ಪ್ರಚಲಿತ ವಿದ್ಯಮಾನಗಳು: 30 & 31ನೇ ಅಕ್ಟೋಬರ್ 2025
- ‘ಭಾರತದ ಜೊತೆ ವ್ಯಾಪಾರ ಒಪ್ಪಂದ’
ಸಂದರ್ಭ:ಅಮೆರಿಕವು ಭಾರತದ ಜೊತೆ ವಾಣಿಜ್ಯ ಒಪ್ಪಂದ ಮಾಡಿಕೊಳ್ಳಲಿದೆ ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. ಒಪ್ಪಂದದ ವಿಚಾರವಾಗಿ ಅಮೆರಿಕ ಮತ್ತು ಭಾರತದ ಅಧಿಕಾರಿಗಳ ನಡುವೆ ಮಾತುಕತೆ ನಡೆಯುತ್ತಿದೆ.
- ಏಷ್ಯಾ ಪೆಸಿಫಿಕ್ ಆರ್ಥಿಕ ಸಹಕಾರ – ಸಿಇಒ ಶೃಂಗದಲ್ಲಿ ಮಾತನಾಡಿದ ಟ್ರಂಪ್ ಅವರು ಭಾರತದ ಪ್ರಧಾನಿ ನರೇಂದ್ರ ಮೋದಿ ಅವರ ಬಗ್ಗೆ ತಮಗೆ ‘ಅಪಾರ ಗೌರವ ಹಾಗೂ ಪ್ರೀತಿ’ ಇರುವುದಾಗಿ ಹೇಳಿದ್ದಾರೆ. ಪ್ರಧಾನಿ ಮೋದಿ ಅವರ ಜೊತೆಗಿನ ತಮ್ಮ ಸ್ನೇಹ ಬಹಳ ದೊಡ್ಡದು ಎಂದೂ ಟ್ರಂಪ್ ಹೇಳಿಕೊಂಡಿದ್ದಾರೆ.ಆದರೆ ವಾಣಿಜ್ಯ ಒಪ್ಪಂದದ ಕುರಿತಾಗಿ ಅವರು ಹೆಚ್ಚಿನ ಮಾಹಿತಿ ನೀಡಲಿಲ್ಲ.
- ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರುಬಿಯೊ ಅವರನ್ನು ಕ್ವಾಲಾಲಂಪುರದಲ್ಲಿ ಭೇಟಿಯಾಗಿದ್ದ ಭಾರತದ ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್ ಅವರು, ವ್ಯಾಪಾರ ಒಪ್ಪಂದದ ಕುರಿತಾಗಿ ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ.
- ಆದರೆ, ರಷ್ಯಾದಿಂದ ಕಚ್ಚಾ ತೈಲ ಖರೀದಿಸುತ್ತಿರುವುದಕ್ಕಾಗಿ ಭಾರತದ ಮೇಲೆ ಹೆಚ್ಚುವರಿಯಾಗಿ ವಿಧಿಸಿರುವ ಶೇ 25ರಷ್ಟು ತೆರಿಗೆಯನ್ನು ರದ್ದುಪಡಿಸುವ ಬಗ್ಗೆ ಅಮೆರಿಕದಿಂದ ಭರವಸೆ ಸಿಕ್ಕಿರುವ ಸೂಚನೆ ಇಲ್ಲ. ಅಮೆರಿಕದ ಜೊತೆಗಿನ ವ್ಯಾಪಾರ ಒಪ್ಪಂದವು ಅಂತಿಮ ಹಂತಕ್ಕೆ ಬಹಳ ಹತ್ತಿರದಲ್ಲಿದೆ ಎಂದು ಭಾರತದ ಅಧಿಕಾರಿಯೊಬ್ಬರು ಕಳೆದ ವಾರ ಹೇಳಿದ್ದಾರೆ.
- ಶಿರಸಿಯಲ್ಲಿ ಹಿಮಾಲಯದ ಯಾಕ್
ಸಂದರ್ಭ: ಹಿಮಾಲಯದಂಥ ತಂಪಾದ, ಎತ್ತರದ ಪರ್ವತ ಪ್ರದೇಶಗಳಲ್ಲಿ ಕಾಣಸಿಗುವ ಚಮರಿಮೃಗಗಳನ್ನು (ಯಾಕ್) ಶಿರಸಿಯ ಅನಾಥ ಪ್ರಾಣಿಗಳ ಆರೈಕೆ ಕೇಂದ್ರವಾದ ಪೆಟ್ ಪ್ಲಾನೆಟ್ ಕೇಂದ್ರದಲ್ಲಿ ಪೋಷಿಸಲಾಗುತ್ತಿದೆ.
- ‘ಫೆಬ್ರುವರಿಯಲ್ಲಿ ಹಿಮಾಚಲ ಪ್ರದೇಶಕ್ಕೆ ತೆರಳಿದ್ದ ವೇಳೆ ಅಲ್ಲಿನ ಜನರಿಗೆ ಪೆಟ್ ಪ್ಲಾನೆಟ್ ಬಗ್ಗೆ ತಿಳಿಸಿದ್ದೆ. ಅಲ್ಲಿನ ನಿವಾಸಿಗಳು ಹಣದ ಬದಲು ಚಮರಿಮೃಗಗಳನ್ನು ಕೊಡುಗೆ ನೀಡು ತ್ತೇವೆ. ಅವುಗಳನ್ನು ನೋಡಲು ಪ್ರವಾಸಿಗರಿಗೂ ಖುಷಿಯಾಗುತ್ತದೆ ಎಂದು ಮೂರು ಚಮರಿಮೃಗಗಳನ್ನು ವಾಹನದಲ್ಲಿ ಕಳುಹಿಸಿದ್ದು, ಎಲ್ಲವೂ ಆರೋಗ್ಯವಾಗಿವೆ. ಇಲ್ಲಿನ ವಾತಾವರಣಕ್ಕೆ ಹೊಂದಿಕೊಂಡಿವೆ’ ಎಂದು ಪ್ಲಾನೆಟ್ನ ಪ್ರಮುಖ ರಾಜೇಂದ್ರ ಶಿರ್ಸಿಕರ ಮಾಹಿತಿ ಹಂಚಿಕೊಂಡರು.
- ‘14 ವರ್ಷ ಮತ್ತು 10 ತಿಂಗಳ ಹೆಣ್ಣು ಮತ್ತು 2 ವರ್ಷದ ಒಂದು ಗಂಡು ಚಮರಿ ಮೃಗವಿದೆ. ಹಿಮಾಚಲದ ವಾತಾ ವರಣದ ಅನುಭವಕ್ಕಾಗಿ ಶೆಡ್ ಫ್ಯಾನ್ ಅಳವಡಿಸ ಲಾಗಿದೆ. ಪಶ್ಚಿಮಘಟ್ಟದ ವಾತಾವರಣಕ್ಕೆ ಬಹುತೇಕ ಎಲ್ಲ ಪ್ರಬೇಧಗಳ ಪ್ರಾಣಿಗಳು ಹೊಂದಿಕೊಳ್ಳುತ್ತವೆ’ ಎಂದರು.
- ವಿಜಯಪುರದಲ್ಲಿ ಲಘು ಭೂಕಂಪನ
ಸಂದರ್ಭ: ನಗರದಲ್ಲಿ28th Oct 11.41, ರಾತ್ರಿ 12.38 ಮತ್ತು 29th Oct ಬೆಳಿಗ್ಗೆ 5.30ಕ್ಕೆ ಮೂರು ಬಾರಿ ಸರಣಿ ಲಘು ಭೂಕಂಪನದ ಅನುಭವವಾಗಿದೆ.
- ‘ಗುಡುಗಿದ ಶಬ್ದ ಕೇಳಿಬಂದಿದೆ. ಜೊತೆಗೆ ಭೂಮಿ ಕಂಪಿಸಿದ್ದು, ಭಯದಿಂದ ಜನರು ಮನೆಯಿಂದ ಹೊರಗೆ ಓಡಿಬಂದರು. ಆತಂಕದಲ್ಲೇ ರಾತ್ರಿ ಕಳೆದರು. ಸಿಸಿಟಿವಿ ಕ್ಯಾಮೆರಾಗಳಲ್ಲಿ ಈ ದೃಶ್ಯ ಸೆರೆಯಾಗಿದೆ.
- ‘ರಿಕ್ಟರ್ ಮಾಪಕದಲ್ಲಿ ಭೂಕಂಪನದ ತೀವ್ರತೆ ದಾಖಲಾಗಿಲ್ಲ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ನಿರ್ವಹಣಾ ಕೇಂದ್ರದ ವಿಜ್ಞಾನಿಗಳು ತಿಳಿಸಿದ್ದಾರೆ’ ಎಂದು ಜಿಲ್ಲಾಡಳಿತ ತಿಳಿಸಿದೆ.
- ‘ಕ್ವಾಂಟಮ್ ಸಿಟಿ: ಹೂಡಿಕೆಗೆ ಸ್ವಿಸ್ ಕಂಪನಿಗಳ ಆಸಕ್ತಿ’
ಸಂದರ್ಭ: ಬೆಂಗಳೂರಿನಲ್ಲಿ ಸ್ಥಾಪಿಸಲು ಉದ್ದೇಶಿಸಲಾಗಿರುವ ಕ್ವಾಂಟಮ್ ಸಿಟಿಯಲ್ಲಿ ಸಹಭಾಗಿತ್ವಕ್ಕೆ ಸ್ವಿಡ್ಜರ್ಲೆಂಡ್ನ ಕಂಪನಿಗಳೂ ಸೇರಿ ಜಾಗತಿಕ ಮಟ್ಟದ ಹಲವು ಕಂಪನಿಗಳು ಆಸಕ್ತಿ ತೋರಿವೆ ಎಂದು ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎನ್.ಎಸ್.ಬೋಸರಾಜು ಹೇಳಿದರು.
- ಸ್ವಿಡ್ಜರ್ಲೆಂಡ್ನಲ್ಲಿ ಈಚೆಗೆ ನಡೆದ ಸ್ವಿಸ್ನೆಕ್ಸ್ ಕ್ವಾಂಟಮ್ ಸಮಾವೇಶದಲ್ಲಿ ಭಾಗಿಯಾಗಿದ್ದರ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಅವರು ಮಾಹಿತಿ ನೀಡಿದರು. ‘ಕ್ವಾಂಟಮ್ ಕ್ಷೇತ್ರದಲ್ಲಿ ಹೂಡಿಕೆಗೆ ಇರುವ ಅವಕಾಶಗಳು ಹಾಗೂ ಈ ಕ್ಷೇತ್ರದ ಅಭಿವೃದ್ಧಿಗೆ ಕರ್ನಾಟಕದಲ್ಲಿ ಇರುವ ಅವಕಾಶಗಳ ಬಗ್ಗೆ ಸಮಾವೇಶದಲ್ಲಿ ಭಾಗಿಯಾಗಿದ್ದ ಕಂಪನಿಗಳಿಗೆ ವಿವರಿಸಲಾಗಿದೆ’ ಎಂದು ಹೇಳಿದರು.
- ‘ದೇಶದ ಮೊದಲ ಕ್ವಾಂಟಮ್ ಸಮಾವೇಶ ಬೆಂಗಳೂರಿನಲ್ಲಿ ನಡೆದಿತ್ತು ಮತ್ತು ಅದರಲ್ಲಿ ಘೋಷಿಸಿದ್ದಂತೆ ಕ್ವಾಂಟಮ್ ಸಿಟಿ ಸ್ಥಾಪನೆಗೆ ರಾಜ್ಯ ಸರ್ಕಾರವು ಈಗಾಗಲೇ ಜಮೀನು ಮಂಜೂರು ಮಾಡಿದೆ. ಜತೆಗೆ ಕ್ವಾಂಟಮ್ ತಂತ್ರಜ್ಞಾನದಲ್ಲಿ ಪರಿಣಿತರನ್ನು ರೂಪಿಸುವ ಉದ್ದೇಶದಿಂದ ಭಾರತೀಯ ವಿಜ್ಞಾನ ಸಂಸ್ಥೆಯ ಸಹಯೋಗದಲ್ಲಿ ಕೋರ್ಸ್ಗಳನ್ನು ಆರಂಭಿಸಲಾಗಿದೆ. ಈ ಅಂಶಗಳು ಕ್ವಾಂಟಮ್ ಕ್ಷೇತ್ರದ ಜಾಗತಿಕ ಮಟ್ಟದ ಕಂಪನಿಗಳನ್ನು ಆಕರ್ಷಿಸಿವೆ’ ಎಂದರು.
- ‘ಈ ಪ್ರವಾಸದ ವೇಳೆ ಕ್ವಾಂಟಮ್ ಬೇಸೆಲ್, ಸಿಇಆರ್ಎನ್, ಇಟಿಎಚ್ ಝ್ಯೂರಿಚ್ ಆ್ಯಂಡ್ ಝ್ಯೂರಿಚ್ ಇನ್ಸ್ಟ್ರುಮೆಂಟ್ಸ್ ಸಂಸ್ಥೆಗಳಿಗೆ ಭೇಟಿ ನೀಡಲಾಗಿತ್ತು. ಬೆಂಗಳೂರಿನ ಕ್ವಾಂಟಮ್ ಸಿಟಿಯಲ್ಲಿ ಹೂಡಿಕೆ ಮಾಡುವಂತೆ ಈ ಕಂಪನಿಗಳಿಗೆ ಆಹ್ವಾನ ನೀಡಲಾಗಿದೆ. ಕಂಪನಿಗಳ ಪ್ರತಿನಿಧಿಗಳು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
- ‘ಜಿಡಿಪಿ ಪ್ರಗತಿ ಶೇ 7ರಷ್ಟು ನಿರೀಕ್ಷೆ’
ಸಂದರ್ಭ: ‘ಪ್ರಸಕ್ತ ಆರ್ಥಿಕ ವರ್ಷದಲ್ಲಿ ದೇಶದ ಜಿಡಿಪಿ ಬೆಳವಣಿಗೆ ಶೇ 7ಕ್ಕೆ ತಲುಪುವ ಸಾಧ್ಯತೆ ಇದೆ’ ಎಂದು ಕೇಂದ್ರ ಸರ್ಕಾರದ ಮುಖ್ಯ ಆರ್ಥಿಕ ಸಲಹೆಗಾರ (ಸಿಇಎ) ವಿ. ಅನಂತ ನಾಗೇಶ್ವರನ್ ಹೇಳಿದ್ದಾರೆ.
- ಮೂರು ಜಾಗತಿಕ ರೇಟಿಂಗ್ ಸಂಸ್ಥೆಗಳು ಇತ್ತೀಚೆಗೆ ದೇಶದ ರೇಟಿಂಗ್ ಹೆಚ್ಚಿಸಿವೆ. ದೇಶವು ಇದೇ ಪಥದಲ್ಲಿ ಮುಂದುವರಿದರೆ ಶೀಘ್ರ ‘ಎ’ ರೇಟಿಂಗ್ ವರ್ಗಕ್ಕೆ ಸೇರ್ಪಡೆ ಆಗಬಹುದು ಎಂದು ನಡೆದ ಕಾರ್ಯಕ್ರಮದಲ್ಲಿ ಹೇಳಿದ್ದಾರೆ.
- ಕೇಂದ್ರ ಸರ್ಕಾರ ಮತ್ತು ಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಐ) ತೆಗೆದುಕೊಂಡ ಕ್ರಮಗಳು ದೇಶದ ಆರ್ಥಿಕತೆಯನ್ನು ‘ಆರಾಮದಾಯಕ ಸ್ಥಾನದಲ್ಲಿ’ ಇರಿಸುತ್ತವೆ. ಆದಾಯ ತೆರಿಗೆ ವಿನಾಯಿತಿ ಮತ್ತು ಜಿಎಸ್ಟಿ ಇಳಿಕೆಯಂತಹ ಆರ್ಥಿಕ ಕ್ರಮಗಳು ದೇಶದ ಆರ್ಥಿಕ ಪ್ರಗತಿಯನ್ನು ಹೆಚ್ಚಿಸಲಿವೆ ಎಂದು ಹೇಳಿದ್ದಾರೆ.
- ಪ್ರಸಕ್ತ ಆರ್ಥಿಕ ವರ್ಷದಲ್ಲಿ ದೇಶದ ಜಿಡಿಪಿ ಬೆಳವಣಿಗೆ ಶೇ 6.3ಕ್ಕೆ ಇಳಿಕೆ ಆಗಬಹುದು ಎಂದು ಫೆಬ್ರುವರಿಯಲ್ಲಿ ಅನಂತ ನಾಗೇಶ್ವರನ್ ಹೇಳಿದ್ದರು. ಅಮೆರಿಕದ ಸುಂಕದಿಂದ ಜಿಡಿಪಿ ಶೇ 6ಕ್ಕೆ ಇಳಿಯುವ ನಿರೀಕ್ಷೆ ಇದೆ ಎಂದು ಹೇಳಿದ್ದರು.
- ಇಂದಿನಿಂದ ಸ್ಟಾರ್ಲಿಂಕ್ ಪರೀಕ್ಷಾರ್ಥ ಪ್ರಯೋಗ
ಸಂದರ್ಭ: ಉದ್ಯಮಿ ಇಲಾನ್ ಮಸ್ಕ್ ಒಡೆತನದ ಸ್ಟಾರ್ಲಿಂಕ್, ದೇಶದಲ್ಲಿ ಉಪಗ್ರಹ ಆಧಾರಿತ ಬ್ರಾಡ್ಬ್ಯಾಂಡ್ ಸೇವೆ ಆರಂಭಿಸುವುದಕ್ಕೆ ಸಂಬಂಧಿಸಿದ ಪರೀಕ್ಷಾರ್ಥ ಪ್ರಯೋಗವನ್ನು ಅಕ್ಟೋಬರ್ 30 ಮತ್ತು 31ರಂದು ಮುಂಬೈನಲ್ಲಿ ನಡೆಸಲಿದೆ ಎಂದು ಮೂಲಗಳು ತಿಳಿಸಿವೆ.
- ಕಾನೂನು ಜಾರಿ ಪ್ರಾಧಿಕಾರಗಳ ಸಮಕ್ಷಮದಲ್ಲಿ ಈ ಪರೀಕ್ಷಾರ್ಥ ಪ್ರಯೋಗ ನಡೆಸಲಿದೆ. ಇದು ಸ್ಟಾರ್ಲಿಂಕ್ಗೆ ಹಂಚಿಕೆ ಮಾಡಿರುವ ತಾತ್ಕಾಲಿಕ ತರಂಗಾತರವನ್ನು ಆಧರಿಸಿದೆ ಎಂದು ತಿಳಿಸಿವೆ.
- ಸ್ಟಾರ್ಲಿಂಕ್ ಭಾರತದಲ್ಲಿ ಉಪಗ್ರಹ ಆಧಾರಿತ ಇಂಟರ್ನೆಟ್ ಸೇವೆ ಆರಂಭಿಸಲು ಈ ಪರೀಕ್ಷಾರ್ಥ ಪ್ರಯೋಗ ಕಡ್ಡಾಯವಾಗಿದೆ. ಸ್ಟಾರ್ಲಿಂಕ್ ತನ್ನ ವಾಣಿಜ್ಯ ಸೇವೆ ಆರಂಭಿಸುವುದಕ್ಕೂ ಮುನ್ನ ಅನುಮತಿ ಪಡೆಯವುದು ಅತ್ಯವಶ್ಯಕವಾಗಿದೆ.
- ಸಕ್ಕರೆ ರಫ್ತಿಗೆ ಅನುಮತಿ ಸಾಧ್ಯತೆ
ಸಂದರ್ಭ: ದಾಸ್ತಾನು ಹೆಚ್ಚಿರುವ ಕಾರಣ ರಫ್ತು ಅನುಮತಿಗೆ ಪರಿಶೀಲನೆ: ಕೇಂದ್ರ ಸರ್ಕಾರವು 2025–26ನೇ ಮಾರುಕಟ್ಟೆ ವರ್ಷದಲ್ಲಿ ಸಕ್ಕರೆ ರಫ್ತಿಗೆ ಅವಕಾಶ ನೀಡುವ ಬಗ್ಗೆ ಪರಿಶೀಲನೆ ನಡೆಸಿದೆ. ಕಾರ್ಖಾನೆಗಳು ಎಥೆನಾಲ್ ಉತ್ಪಾದನೆಗೆ ಬಳಸಿದ ಸಕ್ಕರೆಯ ಪ್ರಮಾಣವು ನಿರೀಕ್ಷೆಗಿಂತ ಕಡಿಮೆ ಆಗಿದ್ದ ಕಾರಣದಿಂದಾಗಿ, ಸಕ್ಕರೆ ದಾಸ್ತಾನು ಹೆಚ್ಚಿದೆ. ಹೀಗಾಗಿ ರಫ್ತಿಗೆ ಅವಕಾಶ ಸಿಗುವ ಸಾಧ್ಯತೆ ಇದೆ.
- 2024–25ರಲ್ಲಿ ದೇಶದ ಸಕ್ಕರೆ ಕಾರ್ಖಾನೆಗಳು 34 ಲಕ್ಷ ಟನ್ ಸಕ್ಕರೆಯನ್ನು ಮಾತ್ರ ಎಥೆನಾಲ್ ಉತ್ಪಾದನೆಗೆ ಬಳಸಿಕೊಂಡವು. ಆ ವರ್ಷದಲ್ಲಿ ಕಾರ್ಖಾನೆಗಳು 45 ಲಕ್ಷ ಟನ್ ಸಕ್ಕರೆಯನ್ನು ಎಥೆನಾಲ್ ಉತ್ಪಾದನೆಗೆ ಬಳಸುವ ನಿರೀಕ್ಷೆ ಇತ್ತು.
- ಎಥೆನಾಲ್ಗೆ ಸಕ್ಕರೆ ಬಳಕೆ ಕಡಿಮೆಯಾದ ಪರಿಣಾಮವಾಗಿ 2025–26ನೇ ಮಾರುಕಟ್ಟೆ ವರ್ಷದ ಆರಂಭದಲ್ಲಿ ಸಕ್ಕರೆ ದಾಸ್ತಾನು ಹೆಚ್ಚಿನ ಮಟ್ಟದಲ್ಲಿದೆ ಎಂದು ಅವರು ತಿಳಿಸಿದ್ದಾರೆ. ಪ್ರತಿ ವರ್ಷದ ಅಕ್ಟೋಬರ್ನಿಂದ ಸೆಪ್ಟೆಂಬರ್ವರೆಗಿನ ಅವಧಿಯನ್ನು ಮಾರುಕಟ್ಟೆ ವರ್ಷ ಎಂದು ಪರಿಗಣಿಸಲಾಗುತ್ತದೆ.
- 2025–26ರಲ್ಲಿ ಸಕ್ಕರೆ ಉತ್ಪಾದನೆಯು 3.4 ಕೋಟಿ ಟನ್ ಆಗುವ ನಿರೀಕ್ಷೆ ಇದೆ. ದೇಶಿ ಮಾರುಕಟ್ಟೆ ಯಲ್ಲಿ ವಾರ್ಷಿಕ ಬೇಡಿಕೆಯು 2.85 ಕೋಟಿ ಟನ್ ಇರಲಿದೆ.
- ಸಕ್ಕರೆ ರಫ್ತಿಗೆ ಅವಕಾಶ ಕಲ್ಪಿಸಬೇಕು ಎಂದು ಕಾರ್ಖಾನೆಗಳು ಆಗ್ರಹಿಸುತ್ತಿವೆ. ಈ ಕುರಿತು ಚೋಪ್ರಾ ಅವರನ್ನು ಪ್ರಶ್ನಿಸಿದಾಗ ‘ನಮ್ಮಲ್ಲಿ ಸಕ್ಕರೆ ದಾಸ್ತಾನು ಹೆಚ್ಚಿರುವುದು ನಿಜ… ರಫ್ತಿಗೆ ಅವಕಾಶ ಕಲ್ಪಿಸುವುದನ್ನು ನಾವು ಪರಿಶೀಲಿಸು ತ್ತಿದ್ದೇವೆ’ ಎಂದು ಉತ್ತರಿಸಿದ್ದಾರೆ.
- ಈ ವಿಚಾರವಾಗಿ ತೀರ್ಮಾನವು ಶೀಘ್ರವೇ ಆಗಬಹುದು ಎಂದು ಅವರು ಸೂಚ್ಯವಾಗಿ ಹೇಳಿದ್ದಾರೆ. ತೀರ್ಮಾನ ತೆಗೆದುಕೊಳ್ಳಲು ಸಚಿವರ ಸಮಿತಿಯೊಂದು ಮುಂದಿನ ವಾರ ಸಭೆ ಸೇರುವ ಸಾಧ್ಯತೆ ಇದೆ.
- ಕಳೆದ ಮಾರುಕಟ್ಟೆ ವರ್ಷದಲ್ಲಿ 10 ಲಕ್ಷ ಟನ್ ಸಕ್ಕರೆ ರಫ್ತಿಗೆ ಅನುಮತಿ ನೀಡಲಾಗಿತ್ತು. ಆದರೆ ಆ ವರ್ಷದಲ್ಲಿ ದೇಶದಿಂದ ಒಟ್ಟು 8 ಲಕ್ಷ ಟನ್ ಸಕ್ಕರೆಯನ್ನು ರಫ್ತು ಮಾಡಲಾಗಿದೆ.
- ಪಿಎಂ–ಶ್ರೀ ಯೋಜನೆ ಅನುಷ್ಠಾನಕ್ಕೆ ತಡೆ
ಸಂದರ್ಭ: ರಾಜ್ಯದಲ್ಲಿ ‘ಪ್ರಧಾನಮಂತ್ರಿ ಸ್ಕೂಲ್ ಫಾರ್ ರೈಸಿಂಗ್ ಇಂಡಿಯಾ’ (ಪಿಎಂ–ಶ್ರೀ) ಯೋಜನೆ ಅನುಷ್ಠಾನಗೊಳಿಸುವ ನಿರ್ಧಾರವನ್ನು ತಡೆಹಿಡಿಯಲು ಕೇರಳ ಸರ್ಕಾರ ನಿರ್ಧರಿಸಿದೆ. ಯೋಜನೆಗೆ ಸಿಪಿಐ ತೀವ್ರ ಆಕ್ಷೇಪ ವ್ಯಕ್ತಪಡಿಸುತ್ತಿರುವ ಕಾರಣ ಈ ನಿರ್ಧಾರಕ್ಕೆ ಬಂದಿದೆ.
- ‘ಏಳು ಮಂದಿ ಸದಸ್ಯರನ್ನು ಒಳಗೊಂಡ ಸಂಪುಟ ಉಪ ಸಮಿತಿಯು ಯೋಜನೆಯನ್ನು ಪರಿಶೀಲಿಸಲಿದೆ. ಸಮಿತಿಯ ವರದಿ ಆಧಾರದಲ್ಲಿ ಮುಂದಿನ ನಿರ್ಧಾರ ಕೈಗೊಳ್ಳಲಾಗುವುದು’ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ತಿಳಿಸಿದರು.
- ಉಪ ಸಮಿತಿ ಪರಿಶೀಲನೆ ನಂತರವೇ ಪಿಎಂ–ಶ್ರೀ ಯೋಜನೆ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಕ್ರಮ ಕೈಗೊಳ್ಳಬೇಕು ಎಂದು ಶಿಕ್ಷಣ ಇಲಾಖೆಗೆ ಪತ್ರದ ಮೂಲಕ ತಿಳಿಸಲಾಗಿದೆ.
- ‘ಮೊಂಥಾ’ ಚಂಡಮಾರುತ: ತಗ್ಗಿದ ಅಬ್ಬರ
ಸಂದರ್ಭ: ‘ಮೊಂಥಾ ಚಂಡಮಾರುತದ ತೀವ್ರತೆ ತಗ್ಗಿದೆ ಎಂದು’ ಎಂದು ಭಾರತೀಯ ಹವಾಮಾನ ಇಲಾಖೆ ಬುಧವಾರ ಹೇಳಿದೆ. ಚಂಡಮಾರುತದ ಪರಿಣಾಮವು ಆಂಧ್ರ ಪ್ರದೇಶ ಮತ್ತು ತೆಲಂಗಾಣಕ್ಕೆ ತೀವ್ರವಾಗಿ ತಟ್ಟಿದೆ. ಒಡಿಶಾದಲ್ಲಿ ಭೂಕುಸಿತ ಸಂಭವಿಸಿದೆ, ಜಾರ್ಖಂಡ್ನಲ್ಲಿ ಮಳೆಯಾಗಿದೆ.
- ‘ಮೊಂಥಾ’ ಕಾರಣದಿಂದಾಗಿ ರಾಜ್ಯದಲ್ಲಿ ಇಬ್ಬರು ಮೃತಪಟ್ಟಿದ್ದಾರೆ’ ಎಂದು ಆಂಧ್ರ ಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಹೇಳಿದರು. ತೆಲಂಗಾಣದ ಸೂರ್ಯಪೇಟೆ ಜಿಲ್ಲೆಯಲ್ಲಿ ತಲೆ ಮೇಲೆ ಮರ ಬಿದ್ದು ವ್ಯಕ್ತಿಯೊಬ್ಬರು ಮೃತ ಪಟ್ಟಿದ್ದಾರೆ. ಖಮ್ಮಂ ಜಿಲ್ಲೆಯಲ್ಲಿ ಟ್ರಕ್ನಲ್ಲಿ ಸಂಚರಿಸುತ್ತಿದ್ದಾಗ ಮಳೆ ನೀರಿನಲ್ಲಿ ಚಾಲಕ ಕೊಚ್ಚಿ ಹೋಗಿದ್ದಾರೆ.
- ಆಂಧ್ರ ಪ್ರದೇಶ ಹಾಗೂ ತೆಲಂಗಾಣದಲ್ಲಿ ಭಾರಿ ಮಳೆಯಾಗಿದೆ. ತೆಲಂಗಾಣದ 8 ಜಿಲ್ಲೆಗಳಲ್ಲಿ ಹವಾಮಾನ ಇಲಾಖೆಯು ರೆಡ್ ಅಲರ್ಟ್ ಘೋಷಿಸಿದೆ.
- ತೀವ್ರ ಮಳೆಗೆ ಒಳಗಾದ ಜಿಲ್ಲೆಗಳಲ್ಲಿ ಮುಖ್ಯಮಂತ್ರಿ ನಾಯ್ಡು ಅವರು ವೈಮಾನಿಕ ಸಮೀಕ್ಷೆ ನಡೆಸಿದರು. ವೇಗದ ಗಾಳಿ ಬೀಸಿದ್ದರಿಂದ ಆಂಧ್ರದಲ್ಲಿ ಸಾವಿರಾರು ಮರಗಳು ಧರೆಗುರುಳಿವೆ. ನೂರಾರು ವಿದ್ಯುತ್ ಕಂಬಗಳು ಬಿದ್ದಿವೆ. ‘380 ಕಿ.ಮೀ ರಸ್ತೆಗಳು, 14 ಸೇತುವೆಗಳಿಗೆ ಹಾನಿಯಾಗಿವೆ’ ಎಂದು ನಾಯ್ಡು ಮಾಹಿತಿ ನೀಡಿದರು. ‘ಒಡಿಶಾದಲ್ಲಿ ‘ಮೊಂಥಾ’ದ ಪರಿಣಾಮವು ಹೆಚ್ಚೇನು ಆಗಿಲ್ಲ’ ಎಂದು ಮುಖ್ಯಮಂತ್ರಿ ಮೋಹನ್ ಚರನ್ ಮಾಂಝಿ ಹೇಳಿದರು.
50 ಕೆ.ಜಿ ಅಕ್ಕಿ ವಿತರಣೆ
- lಮೀನುಗಾರರು ಮತ್ತು ನೇಕಾರರಿಗೆ ಬುಧವಾರದಿಂದ ₹50 ಕೆ.ಜಿ ಅಕ್ಕಿ, 1 ಕೆ.ಜಿ ಬೆಳೆ, 1 ಲೀಟರ್ ಅಡುಗೆ ಎಣ್ಣೆ, 1 ಕೆ.ಜಿ. ಈರುಳ್ಳಿ, 1 ಕೆ.ಜಿ. ಆಲೂಗೆಡ್ಡೆ ಮತ್ತು 1 ಕೆ.ಜಿ. ಸಕ್ಕರೆ ನೀಡಲು ಆಂಧ್ರ ಸರ್ಕಾರ ನಿರ್ಧರಿಸಿದೆ
ಬೆಳೆ ಹಾನಿ
- lಆಂಧ್ರದ ಭತ್ತ, ಹತ್ತಿ, ಜೋಳ ಮತ್ತು ಹೆಸರುಕಾಳು ಬೆಳೆಗಳಿಗೆ ಮತ್ತು ತೋಟಗಾರಿಕಾ ಬೆಳೆಗಳಿಗೆ ತೀವ್ರ ಹಾನಿಯಾಗಿದೆ. 87 ಸಾವಿರ ಹೆಕ್ಟೇರ್ನಷ್ಟು ಬೆಳೆಗಳು ನಾಶವಾಗಿವೆ.59 ಸಾವಿರ ಹೆಕ್ಟೇರ್ ವಿಸ್ತೀರ್ಣದಲ್ಲಿನ ಬೆಳೆಗಳು ನೀರಿನಲ್ಲಿ ಮುಳುಗಿವೆ. ವೇಗದ ಗಾಳಿಗೆ ಕೊನಸೀಮಾ ಜಿಲ್ಲೆಯಲ್ಲಿನ ಭತ್ತ ಮತ್ತು ಬಾಳೆಮರಗಳು ನೆಲಸಮವಾಗಿವೆ
- lಮಳೆಯ ಕಾರಣ ಭತ್ತ ಮತ್ತು ಹತ್ತಿ ಬೆಳೆಗಳಿಗೆ ಆಗುವ ಹಾನಿಯನ್ನು ತಡೆಯಲು ಕ್ರಮ ಕೈಗೊಳ್ಳುವಂತೆ ತೆಲಂಗಾಣ ಮುಖ್ಯಮಂತ್ರಿ ರೇವಂತ ರೆಡ್ಡಿ ಅವರು ಅಧಿಕಾರಿಗಳಿಗೆ ಸೂಚಿಸಿದರುಜನ
- ರ್ಯಾಂಕಿಂಗ್: ಅಗ್ರಸ್ಥಾನಕ್ಕೆ ರೋಹಿತ್
ಸಂದರ್ಭ: ಭಾರತ ತಂಡದ ನಿಕಟಪೂರ್ವ ನಾಯಕ ರೋಹಿತ್ ಶರ್ಮಾ ಅವರು ಐಸಿಸಿ ಬ್ಯಾಟರ್ಗಳ ರ್ಯಾಂಕಿಂಗ್ನಲ್ಲಿ ಇದೇ ಮೊದಲ ಬಾರಿ ಅಗ್ರಸ್ಥಾನಕ್ಕೇರಿದ್ದಾರೆ.
- 38 ವರ್ಷ ವಯಸ್ಸಿನ ಮುಂಬೈ ಆಟಗಾರ ರೋಹಿತ್ ಅವರು ಎರಡು ಸ್ಥಾನ ಬಡ್ತಿ ಪಡೆದಿದ್ದಾರೆ. ಅವರ ವೃತ್ತಿಜೀವನದಲ್ಲಿ ಅಗ್ರಸ್ಥಾನಕ್ಕೇರಿದ್ದು ಇದೇ ಮೊದಲು.
- ಈಚೆಗೆ ಆಸ್ಟ್ರೇಲಿಯಾದಲ್ಲಿ ನಡೆದಿದ್ದ ಏಕದಿನ ಸರಣಿಯ ಕೊನೆಯ ಪಂದ್ಯದಲ್ಲಿ ಅಜೇಯ 121 ರನ್ ಗಳಿಸಿದ್ದರು. ಗೆಲುವಿನ ರೂವಾರಿಯಾಗಿದ್ದರು. ಸರಣಿಶ್ರೇಷ್ಠ ಗೌರವ ಕೂಡ ಗಳಿಸಿದ್ದರು. ರೋಹಿತ್ ಅವರು ಒಟ್ಟು 781 ರೇಟಿಂಗ್ ಪಾಯಿಂಟ್ಸ್ ಗಳಿಸಿದ್ದಾರೆ.
- ರೋಹಿತ್ 2007ರಲ್ಲಿ ಭಾರತ ತಂಡಕ್ಕೆ ಪದಾರ್ಪಣೆ ಮಾಡಿದ್ದರು. ಇತ್ತೀಚೆಗೆ ಅವರು ಟೆಸ್ಟ್ ಮತ್ತು ಟಿ20 ಮಾದರಿಗಳಿಗೆ ನಿವೃತ್ತಿ ಘೋಷಿಸಿದ್ದರು. ಏಕದಿನ ಕ್ರಿಕೆಟ್ ಮಾದರಿ ಯಲ್ಲಿ ಮಾತ್ರ ಮುಂದುವರಿದಿದ್ದಾರೆ.
- ಈ ಸಾಧನೆಯಿಂದಾಗಿ ಅವರು ಐಸಿಸಿ ರ್ಯಾಂಕಿಂಗ್ನಲ್ಲಿ ಅಗ್ರಸ್ಥಾನದಲ್ಲಿದ್ದ ಅಫ್ಗಾನಿಸ್ತಾನದ ಇಬ್ರಾಹಿಂ ಝದ್ರಾನ್ ಅವರನ್ನು ಹಿಂದಿಕ್ಕಿದರು. ಭಾರತದ ಶುಭಮನ್ ಗಿಲ್ ಅವರು ಮೂರನೇ ಸ್ಥಾನ ಪಡೆದರು. ವಿರಾಟ್ ಕೊಹ್ಲಿ ಮತ್ತು ಶ್ರೇಯಸ್ ಅಯ್ಯರ್ ಅವರು ಕ್ರಮವಾಗಿ 6 ಮತ್ತು 9ನೇ ಸ್ಥಾನದಲ್ಲಿದ್ದಾರೆ.
- ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗಳು

- ಉಮಾಶ್ರೀಗೆ ರಾಜಕುಮಾರ್ ಪ್ರಶಸ್ತಿ
ಸಂದರ್ಭ: ರಾಜ್ಯ ಸರ್ಕಾರವು 2019ನೇ ಸಾಲಿನ ಚಲನಚಿತ್ರ ಪ್ರಶಸ್ತಿಗಳನ್ನು ಪ್ರಕಟಿಸಿದ್ದು, ಚಲನಚಿತ್ರ ರಂಗದಲ್ಲಿನ ಜೀವಮಾನ ಸಾಧನೆಗೆ ನೀಡಲಾಗುವ ‘ಡಾ.ರಾಜಕುಮಾರ್ ಪ್ರಶಸ್ತಿ’ಗೆ ಹಿರಿಯ ನಟಿ ಉಮಾಶ್ರೀ ಅವರನ್ನು ಆಯ್ಕೆ ಮಾಡಲಾಗಿದೆ.
- ‘ಪುಟ್ಟಣ್ಣ ಕಣಗಾಲ್ ಪ್ರಶಸ್ತಿ’ಗೆ ನಿರ್ದೇಶಕ ಎನ್.ಆರ್.ನಂಜುಂಡೇಗೌಡ, ‘ಡಾ.ವಿಷ್ಣುವರ್ಧನ್ ಪ್ರಶಸ್ತಿ’ಗೆ ನಿರ್ಮಾಪಕ–ನಿರ್ದೇಶಕ ರಿಚರ್ಡ್ ಕ್ಯಾಸ್ಟಲಿನೊ ಅವರು ಆಯ್ಕೆಯಾಗಿದ್ದಾರೆ. ಈ ಮೂರೂ ಪ್ರಶಸ್ತಿಗಳು ತಲಾ 50 ಗ್ರಾಂ ಚಿನ್ನದ ಪದಕ ಮತ್ತು ₹5 ಲಕ್ಷ ನಗದು ಒಳಗೊಂಡಿವೆ.
- ಅದೇ ಸಾಲಿನ ಚಲನಚಿತ್ರ ಸಾಹಿತ್ಯ ಪ್ರಶಸ್ತಿಗೆ ‘ಪ್ರಜಾವಾಣಿ’ಯ ಅಭಿಮತ ಸಂಪಾದಕ ರಘುನಾಥ ಚ.ಹ. ಅವರು ಬರೆದಿರುವ ‘ಬೆಳ್ಳಿತೊರೆ– ಸಿನಿಮಾ ಪ್ರಬಂಧಗಳು’ ಆಯ್ಕೆಯಾಗಿದೆ. ಪ್ರಶಸ್ತಿಯು ₹20,000 ನಗದು ಮತ್ತು 50 ಗ್ರಾಂ ಬೆಳ್ಳಿಯ ಪದಕ ಒಳಗೊಂಡಿದೆ. ಪುಸ್ತಕದ ಪ್ರಕಾಶಕ, ಅಂಕಿತ ಪುಸ್ತಕದ ಪ್ರಕಾಶ ಕಂಬತ್ತಳ್ಳಿ ಅವರನ್ನೂ ಪ್ರಶಸ್ತಿಗೆ ಆಯ್ಕೆ ಮಾಡಿದ್ದು, ₹20,000 ನಗದು ಮತ್ತು 50 ಗ್ರಾಂ ಬೆಳ್ಳಿಯ ಪದಕ ಒಳಗೊಂಡಿದೆ.
- ಅತ್ಯುತ್ತಮ ಕಿರುಚಿತ್ರ ಪ್ರಶಸ್ತಿಗೆ ಶ್ರೀನಾಥ್ ಎಸ್. ಹಡಗಲಿ ಅವರ ನಿರ್ದೇಶನದ ‘ಗುಳೆ’ ಕಿರುಚಿತ್ರ ಆಯ್ಕೆಯಾಗಿದೆ. ನಿರ್ದೇಶಕ ಶ್ರೀನಾಥ್ ಮತ್ತು ನಿರ್ಮಾಪಕ ಮನೋಹರ್ ಎಸ್.ಐಯರ್ ಅವರಿಗೆ ತಲಾ ₹25,000 ನಗದು ಮತ್ತು 50 ಗ್ರಾಂ ಬೆಳ್ಳಿಯ ಪದಕ ನೀಡಲಾಗುತ್ತದೆ ಎಂದು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಪ್ರಕಟಣೆ ತಿಳಿಸಿದೆ.
- ‘ಕಾಯಕ ಗ್ರಾಮ’ಕ್ಕೆ 1,310 ಪಂಚಾಯಿತಿ ಆಯ್ಕೆ’
ಸಂದರ್ಭ: ಕೊನೆಯ ಸ್ಥಾನದಲ್ಲಿರುವ 1,310 ಗ್ರಾಮ ಪಂಚಾಯಿತಿಗಳನ್ನು ‘ಕಾಯಕ ಗ್ರಾಮ’ ಯೋಜನೆ ಅಡಿ ಅಭಿವೃದ್ಧಿಪಡಿಸಲಾಗುತ್ತದೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.
- ಯೋಜನೆಗೆ ಚಾಲನೆ ನೀಡಿ ಮಾತನಾಡಿದ ಅವರು, ‘ಗ್ರಾಮೀಣಾಭಿವೃದ್ಧಿಯ ಇ-ಆಡಳಿತ ವಿಭಾಗವು ಪಂಚತಂತ್ರ ತಂತ್ರಾಂಶದಲ್ಲಿ ಗ್ರಾಮ ಪಂಚಾಯಿತಿ ಕಾರ್ಯಕ್ಷಮತೆಯ ಶ್ರೇಯಾಂಕ ವರದಿಯಲ್ಲಿ ಗುರುತಿಸುವಂತೆ ಕೊನೆಯ ಸ್ಥಾನಗಳಲ್ಲಿರುವ ಗ್ರಾಮ ಪಂಚಾಯತಿಗಳನ್ನು ವೈಜ್ಞಾನಿಕವಾಗಿ ಆಯ್ಕೆ ಮಾಡಿಕೊಳ್ಳಲಾಗುತ್ತದೆ. ವಿವಿಧ ಇಲಾಖೆಗಳ ಸಮನ್ವಯದಲ್ಲಿ ಸಮಗ್ರ ಅಭಿವೃದ್ಧಿ ಸಾಧಿಸಲಾಗುವುದು. ತಾಲ್ಲೂಕು, ಜಿಲ್ಲೆ ಮತ್ತು ರಾಜ್ಯಮಟ್ಟದ ಅಧಿಕಾರಿಗಳು ಉಸ್ತುವಾರಿ ನೋಡಿಕೊಳ್ಳುವರು’ ಎಂದರು.
- ಗ್ರಾಮ ಪಂಚಾಯಿತಿಗಳನ್ನು ಹಿರಿಯ ಅಧಿಕಾರಿಗಳು ದತ್ತು ಪಡೆದು ಅಭಿವೃದ್ಧಿಪಡಿಸಲು ಹೊಸ ಯೋಜನೆ ರೂಪಿಸಲಾಗುವುದು ಎಂದು ಬಜೆಟ್ನಲ್ಲಿ ಮುಖ್ಯಮಂತ್ರಿ ಘೋಷಿಸಿದ್ದರು.
- ಬಸವಣ್ಣನವರ ಕಾಯಕದ ಸಂದೇಶವನ್ನು ಸಾಕಾರಗೊಳಿಸಲು ‘ಕಾಯಕ ಗ್ರಾಮ’ ಯೋಜನೆ ರೂಪಿಸಲಾಗಿದೆ ಎಂದರು.
- ಜಿಲ್ಲಾ ಮಟ್ಟದಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಗಳು ಸೇರಿದಂತೆ ಆರು ಅಧಿಕಾರಿಗಳು, ತಾಲ್ಲೂಕು ಮಟ್ಟದಲ್ಲಿ ಮೂವರು ಅಧಿಕಾರಿಗಳು ಹಾಗೂ ರಾಜ್ಯ ಮಟ್ಟದಲ್ಲಿ ಜಿಲ್ಲಾವಾರು ನೇಮಕ ಮಾಡಲಾಗಿರುವ ನೋಡಲ್ ಅಧಿಕಾರಿಗಳು ಇರುತ್ತಾರೆ ಎಂದರು.
- ಕೆಎಸ್ಆರ್ಪಿ: ಪಿಯು ವಿದ್ಯಾರ್ಹತೆ: ನಿಯಮ ತಿದ್ದುಪಡಿಗೆ ಸಚಿವ ಸಂಪುಟದ ಒಪ್ಪಿಗೆ
ಸಂದರ್ಭ: ಕರ್ನಾಟಕ ರಾಜ್ಯ ಮೀಸಲು ಪೊಲೀಸ್ (ಕೆಎಸ್ಆರ್ಪಿ) ಮತ್ತು ಭಾರತೀಯ ಮೀಸಲು ದಳ (ಐಆರ್ಬಿ) ನೇಮಕಾತಿಗೆ ಇರುವ ವಿದ್ಯಾರ್ಹತೆಯನ್ನು ಎಸ್ಎಸ್ ಎಲ್ಸಿಯಿಂದ ಪಿಯುಸಿಗೆ ಏರಿಸುವ ವೃಂದ ಮತ್ತು ನೇಮಕಾತಿ ನಿಯಮಕ್ಕೆ ಮಾಡಿರುವ ತಿದ್ದುಪಡಿಗೆ ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿದೆ.
ಸಚಿವ ಸಂಪುಟ ಸಭೆಯ ತೀರ್ಮಾನಗಳು:
- lಕರ್ನಾಟಕ ನವೋದ್ಯಮ ನೀತಿ 2022–27ರ ಅಡಿ ಐದು ವರ್ಷಗಳ ಅವಧಿಗೆ ₹80 ಕೋಟಿ ಅನುದಾನ ಹಂಚಿಕೆಯೊಂದಿಗೆ ಒಟ್ಟು ಎಂಟು ಟೆಕ್ನಾಲಜಿ ಇನ್ಕ್ಯುಬೇಟರ್ 2.0 ಸ್ಥಾಪಿಸಲು ತೀರ್ಮಾನ.
- lಕಾರವಾರ, ಹಳೆ ಮಂಗಳೂರು(ಬೆಂಗ್ರೆ), ಹಳೆ ಮಂಗಳೂರು(ನಗರ ಬದಿ) ಮತ್ತು ಮಲ್ಪೆಯ ಬರ್ತ್ಗಳನ್ನು ಸಾರ್ವಜನಿಕ ಮತ್ತು ಖಾಸಗಿ ಸಹಭಾಗಿತ್ವದಲ್ಲಿ ಅಭಿವೃದ್ಧಿಪಡಿಸಿ ನಿರ್ವಹಿಸಲು ತೀರ್ಮಾನ
- lಮಂಡ್ಯ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಪ್ರಾಥಮಿಕ ಹಂತಕ್ಕಾಗಿ ₹23.25 ಕೋಟಿ ಮೊತ್ತದಲ್ಲಿ ಮೂಲ ಸೌಕರ್ಯ ಅಭಿವೃದ್ಧಿ, ದುರಸ್ತಿ ಮತ್ತು ನವೀಕರಣ ಕಾಮಗಾರಿ
- lಕಾರವಾರ ಕ್ಯಾನ್ಸರ್ ಕೇರ್ ಘಟಕದ ಸ್ಥಾಪನೆಗೆ ಅಗತ್ಯವಿರುವ ಹೆಚ್ಚುವರಿ ಉಪಕರಣಗಳಿಗೆ ತಗಲುವ ಅನುದಾನವನ್ನು ಈಗಾಗಲೇ ಅನುಮೋದನೆ ಆಗಿರುವ ₹18.25 ಕೋಟಿ ಸರ್ಕಾರದ ವತಿಯಿಂದ ಭರಿಸಲಾಗುವುದು. ಇನ್ನುಳಿದ ಮೊತ್ತ ₹13.38 ಕೋಟಿಯನ್ನು ಸಂಸ್ಥೆಯ ಆಂತರಿಕ ಸಂಪನ್ಮೂಲದಿಂದ ಭರಿಸಲು ಒಪ್ಪಿಗೆ.
- lತುಮಕೂರು ಜಿಲ್ಲಾ ಆಸ್ಪತ್ರೆಯಲ್ಲಿ ಕ್ಯಾನ್ಸರ್ ಕೇರ್ ಕೇಂದ್ರ ಸ್ಥಾಪನೆಗೆ ಅಗತ್ಯವಿರುವ ಮೊದಲ ಹಂತದ ಉಪಕರಣಗಳ ಖರೀದಿಗೆ ₹50 ಕೋಟಿ.
- lಕೆ–ಶೋರ್ ಯೋಜನೆಗೆ ತಾಂತ್ರಿಕ ಮತ್ತು ನಿರ್ವಹಣಾ ಸಲಹೆಗಾರರ ಸೇವೆಗಳನ್ನು ಪಡೆಯಲು ₹20.47 ಕೋಟಿಗೆ ಆಡಳಿತಾತ್ಮಕ ಅನುಮೋದನೆ.
- lಯಾದಗಿರಿ ಜಿಲ್ಲೆ ಶಹಾಪುರ ನಗರಸಭೆ ವ್ಯಾಪ್ತಿಯಲ್ಲಿ ಕನಕಭವನ ನಿರ್ಮಾಣಕ್ಕೆ 300.14 ಚದರ ಮೀಟರ್ ಕರ್ನಾಟಕ ಪ್ರದೇಶ ಕುರುಬರ ಸಂಘಕ್ಕೆ ಉಚಿತವಾಗಿ ಮಂಜೂರು ಮಾಡಲು ತೀರ್ಮಾನ
- l2025–26 ನೇ ಸಾಲಿನಲ್ಲಿ ಪೊಲೀಸ್ ಇಲಾಖೆಗೆ ವಿವಿಧ ಮಾದರಿಯ 241 ವಾಹನಗಳನ್ನು ₹34.95 ಕೋಟಿ ವೆಚ್ಚದಲ್ಲಿ ಖರೀದಿಸಲು ಒಪ್ಪಿಗೆ
- lಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲ, ಉಡುಪಿ ಜಿಲ್ಲೆ ಅಂಜಾರು ಗ್ರಾಮ, ಉಡುಪಿ ಜಿಲ್ಲೆ ಕುಂದಾಪುರ ತಾಲ್ಲೂಕಿನಲ್ಲಿ ಕಾಂಗ್ರೆಸ್ ಭವನ ನಿರ್ಮಾಣಕ್ಕೆ ಜಮೀನು ಮಂಜೂರು
- ‘ಕೌಶಲ ಕೇಂದ್ರಕ್ಕೆ ಸರ್ಕಾರದಿಂದ ಜಮೀನು’
ಸಂದರ್ಭ:‘ರಾಜ್ಯದಲ್ಲಿ ಕೌಶಲ ತರಬೇತಿ ಕೇಂದ್ರ ಮತ್ತು ಪ್ರಯೋಗಾಲಯಗಳನ್ನು ಸ್ಥಾಪಿಸಲು ಇಚ್ಛಿಸುವವರಿಗೆ ರಾಜ್ಯ ಸರ್ಕಾರದಿಂದಲೇ ಅಗತ್ಯ ಜಮೀನು ಮಂಜೂರು ಮಾಡಲಾಗುವುದು’ ಎಂದು ಕೌಶಲಾಭಿವೃದ್ಧಿ ಸಚಿವ ಶರಣ ಪ್ರಕಾಶ ಪಾಟೀಲ ಹೇಳಿದರು.
- ಭಾರತೀಯ ಕೈಗಾರಿಕೆಗಳ ಒಕ್ಕೂಟವು ಆಯೋಜಿಸಿದ್ದ ‘ಕೌಶಲ ಶೃಂಗಸಭೆ–2025’ಯಲ್ಲಿ ಅವರು ಮಾತನಾಡಿದರು.
- ‘ಪದವಿ, ವೃತ್ತಿಪರ ಕೋರ್ಸ್ಗಳನ್ನು ಮಾಡಿದ ವಿದ್ಯಾರ್ಥಿಗಳಲ್ಲಿ ಉದ್ಯೋಗಾವಕಾಶವನ್ನು ಹೆಚ್ಚಿಸುವ ಅಗತ್ಯವಿದೆ. ಇದಕ್ಕಾಗಿ ಉದ್ಯಮಗಳ ಸಹಯೋಗದಲ್ಲೇ ತರಬೇತಿ ಕೇಂದ್ರ ಅಥವಾ ಪ್ರಯೋಗಾಲಯಗಳನ್ನು ಸ್ಥಾಪಿಸಬೇಕಿದೆ. ಇದಕ್ಕೆ ಸರ್ಕಾರವು ಅಗತ್ಯ ನೆರವುಗಳನ್ನು ನೀಡಲಿದೆ’ ಎಂದರು.
- ‘ಬೆಂಗಳೂರಿನ ಪಿಇಎಸ್ ವಿಶ್ವವಿದ್ಯಾ ಲಯದಲ್ಲಿ ಬಜಾಜ್ ಕಂಪನಿಯು ಎಂಜಿನಿಯರಿಂಗ್ ಕೌಶಲ ತರಬೇತಿ ಕೇಂದ್ರವನ್ನು ಆರಂಭಿಸಿದೆ. ಖಾಸಗಿ–ಸರ್ಕಾರಿ ಸಹಯೋಗದಲ್ಲಿ ಕಾರ್ಯನಿರ್ವಹಿಸುತ್ತಿರುವ ಈ ಕೇಂದ್ರದಲ್ಲಿ ಎಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಮೆಕಾಟ್ರಾನಿಕ್ಸ್, ರೊಬೊಟಿಕ್ಸ್ ಮೊದಲಾದ ಕ್ಷೇತ್ರಗಳಲ್ಲಿ ಪ್ರಾಯೋಗಿಕ ತರಬೇತಿಯನ್ನು ನೀಡಲಾಗುತ್ತಿದೆ. ರಾಜ್ಯದ ಹಲವೆಡೆ ಇಂತಹ ಕೇಂದ್ರಗಳನ್ನು ಸ್ಥಾಪಿಸಲು ಅವಕಾಶಗಳಿವೆ’ ಎಂದು ಹೇಳಿದರು.
- ‘ಶೈಕ್ಷಣಿಕ ಕಲಿಕೆ ಮತ್ತು ಪ್ರಾಯೋಗಿಕ ತರಬೇತಿ ಎರಡಕ್ಕೂ ಅವಕಾಶವಿರುವ ‘ಡ್ಯುಯಲ್ ಅಪ್ರೆಂಟಿಸ್ಶಿಪ್’ ಕಾರ್ಯಕ್ರಮವನ್ನು ರೂಪಿಸಲಾಗುತ್ತಿದೆ. ಈ ಯೋಜನೆಯನ್ನು ಸಾಕಾರಗೊಳಿಸಲು ಉದ್ಯಮರಂಗದ ಸಹಕಾರ ಅಗತ್ಯ. ಶಿಕ್ಷಣ–ಉದ್ಯಮ ಸಹಯೋಗವನ್ನು ಹೊಸ ಎತ್ತರಕ್ಕೆ ಒಯ್ಯೋಣ’ ಎಂದು ಉದ್ಯಮಿಗಳಿಗೆ ಆಹ್ವಾನ ನೀಡಿದರು.
- ಜಿಯೊ ಬಳಕೆದಾರರಿಗೆ ಗೂಗಲ್ ಎ.ಐ ಪ್ರೊ ಉಚಿತ
ಸಂದರ್ಭ: ಗೂಗಲ್ ಕಂಪನಿಯ ಎ.ಐ. ಪರಿಕರ ‘ಗೂಗಲ್ ಎ.ಐ. ಪ್ರೊ’ ಚಂದಾದಾರಿಕೆಯು ಅರ್ಹ ಜಿಯೊ ಬಳಕೆದಾರರಿಗೆ 18 ತಿಂಗಳು ಉಚಿತವಾಗಿ ಸಿಗಲಿದೆ ಎಂದು ರಿಲಯನ್ಸ್ ಇಂಡಸ್ಟ್ರೀಸ್ ತಿಳಿಸಿದೆ.
- ರಿಲಯನ್ಸ್ ಇಂಡಸ್ಟ್ರೀಸ್ನ ಅಂಗಸಂಸ್ಥೆಯಾದ ರಿಲಯನ್ಸ್ ಇಂಟೆಲಿಜೆನ್ಸ್, ಗೂಗಲ್ ಜೊತೆ ಪಾಲುದಾರಿಕೆ ಮಾಡಿಕೊಂಡಿದೆ. ಈ ಪಾಲುದಾರಿಕೆಯ ಮೂಲಕ ರಿಲಯನ್ಸ್, ಜಿಯೊ 5ಜಿ ಅನ್ಲಿಮಿಟೆಡ್ ಯೋಜನೆ ಹೊಂದಿರುವ ಬಳಕೆದಾರರಿಗೆ ಈ ಕೊಡುಗೆ ನೀಡಿದೆ.
- ಹಣಕಾಸಿನ ಮೌಲ್ಯದಲ್ಲಿ ಈ ಕೊಡುಗೆ ಬೆಲೆ ₹35,100 ಆಗಿದೆ ಎಂದು ಕಂಪನಿ ಹೇಳಿದೆ. ಆರಂಭಿಕವಾಗಿ 18–25 ವರ್ಷದ ನಡುವಿನವರಿಗೆ ಈ ಕೊಡುಗೆ ದೊರೆಯಲಿದೆ. ನಂತರ ಎಲ್ಲ ಬಳಕೆದಾರರಿಗೆ ಈ ಸೇವೆ ದೊರೆಯುವಂತೆ ಮಾಡಲಾಗುವುದು ಎಂದು ಕಂಪನಿ ತಿಳಿಸಿದೆ.
- ಈ ಪ್ಲ್ಯಾನ್ ಜೊತೆಗೆ ಗೂಗಲ್ ಜೆಮಿನಿ 2.5 ಪ್ರೊ, ಇತ್ತೀಚಿನ ನ್ಯಾನೋ ಬನಾನಾ ಮತ್ತು ವಿಯೋ 3.1 ಮಾದರಿಗಳೊಂದಿಗೆ ಚಿತ್ರಗಳು ಮತ್ತು ವಿಡಿಯೋಗಳನ್ನು ಸೃಷ್ಟಿಸಲು ಬಳಕೆದಾರರಿಗೆ ಹೆಚ್ಚಿನ ಅವಕಾಶಗಳು ದೊರೆಯುತ್ತವೆ.
- ಅಧ್ಯಯನ ಮತ್ತು ಸಂಶೋಧನೆಗಾಗಿ ನೋಟ್ಬುಕ್ ಎಲ್ಎಂಗೆ ಹೆಚ್ಚಿನ ಅವಕಾಶ ಮತ್ತು 2 ಟಿಬಿ ಕ್ಲೌಡ್ ಸಂಗ್ರಹದ ಸೌಲಭ್ಯ ಕೂಡ ದೊರೆಯಲಿದೆ ಎಂದು ತಿಳಿಸಿದೆ.
- ಛಾಬಹಾರ್ ಬಂದರು: 6 ತಿಂಗಳು ವಿನಾಯಿತಿ
ಸಂದರ್ಭ: ಭಾರತ ನಿರ್ವಹಿಸುತ್ತಿರುವ ಇರಾನ್ನ ಛಾಬಹಾರ್ ಬಂದರು ಯೋಜನೆ ಮೇಲೆ ಅಮೆರಿಕ ವಿಧಿಸಿರುವ ನಿರ್ಬಂಧಗಳಿಂದ ಆರು ತಿಂಗಳು ವಿನಾಯಿತಿ ದೊರೆತಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ಮಾಹಿತಿ ನೀಡಿದರು.
- ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು, ಅಕ್ಟೋಬರ್ 29ರಿಂದ ಜಾರಿಗೆ ಬರುವಂತೆ ಆರು ತಿಂಗಳವರೆಗೆ ವಿನಾಯಿತಿ ನೀಡಿ ಆದೇಶಿಸಿದ್ದಾರೆ ಎಂದು ಅವರು ಹೇಳಿದರು.
- ಛಾಬಹಾರ್ ಬಂದರಿನ ಕಾರ್ಯನಿರ್ವಹಣೆ ಕುರಿತು ಇರಾನ್ ಮತ್ತು ಭಾರತ ಸರ್ಕಾರ ಕಳೆದ ವರ್ಷ ಒಪ್ಪಂದ ಮಾಡಿಕೊಂಡಿವೆ. ಈ ಬಂದರು ಅಭಿವೃದ್ಧಿ ಮತ್ತು ನಿರ್ವಹಣೆ ಸಂಬಂಧ ಎರಡೂ ಸರ್ಕಾರಗಳು 2003, 2015 ಮತ್ತು 2017ರಲ್ಲಿ ಒಪ್ಪಂದ ಮಾಡಿಕೊಂಡಿದ್ದವು. 2018ರಿಂದ ಈ ಬಂದರನ್ನು ಭಾರತವೇ ನಿರ್ವಹಿಸುತ್ತಿದೆ. ಅದನ್ನು 10 ವರ್ಷಗಳಿಗೆ ವಿಸ್ತರಿಸಿ ಕಳೆದ ವರ್ಷ ಒಪ್ಪಂದ ಮಾಡಿಕೊಳ್ಳಲಾಗಿದೆ.
- ಅಫ್ಗಾನಿಸ್ತಾನದ ಸಾರ್ವಭೌಮತ್ವಕ್ಕೆ ಭಾರತ ಬದ್ಧ: ಪಾಕಿಸ್ತಾನ– ಅಫ್ಗಾನಿಸ್ತಾನ ಗಡಿ ಸಂಘರ್ಷಕ್ಕೆ ಸಂಬಂಧಿಸಿದಂತೆ ಅಫ್ಗಾನಿಸ್ತಾನವನ್ನು ಬೆಂಬಲಿಸಿರುವ ಭಾರತವು, ಅಫ್ಗಾನಿಸ್ತಾನದ ಸಾರ್ವಭೌಮತ್ವ, ಪ್ರಾದೇಶಿಕ ಸಮಗ್ರತೆ ಮತ್ತು ಸ್ವಾತಂತ್ರ್ಯವನ್ನು ಪೂರ್ಣವಾಗಿ ಗೌರವಿಸುತ್ತದೆ ಮತ್ತು ಅದಕ್ಕೆ ಬದ್ಧವಾಗಿದೆ ಎಂದು ಪ್ರತಿಪಾದಿಸಿದೆ.
- ತೈಲ ಖರೀದಿ– ಅಮೆರಿಕ ನಿರ್ಬಂಧ: ಪರಿಣಾಮಗಳ ಬಗ್ಗೆ ಭಾರತ ಅಧ್ಯಯನ
ಸಂದರ್ಭ: ರಷ್ಯಾದ ಬೃಹತ್ ತೈಲ ಕಂಪನಿಗಳಾದ ‘ರೋಸ್ನೆಫ್ಟ್’ ಮತ್ತು ‘ಲುಕೋಯಿಲ್’ ಮೇಲೆ ಇತ್ತೀಚೆಗೆ ಅಮೆರಿಕ ವಿಧಿಸಿರುವ ನಿರ್ಬಂಧದಿಂದ ಉಂಟಾಗುವ ಪರಿಣಾಮಗಳ ಬಗ್ಗೆ ಭಾರತ ಅಧ್ಯಯನ ನಡೆಸುತ್ತಿದೆ ಎಂದು ರಣಧೀರ್ ಜೈಸ್ವಾಲ್ ತಿಳಿಸಿದರು.
- ‘ಭಾರತವು ಜಾಗತಿಕ ಮಾರುಕಟ್ಟೆಯ ಚಲನಶೀಲತೆಯನ್ನು ಆಧರಿಸಿ ನಿರ್ಧಾರಗಳನ್ನು ತೆಗೆದುಕೊಳ್ಳುತ್ತದೆ. ನಮ್ಮ 140 ಕೋಟಿ ಜನರ ಇಂಧನದ ಅಗತ್ಯಗಳನ್ನು ಪೂರೈಸಲು ವೈವಿಧ್ಯಮಯ ಮೂಲಗಳಿಂದ ಕೈಗೆಟುಕುವ ದರದಲ್ಲಿ ಇಂಧನ ಖರೀದಿಸಲು ಒತ್ತು ನೀಡುತ್ತದೆ’ ಎಂದೂ ಅವರು ಸುದ್ದಿಗೋಷ್ಠಿಯಲ್ಲಿ ಹೇಳಿದರು.
- ಭಾರತದ ತೈಲ ಖರೀದಿದಾರರು ರಷ್ಯಾದ ಕಚ್ಚಾ ತೈಲ ಖರೀದಿಯನ್ನು ನಿಧಾನವಾಗಿ ಕಡಿಮೆ ಮಾಡುತ್ತಿದ್ದಾರೆ ಮತ್ತು ಅಮೆರಿಕದಿಂದ ಪೆಟ್ರೋಲಿಯಂ ಉತ್ಪನ್ನಗಳ ಆಮದನ್ನು ಎದುರು ನೋಡುತ್ತಿ ದ್ದಾರೆ ಎಂಬ ಮಾಹಿತಿ ಬೆನ್ನಲ್ಲೇ ಜೈಸ್ವಾಲ್ ಅವರಿಂದ ಪ್ರತಿಕ್ರಿಯೆ ಬಂದಿದೆ.
- ವ್ಯಾಪಾರ ಒಪ್ಪಂದವನ್ನು ಅಂತಿಮಗೊಳಿಸುವ ಕಾರ್ಯದಲ್ಲಿ ಭಾರತ ಮತ್ತು ಅಮೆರಿಕ ನಿರತವಾಗಿವೆ ಎಂದು ಅವರು ಇದೇ ವೇಳೆ ಪ್ರತಿಕ್ರಿಯಿಸಿದರು.
- ಉದ್ಯೋಗ ಪರವಾನಗಿ: ಸ್ವಯಂಚಾಲಿತ ವಿಸ್ತರಣೆ ಸೌಲಭ್ಯ ನಿಲ್ಲಿಸಿದ ಅಮೆರಿಕ
ಸಂದರ್ಭ: ಎಚ್–1ಬಿ ವೀಸಾಕ್ಕಾಗಿ ಹೊಸದಾಗಿ ಸಲ್ಲಿಕೆ ಯಾಗುವ ಅರ್ಜಿಗೆ ಸಂಬಂಧಿಸಿದ ಶುಲ್ಕವನ್ನು ಹೆಚ್ಚಳ ಮಾಡಿದ್ದ ಅಮೆರಿಕ, ಈಗ ವಿದೇಶಿಗರ ಉದ್ಯೋಗ ಪರವಾನಗಿ ಅವಧಿ ಸ್ವಯಂಚಾಲಿತವಾಗಿ ವಿಸ್ತರಣೆಯಾಗುವ ಸೌಲಭ್ಯವನ್ನು ಕೊನೆಗೊಳಿಸುತ್ತಿರುವುದಾಗಿ ಘೋಷಿಸಿದೆ.
- ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಡಳಿತದ ಈ ನಡೆಯಿಂದ, ಅಮೆರಿಕದಲ್ಲಿ ಉದ್ಯೋಗದಲ್ಲಿರುವ ಭಾರಿ ಸಂಖ್ಯೆಯ ಭಾರತೀಯರಿಗೆ ತೊಂದರೆಯಾಗಲಿದೆ.
- ಭದ್ರತಾ ಇಲಾಖೆಯು ಈ ಕುರಿತು ಘೋಷಣೆ ಮಾಡಿದೆ. ‘ವಿದೇಶಿಯರ ಉದ್ಯೋಗ ದೃಢೀಕರಣ ದಾಖಲೆಗಳ (ಇಎಡಿ) ಸಿಂಧುತ್ವವನ್ನು ವಿಸ್ತರಣೆ ಮಾಡುವು ದಕ್ಕೂ ಮುನ್ನ ವ್ಯಾಪಕ ಪರಿಶೀಲನೆ ನಡೆಸಲಾಗುವುದು’ ಎಂದು ಹೇಳಿದೆ.
- ‘ಹೊಸ ನಿಯಮದ ಪ್ರಕಾರ, 2025ರ ಅಕ್ಟೋಬರ್ 30ರಂದು ಅಥವಾ ನಂತರ ತಮ್ಮ ಇಎಡಿ ನವೀಕರಣಕ್ಕೆ ಅರ್ಜಿ ಸಲ್ಲಿಸುವ ವಿದೇಶಿಯರ ಉದ್ಯೋಗ ಪರವಾನಗಿ ಅವಧಿಯು ಸ್ವಯಂಚಾಲಿತವಾಗಿ ವಿಸ್ತರಣೆ ಆಗುವುದಿಲ್ಲ’ ಎಂದು ಇಲಾಖೆ ತಿಳಿಸಿದೆ.
- ‘ಅಕ್ಟೋಬರ್ 30ರ ಒಳಗಾಗಿ, ಪರವಾನಗಿಯನ್ನು ಸ್ವಯಂಚಾಲಿತ ವಾಗಿ ವಿಸ್ತರಣೆ ಮಾಡಲಾಗಿರುವ ಇಎಡಿಗಳಿಗೆ ಈ ಮಧ್ಯಂತರ ನಿಯಮ ಅನ್ವಯಿಸದು’ ಎಂದು ಸ್ಪಷ್ಟಪಡಿಸಿದೆ.
- ‘ಇಎಡಿ ಅವಧಿ ಕೊನೆಗೊಳ್ಳುವುದಕ್ಕೂ 180 ದಿನಗಳ ಮೊದಲೇ ನವೀಕರಣಕ್ಕೆ ವಿದೇಶಿಯರು ಅರ್ಜಿ ಸಲ್ಲಿಸಬೇಕು’ ಎಂದೂ ಇಲಾಖೆ ಸೂಚಿಸಿದೆ.
- ಜೋ ಬೈಡನ್ ಅವರು ಅಧ್ಯಕ್ಷ ರಾಗಿದ್ದ ವೇಳೆ, ಇಎಡಿ ನವೀಕರಣ ಕೋರಿ ನಿಗದಿತ ಸಮಯದೊಳಗೆ ಅರ್ಜಿ ಸಲ್ಲಿಸುವ ವಿದೇಶಿಯರ ಉದ್ಯೋಗ ಪರವಾನಗಿಯು ಸ್ವಯಂಚಾಲಿತವಾಗಿ 540 ದಿನಗಳಷ್ಟು ವಿಸ್ತರಣೆಯಾಗುತ್ತಿತ್ತು.
- ಎ.ಐ. ಪಠ್ಯಕ್ರಮಕ್ಕೆ ಸಮಿತಿ
ಸಂದರ್ಭ: ಕೃತಕ ಬುದ್ಧಿಮತ್ತೆ (ಎ.ಐ) ವಿಷಯಾಧಾರಿತ ಪಠ್ಯ ರೂಪಿಸಲು ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿ (ಸಿಬಿಎಸ್ಇ) ಐಐಟಿ ಮದ್ರಾಸ್ನ ಪ್ರಾಧ್ಯಾಪಕ ಕಾರ್ತಿಕ್ ರಮಣ್ ನೇತೃತ್ವದಲ್ಲಿ ತಜ್ಞರ ಸಮಿತಿ ರಚಿಸಿದೆ.
- 2026–27ರ ಶೈಕ್ಷಣಿಕ ವರ್ಷದಿಂದ ತನ್ನ ವ್ಯಾಪ್ತಿಯ ಎಲ್ಲ ಶಾಲೆಗಳಲ್ಲಿ ಮೂರನೇ ತರಗತಿಯಿಂದ ಎ.ಐ ಪಠ್ಯಕ್ರಮವನ್ನು ಅಳವಡಿಸುವ ಪ್ರಯತ್ನದ ಭಾಗವಾಗಿ ಸಮಿತಿ ರಚಿಸಲಾಗಿದೆ.
- ‘ಸಿಬಿಎಸ್ಇ, ಎನ್ಸಿಇಆರ್ಟಿ, ಕೆವಿಎಸ್, ಎನ್ವಿಎಸ್ ತಜ್ಞರು ಮತ್ತು ಬಾಹ್ಯ ತಜ್ಞರೊಂದಿಗೆ ಮಂಡಳಿಯ ಪ್ರಮುಖರು ಸಮಾಲೋಚನೆ ನಡೆಸಿದರು. ಸಭೆಯಲ್ಲಿ ಮದ್ರಾಸ್ ಐಐಟಿಯ ದತ್ತಾಂಶ ವಿಜ್ಞಾನ (ಡೆಟಾ ಸೈನ್ಸ್) ಮತ್ತು ಎ.ಐ ವಿಭಾಗದ ಪ್ರಾಧ್ಯಾಪಕ ಕಾರ್ತಿಕ್ ರಮಣ್ ನೇತೃತ್ವದಲ್ಲಿ ಪಠ್ಯಕ್ರಮ ರಚನಾ ಸಮಿತಿ ರಚಿಸಲಾಯಿತು’ ಎಂದು ಶಾಲಾ ಶಿಕ್ಷಣ ಕಾರ್ಯದರ್ಶಿ ಸಂಜಯ್ ಕುಮಾರ್ ತಿಳಿಸಿದ್ದಾರೆ.
- ‘ವಿಶಾಲವಾದ, ಸಮಗ್ರವಾದ ಮತ್ತು ಶಾಲಾ ಶಿಕ್ಷಣದ ರಾಷ್ಟ್ರೀಯ ಪಠ್ಯಕ್ರಮ ಸ್ವರೂಪದ (ಎನ್ಸಿಎಫ್–ಎಸ್ಇ) ಪರಿಧಿಯಲ್ಲಿ ಎಐ ಪಠ್ಯಕ್ರಮ ರಚಿಸಲಾಗುತ್ತದೆ. ಪ್ರತಿಯೊಂದು ಮಗುವಿನ ವಿಶಿಷ್ಟ ಸಾಮರ್ಥ್ಯ ನಮ್ಮ ಆದ್ಯತೆ’ ಎಂದು ಹೇಳಿದರು.
- ಪ್ರಸ್ತುತ, ದೇಶದ 18,000 ಸಿಬಿಎಸ್ಇ ಶಾಲೆಗಳು 6ನೇ ತರಗತಿ ನಂತರ ಕೃತಕ ಬುದ್ಧಿಮತ್ತೆಯನ್ನು ಕೌಶಲ ವಿಷಯದ ರೂಪದಲ್ಲಿ 15 ಗಂಟೆಗಳಷ್ಟು ಕಾಲ ಬೋಧಿಸುತ್ತಿವೆ. 9ರಿಂದ 12ನೇ ತರಗತಿವರೆಗೆ ಇದು ಐಚ್ಛಿಕ ವಿಷಯವಾಗಿದೆ.
- ಯೂತ್ ಏಷ್ಯನ್ ಕ್ರೀಡಾಕೂಟ: ಭಾರತದ ಪದಕ 41ಕ್ಕೆ ಏರಿಕೆ
ಸಂದರ್ಭ: ಭಾರತದ ಸ್ಪರ್ಧಿಗಳು ಯೂತ್ ಏಷ್ಯನ್ ಕ್ರೀಡಾಕೂಟದಲ್ಲಿ ಅದ್ಭುತ ಪ್ರದರ್ಶನ ಮುಂದುವರಿಸಿದರು. ಬಾಕ್ಸಿಂಗ್ನಲ್ಲಿ ಮೂರು ಚಿನ್ನ, ಒಂದು ಬೆಳ್ಳಿ ಹಾಗೂ ಬೀಚ್ ಕುಸ್ತಿಯಲ್ಲಿ ಮೂರು ಚಿನ್ನ, ಎರಡು ಬೆಳ್ಳಿ ಪದಕ ಗೆದ್ದು ಪಾರಮ್ಯ ಮೆರೆದರು.
- 12 ಚಿನ್ನ, 15 ಬೆಳ್ಳಿ ಮತ್ತು 14 ಕಂಚು ಸೇರಿದಂತೆ 41 ಪದಕ ಗೆದ್ದ ಭಾರತ ಪದಕಪಟ್ಟಿಯಲ್ಲಿ ಆರನೇ ಸ್ಥಾನದಲ್ಲಿದೆ. ಚೀನಾ (136 ಪದಕ) ಅಗ್ರಸ್ಥಾನದಲ್ಲಿದೆ.
- ಮಹಿಳಾ ಬಾಕ್ಸರ್ಗಳಾದ ಖುಷಿ ಚಂದ್, ಅಹಾನಾ ಶರ್ಮಾ ಮತ್ತು ಚಂದ್ರಿಕಾ ಪೂಜಾರಿ ಅವರು ಚಿನ್ನಕ್ಕೆ ಕೊರಳೊಡ್ಡಿದರು.ಪುರುಷರ ವಿಭಾಗದಲ್ಲಿ ಲ್ಯಾಂಚೆನ್ಬಾ ಸಿಂಗ್ ಬೆಳ್ಳಿ ಪದಕವನ್ನು ಜಯಿಸಿದರು.
- 46 ಕೆ.ಜಿ ವಿಭಾಗದ ಫೈನಲ್ನಲ್ಲಿ ಖುಷಿ 4–1ರಿಂದ ಚೀನಾದ ಲುವೊ ಜಿನ್ಸಿಯು ವಿರುದ್ಧ ಗೆಲುವು ಸಾಧಿಸಿದರು. ಚಂದ್ರಿಕಾ 54 ಕೆಜಿ ವಿಭಾಗದಲ್ಲಿ 5–0ಯಿಂದ ಉಜ್ಬೇಕಿಸ್ತಾನದ ಮುಹಮ್ಮದೋವಾ ಕುಮ್ರಿನಿಸೊ ಅವರನ್ನು ಮಣಿಸಿದರು. ಅಹಾನಾ 50 ಕೆ.ಜಿ ವಿಭಾಗದ ಪ್ರಶಸ್ತಿ ಸುತ್ತಿನಲ್ಲಿ ಆರ್ಎಸ್ಸಿ ಆಧಾರದಲ್ಲಿ ಮಾ ಜೊಂಗ್ ಹಯಾಂಗ್ ವಿರುದ್ಧ ಜಯ ಗಳಿಸಿದರು.
- ಬೀಚ್ ಕುಸ್ತಿಯಲ್ಲಿ ಐದು ಪದಕ: ಬೀಚ್ ಕುಸ್ತಿಯಲ್ಲಿ ಅರ್ಜುನ್ ರುಹಿಲ್ (ಬಾಲಕರ 90 ಕೆಜಿ), ಸಾನಿ ಸುಭಾಷ್ ಫುಲ್ಮಾಲಿ (ಬಾಲಕರ 60 ಕೆಜಿ), ಅಂಜಲಿ (ಬಾಲಕಿಯರ 55 ಕೆಜಿ) ಚಿನ್ನದ ಸಾಧನೆ ಮಾಡಿದರು.









