರ್ಭ:‘ಆಯುಷ್ಮಾನ್ ಭಾರತ್–ಆರೋಗ್ಯ ಕರ್ನಾಟಕ’ ಯೋಜನೆಯನ್ನು ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ ನಿರ್ವಹಣೆ ಮಾಡುತ್ತಿದ್ದು, 1,650 ಚಿಕಿತ್ಸಾ ಪ್ಯಾಕೇಜ್ಗಳು ಒಳಗೊಂಡಿವೆ. ಯೋಜನೆಯಡಿ ಈವರೆಗೆ ಚಿಕಿತ್ಸೆಗೆ ಒಟ್ಟು ₹ 10,885 ಕೋಟಿ ವೆಚ್ಚ ಮಾಡಲಾಗಿದೆ. ಈ ಚಿಕಿತ್ಸಾ ಮೊತ್ತದಲ್ಲಿ ₹ 10,764 ಕೋಟಿಯನ್ನು ಬಿಪಿಎಲ್ ಕುಟುಂಬದ ಸದಸ್ಯರ ಚಿಕಿತ್ಸೆಗೆ ಬಳಿಸಿದರೆ, ₹ 120 ಕೋಟಿ ಮಾತ್ರ ಎಪಿಎಲ್ ಕುಟುಂಬದ ಸದಸ್ಯರಿಗೆ ಚಿಕಿತ್ಸೆ ಸಂಬಂಧಿಸಿದಂತೆ ಟ್ರಸ್ಟ್ ಭರಿಸಿದೆ.
- ಬೆನ್ನುಹುರಿ ವಿರೂಪಕ್ಕೆ ಸಂಬಂಧಿಸಿದ ಚಿಕಿತ್ಸೆ, ಗಿಲ್ಲೈನ್-ಬರ್ರೆ ಸಿಂಡ್ರೋಮ್ (ಜಿಬಿಎಸ್) ಕಾಯಿಲೆಗೆ ನೀಡುವ ‘ಇಂಟ್ರಾವೀನಸ್ ಇಮ್ಯುನೋಗ್ಲೋಬಿನ್’ (ಐವಿಐಜಿ) ಥೆರಪಿಯಂತಹ ಚಿಕಿತ್ಸೆಗಳನ್ನು ಯೋಜನೆಯಡಿ ಇತ್ತೀಚೆಗೆ ಸೇರ್ಪಡೆ ಮಾಡಲಾಗಿದೆ. ಯೋಜನೆಯಡಿ ಸರ್ಕಾರಿ ಆಸ್ಪತ್ರೆಗಳಿಗೂ ಚಿಕಿತ್ಸೆಗೆ ಅನುಸಾರ ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ ಹಣ ಬಿಡುಗಡೆ ಮಾಡುತ್ತಿದೆ. ಈ ಹಣವನ್ನು ಆಸ್ಪತ್ರೆಗಳ ಅಭಿವೃದ್ಧಿ ಹಾಗೂ ವೈದ್ಯರು, ವೈದ್ಯಕೀಯ ಸಿಬ್ಬಂದಿಗೆ ಪ್ರೋತ್ಸಾಹ ಧನ ಒದಗಿಸಲು ಬಳಸಿಕೊಳ್ಳಲಾಗುತ್ತಿದೆ.
- ಈವರೆಗೆ ಚಿಕಿತ್ಸೆ ಒದಗಿಸಲಾದ 1.30 ಕೋಟಿ ಪ್ರಕರಣಗಳಲ್ಲಿ 1.25 ಕೋಟಿ ಪ್ರಕರಣಗಳು ಬಿಪಿಎಲ್ ಕುಟುಂಬದ ಸದಸ್ಯರಾದರೆ, 4.94 ಲಕ್ಷ ಪ್ರಕರಣ ಗಳಲ್ಲಿ ಮಾತ್ರ ಚಿಕಿತ್ಸೆ ಪಡೆದವರು ಎಪಿಎಲ್ ಕುಟುಂಬದವರಾಗಿದ್ದಾರೆ.
- ‘ಆಯುಷ್ಮಾನ್ ಭಾರತ್–ಆರೋಗ್ಯ ಕರ್ನಾಟಕ’ ಯೋಜನೆ 2018ರಲ್ಲಿ ಆರಂಭವಾಗಿದೆ. ಯೋಜನೆಯಡಿ ಬಿಪಿಎಲ್ ಕುಟುಂಬದವರಿಗೆ ವರ್ಷಕ್ಕೆ ₹5 ಲಕ್ಷದವರೆಗೆ ಆರೋಗ್ಯ ವಿಮೆಗೆ ಅವಕಾಶವಿದೆ. ರಾಜ್ಯದಲ್ಲಿ ಒಂದು ಕೋಟಿಗೂ ಅಧಿಕ ಕುಟುಂಬಗಳು ಬಿಪಿಎಲ್ ಕಾರ್ಡ್ ಹೊಂದಿದ್ದು, ಅವು ‘ಆಯುಷ್ಮಾನ್ ಭಾರತ್’ ಯೋಜನೆ ಅಡಿ ಬರಲಿವೆ. 20 ಲಕ್ಷಕ್ಕೂ ಅಧಿಕ ಎಪಿಎಲ್ ಕುಟುಂಬಗಳನ್ನು ‘ಆರೋಗ್ಯ ಕರ್ನಾಟಕ’ ಯೋಜನೆಯಡಿ ಸೇರ್ಪಡೆ ಮಾಡಲಾಗಿದೆ. ಎಪಿಎಲ್ ಕುಟುಂಬದ ಸದಸ್ಯರಿಗೆ ಗರಿಷ್ಠ ₹1.50 ಲಕ್ಷ ಚಿಕಿತ್ಸಾ ವೆಚ್ಚ ನಿಗದಿ ಮಾಡಿದ್ದು, ಶೇ 30ರಷ್ಟು ಹಣವನ್ನು ಪಾವತಿಸಲಾಗುತ್ತದೆ.
- ಶಿಫಾರಸು ಅಡ್ಡಿ: ಯೋಜನೆಯಡಿ 171 ತುರ್ತು ಚಿಕಿತ್ಸೆಗಳನ್ನು ಸೇರ್ಪಡೆ ಮಾಡಲಾಗಿದೆ. ರಸ್ತೆ ಅಪಘಾತ ಸೇರಿ ವಿವಿಧ ತುರ್ತು ಸಂದರ್ಭದಲ್ಲಿ ಮಾತ್ರ ನೋಂದಾಯಿತ ಖಾಸಗಿ ಆಸ್ಪತ್ರೆಗೂ ನೇರವಾಗಿ ದಾಖಲಾಗಬಹುದಾಗಿದೆ. ಉಳಿದ ಪ್ರಕರಣಗಳಲ್ಲಿ ಸರ್ಕಾರಿ ಆಸ್ಪತ್ರೆಗಳ ಶಿಫಾರಸು ಅಗತ್ಯ. ಅದೇ ಸಹಕಾರ ಇಲಾಖೆ ಅನುಷ್ಠಾನ ಮಾಡಿರುವ ಯಶಸ್ವಿನಿ ಯೋಜನೆಯಲ್ಲಿ ನೋಂದಾಯಿತ ಸದಸ್ಯರು ನೇರವಾಗಿ ಸರ್ಕಾರಿ ಅಥವಾ ಖಾಸಗಿ ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆದುಕೊಳ್ಳಬಹುದಾಗಿದೆ. ಈ ಕಾರಣದಿಂದ ಎಪಿಎಲ್ ಕುಟುಂಬದ ಸದಸ್ಯರು ‘ಆಯುಷ್ಮಾನ್ ಭಾರತ್-ಆರೋಗ್ಯ ಕರ್ನಾಟಕ’ ಯೋಜನೆಯಡಿ ಚಿಕಿತ್ಸೆಗೆ ಅಷ್ಟಾಗಿ ಆಸಕ್ತಿ ತೋರುತ್ತಿಲ್ಲ.
- ‘ಯೋಜನೆ ಬಗ್ಗೆ ಜನರಿಗೆ ಜಾಗೃತಿ ಮೂಡಿಸಲಾಗುತ್ತಿದೆ. ಉಚಿತವಾಗಿ ನೀಡುವ ಕಾರ್ಡ್ ಹೊಂದಿರದಿದ್ದರೂ ಪಡಿತರ ಚೀಟಿ ಇದ್ದಲ್ಲಿ ಯೋಜನೆಯಡಿ ಚಿಕಿತ್ಸೆ ನೀಡಲಾಗುತ್ತಿದೆ’ ಎಂದು ರಾಜ್ಯದಲ್ಲಿ ಯೋಜನೆ ಅನುಷ್ಠಾನ ಮಾಡುತ್ತಿರುವ ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ನ ಅಧಿಕಾರಿಯೊಬ್ಬರು ತಿಳಿಸಿದರು.
- ಮಾರಿಯಾಗೆ ನೊಬೆಲ್ ಶಾಂತಿ ಪುರಸ್ಕಾರ
ಸಂದರ್ಭ: ಓಸ್ಲೊ: ವೆನೆಜುವೆಲಾದ ವಿರೋಧಪಕ್ಷದ ನಾಯಕಿ ಮತ್ತು ಪ್ರಜಾಪ್ರಭುತ್ವ ಪರ ಹೋರಾಟಗಾರ್ತಿ ಮಾರಿಯಾ ಕೊರಿನಾ ಮಚಾದೊ ಅವರಿಗೆ ಪ್ರಸಕ್ತ ಸಾಲಿನ ನೊಬೆಲ್ ಶಾಂತಿ ಪುರಸ್ಕಾರ ಒಲಿದಿದೆ.

- ‘ವೆನೆಜುವೆಲಾದ ಜನರ ಪ್ರಜಾ ಸತ್ತಾತ್ಮಕ ಹಕ್ಕುಗಳನ್ನು ಪ್ರಚುರ ಪಡಿಸಲು ಮತ್ತು ಸರ್ವಾಧಿಕಾರದಿಂದ ಪ್ರಜಾಪ್ರಭುತ್ವದೆಡೆಗೆ ಶಾಂತಿಯುತವಾಗಿ ದೇಶವನ್ನು ಕೊಂಡೊಯ್ಯಲು ನಡೆಸಿದ ಹೋರಾಟಗಳಿಗಾಗಿ ಮಾರಿಯಾ ಅವರಿಗೆ ನೊಬೆಲ್ ಶಾಂತಿ ಪುರಸ್ಕಾರ ನೀಡಲಾಗುತ್ತಿದೆ’ ಎಂದು ನಾರ್ವೆಯ ನೊಬೆಲ್ ಸಮಿತಿಯ ಅಧ್ಯಕ್ಷ ಜಾರ್ಗೆನ್ ವಾಟ್ನೆ ಫ್ರಿಡ್ನೆಸ್ ಅವರು ಹೇಳಿದ್ದಾರೆ.
- ‘ನಿರಂಕುಶ ಆಡಳಿತದಿಂದಾಗಿ ಮಾನವೀಯತೆಯ ಅಧಃಪತನ ಮತ್ತು ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿರುವ ವೆನೆಜುವೆಲಾದಲ್ಲಿ ಸಮರ್ಥ ವಿರೋಧ ಪಕ್ಷವಾಗಿ ಮಾರಿಯಾ ಕಾರ್ಯನಿರ್ವಹಿ ಸಿದ್ದಾರೆ. ಜೀವ ಬೆದರಿಕೆಗಳು ಇದ್ದರೂ ದೇಶಕ್ಕಾಗಿ ದೃಢವಾಗಿ ನಿಂತಿದ್ದಾರೆ. ದೌರ್ಜನ್ಯದ ವಿರುದ್ಧ ನಾಗರಿಕರು ತೋರುವ ಧೈರ್ಯಕ್ಕೆ ಅವರು ಅದ್ಭುತ ಉದಾಹರಣೆಯಾಗಿದ್ದಾರೆ’ ಎಂದು ಫ್ರಿಡ್ನೆಸ್ ಹೇಳಿದ್ದಾರೆ.

- ಪ್ರಶಸ್ತಿಯು ಚಿನ್ನದ ಪದಕ, ಪ್ರಶಸ್ತಿಪತ್ರ ಹಾಗೂ 1.2 ಮಿಲಿಯನ್ ಡಾಲರ್ (ಅಂದಾಜು ₹10 ಕೋಟಿ) ಒಳಗೊಂಡಿದ್ದು, ಓಸ್ಲೊದಲ್ಲಿ ಡಿಸೆಂಬರ್ 10ರಂದು ಪ್ರದಾನ ಮಾಡಲಾಗುತ್ತದೆ.
- ತಮಗೆ ನೊಬೆಲ್ ಪ್ರಶಸ್ತಿ ಲಭಿಸಿದ್ದಕ್ಕೆ ಪ್ರತಿಕ್ರಿಯಿಸಿರುವ ಅವರು, ‘ನಾನು ಇದಕ್ಕೆ ಅರ್ಹಳಲ್ಲ. ನಮ್ಮ ದೇಶದ ಜನರಿಗೆ ಸಂದ ಗೌರವವಿದು’ ಎಂದಿದ್ದಾರೆ.
- ಕಳೆದ ಒಂದು ವರ್ಷದಿಂದ ಮಾರಿಯಾ ಅವರು ಅಜ್ಞಾತವಾಸ ದಲ್ಲಿದ್ದರು. ‘ಪ್ರಜಾಪ್ರಭುತ್ವ ಮತ್ತು ಪ್ರಜಾ ಪ್ರಭುತ್ವಕ್ಕಾಗಿ ಒಬ್ಬ ಮಹಿಳೆ ಹಾಗೂ ದೇಶದ ಜನರು ನಡೆಸುತ್ತಿರುವ ನಿರಂತರ ಹೋರಾಟ ಗುರುತಿಸಿ ನೀಡಿರುವ ಪ್ರಶಸ್ತಿ ಇದು’ ಎಂದು ವಿರೋಧ ಪಕ್ಷದ ನಾಯಕ ಎಡ್ಮಂಡೊ ಗೊನ್ಜಾಲೇಜ್ ಉರುಟಿಯಾ ಹೇಳಿದ್ದಾರೆ.
- ಕಳೆದ ವರ್ಷ ಮಾರಿಯಾ ಅವರು ಐರೋಪ್ಯ ಒಕ್ಕೂಟದ ಮಾನವ ಹಕ್ಕುಗಳ ಸಂಘಟನೆ ನೀಡುವ ‘ಸಖರೋವ್ ಪ್ರಶಸ್ತಿ’ಗೆ ಭಾಜನರಾಗಿ ದ್ದಾರೆ. ಕೌನ್ಸಿಲ್ ಆಫ್ ಯುರೋಪ್ ನೀಡುವ ‘ವಕ್ಲಾವ್ ಹ್ಯಾವೆಲ್’ ಪ್ರಶಸ್ತಿಯೂ ಅವರಿಗೆ ಸಂದಿದೆ.
- ವನ್ಯಜೀವಿ ಸಂರಕ್ಷಣಾ ಕಾಯ್ದೆಗೆ ತಿದ್ದುಪಡಿ: ಪಿಣರಾಯಿ
ಸಂದರ್ಭ: ‘ಕೇಂದ್ರದ ವನ್ಯಜೀವಿ ಸಂರಕ್ಷಣಾ ಕಾಯ್ದೆ–1972ಕ್ಕೆ ತಿದ್ದುಪಡಿ ತರುವ ಮಸೂದೆಯನ್ನು ಅಂಗೀಕರಿಸಿದ ಮೊದಲ ರಾಜ್ಯ ಕೇರಳ’ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೇಳಿದ್ದಾರೆ.
- ರಾಜ್ಯದಲ್ಲಿ ಹೆಚ್ಚುತ್ತಿರುವ ಮಾನವ- ವನ್ಯಮೃಗ ಸಂಘರ್ಷವನ್ನು ಕಡಿಮೆ ಮಾಡುವ ಉದ್ದೇಶವನ್ನು ಹೊಂದಿರುವ ‘ಕೇರಳ ವನ್ಯಜೀವಿ ಸಂರಕ್ಷಣಾ ತಿದ್ದುಪಡಿ ಮಸೂದೆ’ಯನ್ನು ಕೇರಳ ವಿಧಾನಸಭೆಯು ಅಂಗೀಕರಿಸಿದೆ.
- ‘ಈ ಮಸೂದೆಯು ಹೆಚ್ಚುತ್ತಿರುವ ಮಾನವ-ಪ್ರಾಣಿ ಸಂಘರ್ಷಕ್ಕೆ ಪರಿಹಾರ ಕಂಡುಕೊಳ್ಳುವ ಮತ್ತು ಅರಣ್ಯದ ಅಂಚಿನಲ್ಲಿ ವಾಸಿಸುತ್ತಿರುವ ಜನರಿಗೆ ನ್ಯಾಯವನ್ನು ಖಾತರಿಪಡಿ ಸುವ ನಿಟ್ಟಿನಲ್ಲಿ ಇಟ್ಟಂತಹ ಪ್ರಮುಖ ಹೆಜ್ಜೆಯಾಗಿದೆ’ ಎಂದು ಮುಖ್ಯಮಂತ್ರಿ ಅವರು ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿದ್ದಾರೆ.
- ‘ಈ ತಿದ್ದುಪಡಿಯು ಮಾನವ ಜೀವ ಮತ್ತು ವನ್ಯಜೀವಿ ಎರಡನ್ನೂ ಸಂರಕ್ಷಿಸಲು ಕೇರಳ ಸರ್ಕಾರ ಹೊಂದಿರುವ ಬದ್ಧತೆಯನ್ನು ಪುನರು ಚ್ಚರಿಸುತ್ತದೆ. ಜನರು ಮತ್ತು ಪ್ರಕೃತಿಯ ನಡುವೆ ಸಾಮರಸ್ಯವನ್ನು ಬೆಳೆಸುತ್ತದೆ’ ಎಂದು ತಿಳಿಸಿದ್ದಾರೆ.
- ‘ವನ್ಯಜೀವಿ ಸಂರಕ್ಷಣಾ ಕಾಯ್ದೆ– 1972ಕ್ಕೆ ತಿದ್ದುಪಡಿ ತರುವಂತೆ ಕೇಂದ್ರ ಸರ್ಕಾರಕ್ಕೆ ಹಲವು ಬಾರಿ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗದ ಕಾರಣ ಕಾಯ್ದೆಗೆ ನಮ್ಮದೇ ಆದ ತಿದ್ದುಪಡಿ ತರಲು ಮುಂದಾಗಿದ್ದೇವೆ’ ಎಂದು ಅರಣ್ಯ ಸಚಿವ ಎ.ಕೆ.ಶಶೀಂದ್ರನ್ ವಿಧಾನಸಭೆಗೆ ತಿಳಿಸಿದ್ದರು.
- ‘ಮಸೂದೆಯನ್ನು ರಾಜ್ಯಪಾಲ ರಿಗೆ ಕಳುಹಿಸಲಾಗುವುದು. ಇದು ಕೇಂದ್ರದ ಕಾಯ್ದೆ ಆಗಿರುವುದರಿಂದ ರಾಜ್ಯಪಾಲರು ಅದನ್ನು ರಾಷ್ಟ್ರಪತಿಗೆ ಕಳುಹಿಸುವರು’ ಎಂದು ಅಧಿಕೃತ ಮೂಲಗಳು ತಿಳಿಸಿವೆ.
- ಜಮ್ಮು–ಕಾಶ್ಮೀರಕ್ಕೆ ರಾಜ್ಯ ಸ್ಥಾನಮಾನ ಪ್ರತಿಕ್ರಿಯೆಗೆ 4 ವಾರಗಳ ಗಡುವು
ಸಂದರ್ಭ: ಜಮ್ಮು ಮತ್ತು ಕಾಶ್ಮೀರಕ್ಕೆ ರಾಜ್ಯದ ಸ್ಥಾನಮಾನ ನೀಡುವಂತೆ ಕೋರಿ ಸಲ್ಲಿಕೆಯಾಗಿರುವ ಅರ್ಜಿಗಳ ಕುರಿತು ಪ್ರತಿಕ್ರಿಯೆ ನೀಡಲು ಸುಪ್ರೀಂ ಕೋರ್ಟ್ ಕೇಂದ್ರ ಸರ್ಕಾರಕ್ಕೆ ನಾಲ್ಕು ವಾರಗಳ ಗಡುವು ನೀಡಿದೆ.
- ಜಮ್ಮು– ಕಾಶ್ಮೀರಕ್ಕೆ ಶೀಘ್ರದಲ್ಲಿ ರಾಜ್ಯದ ಸ್ಥಾನಮಾನ ನೀಡಲು ಸೂಚಿಸುವಂತೆ ಕೋರಿ ಶಿಕ್ಷಣ ತಜ್ಞ ಝಹೂರ್ ಅಹಮದ್ ಭಟ್ ಮತ್ತು ಸಾಮಾಜಿಕ ಕಾರ್ಯಕರ್ತ ಅಹಮದ್ ಮಲ್ಲಿಕ್ ಸಲ್ಲಿಸಿದ್ದ ಅರ್ಜಿ ಸೇರಿದಂತೆ ಈ ಕುರಿತಾದ ಹಲವು ಅರ್ಜಿಗಳನ್ನು ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ ಮತ್ತು ನ್ಯಾಯಮೂರ್ತಿ ಕೆ. ವಿನೋದ್ ಚಂದ್ರನ್ ಅವರ ಪೀಠವು ವಿಚಾರಣೆ ನಡೆಸುತ್ತಿದೆ.
- ‘ಇದೊಂದು ವಿಭಿನ್ನ ಸಮಸ್ಯೆ ಹಾಗಾಗಿ ಸಮಗ್ರ ಅವಲೋಕನ ಅತ್ಯಗತ್ಯವಾಗಿದೆ. ಈ ಬಗ್ಗೆ ಚರ್ಚೆ ನಡೆಸಲಾಗುತ್ತಿದೆ’ ಎಂದು ಸರ್ಕಾರದ ಪರ ಹಾಜರಿದ್ದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು ನ್ಯಾಯಾಲಯಕ್ಕೆ ತಿಳಿಸಿದರು.
- ಸಂವಿಧಾನದ 37ನೇ ವಿಧಿಯಡಿ ಜಮ್ಮು–ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನವನ್ನು ರದ್ದು ಗೊಳಿಸಿರುವ ಕೇಂದ್ರ ಸರ್ಕಾರದ ನಿರ್ಧಾರವನ್ನು ಸುಪ್ರೀಂ ಕೋರ್ಟ್ 2023ರ ಡಿ. 11ರಂದು ಎತ್ತಿ ಹಿಡಿದಿತ್ತು. ಆದರೆ, ಈ ಕೇಂದ್ರಾಡಳಿತ ಪ್ರದೇಶಗಳಲ್ಲಿ 2024ರ ಸೆಪ್ಟೆಂಬರ್ ಒಳಗಾಗಿ ವಿಧಾನಸಭಾ ಚುನಾವಣೆ ನಡೆಸಬೇಕು ಮತ್ತು ಶೀಘ್ರದಲ್ಲಿ ರಾಜ್ಯದ ಸ್ಥಾನಮಾನ ನೀಡಬೇಕು ಎಂದು ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಿತ್ತು.
- ಚಂದ್ರನೆಂಬ ಚೆನ್ನಿಗನ ನೋಡೋಣ ಬನ್ನಿ
ಸಂದರ್ಭ: ಹುಣ್ಣಿಮೆಯ ಬೆಳದಿಂಗಳಿನ ಬೆಳಕಿಗೆ ಸಾಟಿಯಿಲ್ಲ. ಅದರಲ್ಲೂ ಶರತ್ಕಾಲದ ಆಶ್ವಯುಜ ಆಕಾಶ ಭವ್ಯವಾಗಿರುತ್ತದೆ. ಬಿಳಿಯಾಗಿ ತೇಲುವ ತಿಳಿ ಮೋಡಗಳ ಮಧ್ಯೆ ಬೆಳ್ಳಂ ಬೆಳದಿಂಗಳ ಚಂದ್ರಮ ನೋಡಲು ಮತ್ತಷ್ಟು ಆಕರ್ಷಕ. ಈ ಸುಂದರ ಅನುಭವವನ್ನು ನಮಗೆ ದಕ್ಕಿಸಿಕೊಡುವ ಈ ವರ್ಷದ ‘ಸೂಪರ್ಮೂನ್’ ಸರದಿ ಈಗಾಗಲೇ ಪ್ರಾರಂಭವಾಗಿದೆ. ಇದೇ 7ರಂದು ‘ಸೂಪರ್’ ದರ್ಶನಕ್ಕೆ ಚಂದ್ರಮ ನಾಂದಿ ಹಾಡಿದ್ದಾನೆ. ಇನ್ನುಳಿದ ಸರದಿ ನವೆಂಬರ್ 5 ಹಾಗೂ ಡಿಸೆಂಬರ್ 4ರದು. ಅಂದಿನ ಹುಣ್ಣಿಮೆಗಳು ಸಹ ಸೂಪರ್ಮೂನ್ಗಳೇ ಆಗಿರುತ್ತವೆ.
- ಭೂಮಿ ಹಾಗೂ ಚಂದ್ರನ ನಡುವಿನ ಸರಾಸರಿ ದೂರ 3.84 ಲಕ್ಷ ಕಿ.ಮೀ. ಸೂಪರ್ಮೂನ್ ದಿನಗಳಲ್ಲಿ ಈ ದೂರ ಸುಮಾರು 3.61 ಲಕ್ಷ ಕಿ.ಮೀ. ಆಗುತ್ತದೆ. ಅಂದರೆ, ಚಂದ್ರನು ಅಂದು ಭೂಮಿಗೆ ಸುಮಾರು 23 ಸಾವಿರ ಕಿ.ಮೀ.ನಷ್ಟು ಸಮೀಪಕ್ಕೆ ಬರುತ್ತಾನೆ. ಹೀಗಾಗಿ, ಸುಮಾರು 18 ಅಂಶಗಳಷ್ಟು ದೊಡ್ಡದಾಗಿ ಕಾಣಿಸುತ್ತಾನೆ. ಸಹಜವಾಗಿಯೇ ಅಂದು ಬೆಳದಿಂಗಳೂ ಹೆಚ್ಚು.
- ಶರತ್ಕಾಲದ ಸೂಪರ್ಮೂನ್ನ ಈ ಬೆಳದಿಂಗಳನ್ನು ಖುದ್ದಾಗಿ ಅನುಭವಿಸಿಯೇ ತೀರಬೇಕು. ತೇಲುವ ಮಂಜುಗಡ್ಡೆಗಳಂತಹ ಬಿಳಿ, ಹಳದಿ ವರ್ತುಲದ ಹ್ಯಾಲೊ ಕೂಡಾ ಅಲ್ಲಲ್ಲಿ ಕಾಣಸಿಗಬಹುದು. ಪ್ರಕೃತಿಯ ಈ ವೈಭವವನ್ನು ಆರಾಧಿಸಿ, ಆಸ್ವಾದಿಸಿ.