Sat. Feb 7th, 2026

ಸಾಫ್ಟ್ವೇರ್ರಫ್ತು: ಭಾರಿ ಏರಿಕೆ ಗುರಿ: ನಗರಗಳಲ್ಲಿ ಐಟಿ ಬೆಳವಣಿಗೆಗೆ ಒತ್ತು l ಮಾಹಿತಿ ತಂತ್ರಜ್ಞಾನ ನೀತಿಗೆ ಅಸ್ತು

ಸಂದರ್ಭ: ಕರ್ನಾಟಕದಿಂದ ಸಾಫ್ಟ್ವೇರ್ ರಫ್ತನ್ನು 2030 ವೇಳೆಗೆ ₹4.09 ಲಕ್ಷ ಕೋಟಿಯಿಂದ ₹11.5 ಲಕ್ಷ ಕೋಟಿಗೆ ಹೆಚ್ಚಿಸುವ ಗುರಿ ಹೊಂದಿದಕರ್ನಾಟಕ ಮಾಹಿತಿ ತಂತ್ರಜ್ಞಾನ ನೀತಿ 2025–2030’ಕ್ಕೆ ಸಚಿವ ಸಂಪುಟ ಸಭೆ ಅನುಮೋದನೆ ನೀಡಿದೆ.

  • ಬೆಂಗಳೂರಿನಾಚೆಗೆ ಮೈಸೂರು, ಮಂಗಳೂರು, ಹುಬ್ಬಳ್ಳಿ–ಧಾರವಾಡ, ಬೆಳಗಾವಿ, ತುಮಕೂರು, ಕಲಬುರಗಿ ಮತ್ತು ಶಿವಮೊಗ್ಗದಂತಹ ನಗರಗಳಲ್ಲಿ ಕೃತಕ ಬುದ್ಧಿಮತ್ತೆ ಹಾಗೂ ಇತರ ನೂತನ ತಂತ್ರಜ್ಞಾನ ಗಳ ಮೇಲೆ ಹೂಡಿಕೆಗೆ ಆದ್ಯತೆ ನೀಡುವ ಬಗ್ಗೆಯೂ ನೀತಿ ‍ಪ‍್ರಸ್ತಾ‍ಪಿಸಿದೆ.
  •  ‘ರಾಜ್ಯದ ಆದಾಯ ಮೌಲ್ಯ ವರ್ಧನೆಗೆ ಐಟಿ ವಲಯದ ಕೊಡುಗೆಯನ್ನು ಶೇ 26ರಿಂದ ಶೇ 36ಕ್ಕೆ ಹೆಚ್ಚಿಸಲು ಗುರಿ ನಿಗದಿ ಮಾಡಲಾಗಿದೆ.
  • ಜಾಗತಿಕ ತಂತ್ರಜ್ಞಾನ ಮಾರುಕಟ್ಟೆಗಳಲ್ಲಿ ಕರ್ನಾಟಕದ ನಾಯಕತ್ವ ಬಲಪಡಿಸುವುದು ಮತ್ತು ಕರ್ನಾಟಕದ ಬ್ರ್ಯಾಂಡ್‌ ಅನ್ನು ಕೃತಕ ಬುದ್ದಿಮತ್ತೆಯ ಸ್ಥಳೀಯ ತಾಣವಾಗಿ (ಎಐ–ನೇಟಿವ್‌) ಉನ್ನತೀಕರಿಸಲು ಅಗತ್ಯ ಯೋಜನೆ ರೂಪಿಸಲಾಗುವುದು.

ನೀತಿಯ ಮುಖ್ಯಾಂಶಗಳು

  • ಕೃತಕ ಬುದ್ದಿಮತ್ತೆ, ಬ್ಲಾಕ್‌ಚೈನ್‌, ಕ್ವಾಂಟಮ್‌ ಕಂಪ್ಯೂಟಿಂಗ್‌, ಹಸಿರು ಐಟಿ ಮತ್ತು ಮುಂದುವರಿದ ಸೈಬರ್ ಭದ್ರತೆಗೆ ತಂತ್ರಜ್ಞಾನಕ್ಕೆ ಉತ್ತೇಜನ
  • ಡಿಜಿಟಲ್‌ ಸಂಪರ್ಕ, ಹಸಿರು ಆವರಣಗಳು ಮತ್ತು ಗ್ರಾಮೀಣ–ನಗರ ಏಕೀಕರಣವನ್ನು ಉತ್ತೇಜಿಸಲು ಮೂಲಸೌಕರ್ಯ ಅಭಿವೃದ್ಧಿ
  • ಸೈಬರ್‌ ಸುರಕ್ಷತೆ, ವಿಪತ್ತು ನಿರ್ವಹಣೆ ಮತ್ತು ವಿದ್ಯುತ್‌ ಭದ್ರತೆ ಮೂಲಕ ಬಲಿಷ್ಠ ಐಟಿ ಕಾರ್ಯಾಚರಣೆಗಳನ್ನು ಖಾತ್ರಿಪಡಿಸಲಾಗುವುದು
  • ನಿಯಮಗಳನ್ನು ಸರಳಗೊಳಿಸಿ, ತಡೆ ರಹಿತ, ಪಾರದರ್ಶಕ ಮತ್ತು ಏಕಗವಾಕ್ಷಿ ಆಡಳಿತ ಸಕ್ರಿಯಗೊಳಿಸಲಾಗುವುದು
  • ಕ್ನೋವರ್ಸ್‌ ಅಂದರೆ ಸಂಯೋಜಿತ ತಂತ್ರಜ್ಞಾನ ಆವರಣಗಳ ಸ್ಥಾಪನೆ ಮತ್ತು ಮುಂಬರುವ ಜಾಗತಿಕ ನಾವೀನ್ಯತಾ ಜಿಲ್ಲೆಗಳಲ್ಲಿ (ಜಿಐಡಿಗಳು) ಇವುಗಳ ಸ್ಥಾಪನೆ ಆಗಲಿದೆ.
  • ರಾಜ್ಯವ್ಯಾಪಿ ಡಿಜಿಟಲ್‌ ಹಬ್ ಗ್ರಿಡ್‌ (ಎಸ್‌ಡಿಎಚ್‌ಜಿ), ಐಟಿ ಪಾರ್ಕ್‌ಗಳು, ಶ್ರೇಷ್ಠತೆಯ ಕೇಂದ್ರಗಳು, ನಾವೀನ್ಯತೆ ಕೇಂದ್ರಗಳು, ಸಂಶೋಧನೆ ಮತ್ತು ಅಭಿವೃದ್ಧಿ ಸೌಲಭ್ಯಗಳನ್ನು ಏಕೀಕರಿಸಲಾಗುವುದು.
  • 1,000 ಮಧ್ಯಮ–ವೃತ್ತಿ ಜೀವನದ ಮಹಿಳಾ ತಂತ್ರಜ್ಞಾನ ವೃತ್ತಿಪರರಿಗೆ ತರಬೇತಿ ನೀಡಲು ಮೀಸಲಾದ ಮಹಿಳಾ ಗ್ಲೋಬಲ್‌ ಟೆಕ್‌ ಮಿಷನ್ಸ್‌ ಫೆಲೋಶಿಪ್‌ ಆರಂಭಿಸಲಾಗುವುದು
  • ಬೆಂಗಳೂರಿನ ಹೊರಗೆ ಇರುವ ಕಂಪನಿಗಳಿಗೆ 16 ಬಗೆಯ ಪ್ರೋತ್ಸಾಹ.

ರಾಜ್ಯಕ್ಕೆ ‘ಸುಪ್ರೀಂ’ ಜಯ

ಸಂದರ್ಭ:ಕಾವೇರಿ ನದಿಗೆ ಅಡ್ಡಲಾಗಿ ಮೇಕೆದಾಟು ಸಮತೋಲನ ಜಲಾಶಯ ನಿರ್ಮಿಸುವ ಕರ್ನಾಟಕ ಸರ್ಕಾರದ ಯೋಜನೆ ವಿರುದ್ಧ ತಮಿಳುನಾಡು ಸರ್ಕಾರ ಸಲ್ಲಿಸಿದ್ದ ಅರ್ಜಿಗಳನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದೆ. ಇದರಿಂದ, ತಮಿಳುನಾಡಿಗೆ ಭಾರಿ ಹಿನ್ನಡೆಯಾಗಿದೆ.

  • ಪ್ರಕರಣದ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಬಿ.ಆರ್.ಗವಾಯಿ, ನ್ಯಾಯಮೂರ್ತಿಗಳಾದ ಕೆ. ವಿನೋದ್‌ ಚಂದ್ರನ್‌ ಹಾಗೂ ಎನ್‌.ವಿ. ಅಂಜಾರಿಯಾ ಪೀಠವು, ‘ಮೇಕೆದಾಟು ಅಣೆಕಟ್ಟೆ ನಿರ್ಮಾಣಕ್ಕೆ ವಿಸ್ತೃತ ಯೋಜನಾ ವರದಿ (ಡಿಪಿಆರ್) ತಯಾರಿಸಲು ಮಾತ್ರ ಕೇಂದ್ರ ಜಲ ಆಯೋಗ (ಸಿಡಬ್ಲ್ಯುಸಿ) ಅನುಮತಿ ನೀಡಿದೆ.
  • ತಮಿಳುನಾಡಿನ ಆಕ್ಷೇಪಣೆ ಗಳನ್ನು ತಜ್ಞರು ಪರಿಶೀಲಿಸಿದ ಬಳಿಕವೇ ಈ ಪ್ರಕ್ರಿಯೆ ನಡೆದಿದೆ. ಈ ಹಂತದಲ್ಲಿ ಇದನ್ನು ಪ್ರಶ್ನಿಸಿ ತಮಿಳುನಾಡು ಅರ್ಜಿ ಸಲ್ಲಿಸಿರುವುದು ಅವಧಿಪೂರ್ವ (ಪ್ರಿಮೆಚೂರ್‌)’ ಎಂದು ಅಭಿಪ್ರಾಯಪಟ್ಟಿದೆ.
  • ‘ತಮಿಳುನಾಡಿನ ಆಕ್ಷೇಪಣೆಗಳನ್ನು ಹಾಗೂ ತಜ್ಞ ಸಂಸ್ಥೆಗಳು, ಕಾವೇರಿ ನೀರು ನಿಯಂತ್ರಣ ಸಮಿತಿ (ಸಿಡಬ್ಲ್ಯುಆರ್‌ಸಿ) ಮತ್ತು ಕಾವೇರಿ ನೀರು ನಿರ್ವಹಣ ಪ್ರಾಧಿಕಾರಗಳ (ಸಿಡಬ್ಲ್ಯುಎಂಎ) ಅಭಿಪ್ರಾಯಗಳನ್ನು ಪರಿಗಣಿಸಿದ ನಂತರವೇ ಆಯೋಗವು ಯೋಜನೆಗೆ ಅನುಮೋದನೆ ನೀಡಲಿದೆ’ ಎಂದು ಪೀಠ ತಿಳಿಸಿದೆ.
  • ‘ನ್ಯಾಯಾಲಯ ಮತ್ತು ಪ್ರಾಧಿಕಾರಗಳ ನಿರ್ದೇಶನಗಳನ್ನು ಅನುಸರಿಸಿ ಕರ್ನಾಟಕ ರಾಜ್ಯವು ಕಾವೇರಿ ನೀರನ್ನು ಹರಿಸಲು ಬದ್ಧವಾಗಿರಬೇಕು. ಒಂದು ವೇಳೆ, ಈ ನ್ಯಾಯಾಲಯದ ನಿರ್ದೇಶನಗಳನ್ನು ಪಾಲಿಸಲು ಕರ್ನಾಟಕ ವಿಫಲವಾದರೆ, ನ್ಯಾಯಾಂಗ ನಿಂದನೆ ಎಸಗಿದ ಅಪಾಯ ಎದುರಿಸಲಿದೆ’ ಎಂದು ಪೀಠ ಎಚ್ಚರಿಸಿದೆ. ಆದಾಗ್ಯೂ, ‘ನ್ಯಾಯಾಲಯದ ಎಲ್ಲ ನಿರ್ದೇಶನಗಳನ್ನು ಪಾಲಿಸಲಾಗಿದೆ. ತಮಿಳುನಾಡು ಎತ್ತಿರುವ ಅನೇಕ ಪ್ರಶ್ನೆಗಳು ಅತಿಯಾದುದು’ ಎಂದು ಕರ್ನಾಟಕ ವಾದಿಸಿದೆ.

ಬಾಹ್ಯಾಕಾಶ: ‘ನಂ 1’ಗೆ ಜಿಗಿತದತ್ತ ನಡೆ

ಸಂದರ್ಭ: ಕರ್ನಾಟಕ ಬಾಹ್ಯಾಕಾಶ ತಂತ್ರಜ್ಞಾನ ನೀತಿ 2025–2030’ ನೀತಿಗೆ ಸಂಪುಟ ಸಭೆ ಒಪ್ಪಿಗೆ: ರಾಜ್ಯದಲ್ಲಿರುವ ಬಾಹ್ಯಾಕಾಶ ವಿಜ್ಞಾನ ಮತ್ತು ತಂತ್ರಜ್ಞಾನ ಪರಿಸರ ವ್ಯವಸ್ಥೆಯನ್ನು ಬಳಸಿಕೊಂಡು ಕರ್ನಾಟಕವನ್ನು ಬಾಹ್ಯಾಕಾಶ ತಂತ್ರಜ್ಞಾನದ ಜಾಗತಿಕ ತಾಣವಾಗಿ ಪರಿವರ್ತಿಸುವ ಉದ್ದೇಶದಕರ್ನಾಟಕ ಬಾಹ್ಯಾಕಾಶ ತಂತ್ರಜ್ಞಾನ ನೀತಿ 2025–2030’ಕ್ಕೂ ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿದೆ.

  • ಬಾಹ್ಯಾಕಾಶ ತಂತ್ರಜ್ಞಾನ ಕ್ಷೇತ್ರದಲ್ಲಿ ರಾಷ್ಟ್ರೀಯ ಮಾರುಕಟ್ಟೆ ಪಾಲಿನ ಶೇ 50 ಅನ್ನು ಹೊಂದುವ ಮೂಲಕ ಕರ್ನಾಟಕ ವನ್ನು ಭಾರತದಲ್ಲಿ ನಂಬರ್‌ 1 ತಾಣವಾಗಿ ಉಳಿಸಿಕೊಳ್ಳುವುದು ಮತ್ತು ಜಾಗತಿಕ ಮಾರುಕಟ್ಟೆ ಪಾಲಿನ ಶೇ 5 ಅನ್ನು ಹೊಂದುವ ಮೂಲಕ ಕರ್ನಾಟಕವನ್ನು ಬಾಹ್ಯಾಕಾಶ ತಂತ್ರಜ್ಞಾನದ ಜಾಗತಿಕ ತಾಣವಾಗಿಸುವುದು ಸರ್ಕಾರದ ಉದ್ದೇಶ.
  • ಜಾಗತಿಕ ಮತ್ತು ದೇಶೀಯ ಬಾಹ್ಯಾಕಾಶ ವಲಯದಿಂದ ಉದ್ಯೋಗ ಪಡೆಯಬಹುದಾದ ಹೆಚ್ಚು ಕೌಶಲಪೂರ್ಣ ಕಾರ್ಯಪಡೆ ರೂ‍ಪಿಸು ವುದು, ಕರ್ನಾಟಕದಲ್ಲಿ ಬಾಹ್ಯಾಕಾಶ ತಂತ್ರಜ್ಞಾನ ಕ್ಷೇತ್ರಕ್ಕೆ ಸಂಬಂಧಿಸಿದ ಕೈಗಾ ರಿಕೆಗಳ ಒಟ್ಟುಗೂಡುವಿಕೆಗೆ ಪ್ರೇರಕ ಶಕ್ತಿ ಯಾಗಿ ಕಾರ್ಯ ನಿರ್ವಹಿಸಲು 50 ಸಾವಿರ ಯುವ ವೃತ್ತಿಪರರು, ವಿದ್ಯಾರ್ಥಿ ಗಳಿಗೆ ತರಬೇತಿ ನೀಡಿಕೌಶಲ ಅಭಿವೃದ್ಧಿಗೆ ಪ್ರೋತ್ಸಾಹ ನೀಡಲಾಗುವುದು.

ಸಂಘರ್ಷ ತಡೆ: 8 ಅಂಶಗಳ ಯೋಜನೆಗೆ ಅಸ್ತು: ಮಾನವ– ವನ್ಯಪ್ರಾಣಿ ಸಂಘರ್ಷ ತಪ್ಪಿಸಲು ಸಿಬ್ಬಂದಿ, ಅನುದಾನ: ಸಿ.ಎಂ

ಸಂದರ್ಭ: ‘ಮಾನವವನ್ಯಪ್ರಾಣಿ ಸಂಘರ್ಷ ತಪ್ಪಿಸಲು ಡ್ರೋನ್ಕ್ಯಾಮರಾ ಗಳ ನಿಗಾ ಹೆಚ್ಚಿಸಬೇಕು. ಕೃಪಾಕರ ಸೇನಾನಿಸಂಜಯ್ ಗುಬ್ಬಿ ಸೇರಿದಂತೆ ತಜ್ಞರ ಜೊತೆ ಚರ್ಚಿಸಿ ವೈಜ್ಞಾನಿಕ ಮಾರ್ಗಗಳನ್ನು ರೂಪಿಸಬೇಕು ಎಂದು ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚನೆ ನೀಡಿದರು.

  • ರಾಜ್ಯ ಮಟ್ಟದ ಸಮಗ್ರ ಮಾನವ- ವನ್ಯಜೀವಿ ಸಂಘರ್ಷ ನಿರ್ವಹಣಾ ಕಾರ್ಯತಂತ್ರಗಳನ್ನು ರೂಪಿಸಲು ಹಾಗೂ ಮುನ್ನೆಚ್ಚರಿಕೆ ಕ್ರಮಗಳ ಕುರಿತು ಚರ್ಚಿಸಲು ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು.‌
  • ‘ವಯಸ್ಸಾದ ಕಾರಣಕ್ಕೆ, ಯುವ ಹುಲಿಗಳ ದಾಳಿಯಿಂದ ಗಾಯಗೊಂಡ ಹಾಗೂ ಇತರೆ ಕಾರಣಗಳಿಂದ ಅರಣ್ಯ ಪ್ರದೇಶದಿಂದ ಹೊರಗೆ ಸಂಚರಿಸುತ್ತಿರುವ 15-20 ಹುಲಿಗಳನ್ನು ಡ್ರೋನ್‌ ಕ್ಯಾಮರಾ ನೆರವಿನಿಂದ ತಕ್ಷಣ ಹಿಡಿಯಲು ಕ್ರಮ ತೆಗೆದುಕೊಳ್ಳಬೇಕು. ಅದಕ್ಕೆ ಅಗತ್ಯವಾದ ಸಿಬ್ಬಂದಿ, ಅನುದಾನ ಸೇರಿ ಎಲ್ಲ ನೆರವು ನೀಡಲಾಗುವುದು’ ಎಂದು ಅವರು ಭರವಸೆ ನೀಡಿದರು.‌
  • ‘ಈಗಾಗಲೇ ಎಂಟು ಕುಮ್ಕಿ ಆನೆಗಳನ್ನು ಕಾರ್ಯಾಚರಣೆಗೆ ಬಳಸಲಾಗುತ್ತಿದ್ದು ಅಗತ್ಯಕ್ಕೆ ತಕ್ಕಂತೆ ಸಿಬ್ಬಂದಿ ಮತ್ತು ಸ್ಕ್ವಾಡ್‌ಗಳ ಸಂಖ್ಯೆಯನ್ನು ಸಂಘರ್ಷ ಪೀಡಿತ ಅರಣ್ಯ ಪ್ರದೇಶದಲ್ಲಿ ಬಳಸಬೇಕು’ ಎಂದೂ ಅವರು ಸೂಚನೆ ನೀಡಿದರು.
  • ಚಾಮರಾಜನಗರ, ಕೊಡಗು, ಹಾಸನ, ಮೈಸೂರು ಹಾಗೂ ರಾಮನಗರ ಜಿಲ್ಲೆಯಲ್ಲಿ ಅತಿ ಹೆಚ್ಚು ಮಾನವ ಪ್ರಾಣ ಹಾನಿ ಪ್ರಕರಣಗಳು ಸಂಭವಿಸಿವೆ. ಕಳೆದ ಮೂರು ವರ್ಷಗಳಿಗೆ ಹೋಲಿಸಿದರೆ 2024-25ರಲ್ಲಿ ಇಂತಹ ಪ್ರಕರಣ ಶೇ 30ರಷ್ಟು ಕಡಿಮೆಯಾಗಿದೆ.
  • ವನ್ಯಜೀವಿಗಳು ಆಹಾರ ಹುಡುಕಿಕೊಂಡು ಕಾಡಿನಿಂದ ಹೊರಗೆ ಬರುವುದನ್ನು ನಿಗ್ರಹಿಸಬೇಕು.‌ ಬೇಸಿಗೆ ಕಾಲದಲ್ಲಿ ವನ್ಯಜೀವಿ ಗಳಿಗೆ ಅರಣ್ಯದೊಳಗೆ ನೀರಿನ ವ್ಯವಸ್ಥೆ ಕಲ್ಪಿಸಬೇಕು. ಅರಣ್ಯದಲ್ಲಿ ವ್ಯಾಪಕವಾಗಿ ಹರಡುವ ಲಂಟಾನ ಕಳೆ ತೆಗೆಯಲು ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು’ ಎಂದು ಮುಖ್ಯಮಂತ್ರಿ ಹೇಳಿದರು.

ಎಂಟು ಅಂಶಗಳು ಯಾವುವು?

l ಮಾನವ– ವನ್ಯಜೀವಿ ಸಂಘರ್ಷದ ಜಾಗ ಗುರುತಿಸಿ, ಯಾವ ಸ್ವರೂಪದ ಸಂಘರ್ಷವೆಂದು ಪಟ್ಟಿ ಮಾಡಬೇಕು

l ಸಂಘರ್ಷದ ತೀವ್ರತೆಯ ಆಧಾರದಲ್ಲಿ ಅಧಿಕಾರಿ, ಸಿಬ್ಬಂದಿಗಳನ್ನು ನಿಯೋಜಿಸಬೇಕು

l  ಅರಣ್ಯದ ಅಂಚಿನ ಗ್ರಾಮಗಳಲ್ಲಿ ಗಸ್ತು ಹೆಚ್ಚಳ, ರಿಜಿಸ್ಟರ್ ನಿರ್ವಹಣೆ

l  ಮಾನವ ವನ್ಯ ಜೀವಿ ಸಂಘರ್ಷ ಇರುವ ಗ್ರಾಮದಲ್ಲಿ ಹಿರಿಯ ಅಧಿಕಾರಿಗಳು ನಿಯಮಿತವಾಗಿ ವಾಸ್ತವ್ಯ ಮಾಡಬೇಕು

l ಅರಣ್ಯದಂಚಿನ ಸ್ಥಳೀಯರನ್ನು ಗುರುತಿಸಿ ‘ಅರಣ್ಯ ಮಿತ್ರ’ ಎಂದು ಪರಿಗಣಿಸಿ ಗಸ್ತು, ವನ್ಯಜೀವಿ, ಸೆರೆ, ಕಾರ್ಯಾಚರಣೆಗೆ ಬಳಸಿಕೊಳ್ಳಬೇಕು

l ವನ್ಯಜೀವಿಗಳು ಸಂಚರಿಸುವ ಕಾರ್ಯತಂತ್ರ ಸ್ಥಳಗಳಲ್ಲಿ 24X7 ವಾಹನ ಮತ್ತು ಅರಣ್ಯ ಸಿಬ್ಬಂದಿ ಲಭ್ಯವಾಗುವಂತೆ ಮಾಡಬೇಕು

l  ವನ್ಯಜೀವಿ ಸೆರೆ, ವನ್ಯಜೀವಿ ದಾಳಿ ಮಾಡಿದಾಗ ಏನು ಮಾಡಬೇಕೆಂಬ ಬಗ್ಗೆ ಮಾಹಿತಿ ನೀಡಲು ಅಣಕು ಪ್ರದರ್ಶನ ಏರ್ಪಡಿಸಬೇಕು

l ಜಿಲ್ಲಾ ಮಟ್ಟದಲ್ಲಿ ಸಮನ್ವಯ, ಸಹಯೋಗ ಸಮಿತಿ, ತಾಲ್ಲೂಕು ಮಟ್ಟದಲ್ಲಿ ಉಪಸಮಿತಿ ರಚಿಸಬೇಕು

ವನ್ಯಪ್ರಾಣಿ ಹಾವಳಿ 200 ಜೀವಹಾನಿ

  • ಕರ್ನಾಟಕದಲ್ಲಿ 6,395 ಆನೆಗಳಿದ್ದು, ಆನೆಗಳ ಸಂಖ್ಯೆಯಲ್ಲಿ ರಾಜ್ಯವು ದೇಶದಲ್ಲಿ ಮೊದಲ ಸ್ಥಾನದಲ್ಲಿದೆ. 563 ಹುಲಿಗಳಿದ್ದು, ದೇಶದಲ್ಲಿ ಎರಡನೇ ಸ್ಥಾನದಲ್ಲಿದೆ. 1,879 ಚಿರತೆಗಳಿದ್ದು ದೇಶದಲ್ಲಿ ಮೂರನೇ ಸ್ಥಾನದಲ್ಲಿದೆ.
  • ರಾಜ್ಯದಲ್ಲಿ ವನ್ಯಪ್ರಾಣಿಗಳ ಹಾವಳಿಯಿಂದ 2022-23ರಲ್ಲಿ 57, 2023-24ರಲ್ಲಿ 65, 2024-25ರಲ್ಲಿ 46, 2025-26ರಲ್ಲಿ 32 ಮಾನವ ಜೀವಹಾನಿ ಸಂಭವಿಸಿದೆ.

ಗಣಿಗಾರಿಕೆಗೆ ‘ಸುಪ್ರೀಂ’ ನಿಷೇಧ: ರಾಷ್ಟ್ರೀಯ ಉದ್ಯಾನಗಳ 1 ಕಿ.ಮೀ. ವ್ಯಾಪ್ತಿಯಲ್ಲಿ ನಿರ್ಬಂಧ

ಸಂದರ್ಭ: ರಾಷ್ಟ್ರೀಯ ಉದ್ಯಾನಗಳು ಮತ್ತು ವನ್ಯಜೀವಿ ಅಭಯಾರಣ್ಯಗಳ ಒಂದು ಕಿ.ಮೀ. ವ್ಯಾಪ್ತಿಯಲ್ಲಿ ಗಣಿಗಾರಿಕೆ ಚಟುವಟಿಕೆ ನಡೆಸುವುದನ್ನು ಸುಪ್ರೀಂ ಕೋರ್ಟ್ ನಿಷೇಧಿಸಿದೆ.

  • ‘ರಾಷ್ಟ್ರೀಯ ಉದ್ಯಾನಗಳು ಹಾಗೂ ಅಭಯಾರಣ್ಯಗಳ ಒಳಗೆ ಮತ್ತು ಅಂತಹ ಸಂರಕ್ಷಿತ ಪ್ರದೇಶಗಳ ಗಡಿಯಿಂದ ಒಂದು ಕಿ.ಮೀ. ವ್ಯಾಪ್ತಿಯಲ್ಲಿ ಗಣಿಗಾರಿಕೆಯನ್ನು ಅನುಮತಿಸಬಾರದು ಎಂದು ನಾವು ನಿರ್ದೇಶಿಸುತ್ತೇವೆ’ ಎಂಬುದಾಗಿ ಮುಖ್ಯ ನ್ಯಾಯಮೂರ್ತಿ ಬಿ.ಆರ್‌.ಗವಾಯಿ ಮತ್ತು ನ್ಯಾಯಮೂರ್ತಿಗಳಾದ ಕೆ.ವಿನೋದ ಚಂದ್ರನ್ ಅವರ ಪೀಠ ಹೇಳಿದೆ.
  • ‘ಸಂರಕ್ಷಿತ ಪ್ರದೇಶದ ಒಂದು ಕಿ.ಮೀ ವ್ಯಾಪ್ತಿಯೊಳಗೆ ಗಣಿಗಾರಿಕೆ ಚಟುವಟಿಕೆಗಳು ವನ್ಯಜೀವಿಗಳಿಗೆ ಅಪಾಯಕಾರಿ ಎಂಬುದನ್ನು ಈ ನ್ಯಾಯಾಲಯ ಮನಗಂಡಿದೆ.
  • ಈ ಹಿಂದೆ ಗೋವಾ ಫೌಂಡೇಶನ್ ಪ್ರಕರಣದಲ್ಲಿ, ಗೋವಾ ರಾಜ್ಯಕ್ಕೆ ಸಂಬಂಧಿಸಿದಂತೆ ಇದೇ ರೀತಿಯ ನಿರ್ದೇಶನಗಳನ್ನು ನೀಡಲಾಗಿದೆ. ಇದೀಗ ಇಡೀ ದೇಶಕ್ಕೆ ಅನ್ವಯವಾಗುವಂತೆ ಅಂತಹ ನಿರ್ದೇಶನ ನೀಡುತ್ತಿದ್ದೇವೆ’ ಎಂದಿತು.
  • ಜಾರ್ಖಂಡ್‌ನ ಸಾರಂಡಾ ಅಭಯಾರಣ್ಯ ಮತ್ತು ಸಾಸಂಗದಾಬುರು ಅರಣ್ಯ ಪ್ರದೇಶ ಗಳನ್ನು ಮೀಸಲು ಅರಣ್ಯ ಪ್ರದೇಶವಾಗಿ ಘೋಷಿಸುವ ಅಧಿಸೂಚನೆಗೆ ಸಂಬಂಧಿಸಿದ ಅರ್ಜಿಗಳ ಕುರಿತು ಸುಪ್ರೀಂ ಕೋರ್ಟ್‌ ವಿಚಾರಣೆ ನಡೆಸುತ್ತಿದೆ. ಈ ಪ್ರದೇಶಗಳನ್ನು ವನ್ಯಜೀವಿ ಅಭಯಾರಣ್ಯವೆಂದು ಘೋಷಿಸುವಂತೆ ಸುಪ್ರೀಂ ಕೋರ್ಟ್, ಜಾರ್ಖಂಡ್ ಸರ್ಕಾರಕ್ಕೆ ನಿರ್ದೇಶನ ನೀಡಿದೆ.
  • ಅರಣ್ಯ ಹಕ್ಕುಗಳ ಕಾಯ್ದೆಯಡಿ ಈ ಪ್ರದೇಶದ ಬುಡಕಟ್ಟು ಜನರು ಮತ್ತು ಅರಣ್ಯವಾಸಿಗಳ ಹಕ್ಕುಗಳನ್ನು ರಕ್ಷಿಸಬೇಕು ಎಂದು ಸ್ಪಷ್ಟಪಡಿಸಿದ ನ್ಯಾಯಾಲಯ, ಈ ಬಗ್ಗೆ ವ್ಯಾಪಕ ಪ್ರಚಾರ ನೀಡುವಂತೆ ಜಾರ್ಖಂಡ್ ಸರ್ಕಾರಕ್ಕೆ ಸೂಚಿಸಿದೆ.

‘ಬಡ್ಡಿ ದರ ಕಡಿಮೆ ಮಟ್ಟದಲ್ಲಿರಲಿ’

ಸಂದರ್ಭ: ಹಣಕಾಸಿನ ಒಳಗೊಳ್ಳುವಿಕೆಯನ್ನು ಹೆಚ್ಚಿಸಲು ಕಿರು ಹಣಕಾಸು ಸಂಸ್ಥೆಗಳು ತಮ್ಮ ಬಡ್ಡಿ ದರವನ್ನು ಕೈಗೆಟಕುವ ಮಟ್ಟದಲ್ಲಿ ಇರಿಸಬೇಕು ಎಂದು ಕೇಂದ್ರ ಹಣಕಾಸು ಸೇವೆಗಳ ಇಲಾಖೆಯ ಕಾರ್ಯದರ್ಶಿ ಹೇಳಿದ್ದಾರೆ.

  • ‘ಕೆಲವು ಕಿರು ಹಣಕಾಸು ಸಂಸ್ಥೆಗಳು ಅಸಹನೀಯ ಮಟ್ಟದಲ್ಲಿ ಬಡ್ಡಿ ದರವನ್ನು ನಿಗದಿ ಮಾಡಿರುವುದನ್ನು ನಾನು ನೋಡಿದ್ದೇನೆ. ಇದಕ್ಕೆ ಕಾರಣ ಆ ಕಿರು ಹಣಕಾಸು ಸಂಸ್ಥೆಗಳಲ್ಲಿನ ಅಸಾಮರ್ಥ್ಯ’ ಅವರು ಕಾರ್ಯಕ್ರಮವೊಂದರಲ್ಲಿ ಹೇಳಿದ್ದಾರೆ.
  • ಕಿರು ಹಣಕಾಸು ಸಂಸ್ಥೆಗಳು ವೆಚ್ಚಗಳಲ್ಲಿ ದಕ್ಷತೆಯನ್ನು, ಹೆಚ್ಚಿನ ಉತ್ಪಾದಕತೆಯನ್ನು ಸಾಧಿಸಲು ವಿಫಲವಾದ ಕಾರಣಕ್ಕೆ ಹೆಚ್ಚಿನ ಬಡ್ಡಿ ದರ ವಸೂಲಿ ಮಾಡುತ್ತಿರಬಹುದು ಎಂದು ಅವರು ಹೇಳಿದ್ದಾರೆ.
  • ಸಂಸ್ಥೆಗಳು ವೆಚ್ಚಗಳಲ್ಲಿ ದಕ್ಷತೆಯನ್ನು ಸಾಧಿಸಬೇಕು, ಹೆಚ್ಚಿನ ಉತ್ಪಾದಕತೆ ಸಾಧಿಸಬೇಕು. ಅದರ ಮೂಲಕ ಸಾಲಗಾರರಿಗೆ ಕಡಿಮೆ ಬಡ್ಡಿ ದರಕ್ಕೆ ಸಾಲ ನೀಡುವಂತೆ ಆಗಬೇಕು ಎಂದು ಕಿವಿಮಾತು ಹೇಳಿದ್ದಾರೆ.
  • ಹಣದ ಅಗತ್ಯ ತೀವ್ರವಾಗಿ ಇರುವವರು ಹೆಚ್ಚಿನ ಬಡ್ಡಿ ದರಕ್ಕೆ ಸಾಲ ಪಡೆಯಬಹುದು. ಆದರೆ ಅವರಿಗೆ ಆ ಸಾಲವನ್ನು ಮರುಪಾವತಿಸಲು ಆಗುವುದಿಲ್ಲ. ಇದರ ಪರಿಣಾಮವು ಹಣಕಾಸು ವ್ಯವಸ್ಥೆಯ ಮೇಲೆ ಆಗುತ್ತದೆ ಎಂದು ಅವರು ತಿಳಿಸಿದ್ದಾರೆ.
  • ಕಿರು ಹಣಕಾಸು ಸಂಸ್ಥೆಗಳು ದೇಶದಲ್ಲಿ ಹಣಕಾಸಿನ ಒಳಗೊಳ್ಳುವಿಕೆಯನ್ನು ಸಾಧಿಸಲು ಬಹಳ ಮುಖ್ಯ. ಈ ಸಂಸ್ಥೆಗಳು ಮನೆಬಾಗಿಲಿಗೆ ತೆರಳಿ ಸಾಲ ನೀಡುವ ಕಾರಣದಿಂದಾಗಿ ಇವು ಮಹಿಳೆಯರ ಸಬಲೀಕರಣಕ್ಕೂ ಬಹಳ ಅಗತ್ಯ ಎಂದು ಅವರು ಹೇಳಿದ್ದಾರೆ.
  • ‘ಹಣಕಾಸಿನ ಒಳಗೊಳ್ಳುವಿಕೆಯ ವ್ಯಾಪ್ತಿಗೆ ನಾವು ಇನ್ನೂ ಅಂದಾಜು 35 ಕೋಟಿಯಷ್ಟು ಯುವಕರನ್ನು ತರಬೇಕಿದೆ. ಸರ್ಕಾರ ರೂಪಿಸಿರುವ ಯೋಜನೆಗಳು ಹಲವಿದ್ದರೂ, ದೇಶದ ಜನಸಂಖ್ಯೆಯಲ್ಲಿ ದೊಡ್ಡ ವರ್ಗವೊಂದು ಹಣಕಾಸಿನ ಒಳಗೊಳ್ಳುವಿಕೆಯ ತೆಕ್ಕೆಗೆ ಬಂದಿಲ್ಲ. ಈ ಬಗ್ಗೆ ಕಿರು ಹಣಕಾಸು ಸಂಸ್ಥೆಗಳು ಆದ್ಯತೆ ನೀಡಬೇಕು’ ಎಂದು ಅವರು ಕರೆ ನೀಡಿದ್ದಾರೆ.

ಗ್ರಾಮೀಣ ಪ್ರದೇಶದವರಿಗೆ ಪ್ರತ್ಯೇಕ ಕ್ರೆಡಿಟ್ ಅಂಕ: ನಬಾರ್ಡ್

ಸಂದರ್ಭ: ನಬಾರ್ಡ್‌ ಅಧ್ಯಕ್ಷ ಶಾಜಿ ಕೆ.ವಿ., ‘ನಾವು ಸ್ವಸಹಾಯ ಸಂಘಗಳ ವ್ಯವಸ್ಥೆಯ ಡಿಜಿಟಲೀಕರಣದಲ್ಲಿ ತೊಡಗಿದ್ದೇವೆ. ಗ್ರಾಮೀಣ ಪ್ರದೇಶದವರಿಗಾಗಿ ಕ್ರೆಡಿಟ್‌ ಅಂಕ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸುತ್ತಿದ್ದೇವೆ’ ಎಂದು ಹೇಳಿದ್ದಾರೆ.

  • ‘ಕಡುಬಡವರ ಜೊತೆ ಕೆಲಸ ಮಾಡುತ್ತಿರುವ ಕೆಲವು ಕಿರು ಹಣಕಾಸು ಸಂಸ್ಥೆಗಳ ಜೊತೆ ಸೇರಿ ನಾವು ಗ್ರಾಮೀಣ ಪ್ರದೇಶದವರಿಗೆ ನೀಡುವ ಕ್ರೆಡಿಟ್ ಅಂಕದ ವಿಚಾರವಾಗಿ ಒಂದಿಷ್ಟು ಪ್ರಾಯೋಗಿಕ ಕೆಲಸ ಮಾಡುತ್ತಿದ್ದೇವೆ’ ಎಂದರು.
  • ಕೇಂದ್ರದ 2025–26ನೇ ಸಾಲಿನ ಬಜೆಟ್‌ನಲ್ಲಿ ‘ಗ್ರಾಮೀಣ ಕ್ರೆಡಿಟ್‌ ಅಂಕ’ದ ಬಗ್ಗೆ ಪ್ರಸ್ತಾವ ಇದೆ. ಗ್ರಾಮೀಣ ಪ್ರದೇಶಗಳ ಜನರಿಗಾಗಿ ಹಾಗೂ ಸ್ವಸಹಾಯ ಸಂಘಗಳ ಸದಸ್ಯರಿಗಾಗಿ ಕ್ರೆಡಿಟ್ ಅಂಕಗಳ ಚೌಕಟ್ಟೊಂದನ್ನು ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳ ಜೊತೆ ಸೇರಿ ಅಭಿವೃದ್ಧಿಪಡಿಸುವ ಘೋಷಣೆ ಇದು.
  • ಈಗ ಚಾಲ್ತಿಯಲ್ಲಿರುವ ಕ್ರೆಡಿಟ್ ಅಂಕ ನೀಡುವ ವ್ಯವಸ್ಥೆಯು ಎಲ್ಲರಿಗೂ ಒಂದೇ ಬಗೆಯ ನಿಯಮ ಅನ್ವಯ ಮಾಡುತ್ತದೆ, ಅದು ಗ್ರಾಮೀಣ ಪ್ರದೇಶದವರ ಅಗತ್ಯಗಳನ್ನು ಗಮನದಲ್ಲಿ ಇಟ್ಟುಕೊಂಡಿಲ್ಲ.
  • ಸ್ವಸಹಾಯ ಸಂಘಗಳ ಸದಸ್ಯರು ಹಾಗೂ ಗ್ರಾಮೀಣ ಪ್ರದೇಶದ ಜನರು ಸಾಲಕ್ಕೆ ಅರ್ಜಿ ಸಲ್ಲಿಸಿದಾಗ, ಅದರ ಬಗ್ಗೆ ಸೂಕ್ತವಾದ ತೀರ್ಮಾನ ತೆಗೆದುಕೊಳ್ಳಲು ಸಹಾಯ ಆಗುವಂತೆ ಗ್ರಾಮೀಣ ಕ್ರೆಡಿಟ್ ಅಂಕ ವ್ಯವಸ್ಥೆ ಯನ್ನು ರೂಪಿಸಲಾಗುತ್ತದೆ. ಆಗ ಸ್ವಸಹಾಯ ಸಂಘಗಳ ಸದಸ್ಯರಿಗೆ, ಗ್ರಾಮೀಣ ಪ್ರದೇಶದ ಜನರಿಗೆ, ರೈತರಿಗೆ, ದುರ್ಬಲ ವರ್ಗಗಳ ಜನರಿಗೆ ಹಣಕಾಸು ಸಂಸ್ಥೆಗಳಿಂದ ಸಾಲ ಸಿಗುವ ಪ್ರಕ್ರಿಯೆಯಲ್ಲಿ ಸುಧಾರಣೆ ಸಾಧ್ಯವಾಗುತ್ತದೆ ಎಂದು ನಿರೀಕ್ಷಿಸಲಾಗಿದೆ.

‘ಸಂಪುಟದ ನಿರ್ಧಾರದಿಂದ ರಫ್ತುದಾರರಿಗೆ ಅನುಕೂಲ’

ಸಂದರ್ಭ: ದೇಶದ ರಫ್ತು ವಲಯಕ್ಕೆ ಉತ್ತೇಜನ ನೀಡಲು ಕೇಂದ್ರ ಸರ್ಕಾರ ₹45 ಸಾವಿರ ಕೋಟಿ ವೆಚ್ಚದ ಎರಡು ಯೋಜನೆಗಳಿಗೆ ಅನುಮೋದನೆ ನೀಡಿರುವುದರಿಂದ ದೇಶದ ರಫ್ತು ವಲಯ ಸದೃಢಗೊಳ್ಳಲಿದೆ ಮತ್ತು ಜಾಗತಿಕ ಮಾರುಕಟ್ಟೆಯಲ್ಲಿ ದೇಶದ ರಫ್ತು ವಲಯದ ಸ್ಪರ್ಧಾತ್ಮಕತೆ ಹೆಚ್ಚಲಿದೆ ಎಂದು ರಫ್ತುದಾರರು ಹೇಳಿದ್ದಾರೆ.

  • ರಫ್ತು ಉತ್ತೇಜನಾ ಮಿಷನ್‌ಗೆ ₹25,060 ಕೋಟಿ ಮತ್ತು ಸಾಲ ಖಾತರಿ ಯೋಜನೆಗೆ ₹20 ಸಾವಿರ ಕೋಟಿ ಮೊತ್ತ ವಿನಿಯೋಗಿಸಲು ಕೇಂದ್ರ ಸಚಿವ ಸಂಪುಟವು ಒಪ್ಪಿದೆ. ಈ ಯೋಜನೆಗಳಿಂದ ಉದ್ಯಮಗಳಿಗೆ ಸಾಲವು ಕೈಗೆಟಕುವಂತಾಗಲಿದೆ ಎಂದು ರಫ್ತುದಾರರು ತಿಳಿಸಿದ್ದಾರೆ.
  • ‘ಸರ್ಕಾರದ ಈ ಕ್ರಮವು ಅತಿಸಣ್ಣ, ಸಣ್ಣ ಮತ್ತು ಮಧ್ಯಮ ಪ್ರಮಾಣದ ಉದ್ದಿಮೆಗಳು (ಎಂಎಸ್ಎಂಇ), ಮೊದಲ ಬಾರಿಗೆ ರಫ್ತು ಮಾಡುವವರ ಕೈ ಬಲಪಡಿಸುವ ಉದ್ದೇಶ ಹೊಂದಿದೆ’ ಎಂದು ಭಾರತೀಯ ಕೈಗಾರಿಕಾ ಒಕ್ಕೂಟದ (ಸಿಐಐ) ರಫ್ತು ವಿಭಾಗದ ರಾಷ್ಟ್ರೀಯ ಸಮಿತಿಯ ಅಧ್ಯಕ್ಷ ಹೇಳಿದ್ದಾರೆ.
  • ‘ಕೇಂದ್ರ ಸರ್ಕಾರ ಈ ಯೋಜನೆಗಳಿಗೆ ಒಪ್ಪಿಗೆ ನೀಡಿರುವುದರಿಂದ ಉದ್ಯಮಗಳಿಗೆ ಹಣಕಾಸಿನ ನೆರವು ದೊರೆಯಲಿದೆ. ದೇಶದ ರಫ್ತು ವ್ಯವಸ್ಥೆ ಸದೃಢಗೊಳ್ಳಲಿದ್ದು, ಅಗಾಧ ಪ್ರಮಾಣದಲ್ಲಿ ಉದ್ಯೋಗ ಸೃಷ್ಟಿ ಆಗಲಿದೆ’ ಎಂದು ಸಿದ್ಧ ಉಡುಪು ರಫ್ತು ಉತ್ತೇಜನ ಮಂಡಳಿಯ (ಎಇಪಿಸಿ) ಉಪಾಧ್ಯಕ್ಷ ಹೇಳಿದ್ದಾರೆ.

ಜವಳಿ ಉತ್ಪನ್ನಗಳ ರಫ್ತು ಏರಿಕೆ

ಸಂದರ್ಭ: ಪ್ರಸಕ್ತ ಆರ್ಥಿಕ ವರ್ಷದ ಏಪ್ರಿಲ್ನಿಂದ ಸೆಪ್ಟೆಂಬರ್ವರೆಗೆ 111 ದೇಶಗಳಿಗೆ ಭಾರತದಿಂದ ಆಗಿರುವ ಜವಳಿ ಉತ್ಪನ್ನಗಳ ರಫ್ತು ಶೇ 10ರಷ್ಟು ಏರಿಕೆ ಆಗಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.

  • ಕಳೆದ ಆರ್ಥಿಕ ವರ್ಷದ ಮೊದಲ ಆರು ತಿಂಗಳಿನಲ್ಲಿ ದೇಶದ ಜವಳಿ ಉತ್ಪನ್ನಗಳ ರಫ್ತು ಹಣಕಾಸಿನ ಮೌಲ್ಯದಲ್ಲಿ ₹68,453 ಕೋಟಿಯಷ್ಟಾಗಿತ್ತು. ಈ ಬಾರಿ ಅದು ₹75,291 ಕೋಟಿಯಷ್ಟಾಗಿದೆ. ಜಾಗತಿಕ ಮಟ್ಟದಲ್ಲಿ ಉಂಟಾಗಿದ್ದ ಅನಿಶ್ಚಿತತೆ, ಸುಂಕ ಸಂಬಂಧಿತ ಸವಾಲುಗಳ ನಡುವೆಯೂ ದೇಶದ ಜವಳಿ ರಫ್ತು ಮೌಲ್ಯ ಹೆಚ್ಚಳವಾಗಿದೆ ಎಂದು ತಿಳಿಸಿದೆ.
  • ಒಟ್ಟಾರೆ ದೇಶದ ಜವಳಿ ಉತ್ಪನ್ನಗಳು, ಸಿದ್ಧ ಉಡುಪುಗಳ ಜಾಗತಿಕ ರಫ್ತು ಪ್ರಮಾಣ ಕಳೆದ ಆರ್ಥಿಕ ವರ್ಷದ ಇದೇ ಅವಧಿಗೆ ಹೋಲಿಸಿದರೆ ಈ ಬಾರಿ ಶೇ 0.1ರಷ್ಟು ಏರಿಕೆಯಾಗಿದೆ ಎಂದು ಹೇಳಿದೆ.
  • ಹಾಂಗ್‌ಕಾಂಗ್‌ಗೆ ದೇಶದ ರಫ್ತು ಶೇ 69ರಷ್ಟು ಹೆಚ್ಚಳವಾಗಿದೆ. ಈಜಿಪ್ಟ್‌, ಸೌದಿ ಅರೇಬಿಯಾ, ಯುಎಇ, ಬ್ರಿಟನ್, ಜಪಾನ್, ಜರ್ಮನಿ, ಸ್ಪೇನ್‌ ಮತ್ತು ಫ್ರಾನ್ಸ್‌ಗೆ ರಫ್ತು ಸಕಾರಾತ್ಮಕ ಬೆಳವಣಿಗೆ ದಾಖಲಿಸಿದೆ. ಜವಳಿ ಉತ್ಪನ್ನಗಳ ಒಟ್ಟು ರಫ್ತು ಶೇ 3.42ರಷ್ಟು ಮತ್ತು ಸೆಣಬು ಶೇ 5.56ರಷ್ಟು ಏರಿಕೆ ಆಗಿದೆ ಎಂದು ತಿಳಿಸಿದೆ.

ಓಪನ್‌ಎಐ-ಫೋನ್‌ಪೇ ಪಾಲುದಾರಿಕೆ

ಸಂದರ್ಭ: ದೇಶದ ಹಣಕಾಸು ತಂತ್ರಜ್ಞಾನ ಕಂಪನಿಫೋನ್ಪೇ ತನ್ನ ಬಳಕೆದಾರರಿಗೆ ಚಾಟ್ಜಿಪಿಟಿ ಸೌಲಭ್ಯಗಳನ್ನು ಕಲ್ಪಿಸಲು ಅಮೆರಿಕದ ಕೃತಕ ಬುದ್ಧಿಮತ್ತೆ ತಂತ್ರಜ್ಞಾನ (.) ಕಂಪನಿ ಓಪನ್ಎಐ ಜೊತೆ ಪಾಲುದಾರಿಕೆ ಮಾಡಿಕೊಂಡಿದೆ.

  • ಫೋನ್‌ಪೇ ಗ್ರಾಹಕರ ಆ್ಯಪ್‌ ಮತ್ತು ಫೋನ್‌ಪೇ ಬಿಸಿನೆಸ್‌ ಆ್ಯಪ್‌ ಮೂಲಕವೇ ‘ಚಾಟ್‌ಜಿಪಿಟಿ’ಯ ಆಧುನಿಕ ಎ.ಐ ಸೌಲಭ್ಯವನ್ನು ಬಳಕೆದಾರರು ಪಡೆದುಕೊಳ್ಳ ಬಹುದು ಎಂದು ಕಂ‍ಪನಿ ತಿಳಿಸಿದೆ.
  • ಇದು ಬಳಕೆದಾರರಿಗೆ ಪ್ರವಾಸದ ಯೋಜನೆ ರೂಪಿಸುವುದರಿಂದ ಆರಂಭಿಸಿ ಶಾಪಿಂಗ್‌ ನಡೆಸುವುದರವರೆಗಿನ ದಿನನಿತ್ಯದ ಅಗತ್ಯಗಳಿಗೆ ಸಂಬಂಧಿಸಿದ ಎಲ್ಲ ಮಾಹಿತಿಯನ್ನು ಒದಗಿಸುತ್ತದೆ ಎಂದು ತಿಳಿಸಿದೆ.

ಸೆಸ್‌ ಪ್ರಸ್ತಾವ ಒಪ್ಪದ ಆರ್ಥಿಕ ಇಲಾಖೆ

ಸಂದರ್ಭ: ಅಸಂಘಟಿತ ಕಾರ್ಮಿಕರ ಕಲ್ಯಾಣಕ್ಕಾಗಿ ಪ್ರತಿ ಲೀಟರ್ಪೆಟ್ರೋಲ್, ಡೀಸೆಲ್ಮೇಲೆ ₹1 ಸೆಸ್ವಿಧಿಸುವ ಕಾರ್ಮಿಕ ಇಲಾಖೆಯು ಆರ್ಥಿಕ ಇಲಾಖೆಗೆಪ್ರಸ್ತಾವ ಸಲ್ಲಿಸಿದೆ.

  • ಆದರೆ, ಈ ‍ಪ್ರಸ್ತಾವ ಅನುಷ್ಠಾನಕ್ಕೆ ಸೂಕ್ತವಾಗಿಲ್ಲ ಎಂದು ಹೇಳಿರುವ ಆರ್ಥಿಕ ಇಲಾಖೆ, ಪ್ರಸ್ತಾವವನ್ನು ತಿರಸ್ಕರಿಸಿದೆ.
  • ‘ಅಸಂಘಟಿತ ವಲಯದಲ್ಲಿ ಸುಮಾರು 1.30 ಕೋಟಿ ಕಾರ್ಮಿಕರು ಇದ್ದಾರೆ. ಇಂತಹ ಕಾರ್ಮಿಕರ ಕಲ್ಯಾಣ ಹಾಗೂ ಅವರಿಗೆ ಉಚಿತ ಆರೋಗ್ಯ ಸೇವೆ ಒದಗಿಸಲು ದೊಡ್ಡ ಮೊತ್ತದ ಸಂಪನ್ಮೂಲದ ಅಗತ್ಯವಿದೆ. ಪೆಟ್ರೋಲ್‌, ಡೀಸೆಲ್‌ ಮತ್ತು ಎಥೆನಾಲ್‌ ಮೇಲೆ ಸೆಸ್‌ ವಿಧಿಸುವುದರಿಂದ ವಾರ್ಷಿಕ ಸುಮಾರು ₹2,120 ಕೋಟಿ ಸಂಗ್ರಹವಾಗುತ್ತದೆ. ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಯೋಜನೆಗಳಾದ ಆರೋಗ್ಯ ಸೌಲಭ್ಯ, ಅಪಘಾತ ಪರಿಹಾರ, ಮಕ್ಕಳ ಶಿಕ್ಷಣಕ್ಕೆ ನೆರವು ನೀಡಲು ಬಳಸಲಾಗುವುದು’ ಎಂದು ಮುಖ್ಯಮಂತ್ರಿಗೆ ಸಲ್ಲಿಸಿದ ಪ್ರಸ್ತಾವದಲ್ಲಿ ಕಾರ್ಮಿಕ ಸಚಿವ ಸಂತೋಷ್‌ ಲಾಡ್‌ ವಿವರಿಸಿದ್ದಾರೆ.
  • ‘ಅಸಂಘಟಿತ ವಲಯಕ್ಕೆ ಪ್ರತ್ಯೇಕ ಸೆಸ್‌ ಸಂಗ್ರಹಿಸಿದರೆ ಆರೋಗ್ಯ ಸೌಲಭ್ಯಕ್ಕೆ ₹1,772 ಕೋಟಿ ವಿನಿಯೋಗಿಸಲಾಗು ವುದು. ಉಳಿದ ಹಣವನ್ನು 62 ಲಕ್ಷ ಕಾರ್ಮಿಕ ಕುಟುಂಬಗಳ ಕಲ್ಯಾಣ ಕಾರ್ಯಗಳಿಗೆ ಬಳಸಲಾಗುವುದು. ಮೃತ ಕಾರ್ಮಿಕರ ಅಂತ್ಯ ಸಂಸ್ಕಾರಕ್ಕೂ ಹಣ ನೀಡಲಾಗುವುದು’ ಎಂದು ಲಾಡ್‌ ಹೇಳಿದ್ದಾರೆ.

‘ಕೈಗಾರಿಕಾ ಕಾರಿಡಾರ್ ಅಭಿವೃದ್ಧಿ’

ಸಂದರ್ಭ: ಕರ್ನಾಟಕದ ಒಂಬತ್ತು ಜಿಲ್ಲೆಗಳನ್ನು ಒಳಗೊಂಡ ರಾಷ್ಟ್ರೀಯ ಕೈಗಾರಿಕಾ ಕಾರಿಡಾರ್ ಅಭಿವೃದ್ಧಿ ಯೋಜನೆ ಅನುಷ್ಠಾನಗೊಳಿಸಬೇಕೆಂದು ಕೋರಿ ಕೇಂದ್ರದ ಬೃಹತ್ಕೈಗಾರಿಕೆ ಮತ್ತು ಉಕ್ಕು ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು ಕೇಂದ್ರದ ವಾಣಿಜ್ಯ ಮತ್ತು ಕೈಗಾರಿಕೆ ಸಚಿವ ಪೀಯೂಷ್ಗೋಯಲ್ಅವರೊಂದಿಗೆ ಚರ್ಚೆ ನಡೆಸಿದರು.

  • ಮಂಡ್ಯ, ಮೈಸೂರು, ಚಾಮರಾಜನಗರ, ಕೋಲಾರ, ಹಾಸನ, ದಕ್ಷಿಣ ಕನ್ನಡ, ಹುಬ್ಬಳ್ಳಿ-ಧಾರವಾಡ, ರಾಯಚೂರು ಮತ್ತು ಬೀದರ್ ಜಿಲ್ಲೆಗಳನ್ನು ಒಳಗೊಂಡ ರಾಷ್ಟ್ರೀಯ ಕೈಗಾರಿಕಾ ಕಾರಿಡಾರ್ ಅಭಿವೃದ್ಧಿ ಯೋಜನೆ ಅನುಷ್ಠಾನ ಮಾಡಬೇಕೆಂದು ಕೋರಿದರು.
  • ಪ್ರಾದೇಶಿಕ ಕೈಗಾರಿಕಾ ಬೆಳವಣಿಗೆ ಬಲಪಡಿಸಿ ಉತ್ತೇಜಿಸಲು, ಸಾಗಾಣಿಕೆಯ ಮೂಲಸೌಕರ್ಯ ಅಭಿವೃದ್ಧಿಪಡಿಸಲು ಹಾಗೂ ಕರ್ನಾಟಕದ ಉದ್ದಗಲಕ್ಕೂ ಬೃಹತ್ ಪ್ರಮಾಣದಲ್ಲಿ ಉದ್ಯೋಗಾವಕಾಶ ಸೃಷ್ಟಿಸಲು ಈ ಯೋಜನೆಯು ಬಹುದೊಡ್ಡ ಮಟ್ಟದಲ್ಲಿ ಕೊಡುಗೆ ನೀಡುತ್ತದೆ ಎಂಬ ಅಂಶವನ್ನು ಸಚಿವ ಗೋಯಲ್ ಅವರಿಗೆ ಮನವರಿಕೆ ಮಾಡಿಕೊಡಲಾಯಿತು. ನನ್ನ ಪ್ರಸ್ತಾವನೆಗೆ ಅವರು ಸಕಾರಾತ್ಮಕವಾಗಿ ಸ್ಪಂದಿಸಿದರು. ರಾಜ್ಯದ ಕೈಗಾರಿಕಾಭಿವೃದ್ಧಿಗೆ ಕೈಜೋಡಿಸುವುದಾಗಿ ಭರವಸೆ ನೀಡಿದರು ಎಂದು ಕುಮಾರಸ್ವಾಮಿ ಮಾಹಿತಿ ನೀಡಿದರು.
  • ಈ ಯೋಜನೆ ಅನುಷ್ಠಾನಕ್ಕೆ ಬಂದರೆ ಸಾಗಾಣಿಕೆ ಸುಲಭ ವಾಗಿ ಕೈಗಾರಿಕಾಭಿವೃದ್ಧಿ ವೇಗಗತಿಯಲ್ಲಿ ಸಾಗುತ್ತದೆ. ಉದ್ದೇಶಿತ ಜಿಲ್ಲೆಗಳಲ್ಲಿ ಯೋಜನೆ ಬಂದರೆ ಇಡೀ ರಾಜ್ಯಕ್ಕೆ ಸಮಗ್ರವಾಗಿ ಅನುಕೂಲ ಆಗುತ್ತದೆ. ಮುಖ್ಯವಾಗಿ ಈ ಪ್ರದೇಶಗಳು ಸಾಮೂಹಿಕವಾಗಿ ದೊಡ್ಡ ಮಟ್ಟದಲ್ಲಿ ಕೈಗಾರಿಕಾ ಅಭಿವೃದ್ಧಿ ಕಾಣುವುದಲ್ಲದೆ, ಸಮತೋಲಿತ ಪ್ರಾದೇಶಿಕ ಬೆಳವಣಿಗೆಗೆ ಕಾಣಿಕೆ ನೀಡುತ್ತವೆ ಎಂದು ಕುಮಾರಸ್ವಾಮಿ ತಿಳಿಸಿದರು.
  • ಭಾರತಕ್ಕೆ ಎಂಟು ಚೀತಾ ಹಸ್ತಾಂತರ

ಸಂದರ್ಭ: ಬೋಟ್ಸ್ವಾನಾ ಎಂಟು ಚೀತಾ ಗಳನ್ನು ಭಾರತಕ್ಕೆ ಹಸ್ತಾಂತರಿಸಲಾಯಿತು.

  • ಬೋಟ್ಸ್‌ವಾನಾಕ್ಕೆ ಭೇಟಿ ನೀಡಿದ್ದ ಭಾರತದ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಈ ಚೀತಾಗಳನ್ನು ಅಲ್ಲಿನ ಅಧ್ಯಕ್ಷ ಡುಮಾ ಗಿಡೋನ್‌ ಬೋಕೊ ಹಸ್ತಾಂತರ ಮಾಡಿದರು.
  • ಬೋಟ್ಸ್‌ವಾನಾಗೆ ಮುರ್ಮು ಅವರು ಮೂರು ದಿನಗಳ ಪ್ರವಾಸ ಕೈಗೊಂಡಿದ್ದರು. ಪ್ರವಾಸದ ಅಂತಿಮ ದಿನ ಮೊಕೊಲೋಡಿ ಮೀಸಲು ಅರಣ್ಯ ಪ್ರದೇಶದಲ್ಲಿ ಚೀತಾಗಳನ್ನು ಸಾಂಕೇತಿಕವಾಗಿ ಹಸ್ತಾಂತರಿಸಲಾಯಿತು.
  • ಸಂರಕ್ಷಿತ ಅರಣ್ಯ ಪ್ರದೇಶವನ್ನು ಬೋಕೊ ಅವರ ಜೊತೆಗೂಡಿ ಮುರ್ಮು ಅವರು ಸಫಾರಿ ವಾಹನದಲ್ಲಿ ತೆರಳಿ ವೀಕ್ಷಿಸಿದರು. ಭಾರತ ಮತ್ತು ಬೋಟ್ಸ್‌ವಾನಾನ ವನ್ಯಜೀವಿ ಅಧಿಕಾರಿಗಳು ಹಸ್ತಾಂತರ ಪ್ರಕ್ರಿಯೆ ಬಗ್ಗೆ ವಿವರಿಸಿದರು.
  • ಎಂಟು ಚೀತಾಗಳನ್ನು ಸದ್ಯ ಪ್ರತ್ಯೇಕವಾಗಿರಿಸಲಾಗಿದ್ದು, ಕೆಲವೇ ವಾರಗಳಲ್ಲಿ ಭಾರತಕ್ಕೆ ಸ್ಥಳಾಂತರಗೊಳ್ಳಲಿವೆ. ಎಂಟು ಚೀತಾಗಳಲ್ಲಿ ಮರಿಗಳೂ ಸೇರಿವೆ.
  • ಅಮೆರಿಕನ್ನರಿಗೆ ತರಬೇತಿ ನೀಡಿ ವಾಪಸಾಗಬೇಕು: ಬೆಸೆಂಟ್

ಸಂದರ್ಭ: ಕೌಶಲ ಹೊಂದಿರುವ ವಿದೇಶಿ ಉದ್ಯೋಗಿ ಗಳನ್ನು ಕರೆತರುವುದು ಹಾಗೂ ಅವರಿಂದ ಅಮೆರಿಕನ್ನರಿಗೆ ತರಬೇತಿ ಕೊಡಿಸುವುದು. ಬಳಿಕ ಅವರು ತಮ್ಮ ದೇಶಗಳಿಗೆ ಮರಳಬೇಕು. ಇದು ಎಚ್1ಬಿ ವೀಸಾದ ಮುಖ್ಯ ಉದ್ದೇಶ ಎಂದು ಅಮೆರಿಕದ ಹಣಕಾಸು ಕಾರ್ಯದರ್ಶಿ ಸ್ಕಾಟ್ಬೆಸೆಂಟ್ಹೇಳಿದ್ದಾರೆ.

  • ಫಾಕ್ಸ್‌ ನ್ಯೂಸ್‌ಗೆ ಸಂದರ್ಶನ ನೀಡಿರುವ ಅವರು, ‘ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರ ಉದ್ದೇಶವೂ ಇದೇ ಆಗಿದೆ’ ಎನ್ನುವ ಮೂಲಕ ಎಚ್‌–1ಬಿ ವೀಸಾ ಯೋಜನೆಯನ್ನು ಸಮರ್ಥಿಸಿ ಕೊಂಡಿದ್ದಾರೆ. ‘ವಿದೇಶಗಳಿಂದ ಬರುವ ಉದ್ಯೋಗಿಗಳು ಮೂರು, ಐದು ಇಲ್ಲವೇ ಏಳು ವರ್ಷ ಇಲ್ಲಿ ಕೆಲಸ ಮಾಡಬೇಕು. ಈ ಅವಧಿಯಲ್ಲಿ ಅವರು ಅಮೆರಿಕನ್ ಉದ್ಯೋಗಿಗಳಿಗೆ ತರಬೇತಿ ನೀಡಿ ತಮ್ಮ ದೇಶಗಳಿಗೆ ಹಿಂತಿರುಗಬೇಕು. ನಂತರ, ಅಮೆರಿಕದ ನೌಕರರೇ ಎಲ್ಲ ಕೆಲಸಗಳನ್ನು ನಿರ್ವಹಣೆ ಮಾಡುವಂತಾಗಬೇಕು ಎಂಬುದು ಟ್ರಂಪ್‌ ಅವರ ಉದ್ದೇಶವಾಗಿದೆ’ ಎಂದು ಸ್ಕಾಟ್ ಹೇಳಿದ್ದಾರೆ.
  • ‘ಕೆಲವು ಕೆಲಸಗಳನ್ನು ನಿರ್ವಹಿಸ ಬಲ್ಲಂತಹ ಪ್ರತಿಭಾವಂತರು ಅಮೆರಿಕದಲ್ಲಿ ಇಲ್ಲ’ ಎಂಬ ಟ್ರಂಪ್ ಅವರ ಹೇಳಿಕೆ ಕುರಿತು ಪ್ರಶ್ನಿಸಿದಾಗ, ‘ಕಳೆದ 20–30 ವರ್ಷಗಳವರೆಗೆ ಕೆಲ ನಿರ್ದಿಷ್ಟ ಕೆಲಸಗಳನ್ನು ಇತರ ದೇಶಗಳ ನುರಿತ ಕೆಲಸಗಾರರಿಂದಲೇ ಮಾಡಿಸಲಾಗಿದೆ. ಈಗ, ನೀವು ರಾತ್ರೋರಾತ್ರಿ ಹಡಗು ನಿರ್ಮಾಣ ಕಲಿಯಬೇಕು ಎಂದು ಸ್ಥಳೀಯ ಉದ್ಯೋಗಿಗಳಿಗೆ ಸೂಚನೆ ನೀಡಲು ಸಾಧ್ಯವೇ?’ ಎಂದು ಅವರು ಉತ್ತರಿಸಿದ್ದಾರೆ.
  • ಕ್ರಿಸ್ಟಿ ಸಮರ್ಥನೆ: ‘ಅಮೆರಿಕವು ಎಚ್‌–1ಬಿ ವೀಸಾ ಕಾರ್ಯಕ್ರಮವನ್ನು ಮುಂದುವರಿಸಲಿದೆ. ಈ ವೀಸಾ ಸೌಲಭ್ಯ ಪಡೆದು ಇಲ್ಲಿ ಬಂದವರು ಭಯೋತ್ಪಾದಕರನ್ನು ಹಾಗೂ ಅಮೆರಿಕ ದ್ವೇಷಿಸುವವರನ್ನು ಬೆಂಬಲಿಗರಾಗಿರಬಾರದು’ ಎಂದು ಆಂತರಿಕ ಭದ್ರತಾ ಇಲಾಖೆ ಕಾರ್ಯದರ್ಶಿ ಕ್ರಿಸ್ಟಿ ನೋಯಮ್‌ ಹೇಳಿದ್ದಾರೆ.
  • ಮಿಂಚಿದ ಜ್ಯೋತಿ: ಭಾರತಕ್ಕೆ 3 ಚಿನ್ನ

ಸಂದರ್ಭ: ಅನುಭವಿ ಸ್ಪರ್ಧಿ ಜ್ಯೋತಿ ಸುರೇಖಾ ವೆನ್ನಂ ಮುಂಚೂಣಿ ಯಲ್ಲಿದ್ದ ಭಾರತ ಕಾಂಪೌಂಡ್‌ ಆರ್ಚರಿ ತಂಡ ಏಷ್ಯನ್ ಚಾಂಪಿಯನ್‌ಷಿಪ್‌ ನಲ್ಲಿ ಅಮೋಘ ಪ್ರದರ್ಶನ ನೀಡಿ ಮೂರು ಚಿನ್ನ ಮತ್ತು ಎರಡು ಬೆಳ್ಳಿ ಪದಕಗಳನ್ನು ಬಾಚಿಕೊಂಡಿತು.

  • 29 ವರ್ಷ ವಯಸ್ಸಿನ ಜ್ಯೋತಿ ಅವರು ಕಾಂಪೌಂಡ್ ವಿಭಾಗದಲ್ಲಿ ವೈಯಕ್ತಿಕ ಚಿನ್ನ ಗೆದ್ದರಲ್ಲದೇ, ತಂಡ ವಿಭಾಗದಲ್ಲೂ ಚಿನ್ನ ಗೆಲ್ಲಲು ನೆರವಾದರು.
  • ದೀಪ್ಶಿಕಾ, ಪ್ರತೀಕಾ ಪ್ರದೀಪ್ ಅವರ ಜೊತೆಗೂಡಿದ ಜ್ಯೋತಿ ತಂಡ ವಿಭಾಗದ ಫೈನಲ್‌ನಲ್ಲಿ 236–234 ರಿಂದ ದಕ್ಷಿಣ ಕೊರಿಯಾವನ್ನು (ಪಾರ್ಕ್‌ ಯೆರಿನ್, ಒಹ್‌ ಯೂಹ್ಯುನ್‌, ಜುಂಗ್‌ಯೂನ್ ಪಾರ್ಕ್‌)  ಸೋಲಿಸಲು ನೆರವಾದರು.
  • ಭಾರತೀಯ ಬಿಲ್ಗಾರ್ತಿಯರ ವ್ಯವಹಾರವಾಗಿದ್ದ ವೈಯಕ್ತಿಕ ಫೈನಲ್‌ನಲ್ಲಿ ಜ್ಯೋತಿ, 17 ವರ್ಷ ವಯಸ್ಸಿನ ಪ್ರತೀಕಾ ಅವರಿಂದ ಕಠಿಣ ಸವಾಲು ಎದುರಿಸಿದರೂ ಅಂತಿಮವಾಗಿ 147–145ರಲ್ಲಿ ಗೆದ್ದರು.
  • ಕಾಂಪೌಂಡ್‌ ಮಿಶ್ರ ವಿಭಾಗದ ಫೈನಲ್‌ನಲ್ಲಿ ಅಭಿಷೇಕ್‌ ವರ್ಮಾ– ದೀಪಿಕಾ ಜೋಡಿ 153–151 ರಿಂದ ಬಾಂಗ್ಲಾದೇಶದ ಜೋಡಿಯನ್ನು ಸೋಲಿಸಿ ಭಾರತ ಮತ್ತೊಂದು ಚಿನ್ನ ತನ್ನದಾಗಿಸಿಕೊಂಡಿತು.
  • ಕಾಂಪೌಂಡ್ ತಂಡ ವಿಭಾಗದ ಫೈನಲ್‌ನಲ್ಲಿ ಭಾರತ 229–230ರಲ್ಲಿ ಕಜಾಕಸ್ತಾನ ತಂಡಕ್ಕೆ ಸೋತು ಬೆಳ್ಳಿ ಪದಕ ಗಳಿಸಿತು. ಅಭಿಷೇಕ್‌ ವರ್ಮಾ, ಸಾಹಿಲ್ ರಾಜೇಶ್ ಜಾಧವ್, ಪ್ರಥಮೇಶ ಬಾಲಚಂದ್ರ ಫುಗೆ ತಂಡದಲ್ಲಿದ್ದರು.
  • ಸ್ನೂಕರ್‌: ಅನುಪಮಾಗೆ ಕಿರೀಟ

ಸಂದರ್ಭ: ಭಾರತದ ಅನುಪಮಾ ರಾಮಚಂದ್ರನ್ ಅವರು ಗುರುವಾರ ನಡೆದ ವಿಶ್ವ ಸ್ನೂಕರ್ ಫೈನಲ್‌ನಲ್ಲಿ ಹಾಂಗ್‌ಕಾಂಗ್‌ನ ಎನ್‌ಜಿ ಆನ್ ಯಿ ಅವರನ್ನು ಸೋಲಿಸಿ ಪ್ರಶಸ್ತಿ ಯನ್ನು ಮುಡಿಗೇರಿಸಿಕೊಂಡರು.

  • ಚೆನ್ನೈನ 23 ವರ್ಷದ ಅನುಪಮಾ ಅವರು 3–2 (51-74, 65-41, 10-71, 78-20, 68-60) ಅಂತರದಿಂದ ಆನ್ ಯಿ ಅವರನ್ನು ಮಣಿಸಿ ಐಬಿಎಸ್‌ಎಫ್‌ ವಿಶ್ವ ಸ್ನೂಕರ್ ಕಿರೀಟವನ್ನು ಗೆದ್ದ ಭಾರತದ ಮೊದಲ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾದರು.
  • ಕಳೆದ ವರ್ಷ ಏಷ್ಯನ್ ಸ್ನೂಕರ್ ಪ್ರಶಸ್ತಿಯನ್ನು ಗೆದ್ದಿದ್ದ ಅನುಪಮಾ ಇಲ್ಲಿ ಕೊನೆಯ ಹಂತದಲ್ಲಿ ಅದೃಷ್ಟಶಾಲಿ ಯಾಗಿ ಜಯ ಗಳಿಸಿದರು. ಮೂರು ಬಾರಿ ಚಾಂಪಿಯನ್ ಆನ್ ಯೀ ನಿರ್ಣಾಯಕ ಪಂದ್ಯದಲ್ಲಿ 60-61 ಅಂತರದಿಂದ ಎಡವಿದರು.
  • ಸೆಮಿ ಫೈನಲ್‌ನಲ್ಲಿ ಅನುಪಮಾ 3–1ರಿಂದ ಸ್ವದೇಶದ ಕೀರ್ತನಾ ಪಾಂಡಿಯನ್ ಅವರನ್ನು ಮಣಿಸಿ ಪ್ರಶಸ್ತಿ ಸುತ್ತಿಗೆ ಮುನ್ನಡೆದಿದ್ದರು. ಆನ್ ಯಿ 3–0ಯಿಂದ ತಮ್ಮದೇ ದೇಶದ ಸೋ ಮನ್ ಯಾನ್ ಅವರನ್ನು ಸೋಲಿಸಿದ್ದರು.
0 0 votes
Article Rating
Subscribe
Notify of
guest

0 Comments
Oldest
Newest Most Voted
Inline Feedbacks
View all comments